Homeಅಂಕಣಗಳುಬಹುಜನ ಭಾರತ; ದೆಹಲಿಯಲ್ಲೊಂದು ಅಜ್ಞಾತ ತಮಿಳ್ಕನ್ನಡಿಗ ಲೋಕ!

ಬಹುಜನ ಭಾರತ; ದೆಹಲಿಯಲ್ಲೊಂದು ಅಜ್ಞಾತ ತಮಿಳ್ಕನ್ನಡಿಗ ಲೋಕ!

- Advertisement -
- Advertisement -

1984ರಲ್ಲಿ ಇಂದಿರಾ ಹತ್ಯೆ ಜರುಗಿದ ನಂತರ ಸಿಖ್ಖರ ಸಾಮೂಹಿಕ ಮಾರಣಹೋಮದ ರಣಭೂಮಿ ಆದದ್ದು ಪೂರ್ವೀ ದೆಹಲಿಯ ತ್ರಿಲೋಕಪುರಿ ಮತ್ತು ನೆರೆಹೊರೆಯ ಕಲ್ಯಾಣಪುರಿ. ಕಾಂಗ್ರೆಸ್ಸಿನ ತಲೆಯಾಳುಗಳೇ ಈ ಮಾರಣಹೋಮದ ನೇತೃತ್ವ ವಹಿಸಿದ್ದರು.

ನೆಹರೂ ಮತ್ತು ಇಂದಿರಾ ಕಾಲದಲ್ಲಿ ದೆಹಲಿಯ ಕೊಳೆಗೇರಿಗಳನ್ನು ಕೆಡವಿದ ನಂತರ ನಿರಾಶ್ರಿತರಾದ ದೀನದಲಿತರಿಗೆ ಪುನರ್ವಸತಿ ಕಲ್ಪಿಸಿದ್ದು ತ್ರಿಲೋಕಪುರಿ ಮತ್ತು ಪಕ್ಕದ ಕಲ್ಯಾಣಪುರಿಯಲ್ಲಿ. ಸಂಜಯಗಾಂಧೀ ಬುಲ್ಡೋಜರ್ ನೆಲಸಮ ಮಾಡಿದ ತುರ್ಕಮಾನ ಗೇಟಿನ ಕೊಳೆಗೇರಿಗಳ ಬಡ ಮುಸಲ್ಮಾನರನ್ನೂ ಇದೇ ತ್ರಿಲೋಕಪುರಿಗೆ ತಂದು ಒಗೆಯಲಾಗಿತ್ತು.

ಆ ಕಾಲಕ್ಕೆ ನೀರು, ಬೆಳಕು, ನೆರಳಿನ ಯಾವುದೇ ನಾಗರಿಕ ಸೌಲಭ್ಯಗಳ ಸುಳಿವೂ ಇಲ್ಲದ ಈ ಬರಡು ಬಂಜರು ನೆಲದಲ್ಲಿ ದಲಿತರು, ಹಿಂದುಳಿದವರು, ಮುಸಲ್ಮಾನರು ಕಾಲಕ್ರಮೇಣ ತಮ್ಮ ಬಡಬದುಕುಗಳನ್ನು ಕಟ್ಟಿಕೊಂಡರು.

ಪೂರ್ವ ದೆಹಲಿಯ ತ್ರಿಲೋಕಪುರಿ, ಕಲ್ಯಾಣಪುರಿ ಹಾಗೂ ವಾಯುವ್ಯ ದೆಹಲಿಯ ಮಂಗೋಲ್ ಪುರಿಯಲ್ಲಿ ಐದಾರೂ ಸಾವಿರಕ್ಕೂ ಹೆಚ್ಚು ಮಂದಿ ಕನ್ನಡಿಗರು ನೆಲೆಸಿದ್ದಾರೆ. ಇವರೆಲ್ಲ ತಮಿಳುನಾಡಿನಿಂದ ವಲಸೆ ಬಂದವರು. ತಮಿಳರ ಪಾಲಿಗೆ ಇವರು ’ಕನ್ನಡಕಾರ’ರು. ಆದರೆ ಕರ್ನಾಟಕದ ಕನ್ನಡಿಗರಿರಲಿ, ಕರ್ನಾಟಕದ ಕನ್ನಡಿಗರು ಕೂಡ ಈ ’ಕನ್ನಡಕಾರರ’ ಇರವನ್ನೇ ಅರಿಯರು. ಹೊರನಾಡ ಕನ್ನಡಿಗರು ಎಂಬ ಸ್ಥಾನಮಾನವಾಗಲಿ, ಅದರ ವ್ಯಾಖ್ಯೆಯಾಗಲಿ ಇವರ ಬಳಿ ಸುಳಿದೇ ಇಲ್ಲ. 1948ರಷ್ಟು ಹಿಂದೆಯೇ ಹುಟ್ಟಿದ ಹೆಸರಾಂತ ಸಂಸ್ಥೆ ದೆಹಲಿ ಕರ್ನಾಟಕ ಸಂಘ. ಕೊಳೆಗೇರಿಯ ಈ ಬಡ ದೆಹಲಿ ’ಕನ್ನಡಕಾರ’ರ ಸಂಗತಿ ಸಂಘದ ಗಮನಕ್ಕೆ ಬಂದು ಐದಾರು ವರ್ಷಗಳೇ ಉರುಳಿವೆ. ಸಂಘ ಅವರ ಕುರಿತು ಕನಿಷ್ಠ ಕುತೂಹಲವನ್ನೂ ತೋರಿಲ್ಲ. ಅವರೂ ನಾವು ಕನ್ನಡಿಗರೆಂದು ಹೇಳಿಕೊಂಡು ಸಂಘದ ಬಳಿ ಸಾರುವ ಸಾಹಸ ಮಾಡಿಲ್ಲ.

ಡೆಲ್ಲಿ ಕನ್ನಡಸಂಘ ನಮ್ಮನ್ನು ಕರೆದಿಲ್ಲ, ನಾವು ಅವರ ಬಳಿ ಹೋಗಿಲ್ಲ. ತಮಿಳು ಸಂಘಂಗೆ ಹೋಗಿದ್ದೇವೆ. ಸದಸ್ಯರೂ ಆಗಿದ್ದೇವೆ. ಮಕ್ಕಳು ಡೆಲ್ಲಿಯ ತಮಿಳು ಶಾಲೆಗಳಿಗೆ ಹೋಗಿ ಕಲೀತಾರೆ. ತಮಿಳುನಾಡಿನಲ್ಲಿ ನಮ್ಮ ಸಂಖ್ಯೆ ಹತ್ತಿಪ್ಪತ್ತು ಲಕ್ಷವಾದರೂ ಇದ್ದೀತು ಎನ್ನುತ್ತಾರವರು.

ಬಹುತೇಕ ಮನೆಗೆಲಸದ ಪಾತ್ರೆ ತಿಕ್ಕುವವರಾಗಿ, ಅಡುಗೆ ಮಾಡುವವರಾಗಿ, ಡ್ರೈವರುಗಳಾಗಿ, ನೆರೆಯ ನೋಯ್ಡಾದ ಫ್ಯಾಕ್ಟರಿಗಳಲ್ಲಿ ಕೂಲಿಕಾರರಾಗಿ, ಟ್ರಾಫಿಕ್ ಸಿಗ್ನಲ್ಲುಗಳಲ್ಲಿ ಹೂವು ಮಾರುವವರಾಗಿ, ಸಣ್ಣಪುಟ್ಟ ವ್ಯಾಪಾರ ಮಾಡುವವರಾಗಿ ಹೊಟ್ಟೆ ಹೊರೆಯುತ್ತಿದ್ದಾರೆ ಈ ಕನ್ನಡಿಗರು. ಉತ್ತಮ ಉದ್ಯೋಗಗಳಲ್ಲಿ ನೆಮ್ಮದಿ ಕಂಡುಕೊಂಡಿರುವವರ ಸಂಖ್ಯೆ ಬೆರಳೆಣಿಕೆಯದು.

ಇವರ ಮನೆಮಾತು ಕನ್ನಡ. ನೂರಕ್ಕೆ ಅರವತ್ತು ಎಪ್ಪತ್ತು ಪದಗಳು ಕನ್ನಡ. ಉಳಿದವು ತಮಿಳು. ತಮ್ಮ ಮಾತೃಭಾಷೆ ಕನ್ನಡವೆಂದೇ ಸಾರಿ ಹೇಳುತ್ತಾರೆ. ತಮಿಳುನಾಡಿನಲ್ಲಿ ಇವರನ್ನು ’ಕನ್ನಡ ದೇವಾಂಗ ಚೆಟ್ಟಿಯಾರ್’ ಎಂದೇ ಕರೆಯಲಾಗುತ್ತದೆ. ನೇಯುವುದು ಇವರ ಮೂಲ ಕಸುಬು. 1967ರ ಆಸುಪಾಸಿನಲ್ಲಿ ದಿಲ್ಲಿಗೆ ವಲಸೆ ಬಂದವರಿವರು. ಮೊದಲ ಬಾರಿಗೆ ತಮಿಳುನಾಡಿನಲ್ಲಿ ಅಧಿಕಾರ ಹಿಡಿದ ಡಿ.ಎಂ.ಕೆ. ವಿದ್ಯುತ್ ಚಾಲಿತ ಮಗ್ಗಗಳ ಆರಂಭಕ್ಕೆ ಅನುಮತಿ ನೀಡಿದ ನಂತರ ನಿರ್ಗತಿಕರಾದ ಕೈಮಗ್ಗದ ನೇಕಾರರು ಇವರು. ವಿದ್ಯುತ್ ಮಗ್ಗಗಳು ತಮ್ಮ ಕಸುಬಿಗೆ ನೀಡಿದ ಕೊಡಲಿಯೇಟನ್ನು ಭರಿಸಲಾರದೆ ಹೊಟ್ಟೆ ಹೊರೆಯಲು ದಿಲ್ಲಿ, ಮುಂಬಯಿ, ಬೆಂಗಳೂರು ನಗರಗಳ ರೈಲುಗಳನ್ನು ಹತ್ತಿದ್ದವರು.

ತಿಂಗಳುಗಳು, ವರ್ಷದೊಪ್ಪತ್ತಿನ ಅಂತರದಲ್ಲಿ ಅಂದಿನ ದಿನಗಳಲ್ಲಿ ದಿಲ್ಲಿಗೆ ಬಂದಿಳಿದ ಕುಟುಂಬಗಳು ಹತ್ತಿರಹತ್ತಿರ ಸಾವಿರ ಎನ್ನುತ್ತಾರೆ ನಾಗಲಿಂಗಂ ಕನ್ನಡ ದೇವಾಂಗ ಚೆಟ್ಟಿಯಾರ್. ಒಂಬತ್ತು ವರ್ಷದ ಹುಡುಗನಾಗಿ ಪಂಜಾಬಿ ಚಹಾದ ಅಂಗಡಿಯಲ್ಲಿ ಕೆಲಸ ಮಾಡಿ ದಿಲ್ಲಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಅವರು.

ನಾಗಲಿಂಗಂ ಅವರನ್ನು ಎದುರಿಗೆ ಕೂರಿಸಿಕೊಂಡು ಮಾತನಾಡಿದರೆ ಅವರ ಕನ್ನಡದಲ್ಲಿ ನೂರಕ್ಕೆ ಅರವತ್ತು ಪದಗಳು ಮಾತ್ರವೇ ನಮಗೆ ತಿಳಿದಾವು. ಬೇರೆ ಕಸುಬೇ ಗೊತ್ತಿಲ್ಲದ ಈ ’ಕನ್ನಡಕಾರ’ರು, ದಿಲ್ಲಿಗೆ ಬಂದ ಆರಂಭದ ದಿನಗಳಲ್ಲಿ ನೆರೆಹೊರೆಯ ಪಾಣಿಪತ್, ಸೋನೆಪತ್, ಘಾಜಿಯಾಬಾದುಗಳ ಕೈಮಗ್ಗಗಳಲ್ಲಿ ಕೂಲಿ ಮಾಡುತ್ತಾರೆ. ತಮಿಳುನಾಡಿನಲ್ಲಿ ತಾವು ನೇಯುತ್ತಿದ್ದ ಸೀರೆಗಳ ಬದಲಿಗೆ ಇಲ್ಲಿ, ದುಪ್ಪಟಿ, ಕಂಬಳಿ ನೇಯ್ದರಂತೆ. ಈ ಮಗ್ಗಗಳೂ ಅಳಿದ ನಂತರ ಬಾಣಲೆಯಿಂದ ಬೆಂಕಿಗೆ ಬಿದ್ದು ಬೇರೆ ಅನ್ನದ ದಾರಿಗಳನ್ನು ಹುಡುಕಿಕೊಳ್ಳುತ್ತಾರೆ.

ಕರೋಲ್ ಬಾಗಿನ ಝುಗ್ಗಿ ಝೋಪಡಿಗಳಿಂದ ತೆರವು ಮಾಡಿಸುವ ಸರ್ಕಾರ ತ್ರಿಲೋಕಪುರಿ, ಮಂಗೋಲ್‌ಪುರಿ, ಇಂದ್ರಾಪುರಿಯಲ್ಲಿ ಪುಟ್ಟ ನಿವೇಶನ ನೀಡಿ ಸಾಗಹಾಕುತ್ತದೆ. ಇಂದಿನ ತ್ರಿಲೋಕಪುರಿಯಲ್ಲಿ ನೆಲೆಸಿರುವ ’ಕನ್ನಡಕಾರರ’ ಕುಟುಂಬಗಳ ಸಂಖ್ಯೆ ನಾನೂರಕ್ಕೂ ಹೆಚ್ಚು. ಕನ್ನಡ ದೇವಾಂಗ ಚೆಟ್ಟಿಯಾರರ ಕುಲದೈವ ಚೌಡೇಶ್ವರಿ. ಆಕೆಗೊಂದು ದೊಡ್ಡದೇ ಆದ ಗುಡಿ ಕಟ್ಟಿದ್ದಾರೆ.

ಕರ್ನಾಟಕದ ಹಂಪಿಯ ದಯಾನಂದ ಸ್ವಾಮಿ ಸರಸ್ವತಿ ಅವರ ಮಠವೇ ಇವರ ಮುಖ್ಯ ಮಠ. ತಮಿಳುನಾಡಿನಲ್ಲಿ ಕನ್ನಡ ದೇವಾಂಗ ಚೆಟ್ಟಿಯಾರರ ಗುಡಿಗಳ ಉದ್ಘಾಟನೆಗೆ ದಯಾನಂದ ಸ್ವಾಮಿ ಹೋಗುತ್ತಾರೆ. ತಮಿಳುನಾಡಿನಲ್ಲಿ ಇವರ ಸಂಸ್ಕೃತಿಯೇ ಬೇರೆ, ತಮಿಳು ಸಂಸ್ಕೃತಿಯೇ ಬೇರೆ. ಉಗಾದಿ ಕನ್ನಡದವರ ಹಬ್ಬವೆಂದು ಇವರಿಗೆ ಗೊತ್ತು. ಆದರೆ ಆಚರಿಸುವುದಿಲ್ಲ. ಯಾಕೆ ಅಂತ ಗೊತ್ತಿಲ್ಲ.

ತಮಿಳುನಾಡಿನಲ್ಲಿ ಕನ್ನಡಿಗ ದೇವಾಂಗ ಚೆಟ್ಟಿಯಾರರು ತಾವು ವಾಸಿಸುವ ಪ್ರದೇಶಗಳನ್ನು ಎರಡು ಸೀಮೆಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ. ಅರವತ್ತೂರು, ಮೂವತ್ತೂರು ಎಂಬ ಎರಡು ಸೀಮೆಗಳಲ್ಲಿ ಅರವತ್ತು ಮತ್ತು ಮೂವತ್ತು ಒಟ್ಟು ತೊಂಬತ್ತು ನಾನಾ ಊರುಗಳಲ್ಲಿ ಇವರ ವಾಸ.

ನೂರಾರು ವರ್ಷಗಳಿಂದ ತಮಿಳುನಾಡಿನಲ್ಲಿ ಬದುಕಿರುವ ಈ ಜನಾಂಗಕ್ಕೆ ತಮ್ಮ ಬೇರುಗಳ ಕುರಿತ ಅರಿವಿಲ್ಲ. ತಾವು ತಮಿಳುನಾಡಿನ ಮೂಲನಿವಾಸಿಗಳೇ ಅಥವಾ ವಲಸೆ ಬಂದವರೇ ಎಂಬುದು ಗೊತ್ತಿಲ್ಲ. ಮನೆಮನೆಗಳ ಹೊಸ್ತಿಲುಗಳ ಒಳಗೆ ಕನ್ನಡವನ್ನೂ, ಹೊರಗೆ ತಮಿಳನ್ನೂ ಮಾತಾಡುವ, ಶಾಲೆಗಳಲ್ಲಿ ಕನ್ನಡ ಕಲಿಯುವ ಅವಕಾಶವೇ ಇಲ್ಲದ, ಪತ್ರವ್ಯವಹಾರಗಳಲ್ಲಿ ಕನ್ನಡವನ್ನು ಬಳಸುತ್ತಿರುವ, ಆದರೆ ಅಂತಹ ಕನ್ನಡವನ್ನು ತಮಿಳು ಲಿಪಿಯಲ್ಲೇ ಬರೆಯುವ ಅನಿವಾರ್ಯ ಈ ’ಕನ್ನಡಕಾರ’ರದು.

ದಿಂಡಿಗಲ್, ಮಧುರೈ, ವಿರುಧನಗರ, ಶಿವಕಾಶಿ, ಸೇಲಂ, ಕೊಯಮತ್ತೂರು, ಈರೋಡು, ಕಾರೈಕುಡಿ, ಪ್ರದೇಶಗಳಲ್ಲಿ ನೆಲೆಸಿರುವ ಇವರಿಗೆ ವಿರುಧನಗರ ಜಿಲ್ಲೆಯ ಅರಪ್ಪುಕೋಟೈ ಎಂಬಲ್ಲಿ ತಮ್ಮದೇ ಜನಾಂಗ ನಡೆಸುವ ಶಿಕ್ಷಣ ಸಂಸ್ಥೆಗಳಿವೆ. ಆದರೆ ಅಲ್ಲಿ ಕನ್ನಡ ಕಲಿಸುವ ವ್ಯವಸ್ಥೆ ಇಲ್ಲ. ಅಲ್ಲಿ ಕನ್ನಡ ಅನ್ನ ಸಂಪಾದಿಸುವ ದಾರಿಯಲ್ಲ.


ಇದನ್ನೂ ಓದಿ: ರಾಜಕೀಯ ಮುಖಂಡರ ಆರ್‌ಎಸ್‌ಎಸ್ ವಿರೋಧವಷ್ಟೇ ಸಾಲದು; ವಿಷಪೂರಿತ ಸಿದ್ಧಾಂತವನ್ನು ತೊಲಗಿಸುವ ಹೋರಾಟಕ್ಕೆ ಸಜ್ಜಾಗಬೇಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...