ಮಾಸ್ಕ್ ಧರಿಸದ ವ್ಯಕ್ತಿಯ ಮೇಲೆ ಜಟಾಪಟಿ ಬಳಿಕ ಖಾಸಗಿ ಭದ್ರತಾ ಸಿಬ್ಬಂದಿಯೊಬ್ಬರು ಗುಂಡು ಹಾರಿಸಿ ಗಾಯಗೊಳಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಬ್ಯಾಂಕ್ ಒಳಗಡೆಯೇ ಈ ದುರಂತ ಸಂಭವಿಸಿದೆ.
ಬರೇಲಿ ಜಿಲ್ಲೆಯ ಬ್ಯಾಂಕ್ ಆಫ್ ಬರೋಡಾದ ಶಾಖೆಯಲ್ಲಿ ಈ ಭೀಕರ ಘಟನೆ ನಡೆದಿದೆ. ಗಾಯಾಳುವನ್ನು ರೈಲ್ವೆ ಉದ್ಯೋಗಿ ರಾಜೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತನ ತೊಡೆಗೆ ಗುಂಡೇಟು ಬಿದ್ದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿರುವ ದೃಶ್ಯಗಳು, ಗುಂಡು ಹಾರಿಸಿದ ಸೆಕ್ಯೂರಿಟಿ ಗಾರ್ಡ್ ಮೇಲೆ ಗಾಯಾಳುವಿನ ಹೆಂಡತಿ ಆಕ್ರೋಶ ವ್ಯಕ್ತಪಡಿಸಿ, ಕಿರುಚಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಮಾಸ್ಕ್ ಧರಿಸದೆ ಬ್ಯಾಂಕಿನೊಳಗಡೆ ಬರುತ್ತಿದ್ದ ಗ್ರಾಹಕನನ್ನು ತಡೆದಾಗ ಇಬ್ಬರ ನಡುವೆ ಜಗಳ ನಡೆದು ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ‘ಆರೆಸ್ಸೆಸ್ ಅಥವಾ ಸಂವಿಧಾನ’ – ಚಿರಾಗ್ ಪಾಸ್ವಾನ್ಗೆ ಆಯ್ಕೆ ಮುಂದಿಟ್ಟ ತೇಜಸ್ವಿ ಯಾದವ್!
ಖಾಸಗಿ ಭದ್ರತಾ ಸಿಬ್ಬಂದಿ ಉತ್ತರ ಪ್ರದೇಶ ಪೊಲೀಸರ ವಶದಲ್ಲಿದ್ದು, ಆಕಸ್ಮಿಕವಾಗಿ ಗುಂಡು ಹಾರಿದೆ ಎಂದಿದ್ದಾರೆ. ಉದ್ದೇಶಪೂರ್ವಕವಾಗಿಯೇ ಶೂಟ್ ಮಾಡಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
“ಅವರು ಮಾಸ್ಕ್ ಧರಿಸಿರಲಿಲ್ಲ. ಅದರಿಂದ ಜಗಳ ಆರಂಭವಾಯಿತು. ಗಲಾಟೆಯಲ್ಲಿ ನಾನು ಗಾಯಗೊಂಡಿದ್ದೇನೆ, ನನ್ನ ಬಟ್ಟೆಯನ್ನು ಹರಿಯಲಾಗಿದೆ. ನನ್ನ ರೈಫಲ್ ಲೋಡ್ ಆಗಿತ್ತು, ಗಲಾಟೆಯಲ್ಲಿ ತಲ್ಳೂವುದು, ನೂಕುವುದು ನಡೆಯುವಾಗ ಆಕಸ್ಮಿಕವಾಗಿ ಗುಂಡು ಹಾರಿದೆ” ಎಂದು ಪೊಲೀಸರು ಕರೆದೊಯ್ಯುವಾಗ ಭದ್ರತಾ ಸಿಬ್ಬಂದಿ ಹೇಳಿದ್ದಾರೆ.
ಮಾಸ್ಕ್ ಧರಿಸದ ಕಾರಣಕ್ಕಾಗಿಯೇ ಫೈರಿಂಗ್ ನಡೆದಿದೆಯೇ ಎಂಬ ಪ್ರಶ್ನೆಗೆ, ತನಿಖೆ ನಡೆಸುತ್ತೇವೆ. ವಿಚಾರಣೆ ಬಳಿಕ ಸತ್ಯ ಹೊರಬೀಳಲಿದೆ ಎಂದು ಬರೇಲಿ ಪೊಲೀಸ್ ಮುಖ್ಯಸ್ಥ ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ.
“ಗ್ರಾಹಕ ಬ್ಯಾಂಕಿಗೆ ಬಂದ ನಂತರ ಕೆಲವು ಕಾರಣಗಳಿಂದ ಇಬ್ಬ ನಡುವೆ ಗಲಾಟೆ ನಡೆದಿದೆ ಎಂದು ಬ್ಯಾಂಕ್ ನೌಕರರು ನಮಗೆ ತಿಳಿಸಿದ್ದಾರೆ. ನಾವು ಬ್ಯಾಂಕ್ ಸಿಬ್ಬಂದಿಯನ್ನು ಪ್ರಶ್ನಿಸುತ್ತಿದ್ದೇವೆ. ಕಾರಣ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ” ಎಂದು ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತ ಕ್ರಿಕೆಟ್ ತಂಡವನ್ನು ‘ದಂಡುಪಾಳ್ಯದ ದಂಡಪಿಂಡ’ಗಳು ಎಂದ ದಿಗ್ವಿಜಯ ನ್ಯೂಸ್?: ಆಕ್ರೋಶ