Homeಕರ್ನಾಟಕಇಡಬ್ಲ್ಯೂಎಸ್‌ ಜಾರಿಗೆ ಯಾವ ಉಪಸಮಿತಿ ಮಾಡಿದ್ರಿ?: ಒಳಮೀಸಲಾತಿ ಹೋರಾಟದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ವಾಗ್ದಾಳಿ

ಇಡಬ್ಲ್ಯೂಎಸ್‌ ಜಾರಿಗೆ ಯಾವ ಉಪಸಮಿತಿ ಮಾಡಿದ್ರಿ?: ಒಳಮೀಸಲಾತಿ ಹೋರಾಟದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ವಾಗ್ದಾಳಿ

- Advertisement -
- Advertisement -

“ಮೂರು ಪರ್ಸೆಂಟ್ ಇರುವ ಮೇಲ್ಜಾತಿಯವರಿಗೆ ಹತ್ತು ಪರ್ಸೆಂಟ್ (ಇಡಬ್ಲ್ಯೂಎಸ್) ಮೀಸಲಾತಿ ನೀಡಲು ಯಾವ ಉಪಸಮಿತಿ ಮಾಡಿದ್ರಿ, ಯಾವ ಆಯೋಗ ವರದಿ ನೀಡಿತ್ತು?” ಎಂದು ಉರಿಲಿಂಗಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಪ್ರಶ್ನಿಸಿದರು.

ಪುನಾರಂಭಗೊಂಡಿರುವ ಒಳಮೀಸಲಾತಿ ಹೋರಾಟ 30ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಆಗಮಿಸಿ, ಹೋರಾಟವನ್ನು ಉದ್ದೇಶಿಸಿ ಅವರು ಮಾತನಾಡಿದರು.

“ನಮ್ಮ ಸಮುದಾಯಗಳನ್ನು ಒಡೆದು ಆಳುವ ಷಡ್ಯಂತ್ರ ನಡೆಯುತ್ತಿರುವುದು ನಮಗೆ ತಿಳಿದಿದೆ. ಮತಕ್ಕಾಗಿ ನಮ್ಮನ್ನು ಛಿದ್ರ ಛಿದ್ರ ಮಾಡಿದ್ದಾರೆ. ನಾವು ಯಾರ ತಟ್ಟೆಗೂ ಕೈ ಹಾಕುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆಯಾಗಬೇಕು ಎಂಬುದು ಸಂವಿಧಾನ ಹಾಗೂ ಬಾಬಾ ಸಾಹೇಬ್‌ ಅಂಬೇಡ್ಕರರ ಆಶಯ. ಉಪಸಮಿತಿ ರಚಿಸಿರುವುದಾಗಿ ಹೇಳುತ್ತಾರೆ. ಆದರೆ ಹತ್ತು ಪರ್ಸೆಂಟ್ ಮೀಸಲಾತಿ ಜಾರಿಗೆ ಯಾವ ಉಪಸಮಿತಿ ಮಾಡಿದ್ದರು? ಯಾವ ಆಯೋಗ ಮಾಡಿದ್ದರು? ಯಾವ ವರದಿ ಪಡೆದಿದ್ದರು? ಹೇಗೆ ಇಡಬ್ಲ್ಯೂಎಸ್‌ ಜಾರಿಯಾಯಿತು?” ಎಂದು ಕೇಳಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಸಂವಿಧಾನ ಜಾರಿಗೊಳಿಸುವ ಜಾಗದಲ್ಲಿ ನಾವಿಲ್ಲ. ನಮ್ಮ ಪ್ರತಿನಿಧಿಗಳಾಗಿ ಹೋದವರು ಬಾಯಿ ಕಟ್ಟಿದ ನಾಯಿಗಳಾಗಿ ಕೂತಿದ್ದಾರೆ. ನಾವಿಲ್ಲಿ ಟೆಂಟ್ ಹಾಕಿಕೊಂಡು ಧಿಕ್ಕಾರ ಕೂಗುತ್ತಿದ್ದೇವೆ. ನಮ್ಮನ್ನು ಒಡೆದು ಆಳುತ್ತಿದ್ದಾರೆ. ಜಲ್ಲಿ, ಸಿಮೆಂಟ್, ಕಬ್ಬಿಣ, ನೀರು- ಎಲ್ಲವನ್ನು ಬೇರ್ಪಡಿಸಿ ಕಾಂಕ್ರೀಟ್ ಮಾಡಲು ಸಾಧ್ಯವೇ? ಜೇನು ನೊಣಗಳಂತೆ ಒಂದಾಗಿ” ಎಂದು ಸಂದೇಶ ನೀಡಿದರು.

“ಗ್ರಾಮ ಪಂಚಾಯಿತಿ ಮೆಂಬರ್‌ ಕೂಡ ಆಗಲು ಸಾಧ್ಯವಿಲ್ಲದಂತಹ ಬುಡುಬುಡಕೆ, ದೊಂಬಿದಾಸ, ಶಿಳ್ಳೆಕ್ಯಾತರಿದ್ದಾರೆ. ಅವರಿಗೆಲ್ಲರಿಗೂ ಪ್ರಾತಿನಿಧ್ಯ ಕೊಡಬೇಕು. ಆದರೆ ಮೆಜಾರಿಟಿ ಇಲ್ಲದ ಬ್ರಾಹ್ಮಣರು 127 ಮಂದಿ ಎಂಪಿಗಳನ್ನು ಹೊಂದಿದ್ದಾರೆ. ಅವರನ್ನು ಗೆದ್ದು ಕಳಿಸಿದ್ದು ಯಾರು? ನಿಮ್ಮ ಹೆಗಲ ಮೇಲೆ ಕಾಲುಗಳನ್ನು ಇಟ್ಟುಕೊಂಡು ನಿಂತಿದ್ದಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವೆಲ್ಲ ಅವರ ಹಿಡಿತದಲ್ಲಿವೆ. ಹೀಗಾಗಿ ಹತ್ತು ಪರ್ಸೆಂಟ್ ಮೀಸಲಾತಿ ಒಂದೇ ದಿನದಲ್ಲಿ ಮಾಡಿಕೊಳ್ಳುತ್ತಾರೆ. ಯಾಕೆಂದರೆ ಅವರ ಬಳಿ ಅಧಿಕಾರವಿದೆ. ಅಂಬೇಡ್ಕರ್‌ರವರು ಹೇಳಿದಂತೆ ಅಧಿಕಾರ ಹೀನತೆಯೇ ಅಸ್ಪೃಶ್ಯತೆ” ಎಂದು ಅಭಿಪ್ರಾಯಪಟ್ಟರು.

“ಒಂದೇ ದಿನದಲ್ಲಿ ಹತ್ತು ಪರ್ಸೆಂಟ್ ಮೀಸಲಾತಿ ಜಾರಿಗೊಳಿಸಿದಂತೆ ಒಳಮೀಸಲಾತಿ ಜಾರಿಗೊಳಿಸಿ. ಸುಗ್ರೀವಾಜ್ಞೆ ಮೂಲಕ ಜಾರಿಗೆ ತನ್ನಿರಿ. ಆಜಾದಿ ಕಾ ಅಮೃತ ಮಹೋತ್ಸವ ಎನ್ನುತ್ತಿದ್ದಾರೆ. ಯಾರಿಗೆ ಅಮೃತ? ಆರು ನಿಮಿಷಕ್ಕೊಮ್ಮೆ ದಲಿತ ಹೆಣ್ಣುಮಕ್ಕಳ ರೇಪ್ ಆಗುತ್ತಿದೆ. ಎಂಟು ನಿಮಿಷಕ್ಕೊಂದು ಗುಡಿಸಲಿಗೆ ಬೆಂಕಿ ಬೀಳುತ್ತಿದೆ, ಅರವತ್ತು ಸಾವಿರ ವಿದ್ಯಾರ್ಥಿಗಳ ಸ್ಕಾಲರ್‌ ಶಿಪ್ ಬಂದ್‌ ಆಗಿದೆ, ಏಳು ಸಾವಿರ ವಿದ್ಯಾರ್ಥಿಗಳ ಪಿಎಚ್‌.ಡಿ ಬಂದ್ ಆಗಿದೆ, ಬೈಕ್‌ ರೈಡ್ ಮಾಡಿದ್ದಕ್ಕೆ ದಲಿತ ವಿದ್ಯಾರ್ಥಿಗೆ ಕೋಲಾರದಲ್ಲಿ ಥಳಿಸಿದ್ದಾರೆ, ಇದಕ್ಕೆಲ್ಲ ಯಾರು ಉತ್ತರ ಕೊಡಬೇಕು” ಎಂದು ಮಾರ್ಮಿಕವಾಗಿ ನುಡಿದರು.

“ಜಾತಿ ಜಾತಿಗಳ ನಡುವೆ ಒಡಕುಗಳು ಬೇಡ. ಎಸ್.ಸಿ., ಎಸ್‌.ಟಿ. ಸ್ವಾಮೀಜಿಗಳು ಏಕೆ ಒಂದಾಗಬೇಕು ಎಂಬ ವಿಷಯವನ್ನಿಟ್ಟುಕೊಂಡು 31 ಜಿಲ್ಲೆಗಳಲ್ಲೂ ಹೋರಾಟ ಮಾಡುತ್ತಿದ್ದೇವೆ. ಪರಿಶಿಷ್ಟ ಜನಾಂಗದ ಸ್ವಾಮೀಜಿಗಳನ್ನೇ ಒಡೆಯಬೇಕೆಂದು ಹೊರಟಿದ್ದಾರೆ. ಒಂದಿಷ್ಟು ಸಮುದಾಯದ ಸ್ವಾಮೀಜಿಗಳನ್ನು ಎತ್ತಿಕಟ್ಟಿ ನಮ್ಮ ವಿರುದ್ಧ ಬಿಟ್ಟಿದ್ದಾರೆ. ನಾವು ಯಾರೂ ವಿಚಲಿತರಾಗಿಲ್ಲ. ನಾವು ಒಗ್ಗಟ್ಟಿನಿಂದ ಇದ್ದೇವೆ. ನಾಲ್ಕು ವಿಭಾಗೀಯ ಸಮಾವೇಶ ಮಾಡುತ್ತೇವೆ, ದಲಿತ ಮುಖಂಡರೆಲ್ಲ ಅದರಲ್ಲಿ ಪಾಲ್ಗೊಳ್ಳಿದ್ದಾರೆ” ಎಂದು ಗುಡುಗಿದರು.

ನಮ್ಮ ಪಾಲು ಕೇಳಲು ದೊಣ್ಣೆನಾಯಕನ ಅಪ್ಪಣೆ ಬೇಕಿಲ್ಲ: ಮಾವಳ್ಳಿ ಶಂಕರ್‌

ಹಿರಿಯ ದಲಿತ ಮುಖಂಡರಾದ ಮಾವಳ್ಳಿ ಶಂಕರ್‌ ಮಾತನಾಡಿ, “ಯಾರ ಪಾಲನ್ನು ನಾವು ಕಿತ್ತುಕೊಳ್ಳುತ್ತಿಲ್ಲ, ಯಾರ ಆಸ್ತಿಗೂ, ತಟ್ಟೆಗೂ ಕೈಹಾಕಿಲ್ಲ. ಹಿಂದುಳಿದ ಜಾತಿಗಳಿಗೆ ಮೀಸಲಾತಿ ವರ್ಗೀಕರಣ ಮಾಡಲು ಸಾಧ್ಯವಾದರೆ ಪರಿಶಿಷ್ಟ ಜಾತಿಯಲ್ಲಿ ಏಕೆ ಸಾಧ್ಯವಾಗುತ್ತಿಲ್ಲ? ನಮ್ಮ ಪಾಲನ್ನು ನಾವು ಕೇಳೋದಕ್ಕೆ ಯಾವುದೇ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎ.ಜೆ.ಸದಾಶಿವ ಆಯೋಗದ ಜಾರಿಗಾಗಿ ನಡೆದ ಹೋರಾಟದಲ್ಲಿ ಪಾಲ್ಗೊಂಡು ಮಾವಳ್ಳಿ ಶಂಕರ್‌ ಮಾತನಾಡಿದರು.

“ಒಳಮೀಸಲಾತಿ ಕುರಿತು ಚರ್ಚೆ ಮಾಡುತ್ತಿರುವಾಗ ಖಾಸಗೀಕರಣ ಹೆಚ್ಚಾಗಿರುವುದನ್ನು ಪ್ರಸ್ತಾಪಿಸುತ್ತಾರೆ. ಅದರ ವಿರುದ್ಧ ಹೋರಾಟ ಮಾಡುವುದು ಹೇಗೆಂದು ಬಾಬಾ ಸಾಹೇಬರ ಅನುಯಾಯಿಗಳಿಗೆ ಗೊತ್ತಿದೆ. ಆದರೆ ಖಾಸಗೀಕರಣವನ್ನು ತೋರಿಸಿ, ಈ ಹೋರಾಟವನ್ನು ತಡೆಯಬಾರದು” ಎಂದು ಎಚ್ಚರಿಕೆ ನೀಡಿದರು.

“ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲಿ ಹೇಡಿಗಳು ಗೆದ್ದು ಬರುತ್ತಿದ್ದಾರೆ. ಅವರೆಲ್ಲ ಈ ಸಮುದಾಯವನ್ನು ಪ್ರತಿನಿಧಿಸಿ ಮೇಲ್ಜಾತಿಯ ಗುಲಾಮಗಿರಿ ಮಾಡದಿದ್ದರೆ ಒಳಮೀಸಲಾತಿ ದೊಡ್ಡ ಪ್ರಶ್ನೆಯೇ ಆಗುತ್ತಿರಲಿಲ್ಲ. ರಾಜಕೀಯ ಅಧಿಕಾರಕ್ಕಾಗಿ ಬೇರೆಯವರ ಜೀತ ಮಾಡಿದರೆ ಸಮುದಾಯ ಹಿಂದುಳಿಯುತ್ತದೆ. ಬಾಬಾ ಸಾಹೇಬರ ಆಶಯದಂತೆ ಪ್ರತ್ಯೇಕ ಮತದಾನದ ಹಕ್ಕು ನಮಗೆ ಸಿಕ್ಕಿದ್ದರೆ ನಮ್ಮ ಕಾಲ ಬುಡಕ್ಕೆ ಮೇಲ್ಜಾತಿಗಳು ಬರುತ್ತಿದ್ದವು. ಪರಿಶಿಷ್ಟ ರಾಜಕಾರಣಗಳು ಒಳಮೀಸಲಾತಿ ಪರ ಮಾತನಾಡಲು ಸಾಧ್ಯವಾಗುತ್ತಿಲ್ಲ. ದಲಿತ ರಾಜಕಾರಣಿಗಳು ಮೇಲ್ಜಾತಿಗಳ ಮರ್ಜಿಗೆ ಬಿದ್ದಿದ್ದಾರೆ” ಎಂದು ವಿಷಾದಿಸಿದರು.

ಒಳಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ದಲಿತ ಹೋರಾಟಗಾರ ಅಂಬಣ್ಣ ಅರೋಲಿಕರ್ ಮಾತನಾಡಿ, “ಈ ಮೂವತ್ತು ವರ್ಷದ ಹೋರಾಟದಲ್ಲಿ ಹಲವಾರು ನಾಯಕರು ಸತ್ತಿದ್ದಾರೆ, ಜೈಲಿಗೆ ಹೋಗಿದ್ದಾರೆ, ನೌಕರಿ ಬಿಟ್ಟಿದ್ದಾರೆ, ಲಾಠಿ ಏಟು ತಿಂದಿದ್ದಾರೆ- ಯಾವುದೇ ಕಾರಣಕ್ಕೂ ಒಂದು ದಿನಕ್ಕೆ ಮಾತ್ರ ಹೋರಾಟ ಸೀಮಿತಗೊಳಿಸಬಾರದು ಎಂದು ಭೀಮ ಸೈನಿಕರು ಎಚ್ಚರಿಕೆ ಕೊಟ್ಟು ನಮ್ಮನ್ನು ಕಳಿಸಿದ್ದಾರೆ. ಹೀಗಾಗಿ ಹೋರಾಟ ಮುಂದುವರಿಸಿದೆ. ನವೆಂಬರ್‌ ತಿಂಗಳಿನಿಂದ ನಿರಂತರ ಹೋರಾಟ ನಡೆಯುತ್ತಿದೆ. ಡಿಸೆಂಬರ್‌ 11ರಿಂದ ಬೆಂಗಳೂರಿನಲ್ಲಿ ಹೋರಾಟ ಜರುಗಿದೆ” ಎಂದರು.

“ಒಂದು ಸಂಘಟನೆ, ಒಂದು ಸಮುದಾಯ ಈ ಹೋರಾಟದ ಮುಂದಾಳತ್ವ ವಹಿಸಿತ್ತು. ಆದರೆ ಎಲ್ಲ ಜಾತಿಗಳು ಈ ಚಳವಳಿಯ ಭಾಗವಾಗಬೇಕೆಂದು ನಿರಂತರ ಚರ್ಚೆಗಳು ನಡೆಸಿದ್ದೇವೆ. ಎಲ್ಲ ಸಮುದಾಯಗಳು ಒಳಗೊಂಡಿದ್ದರಿಂದ ನಮ್ಮ ಟೈಟಲ್‌ ಬದಲಾಗಿದೆ, ನಡೆ, ನುಡಿ, ವರ್ತನೆ ಬದಲಾಗಿದೆ. ಎಲ್ಲ ರೀತಿಯಲ್ಲೂ ನಮ್ಮ ಹೋರಾಟ ವಿಸ್ತರಣೆಯಾಗಿದೆ. ಮೂರು ಪಕ್ಷಗಳು ಮಾತನಾಡುವಂತಾಗಿದೆ. ಇದು ರಾಜಕೀಯೇತರ ಚಳವಳಿ” ಎಂದು ಸ್ಪಷ್ಟಪಡಿಸಿದರು.

ದಲಿತ ಹೋರಾಟಗಾರರಾದ ಬಿ.ಗೋಪಾಲ್ ಮಾತನಾಡಿ, “ಯಾರದೇ ಮೀಸಲಾತಿಯನ್ನು ಕಿತ್ತುಹಾಕುವ ಪ್ರಸ್ತಾವನ್ನು ಯಾರೂ ಮಾಡಿಲ್ಲ. ಮಾಡಲೂಬಾರದು” ಎಂದು ಆಶಿಸಿದರು.

ಒಳಮೀಸಲಾತಿ ಜಾರಿಗಾಗಿ ನಡೆಯುತ್ತಿರುವ ಹೋರಾಟ 30ನೇ ದಿನಕ್ಕೆ ಕಾಲಿಟ್ಟಿದೆ.

ಹೋರಾಟದಲ್ಲಿ ದಲಿತ ಮುಖಂಡರಾದ ಎನ್.ವೆಂಕಟೇಶ್, ಹೆಣ್ಣೂರು ಶ್ರೀನಿವಾಸ್, ಬಸವರಾಜ ಕೌತಾಳ್, ಮೋಹನ್ ರಾಜ್, ಹೆಣ್ಣೂರು ಲಕ್ಷ್ಮೀನಾರಾಯಣ್, ಡಿ.ಶಿವಶಂಕರ್, ಕನಕಪುರ ಬಿ.ಶಿವಣ್ಣ, ಶಿವರಾಜ ಯಕ್ಕರಕಿ, ಗುರುಮೂರ್ತಿ, ಶಿವಸುಂದರ್, ಗೌರಿ ಜನಶಕ್ತಿ, ನಾಗಮಣಿ, ಸವಿತಾ, ಹ.ರಾ.ಮಹೇಶ್, ಸೂಲಿಕುಂಟೆ ರಮೇಶ್, ಗಣೇಶ್ ಮೇತ್ರಿ, ಕಮಲಾನಗರ ಚಿಕ್ಕಣ್ಣ, ರಾಜಗೋಪಾಲ್, ಹನುಮೇಗೌಡ, ಕರಿಯಪ್ಪ ಗುಡಿಮನಿ, ವೇಣುಗೋಪಾಲ್ ಮೌರ್ಯ, ಹನುಮೇಶ್ ಗುಂಡೂರು, ಡಿಬಿಎಂ ವೆಂಕಟೇಶ್, ಕೋದಂಡರಾಮ್, ಹೆಗ್ಗನಹಳ್ಳಿ ಮೂರ್ತಿ, ಕನಕೇನಹಳ್ಳಿ ಕೃಷ್ಣ, ಡಾ.ರವಿಕುಮಾರ್ ಬಾಗಿ, ಹಾಡುಗಾರರಾದ ಕೆ.ಎನ್.ನಾಗೇಶ್, ಸಬ್ಬನಹಳ್ಳಿ ರಾಜು, ಪ್ರಶಾಂತ್ ದಾನಪ್ಪ, ಸುಧಾಕರ್, ಸಿದ್ದಯ್ಯ, ಎಲ್.ವಿ.ಸುರೇಶ್, ಮೌನೇಶ್ ದೇವತೆಗಲ್, ಮೌಲಪ್ಪ ಐಹೊಳೆ, ಹನುಮೇಶ್ ಬೇರಿ, ಎಂ.ಡೇವಿಡ್ ಸಿರವಾರ, ಎಸ್.ಎಚ್.ನಾಗೇಶ್ ಮೊದಲಾದವರು ಪಾಲ್ಗೊಂಡಿದ್ದರು.

ಇದನ್ನೂ ಓದಿರಿ: ಮಾಂಸಾಹಾರದ ಮೇಲೆ ಮತ್ತೆ ಪ್ರಹಾರ: ಮಠಾಧೀಶರ ಸಲಹೆಗಳಿಗೆ ತೀವ್ರ ವಿರೋಧ

ಲಂಬಾಣಿ, ಭೋವಿ ಸಮುದಾಯ ಬೃಹತ್‌ ಪ್ರತಿಭಟನೆ

ಭೋವಿ, ಲಂಬಾಣಿ ಮುಖಂಡರು ಮುಂಚೂಣಿಯಲ್ಲಿರುವ ‘ಕರ್ನಾಟಕ ಮೀಸಲಾತಿ ಸಂರಕ್ಷಣ ಒಕ್ಕೂಟದ ನೇತೃತ್ವ’ದಲ್ಲಿ ಅದೇ ಫ್ರೀಡಂ ಪಾರ್ಕ್‌‌ನಲ್ಲಿ ಬೃಹತ್ ಹೋರಾಟ ಜರುಗಿತು.

ಎ.ಜೆ.ಸದಾಶಿವ ಆಯೋಗದ ವರದಿಯನ್ನು ತರಾತುರಿಯಲ್ಲಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬಾರದು ಎಂಬುದು ಒಕ್ಕೂಟದ ಆಗ್ರಹವಾಗಿತ್ತು. ಎರಡು ಭಿನ್ನ ನಿಲುವಿನ ಹೋರಾಟಗಳು ಒಂದೇ ಸ್ಥಳದಲ್ಲಿ ಜರುಗಿದ್ದರಿಂದ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಒಂದು ಸಾವಿರ ಪೊಲೀಸರು ಸ್ಥಳದಲ್ಲಿ ಜಮಾಯಿಸಿದ್ದರು. ಎ.ಜೆ.ಸದಾಶಿವ ಆಯೋಗದ ಪರ ನಡೆಯುತ್ತಿರುವ 30ನೇ ದಿನದ ಹೋರಾಟದ ಸ್ಥಳಕ್ಕೆ ಹೋಗುವವರನ್ನು ಪರಿಶೀಲಿಸಿ ಬಿಡಲಾಗುತ್ತಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈಗಾಲಾದರೂ ಸನಾತನಿ ಬ್ರಾಹ್ಮಣ್ಯದ ಎದುರು ಗಟ್ಟಿಯಾಗಿ ಮಾತಾಡುತ್ತದ್ದಾರಲ್ಲಾ?,🙏

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....