Homeಕರ್ನಾಟಕಮಾಂಸಾಹಾರದ ಮೇಲೆ ಮತ್ತೆ ಪ್ರಹಾರ: ಮಠಾಧೀಶರ ಸಲಹೆಗಳಿಗೆ ತೀವ್ರ ವಿರೋಧ

ಮಾಂಸಾಹಾರದ ಮೇಲೆ ಮತ್ತೆ ಪ್ರಹಾರ: ಮಠಾಧೀಶರ ಸಲಹೆಗಳಿಗೆ ತೀವ್ರ ವಿರೋಧ

- Advertisement -
- Advertisement -

ರಾಜ್ಯದಲ್ಲಿ ಮಾಂಸಾಹಾರದ ಕುರಿತು ಚರ್ಚೆ ಮತ್ತೆ ಭುಗಿಲೆದ್ದಿದೆ. ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣ ಶಿಕ್ಷಣವನ್ನು ಅನುಷ್ಠಾನಗೊಳಿಸುವುದರ ಕುರಿತು ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮಠಾಧೀಶರು ಮಾಂಸಾಹಾರದ ಮೇಲೆ ಮತ್ತೆ ಪ್ರಹಾರ ನಡೆಸಿದ್ದಾರೆ. ಮಕ್ಕಳಿಗೆ ಸಾತ್ವಿಕ ಆಹಾರ ನೀಡಬೇಕು, ಅಂಗಡಿಗಳ ಮುಂದೆ ಮಾಂಸ ನೇತು ಹಾಕುವುದನ್ನು ಬ್ಯಾನ್ ಮಾಡಬೇಕೆಂಬ ಆಗ್ರಹಗಳು ಕೇಳಿಬಂದಿವೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಕಂಡುಬಂದಿದೆ.

ಸಭೆಯಲ್ಲಿ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, “ಆಹಾರಕ್ಕೂ ವ್ಯಕ್ತಿತ್ವಕ್ಕೂ ಸಂಬಂಧವಿದೆ.  ಕೆಲವು ಆಹಾರಗಳು ಮಕ್ಕಳಲ್ಲಿ ನಕರಾತ್ಮಕ ಮನೋಭಾವ ಬೆಳೆಸುತ್ತವೆ. ಹಾಗಾಗಿ ಮಕ್ಕಳಿಗೆ ಸಾತ್ವಿಕ ಆಹಾರ ನೀಡಬೇಕು ಮತ್ತು ಭಗವದ್ಗೀತೆಯನ್ನು ಮುಕ್ತವಾಗಿ ಬೋಧಿಸಬೇಕು” ಎಂದು ಪ್ರತಿಪಾದಿಸಿದ್ದಾರೆ.

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, “ಮಕ್ಕಳ ಮೇಲೆ ಹಿಂಸೆಯ ಪ್ರಭಾವವನ್ನು ಕಡಿಮೆ ಮಾಡಬೇಕು. ಹಾಗಾಗಿ ಮಕ್ಕಳ ಮುಂದೆ ಪ್ರಾಣಿವಧೆ ಮಾಡಬಾರದು ಮತ್ತು ಅಂಗಡಿಗಳ ಮುಂದೆ ಮಾಂಸ ನೇತುಹಾಕಬಾರದು ಅಥವಾ ಅದನ್ನು ಮುಚ್ಚಬೇಕು ಎಂದು ಸಲಹೆ ನೀಡಿದ್ದಾರೆ.

ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿರುವ ಸಂದರ್ಭದಲ್ಲಿ ಮಾಂಸಾಹಾರದಂತಹ ಪೌಷ್ಠಿಕ ಆಹಾರದ ಮೇಲಿನ ಸ್ವಾಮೀಜಿಗಳ ಪ್ರಹಾರವನ್ನು ಹಲವಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಖಂಡಿಸಿದ್ದಾರೆ.

“ಬುದ್ಧನೂ, ರಾಮನೂ, ಕೃಷ್ಣನೂ, ಬಾಬಾ ಸಾಹೇಬರೂ, ವಿವೇಕರೂ ತಿಂದದ್ದು ನೀವು ಹೇಳುವ ಸಾತ್ವಿಕ ಆಹಾರ ಅಲ್ಲ!” ಅಂತ ನಿಮ್ಮ ಮಠಗಳಿಗೊಂದು ಮೈಲ್ ಹಾಕಬೇಕು. ಐಡಿ ಕಳಿಸಿ ಸ್ವಾಮಿಗೋಳೇ! ಹಂಗೇ, “ಹೆಣ್ಮಕ್ಕಳನ್ನು ಹರಿದು ತಿಂದ, ಕಪ್ಪುಹಣ ಬಚ್ಚಿಡುವ, ಸಾವುಗಳನ್ನು ಮುಚ್ಚಿಡುವ ಕಾವಿಗಳ ಆಹಾರ- ಶುದ್ಧ ಸಾತ್ವಿಕವಾದುದೇ!” ಅಂತ ತಿಳಿಸಿ ನಿಮಗೊಂದು ವಾಟ್ಸಾಪೂ ಮಾಡಬೇಕಿದೆ. ನಂಬರೂ ಕಳಿಸಿ ಸ್ವಾಮಿಗೋಳೇ! ಎಂದು ಖ್ಯಾತ ವ್ಯಂಗ್ಯಚಿತ್ರಕಾರ ದಿನೇಶ್ ಕುಕ್ಕಜಡ್ಕ ವ್ಯಂಗ್ಯವಾಡಿದ್ದಾರೆ.

ತೊಂಬತ್ತು ಭಾಗ ಜನರು ತಿನ್ನುವ ಆಹಾರವನ್ನು ತೆಗಳ್ತಾರಲ್ಲ! ಇವರುಗಳು ಸೈಕೊಗಳಿಗಿಂತ ಕ್ರೂರ ಎಂದು ಸಾಮಾಜಿಕ ಕಾರ್ಯಕರ್ತ ವಿ.ಎಲ್ ಬಾಲು ಕಿಡಿಕಾರಿದ್ದಾರೆ.

ಮೌಲಿಕ ಶಿಕ್ಷಣದ ಬಗ್ಗೆ ಶೈಕ್ಷಣಿಕ ತಜ್ಞರ ಸಲಹೆ ಪಡೆಯಬೇಕಿದ್ದ ಸರ್ಕಾರವು ಮಠಾಧೀಶರ ಸಲಹೆಗಳನ್ನು ಪಡೆಯುತ್ತಿರುವುದು ಹಾಸ್ಯಾಸ್ಪದ ಇದರಲ್ಲಿ ಪೇಜಾವರ ಮಠದ ಸ್ವಾಮೀಜಿಯು ಮಾಂಸಹಾರದ ಬಗ್ಗೆ ಅಸಹನೆ ತೋರುವುದನ್ನೇ ಮೌಲ್ಯ ಎಂದಿದ್ದರೆ ಇನ್ನೊಬ್ಬ ಮಹಾಶಯರು ಪುನರ್ಜನ್ಮದ ಬಗ್ಗೆ ತಿಳಿಸಿಕೊಡಿ ಎಂದು ಹೇಳಿರುತ್ತಾರೆ ಇವು ಮೌಲಿಕ ಶಿಕ್ಷಣದ ಸಲಹೆಗಳೇ? ಎಂದು ಮಾಜಿ ಸಚಿವ ಡಾ.ಎಚ್.ಸಿ ಮಹಾದೇವಪ್ಪ ಟ್ವೀಟ್ ಮಾಡಿದ್ದಾರೆ.

RSS ನ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ರಾಜ್ಯ ಸರ್ಕಾರವು RSS ಗೆ ಬೇಕಾದ ಆಹಾರ ವಿರೋಧಿಯಾದ, ಮೌಢ್ಯತೆಯಿಂದ ಕೂಡಿದ, ಕೋಮುವಾದಿ ಪಠ್ಯಗಳನ್ನು ರೂಪಿಸುವ ದುರುದ್ದೇಶವನ್ನು ಹೊಂದಿ ಅದಕ್ಕೆ ತಕ್ಕನಾದ ರೀತಿಯಲ್ಲಿ ಅಭಿಪ್ರಾಯಗಳನ್ನು ಸಂಗ್ರಹ ಮಾಡಿಸಿದೆ. ಇದನ್ನೆಲ್ಲಾ ಮೌಲಿಕ ಸಲಹೆಗಳು ಎಂದು ಒಪ್ಪಲು ಆದೀತೇ? ಎಂದು ಅವರು ಪ್ರಶ್ನಿಸಿದ್ದಾರೆ.

ನಮ್ಮೂರ ಮಾರಿ ಜಾತ್ರೆಯಲ್ಲಿ ಪ್ರತಿ ಮನೆಯಿಂದ ಬರುವ ಮಾಂಸದ ಆಮ್ರದ ಪರಿಮಳದಲ್ಲಿ ನಾನು ಅನುಭವಿಸಿದ ಸಾತ್ವಿಕತೆಯ ಭಾವನೆಯನ್ನು… ಇನ್ಯಾವ ಸಂರ್ಭದಲ್ಲೂ ಅನುಭವಿಸಿಲ್ಲ…
ನನ್ನ ಆಹಾರ ನನ್ನ ಹಕ್ಕು ಎಂದು ಅಕ್ಷತಾ ಹುಂಚದಕಟ್ಟೆಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರೆಕ್ಟಾಗಿ ಹೇಳಿದಾರೆ! ಸಾತ್ವಿಕ ಆಹಾರ ಅಂದರೆ ಸತ್ವಯುತ ಆಹಾರ! ಅಂದರೆ ಮೊಟ್ಟೆ, ಮಾಂಸ ಇತ್ಯಾದಿ! ಎಂದು ಚಿಂತಕ ಸುರೇಶ್ ಕಂಜರ್ಪಣೆ ತಿಳಿಸಿದ್ದಾರೆ.

ಮಾಂಸದ ಅಂಗಡಿ ಮುಂದೆ ಮಾಂಸ ನೋಡಿದ್ರೆ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಆದ್ರೆ ಮಠಗಳಲ್ಲಿ ನೀವು ಮಾಡೋ ಪಂಕ್ತಿ ಭೇದ, ಜಾತಿ ಭೇದ ಮಾಡೋದ್ರಿಂದ ಮಕ್ಕಳ ಮನಸ್ಸಿನ ಮೇಲೆ ಯಾವ ಕೆಟ್ಟ ಪರಿಣಾಮ ಬೀರಲ್ಲ ಅಲ್ವಾ ಸ್ವಾಮ್ಗಳೇ ಎಂದು ರಘುನಂದನರವರು ಪ್ರಶ್ನಿಸಿದ್ದಾರೆ.

ಮಾಂಸಾಹಾರವನ್ನು ಕನಿಷ್ಟಗೊಳಿಸಿ ನೋಡುವ, ಸಾತ್ವಿಕ ಆಹಾರವೇ ಉತ್ತಮ ಎಂದು ಪ್ರತಿಪಾದಿಸುವ ಶ್ರೇ‍ಷ್ಠತೆಯ ವ್ಯಸನ ನಿಲ್ಲಬೇಕೆಂದು ಹಲವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ; ದೇವರಿಗೆ ಮಾಂಸಾಹಾರದ ಎಡೆ: ಚಾರಿತ್ರಿಕ, ಜಾನಪದೀಯ ಅಧ್ಯಯನಗಳು ಹೇಳುವುದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read