ಬೆಂಗಳೂರಿನ ನಾಗವಾರ ರಿಂಗ್ ರೋಡ್ನ ಎಚ್ಬಿಆರ್ ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಒಂದರ ಕಬ್ಬಿಣದ ರಾಡ್ ಕುಸಿದು ತಾಯಿ ಹಾಗೂ ಮಗು ಮೃತಪಟ್ಟಿರುವ ದುರ್ಘಟನೆ ಜರುಗಿದೆ.
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಕಾಮಗಾರಿ ನಡೆಯುತ್ತಿರುವಾಗ ಪಿಲ್ಲರ್ಗೆ ನಿಲ್ಲಿಸಿದಂತಹ ರಾಡ್ಗಳು ಏಕಾಏಕಿ ರಸ್ತೆಗೆ ಬಿದ್ದಿವೆ. ಅದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ತೇಜಸ್ವಿನಿ ಮತ್ತು ಅವರ ಪತಿ ಹಾಗೂ ಮಕ್ಕಳು ಅಪಘಾತಕ್ಕೆ ಗುರಿಯಾಗಿದ್ದಾರೆ.
ಮೃತ ತೇಜಸ್ವಿನಿ ಅವರು ಹಾಗೂ ಅವರ ಪತಿ ತಮ್ಮಿಬ್ಬರು ಅವಳಿ ಮಕ್ಕಳ ಜೊತೆಯಲ್ಲಿ ಬೈಕ್ನಲ್ಲಿ ಹೊರಟಿದ್ದರು. ಈ ವೇಳೆ ಪಿಲ್ಲರ್ ಅವರ ಬೈಕ್ ಮೇಲೆ ಬಿದ್ದಿತ್ತು. ಅವರ ಕುಟುಂಬದ ನಾಲ್ವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ನೆರೆದಿದ್ದ ಜನರು ಗಾಯಗೊಂಡಿದ್ದ ತಾಯಿ ಮತ್ತು ಮಗುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೇಜಸ್ವಿನಿ ಹಾಗೂ ಮಗು ವಿಹಾನ್ ಮೃತಟ್ಟಿದ್ದಾರೆ. ಒಂದು ವರ್ಷದ ಮಗು ಮತ್ತು ಲೋಹಿತ್ ಕುಮಾರ್ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಸಂತ್ರಸ್ತರು ನೀಡಿದ ದೂರಿನ ಆಧಾರದ ಮೇಲೆ ಸಂಬಂಧಪಟ್ಟ ಬಿಎಂಆರ್ಸಿಎಲ್ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಗೋವಿಂದಪುರ ಠಾಣಾ ಪೊಲೀಸರು ತಿಳಿಸಿದ್ದಾರೆ.
“ಬೆಂಗಳೂರಿನ ನಾಗವಾರದ ಬಳಿ ಮೆಟ್ರೋ ಪಿಲ್ಲರ್ ಕುಸಿದು ಇಬ್ಬರು ಸಾವೀಗಿಡಾಗಿದ್ದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಈ ಸಂಬಂಧ ಸಮಗ್ರ ತನಿಖೆ ನಡೆಸಲು ಆದೇಶಿಸಿದ್ದೇನೆ. ಮೃತರ ಕುಟುಂಬಕ್ಕೆ ಮೆಟ್ರೋ ಸಂಸ್ಥೆ ನೀಡುವ ಪರಿಹಾರದ ಜೊತೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಹ ಪರಿಹಾರ ನೀಡಲಾಗುವುದು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇದು 40% ಕಮಿಷನ್ ನಿದರ್ಶನವೆಂದ ಕಾಂಗ್ರೆಸ್
ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ ಉರುಳಿ ಬಿದ್ದಿದ್ದು ಬಿಜೆಪಿ ಸರ್ಕಾರದ 40% ಕಮಿಷನ್ ಭ್ರಷ್ಟಾಚಾರ ಸಾರ್ವವ್ಯಾಪಿಯಾಗಿರುವುದಕ್ಕೆ ನಿದರ್ಶನ. ಬಿಜೆಪಿಯ ಭ್ರಷ್ಟಾಚಾರಕ್ಕೆ ಮತ್ತೆರಡು ಜೀವಗಳು ಬಲಿಯಾಗಿವೆ. ಬಸವರಾಜ ಬೊಮ್ಮಾಯಿಯವರೆ ಮೆಟ್ರೋ ಪಿಲ್ಲರ್ಗಳು ನಿರ್ಮಾಣದಲ್ಲೇ ಕುಸಿಯುತ್ತವೆ ಎಂದಾದರೆ ಮುಂದೆ ಜನತೆ ಧೈರ್ಯವಾಗಿ ಓಡಾಡಬಹುದೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ ಉರುಳಿ ಬಿದ್ದಿದ್ದು ಬಿಜೆಪಿ ಸರ್ಕಾರದ 40% ಕಮಿಷನ್ ಭ್ರಷ್ಟಾಚಾರ ಸಾರ್ವವ್ಯಾಪಿಯಾಗಿರುವುದಕ್ಕೆ ನಿದರ್ಶನ.
ಬಿಜೆಪಿಯ ಭ್ರಷ್ಟಾಚಾರಕ್ಕೆ ಮತ್ತೆರಡು ಜೀವಗಳು ಬಲಿಯಾಗಿವೆ.@BSBommai ಅವರೇ, ಮೆಟ್ರೋ ಪಿಲ್ಲರ್ಗಳು ನಿರ್ಮಾಣದಲ್ಲೇ ಕುಸಿಯುತ್ತವೆ ಎಂದಾದರೆ ಮುಂದೆ ಜನತೆ ಧೈರ್ಯವಾಗಿ ಓಡಾಡಬಹುದೇ? pic.twitter.com/zsyNo0ezlh— Karnataka Congress (@INCKarnataka) January 10, 2023
ಬಿಜೆಪಿಯ ಕಮಿಷನ್ ಲೂಟಿಯ ಕಾರಣದಿಂದ ಉಂಟಾದ ಮೆಟ್ರೋ ಪಿಲ್ಲರ್ ಕುಸಿತದ ಘಟನೆಯಿಂದ ಬೆಂಗಳೂರಿನ ಗೌರವ ಮಣ್ಣುಪಾಲಾಗಿದೆ. ಬೆಂಗಳೂರಿನ ಘನತೆಯ ಕಿರಿಟಕ್ಕೆ ಗರಿಯಾಗಿದ್ದ ಮೆಟ್ರೋಗೆ ಬಿಜೆಪಿಯ ಭ್ರಷ್ಟಾಚಾರ ಮಸಿ ಬಳಿದಿದೆ. ಕಮಿಷನ್ ಲೂಟಿಗೆ ಇದು ಸಾಕ್ಷಿಯಲ್ಲವೇ ಬೊಮ್ಮಾಯಿಯವರೆ ತಾಯಿ, ಮಗುವಿನ ಸಾವು ಸರ್ಕಾರ ನಡೆಸಿದ ಕೊಲೆಯಲ್ಲವೇ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಮೆಟ್ರೋ ಪಿಲ್ಲರ್ ಕುಸಿತಕ್ಕೆ, ಬಿಜೆಪಿಯ ಭ್ರಷ್ಟಾಚಾರಕ್ಕೆ ಬಲಿಯಾದ ತಾಯಿ, ಮಗುವಿನ ಸಾವು ಆಕಸ್ಮಿಕವಲ್ಲ, ಅದು ‘ಸರ್ಕಾರಿ ಕೊಲೆ’. ಮೃತರ ಕುಟುಂಬಕ್ಕೆ ಸರ್ಕಾರ 50 ಲಕ್ಷ ಪರಿಹಾರ ನೀಡಬೇಕು. ವೈಯುಕ್ತಿಕ ವೈಷಮ್ಯಕ್ಕೆ ಕೊಲೆಯಾದವರ ಮನೆಗೆ ಹೋಗಿ ಪರಿಹಾರ ನೀಡುವ ಸಿಎಂ ಬೊಮ್ಮಾಯಿಯವರು ಈ ವಿಚಾರದಲ್ಲಿ ಕುರುಡಾಗಿರುವುದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ: ಮುಸ್ಲಿಂ ಯುವತಿಗೆ ಕಿರುಕುಳ ಕೊಡುತ್ತಿದ್ದ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ: ಸಾಗರ ಬಂದ್ಗೆ ಕರೆ
ನಿರ್ಲಕ್ಷ್ಯ ಕಂಡನಾರ್ಹ. ಆರೋಪಗಳಿಗೆ ಶಿಕ್ಷೆ ಆಗಬೇಕು.