Homeಮುಖಪುಟರೈತಸಂಘ ಇಳಿಮುಖವಾದ ಘಟ್ಟ

ರೈತಸಂಘ ಇಳಿಮುಖವಾದ ಘಟ್ಟ

- Advertisement -
- Advertisement -

ಪ್ರೊ. ನಂಜುಂಡಸ್ವಾಮಿಯವರ ಬತ್ತಳಿಕೆಯಿಂದ ಒಂದೊಂದೇ ಬಾಣಗಳು ಹೊರಬಂದು ಯಶಸ್ವಿ ಹೋರಾಟಗಳನ್ನು ರೂಪಿಸಿದ ಪರಿಣಾಮವಾಗಿ ರೈತಸಂಘ ನಾಡಿನಲ್ಲಿ ಒಂದು ಪ್ರಬಲವಾದ ಶಕ್ತಿಯಾಗಿ ಬೆಳೆಯತೊಡಗಿತು. ಒಂದು ಘಟ್ಟದವರೆಗೆ ರೈತಸಂಘದ ಖರ್ಚುವೆಚ್ಚಗಳು ಕಬ್ಬುಬೆಳೆಗಾರರ ವಂತಿಕೆ ಹಣದಿಂದ ನಡೆಯುತ್ತಿತ್ತು. ನಂತರ ಹಣದ ಸಮಸ್ಯೆ ಎದುರಾದಾಗ ಮುಂದೇನು ಮಾಡುವುದೆಂಬ ಆಲೋಚನೆಗಿಳಿದ ರೈತನಾಯಕರು ಯೋಚನೆಯಲ್ಲಿ ಮುಳುಗಿದರು. ಆಗ ಫ್ರೊಫೆಸರ್ “ಕರ್ನಾಟಕದಲ್ಲಿ ನಾಲ್ಕು ಕೋಟಿಗೂ ಹೆಚ್ಚು ಜನರಿದ್ದಾರೆ. ಒಬ್ಬ ಒಂದು ರೂಪಾಯಿ ಕೊಟ್ಟರೆ ಸಾಕು ನಾಲ್ಕು ಕೋಟಿ ಆಗತ್ತೆ ಅಂದ್ರೆ, ಈಗಾಗ್ಲೆ ನಮ್ಮತ್ರ ಆರುಕೋಟಿ ಇದೆ” ಎಂದರು. ಇದು ತಮಾಷೆಯಂತಿದ್ದರೂ ಪ್ರೊಫೆಸರ್ ಕಾರ್ಯಸೂಚಿ ಯಾವಾಗಲೂ ಸಮಸ್ಯೆಯನ್ನು ದೊಡ್ಡದು ಮಾಡದೆ ಮುನ್ನುಗ್ಗುವ ಕಡೆಗಿರುತ್ತಿತ್ತು.

ಕಡಿದಾಳು ಶಾಮಣ್ಣ

ಆಗ ಕಡಿದಾಳು ಶಾಮಣ್ಣನವರು ’ನೋಡಿ ರೈತರು ಭತ್ತ, ರಾಗಿ, ಅಡಕೆ ಇಂಥವುನ್ನೆಲ್ಲ
ಕೊಡ್ತಾರೆ. ಅವನ್ನೆ ಸಂಗ್ರಹಿಸಿ ಮಾರಿದ ಖರ್ಚಿನಲ್ಲಿ ನಮ್ಮ ಪ್ರಯಾಣ, ಸಭೆಗಳ ಖರ್ಚನ್ನ ನಿಭಾಯಿಸಬಹುದು’ ಎಂದರು. ಇದನ್ನ ಒಲ್ಲದ ಮನಸ್ಸಿನಿಂದ ಎಲ್ಲ ಸಮ್ಮತಿಸಿದರು. ಅದರಂತೆ ಮೇಗರವಳ್ಳಿ ಹೆಗಡೆಯವರ ಮನೆಗೆ ಹೋಗಿ ಅಡಕೆ ಕೇಳುವುದೆಂದು ತೀರ್ಮಾನಿಸಿದ ಶಾಮಣ್ಣನವರು, ಸುಂದರೇಶರನ್ನು ಹೊರಡಿಸಿಕೊಂಡು ಸಿದ್ಧರಾಗಿಯೇಬಿಟ್ಟರು. ಅನಿರೀಕ್ಷಿತವಾಗಿ ದಾಳಿಯಿಟ್ಟ ರೈತನಾಯಕರನ್ನು ತುಂಬ ಗೌರವದಿಂದಲೇ ಬರಮಾಡಿಕೊಂಡ ಹೆಗಡೆ ’ಏನು ಸಮಾಚಾರ ಇಲ್ಲಿಗೆ ದಯಮಾಡಿಸಿದ್ದು’ ಎಂದರು. ಆಗ ಶಾಮಣ್ಣ, ’ನಾವು ರೈತರ ಪರವಾಗಿ ಹೋರಾಟಕ್ಕೆ ರೈತಸಂಘ ಕಟ್ಟಿದ್ದೀವಿ, ಚಳವಳಿ ಅಂದಮೇಲೆ ಖರ್ಚುವೆಚ್ಚ ಇರುತ್ತೆ. ಅದಕ್ಕಾಗಿ ರೈತರಿಂದ ದವಸ ಧಾನ್ಯ ಅಡಕೆ ಸಂಗ್ರಹಿಸ್ತಾ ಇದ್ದೀವಿ. ತಾವು ಒಂದೈದು ಕೆ.ಜಿ ಅಡಿಕೆ ಸಹಾಯ ಮಾಡಿ’ ಎಂದರು. ಆಗ ಹೆಗಡೆಯವರು ’ನಮ್ಮ ರೈತರ ಸಮಸ್ಯೆ ಮುಂದಿಟ್ಟುಕೊಂಡು ನೀವು ಹೋರಾಡುವುದೇನು ಬೇಡಿ, ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ತಿವಿ’ ಎಂದರು. ಅಲ್ಲಿಗೆ ಸಾರ್ವಜನಿಕ ದೇಣಿಗೆ ಎತ್ತುವ ಕೆಲಸ ನಿಲುಗಡೆಯಾಯ್ತು. ಆದರೇನು ರೈತಸಂಘ ತನ್ನ ಎಂದಿನ ಬಿರುಸಿನ ಹೋರಾಟವನ್ನ ಮುಂದುವರೆಸಿತು.

ತಮಿಳುನಾಡಿನ ನಾರಾಯಣಸ್ವಾಮಿ ನಾಯ್ಡು, ನಂಜುಂಡಸ್ವಾಮಿಯವರಷ್ಟೇ ಪ್ರಬಲರಾದ ಜನಪ್ರಿಯ ರೈತ ನಾಯಕ. ಕರ್ನಾಟಕ ಮತ್ತು ತಮಿಳುನಾಡಿನ ರೈತರು ಸಮಾನವಾದ ಸಂಕಷ್ಟ ಎದುರಿಸುವಂತಹ ಕಾವೇರಿ ವಿಷಯದಲ್ಲಿ ರೈತರನ್ನು ಬದಿಗೊತ್ತಿ ಬರೀ ರಾಜಕಾರಣಿಗಳೇ ರಾಜಕಾರಣ ಮಾಡುತ್ತಿದ್ದಾರೆ. ಆದರೆ ನಾರಾಯಣಸ್ವಾಮಿ ಬಗ್ಗೆ ಕರ್ನಾಟಕದ ರೈತರಿಗೆ ತುಂಬಾ ಗೌರವವಿದೆ. ಹಾಗೆಯೇ ನಂಜುಂಡಸ್ವಾಮಿಯವರ ವಿದ್ವತ್ತಿಗೆ ತಮಿಳುನಾಡು ರೈತರು ಅತೀವ ಗೌರವ ಕೊಡುತ್ತಾರೆ. ನಾರಾಯಣಸ್ವಾಮಿಯವರ ನೇತೃತ್ವದಲ್ಲಿ ಹೈದರಾಬಾದಿನಲ್ಲಿ ಕಿಸಾನ್ ಸಮ್ಮೇಳನ ನಡೆಯಿತು. ಅಲ್ಲಿ ರೈತ ಸಂಘಕ್ಕೆ ಒಂದು ಸಿಂಬಲ್ ಬೇಕು ಎಂಬ ಚರ್ಚೆ ಪ್ರಸ್ತಾಪಕ್ಕೆ ಬಂತು. ಜೋಡೆತ್ತು ಚೆನ್ನಾಗಿದೆ ಎಂದುಕೊಂಡರೂ, ಅದನ್ನಾಗಲೇ ಕಾಂಗ್ರೆಸ್‌ನವರು ಪಡೆದಿದ್ದರಿಂದ, ನೇಗಿಲ ಒಡೆಯ ರೈತನಿರಲಿ ಎಂಬ ತೀರ್ಮಾನವಾಯ್ತು. ಅದಾಗಲೇ ಹಸಿರುಶಾಲು ದೇಶವನ್ನು ವ್ಯಾಪಿಸಿತ್ತು. ಇಂತಹ ಮಹತ್ವದ ಸಭೆಗೆ ಕರ್ನಾಟಕದಿಂದಲೂ ರೈತ ದಂಡು ಹೋಗಿತ್ತು.

ನಾರಾಯಣಸ್ವಾಮಿ ನಾಯ್ಡು

ರೈತರು ತಮ್ಮ ವಾಹನವನ್ನು ಆಂಧ್ರದ ಟ್ರಾಫಿಕ್ ನಿಯಮವನ್ನು ಮೀರಿ ನಿಲ್ಲಿಸಿದ್ದರು. ಕೂಡಲೇ ಅಲ್ಲಿಗೆ ಬಂದ ಪೊಲೀಸನೊಬ್ಬ ರೈತರು ನಿಯಮ ಉಲ್ಲಂಘಿಸಿದ್ದಾರೆ ಎಂದು ಚೀಟಿ ಹರಿದುಕೊಟ್ಟ. ರೈತರು ಪ್ರೊಫೆಸರ್ ಮೊರೆ ಹೋದರು. ಸ್ಥಳಕ್ಕೆ ಬಂದ ಪ್ರೊಫೆಸರ್ ಪೊಲೀಸ್ ಕೊಟ್ಟ ನೋಟಿಸನ್ನು ಕೈಲಿಡಿದು, ಅಲ್ಲಿದ್ದ ಪೊಲೀಸ್ ಮುಂದೆಯೇ ಹರಿದುಹಾಕಿದರು. ತನ್ನ ಜೀವಮಾನದಲ್ಲಿ ಇಂತಹ ಪ್ರತಿಕ್ರಿಯೆ ನೋಡದ ಆತ “ಏಮಂಟಾ ಇದಿ” ಎಂದು ಗೊಣಗಿಕೊಂಡು ಹೊರಟುಹೋದ. ಅನ್ಯ ರಾಜ್ಯದಿಂದ ಬಂದ ರೈತರಿಗೆ ಇಲ್ಲಿನ ಟ್ರಾಫಿಕ್ ವ್ಯವಸ್ಥೆ ಗೊತ್ತಿರಲಾರದು, ಆದ್ದರಿಂದ ವಾಹನವನ್ನು ಸರಿಯಾದ ಜಾಗಕ್ಕೆ ನಿಲ್ಲಿಸುವಂತೆ ಸಹಾಯ ಮಾಡುವುದು ಪೊಲೀಸನ ಕರ್ತವ್ಯ ಎಂಬುದು ಪ್ರೊಫೆಸರ್ ಅವರ ನಿಲುವಾಗಿತ್ತು.

ಅದು ರೈತಸಂಘದ ಉತ್ತುಂಗ ಸ್ಥಿತಿ ತಲುಪಿದ ಕಾಲ. ಸರಕಾರ ರೈತ ಸಂಘಕ್ಕೆ ಹೆದರಿ ಮಾತುಕತೆಗೆ ಕರೆಯುತ್ತಿದ್ದ ಕಾಲ. ಆದರೇನು ರೈತ ಹೋರಾಟದಿಂದ ಅವಕಾಶ ಪಡೆದು ಅಧಿಕಾರಕ್ಕೆ ಏರಿದ್ದ ಜನತಾ ಪಕ್ಷದ ಸರಕಾರವೂ ಕೂಡ ಯಥಾಸ್ಥಿತಿವಾದದ ಪ್ರತಿಪಾದಕರಂತೆ, ಗೋಲಿಬಾರವೊಂದನ್ನ ಹೊರತುಪಡಿಸಿದರೆ, ಇದೂ ಕೂಡ ಗುಂಡೂರಾಯರ ಸರಕಾರ ಎಂಬಂತೆ ರೈತ ಮುಖಂಡರಿಗೆ ಕಾಣಿಸಿತು. ಆದ್ದರಿಂದ ರೈತ ಸಂಘವೇ ಏಕೆ ರಾಜಕೀಯ ಮಾಡಬಾರದೆಂಬ ಚರ್ಚೆಯಾಯ್ತು. ಅದಕ್ಕಾಗಿ ಬೆಂಗಳೂರಿನ ಲಾ ಕಾಲೇಜ್ ಪ್ರಿನ್ಸಿಪಾಲರಾಗಿದ್ದ ಪ್ರೊಫೆಸರ್ ಆ ಹುದ್ದೆಗೆ ರಾಜಿನಾಮೆ ನೀಡಿ, ರೈತಸಂಘದ ಮುಂದಾಳತ್ವವನ್ನು ಹೆಚ್.ಎಸ್ ರುದ್ರಪ್ಪನವರಿಗೆ ಬಿಟ್ಟು ಕನ್ನಡ ದೇಶ ಪಕ್ಷ ಸ್ಥಾಪಿಸಿದರು. ಅಲ್ಲಿಂದ ರೈತ ಸಂಘದ ಇಳಿಮುಖ ಆರಂಭವಾಯ್ತು ಎನ್ನಬಹುದು. ಈವರೆಗೆ ರೈತ ಸಂಘಕ್ಕೆ ಹೆದರುತ್ತಿದ್ದ ಜನತಾ ಪಕ್ಷದವರು ನೀವು ರಾಜಕೀಯಕ್ಕೆ ಬಂದ ಮೇಲೆ ನಿಮಗೆ ಹೆದರುವ ಅಗತ್ಯವೇನು ಎನ್ನವಂತಾದರು. ಅದಾಗಲೇ ರೈತ ಸಂಘದ ಚಳವಳಿಯಲ್ಲಿದ್ದ ಅನೇಕರು ಜನತಾಪಕ್ಷದಲ್ಲಿ ತಲೆ ಮರೆಸಿಕೊಂಡಿದ್ದರು.

ರಾಜಕಾರಣ ಮಾಡಬೇಕಾದರೆ ಹಣಕಾಸಿನ ಮೂಲ ಝರಿಯೊಂದರ ಅಗತ್ಯವಿದ್ದುದ್ದರಿಂದ,
ಪ್ರೊಫೆಸರ್ ’ಒಂದು ರೂಪಾಯಿ ಜೊತೆಗೆ ಒಂದು ಓಟುಕೊಡಿ’ ಎಂಬ ಘೋಷಣೆಯೊಂದಿಗೆ ರಾಜಕಾರಣ ಆರಂಭಿಸಿದರು. ರೈತ ಸಂಘದ ನೆಲೆಯಿದ್ದದ್ದು ಗ್ರಾಮೀಣ ಪ್ರದೇಶದಲ್ಲಿ. ಆದರೆ, ಮಂಡಲ ಪಂಚಾಯ್ತಿ ಚುನಾವಣೆ ಮನೆ ಬಾಗಿಲಿಗೆ ಬಂದಾಗ ಸುಮ್ಮನಿದ್ದ ರೈತ ನಾಯಕರು, ಮೊದಲು ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕಿ ಸ್ಪರ್ಧಿಸಿ, ನಂತರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರು. ಅದಾಗಲೇ ರೈತರು ಜನತಾ ಸರಕಾರದಲ್ಲಿ ಭಾಗಿಯಾಗಿದ್ದರಿಂದ, ರೈತ ಸಂಘ ಕೇವಲ ಒಂದೆರಡು ಅಭ್ಯರ್ಥಿಗಳನ್ನ ಮಾತ್ರ ಗೆಲ್ಲಿಸಿಕೊಂಡಿತು. ಬಾಬಾಗೌಡರು ಎರಡು ಕ್ಷೇತ್ರದಲ್ಲಿ ಗೆದ್ದಿದ್ದರಿಂದ ಒಂದನ್ನ ಪ್ರೊಫೆಸರ್‌ಗೆ ಬಿಟ್ಟುಕೊಟ್ಟು ಅವರು ವಿಧಾನಸೌಧ ಪ್ರವೇಶಿಸುವಂತೆ ಮಾಡಿದರು. ವಿಧಾನಸೌಧದ ಮೇಲೆ ಬಾವುಟ ಹಾರಿಸುತ್ತೇವೆಂದಿದ್ದ ಪ್ರೊಫೆಸರ್ ಎರಡು ಸ್ಥಾನಕ್ಕೆ ಸೀಮಿತವಾದರು. ಆ ನಂತರ ರೈತ ನಾಯಕರ ಉಚ್ಛಟನೆಗಳು ನಡೆದವು. ನಿಷ್ಕ್ರಿಯ ನಾಯಕರು ಒಳ ಜಗಳದಲ್ಲಿ ಮುಳುಗಿದರು. ಅಂತಹ ಒಂದು ಸನ್ನಿವೇಶದಲ್ಲಿ ಪ್ರೊಫೆಸರ್ ನಂಜುಂಡಸ್ವಾಮಿಯವರ ಭಾಗಕ್ಕೆ ಕರ್ಣನಂತಿದ್ದ ಸುಂದರೇಶ್ ಹೃದಯಾಘಾತದಿಂದ ನಿಧನರಾದರು. ಅದೊಂದು ರೀತಿ ರೈತ ಸಂಘದ ಹೃದಯ ಸ್ತಬ್ಧವಾದಂತಹ ಸ್ಥಿತಿ. ಅದಕ್ಕಾಗಿಯೆ ಪ್ರೊಫೆಸರ್ ಮಗುವಿನಂತೆ ಅತ್ತಿದ್ದರು. ಅವರ ಹೋರಾಟದ ಧನಸ್ಸಿನ ಬಿಲ್ಲು ಹುರಿಯೇ ಕಿತ್ತುಹೋದಂತಾಗಿತ್ತು.

ಸುಂದರೇಶ್

ಸುಂದರೇಶ್ ದೇಹವನ್ನು ಭೂಮಿಯೊಡಲು ಬಗೆದು ಮಡಗಿ ಬಂದ ಮೇಲೆ ಪ್ರೊಫೆಸರ್ ಆಗಲಿ ರೈತ ಸಂಘವಾಗಲಿ ಚೇತರಿಸಿಕೊಳ್ಳಲೇ ಇಲ್ಲ. ಸುಂದರೇಶ್ ಸಾವಿನ ನಂತರ ರೈತಸಂಘ ಬಿಡುವವರು ಮತ್ತು ಪ್ರೊಫೆಸರ್ ಅವರಿಗೇ ತಿರುಗಿಬಿದ್ದು ಬೇರೆ ಸಂಘ ಕಟ್ಟಿಕೊಳ್ಳುವವರು ಎಲ್ಲಾ ಹುಟ್ಟಿಕೊಂಡರು. ಇದರಿಂದ ಪ್ರೊಫೆಸರ್ ಕಿಂಚಿತ್ತೂ ಜಗ್ಗದೆ ’ಇವೆಲ್ಲಾ ಸಾಮಾನ್ಯ, ಹೋಗೋರೆಲ್ಲಾ ಬೇಗ ಹೋಗಬೇಕು’ ಎಂದರು. ಅದಾಗಲೇ ಪುಟ್ಟಣ್ಣಯ್ಯ ದೂರವಾಗಿದ್ದರು. ಪ್ರೊಫೆಸರ್ ಕ್ಯಾನ್ಸರ್‌ಗೆ ತುತ್ತಾಗಿ ಆಸ್ಪತ್ರೆಯಲ್ಲಿದ್ದಾಗ ನೋಡಲು ಹೋದ ಪುಟ್ಟಣ್ಣಯ್ಯನನ್ನು ಕುರಿತು ’ಡಾಕ್ಟರು ಮಾತನಾಡಬೇಡ ಅಂದಿದ್ದಾರೆ’ ಎಂದು ಮೌನ ವಹಿಸಿದರು. ಪ್ರೊಫೆಸರ್ ದೇಹಕ್ಕಂಟಿದ ಕಾಯಿಲೆ ರೈತಸಂಘದ ವಿಷಯದಲ್ಲಿ ಸಾಂಕೇತಿಕವಾಗಿತ್ತು. ಅವರ ಶಕ್ತಿಯೇನೆಂಬುದು ಈಗ ಎಲ್ಲರಿಗೂ ಅರಿವಾಗುತ್ತಿದೆ. ಪ್ರೊಫೆಸರ್ ಅವರ ತೀವ್ರ ನಿಯಂತ್ರಿಸುವ ಗುಣ, ರೈತ ಸಂಘದ ಬಹುದೊಡ್ಡ ನಾಯಕರು ನಿಷ್ಕ್ರಿಯರಾಗಿ ಉಳಿಯುವಂತೆ ಮಾಡಿತು ಎಂಬ ಆರೋಪ ಕೂಡ ಇದೆ. ಈ ಪೈಕಿ ಕಡಿದಾಳು ಶಾಮಣ್ಣನವರನ್ನು ರೈತ ಸಂಘದಿಂದ ತೆಗೆದು ಹಾಕಿದಾಗ, ಅವರೇ ’ಅದು ಹೇಗೆ ನನ್ನನ್ನ ತೆಗೀತಾರೆ’ ಎಂಬ ಪ್ರಶ್ನೆ ಹಾಕಿಕೊಂಡಿದ್ದರು. ಇನ್ನು ತೇಜಸ್ವಿಯವರಂತೂ ’ಕಡಿದಾಳು ಶಾಮಣ್ಣನಂತಹವರನ್ನೆ ರೈತ ಸಂಘ ಹೊರಹಾಕುತ್ತದೆ ಎಂದರೆ ಅದಕ್ಕೆ ಉಳಿಗಾಲವಿಲ್ಲ’ ಎಂಬಂತೆ ಪ್ರತಿಕ್ರಿಯಿಸಿದ್ದರು. ಇವೆಲ್ಲ ಸಂಗತಿಗಳಿದ್ದರೂ, ಪ್ರೊಫೆಸರ್ ಹಾಕಿಕೊಟ್ಟ ಮೂಲ ತತ್ತ್ವಗಳ ಮೇಲೆ ನಡೆದಿದ್ದರೆ ರೈತ ಸಂಘ ದೊಡ್ಡ ಫೋರ್ಸ್ ಆಗಿ ಬೆಳೆಯಬಹುದಿತ್ತು. ಆದರೆ ಅದು ಆಗಲಿಲ್ಲ. ಈಗ ಪ್ರೊಫೆಸರ್ ಇಲ್ಲ, ರೈತರ ಸಮಸ್ಯೆಗಳು ಹಾಗೆಯೇ ಮುಂದುವರಿದಿವೆ. ಅವರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲದವರು ದೇಶವನ್ನಾಳುತ್ತಿದ್ದಾರೆ. ಮುಂಬರುವ ದಿನಗಳು ರೈತರ ಪಾಲಿಗೆ ದುರ್ದಿನಗಳಾಗಬಹುದು.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ. ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ಎಂಡಿಎನ್ ಸಂಸ್ಮರಣಾ ದಿನ; ರೈತರ ಬಾರುಕೋಲಾಗಿದ್ದ ಪ್ರೊಫೆಸರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...