Homeಮುಖಪುಟಎನ್‌ಟಿಎಂಎಸ್ ಶಾಲೆ ಹೋರಾಟ ಕುರಿತ ನಂಬಲರ್ಹವಲ್ಲದ ದಶ ಸುಳ್ಳುಗಳು

ಎನ್‌ಟಿಎಂಎಸ್ ಶಾಲೆ ಹೋರಾಟ ಕುರಿತ ನಂಬಲರ್ಹವಲ್ಲದ ದಶ ಸುಳ್ಳುಗಳು

ಕನ್ನಡ ಶಾಲೆಯನ್ನು ನಾಶಗೊಳಿಸಿ ಸ್ವಾಮಿ ವಿವೇಕಾನಂದರು, ಮೈಸೂರು ಮಹಾರಾಜರು ಮತ್ತು ಸಹಸ್ರಾರು ಬಡಮಕ್ಕಳ ಗೋರಿಯ ಮೇಲೆ ವಿವೇಕ ಸ್ಮಾರಕ ನಿರ್ಮಿಸುವುದು ಅವಿವೇಕದ ಪರಮಾವಧಿಯಲ್ಲವೇ?

- Advertisement -
- Advertisement -

ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಕಳೆದ 47 ದಿನಗಳಿಂದ ‘ಶಾಲೆ ಉಳಿಸಿ, ಸ್ಮಾರಕ ನಿರ್ಮಿಸಿ’ ಎಂಬ ನ್ಯಾಯೋಚಿತ ಬೇಡಿಕೆಯನ್ನು ಸರ್ಕಾರ ಮತ್ತು ಸಮಾಜದ ಮುಂದಿಟ್ಟು ಒಕ್ಕೂಟದ ಪದಾಧಿಕಾರಿಗಳು, ಪ್ರಗತಿಪರರು ಮತ್ತು ಕಾಳಜಿಯುಳ್ಳ ನಾಗರೀಕರು ನಡೆಸುತ್ತಿರುವ ಪ್ರಜಾಸತ್ತಾತ್ಮಕ ಹೋರಾಟವನ್ನು ದಾರಿತಪ್ಪಿಸುವ ಸಲುವಾಗಿ ಇತ್ತೀಚೆಗೆ ಶ್ರೀರಾಮಕೃಷ್ಣ ಆಶ್ರಮ ಕೊಟ್ಟಿರುವ ದಶ ಕಾರಣಗಳು ಆಂದೋಲನ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಕಾರಣ ಸೂಕ್ತ ಸ್ಪಷ್ಟೀಕರಣವನ್ನು ಹೋರಾಟಗಾರರ ಪರವಾಗಿ ಮಂಡಿಸಬಯಸುತ್ತೇನೆ.

1. ನಾಡಿನ ಇತಿಹಾಸಕಾರ ಹುಲಗವಾಡಿ ನರಸಿಂಹಶಾಸ್ತ್ರಿಗಳು 1892ರಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದಾಗ ಅಂದಿನ ದಿವಾನ್ ಶೇಷಾದ್ರಿ ಅಯ್ಯರ್ ಅವರ ಮನೆ ಮತ್ತು ಸಮೀಪದ ಅನಾಥಾಲಯವಾಗಿದ್ದ ನಿರಂಜನ ಮಠದಲ್ಲಿ ಕೆಲವು ಕಾಲ ತಂಗಿದ್ದರು ಎಂದು ದಾಖಲಿಸಿರುವುದು ಸತ್ಯಸಂಗತಿಯಾಗಿದೆ. ಆದರೆ ಇದೇ ಕಾರಣಕ್ಕಾಗಿ ಪ್ರಸಿದ್ಧ ವೀರಶೈವ ಧಾರ್ಮಿಕ ಕೇಂದ್ರ ನಿರಂಜನ ಮಠದ ಪಾರಂಪರಿಕತೆ ಮತ್ತು ಐತಿಹಾಸಿಕ ಎನ್‌ಟಿಎಂಎಸ್ ಹೆಣ್ಣುಮಕ್ಕಳ ಶಾಲೆ ಅಸ್ತಿತ್ವಕ್ಕೆ ತನ್ನ ಸ್ಮಾರಕ ನಿರ್ಮಿಸುವುದರ ಮೂಲಕ ಧಕ್ಕೆಯುಂಟು ಮಾಡಿರೆಂದು ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಆಶ್ರಮಕ್ಕೆ ಅಥವಾ ಸರ್ಕಾರಕ್ಕೆ ಬೇಡಿಕೆ ಮಂಡಿಸಿದ್ದರೇ?

2. 1892ರಲ್ಲಿ ತಾವು ಭೇಟಿ ನೀಡಿದ್ದರಿಂದಲೇ ಮೈಸೂರು ನಗರ ಪುನೀತವಾದ ಐತಿಹಾಸಿಕ ಸ್ಥಳವಾಗಿರುವುದರಿಂದ ತಮ್ಮ ಹೆಸರಿನಲ್ಲಿ ಸಾಂಸ್ಕೃತಿಕ ಕೇಂದ್ರ ನಿರ್ಮಿಸಿ ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಸ್ಪರ್ಧಾತ್ಮಕವಾಗಿ ಕನ್ನಡ ಯುವಜನತೆ ಸಬಲರಾಗಲು ಅನುವು ಮಾಡಿಕೊಡಿರೆಂದು ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಆಶ್ರಮಕ್ಕೆ ಅಥವಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರೆ?

3. ವಿವೇಕ ಸ್ಮಾರಕ ಯುವ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದು ಕನ್ನಡ ಯುವಜನತೆಗೆ ಪ್ರಯೋಜನಕಾರಿಯಾದ ಅನೇಕ ಅಲ್ಪಾವಧಿ ಕೋರ್ಸ್ ಗಳು, ಕೌಶಲ್ಯಾಭಿವೃದ್ಧಿ ತರಬೇತಿ, ಕನ್ನಡ/ಇಂಗ್ಲೀಷ್ ಭಾಷಾ ಸಾಮರ್ಥ್ಯ ಅಭಿವೃದ್ಧಿ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಯೋಗ ಮತ್ತು ಧ್ಯಾನ ತರಬೇತಿ, ಗ್ರಂಥಾಲಯ ಮೊದಲಾದವುಗಳ ಮೂಲಕ ಯುವಜನರ ಸಬಲೀಕರಣಕ್ಕೆ ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಆಶ್ರಮಕ್ಕೆ ಅಥವಾ ಸರ್ಕಾರಕ್ಕೆ ಅಂದು ನೀಲಿನಕ್ಷೆ ನೀಡಿದ್ದರೆ? 70ರ ದಶಕದಲ್ಲೇ ಘನ ಸರ್ಕಾರ ಸುಮಾರು 60 ಎಕರೆ ಪ್ರದೇಶದಷ್ಟು ಅಮೂಲ್ಯ ಸ್ಥಳವನ್ನು ಮೈಸೂರು ನಗರದ ಹೃದಯ ಭಾಗವಾದ ಯಾದವಗಿರಿಯಲ್ಲಿ ಶ್ರೀರಾಮಕೃಷ್ಣ ಆಶ್ರಮಕ್ಕೆ ಸಮಾಜಮುಖಿ ಕೆಲಸಗಳನ್ನು ಮಾಡಲು ನೀಡಿರುವುದು ಸರಿಯಷ್ಟೆ. ಈಗ ಮಾಡಬಯಸಿರುವ ಘನ ಕಾರ್ಯಗಳನ್ನು 50 ವರ್ಷಗಳಿಂದ ಮಾಡಲಾಗದವರು ಎನ್‌ಟಿಎಂಎಸ್ ಶಾಲೆ ಆವರಣದಲ್ಲಿ ಮಾಡ ಹೊರಟಿದ್ದೇವೆಂದು ಹೇಳಿದರೆ ನಂಬುವವರು ಯಾರು?

4. ಭಾರತದ ಪ್ರಜೆಗಳಾದ ನಾವು ನ್ಯಾಯಾಲಯದ ತೀರ್ಪನ್ನು ಖಂಡಿತವಾಗಿಯೂ ಗೌರವಿಸುತ್ತೇವೆ. 2013ರಲ್ಲಿ ರಾಜ್ಯ ಸರ್ಕಾರ ಸ್ವಾಮಿ ವಿವೇಕಾನಂದರು 1892ರಲ್ಲಿ ಮೈಸೂರಿಗೆ ಭೇಟಿ ನೀಡಿದ್ದಾಗ ಹೆಣ್ಣುಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮಾದರಿ ಶಾಲೆ ನಿರ್ಮಿಸಲು ಮಹಾರಾಜರಿಗೆ ಮಾಡಿದ ಮನವಿ, ಅಂದಿನ ಮಹಾರಾಜರು ಶಾಲೆ ನಿರ್ಮಾಣ ಕುರಿತು ಹೊಂದಿದ್ದ ಸಾಮಾಜಿಕ ಕಳಕಳಿ, ಅಂದಿನ ಮಹಾರಾಣಿ ಶಾಲೆ ನಿರ್ಮಾಣದಲ್ಲಿ ತೊಡಗಿಸಿಕೊಂಡ ಬಗೆ, ಪಾರಂಪರಿಕ ಕಟ್ಟಡವಾದ ಎನ್‌ಟಿಎಂಎಸ್ ಶಾಲೆಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಇರುವ ಕಾನೂನಾತ್ಮಕ ತೊಡಕುಗಳು ಮತ್ತು ಸಾಮಾಜಿಕ ಬಂಡವಾಳ ಅಭಿವೃದ್ಧಿಗೆ ಎನ್‌ಟಿಎಂಎಸ್ ಶಾಲೆಯ ಅನಿವಾರ್ಯತೆ ಮೊದಲಾದ ಧನಾತ್ಮಕ ಅಂಶಗಳನ್ನು ಸಮರ್ಪಕವಾಗಿ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದ ಪಕ್ಷದಲ್ಲಿ ಅಂದು ವಿವೇಕ ಸ್ಮಾರಕ ನಿರ್ಮಿಸಬೇಕೆಂಬ ತೀರ್ಪು ಬರುತ್ತಿರಲಿಲ್ಲ ಅಲ್ಲವೇ?

5. ಕರ್ನಾಟಕ ಉಚ್ಛನ್ಯಾಯಾಲಯ ವಿವೇಕ ಸ್ಮಾರಕ ನಿರ್ಮಾಣವನ್ನು ಪುರಷ್ಕರಿಸಿ ನೀಡಿರುವ ತೀರ್ಪು ಸತ್ಯನಿಷ್ಟತೆ, ವಸ್ತುನಿಷ್ಟತೆ, ಲಿಂಗ ಸಮಾನತೆ, ಸಾಮಾಜಿಕ ನ್ಯಾಯ, ಸಾರ್ವಜನಿಕ ಹಿತರಕ್ಷಣೆ ಮೊದಲಾದ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿಲ್ಲವೆಂದು ಪ್ರೀತಿ ಮತ್ತು ನಿರ್ಭೀತಿಯಿಂದ ಹೇಳುವುದು ಪ್ರಗತಿಶೀಲ ನಿಲುವಾಗಿದೆ. ನ್ಯಾಯಾಲಯ ಯಾವುದೇ ಪ್ರಕರಣ ಕುರಿತಂತೆ ಇದುವರೆಗೆ ನೀಡಿರುವ ತೀರ್ಪು ಅಂತಿಮವಲ್ಲ. ಕರ್ನಾಟಕ ಉಚ್ಛನ್ಯಾಯಾಲಯದ ಅಸಮರ್ಪಕ ತೀರ್ಪನ್ನು ನವದೆಹಲಿಯ ಸರ್ವೋಚ್ಛ ನ್ಯಾಯಾಲಯದಲ್ಲಿ ಸೂಕ್ತ ದಾಖಲೆಗಳು, ಪುರಾವೆಗಳು ಮತ್ತು ನ್ಯಾಯೋಚಿತ ಸಮರ್ಥನೆಗಳ ಮೂಲಕ ಪ್ರಶ್ನಿಸುವ ಹಕ್ಕು ಹೇಗೆ ಪ್ರಗತಿ ವಿರೋಧಿ? ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದು ಸರ್ಕಾರ ಮತ್ತು ನಾಗರೀಕ ಸಮಾಜಗಳ ಕರ್ತವ್ಯ. ತಮಗೆ ಸಂಬಂಧಿಸದ ಕೆಲಸವನ್ನು ಮಾಡಲು ಶ್ರೀರಾಮಕೃಷ್ಣ ಆಶ್ರಮಕ್ಕೆ ತುಂಡು ಗುತ್ತಿಗೆ ನೀಡಿದವರು ಯಾರು?

6. ಎನ್‌ಟಿಎಂಎಸ್ ಶಾಲೆ ಸಮಾಜದ ಶೋಷಿತ ಸಮುದಾಯಗಳಿಗೆ ಸೇರಿದವರ ಮಕ್ಕಳಿಗೆ ಪ್ರಜ್ಞಾಪೂರ್ವಕವಾಗಿ ಜ್ಞಾನದಾಸೋಹ ನೀಡುವ ಸಾರ್ಥಕ ಕೆಲಸ ಮಾಡುತ್ತಿದೆ. ಇದು ಈಗ ಬಾಲಕಿಯರ ಶಾಲೆಯಾಗಿ ಉಳಿಯದೇ ಬಾಲಕ-ಬಾಲಕಿಯರ ಶಾಲೆಯಾಗಿ ಬದಲಾದ ಸಂದರ್ಭದಲ್ಲಿ ಮಾರ್ಪಟ್ಟಿರುವುದು ಸರಿಯಷ್ಟೆ. ಈ ಶಾಲೆಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ಕಲಿಯುತ್ತಿದ್ದಾರೆ. ಬಹಳಷ್ಟು ಮಕ್ಕಳು ಶಾಲೆಯನ್ನು ಮುಚ್ಚುವರೆಂಬ ತಪ್ಪು ಗ್ರಹಿಕೆಯಿಂದ ಇತರ ಶಾಲೆಗಳತ್ತ ಮುಖ ಮಾಡಿದ್ದಾರೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಏಕಪಾತ್ರಾಭಿನಯ ಮಾಡುವ ಶಿಕ್ಷಕರಿಗೆ ಕೊರತೆಯಿಲ್ಲ. ಕಡಿಮೆ ಸಂಖ್ಯೆಯ ಕಾರಣ ಕನ್ನಡ ಶಾಲೆಯನ್ನು ಮುಚ್ಚುವುದಿಲ್ಲವೆಂಬ ಸರ್ಕಾರದ ದಿಟ್ಟ ನಿಲುವು ಸ್ವಾಗತಾರ್ಹ. ಇರುವ ಶಾಲೆಯನ್ನು ಮುಚ್ಚಿ ವಿವೇಕ ಯುವ ಸಾಂಸ್ಕೃತಿಕ ಕೇಂದ್ರದ ಮೂಲಕ ಸಾವಿರಾರು ಯುವಕ-ಯುವತಿಯರಿಗೆ ನಿರಂತರ ಸೇವೆ ಸಲ್ಲಿಸುತ್ತೇವೆಂಬ ಶ್ರೀರಾಮಕೃಷ್ಣ ಆಶ್ರಮದವರ ಪೊಳ್ಳು ಭರವಸೆಯನ್ನು ನಂಬುವವರು ಯಾರು? ನಗರದ ಕೊಳಚೆ ಪ್ರದೇಶಗಳು, ಪೌರ ಕಾರ್ಮಿಕರ ಕಾಲೋನಿಗಳು, ಹಳ್ಳಿಗಳು ಮತ್ತು ಆದಿವಾಸಿ ಸಮುದಾಯಗಳತ್ತ ಇದುವರೆಗೂ ಶ್ರೀರಾಮಕೃಷ್ಣ ಆಶ್ರಮದವರು ಏಕೆ ಮುಖ ಮಾಡಲಿಲ್ಲ? ದರಿದ್ರ ನಾರಾಯಣ ದೇವೋಭವ ಎಂದ ಸ್ವಾಮಿ ವಿವೇಕಾನಂದರೆಲ್ಲಿ? ಶ್ರೀಮಂತರ ಮಕ್ಕಳಿಗೆ ಮಾತ್ರ ಶಿಕ್ಷಣವೆಂದು ಹೇಳುವ ಶ್ರೀರಾಮಕೃಷ್ಣ ಆಶ್ರಮದ ಸ್ವಾಮೀಜಿಗಳೆಲ್ಲಿ?

7. ವಿವೇಕ ಸ್ಮಾರಕ ನಿರ್ಮಾಣದಿಂದ ಎನ್‌ಟಿಎಂಎಸ್ ಕನ್ನಡ ಶಾಲೆಯನ್ನು ಮುಚ್ಚುವುದಿಲ್ಲ, ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ ಎಂಬ ಶ್ರೀರಾಮಕೃಷ್ಣ ಆಶ್ರಮದವರ ವಾದ ಆಧಾರ ರಹಿತವಾಗಿದೆ. ಕನ್ನಡ ಶಾಲೆಯನ್ನು ನಾಶಗೊಳಿಸಿ ಸ್ವಾಮಿ ವಿವೇಕಾನಂದರು, ಮೈಸೂರು ಮಹಾರಾಜರು ಮತ್ತು ಸಹಸ್ರಾರು ಬಡಮಕ್ಕಳ ಗೋರಿಯ ಮೇಲೆ ವಿವೇಕ ಸ್ಮಾರಕ ನಿರ್ಮಿಸುವುದು ಅವಿವೇಕದ ಪರಮಾವಧಿಯಲ್ಲವೇ?

8. ಸ್ವಾಮಿ ವಿವೇಕಾನಂದರ ಆಶಯದಂತೆ ಶ್ರೀರಾಮಕೃಷ್ಣ ಆಶ್ರಮವು ದೀನ ದುರ್ಬಲರ ಮಕ್ಕಳ ಶೈಕ್ಷಣಿಕ ಪ್ರಗತಿ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಅಭಿವೃದ್ಧಿ, ಸಾಮರ್ಥ್ಯಾಭಿವೃದ್ಧಿ, ನಾಯಕತ್ವ ಅಭಿವೃದ್ಧಿ ಮೊದಲಾದ ಆಶಯಗಳನ್ನು ಈಡೇರಿಸಲು ಕಳೆದ 100 ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ದುರ್ಬಲ ವರ್ಗಗಳಿಗಾಗಿ ಎಷ್ಟು ಶೈಕ್ಷಣಿಕ ಕೇಂದ್ರಗಳನ್ನು ತೆರೆದಿದೆ? ಇವರ ಫಲಾನುಭವಿಗಳೆಲ್ಲ ಮೇಲ್ವರ್ಗದ – ಹೊಟ್ಟೆ ತುಂಬಿದವರ ಮಕ್ಕಳೇ ಅಲ್ಲವೆ? ಶ್ರೀರಾಮಕೃಷ್ಣ ಆಶ್ರಮವು ಪ್ರಸ್ತುತ ಸಂದರ್ಭದಲ್ಲಿ ಶೋಷಣೆಯ ತವರು ಮನೆಯಾಗಿರುವ ವೈದಿಕಶಾಹಿಯ ನವೀಕೃತ ಕೆಟ್ಟ ತಳಿಗಳಿಂದ ಕೂಡಿರುವುದು ಅನುಭವವೇದ್ಯವಾಗಿದೆ. ಬ್ರಾಹ್ಮಣ್ಯ ದೇವೋಭವ – ಬಂಡವಾಳ ದೇವೋಭವ – ಭೋಗ ಜೀವನ ದೇವೋಭವ ಎನ್ನುವ ಇವರಿಂದ ನಾವು ಏನಾದರೂ ಒಳಿತನ್ನು ನಿರೀಕ್ಷಿಸಲು ಸಾಧ್ಯವೇ?

9. ಎನ್‌ಟಿಎಂಎಸ್ ಶಾಲೆಯು ರಾಷ್ಟ್ರದ ಮತ್ತು ರಾಜ್ಯದ ಪ್ರಥಮ ಬಾಲಕಿಯರ ಶಾಲೆಯೆಂದು ಶಾಲೆ ಉಳಿಸಿ ಹೋರಾಟಗಾರರು ನಿಜಕ್ಕೂ ಪ್ರತಿಪಾದಿಸುತ್ತಿಲ್ಲ. ಇವರು ಸಮರ್ಥಿಸುತ್ತಿರುವುದು ಐತಿಹಾಸಿಕ ಮಹತ್ವವುಳ್ಳ ಶಾಲೆಯನ್ನು ಉಳಿಸಿ ಎಂಬುದಾಗಿದೆ. ಇದು ಅಂದಿನ ಮೈಸೂರು ಸಂಸ್ಥಾನದಲ್ಲಿ ಸ್ವಾಮಿ ವಿವೇಕಾನಂದರ ಪ್ರೇರಣೆ, ಮಹಾರಾಜರ ದಾರ್ಶನಿಕತೆ ಮತ್ತು ಮಹಾರಾಣಿಯವರ ಮಾನವೀಯತೆಗಳಿಂದ ರೂಪುಗೊಂಡ ಐತಿಹಾಸಿಕ ಶಾಲೆಯಲ್ಲವೇ? ಇಂತಹ ಐತಿಹಾಸಿಕ ಶಾಲೆಯನ್ನು ಧ್ವಂಸಗೊಳಿಸಿ ವಿವೇಕ ಸ್ಮಾರಕ ನಿರ್ಮಿಸುವುದು, ವಾಣಿಜ್ಯ ಸಂಕೀರ್ಣಗಳನ್ನು ಕಟ್ಟುವುದು, ಅಧ್ಯಾತ್ಮದ ಹೆಸರಿನಲ್ಲಿ ಲೂಟಿ ಮಾಡುವುದು ಮತ್ತು ಯೋಗಿಗಳ ಪೋಷಾಕಿನಲ್ಲಿ ಭೋಗಿಗಳಾಗುವುದು ಶ್ರೀರಾಮಕೃಷ್ಣ ಆಶ್ರಮದವರಿಗೆ ಸರಿ ಎನಿಸುವುದೇ?

10. ಈಗಿರುವ ಎನ್‌ಟಿಎಂಎಸ್ ಶಾಲೆ ಪಾರಂಪರಿಕ ಕಟ್ಟಡವೇ ಅಥವಾ ಅಲ್ಲವೇ ಎಂಬುದನ್ನು ನಿರ್ಣಯಿಸುವ ಅಧಿಕಾರ ಕೇಂದ್ರ ಸರ್ಕಾರದ ವ್ಯಾಪ್ತಿಗೊಳಪಡುವ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಇಲಾಖೆಗೆ ಇದೆಯೇ ಹೊರತು ಶ್ರೀರಾಮಕೃಷ್ಣ ಆಶ್ರಮದ ಸ್ವಾಮೀಜಿಗಳಿಗೆ ಮತ್ತು ಅವರ ಒಡನಾಡಿಗಳಿಗೆ ಇಲ್ಲ. ಸ್ಥಳೀಯ ಪುರಾತತ್ವ ಶಾಸ್ತ್ರಜ್ಞರು ಈ ಶಾಲೆ ಪಾರಂಪರಿಕ ಕಟ್ಟಡವಾಗಿದ್ದು ಇದನ್ನು ಕೆಡವಿ ವಿವೇಕ ಸ್ಮಾರಕ ನಿರ್ಮಿಸಲು ಕಾನೂನು ಅನುಮತಿಸುವುದಿಲ್ಲವೆಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎನ್‌ಟಿಎಂಎಸ್ ಶಾಲೆ ಉಳಿಸಿ ಹೋರಾಟವನ್ನು ದಾರಿ ತಪ್ಪಿಸುವ ಸಲುವಾಗಿ ಎನ್.ಎಸ್.ಚಕ್ರವರ್ತಿ ಮತ್ತು ವಕೀಲ ಬಸಪ್ಪನವರ ಮೂಲಕ ಶ್ರೀರಾಮಕೃಷ್ಣ ಆಶ್ರಮ ಮಂಡಿಸಿರುವ ದಶ ಕಾರಣಗಳು ಸಮರ್ಥನೀಯವಲ್ಲ. ಜಗತ್ತಿನ ಇತಿಹಾಸದಲ್ಲಿ ಇಂತಹ ಸ್ವಾಮೀಜಿಗಳು, ಚಕ್ರವರ್ತಿಗಳು, ವಕೀಲರು ಮತ್ತು ಮಧ್ಯವರ್ತಿಗಳು ಬಹಳಷ್ಟು ಬಂದು ಹೋಗಿದ್ದಾರೆ. ಶಾಲೆ ಉಳಿಸಿ ಹೋರಾಟಕ್ಕೆ ಜಯವಾಗಲಿ.

ಪ್ರೊ.ಬಿ.ಪಿ.ಮಹೇಶ ಚಂದ್ರ ಗುರು

(ಲೇಖಕರು ವಿಶ್ರಾಂತ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಮೈಸೂರು ವಿಶ್ವವಿದ್ಯಾಲಯ. ಅಭಿಪ್ರಾಯಗಳು ಲೇಖಕರವು)


ಇದನ್ನೂ ಓದಿ: ಯಾವ ಮಹಾತ್ಮರನ್ನು ಮನೆಗೆ ಕರೆಯಬಾರದಪ್ಪ…: ದೇವನೂರು ಮಹಾದೇವ ವಿಷಾಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...