ವಯೋಸಹಜ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿದ್ದ ನಾಡಿನ ಖ್ಯಾತ ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರು ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಅವರಿಗೆ 87 ವರ್ಷ ವಯಸ್ಸಾಗಿತ್ತು.
ನ್ಯಾಯವಾದಿಯಾಗಿದ್ದ ತಂದೆ ಪಿ. ಅಹಮದ್, ತಾಯಿ ಜೈನಾಬಿ ಅವರ ಮಗಳಾಗಿ ಸಾರಾ ಅಬೂಬಕ್ಕರ್ ಅವರು 1936ರ ಜೂನ್ 30 ರಂದು ಕೇರಳದ ಕಾಸರಗೋಡಿನ ಚಂದ್ರಗಿರಿ ನದಿಯ ತೀರದ ಗ್ರಾಮವೊಂದರಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸ ತಮ್ಮ ಹುಟ್ಟೂರಿನಲ್ಲೇ ಪಡೆದ ಅವರು, ಹೈಸ್ಕೂಲು ವಿದ್ಯಾಭ್ಯಾಸವನ್ನು ಕಾಸರಗೋಡಿನಲ್ಲಿ ಮಾಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇಂಜಿನಿಯರ್ ಆಗಿದ್ದ ಅಬೂಬಕ್ಕರ್ ಅವರನ್ನು ಸಾರಾ ವಿವಾಹವಾದ ನಂತರ ಅವರು ತಮ್ಮ ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಅವರು ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾಹಿತ್ಯ ಲೋಕದೆಡೆಗೆ ಆಕರ್ಷಿತರಾದರು. ಅವರ ಅಣ್ಣ ತಂದುಕೊಡುತ್ತಿದ್ದ ಕೇರಳದ ಪ್ರಸಿದ್ದ ಲೇಖಕ ವೈಕಂ ಮಹಮದ್ ಬಷೀರ್ ಅವರ ಕಾದಂಬರಿಗಳ ಓದಿನ ಪ್ರಭಾವದಿಂದ ಅವರು ಬರೆಯುವ ಆಸಕ್ತಿಯನ್ನು ತೆಳೆದರು.
ತಮ್ಮ ನಲವತ್ತನೆ ವಯಸ್ಸಿನ ನಂತರ ಬರೆಯಲು ಪ್ರಾರಂಬಿಸಿದ ಸಾರಾ ಅಬೂಬಕ್ಕರ್ ಅವರ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಈ ಕಥೆಯಲ್ಲಿ ಹೊರಹೊಮ್ಮಿದ ವಾಸ್ತವಿಕ ಬದುಕಿನ ಚಿತ್ರಣ ಮತ್ತು ಧರ್ಮದ ಕಟ್ಟುಪಾಡುಗಳಲ್ಲಿ ಶೋಷಿತಗೊಂಡ ಮಹಿಳೆಯರ ಧ್ವನಿಗಳು ಅಸಂಖ್ಯಾತ ಓದುಗರ ಹೃದಯವನ್ನು ತಟ್ಟಿ ಈ ಕಾದಂಬರಿ ಎಲ್ಲೆಡೆಯಿಂದ ಮೆಚ್ಚುಗೆ ಪಡೆಯಿದೆ.
ಚಂದ್ರಗಿರಿಯ ತೀರದಲ್ಲಿ- ೧೯೮೪, ಸಹನಾ, – ೧೯೮೫, ವಜ್ರಗಳು, ಕದನವಿರಾಮ, – ೧೯೮೮, ಸುಳಿಯಲ್ಲಿ ಸಿಕ್ಕವರು,೧೯೯೪, ಪ್ರವಾಹ-ಸುಳಿ (ಸುಳಿಯಲ್ಲಿ ಸಿಕ್ಕವರು ಕೃತಿಯ ಭಾಗ-೨), ತಳ ಒಡೆದ ದೋಣಿ, ೧೯೯೭, ಪಂಜರ, ಇಳಿಜಾರು, ಕಾಣಿಕೆ ಇವರ ಪ್ರಮುಖ ಕೃತಿಗಳಾಗಿವೆ.
ಚಪ್ಪಲಿಗಳು, ೧೯೮೯, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ೧೯೯೨, ಖೆಡ್ಡ, ಸುಮಯ್ಯಾ (ಜನಪದ ಆಧರಿಸಿದ ಕಥೆಗಳು), ೨೦೦೪, ಗಗನ ಸಖಿ, ೨೦೦೭ ಇವರ ಪ್ರಮುಖ ಕಥಾ ಸಂಕಲನಗಳಾಗಿವೆ.
ಕಮರಿದ ಕನಸು, ಮಗಳು ಹುಟ್ಟಿದಳು, ತೇಲಾಡುವ ಮೋಡಗಳು, ತಾಳ, ಹೀಗೂ ಒಂದು ಬದುಕು ಇವರ ಬರೆದ ಬಾನುಲಿ ನಾಟಕಗಳಾಗಿದ್ದು, ಲೇಖನ ಗುಚ್ಛ, ಮನೋಮಿ, ಬಲೆ, ನಾನಿನ್ನು ನಿದ್ರಿಸುವೆ (ಕಾದಂಬರಿಗಳು) ಇವರ ಪ್ರಮುಖ ಲೇಖನ ಮತ್ತು ಅನುವಾದಗಳಾಗಿವೆ. ಐಷಾರಾಮದ ಆಳದಲ್ಲಿ ಎಂಬ ಪ್ರವಾಸಕಥನವನ್ನು ಕೂಡಾ ಸಾರಾ ಅವರು ಬರೆದಿದ್ದಾರೆ.
ಸಾರಾ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ‘ಸಹನಾ’ ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ‘ಸುಳಿಯಲ್ಲಿ ಸಿಕ್ಕವರು’ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಮುಖ ಪ್ರಶಸ್ತಿ ಗೌರವಗಳು ಸಂದಿವೆ.
ಮೃತರ ಪಾರ್ಥೀವ ಶರೀರವನ್ನು ಮಂಗಳೂರಿನ ಲೇಡಿಹಿಲ್ ಬಳಿ ಇರುವ ಅವರ ನಿವಾಸದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ರಾತ್ರಿ 8 ಗಂಟೆಗೆ ಅಂತ್ಯ ಕ್ರಿಯೆ ನೆರವೇಸಿಸಲಾಗುತ್ತದೆ ಎಂದು ಅವರ ಆಪ್ತ ಮೂಲಕಗಳು ನಾನುಗೌರಿ.ಕಾಂಗೆ ತಿಳಿಸಿವೆ.
ಹಿರಿಯ ಸಾಹಿತಿಗೆ ನಾಡಿನ ಹಲವರು ಗಣ್ಯ ವ್ಯಕ್ತಿಗಳು ಶ್ರದ್ದಾಂಜಲಿ ಕೋರಿದ್ದು, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಅವರ ಕೊಡುಗೆಗಳನ್ನು ನೆನೆಸಿಕೊಂಡಿದ್ದಾರೆ.
ಸಂಸ್ಕೃತಿ ಚಿಂತಕ, ಸಾಹಿತಿ ರಹಮತ್ ತರಿಕೆರೆ ಅವರು, “ನಿನ್ನೆಯಷ್ಟೆ ಅಕ್ಕರದವ್ವ ಫಾತಿಮಾ ಶೇಖರ ಜನ್ಮದಿನವಿತ್ತು. ಈ ದಿನ ‘ಮುಸ್ಲಿಂಹುಡುಗಿ ಶಾಲೆ ಕಲಿತದ್ದು’ ಬರೆಹದ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಸಾರಾ ಇಲ್ಲವಾದರು. ಸಾರಾ ಎಂದರೆ ಅರಬ್ಬಿಯಲ್ಲಿ ಸಂತೋಷದಾಯಕಿ ರಾಜಕುಮಾರಿ ಎಂದರ್ಥಗಳಿವೆ. ಆದರೆ ಇವರು ಬದುಕೆಲ್ಲ ಬವಣೆಗೊಳಗಾದ ಮಹಿಳೆಯರ ಬಗ್ಗೆಯೇ ಧ್ಯಾನಿಸಿದರು. ಬರೆದರು. 25 ವರ್ಷಗಳ ಹಿಂದೆ ಅವರೊಡನೆ ಇಡೀ ದಿನವಿದ್ದು ಸಂದರ್ಶನ ಮಾಡಿ ಪ್ರಕಟಿಸಿದ್ದು ನೆನಪಾಗುತ್ತಿದೆ. ವೈಚಾರಿಕವಾಗಿ ಕಠೋರ ನಿಷ್ಠುರೆ; ಅಂತಃಕರಣದಲ್ಲಿ ತಾಯಿಯಾಗಿದ್ದರು” ಎಂದು ಹೇಳಿದ್ದಾರೆ.
“ತಾನು ನಂಬಿದ ಮೌಲ್ಯಗಳಿಗೆ ಬದ್ಧರಾಗಿ, ಎದುರಾದ ವಿರೋಧಗಳನ್ನು ದಿಟ್ಟತನದಿಂದ ಎದುರಿಸಿ, ಮುಸ್ಲಿಂ ಲೋಕದ ತವಕ-ತಲ್ಲಣಗಳಿಗೆ ದನಿಯಾಗಿದ್ದ ಹಿರಿಯ ಸಾಹಿತಿ ಸಾರಾ ಅಬೂಬಕರ್ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅವರ ಬಂಧುಗಳು ಮತ್ತು ಓದುಗ ಬಳಗದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ತಾನು ನಂಬಿದ ಮೌಲ್ಯಗಳಿಗೆ ಬದ್ಧರಾಗಿ,
ಎದುರಾದ ವಿರೋಧಗಳನ್ನು ದಿಟ್ಟತನದಿಂದ ಎದುರಿಸಿ, ಮುಸ್ಲಿಂ ಲೋಕದ ತವಕ-ತಲ್ಲಣಗಳಿಗೆ ದನಿಯಾಗಿದ್ದ
ಹಿರಿಯ ಸಾಹಿತಿ ಸಾ ರಾ ಅಬೂಬಕರ್ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ.ಅವರ ಬಂಧುಗಳು ಮತ್ತು ಓದುಗ ಬಳಗದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. pic.twitter.com/NOvI2zoweH
— Siddaramaiah (@siddaramaiah) January 10, 2023
ವಿಧಾನಪರಿಷತ್ನ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಅವರು, “ಕರಾವಳಿ ಸೌಹಾರ್ದತೆಯ ಗಟ್ಟಿ ಧ್ವನಿ,ಕೋಮುವಾದದ ವಿರುದ್ಧದ ದಿಟ್ಟ ದನಿ ಅಸ್ತಂಗತವಾಗಿದೆ. ಲೇಖಕಿ ಸಾರಾ ಅಬೂಬಕ್ಕರ್ ನಿಧನ ಸಾಹಿತ್ಯ ಲೋಕಕ್ಕೆ ತುಂಬಿ ಬಾರದ ನಷ್ಟ. ದುರಿತ ಕಾಲದಲ್ಲಿ ಸಾರಾ ಅವರ ಅಗಲಿಕೆ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಕುಟುಂಬಸ್ಥರು ಹಾಗೂ ಅವರ ಒಡನಾಡಿಗಳ ನೋವಲ್ಲಿ ನಾನು ಭಾಗಿ” ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಕರಾವಳಿ ಸೌಹಾರ್ದತೆಯ ಗಟ್ಟಿ ಧ್ವನಿ,ಕೋಮುವಾದದ ವಿರುದ್ಧದ ದಿಟ್ಟ ದನಿ ಅಸ್ತಂಗತವಾಗಿದೆ.
ಲೇಖಕಿ ಸಾರಾ ಅಬೂಬಕ್ಕರ್ ನಿಧನ ಸಾಹಿತ್ಯ ಲೋಕಕ್ಕೆ ತುಂಬಿ ಬಾರದ ನಷ್ಟ.ದುರಿತ ಕಾಲದಲ್ಲಿ ಸಾರಾ ಅವರ ಅಗಲಿಕೆ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಂತಾಗಿದೆ.
ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಕುಟುಂಬಸ್ಥರು ಹಾಗೂ ಅವರ ಒಡನಾಡಿಗಳ ನೋವಲ್ಲಿ ನಾನು ಭಾಗಿ.🙏 pic.twitter.com/zgZOFCsKQJ
— Hariprasad.B.K. (@HariprasadBK2) January 10, 2023
ಖ್ಯಾತ ವ್ಯಂಗ್ಯಚಿತ್ರಕಾರ ಪಿ.ಮೊಹಮದ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ನಮನಗಳು.. #ಸಾರಾ_ಅಬೂಬಕ್ಕರ್ pic.twitter.com/pbOZzEQedd
— ಪಿಮಹಮ್ಮದ್ Mahamud (@cartoonist_PM) January 10, 2023
ಗೌರವಪೂರ್ವಕ ನಮನಗಳು.