Homeಅಂಕಣಗಳುಮಳೆ ಬಂದರೆ  ಹಂದಿಗಳೂ ಬರುತ್ತವೆ: ಕಾಡು ಹಂದಿಗಳ ಗೂಟಾಟ

ಮಳೆ ಬಂದರೆ  ಹಂದಿಗಳೂ ಬರುತ್ತವೆ: ಕಾಡು ಹಂದಿಗಳ ಗೂಟಾಟ

ಹಂದಿಗಳು ಒಂಟಿಯಾಗಿರುವುದು ಅಪರೂಪ. ಇವು ನಮ್ಮಂತೆಯೇ ಸಂಘ ಜೀವಿಗಳು. ಹಿಂಡು ಹಿಂಡಾಗಿ ಇವು ತಿರುಗುವುದರಿಂದ ಬೇಟೆಗಾರರಿಗೆ ಸ್ವರ್ಗ, ಒಂದು ತಪ್ಪಿಸಿಕೊಂಡರೆ ಇನ್ನೊಂದು.

- Advertisement -
- Advertisement -

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ…: ಭಾಗ-11 

ಮಳೆ ಬಂದರೆ  ಹಂದಿಗಳೂ ಬರುತ್ತವೆ. ಇದು ರೈತರೆಲ್ಲರ ಅನುಭವ. ಹೀಗೆ ಮಳೆ ಬಂದ ಮಾರನೆಯ ದಿನ ಹಂದಿಗಳ ಹಸಿ ಹೆಜ್ಜೆಗಳ ಜಾಡು ಹಿಡಿದು ಒಂದಷ್ಟು ದೂರ ಹೋಗಿಬರುವುದು ನನಗೊಂದು ಚಟವಾಗಿ ಬೆಳೆದಿದೆ. ಅವುಗಳಲ್ಲಿ ಒಂದಾದರೂ ಹಂದಿ ನನ್ನ ಕೈಗೆ ಸಿಕ್ಕಿಬಿಡಬಹುದೆಂದು ಭ್ರಮೆಪಡುವುದು ನನಗಿಷ್ಟ. ಒಳಗೆ ಕುದಿಯುವ ಪೋರ್ಕ್‌ ನಿಜದಾಸೆ ಇರುವುದಿಲ್ಲವೆಂದು ಯಾವ ಬಾಯಿಯಿಂದ ಹೇಳುವುದು.

ಒಮ್ಮೆ ನಾನು ಗೆಳೆಯ ಉಜ್ಜಜ್ಜಿ ರಾಜಣ್ಣ ನಮ್ಮೂರಿನ ಪಕ್ಕದ ಗೊಲ್ಲರ ಗುಡ್ಡ ಸುತ್ತುವ ಉಮೇದಿನಲ್ಲಿ ಹೊರಟೆವು. ಅದನ್ನು ಟ್ರಕ್ಕಿಂಗ್‌ ಎಂದು ಕರೆಯುವುದಕ್ಕಿಂತ ಮೊಲದ ಆಸೆಯ ಪಯಣ ಎಂದು ಕರೆದರೆ ಸರಿಯೆನಿಸುತ್ತದೆ. ಕೈಯ್ಯಲ್ಲಿ ದೊಣ್ಣೆಗಳನ್ನು ಹಿಡಿದು ಸಾಗುತ್ತಿದ್ದೆವು. ನಾವೊಂದು ಬಗೆದರೆ ಹಂದಿಯೊಂದು ಬಗೆಯಿತು ಎನ್ನುವಂತೆ, ಇದ್ದಕ್ಕಿದ್ದಂತೆ ಪೊದೆಯೊಳಗಿಂದ ತಾಯಿ ಹಂದಿಯೊಂದು ಗಾಬರಿಗೊಂಡು ತನ್ನ ಪಗಡದಸ್ತಾದ ಆರು ಮರಿಗಳೊಂದಿಗೆ ನಮ್ಮತ್ತ ಧಾವಿಸಿ ಕಾಲು ಸಂದಿಯಲ್ಲಿ ನುಗ್ಗಲು ಏರ್ಪಾಟು ಮಾಡಿಕೊಳ್ಳುತ್ತಿದ್ದಾಗ ಸಕಾಲಕ್ಕೆ ಎಚ್ಚೆತ್ತ ನಾವಿಬ್ಬರೂ ಅದಕ್ಕೆ ಜಾಗ ತೆರವು ಮಾಡಿ ದಿಕ್ಕಾ ಪಾಲಾಗಿ ಓಡಿದೆವು. ಕುಡಿದಿದ್ದ ಮೂರು ಚಿಪ್ಪು ನೀರಾದ ಮತ್ತು ಇಳಿದು ಹೋಗಿತ್ತು. ಕೈಯ್ಯಲ್ಲಿದ್ದ ದೊಣ್ಣೆಯಿಂದ ಒಂದು ಮರಿಯನ್ನಾದರೂ ಹೊಡೆಯಬಹುದಿತ್ತು ಎಂದು ನಿರಾಸೆಯಿಂದ ನಾನು ಹೇಳಿದಾಗ, “ಸ್ವಾಮಿ ಮರಿಯುಳ್ಳ ತಾಯಿ ಹಂದಿ ನಮ್ಮಿಬ್ಬರನ್ನು ಮುಗಿಸುವ ಹುನ್ನಾರದಲ್ಲಿದ್ದುದನ್ನು ನೀವು ಗಮನಿಸಲಿಲ್ಲವೆಂದು ಕಾಣುತ್ತದೆ”  ಎಂದಾಗ ಎದೆ ಝಲ್‌ ಎಂದಿತು. ಹಂದಿಗಳು ಬೇಕಾದಷ್ಟು ಜನ ಬೇಟೆಗಾರರ ತೊಡೆ ಸೀಳಿ ಕೊಂದ ಕತೆಯನ್ನೂ, ಅಮಾಯಕ ರೈತರನ್ನು ಗೂಟಾಡಿದ ವ್ಯಥೆಗಳನ್ನು ಹೇಳಿ ನನ್ನ ಮರಿಹಂದಿ ಬೇಟೆಯ ಕನಸನ್ನು ನುಚ್ಚು ನೂರು ಮಾಡಿದ.

ನಮ್ಮ ತೋಟಕ್ಕೆ ಯಾವ ಹಂದಿಗಳು ರೂಢಿಯಾಗಿರುತ್ತವೋ ಅವು ಅವೇ ಹಂದಿಗಳು ಬರುತ್ತವೆಂದು ಕಾಣುತ್ತದೆ. ಒಂದೇ ದಾರಿಯಲ್ಲಿ ಬಂದು ನಮ್ಮ ಉಳುಮೆ ಇಲ್ಲದ ತೋಟದ ಕೆಲ ಭಾಗಗಳನ್ನು ಗೂಟಾಡಿ ಉಳುಮೆ ಮಾಡುತ್ತಾ ಶುಂಠಿಗೆಡ್ಡೆ, ಗೆಣಸುಗಳನ್ನು ತಿಂದು ಬಂದ ದಾರಿಯಲ್ಲೇ ಅವು ತಮ್ಮ ಗುಡ್ಡದ ತಾವಿಗೆ ಹಿಂದಿರುಗುತ್ತವೆ.

ಮಳೆ ಬಂದರೆ ಹಂದಿಗಳಿಗೆ ಎಲ್ಲಿಲ್ಲದ ಹರುಷ. ರಾತ್ರಿ ಕತ್ತಲಲ್ಲೂ ನೆಲದೊಳಗೆ ಅಡಗಿ ಬೆಚ್ಚಗೆ ಮಲಗಿರುತ್ತಿದ್ದ, ಗೊಣ್ಣೆ ಹುಳ, ಎರೆಹುಳ, ಶುಂಠಿಗೆಡ್ಡೆ, ಗೆಣಸು ಎಂಬ ಯಾವ ಭೇದ ಭಾವವೂ ಇಲ್ಲದೆ ಏಕಪ್ರಕಾರವಾಗಿ ಹಸಿಮಣ್ಣಿನೊಂದಿಗೆ ನೆಂಚಿಕೊಂಡು ತಿಂದು ಬೆಳಗಾಗುವುದಕ್ಕೆ ಮೊದಲೆ ತಮ್ಮ ಗೂಡು ಸೇರುವುದು ಅವುಗಳ ಪರಿಪಾಠ.

ಅವು ಇತ್ತೀಚೆಗೆ ಅವು ನಮ್ಮ ತೋಟದ ಪಕ್ಕದಲ್ಲಿನ ಹಳ್ಳದ ಸರದಲ್ಲಿ ಬೀಡುಬಿಟ್ಟು ಹಗಲು ಕಳೆಯುವುದನ್ನು ರೂಢಿ ಮಾಡಿಕೊಂಡಿವೆ. ಆ ದೂರದ ಕಣಿವೆ ಸಾಲಿನ ಗುಡ್ಡಕ್ಕೆ ಹೋಗಿಬರುವುದು ವ್ಯರ್ಥವೆಂದೂ ಈ ಹಳ್ಳದ ಪೊದೆಗಳಲ್ಲಿ ಹಾಯಾಗಿ ಮಲಗುವುದೇ ಸೂಕ್ತವೆಂದು ಅವು ಅರ್ಥಮಾಡಿಕೊಂಡಿರಬೇಕು.

ಹಂದಿಗಳು ಒಂಟಿಯಾಗಿರುವುದು ಅಪರೂಪ. ಇವು ನಮ್ಮಂತೆಯೇ ಸಂಘ ಜೀವಿಗಳು. ಹಿಂಡು ಹಿಂಡಾಗಿ ಇವು ತಿರುಗುವುದರಿಂದ ಬೇಟೆಗಾರರಿಗೆ ಸ್ವರ್ಗ, ಒಂದು ತಪ್ಪಿಸಿಕೊಂಡರೆ ಇನ್ನೊಂದು. ಬಂದೂಕದಿಂದ ಬೇಟೆ ಆಡುವವರದು ಮೊದಲ ವರ್ಗ. ದಪ್ಪ ದಪ್ಪ ಹಗ್ಗದಿಂದ ಮಾಡಿದ ಬಲೆಯಲ್ಲಿ ಹಿಡಿಯುವವರದ್ದು ಎರಡನೇ ಆದರೆ ಸಾಹಸೀ ವರ್ಗ. ಇವರು ನೇರಾನೇರ ಕಾಡುಹಂದಿಗಳ ಜೊತೆ ಮುಖಾಮಖಿಗೆ ಇಳಿಯುತ್ತಾರೆ, ಇವರು ಹಂದಿಗಳನ್ನು ಹಿಡಿಯುವುದಕ್ಕೂ ಸೈ, ಪ್ರಾಣ ಕಳೆದುಕೊಳ್ಳುವುದಕ್ಕೂ ಸೈ. ಇನ್ನೂ ಒಂದು ವರ್ಗವಿದೆ ಅವರು ಹಂದಿಗಳ ಹಿಂಡು ಓಡಾಡುವ ಜಾಗ ಊಹಿಸಿ ಅಲ್ಲಲ್ಲಿ ದವಡೆ ಬಾಂಬುಗಳನ್ನು ಇಟ್ಟು, ಹಂದಿಗಳ ದವಡೆ ಸ್ಪೋಟಿಸಿ ಅವುಗಳನ್ನು ಪಾಲು ಹಾಕಿಕೊಂಡು ರುಚಿ ನೋಡುತ್ತಾರೆ. ಈ ಎಲ್ಲಾ ವರ್ಗದ ಬೇಟೆಗಾರರಿಗೂ ಮಳೆ ಬಂದ ಮಾರನೇ ದಿನ ಹಂದಿ ಬೇಟೆಗೆ ಪ್ರಶಸ್ತ ಕಾಲ. ಹೆಜ್ಜೆ ಗುರುತುಗಳನ್ನು ಹಿಂಬಾಲಿಸಿ ಅವುಗಳ ಮೂಲ ತಾಣವನ್ನು ಕಂಡುಹಿಡಿದು ಅಲ್ಲೆ ಅವುಗಳ ಬೇಟೆಗೆ ಹೊಂಚು ಹಾಕುತ್ತಾರೆ. ಹಂದಿ ಹೊಡೆಯುವುದು ಕಾನೂನಿನ ಉಲ್ಲಂಘನೆಯೆಂಬುದು ನಿಜವಾದರೂ ಯಾರೂ ಅದಕ್ಕೆ ತಲೆ ಕೆಡಿಸಿಕೊಂಡಿಲ್ಲ. ಅವುಗಳ ಸಂಖ್ಯೆ ವಿಪರೀತ ಎನ್ನುವಷ್ಟು ಹೆಚ್ಚಿರುವುದೂ ಇದಕ್ಕೆ ಕಾರಣವಿರಬೇಕು. ಇದಕ್ಕಿಂತ ಮುಖ್ಯ ಕಾರಣ ಇನ್ನೊಂದಿದೆ. ಚಿಕ್ಕನಾಯಕನ ಹಳ್ಳಿ ಗುಡ್ಡ ಸಾಲಿನಲ್ಲಿ ಕೊನೆಯಿಲ್ಲವೆಂಬಂತೆ ನಡೆದ ಭೀಕರ ಗಣಿಗಾರಿಕೆಯು ಹಂದಿಗಳು ಗುಡ್ಡಗೋರಣ್ಯ ಬಿಟ್ಟು ತೋಟದ ಸಾಲು ಸೇರುವುದಕ್ಕೆ ಕಾರಣವಾಯಿತು.

ನಮ್ಮ ತೋಟಕ್ಕೆ ಬರುವ ಹಂದಿಗಳು ಸ್ವಂತ ತೋಟಕ್ಕೆ ಬರುವಷ್ಟೆ ಧೈರ್ಯವಾಗಿ ಬಂದು ಹೋಗುತ್ತವೆ. ಇಲ್ಲಿ ಎಂದೂ ಅವುಗಳಿಗೆ ಘಾಸಿ ಆಗಿಯೇ ಇಲ್ಲ. ಅವುಗಳ ಮೇಲೆ ಯಾವ ಚಿಕ್ಕ ದಾಳಿಯ ಪ್ರಯತ್ನವೂ ನಡೆದಿಲ್ಲದಿರುವುದು ಒಂದು ಕಾರಣವಾದರೆ ಇಲ್ಲಿ ಸಿಕ್ಕುವ ನೀರು ಆಹಾರ ಇನ್ನೊಂದು ಕಾರಣ. ಹಂದಿಗಳಿಗೆ ಕೆಸರಿನಾಟ ಬಲುಪ್ರಿಯ. ಉಣ್ಣೆ, ಚಿಗಟ, ಹೇನು, ಸೊಳ್ಳೆಗಳೇ ಮುಂತಾದ ಕೀಟಗಳ ಕಾಟದಿಂದ ತಪ್ಪಿಸಿಕೊಳ್ಳಲು ಕಾಲಾಂತರದಲ್ಲಿ ಅವು ಕಂಡ ಪ್ಲಾನ್‌ ಇದು. ನಮ್ಮ ತೋಟದಲ್ಲಿ ಹಂದಿಗಳಿಗೆ ಊಟವಿಲ್ಲದ ದಿನವೇ ಇಲ್ಲ. ಆದರೂ ಒಮ್ಮೊಮ್ಮೆ ಸಂಭವಿಸಿದ ಆಹಾರದ ಕೊರತೆಯ ಕಾರಣಕ್ಕೊ ಏನೋ ಹಂದಿಗಳು ತೆಂಗಿನ ಕಾಯಿ ಸುಲಿಯುವುದನ್ನು ಕಲಿತು ತಿನ್ನಲಾರಂಭಿಸಿವೆ. ಮೊದ ಮೊದಲು ತಮ್ಮ ಬುದ್ಧಿಯನ್ನೆಲ್ಲಾ ಖರ್ಚುಮಾಡಿ ಇಡೀ ರಾತ್ರಿ ಸುಲಿದ ಕಾಯಿಯನ್ನು ಒಡೆಯಲಾಗದೆ, ಅಷ್ಟೊತ್ತಿಗೆ ಬೆಳಗಾಗುತ್ತಿದ್ದ ಪರಿಣಾಮ ಆ ಸುಲಿದ ಕಾಯಿಯನ್ನು ಅಲ್ಲೇ ಬಿಟ್ಟು ಖಾಲಿ ಹೊಟ್ಟೆಯಲ್ಲಿ ತಮ್ಮ ತಾವಿಗೆ ಹಿಂದಿರುಗುತ್ತಿದ್ದವು. ನಾವು ಬೆಳಗ್ಗೆ ಎದ್ದು ತೋಟಕ್ಕೆ ಹೋದಾಗ ಅವು ಸುಲಿದು ಬಿಟ್ಟುಹೋದ ಈ ತರದ ನುಣ್ಣಗೆ ಬೋಳಿಸಿದ ಒಂಚೂರು ಗುಂಜಿಲ್ಲದ ಮೊಟ್ಟೆಯಂತಾ ಕಾಯಿಗಳು ಸಿಗುತ್ತದ್ದವು. ಆಗ ಅವುಗಳ ಬಗೆಗೆ ಪಾಪ ಎನಿಸುತ್ತಿತ್ತು. ಈ ಬಗೆಯ ಕಸರತ್ತಿನ ಬದಲು ಅವು ತಮ್ಮ ಮಾಮೂಲಿ ಆಹಾರವನ್ನು ಮಣ್ಣಿನಲ್ಲಿ ದೊಗೆದು ಹುಡುಕಿದ್ದರೆ ಆಗುತ್ತಿತ್ತಲ್ಲ ಎನಿಸುತ್ತಿತ್ತು. ಅವು ನೀರಿಗಾಗಿ ಬಾಳೆ ಕಂದುಗಳನ್ನು ಸಿಗಿದು ಹಾಕುವುದನ್ನು ನೋಡಿದರೆ ಅದು ಮನುಷ್ಯರ ವಿರುದ್ದದ ಕಾರ್ಯಾಚರಣೆಯಂತೆ ಗೋಚರಿಸುತ್ತದೆ.

ಆದರೆ ಇತ್ತೀಚೆಗೆ ಸದರಿ ಹಂದಿಗಳು ಕಾಯಿ ಸುಲಿದು ಕಷ್ಟಪಟ್ಟಾದರೂ ಒಡೆದು ತಿನ್ನುವ ಮೂಲಕ ಕಲೆ ಕಲಿತು ನಮ್ಮನ್ನು ಆಶ್ಚರ್ಯಗೊಳಿಸಿವೆ ಮತ್ತು ಚಿಂತೆಗೂ ಕಾರಣವಾಗಿವೆ. ಆ ಗವ್ವೆನ್ನು ಕತ್ತಲಲ್ಲಿ ತೆಂಗಿನ ಕಾಯಿಯ ಮೂರು ಕಣ್ಣುಗಳಲ್ಲಿ, ಮೊಳಕೆಯೊಡೆಯುವ ಮೆದು ಕಣ್ಣೆನ ಜಾಗ ಪತ್ತೆ ಮಾಡಿ ಅಲ್ಲಿಗೆ ಹಲ್ಲು ಹಾಕಿ ಮೀಟಿ ಒಡೆದು ತಿನ್ನುತ್ತವೆ ಎಂದರೆ ಹಸಿವೆಂಬುದು ಎಂಥಾ ಮಂತ್ರವಾದಿ ಎಂಬುದು ಅರಿವಿಗೆ ಬರುತ್ತದೆ. ಇದೀಗ ತೋಟದ ಯಾವ ಕಡೆಗೆ ಹೋದರೂ ಹಂದಿಗಳು ಬಿಟ್ಟು ಹೋದ ಗುಂಜು, ಚಿಪ್ಪುಗಳು ಇಟ್ಟಾಡಿರುವುದು ಕಾಣುತ್ತದೆ. ಆಗ ಕನಿಕರ ಈಗ ಸಿಟ್ಟು. ಹಂದಿ ಬೇಟೆಗಾರರು ನಮ್ಮ ತೋಟದತ್ತ ಸುಳಿದರೆ ಅವರನ್ನೀಗ ಬೈದು ಓಡಿಸುತ್ತಿಲ್ಲ.

ಮುಳ್ಳು ಹಂದಿಗಳ ಬಗೆಗೆ ಹೇಳದಿದ್ದರೆ, ತಪ್ಪಾಗುತ್ತದೆ. ಇವು ಯಾಕೋ ಸಂಖ್ಯೆಯಲ್ಲಿ ತೀರಾ ಕಡಿಮೆ ಇವೆ ಅನಿಸುತ್ತದೆ. ಚಿಕ್ಕಡಕವಾದ ಪ್ರಾಣಿಗಳಿವು. ನಮ್ಮ ತೋಟದ ಬೇಲಿಗುಚ್ಚಿಯ ನಾಲ್ಕಾರು ಕಡೆಗಳಲ್ಲಿ ತಮ್ಮ ಆಹಾರ ಸಂಸ್ಕರಣೆಯಲ್ಲಿ ತೊಡಗುತ್ತವೆ. ಗರಗಸದಲ್ಲೆಂಬಂತೆ ತೆಂಗಿನ ಕಾಯಿಯ ಸಿಪ್ಪೆಯನ್ನು ಸರಿಯಾಗಿ ಒಂದು ಇಂಚು ಉದ್ದ ಒಂದು ಇಂಚು ಅಗಲಕ್ಕೆ ಕತ್ತರಿಸಿ ಅಚ್ಚುಕಟ್ಟಾಗಿ ಗುಪ್ಪೆ ಹಾಕಿ ಗಟ್ಟಿಯಾದ ಚಿಪ್ಪನ್ನು ಹಾಗೆ ಚೂರು ಮಾಡಿ ಆಯಕಟ್ಟಿನಲ್ಲಿ ಕೂತು ಅಚ್ಚುಕಟ್ಟಾಗಿ ತಿಂದು ಹೋಗುತ್ತವೆ. ಈ ಮುಳ್ಳು ಹಂದಿಗಳು ಕಲಾಕಾರ ಜೀವಿಗಳೂ ಸಮಾಧಾನಿಗಳೂ ಹೌದು.

PC : vijaya karnataka

ಮುಳ್ಳು ಹಂದಿಗಳು ನಮಗೆ ಚಿಕ್ಕಂದಿನಲ್ಲೇ ಪರಿಚಯವಾಗಿದ್ದವು. ಮುಳ್ಳು ಹಂದಿಗಳು ಎನ್ನುವುದಕ್ಕಿಂತ ಅದರ ಮುಳ್ಳುಗಳು ಎಂದರೇ ಸರಿಯಾದೀತು. ಸುಮಾರು ಮುಕ್ಕಾಲು ಅಡಿ ಉದ್ದದ ಮುಳ್ಳಂದಿ ಮುಳ್ಳೊಂದನ್ನು ನಮ್ಮ ಹಿರಿಯ ಸ್ನೇಹಿತನೊಬ್ಬ ಅದು ಹೇಗೋ ಸಂಪಾದಿಸಿಕೊಂಡು ತಂದು ನಮಗೆ ತೋರಿಸುತ್ತಿದ್ದ. ಅವನು ಹೇಳುತ್ತಿದ್ದ ಪ್ರಕಾರ, ಅದನ್ನು ತನ್ನ ಎದುರು ಪಾರ್ಟಿಯವರ ವಿರುದ್ಧ ಒಂದಲ್ಲ ಒಂದು ದಿನ ಬಳಸುವುದಾಗಿಯೂ, ಅದರ ಚೂಪು ತುದಿ ಚರ್ಮದ ಒಳಕ್ಕೆ ಸ್ವಲ್ಪ ತಿವಿಯಲ್ಪಟ್ಟರೂ ಎದುರಾಳಿಯ ಸ್ಥಿತಿ ಖತಂ ಆಗುವುದು ಗ್ಯಾರಂಟಿ ಎಂದು ನಮ್ಮನ್ನು ಹೆದರಿಸುತ್ತಿದ್ದ. ಅಂದಿನಿಂದ ನಾವು ಕೆಲವು ಜನ ಗೆಳೆಯರು ಅವನಿಂದ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಯಿತು. ನಾನಂತೂ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡುವುದನ್ನು ಬಿಟ್ಟೆ.

ಮುಂದೊಂದು ದಿನ ಅವನ ಬಳಿ ಸದರಿ ಸಯನೈಡ್‌ ರೂಪಿ ಅಸ್ತ್ರವಿರುವುದು ಮೇಷ್ಟ್ರಿಗೆ ಗೊತ್ತಾಗಲಾಗಿ, ಅವನಿಗೆ ನಾಲ್ಕು ತದುಕಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವವರೆಗೂ ಅವನ ಆಟ ನಡೆಯುತ್ತಲೇ ಇತ್ತು. ಆ ಅಸ್ತ್ರವನ್ನು ಅವನು ತನ್ನ ಸಹಚರರಿಂದ ಇಂಕು, ಪೆನ್ನು, ಪೆನ್‌ಸಿಲ್, ಸೌತೆಕಾಯಿ, ಬೆಲ್ಲದುಂಡೆ, ಎರದೆಹಣ್ಣು, ಸೀಬೇ ಹಣ್ಣು ಮುಂತಾದುವುಗಳನ್ನು ಸುಲಿಗೆ ಮಾಡಲು ಬಳಸುತ್ತಿದ್ದ ವಿಷಯ ಆ ನಂತರದ ವಿಚಾರಣೆಯಿಂದ ಹೊರಬಂತು.

ಆದರೆ ಆ ಮುಳ್ಳಂದಿ ಮುಳ್ಳು ಅಷ್ಟು ಅಪಾಯಕಾರಿಯಲ್ಲವೆಂಬುದು ನಮಗೆ ತಡವಾಗಿ ತಿಳಿಯಿತು. ಆ ಪುಟ್ಟ ಅಮಾಯಕ ಪ್ರಾಣಿ ತನ್ನ ರಕ್ಷಣೆಗಾಗಿ ಪಡೆದುಕೊಂಡ ರಕ್ಷಾ ಕವಚ ಅದಾಗಿತ್ತು. ಆಗಾಗ ಈಗಲೂ ನಮಗೆ ಎಲ್ಲೋ ಒಂದೊಂದು ಮುಳ್ಳು ಸಿಗುತ್ತವೆ. ಕಾಡು ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸ್ನೇಹಸೇತುವಾಗಿ ಅವುಗಳನ್ನು ಇಟ್ಟುಕೊಳ್ಳುವುದು ಖುಷಿ ಎನಿಸುತ್ತವೆ.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-5: ಗೊಬ್ಬರೋತ್ಪಾದಕ ಗೆದ್ದಲುಗಳಿಗೊಂದು ಸಲಾಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...