ಬಜರಂಗದಳ ಸಹ ಸಂಚಾಲಕ ಸುನೀಲ್ ಎಂಬಾತ 4 ತಿಂಗಳಿನಿಂದ ಮುಸ್ಲಿಂ ಯುವತಿಗೆ ಕಿರುಕುಳ ನೀಡುತ್ತಿದ್ದರಿಂದ ಸಿಟ್ಟಿಗೆದ್ದ ಯುವತಿಯ ಅಣ್ಣ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿರುವ ಘಟನೆ ಸಾಗರ ಪಟ್ಟಣದಲ್ಲಿ ಜರುಗಿದೆ.
ಸಾಗರದ ಬಿ.ಎಚ್ ರಸ್ತೆಯಲ್ಲಿ ಸುನೀಲ್ ಬೈಕ್ನಲ್ಲಿ ಹೋಗುತ್ತಿದ್ದಾಗ ಸಮೀರ್ ಮತ್ತು ಆತನ ಇಬ್ಬರು ಸ್ನೇಹಿತರು ಹಲ್ಲೆಗೆ ಯತ್ನಿಸಿದ್ದಾರೆ. ಕೂದಲೆಳೆ ಅಂತರದಲ್ಲಿ ಸುನೀಲ್ ತಪ್ಪಿಸಿಕೊಂಡಿದ್ದಾನೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ಎಸ್ಪಿ ಮಿಥುನ್ ಕುಮಾರ್, “ಇದು ವಯಕ್ತಿಕ ಕಾರಣಗಳಿಂದ ನಡೆದ ಘಟನೆಯಾಗಿದೆ. ದೂರುದಾರ ಸುನೀಲ್ ನಾಲ್ಕೈದು ತಿಂಗಳಿನಿಂದ ಆರೋಪಿ ಸಮೀತ್ ತಂಗಿಯನ್ನು ಚುಡಾಯಿಸುತ್ತಿದ್ದ ಎಂದು ಕಂಡುಬಂದಿದೆ. ಸಮೀರ್ ಎರಡು ಮೂರು ಬಾರಿ ನನ್ನ ತಂಗಿಯ ತಂಟೆಗೆ ಬರಬೇಡಿ ಎಂದು ಎಚ್ಚರಿಕೆ ಕೂಡ ನೀಡಿದ್ದಾನೆ. ಆದರೆ ಸುನೀಲ್ ನಿನ್ನ ತಂಗಿಯ ನಂಬರ್ ಕೊಡು ಎಂದು ಸಮೀರ್ ಜೊತೆ ಮಾತನಾಡಿರುವ ಕಾಲ್ ರೆಕಾರ್ಡ್ಗಳನ್ನು ನಾವು ಪರೀಶಿಲಿಸಿದ್ದೇವೆ” ಎಂದಿದ್ದಾರೆ.
ಆದರೆ ಸುನೀಲ್ ಸಮೀರ್ ಮಾತನ್ನು ಕೇಳಿಲ್ಲ. ನಿನ್ನೆ ಕೂಡ ಮೇಕೆ ಕಾಯುತ್ತಿದ್ದ ಸಮೀರ್ ಹುಲ್ಲು ಕತ್ತರಿಸಲು ಇಟ್ಟುಕೊಂಡಿದ್ದ ಮಚ್ಚಿನಿಂದ ಸುನೀಲ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಇದು ತಪ್ಪು. ಏಕೆಂದರೆ ಯಾವುದೇ ಸಮಸ್ಯೆ ಕಂಡು ಬಂದರೆ ಪೊಲೀಸ್ ಗಮನಕ್ಕೆ ತರಬೇಕೆ ಹೊರತು, ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಮಿಥುನ್ ಕುಮಾರ್ ತಿಳಿಸಿದ್ದಾರೆ.
ಆರೋಪಿ ಸಮೀರ್ ತಂಗಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, “ನಮ್ಮ ಸಾಗರಲ್ಲಿ ಹಿಜಾಬ್ ಗಲಾಟೆ ಆರಂಭವಾದ ನಂತರ ಜಗಳವಾಗಿತ್ತು. ನಾನು ಕಾಲೇಜಿಗೆ ಹೋಗುತ್ತಿದ್ದಾಗ ಸುನೀಲ್ ಎಂಬಾತ ನನ್ನನ್ನು ಹಿಂಬಾಲಿಸುತ್ತಿದ್ದ. ಹಿಜಾಬ್ ತೆಗಿ, ಬುರ್ಖ ತೆಗಿ ಎಂದು ಪೀಡಿಸುತ್ತಿದ್ದ. ಮತಾಂತರವಾಗು ಎಂದು ಚುಡಾಯಿಸುತ್ತಿದ್ದ. ಇದನ್ನು ನಾನು ನಮ್ಮ ಕುಟುಂಬದವರ ಬಳಿ ಹೇಳಿದ್ದೆ. ಹಾಗಾಗಿ ನಮ್ಮ ಅಣ್ಣ ಆತನಿಗೆ ಹೆದರಿಸಲು ಹೋಗಿರಬೇಕು ಅಷ್ಟೆ. ನಮ್ಮ ಅಣ್ಣ ಕೊಲ್ಲಲು ಹೋಗಿಲ್ಲ. ಅವನನ್ನು ದಯವಿಟ್ಟು ಬಿಟ್ಟುಬಿಡಿ” ಎಂದು ಮನವಿ ಮಾಡಿದ್ದಾರೆ.
ಈ ನಡುವೆ ಬಜರಂಗದಳ ಕಾರ್ಯಕರ್ತನ ಹಲ್ಲೆಗೆ ಯತ್ನಿಸಿರುವುದನ್ನು ಖಂಡಿಸಿ ಬಲಪಂಥೀಯ ಸಂಘಟನೆಗಳು ಸಾಗರ ಬಂದ್ ಹೋರಾಟಕ್ಕೆ ಕರೆ ನೀಡಿವೆ. ಸಾಗರದ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಸುನೀಲ್ ಮನೆಗೆ ಭೇಟಿ ನೀಡಿದ್ದಾರೆ. ಕೆಲವೆಡೆ ಸ್ವಯಂ ಪ್ರೇರಿತವಾಗಿ ಅಂಗಡಿ ಮುಚ್ಚಿದರೆ ಕೆಲವೆಡೆ ಅಂಗಡಿ ಮುಚ್ಚಲು ವ್ಯಾಪರಸ್ಥರು ನಿರಾಕರಿಸಿದ್ದಾರೆದ. ಆಗ ಬಜರಂಗದಳ ಕಾರ್ಯಕರ್ತರು ಮತ್ತು ಅಂಗಡಿ ಮಾಲೀಕರ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಇದನ್ನೂ ಓದಿ: ಮಾಂಸಾಹಾರದ ಮೇಲೆ ಮತ್ತೆ ಪ್ರಹಾರ: ಮಠಾಧೀಶರ ಸಲಹೆಗಳಿಗೆ ತೀವ್ರ ವಿರೋಧ