ಕೇಂದ್ರ ಸಂಪುಟ ವಿಸ್ತರಣೆ ಇನ್ನೆರಡು ದಿನಗಳಲ್ಲಿ ನಡೆಯಲಿದ್ದು, ಹಲವು ರಾಜಕೀಯ ನಾಯಕರು ಸ್ಥಾನ ಸಿಗುವ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಪುನಾರಚನೆಯಾಗಲಿರುವ ಸಂಪುಟದಲ್ಲಿ ಸಂಯುಕ್ತ ಜನತಾದಳದ ಪಕ್ಷದ ನಿಲುವಿನ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತನಾಡಿದ್ದಾರೆ.
’ ಬಿಜೆಪಿಯ ನಿಯಮಗಳಿಗೆ ಅನುಗುಣವಾಗಿ ಈ ಬಾರಿ ಸಂಯುಕ್ತ ಜನತಾದಳವು ಕೇಂದ್ರ ಸರ್ಕಾರದ ಭಾಗವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ನನಗೆ ಯಾವುದೇ ಫಾರ್ಮಲಗಳ ಬಗ್ಗೆ ತಿಳಿದಿಲ್ಲ. ಆದರೆ, ಗೌರವಾನ್ವಿತ ಪ್ರಧಾನ ಮಂತ್ರಿ ಏನೇ ನಿರ್ಧರಿಸಿದರೂ ನಾವು ಒಪ್ಪಿಕೊಳ್ಳುತ್ತೇವೆ’ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಪ್ರಸ್ತುತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಸಂಯುಕ್ತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಆರ್ಪಿಸಿ ಸಿಂಗ್ ದೆಹಲಿಯಲ್ಲಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ಬಿಜೆಪಿಯ 12 ಶಾಸಕರನ್ನು ಸದನದಿಂದ ಒಂದು ವರ್ಷ ಅಮಾನತು ಮಾಡಿದ ಸ್ಪೀಕರ್
ಜನತಾದಳದ ಪ್ರಮುಖ ಮತ ಬ್ಯಾಂಕ್ಗಳಾಗಿರುವ, ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಮಹಾದಲಿತರು ಮತ್ತು ಒಬಿಸಿಗಳ (ಇತರ ಹಿಂದುಳಿದ ವರ್ಗಗಳು) ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಗರಿಷ್ಠ ಸ್ಥಾನಗಳನ್ನು ಪಡೆಯಲು ಬಿಜೆಪಿಯೊಂದಿಗೆ ಮಾತುಕತೆ ನಡೆಯುತ್ತಿದೆ ಎಂಬುದನ್ನು ನಿತೀಶ್ ಕುಮಾರ್ ಅವರ ಹೇಳಿಕೆ ಸ್ಪಷ್ಟ ಪಡಿಸಿದೆ.
ಬಿಜೆಪಿಯೊಂದಿಗೆ ಮೈತ್ರಿ ಗೆದ್ದಿದ್ದರೂ, ಸಂಯುಕ್ತ ಜನತಾದಳವು ಬಿಹಾರ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯ ಮೈತ್ರಿಕೂಟದಲ್ಲಿ ನಿರ್ಣಯಕ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಟ್ಟಿದೆ. ಮಾತು ಕೊಟ್ಟಂತೆ ಬಿಜೆಪಿ ನಿತೀಶ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದೆ.
2019 ರಲ್ಲಿ ಬಿಜೆಪಿ, ನಿತೀಶ್ ಕುಮಾರ್ ಅವರಿಗೆ ಸಾಂಕೇತಿಕ ಪ್ರಾತಿನಿಧ್ಯ ವ್ಯವಸ್ಥೆಯ ಆಧಾರದ ಮೇಲೆ ಕ್ಯಾಬಿನೆಟ್ ಸ್ಥಾನವನ್ನು ನೀಡಿದಾಗ ಅವರು ಕೇಂದ್ರದ ಸಂಪುಟ ಸೇರಲು ನಿರಾಕರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, “ಆಗ ಏನಾಯಿತೋ ಅದು ಅಲ್ಲಿಗೆ ಮುಗಿದಿದೆ. ಆ ಸಮಯದಲ್ಲಿ ನಾನು ಪಕ್ಷದ ಅಧ್ಯಕ್ಷನಾಗಿದ್ದೆ, ಅದು ಈಗ ಕೊನೆಗೊಂಡಿದೆ” ಎಂದಿದ್ದಾರೆ.
ಇದನ್ನೂ ಓದಿ: ಸಾಯುತ್ತೇವೆ ವಿನಃ ಹೋರಾಟದಿಂದ ಹಿಂದೆ ಸರಿಯುವುದಿಲ್ಲ: ಲಾಲು ಪ್ರಸಾದ್ ಯಾದವ್