ಉತ್ತರಾಖಂಡದಲ್ಲಿ 2002 ರ ವಿಧಾನಸಭಾ ಚುನಾವಣೆಗೆ ಎಎಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕರ್ನಲ್ ಅಜಯ್ ಕೊತಿಯಾಲ್ (ನಿವೃತ್ತ) ಅವರನ್ನು ಆಯ್ಕೆ ಮಾಡಿರುವುದಾಗಿ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ.
ಆಮ್ ಆದ್ಮಿ ಪಕ್ಷ ಉತ್ತರಾಖಂಡ ರಾಜ್ಯವನ್ನು ವಿಶ್ವದಲ್ಲಿನ ಹಿಂದೂಗಳ ಆಧ್ಯಾತ್ಮಿಕ ರಾಜಧಾನಿಯಾಗಿ ಪರಿವರ್ತಿಸುತ್ತದೆ ಎಂದು ಕೇಜ್ರಿವಾಲ್ ಘೋಷಿಸಿದ್ದಾರೆ.
ಒಂದು ದಿನದ ಡೆಹ್ರಾಡೂನ್ ಪ್ರವಾಸದಲ್ಲಿರುವ ಕೇಜ್ರಿವಾಲ್, “ಉತ್ತರಾಖಂಡದ ಜನರು ರಾಜಕಾರಣಿಗಳನ್ನು ಬಯಸುವುದಿಲ್ಲ ಆದರೆ ದೇಶಕ್ಕಾಗಿ ಹೋರಾಡಿದ ಅಜಯ್ ಕೊತಿಯಾಲ್ ಅವರಂತಹ ದೇಶಭಕ್ತರನ್ನು ಬಯಸುತ್ತಾರೆ. ಅವರ ದೇಹದಲ್ಲಿ ಇನ್ನೂ ಎರಡು ಗುಂಡುಗಳನ್ನು ಹೊತ್ತುಕೊಂಡಿದ್ದಾರೆ. 2013 ರ ದುರಂತದ ನಂತರ ಕೇದಾರನಾಥದ ಪುನರ್ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಕಡಿತವಿಲ್ಲ, 300 ಯುನಿಟ್ ಉಚಿತ ವಿದ್ಯುತ್- ಉತ್ತರಾಖಂಡ ಚುನಾವಣೆಗೆ ಕೇಜ್ರಿವಾಲ್ ಘೋಷಣೆ
“ಕೆಲ ಸಮಯದ ಹಿಂದೆ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಉತ್ಜತರಾಖಂಡದ ಜನರು ತಮ್ಮ ಮುಖ್ಯಮಂತ್ರಿಯಾಗಿ ಯಾರು ಬೇಕು ಎಂದು ತಿಳಿಯಲು ಇಲ್ಲಿಗೆ ಬಂದಿದ್ದರು. ನಮ್ಮ ಸಿಎಂ ಅಭ್ಯರ್ಥಿಗೆ ಸಂಬಂಧಿಸಿದಂತೆ ನಾವು ರಾಜ್ಯದಲ್ಲಿ ಸಮೀಕ್ಷೆಗಳನ್ನು ನಡೆಸಿದ್ದೇವೆ. ಹೀಗಾಗಿ ಕರ್ನಲ್ ಅಜಯ್ ಕೊತಿಯಾಲ್ ಅವರ ಬಗ್ಗೆ ಅದ್ಭುತ ಪ್ರತಿಕ್ರಿಯೆ ಪಡೆದಿದ್ದೇವೆ. ಆದ್ದರಿಂದ ಇದು ಉತ್ತರಾಖಂಡದ ಜನರ ಆಯ್ಕೆಯಾಗಿದೆ” ಎಂದು ಕ್ರೇಜ್ರಿವಾಲ್ ತಿಳಿಸಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನನಗೆನೀಡಿರುವುದು ಹೆಮ್ಮೆಯ ಸಂಗತಿ ಎಂದು ಕರ್ನಲ್ ಅಜಯ್ ಕೊತಿಯಾಲ್ (ನಿವೃತ್ತ) ಹೇಳಿದ್ದಾರೆ. ಕೇದಾರನಾಥದ ಪುನರ್ನಿರ್ಮಾಣದಲ್ಲಿ ತಮ್ಮ ಪಾತ್ರವನ್ನು ನೆನಪಿಸಿಕೊಂಡಿರುವ ಅವರು, ಸರಿಯಾದ ನಿರ್ಧಾರವಿದ್ದರೇ ಯಾವುದೂ ಅಸಾಧ್ಯವಲ್ಲ ಎಂದಿದ್ದಾರೆ.
“ನಾವು ರಾಜ್ಯದಲ್ಲಿ ಏನಾದರೂ ಒಳ್ಳೆಯದನ್ನು ಮಾಡಬೇಕಾದರೆ, ನಾವು ಎಎಪಿ ಮಾದರಿ ಆಡಳಿತವನ್ನು ತರಬೇಕು. ಎಎಪಿ ಮಾದರಿಯಿಂದ ನಾನು ಪ್ರಭಾವಿತನಾಗಿದ್ದೇನೆ. ಅದಕ್ಕಾಗಿಯೇ ನಾನು ಎಎಪಿಗೆ ಸೇರಿಕೊಂಡೆ” ಎಂದು ಹೇಳಿದ್ದಾರೆ.
ಉತ್ತರಾಖಂಡದ ಮೇಲೆ ಕಣ್ಣಿಟ್ಟಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಹಲವು ಪ್ರಮುಖ ಚುನಾವಣಾ ಘೋಷಣೆಗಳನ್ನು ಮಾಡಿದ್ದಾರೆ. ಪ್ರತಿ ಮನೆಗೆ 300 ಯುನಿಟ್ ಉಚಿತ ವಿದ್ಯುತ್, ಹಿಂದಿನ ಬಿಲ್ಗಳನ್ನು ಮನ್ನಾ ಮಾಡುವುದು ಮತ್ತು ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡುವುದು ಈ ಘೋಷಣೆಗಳಲ್ಲಿ ಪ್ರಮುಖವಾಗಿವೆ.
ಇದನ್ನೂ ಓದಿ: ಉತ್ತರಾಖಂಡ: ಆರು ತಿಂಗಳಲ್ಲಿ ಮೂರು ಮುಖ್ಯಮಂತ್ರಿ; ಪುಷ್ಕರ್ ಸಿಂಗ್ ಧಾಮಿ ಮುಂದಿನ ಸಿಎಂ!