Homeಮುಖಪುಟರೈತಸಂಘ ಇಳಿಮುಖವಾದ ಘಟ್ಟ

ರೈತಸಂಘ ಇಳಿಮುಖವಾದ ಘಟ್ಟ

- Advertisement -
- Advertisement -

ಪ್ರೊ. ನಂಜುಂಡಸ್ವಾಮಿಯವರ ಬತ್ತಳಿಕೆಯಿಂದ ಒಂದೊಂದೇ ಬಾಣಗಳು ಹೊರಬಂದು ಯಶಸ್ವಿ ಹೋರಾಟಗಳನ್ನು ರೂಪಿಸಿದ ಪರಿಣಾಮವಾಗಿ ರೈತಸಂಘ ನಾಡಿನಲ್ಲಿ ಒಂದು ಪ್ರಬಲವಾದ ಶಕ್ತಿಯಾಗಿ ಬೆಳೆಯತೊಡಗಿತು. ಒಂದು ಘಟ್ಟದವರೆಗೆ ರೈತಸಂಘದ ಖರ್ಚುವೆಚ್ಚಗಳು ಕಬ್ಬುಬೆಳೆಗಾರರ ವಂತಿಕೆ ಹಣದಿಂದ ನಡೆಯುತ್ತಿತ್ತು. ನಂತರ ಹಣದ ಸಮಸ್ಯೆ ಎದುರಾದಾಗ ಮುಂದೇನು ಮಾಡುವುದೆಂಬ ಆಲೋಚನೆಗಿಳಿದ ರೈತನಾಯಕರು ಯೋಚನೆಯಲ್ಲಿ ಮುಳುಗಿದರು. ಆಗ ಫ್ರೊಫೆಸರ್ “ಕರ್ನಾಟಕದಲ್ಲಿ ನಾಲ್ಕು ಕೋಟಿಗೂ ಹೆಚ್ಚು ಜನರಿದ್ದಾರೆ. ಒಬ್ಬ ಒಂದು ರೂಪಾಯಿ ಕೊಟ್ಟರೆ ಸಾಕು ನಾಲ್ಕು ಕೋಟಿ ಆಗತ್ತೆ ಅಂದ್ರೆ, ಈಗಾಗ್ಲೆ ನಮ್ಮತ್ರ ಆರುಕೋಟಿ ಇದೆ” ಎಂದರು. ಇದು ತಮಾಷೆಯಂತಿದ್ದರೂ ಪ್ರೊಫೆಸರ್ ಕಾರ್ಯಸೂಚಿ ಯಾವಾಗಲೂ ಸಮಸ್ಯೆಯನ್ನು ದೊಡ್ಡದು ಮಾಡದೆ ಮುನ್ನುಗ್ಗುವ ಕಡೆಗಿರುತ್ತಿತ್ತು.

ಕಡಿದಾಳು ಶಾಮಣ್ಣ

ಆಗ ಕಡಿದಾಳು ಶಾಮಣ್ಣನವರು ’ನೋಡಿ ರೈತರು ಭತ್ತ, ರಾಗಿ, ಅಡಕೆ ಇಂಥವುನ್ನೆಲ್ಲ
ಕೊಡ್ತಾರೆ. ಅವನ್ನೆ ಸಂಗ್ರಹಿಸಿ ಮಾರಿದ ಖರ್ಚಿನಲ್ಲಿ ನಮ್ಮ ಪ್ರಯಾಣ, ಸಭೆಗಳ ಖರ್ಚನ್ನ ನಿಭಾಯಿಸಬಹುದು’ ಎಂದರು. ಇದನ್ನ ಒಲ್ಲದ ಮನಸ್ಸಿನಿಂದ ಎಲ್ಲ ಸಮ್ಮತಿಸಿದರು. ಅದರಂತೆ ಮೇಗರವಳ್ಳಿ ಹೆಗಡೆಯವರ ಮನೆಗೆ ಹೋಗಿ ಅಡಕೆ ಕೇಳುವುದೆಂದು ತೀರ್ಮಾನಿಸಿದ ಶಾಮಣ್ಣನವರು, ಸುಂದರೇಶರನ್ನು ಹೊರಡಿಸಿಕೊಂಡು ಸಿದ್ಧರಾಗಿಯೇಬಿಟ್ಟರು. ಅನಿರೀಕ್ಷಿತವಾಗಿ ದಾಳಿಯಿಟ್ಟ ರೈತನಾಯಕರನ್ನು ತುಂಬ ಗೌರವದಿಂದಲೇ ಬರಮಾಡಿಕೊಂಡ ಹೆಗಡೆ ’ಏನು ಸಮಾಚಾರ ಇಲ್ಲಿಗೆ ದಯಮಾಡಿಸಿದ್ದು’ ಎಂದರು. ಆಗ ಶಾಮಣ್ಣ, ’ನಾವು ರೈತರ ಪರವಾಗಿ ಹೋರಾಟಕ್ಕೆ ರೈತಸಂಘ ಕಟ್ಟಿದ್ದೀವಿ, ಚಳವಳಿ ಅಂದಮೇಲೆ ಖರ್ಚುವೆಚ್ಚ ಇರುತ್ತೆ. ಅದಕ್ಕಾಗಿ ರೈತರಿಂದ ದವಸ ಧಾನ್ಯ ಅಡಕೆ ಸಂಗ್ರಹಿಸ್ತಾ ಇದ್ದೀವಿ. ತಾವು ಒಂದೈದು ಕೆ.ಜಿ ಅಡಿಕೆ ಸಹಾಯ ಮಾಡಿ’ ಎಂದರು. ಆಗ ಹೆಗಡೆಯವರು ’ನಮ್ಮ ರೈತರ ಸಮಸ್ಯೆ ಮುಂದಿಟ್ಟುಕೊಂಡು ನೀವು ಹೋರಾಡುವುದೇನು ಬೇಡಿ, ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ತಿವಿ’ ಎಂದರು. ಅಲ್ಲಿಗೆ ಸಾರ್ವಜನಿಕ ದೇಣಿಗೆ ಎತ್ತುವ ಕೆಲಸ ನಿಲುಗಡೆಯಾಯ್ತು. ಆದರೇನು ರೈತಸಂಘ ತನ್ನ ಎಂದಿನ ಬಿರುಸಿನ ಹೋರಾಟವನ್ನ ಮುಂದುವರೆಸಿತು.

ತಮಿಳುನಾಡಿನ ನಾರಾಯಣಸ್ವಾಮಿ ನಾಯ್ಡು, ನಂಜುಂಡಸ್ವಾಮಿಯವರಷ್ಟೇ ಪ್ರಬಲರಾದ ಜನಪ್ರಿಯ ರೈತ ನಾಯಕ. ಕರ್ನಾಟಕ ಮತ್ತು ತಮಿಳುನಾಡಿನ ರೈತರು ಸಮಾನವಾದ ಸಂಕಷ್ಟ ಎದುರಿಸುವಂತಹ ಕಾವೇರಿ ವಿಷಯದಲ್ಲಿ ರೈತರನ್ನು ಬದಿಗೊತ್ತಿ ಬರೀ ರಾಜಕಾರಣಿಗಳೇ ರಾಜಕಾರಣ ಮಾಡುತ್ತಿದ್ದಾರೆ. ಆದರೆ ನಾರಾಯಣಸ್ವಾಮಿ ಬಗ್ಗೆ ಕರ್ನಾಟಕದ ರೈತರಿಗೆ ತುಂಬಾ ಗೌರವವಿದೆ. ಹಾಗೆಯೇ ನಂಜುಂಡಸ್ವಾಮಿಯವರ ವಿದ್ವತ್ತಿಗೆ ತಮಿಳುನಾಡು ರೈತರು ಅತೀವ ಗೌರವ ಕೊಡುತ್ತಾರೆ. ನಾರಾಯಣಸ್ವಾಮಿಯವರ ನೇತೃತ್ವದಲ್ಲಿ ಹೈದರಾಬಾದಿನಲ್ಲಿ ಕಿಸಾನ್ ಸಮ್ಮೇಳನ ನಡೆಯಿತು. ಅಲ್ಲಿ ರೈತ ಸಂಘಕ್ಕೆ ಒಂದು ಸಿಂಬಲ್ ಬೇಕು ಎಂಬ ಚರ್ಚೆ ಪ್ರಸ್ತಾಪಕ್ಕೆ ಬಂತು. ಜೋಡೆತ್ತು ಚೆನ್ನಾಗಿದೆ ಎಂದುಕೊಂಡರೂ, ಅದನ್ನಾಗಲೇ ಕಾಂಗ್ರೆಸ್‌ನವರು ಪಡೆದಿದ್ದರಿಂದ, ನೇಗಿಲ ಒಡೆಯ ರೈತನಿರಲಿ ಎಂಬ ತೀರ್ಮಾನವಾಯ್ತು. ಅದಾಗಲೇ ಹಸಿರುಶಾಲು ದೇಶವನ್ನು ವ್ಯಾಪಿಸಿತ್ತು. ಇಂತಹ ಮಹತ್ವದ ಸಭೆಗೆ ಕರ್ನಾಟಕದಿಂದಲೂ ರೈತ ದಂಡು ಹೋಗಿತ್ತು.

ನಾರಾಯಣಸ್ವಾಮಿ ನಾಯ್ಡು

ರೈತರು ತಮ್ಮ ವಾಹನವನ್ನು ಆಂಧ್ರದ ಟ್ರಾಫಿಕ್ ನಿಯಮವನ್ನು ಮೀರಿ ನಿಲ್ಲಿಸಿದ್ದರು. ಕೂಡಲೇ ಅಲ್ಲಿಗೆ ಬಂದ ಪೊಲೀಸನೊಬ್ಬ ರೈತರು ನಿಯಮ ಉಲ್ಲಂಘಿಸಿದ್ದಾರೆ ಎಂದು ಚೀಟಿ ಹರಿದುಕೊಟ್ಟ. ರೈತರು ಪ್ರೊಫೆಸರ್ ಮೊರೆ ಹೋದರು. ಸ್ಥಳಕ್ಕೆ ಬಂದ ಪ್ರೊಫೆಸರ್ ಪೊಲೀಸ್ ಕೊಟ್ಟ ನೋಟಿಸನ್ನು ಕೈಲಿಡಿದು, ಅಲ್ಲಿದ್ದ ಪೊಲೀಸ್ ಮುಂದೆಯೇ ಹರಿದುಹಾಕಿದರು. ತನ್ನ ಜೀವಮಾನದಲ್ಲಿ ಇಂತಹ ಪ್ರತಿಕ್ರಿಯೆ ನೋಡದ ಆತ “ಏಮಂಟಾ ಇದಿ” ಎಂದು ಗೊಣಗಿಕೊಂಡು ಹೊರಟುಹೋದ. ಅನ್ಯ ರಾಜ್ಯದಿಂದ ಬಂದ ರೈತರಿಗೆ ಇಲ್ಲಿನ ಟ್ರಾಫಿಕ್ ವ್ಯವಸ್ಥೆ ಗೊತ್ತಿರಲಾರದು, ಆದ್ದರಿಂದ ವಾಹನವನ್ನು ಸರಿಯಾದ ಜಾಗಕ್ಕೆ ನಿಲ್ಲಿಸುವಂತೆ ಸಹಾಯ ಮಾಡುವುದು ಪೊಲೀಸನ ಕರ್ತವ್ಯ ಎಂಬುದು ಪ್ರೊಫೆಸರ್ ಅವರ ನಿಲುವಾಗಿತ್ತು.

ಅದು ರೈತಸಂಘದ ಉತ್ತುಂಗ ಸ್ಥಿತಿ ತಲುಪಿದ ಕಾಲ. ಸರಕಾರ ರೈತ ಸಂಘಕ್ಕೆ ಹೆದರಿ ಮಾತುಕತೆಗೆ ಕರೆಯುತ್ತಿದ್ದ ಕಾಲ. ಆದರೇನು ರೈತ ಹೋರಾಟದಿಂದ ಅವಕಾಶ ಪಡೆದು ಅಧಿಕಾರಕ್ಕೆ ಏರಿದ್ದ ಜನತಾ ಪಕ್ಷದ ಸರಕಾರವೂ ಕೂಡ ಯಥಾಸ್ಥಿತಿವಾದದ ಪ್ರತಿಪಾದಕರಂತೆ, ಗೋಲಿಬಾರವೊಂದನ್ನ ಹೊರತುಪಡಿಸಿದರೆ, ಇದೂ ಕೂಡ ಗುಂಡೂರಾಯರ ಸರಕಾರ ಎಂಬಂತೆ ರೈತ ಮುಖಂಡರಿಗೆ ಕಾಣಿಸಿತು. ಆದ್ದರಿಂದ ರೈತ ಸಂಘವೇ ಏಕೆ ರಾಜಕೀಯ ಮಾಡಬಾರದೆಂಬ ಚರ್ಚೆಯಾಯ್ತು. ಅದಕ್ಕಾಗಿ ಬೆಂಗಳೂರಿನ ಲಾ ಕಾಲೇಜ್ ಪ್ರಿನ್ಸಿಪಾಲರಾಗಿದ್ದ ಪ್ರೊಫೆಸರ್ ಆ ಹುದ್ದೆಗೆ ರಾಜಿನಾಮೆ ನೀಡಿ, ರೈತಸಂಘದ ಮುಂದಾಳತ್ವವನ್ನು ಹೆಚ್.ಎಸ್ ರುದ್ರಪ್ಪನವರಿಗೆ ಬಿಟ್ಟು ಕನ್ನಡ ದೇಶ ಪಕ್ಷ ಸ್ಥಾಪಿಸಿದರು. ಅಲ್ಲಿಂದ ರೈತ ಸಂಘದ ಇಳಿಮುಖ ಆರಂಭವಾಯ್ತು ಎನ್ನಬಹುದು. ಈವರೆಗೆ ರೈತ ಸಂಘಕ್ಕೆ ಹೆದರುತ್ತಿದ್ದ ಜನತಾ ಪಕ್ಷದವರು ನೀವು ರಾಜಕೀಯಕ್ಕೆ ಬಂದ ಮೇಲೆ ನಿಮಗೆ ಹೆದರುವ ಅಗತ್ಯವೇನು ಎನ್ನವಂತಾದರು. ಅದಾಗಲೇ ರೈತ ಸಂಘದ ಚಳವಳಿಯಲ್ಲಿದ್ದ ಅನೇಕರು ಜನತಾಪಕ್ಷದಲ್ಲಿ ತಲೆ ಮರೆಸಿಕೊಂಡಿದ್ದರು.

ರಾಜಕಾರಣ ಮಾಡಬೇಕಾದರೆ ಹಣಕಾಸಿನ ಮೂಲ ಝರಿಯೊಂದರ ಅಗತ್ಯವಿದ್ದುದ್ದರಿಂದ,
ಪ್ರೊಫೆಸರ್ ’ಒಂದು ರೂಪಾಯಿ ಜೊತೆಗೆ ಒಂದು ಓಟುಕೊಡಿ’ ಎಂಬ ಘೋಷಣೆಯೊಂದಿಗೆ ರಾಜಕಾರಣ ಆರಂಭಿಸಿದರು. ರೈತ ಸಂಘದ ನೆಲೆಯಿದ್ದದ್ದು ಗ್ರಾಮೀಣ ಪ್ರದೇಶದಲ್ಲಿ. ಆದರೆ, ಮಂಡಲ ಪಂಚಾಯ್ತಿ ಚುನಾವಣೆ ಮನೆ ಬಾಗಿಲಿಗೆ ಬಂದಾಗ ಸುಮ್ಮನಿದ್ದ ರೈತ ನಾಯಕರು, ಮೊದಲು ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕಿ ಸ್ಪರ್ಧಿಸಿ, ನಂತರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರು. ಅದಾಗಲೇ ರೈತರು ಜನತಾ ಸರಕಾರದಲ್ಲಿ ಭಾಗಿಯಾಗಿದ್ದರಿಂದ, ರೈತ ಸಂಘ ಕೇವಲ ಒಂದೆರಡು ಅಭ್ಯರ್ಥಿಗಳನ್ನ ಮಾತ್ರ ಗೆಲ್ಲಿಸಿಕೊಂಡಿತು. ಬಾಬಾಗೌಡರು ಎರಡು ಕ್ಷೇತ್ರದಲ್ಲಿ ಗೆದ್ದಿದ್ದರಿಂದ ಒಂದನ್ನ ಪ್ರೊಫೆಸರ್‌ಗೆ ಬಿಟ್ಟುಕೊಟ್ಟು ಅವರು ವಿಧಾನಸೌಧ ಪ್ರವೇಶಿಸುವಂತೆ ಮಾಡಿದರು. ವಿಧಾನಸೌಧದ ಮೇಲೆ ಬಾವುಟ ಹಾರಿಸುತ್ತೇವೆಂದಿದ್ದ ಪ್ರೊಫೆಸರ್ ಎರಡು ಸ್ಥಾನಕ್ಕೆ ಸೀಮಿತವಾದರು. ಆ ನಂತರ ರೈತ ನಾಯಕರ ಉಚ್ಛಟನೆಗಳು ನಡೆದವು. ನಿಷ್ಕ್ರಿಯ ನಾಯಕರು ಒಳ ಜಗಳದಲ್ಲಿ ಮುಳುಗಿದರು. ಅಂತಹ ಒಂದು ಸನ್ನಿವೇಶದಲ್ಲಿ ಪ್ರೊಫೆಸರ್ ನಂಜುಂಡಸ್ವಾಮಿಯವರ ಭಾಗಕ್ಕೆ ಕರ್ಣನಂತಿದ್ದ ಸುಂದರೇಶ್ ಹೃದಯಾಘಾತದಿಂದ ನಿಧನರಾದರು. ಅದೊಂದು ರೀತಿ ರೈತ ಸಂಘದ ಹೃದಯ ಸ್ತಬ್ಧವಾದಂತಹ ಸ್ಥಿತಿ. ಅದಕ್ಕಾಗಿಯೆ ಪ್ರೊಫೆಸರ್ ಮಗುವಿನಂತೆ ಅತ್ತಿದ್ದರು. ಅವರ ಹೋರಾಟದ ಧನಸ್ಸಿನ ಬಿಲ್ಲು ಹುರಿಯೇ ಕಿತ್ತುಹೋದಂತಾಗಿತ್ತು.

ಸುಂದರೇಶ್

ಸುಂದರೇಶ್ ದೇಹವನ್ನು ಭೂಮಿಯೊಡಲು ಬಗೆದು ಮಡಗಿ ಬಂದ ಮೇಲೆ ಪ್ರೊಫೆಸರ್ ಆಗಲಿ ರೈತ ಸಂಘವಾಗಲಿ ಚೇತರಿಸಿಕೊಳ್ಳಲೇ ಇಲ್ಲ. ಸುಂದರೇಶ್ ಸಾವಿನ ನಂತರ ರೈತಸಂಘ ಬಿಡುವವರು ಮತ್ತು ಪ್ರೊಫೆಸರ್ ಅವರಿಗೇ ತಿರುಗಿಬಿದ್ದು ಬೇರೆ ಸಂಘ ಕಟ್ಟಿಕೊಳ್ಳುವವರು ಎಲ್ಲಾ ಹುಟ್ಟಿಕೊಂಡರು. ಇದರಿಂದ ಪ್ರೊಫೆಸರ್ ಕಿಂಚಿತ್ತೂ ಜಗ್ಗದೆ ’ಇವೆಲ್ಲಾ ಸಾಮಾನ್ಯ, ಹೋಗೋರೆಲ್ಲಾ ಬೇಗ ಹೋಗಬೇಕು’ ಎಂದರು. ಅದಾಗಲೇ ಪುಟ್ಟಣ್ಣಯ್ಯ ದೂರವಾಗಿದ್ದರು. ಪ್ರೊಫೆಸರ್ ಕ್ಯಾನ್ಸರ್‌ಗೆ ತುತ್ತಾಗಿ ಆಸ್ಪತ್ರೆಯಲ್ಲಿದ್ದಾಗ ನೋಡಲು ಹೋದ ಪುಟ್ಟಣ್ಣಯ್ಯನನ್ನು ಕುರಿತು ’ಡಾಕ್ಟರು ಮಾತನಾಡಬೇಡ ಅಂದಿದ್ದಾರೆ’ ಎಂದು ಮೌನ ವಹಿಸಿದರು. ಪ್ರೊಫೆಸರ್ ದೇಹಕ್ಕಂಟಿದ ಕಾಯಿಲೆ ರೈತಸಂಘದ ವಿಷಯದಲ್ಲಿ ಸಾಂಕೇತಿಕವಾಗಿತ್ತು. ಅವರ ಶಕ್ತಿಯೇನೆಂಬುದು ಈಗ ಎಲ್ಲರಿಗೂ ಅರಿವಾಗುತ್ತಿದೆ. ಪ್ರೊಫೆಸರ್ ಅವರ ತೀವ್ರ ನಿಯಂತ್ರಿಸುವ ಗುಣ, ರೈತ ಸಂಘದ ಬಹುದೊಡ್ಡ ನಾಯಕರು ನಿಷ್ಕ್ರಿಯರಾಗಿ ಉಳಿಯುವಂತೆ ಮಾಡಿತು ಎಂಬ ಆರೋಪ ಕೂಡ ಇದೆ. ಈ ಪೈಕಿ ಕಡಿದಾಳು ಶಾಮಣ್ಣನವರನ್ನು ರೈತ ಸಂಘದಿಂದ ತೆಗೆದು ಹಾಕಿದಾಗ, ಅವರೇ ’ಅದು ಹೇಗೆ ನನ್ನನ್ನ ತೆಗೀತಾರೆ’ ಎಂಬ ಪ್ರಶ್ನೆ ಹಾಕಿಕೊಂಡಿದ್ದರು. ಇನ್ನು ತೇಜಸ್ವಿಯವರಂತೂ ’ಕಡಿದಾಳು ಶಾಮಣ್ಣನಂತಹವರನ್ನೆ ರೈತ ಸಂಘ ಹೊರಹಾಕುತ್ತದೆ ಎಂದರೆ ಅದಕ್ಕೆ ಉಳಿಗಾಲವಿಲ್ಲ’ ಎಂಬಂತೆ ಪ್ರತಿಕ್ರಿಯಿಸಿದ್ದರು. ಇವೆಲ್ಲ ಸಂಗತಿಗಳಿದ್ದರೂ, ಪ್ರೊಫೆಸರ್ ಹಾಕಿಕೊಟ್ಟ ಮೂಲ ತತ್ತ್ವಗಳ ಮೇಲೆ ನಡೆದಿದ್ದರೆ ರೈತ ಸಂಘ ದೊಡ್ಡ ಫೋರ್ಸ್ ಆಗಿ ಬೆಳೆಯಬಹುದಿತ್ತು. ಆದರೆ ಅದು ಆಗಲಿಲ್ಲ. ಈಗ ಪ್ರೊಫೆಸರ್ ಇಲ್ಲ, ರೈತರ ಸಮಸ್ಯೆಗಳು ಹಾಗೆಯೇ ಮುಂದುವರಿದಿವೆ. ಅವರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲದವರು ದೇಶವನ್ನಾಳುತ್ತಿದ್ದಾರೆ. ಮುಂಬರುವ ದಿನಗಳು ರೈತರ ಪಾಲಿಗೆ ದುರ್ದಿನಗಳಾಗಬಹುದು.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ. ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ಎಂಡಿಎನ್ ಸಂಸ್ಮರಣಾ ದಿನ; ರೈತರ ಬಾರುಕೋಲಾಗಿದ್ದ ಪ್ರೊಫೆಸರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...