| ನಾನುಗೌರಿ ಡೆಸ್ಕ್ |
ಫ್ರಾನ್ಸ್ ಪ್ರವಾಸದಲ್ಲಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ರವರನ್ನು ಪ್ಯಾರಿಸ್ನಲ್ಲಿ ಫ್ರೆಂಚ್ ಆರ್ಥಿಕ ತಜ್ಞ ಥಾಮಸ್ ಪಿಕೆಟಿ ಭೇಟಿ ಮಾಡಿದ್ದಾರೆ. ಕೇರಳದ ಆರ್ಥಿಕತೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕೇರಳ ಆರ್ಥಿಕತೆಯ ಮಾದರಿಯನ್ನು ಅಧ್ಯಯನ ನಡೆಸಿ, ಕೆಲ ಶಿಫಾರಸ್ಸುಗಳನ್ನು ನೀಡುವ ಇಂಗಿತವನ್ನು ಪಿಕೆಟಿ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಪಿಕೆಟಿಯವರೊಂದಿಗೆ economic disparity in India ಎಂಬ ವಿಷಯದ ಕುರಿತು ಆಳವಾದ ಸಂಶೋಧನೆ ನಡೆಸಿರುವ, World Inequality Database at the Paris School of Economics ನ ಸಹ ಸಂಚಾಲಕರಾದ ಪ್ರೊ.ಲುಕಾಸ್ ಚಾನ್ಸಲ್ರವರು ಸಹ ಉಪಸ್ಥಿತರಿದ್ದರು. ಈ ಕುರಿತು ಒಂದು ಗಂಟೆಗಳ ಕಾಲ ಚರ್ಚೆಯನ್ನು ಪಿಣರಾಯಿ ವಿಜಯನ್ ನಡೆಸಿದ್ದಾರೆ.
ಸಮಾಜದಲ್ಲಿರುವ ಆರ್ಥಿಕ ಅಸಮಾನತೆ, ಅದನ್ನು ಸರಿದೂಗಿಸಲು ತೆಗೆದುಕೊಂಡಿರುವ ಕ್ರಮಗಳು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಅಭಿವೃದ್ದಿಪಡಿಸಲು ಮಾಡುತ್ತಿರುವ ಪ್ರಯತ್ನಗಳ ಕುರಿತ ಪಿಣರಾಯಿ ಚರ್ಚಿಸಿದ್ದಾರೆ. ಜೊತೆಗೆ ಅಂಚಿಗೊತ್ತಲ್ಪಟ್ಟ ಸಮುದಾಯಗಳನ್ನು ಮೇಲೆತ್ತಲು ತೆಗೆದುಕೊಂಡಿರುವ ಕ್ರಮಗಳು ಹಾಗೂ ದೇಶಕ್ಕೆ ಮಾದರಿಯಾಗಿರುವ ಅಸಂಘಟಿತ ವಲಯಕ್ಕೆ ನೀಡುತ್ತಿರುವ ಪಿಂಚಣಿ ಯೋಜನೆಗಳ ಕುರಿತು ಪ್ರಸ್ತಾಪಿಸಿದ್ದಾರೆ.
ಆಸ್ತಿ ತೆರಿಗೆ, ಭೂಮಿ ತೆರಿಗೆ ಮತ್ತು ಶ್ರೀಮಂತರಿಗೆ ಹೆಚ್ಚಿನ ತೆರಿಗೆಯನ್ನು ಹಾಕುವ ಮೂಲಕ ಆರ್ಥಿಕ ಅಸಮಾನತೆಯನ್ನು ಸರಿದೂಗಿಸುವ ಸಲಹೆಯನ್ನು ಪಿಕೆಟಿ ನೀಡಿದ್ದಾರೆ. ಅದಕ್ಕೆ ವಿಜಯನ್ರವರು, ಪಿಕೆಟಿಯವರನ್ನು ಕೇರಳಕ್ಕೆ ಒಮ್ಮೆ ಭೇಟಿ ನೀಡಿ ಆರ್ಥಿಕ ಅಸಮಾನತೆಗಳ ಕುರಿತ ವಿಶ್ಲೇಷಣೆ ಮತ್ತು ಪರಿಹಾರೋಪಾಯಗಳ ಕುರಿತು ತಿಳಿಸಲು ಆಹ್ವಾನ ನೀಡಿದ್ದಾರೆ.
ಥಾಮಸ್ ಪಿಕೆಟಿಯವರು ಪ್ರತಿಷ್ಠಿತ ಪ್ಯಾರಿಸ್ ಸ್ಕೂಲ್ ಆಫ್ ಎಕಾನಮಿಕ್ಸ್ ಮತ್ತು ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಆದಾಯ ಮತ್ತು ಸಂಪತ್ತಿನ ಅಸಮಾನತೆಯ ಕುರಿತು ಹೆಚ್ಚು ಅಧ್ಯಯನ ನಡೆಸಿರುವ ಇರುವ ಫ್ರೆಂಚ್ನ ಪ್ರಖ್ಯಾತ ಅರ್ಥತಜ್ಞರು. ಇವರ Capital in the Twenty-First Century ಪುಸ್ತಕ 2013ರಲ್ಲಿ ಬಿಡುಗಡೆಯಾಗಿ ಅಪಾರ ಜನಮನ್ನಣೆ ಗಳಿಸಿದೆ. ಇದು ಕಳೆದ 250 ವರ್ಷಗಳಲ್ಲಾಗಿರುವ ಸಂಪತ್ತಿನ ಕ್ರೋಢೀಕರಣ ಮತ್ತು ಅಸಮಾನ ಹಂಚಿಕೆಯ ಕುರಿತು ಚರ್ಚಿಸುತ್ತದೆ. ಈ ಪುಸ್ತಕವು ಹೆಚ್ಚು ಅಭಿವೃದ್ದಿ ಹೊಂದಿದ ರಾಷ್ಟ್ರಗಳಲ್ಲೇ ಅತ್ಯಂತ ಹೆಚ್ಚಿನ ಸಂಪತ್ತಿನ ಅಸಮಾನ ಹಂಚಿಕೆಯಿದೆ ಎಂದು ವಾದಿಸುವುದಲ್ಲದೇ, ಸಮರ್ಪಕ ತೆರಿಗೆ ವಿಧಾನಗಳಿಂದ ಮಾತ್ರ ಈ ಸಮಸ್ಯೆ ಬಗೆಹರಿಸಬಹುದೆಂದು ತಿಳಿಸುತ್ತದೆ.
ಇತ್ತೀಚೆಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರ್ಪಡೆಗೊಂಡ ನ್ಯಾಯ್ ಯೋಜನೆಯ ತಯಾರಿಕೆಯಲ್ಲಿಯು ಥಾಮಸ್ ಪಿಕೆಟಿಯವರು ಕೆಲಸ ಮಾಡಿದ್ದಾರೆ. ಭಾರತದಲ್ಲಿನ ಶ್ರೀಮಂತ ವರ್ಗಗಳು ಅಲ್ಲಿನ ಬಡವರನ್ನು ಅತ್ಯಂತ ಕೆಳಮಟ್ಟದಲ್ಲಿ ಕಾಣುತ್ತಿದ್ದು, ಸಂಪತ್ತಿನ ಮರುಹಂಚಿಕೆಯ ರಾಜಕಾರಣಕ್ಕೆ ಇದು ಸಕಾಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಯೂರೋಪಿನ 13 ರಾಷ್ಟ್ರಗಳ ಪ್ರವಾಸದಲ್ಲಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ರವರು ಮೇ 20ರೊಳಗೆ ಫ್ರಾನ್ಸ್, ನೆದರ್ಲೆಂಡ್, ಸ್ವಿಜರ್ಲ್ಯಾಂಡ್ ಮತ್ತು ಇಂಗ್ಲೆಂಡ್ ದೇಶಗಳಿಗೆ ಭೇಟಿ ನೀಡಲಿದ್ದಾರೆ.


