ನೆರೆಯ ರಾಜ್ಯ ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಮೂವರು ಮೃತಪಟ್ಟಿದ್ದಾರೆ. 600 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಹವಾಮಾನ ಇಲಾಖೆಯು 14 ಜಿಲ್ಲೆಗಳ ಪೈಕಿ 9 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಮಲಪ್ಪುರಂ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ 5 ಗಂಟೆಗೆ ಮನೆ ಕುಸಿದು ಒಂದು ಮಗು ಸಾವನ್ನಪ್ಪಿದೆ. ಕೊಲ್ಲಂ ಜಿಲ್ಲೆಯಲ್ಲಿ ನೀರಿನ ಮಟ್ಟ ಏರಿಕೆಯಿಂದಾಗಿ ಕಾರ್ಮಿಕರೊಬ್ಬರು ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಪಾಲಕ್ಕಾಡ್ ಮತ್ತು ತ್ರಿಶೂರ್ ಜಿಲ್ಲೆಗಳು ಕೂಡ ಮಳೆಯಿಂದ ತತ್ತರಿಸಿವೆ. ಕಂದಾಯ ಸಚಿವ ಕೆ ರಾಜನ್ ಮಾತನಾಡಿ, “ರಾಜ್ಯ ಸರ್ಕಾರವು 622 ಜನರನ್ನು ರಾಜ್ಯದ ವಿವಿಧ ಭಾಗಗಳಲ್ಲಿರುವ 27 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಿದೆ” ಎಂದು ಮಾಹಿತಿ ನೀಡಿದ್ದಾರೆ.
“ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಆರು ತಂಡಗಳು ಕೇರಳದಲ್ಲಿ ನೆಲೆಗೊಂಡಿವೆ ಮತ್ತು ರಕ್ಷಣಾ ಸೇವೆಗಳು ಸನ್ನದ್ಧವಾಗಿವೆ” ಎಂದು ಸಚಿವರು ಹೇಳಿದ್ದಾರೆ.
ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪುರಂ, ಕೊಹಿಕೋಡ್, ವಯನಾಡ್, ಕನ್ನೂರ್, ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಸೈಕ್ಲೋನ್ನಿಂದಾಗಿ ಹೆಚ್ಚಾಗಿ ಮಳೆಯಾಗುತ್ತಿದೆ.
Heavy overnight rain across Kerala has resulted in waterlogging in many parts of the state. Videos show the situation at Thumboormozhi and Athirapally falls.
Source: PRD, Gov of Kerala pic.twitter.com/c33NMVOtJK
— The Indian Express (@IndianExpress) October 12, 2021
ಇದರ ನಡುವೆ ಇಡುಕ್ಕಿ ಜಿಲ್ಲಾಡಳಿತವು ಭೂಕುಸಿತದ ಸಾಧ್ಯತೆಯಿರುವ ಕಾರಣ ಗುರುವಾರದಿಂದ ಸಂಜೆ 7ರಿಂದ ಬೆಳಿಗ್ಗೆ 6 ರವರೆಗೆ ಪ್ರಯಾಣವನ್ನು ನಿಷೇಧಿಸಿದೆ. ಕೋವಿಡ್ -19 ಪರಿಹಾರ ಕಾರ್ಯ ಮತ್ತು ಇತರ ತುರ್ತು ಸೇವೆಗಳಲ್ಲಿ ತೊಡಗಿರುವ ಅಧಿಕಾರಿಗಳಿಗೆ ನಿಷೇಧದಿಂದ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿರಿ: ಹೈದರಾಬಾದ್ನಲ್ಲಿ ಭಾರಿ ಮಳೆ: ಪ್ರವಾಹಕ್ಕೆ ಸಿಲುಕಿ ಇಬ್ಬರು ನಾಪತ್ತೆ