Homeಮುಖಪುಟನಾವು ನಂಬರ್ ಒನ್... ಯಾವುದರಲ್ಲಿ - ದೇಶ ಮಾರುವುದರಲ್ಲಿ?

ನಾವು ನಂಬರ್ ಒನ್… ಯಾವುದರಲ್ಲಿ – ದೇಶ ಮಾರುವುದರಲ್ಲಿ?

- Advertisement -
- Advertisement -

ನಮ್ಮ ಹುಬ್ಬಳ್ಳಿ ಹುಡುಗರಿಗೆ ರೋಮಾಂಚನ ಆಗೋವಂಥ ಸುದ್ದಿಯೊಂದು ಕಂಪ್ಯೂಟರ್ ಕ್ಲೌಡು ಎಂಬೋ ನೀಲ ಗಗನದೊಳಗ ಓಡಾಡತಾ ಐತಿ.

ಅದು ಏನಪಾ ಅಂದ್ರ ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿ ಹುಡುಗ ಪ್ರಹ್ಲಾದ ಜೋಶಿ ಅವರಿಗೆ ಅಭಿನಂದನೆ ಹೇಳಿದ ವಿಡಿಯೋ.

ನನ್ಯ ಸಚಿವ ಸಂಪುಟದ ಸದಸ್ಯರಾದ ಪ್ರಹ್ಲಾದಜೀ ಅವರು ಈ ಲಾಕ್‍ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡು, ಕಲ್ಲಿದ್ದಲು ತಯಾರಿ ಕ್ಷೇತ್ರದಲ್ಲಿ ಭಾರತ ಮಹತ್ವಪೂರ್ಣ ಹೆಜ್ಜೆಗಳನ್ನು ಇಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಲಾಕ್‍ಡೌನ್‍ನಲ್ಲಿ ಕಲ್ಲಿದ್ದಲಿಗೆ ಸಂಬಂಧಪಟ್ಟ ಎಲ್ಲ ಕಾನೂನುಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ನಮಗೆ ಹೊಸ ದಾರಿ ತೋರಿಸಿದ್ದಾರೆ. ಸಚಿವರು ಹಾಗೂ ಅವರ ಸಿಬ್ಬಂದಿಗೆ ನಾವು ಏನು ಅಂತಹ ದೊಡ್ಡ ಕೆಲಸ ಮಾಡಿಲ್ಲ ಅಂತ ಅನ್ನಿಸಬಹುದು, ಆದರೆ ನಾನು ಹೇಳುತ್ತೇನೆ. ನೀವು ಮಾಡಿದ್ದು ಅತ್ಯಂತ ಮಹತ್ವಪೂರ್ಣ ಕೆಲಸ. ನಾನು ನಿಮ್ಮನ್ನು ಅಭಿನಂದಿಸುತ್ತೇನೆ, ಅಂತ ಎರಡು ಸರತೆ ಚಪ್ಪಾಳೆ ಬಾರಿಸಿದ್ದಾರೆ.

ಇದನ್ನು ಕಲ್ಲಿದ್ದಲು ಸಚಿವರ ಹಿಂಬಾಲಕರು, ವಿರೋಧಿಗಳು ಎಲ್ಲರೂ ಸೇರಿ ಸಾವಿರಾರು ಸಲ ಹಂಚಿಕೊಂಡಾರ. ಇನ್ನ ನಮ್ಮ ಜೋಶಿ ಸಾಹೇಬರಿಗೆ ಟಿಕೆಟ್ ತಪ್ಪಿಸೋರು ಯಾರೂ ಇಲ್ಲಾ, ಅವರ ಕುರ್ಚಿ ಕಾಯಂ, ಇನ್ನೂ ಸ್ವಲ್ಪ ದಿವಸ ಆದರ ಅವರು ಪ್ರಧಾನಿ ಆಗಬಹುದು, ಉಪ ರಾಷ್ಟ್ರಪತಿ – ರಾಷ್ಟ್ರಪತಿನೂ ಆಗೋ ಛಾನ್ಸ್ ಅದ ಅಂತ ಹೇಳಿ ಅವರ ಬೆಂಬಲಿಗರು ಹೇಳಿಕೊಂಡು ಕುಣದಾಡಲಿಕ್ಕೆ ಹತ್ತಿದಾರು.

ಪ್ರಧಾನಿಯವರು ತಮ್ಮ ಎಂದಿನ ರೂಢಿಯಂತೆ, ಬರೀ ಒಳ್ಳೆ ಸುದ್ದಿ ಹೇಳುವ, ಹುರಿದುಂಬಿಸುವ, ಧನಾತ್ಮಕ ವಿಷಯವನ್ನೇ ತಿಳಿಸುವ ತಮ್ಮ ಇಮೇಜಿಗೆ ತಕ್ಕುದಾಗಿ ಯಾವ ಸಣ್ಣ ಮಾಹಿತಿಯನ್ನೂ ಕೊಡದಂತೆ, ಇದು ಒಳ್ಳೆಯದು ಅಂತ ಅಪ್ಪಣೆ ಕೊಟ್ಟಿದ್ದಾರೆ. ಅವರು ಯಾವ ಅಧ್ಯಯನ ಮಾಡಿದರು, ಅವರ ಯಾವ ನಡೆಗಳು ಭಾರತದ ಭವಿಷ್ಯವನ್ನು ನಿರ್ಧರಿಸುತ್ತವೆ, ಅದರಿಂದ ಈ ದೇಶದ ಜನರಿಗೆ ಯಾವ ರೀತಿಯಲ್ಲಿ ಅನುಕೂಲ ಆಗುತ್ತದೆ ಅಂತ ಅವರು ತಿಳಿಸಿ ಹೇಳಲಿಲ್ಲ.

ಬರೀ ಒಳ್ಳೆ ಮಾತಾಡುವ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದ ಕೋಚ್ ಗೋಡ್ಬೋಲೆ (ಸವಿ ಮಾತಾಡುವ) ಅವರಂತೆ `ನಾ ಬ್ರೂಯಾತ ಅಪ್ರಿಯಂ ಸತ್ಯಂ’ ಅಂತ ಕೆಲವು ವಿಷಯ ಹೇಳದೇ ಬಿಟ್ಟರು, ನಾವು `ಇದಮಿತ್ಥಂ’ ಅಂತ ನಂಬಿಬಿಟ್ಟಿವಿ.

ಹಂಗಾರ ನಮ್ಮ ಸಚಿವರು ಮಾಡಿದ್ದಾದರೂ ಏನು ?

ಅದನ್ನು ಕಂಡುಹಿಡಿಯುವುದು ಅಷ್ಟೇನೂ ಕಷ್ಟವಿಲ್ಲ. ಈ ಅಭಿನಂದನೆ ನೀಡಿದ ಸಭೆಯಲ್ಲಿಯೇ ಅವರು ಒಂದು ಘೋಷಣೆ ಮಾಡಿದರು. ಭಾರತ ವಿಶ್ವದ ಎರಡನೇ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದಕ ರಾಷ್ಟ್ರ. ನಾವು ಎರಡನೇ ಸ್ಥಾನದಲ್ಲಿ ಯಾಕೆ ಇರಬೇಕು? ಮೊದಲನೇ ಸ್ಥಾನದಲ್ಲಿ ಯಾಕ ಇರಬಾರದು? ಅಂತ ಪ್ರಶ್ನೆ ಕೇಳಿದರು.

ಜೋಶಿಜಿ ಅವರು ಆ ಮೊದಲನೇ ಸ್ಥಾನದ ದಾರಿ ತೋರಿಸಿಕೊಟ್ಟರು.

ಜೂನ್ ತಿಂಗಳ ಲಾಕ್‍ಡೌನ್‍ದಾಗ, ಲೋಕಸಭೆ- ರಾಜ್ಯಸಭೆ ಎರಡೂ ನಡೆಯದಾಗ, ರಾಜ್ಯಗಗಳ ವಿಧಾನ ಸಭೆ -ವಿಧಾನ ಪರಿಷತ್ತು ಬಂದ್ ಆದಾಗ, ಕೇಂದ್ರ ಸರಕಾರ ಈ ದೇಶದ 41 ಕಡೆಗಳಲ್ಲಿ ಭೂ ಗರ್ಭದಾಗ ಇರೋ ಕಲ್ಲಿದ್ದಲು ಗಣಿಗಳನ್ನು ಖಾಸಗಿಕರಣ ಮಾಡೋ ನಿರ್ಧಾರ ತೊಗೋಂಡಿತು. ಅದಕ್ಕ ಬೇಕಾದ ಪರಿಸರ ಇಲಾಖೆ, ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಇಲಾಖೆ ಸಮ್ಮತಿಯನ್ನು ಗಡಿಬಿಡಿಯಿಂದ ತೊಗೊಂಡು ಇನ್ನೂ ಗಡಿಬಿಡಿಯಿಂದ ಘೋಷಿಸಿತು.

ಇವುಗಳಲ್ಲಿ ಶೇಕಡಾ 80 ರಷ್ಟು ಆದಿವಾಸಿಗಳು ಇರೋ ಪ್ರದೇಶಗಳು. ಆದರೆ ಅಲ್ಲಿನ ಜನರನ್ನ ಕೇಳಲಿಲ್ಲ. ಅವರ ಗ್ರಾಮಸಭೆ, ಗ್ರಾಮ ಅರಣ್ಯ ಸಮಿತಿ ಸಭೆ ನಡೆಸಲಿಲ್ಲ. ಸುಪ್ರೀಂ ಕೋರ್ಟ್‍ನ ಹಲವಾರು ಆದೇಶಗಳನ್ನು ಅಡವಿಯ ಕುಳಿರ್ ಗಾಳಿಗೆ ತೂರಿ ಬಿಟ್ಟು, ಟೆಂಡರ್ ಕರೆಯಲು ಸಜ್ಜಾದರು.

ಕಳೆದ ನೇಹರೂವಿನ್ ದಶಕಗಳಲ್ಲಿ, ಸುಮಾರು ಆರು ಕೋಟಿ ಆದಿವಾಸಿಗಳನ್ನು ಒಕ್ಕಲು ಎಬ್ಬಿಸಲಾಗಿದೆ. ಅವರಲ್ಲಿ ಸುಮಾರು 25 ಶೇಕಡಾ ಜನರಿಗೆ ಪರಿಹಾರ ಸಿಕ್ಕರೂ ಅವರ ಪುನರ್ವಸತಿ ಸರಿಯಾಗಿ ಆಗಿಲ್ಲ. ಅಲ್ಲಿನ ಜಲಮೂಲ, ವನ್ಯ ಜೀವಿ, ಹಕ್ಕಿ, ಇತರ ಪರಿಸರ ಕಲುಷಿತ ಆದ ನಂತರ ಅರಣ್ಯ ಪ್ರದೇಶದ ಯೋಜನೆಗಳಿಗೆ ಒಪ್ಪಿಗೆ ಕೊಡೋ ವೇಗ ಕಮ್ಮಿ ಆಯಿತು.

ಆಗಿನ ಸರ್ಕಾರಗಳು ತಮ್ಮ ಯಂತ್ರಾತ್ಮಕ್ಕೆ ಅಂಜದೇ ಇದ್ದರೂ ಜನರಿಗೆ, ಮಾಧ್ಯಮಗಳಿಗೆ, ನ್ಯಾಯಾಲಯಕ್ಕೆ, ಹೆದರುತ್ತಿದ್ದರು.

ಇವು ಯಾವುದಕ್ಕೂ ಹೆದರದೇ ಇರೋದು ಅಂದ್ರ ಅದು ಯಾ ಪರಿ ಧೈರ್ಯ ಇರಬೇಕು ನಮ್ಮ ಸಚಿವರಿಗೆ ಇರಬೇಕು? ನೀವೇ ನೋಡ್ರಿ.

ಈ 41 ಗಣಿಗಳು, ಐದು ರಾಜ್ಯಗಳ ಹಸಿರು ಪಟ್ಟಿಗಳಲ್ಲಿ ಬರತಾವು. ಅಲ್ಲಿ ಅರಣ್ಯ ಅಭಿವೃದ್ಧಿ ಚಟುವಟಿಕೆ ಬಿಟ್ಟು ಬೇರೆ ಏನೂ ಮಾಡಬಾರದು ಅಂತ ಒಂದು ತೀರ್ಪು ಐತಿ. ಸರ್ಕಾರವಾಗಲಿ, ಖಾಸಗಿ ಕಂಪನಿ ಆಗಲಿ, ಯಾವ ಕೆಲಸ ಮಾಡಿದರೂ ಕೂಡ, ಆದಿವಾಸಿಗಳ ಭಾಗೀದಾರಿಕೆಯಲ್ಲಿಯೇ ಮಾಡಬೇಕು ಅಂತ ಒಂದು ತೀರ್ಪು ಐತಿ. ಪರಿಸರ ಅಂದ್ರ ಬರೇ ಮಣ್ಣು, ನೀರು ಅಲ್ಲ, ಅಲ್ಲಿನ ಜನರ ಹಿತರಕ್ಷಣೆಯೂ ಆದರಾಗ ಸೇರೇತಿ ಅಂತ ಮತ್ತೊಂದು ತೀರ್ಪು ಐತಿ. ಅರಣ್ಯ, ಸಹಜ ಬೆಳೆ ಅಥವಾ ಬಹು ಬೆಳೆ ಜಮೀನನ್ನು ಭೂ ಸ್ವಾಧೀನ ಕಾಯಿದೆಯೊಳಗೆ ಸರಕಾರ ತೊಗೊಳಿಕ್ಕೆ ಬರೋದಿಲ್ಲ ಅಂತ ಇನ್ನೊಂದು ಐತಿ.

ಇವು ಯಾವುವೂ ಕೇಂದ್ರದ ಕಲ್ಲಿದ್ದಲು ಹಾಗೂ ಸಂಸದೀಯ ಖಾತೆ ಸಚಿವರಿಗೆ ನೆನಪು ಬರಲಿಲ್ಲ. ಬಂದರೂ ಸಹಿತ ತಮ್ಮ ಅಗಾಧ ಮರೆವಿನ ಶಕ್ತಿಯಿಂದ ಅದನ್ನು ಅವರು ಗೆದ್ದಿರಬಹುದು.

ಪರಿಶಿಷ್ಟ ಪಂಗಡಗಳ ರಕ್ಷಣೆಗಾಗಿ ಇರೋ ಸಂವಿಧಾನದ ಏಳನೇ ಭಾಗದ ಕಲಂಗಳಾಗಲಿ, ಪೆಸಾ ಕಾಯಿದೆಯಾಗಲಿ, ಸುಪ್ರೀಂ ಕೋರ್ಟಿನ ಸಮಾತಾ ತೀರ್ಪು, ಆದಿವಾಸಿ ಸಲಹಾ ಸಮಿತಿ ರಚನೆ, ಅಥವಾ ನೆಲದ ಒಡೆಯನೇ ನೆಲದಾಳದ ಅದಿರಿನ ಒಡೆಯ ಎನ್ನುವ 2013ರ ತೀರ್ಪು ಆಗಲಿ, ಅವರಿಗೆ ಮುಖ್ಯ ಅನ್ನಿಸಲಿಲ್ಲ.

ಇಷ್ಟು ದಿನ ಅರಣ್ಯ ಅಧಿಕಾರಿಗಳು ಯಾವುದು ಯಾವುದೋ ತೀರ್ಪಿನ ಹೆಸರು ಹೇಳಿ ಅಡವಿಯಲ್ಲಿ ಅಡುಗೆ ಮನೆಗೆ ಬೇಕಾದ ಕಟ್ಟಿಗೆ ತರಲು ಹೋಗುತ್ತಿದ್ದವರನ್ನು ಜೈಲಿಗೆ ಹಾಕುತ್ತಿದ್ದರು. ಅಂತಾದ್ದರಲ್ಲಿ ಇಷ್ಟು ಧಾಡಸಿತನದಿಂದ, ಪರಿಸರಕ್ಕೆ ಆಗಬಹುದಾದ ಹಾನಿಯನ್ನು ಕಲ್ಲು ಮನಸಿನಿಂದ ಸಹಿಸಿಕೊಂಡು ರಾಷ್ಟ್ರದ ಆರ್ಥಿಕತೆಗೆ ಕುಮ್ಮಕ್ಕು ಕೊಡೋ ದೃಷ್ಟಿಯಿಂದ ಕಲ್ಲಿದ್ದಲು ಗಣಿಗಾರಿಕೆಗೆ ಅನುವು ಮಾಡಿಕೊಡೋದು ಅಂದರೆ ಸುಮ್ಮನೇ ಏನು?

ಅದಕ್ಕೇ ಅವರು ಅವರನ್ನ ಅಭಿನಂದಿಸಿದ್ದು.


ಇದನ್ನು ಓದಿ: ದಲಿತ ಚಿಂತಕರನ್ನು ಮುಗಿಸಲು ಎಲ್ಗರ್ ಪರಿಷತ್ ಪ್ರಕರಣ ವರ್ಗಾವಣೆ: ಬಾಂಬೆ ಹೈಕೋರ್ಟ್‌‌ನಲ್ಲಿ ಅರ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...