Homeಮುಖಪುಟರೈತಸಂಘ ಇಳಿಮುಖವಾದ ಘಟ್ಟ

ರೈತಸಂಘ ಇಳಿಮುಖವಾದ ಘಟ್ಟ

- Advertisement -
- Advertisement -

ಪ್ರೊ. ನಂಜುಂಡಸ್ವಾಮಿಯವರ ಬತ್ತಳಿಕೆಯಿಂದ ಒಂದೊಂದೇ ಬಾಣಗಳು ಹೊರಬಂದು ಯಶಸ್ವಿ ಹೋರಾಟಗಳನ್ನು ರೂಪಿಸಿದ ಪರಿಣಾಮವಾಗಿ ರೈತಸಂಘ ನಾಡಿನಲ್ಲಿ ಒಂದು ಪ್ರಬಲವಾದ ಶಕ್ತಿಯಾಗಿ ಬೆಳೆಯತೊಡಗಿತು. ಒಂದು ಘಟ್ಟದವರೆಗೆ ರೈತಸಂಘದ ಖರ್ಚುವೆಚ್ಚಗಳು ಕಬ್ಬುಬೆಳೆಗಾರರ ವಂತಿಕೆ ಹಣದಿಂದ ನಡೆಯುತ್ತಿತ್ತು. ನಂತರ ಹಣದ ಸಮಸ್ಯೆ ಎದುರಾದಾಗ ಮುಂದೇನು ಮಾಡುವುದೆಂಬ ಆಲೋಚನೆಗಿಳಿದ ರೈತನಾಯಕರು ಯೋಚನೆಯಲ್ಲಿ ಮುಳುಗಿದರು. ಆಗ ಫ್ರೊಫೆಸರ್ “ಕರ್ನಾಟಕದಲ್ಲಿ ನಾಲ್ಕು ಕೋಟಿಗೂ ಹೆಚ್ಚು ಜನರಿದ್ದಾರೆ. ಒಬ್ಬ ಒಂದು ರೂಪಾಯಿ ಕೊಟ್ಟರೆ ಸಾಕು ನಾಲ್ಕು ಕೋಟಿ ಆಗತ್ತೆ ಅಂದ್ರೆ, ಈಗಾಗ್ಲೆ ನಮ್ಮತ್ರ ಆರುಕೋಟಿ ಇದೆ” ಎಂದರು. ಇದು ತಮಾಷೆಯಂತಿದ್ದರೂ ಪ್ರೊಫೆಸರ್ ಕಾರ್ಯಸೂಚಿ ಯಾವಾಗಲೂ ಸಮಸ್ಯೆಯನ್ನು ದೊಡ್ಡದು ಮಾಡದೆ ಮುನ್ನುಗ್ಗುವ ಕಡೆಗಿರುತ್ತಿತ್ತು.

ಕಡಿದಾಳು ಶಾಮಣ್ಣ

ಆಗ ಕಡಿದಾಳು ಶಾಮಣ್ಣನವರು ’ನೋಡಿ ರೈತರು ಭತ್ತ, ರಾಗಿ, ಅಡಕೆ ಇಂಥವುನ್ನೆಲ್ಲ
ಕೊಡ್ತಾರೆ. ಅವನ್ನೆ ಸಂಗ್ರಹಿಸಿ ಮಾರಿದ ಖರ್ಚಿನಲ್ಲಿ ನಮ್ಮ ಪ್ರಯಾಣ, ಸಭೆಗಳ ಖರ್ಚನ್ನ ನಿಭಾಯಿಸಬಹುದು’ ಎಂದರು. ಇದನ್ನ ಒಲ್ಲದ ಮನಸ್ಸಿನಿಂದ ಎಲ್ಲ ಸಮ್ಮತಿಸಿದರು. ಅದರಂತೆ ಮೇಗರವಳ್ಳಿ ಹೆಗಡೆಯವರ ಮನೆಗೆ ಹೋಗಿ ಅಡಕೆ ಕೇಳುವುದೆಂದು ತೀರ್ಮಾನಿಸಿದ ಶಾಮಣ್ಣನವರು, ಸುಂದರೇಶರನ್ನು ಹೊರಡಿಸಿಕೊಂಡು ಸಿದ್ಧರಾಗಿಯೇಬಿಟ್ಟರು. ಅನಿರೀಕ್ಷಿತವಾಗಿ ದಾಳಿಯಿಟ್ಟ ರೈತನಾಯಕರನ್ನು ತುಂಬ ಗೌರವದಿಂದಲೇ ಬರಮಾಡಿಕೊಂಡ ಹೆಗಡೆ ’ಏನು ಸಮಾಚಾರ ಇಲ್ಲಿಗೆ ದಯಮಾಡಿಸಿದ್ದು’ ಎಂದರು. ಆಗ ಶಾಮಣ್ಣ, ’ನಾವು ರೈತರ ಪರವಾಗಿ ಹೋರಾಟಕ್ಕೆ ರೈತಸಂಘ ಕಟ್ಟಿದ್ದೀವಿ, ಚಳವಳಿ ಅಂದಮೇಲೆ ಖರ್ಚುವೆಚ್ಚ ಇರುತ್ತೆ. ಅದಕ್ಕಾಗಿ ರೈತರಿಂದ ದವಸ ಧಾನ್ಯ ಅಡಕೆ ಸಂಗ್ರಹಿಸ್ತಾ ಇದ್ದೀವಿ. ತಾವು ಒಂದೈದು ಕೆ.ಜಿ ಅಡಿಕೆ ಸಹಾಯ ಮಾಡಿ’ ಎಂದರು. ಆಗ ಹೆಗಡೆಯವರು ’ನಮ್ಮ ರೈತರ ಸಮಸ್ಯೆ ಮುಂದಿಟ್ಟುಕೊಂಡು ನೀವು ಹೋರಾಡುವುದೇನು ಬೇಡಿ, ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ತಿವಿ’ ಎಂದರು. ಅಲ್ಲಿಗೆ ಸಾರ್ವಜನಿಕ ದೇಣಿಗೆ ಎತ್ತುವ ಕೆಲಸ ನಿಲುಗಡೆಯಾಯ್ತು. ಆದರೇನು ರೈತಸಂಘ ತನ್ನ ಎಂದಿನ ಬಿರುಸಿನ ಹೋರಾಟವನ್ನ ಮುಂದುವರೆಸಿತು.

ತಮಿಳುನಾಡಿನ ನಾರಾಯಣಸ್ವಾಮಿ ನಾಯ್ಡು, ನಂಜುಂಡಸ್ವಾಮಿಯವರಷ್ಟೇ ಪ್ರಬಲರಾದ ಜನಪ್ರಿಯ ರೈತ ನಾಯಕ. ಕರ್ನಾಟಕ ಮತ್ತು ತಮಿಳುನಾಡಿನ ರೈತರು ಸಮಾನವಾದ ಸಂಕಷ್ಟ ಎದುರಿಸುವಂತಹ ಕಾವೇರಿ ವಿಷಯದಲ್ಲಿ ರೈತರನ್ನು ಬದಿಗೊತ್ತಿ ಬರೀ ರಾಜಕಾರಣಿಗಳೇ ರಾಜಕಾರಣ ಮಾಡುತ್ತಿದ್ದಾರೆ. ಆದರೆ ನಾರಾಯಣಸ್ವಾಮಿ ಬಗ್ಗೆ ಕರ್ನಾಟಕದ ರೈತರಿಗೆ ತುಂಬಾ ಗೌರವವಿದೆ. ಹಾಗೆಯೇ ನಂಜುಂಡಸ್ವಾಮಿಯವರ ವಿದ್ವತ್ತಿಗೆ ತಮಿಳುನಾಡು ರೈತರು ಅತೀವ ಗೌರವ ಕೊಡುತ್ತಾರೆ. ನಾರಾಯಣಸ್ವಾಮಿಯವರ ನೇತೃತ್ವದಲ್ಲಿ ಹೈದರಾಬಾದಿನಲ್ಲಿ ಕಿಸಾನ್ ಸಮ್ಮೇಳನ ನಡೆಯಿತು. ಅಲ್ಲಿ ರೈತ ಸಂಘಕ್ಕೆ ಒಂದು ಸಿಂಬಲ್ ಬೇಕು ಎಂಬ ಚರ್ಚೆ ಪ್ರಸ್ತಾಪಕ್ಕೆ ಬಂತು. ಜೋಡೆತ್ತು ಚೆನ್ನಾಗಿದೆ ಎಂದುಕೊಂಡರೂ, ಅದನ್ನಾಗಲೇ ಕಾಂಗ್ರೆಸ್‌ನವರು ಪಡೆದಿದ್ದರಿಂದ, ನೇಗಿಲ ಒಡೆಯ ರೈತನಿರಲಿ ಎಂಬ ತೀರ್ಮಾನವಾಯ್ತು. ಅದಾಗಲೇ ಹಸಿರುಶಾಲು ದೇಶವನ್ನು ವ್ಯಾಪಿಸಿತ್ತು. ಇಂತಹ ಮಹತ್ವದ ಸಭೆಗೆ ಕರ್ನಾಟಕದಿಂದಲೂ ರೈತ ದಂಡು ಹೋಗಿತ್ತು.

ನಾರಾಯಣಸ್ವಾಮಿ ನಾಯ್ಡು

ರೈತರು ತಮ್ಮ ವಾಹನವನ್ನು ಆಂಧ್ರದ ಟ್ರಾಫಿಕ್ ನಿಯಮವನ್ನು ಮೀರಿ ನಿಲ್ಲಿಸಿದ್ದರು. ಕೂಡಲೇ ಅಲ್ಲಿಗೆ ಬಂದ ಪೊಲೀಸನೊಬ್ಬ ರೈತರು ನಿಯಮ ಉಲ್ಲಂಘಿಸಿದ್ದಾರೆ ಎಂದು ಚೀಟಿ ಹರಿದುಕೊಟ್ಟ. ರೈತರು ಪ್ರೊಫೆಸರ್ ಮೊರೆ ಹೋದರು. ಸ್ಥಳಕ್ಕೆ ಬಂದ ಪ್ರೊಫೆಸರ್ ಪೊಲೀಸ್ ಕೊಟ್ಟ ನೋಟಿಸನ್ನು ಕೈಲಿಡಿದು, ಅಲ್ಲಿದ್ದ ಪೊಲೀಸ್ ಮುಂದೆಯೇ ಹರಿದುಹಾಕಿದರು. ತನ್ನ ಜೀವಮಾನದಲ್ಲಿ ಇಂತಹ ಪ್ರತಿಕ್ರಿಯೆ ನೋಡದ ಆತ “ಏಮಂಟಾ ಇದಿ” ಎಂದು ಗೊಣಗಿಕೊಂಡು ಹೊರಟುಹೋದ. ಅನ್ಯ ರಾಜ್ಯದಿಂದ ಬಂದ ರೈತರಿಗೆ ಇಲ್ಲಿನ ಟ್ರಾಫಿಕ್ ವ್ಯವಸ್ಥೆ ಗೊತ್ತಿರಲಾರದು, ಆದ್ದರಿಂದ ವಾಹನವನ್ನು ಸರಿಯಾದ ಜಾಗಕ್ಕೆ ನಿಲ್ಲಿಸುವಂತೆ ಸಹಾಯ ಮಾಡುವುದು ಪೊಲೀಸನ ಕರ್ತವ್ಯ ಎಂಬುದು ಪ್ರೊಫೆಸರ್ ಅವರ ನಿಲುವಾಗಿತ್ತು.

ಅದು ರೈತಸಂಘದ ಉತ್ತುಂಗ ಸ್ಥಿತಿ ತಲುಪಿದ ಕಾಲ. ಸರಕಾರ ರೈತ ಸಂಘಕ್ಕೆ ಹೆದರಿ ಮಾತುಕತೆಗೆ ಕರೆಯುತ್ತಿದ್ದ ಕಾಲ. ಆದರೇನು ರೈತ ಹೋರಾಟದಿಂದ ಅವಕಾಶ ಪಡೆದು ಅಧಿಕಾರಕ್ಕೆ ಏರಿದ್ದ ಜನತಾ ಪಕ್ಷದ ಸರಕಾರವೂ ಕೂಡ ಯಥಾಸ್ಥಿತಿವಾದದ ಪ್ರತಿಪಾದಕರಂತೆ, ಗೋಲಿಬಾರವೊಂದನ್ನ ಹೊರತುಪಡಿಸಿದರೆ, ಇದೂ ಕೂಡ ಗುಂಡೂರಾಯರ ಸರಕಾರ ಎಂಬಂತೆ ರೈತ ಮುಖಂಡರಿಗೆ ಕಾಣಿಸಿತು. ಆದ್ದರಿಂದ ರೈತ ಸಂಘವೇ ಏಕೆ ರಾಜಕೀಯ ಮಾಡಬಾರದೆಂಬ ಚರ್ಚೆಯಾಯ್ತು. ಅದಕ್ಕಾಗಿ ಬೆಂಗಳೂರಿನ ಲಾ ಕಾಲೇಜ್ ಪ್ರಿನ್ಸಿಪಾಲರಾಗಿದ್ದ ಪ್ರೊಫೆಸರ್ ಆ ಹುದ್ದೆಗೆ ರಾಜಿನಾಮೆ ನೀಡಿ, ರೈತಸಂಘದ ಮುಂದಾಳತ್ವವನ್ನು ಹೆಚ್.ಎಸ್ ರುದ್ರಪ್ಪನವರಿಗೆ ಬಿಟ್ಟು ಕನ್ನಡ ದೇಶ ಪಕ್ಷ ಸ್ಥಾಪಿಸಿದರು. ಅಲ್ಲಿಂದ ರೈತ ಸಂಘದ ಇಳಿಮುಖ ಆರಂಭವಾಯ್ತು ಎನ್ನಬಹುದು. ಈವರೆಗೆ ರೈತ ಸಂಘಕ್ಕೆ ಹೆದರುತ್ತಿದ್ದ ಜನತಾ ಪಕ್ಷದವರು ನೀವು ರಾಜಕೀಯಕ್ಕೆ ಬಂದ ಮೇಲೆ ನಿಮಗೆ ಹೆದರುವ ಅಗತ್ಯವೇನು ಎನ್ನವಂತಾದರು. ಅದಾಗಲೇ ರೈತ ಸಂಘದ ಚಳವಳಿಯಲ್ಲಿದ್ದ ಅನೇಕರು ಜನತಾಪಕ್ಷದಲ್ಲಿ ತಲೆ ಮರೆಸಿಕೊಂಡಿದ್ದರು.

ರಾಜಕಾರಣ ಮಾಡಬೇಕಾದರೆ ಹಣಕಾಸಿನ ಮೂಲ ಝರಿಯೊಂದರ ಅಗತ್ಯವಿದ್ದುದ್ದರಿಂದ,
ಪ್ರೊಫೆಸರ್ ’ಒಂದು ರೂಪಾಯಿ ಜೊತೆಗೆ ಒಂದು ಓಟುಕೊಡಿ’ ಎಂಬ ಘೋಷಣೆಯೊಂದಿಗೆ ರಾಜಕಾರಣ ಆರಂಭಿಸಿದರು. ರೈತ ಸಂಘದ ನೆಲೆಯಿದ್ದದ್ದು ಗ್ರಾಮೀಣ ಪ್ರದೇಶದಲ್ಲಿ. ಆದರೆ, ಮಂಡಲ ಪಂಚಾಯ್ತಿ ಚುನಾವಣೆ ಮನೆ ಬಾಗಿಲಿಗೆ ಬಂದಾಗ ಸುಮ್ಮನಿದ್ದ ರೈತ ನಾಯಕರು, ಮೊದಲು ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕಿ ಸ್ಪರ್ಧಿಸಿ, ನಂತರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರು. ಅದಾಗಲೇ ರೈತರು ಜನತಾ ಸರಕಾರದಲ್ಲಿ ಭಾಗಿಯಾಗಿದ್ದರಿಂದ, ರೈತ ಸಂಘ ಕೇವಲ ಒಂದೆರಡು ಅಭ್ಯರ್ಥಿಗಳನ್ನ ಮಾತ್ರ ಗೆಲ್ಲಿಸಿಕೊಂಡಿತು. ಬಾಬಾಗೌಡರು ಎರಡು ಕ್ಷೇತ್ರದಲ್ಲಿ ಗೆದ್ದಿದ್ದರಿಂದ ಒಂದನ್ನ ಪ್ರೊಫೆಸರ್‌ಗೆ ಬಿಟ್ಟುಕೊಟ್ಟು ಅವರು ವಿಧಾನಸೌಧ ಪ್ರವೇಶಿಸುವಂತೆ ಮಾಡಿದರು. ವಿಧಾನಸೌಧದ ಮೇಲೆ ಬಾವುಟ ಹಾರಿಸುತ್ತೇವೆಂದಿದ್ದ ಪ್ರೊಫೆಸರ್ ಎರಡು ಸ್ಥಾನಕ್ಕೆ ಸೀಮಿತವಾದರು. ಆ ನಂತರ ರೈತ ನಾಯಕರ ಉಚ್ಛಟನೆಗಳು ನಡೆದವು. ನಿಷ್ಕ್ರಿಯ ನಾಯಕರು ಒಳ ಜಗಳದಲ್ಲಿ ಮುಳುಗಿದರು. ಅಂತಹ ಒಂದು ಸನ್ನಿವೇಶದಲ್ಲಿ ಪ್ರೊಫೆಸರ್ ನಂಜುಂಡಸ್ವಾಮಿಯವರ ಭಾಗಕ್ಕೆ ಕರ್ಣನಂತಿದ್ದ ಸುಂದರೇಶ್ ಹೃದಯಾಘಾತದಿಂದ ನಿಧನರಾದರು. ಅದೊಂದು ರೀತಿ ರೈತ ಸಂಘದ ಹೃದಯ ಸ್ತಬ್ಧವಾದಂತಹ ಸ್ಥಿತಿ. ಅದಕ್ಕಾಗಿಯೆ ಪ್ರೊಫೆಸರ್ ಮಗುವಿನಂತೆ ಅತ್ತಿದ್ದರು. ಅವರ ಹೋರಾಟದ ಧನಸ್ಸಿನ ಬಿಲ್ಲು ಹುರಿಯೇ ಕಿತ್ತುಹೋದಂತಾಗಿತ್ತು.

ಸುಂದರೇಶ್

ಸುಂದರೇಶ್ ದೇಹವನ್ನು ಭೂಮಿಯೊಡಲು ಬಗೆದು ಮಡಗಿ ಬಂದ ಮೇಲೆ ಪ್ರೊಫೆಸರ್ ಆಗಲಿ ರೈತ ಸಂಘವಾಗಲಿ ಚೇತರಿಸಿಕೊಳ್ಳಲೇ ಇಲ್ಲ. ಸುಂದರೇಶ್ ಸಾವಿನ ನಂತರ ರೈತಸಂಘ ಬಿಡುವವರು ಮತ್ತು ಪ್ರೊಫೆಸರ್ ಅವರಿಗೇ ತಿರುಗಿಬಿದ್ದು ಬೇರೆ ಸಂಘ ಕಟ್ಟಿಕೊಳ್ಳುವವರು ಎಲ್ಲಾ ಹುಟ್ಟಿಕೊಂಡರು. ಇದರಿಂದ ಪ್ರೊಫೆಸರ್ ಕಿಂಚಿತ್ತೂ ಜಗ್ಗದೆ ’ಇವೆಲ್ಲಾ ಸಾಮಾನ್ಯ, ಹೋಗೋರೆಲ್ಲಾ ಬೇಗ ಹೋಗಬೇಕು’ ಎಂದರು. ಅದಾಗಲೇ ಪುಟ್ಟಣ್ಣಯ್ಯ ದೂರವಾಗಿದ್ದರು. ಪ್ರೊಫೆಸರ್ ಕ್ಯಾನ್ಸರ್‌ಗೆ ತುತ್ತಾಗಿ ಆಸ್ಪತ್ರೆಯಲ್ಲಿದ್ದಾಗ ನೋಡಲು ಹೋದ ಪುಟ್ಟಣ್ಣಯ್ಯನನ್ನು ಕುರಿತು ’ಡಾಕ್ಟರು ಮಾತನಾಡಬೇಡ ಅಂದಿದ್ದಾರೆ’ ಎಂದು ಮೌನ ವಹಿಸಿದರು. ಪ್ರೊಫೆಸರ್ ದೇಹಕ್ಕಂಟಿದ ಕಾಯಿಲೆ ರೈತಸಂಘದ ವಿಷಯದಲ್ಲಿ ಸಾಂಕೇತಿಕವಾಗಿತ್ತು. ಅವರ ಶಕ್ತಿಯೇನೆಂಬುದು ಈಗ ಎಲ್ಲರಿಗೂ ಅರಿವಾಗುತ್ತಿದೆ. ಪ್ರೊಫೆಸರ್ ಅವರ ತೀವ್ರ ನಿಯಂತ್ರಿಸುವ ಗುಣ, ರೈತ ಸಂಘದ ಬಹುದೊಡ್ಡ ನಾಯಕರು ನಿಷ್ಕ್ರಿಯರಾಗಿ ಉಳಿಯುವಂತೆ ಮಾಡಿತು ಎಂಬ ಆರೋಪ ಕೂಡ ಇದೆ. ಈ ಪೈಕಿ ಕಡಿದಾಳು ಶಾಮಣ್ಣನವರನ್ನು ರೈತ ಸಂಘದಿಂದ ತೆಗೆದು ಹಾಕಿದಾಗ, ಅವರೇ ’ಅದು ಹೇಗೆ ನನ್ನನ್ನ ತೆಗೀತಾರೆ’ ಎಂಬ ಪ್ರಶ್ನೆ ಹಾಕಿಕೊಂಡಿದ್ದರು. ಇನ್ನು ತೇಜಸ್ವಿಯವರಂತೂ ’ಕಡಿದಾಳು ಶಾಮಣ್ಣನಂತಹವರನ್ನೆ ರೈತ ಸಂಘ ಹೊರಹಾಕುತ್ತದೆ ಎಂದರೆ ಅದಕ್ಕೆ ಉಳಿಗಾಲವಿಲ್ಲ’ ಎಂಬಂತೆ ಪ್ರತಿಕ್ರಿಯಿಸಿದ್ದರು. ಇವೆಲ್ಲ ಸಂಗತಿಗಳಿದ್ದರೂ, ಪ್ರೊಫೆಸರ್ ಹಾಕಿಕೊಟ್ಟ ಮೂಲ ತತ್ತ್ವಗಳ ಮೇಲೆ ನಡೆದಿದ್ದರೆ ರೈತ ಸಂಘ ದೊಡ್ಡ ಫೋರ್ಸ್ ಆಗಿ ಬೆಳೆಯಬಹುದಿತ್ತು. ಆದರೆ ಅದು ಆಗಲಿಲ್ಲ. ಈಗ ಪ್ರೊಫೆಸರ್ ಇಲ್ಲ, ರೈತರ ಸಮಸ್ಯೆಗಳು ಹಾಗೆಯೇ ಮುಂದುವರಿದಿವೆ. ಅವರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲದವರು ದೇಶವನ್ನಾಳುತ್ತಿದ್ದಾರೆ. ಮುಂಬರುವ ದಿನಗಳು ರೈತರ ಪಾಲಿಗೆ ದುರ್ದಿನಗಳಾಗಬಹುದು.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ. ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ಎಂಡಿಎನ್ ಸಂಸ್ಮರಣಾ ದಿನ; ರೈತರ ಬಾರುಕೋಲಾಗಿದ್ದ ಪ್ರೊಫೆಸರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಣಿಪುರ ಹಿಂಸಾಚಾರ: ಸೋರಿಕೆಯಾದ ಸಂಪೂರ್ಣ ಆಡಿಯೋ ವಿಧಿವಿಜ್ಞಾನ ಪರೀಕ್ಷೆಗೆ ಏಕೆ ಕಳುಹಿಸಿಲ್ಲ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್

ನವದೆಹಲಿ: 2023ರ ಜನಾಂಗೀಯ ಹಿಂಸಾಚಾರದಲ್ಲಿ ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಪಾತ್ರವನ್ನು ಸೂಚಿಸಿರುವ ಅರ್ಜಿಯಲ್ಲಿ ಲಭ್ಯವಿರುವ ಸಂಪೂರ್ಣ ಸೋರಿಕೆಯಾದ ಆಡಿಯೋ ತುಣುಕುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಏಕೆ ಕಳುಹಿಸಲಿಲ್ಲ ಎಂದು...

ಎಸ್‌ಐಆರ್‌ ಭಯಕ್ಕೆ ಮತ್ತೊಂದು ಬಲಿ: ಬಂಗಾಳದಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ, ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಗೆ ಸಂಬಂಧಿಸಿದ ಭಯದಿಂದ ವೃದ್ಧನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತರನ್ನು ರಣಘಾಟ್‌ನ...

MGNREGA ಬದಲು VB-G Ram G : ರಾಜ್ಯಗಳ ಮೇಲೆ 40 ಶೇಕಡ ಆರ್ಥಿಕ ಹೊರೆ

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 2005ರಲ್ಲಿ ಜಾರಿಗೆ ತಂದ ಮಹತ್ವಕಾಂಕ್ಷೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಮತ್ತು ಅದರಡಿ ರೂಪಿಸಲಾದ ನರೇಗಾ ಯೋಜನೆಯ ಹೆಸರನ್ನು ಬದಲಿಸಲು ಕೇಂದ್ರ...

ಕೇರಳ: ಕೊಲ್ಲಂ ಕಾರ್ಪೊರೇಷನ್‌ನಲ್ಲಿ 25 ವರ್ಷಗಳ ಎಲ್‌ಡಿಎಫ್‌ ಆಳ್ವಿಕೆ ಕೊನೆಗೊಳಿಸಿದ ಯುಡಿಎಫ್

2025 ರ ಕೇರಳ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶಗಳು ರಾಜ್ಯದಲ್ಲಿ ಅತ್ಯಂತ ಅಚ್ಚರಿಯ ರಾಜಕೀಯ ಫಲಿತಾಂಶಳನ್ನು ನೀಡಿವೆ. ಅದರಲ್ಲಿ, ಕೊಲ್ಲಂ ಕಾರ್ಪೊರೇಷನ್‌ನಲ್ಲಿ ಎಡಪಂಥೀಯ ಪ್ರಜಾಸತ್ತಾತ್ಮಕ ರಂಗದ ನಿರಂತರ 25 ವರ್ಷಗಳ ನಿಯಂತ್ರಣವನ್ನು ಯುನೈಟೆಡ್...

‘ಇಂಡಿಯಾ ಬಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ’: ಕಾಂಗ್ರೆಸ್‌ನ ‘ವೋಟ್ ಚೋರಿ’ ಅಭಿಯಾನದ ಬಗ್ಗೆ ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕಾಂಗ್ರೆಸ್‌ನ "ಮತ ಚೋರಿ" ಅಭಿಯಾನದಿಂದ ದೂರ ಉಳಿದಿದ್ದಾರೆ, ಈ ವಿಷಯವು ಒಟ್ಟಾರೆಯಾಗಿ ವಿರೋಧ ಪಕ್ಷದ ಇಂಡಿಯಾ ಬಣದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೋಮವಾರ...

ಇಂಡಿಗೋ ವಿಮಾನ ರದ್ದತಿಗೆ ಸಂಬಂಧಿಸಿದ ಪಿಐಎಲ್ ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್

ನೂರಾರು ಇಂಡಿಗೋ ವಿಮಾನಗಳ ರದ್ದತಿಗೆ ನ್ಯಾಯಾಂಗ ಹಸ್ತಕ್ಷೇಪ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸೋಮವಾರ ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಅರ್ಜಿದಾರರು ತಮ್ಮ ದೂರುಗಳೊಂದಿಗೆ ದೆಹಲಿ ಹೈಕೋರ್ಟ್ ಅನ್ನು...

ಹಣ ಅಕ್ರಮ ವರ್ಗಾವಣೆ ಪ್ರಕರಣ : ಪತ್ರಕರ್ತ ಮಹೇಶ್ ಲಾಂಗಾಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು

ವಂಚನೆ ಆರೋಪದ ಮೇಲೆ ದಾಖಲಾಗಿರುವ ಎರಡು ಎಫ್‌ಐಆರ್‌ಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪತ್ರಕರ್ತ ಮಹೇಶ್ ಲಾಂಗಾ ಅವರಿಗೆ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ (ಡಿ.15) ಮಧ್ಯಂತರ ಜಾಮೀನು ನೀಡಿದೆ. ಜಿಎಸ್‌ಟಿ ವಂಚನೆ...

‘ಮಹಿಳೆಯರು ಗಂಡಂದಿರ ಜೊತೆ ಮಲಗಲು ಮಾತ್ರ’: ಸಿಪಿಎಂ ನಾಯಕನ ಅಸೂಕ್ಷ್ಮ ಹೇಳಿಕೆಗೆ ವ್ಯಾಪಕ ಆಕ್ರೋಶ

ಮಲಪ್ಪುರಂ ಜಿಲ್ಲೆಯಲ್ಲಿ ಸಿಪಿಎಂ ಪ್ರಾದೇಶಿಕ ನಾಯಕ ಸಯೀದ್ ಅಲಿ ಮಜೀದ್ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವಾಗ ಸ್ತ್ರೀದ್ವೇಷದ ಹೇಳಿಕೆಗಳನ್ನು ನೀಡಿದ ನಂತರ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.  ಸಯೀದ್ ಅಲಿ ಮಜೀದ್, ತೆನ್ನೆಲಾ ಪಂಚಾಯತ್ ವಾರ್ಡ್ ಅನ್ನು...

ಅಖ್ಲಾಕ್ ಹತ್ಯೆ ಪ್ರಕರಣ ಹಿಂತೆಗೆದುಕೊಳ್ಳುವುದು ನ್ಯಾಯಾಂಗ ಪ್ರಕ್ರಿಯೆ ಹಳಿತಪ್ಪಿಸುವ ಪ್ರಯತ್ನ: ಬೃಂದಾ ಕಾರಟ್

ರಾಜ್ಯಪಾಲರ ಅನುಮತಿಯೊಂದಿಗೆ ಮೊಹಮ್ಮದ್ ಅಖ್ಲಾಕ್ ಅವರ ಕೊಲೆ ಮತ್ತು ಗುಂಪು ಹತ್ಯೆಗೆ ಸಂಬಂಧಿಸಿದ ಪ್ರಕರಣವನ್ನು ಹಿಂತೆಗೆದುಕೊಳ್ಳುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರ ಖಂಡಿಸಿ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಹಿರಿಯ ನಾಯಕಿ ಬೃಂದಾ ಕಾರಟ್...

ಮತ್ತೆ ಮುನ್ನೆಲೆಗೆ ಬಂದ ‘Avalkoppam’: ದಿಲೀಪ್ ಖುಲಾಸೆ ಬಳಿಕ ಕೇರಳದಾದ್ಯಂತ ಪ್ರತಿಭಟನೆ

ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿರುವ ನ್ಯಾಯಾಲಯದ ತೀರ್ಪಿಗೆ ಕೇರಳದಾದ್ಯಂತ ದೊಡ್ಡ ಮಟ್ಟದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. 2017ರಲ್ಲಿ ನಟಿ ಮೇಲೆ ದೌರ್ಜನ್ಯ ನಡೆದಾಗ...