ಇತ್ತೀಚೆಗೆ ನಡೆದ ಶಾಲಾ ಕಲಾ ಉತ್ಸವದಲ್ಲಿ ಇಸ್ಲಾಮಿಕ್ ಪೋಷಾಕಿನಲ್ಲಿದ್ದ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಬಿಂಬಿಸಿದ ನಂತರ ಇದೀಗ ಮತ್ತೆ ಕೇರಳದ ಕೋಝಿಕ್ಕೋಡ್ ವಿವಾದದ ಕೇಂದ್ರಬಿಂದುವಾಗಿದೆ. ಸರ್ಕಾರ ಮುಂದಿನ ಆವೃತ್ತಿಗಳ ಕುರಿತು ಎಚ್ಚರಿಕೆ ವಹಿಸಿದ್ದು, ಈ ಕಲಾಸಂಘವನ್ನು ಸರ್ಕಾರ ನಿಷೇಧಿಸಿದೆ. ಈ ವಿಚಾರವಾಗಿ ಕಾಂಗ್ರೆಸ್ ಪಕ್ಷವು ಪ್ರತಿಕ್ರಿಯಿಸಿದ್ದು, “ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಕ್ಷಮೆಯಾಚಿಸಬೇಕು” ಎಂದು ಮಂಗಳವಾರ ಒತ್ತಾಯಿಸಿತ್ತು.
ಈ ಬಗ್ಗೆ ಶಿಕ್ಷಣ ಸಚಿವ ಮತ್ತು ಸಿಪಿಐ(ಎಂ) ಮುಖಂಡ ವಿ ಶಿವನ್ಕುಟ್ಟಿ ಮಾತನಾಡಿ, “ಮುಸ್ಲಿಂ ವ್ಯಕ್ತಿಯನ್ನು ಭಯೋತ್ಪಾದಕನಂತೆ ಚಿತ್ರಿಸಿರುವುದು ಎಲ್ಡಿಎಫ್ ನಿಲುವಿಗೆ ವಿರುದ್ಧವಾಗಿದೆ. ಉತ್ಸವದ ಉದ್ಘಾಟನೆಯ ಸಂದರ್ಭದಲ್ಲಿ ಸ್ವಾಗತ ಗೀತೆಯ ಭಾಗವಾಗಿ ಪ್ರದರ್ಶನವನ್ನು ಏರ್ಪಡಿಸಿದ MATHA ಅಥವಾ ಮಲಯಾಳಂ ಥಿಯೇಟ್ರಿಕಲ್ ಹೆರಿಟೇಜ್ ಮತ್ತು ಆರ್ಟ್ಸ್ ಸಂಸ್ಥೆಗೆ ಮುಂದಿನ ಬಾರಿ ಯಾವುದೇ ಅವಕಾಶವನ್ನು ನೀಡಲಾಗುವುದಿಲ್ಲ. ವಿವಾದದ ಕುರಿತು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಉದ್ಘಾಟನೆಯ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಮೊದಲು ಸ್ವಾಗತ ಸಮಿತಿಯು ಕಾರ್ಯಕ್ರಮವನ್ನು ವೀಕ್ಷಿಸಿತ್ತು. ಆದರೆ ಇದು ಕಾರ್ಯಕ್ರಮದ ಅಂತಿಮ ಡ್ರೆಸ್ ರಿಹರ್ಸಲ್ ಆಗಿರಲಿಲ್ಲ” ಎಂದು ತಿಳಿಸಿದ್ದಾರೆ.
ಮೊದಲ ದಿನದಂದು MATHA ತಂಡ ಪ್ರದರ್ಶಿಸಿದ ಪ್ರದರ್ಶನದಲ್ಲಿ, ಸಮವಸ್ತ್ರಧಾರಿ ರಕ್ಷಣಾ ಅಧಿಕಾರಿಯನ್ನು ಕೊಂದ ಭಯೋತ್ಪಾದಕನನ್ನು ಭಾರತೀಯ ಸೇನೆಯ ವ್ಯಕ್ತಿಯೊಬ್ಬರು ಬಂಧಿಸಿರುವುದನ್ನು ತೋರಿಸಲಾಯಿತು. ಪ್ರದರ್ಶನದ ವೇಳೆ ಭಯೋತ್ಪಾದಕ ಪಾತ್ರಧಾರಿಗಳು ಅರಬ್ ಪುರುಷರ ಸಾಂಪ್ರದಾಯಿಕ ಶಿರಸ್ತ್ರಾಣವಾದ ಕೆಫಿಯೆಹ್ ಅನ್ನು ಧರಿಸಿದ್ದರು. ಆದರೆ ಇದೀಗ ಮುಸ್ಲಿಮರನ್ನು ಭಯೋತ್ಪಾದಕ ಎಂದು ಬಿಂಬಿಸುವುದನ್ನು ವಿರೋಧಿಸಿ ವಿವಿಧ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ ನಂತರ ಈ ಘಟನೆ ವಿವಾದಕ್ಕೆ ಕಾರಣವಾಗಿದೆ.
ಇನ್ನು ಈ ಉತ್ಸವ ಮುಗಿದ ಬಳಿಕ ಮಾತನಾಡಿದ ಸಿಪಿಐ(ಎಂ) ಮುಖಂಡ ಮತ್ತು ಲೋಕೋಪಯೋಗಿ ಸಚಿವ ಮಹಮ್ಮದ್ ರಿಯಾಸ್, “ಈ ಕಾರ್ಯಕ್ರಮದ ಹಿಂದೆ ಸಂಘಪರಿವಾರದ ಅಜೆಂಡಾ ಇದೆ” ಎಂದು ಆರೋಪಿಸಿದ್ದಾರೆ. ಮಂಗಳವಾರ ಕೋಝಿಕ್ಕೋಡ್ನಲ್ಲಿ ಸಿಪಿಐ(ಎಂ) ಜಿಲ್ಲಾ ಸಮಿತಿಯು ಪ್ರತಿಕ್ರಿಯಿಸಿದ್ದು, ವೇದಿಕೆ ಕಾರ್ಯಕ್ರಮದ ವಿರುದ್ಧದ ಟೀಕೆ ಅತ್ಯಂತ ಗಂಭೀರವಾಗಿದೆ. ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ” ಎಂದಿದೆ.
“ಮುಸ್ಲಿಂ ವೇಷಭೂಷಣದಲ್ಲಿ ಭಯೋತ್ಪಾದಕನನ್ನು ಪ್ರಸ್ತುತಪಡಿಸುವುದು ಎಲ್ಡಿಎಫ್ ಸರ್ಕಾರದ ನಿಲುವಿಗೆ ವಿರುದ್ಧವಾಗಿದೆ. ಭಯೋತ್ಪಾದನೆ ಮತ್ತು ಉಗ್ರವಾದವು ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಿಸಿಲ್ಲ. ಇಂತಹ ಕಾರ್ಯಕ್ರಮವನ್ನು ಹೇಗೆ ನಡೆಸಲಾಯಿತು ಎಂಬುದನ್ನು ಪರಿಶೀಲಿಸಬೇಕು’’ ಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ.
ಜಿಲ್ಲಾ ಸಮಿತಿಯ ಮಧ್ಯಪ್ರವೇಶದ ನಂತರ, ರಾಜ್ಯ ಶಿಕ್ಷಣ ಇಲಾಖೆಯು ಈ ಕಲಾ ತಂಡವನ್ನು ಉತ್ಸವದ ಮುಂದಿನ ಆವೃತ್ತಿಗಳಲ್ಲಿ ಭಾಗವಹಿಸದಂತೆ ನಿಷೇಧಿಸಿದೆ. ಆದರೆ ಸಿಪಿಐ(ಎಂ) ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದು, ಸಿಎಂ ಮುಸ್ಲಿಮರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.
ಶಿಕ್ಷಣ ಸಚಿವರು ಉತ್ಸವದಲ್ಲಿ ಉಪಸ್ಥಿತರಿದ್ದು, ಪ್ರವಾಸೋದ್ಯಮ ಸಚಿವರು ಎಲ್ಲದಕ್ಕೂ ಕಾರಣವಾಗಿದ್ದಾರೆ ನೀಡಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಸಂಸದ ಕೆ.ಮುರಳೀಧರನ್ ಆರೋಪಿಸಿದ್ದಾರೆ. “ಹಾಗಾದರೆ, ಸರ್ಕಾರ ನಡೆಸುವ ಉತ್ಸವದ ಸಮಯದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇಂತಹ ಚಿತ್ರಣ ಹೇಗೆ ಸಂಭವಿಸಿತು? ಸರ್ಕಾರ ಮತ್ತು ಸಿಎಂಗೆ ನೈತಿಕ ಹೊಣೆಗಾರಿಕೆ ಇದೆ. ಮುಖ್ಯಮಂತ್ರಿಗಳು ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.
ಮತ್ತೊಂದೆಡೆ ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಆಡಳಿತ ಪಕ್ಷವು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ನಿಲ್ಲುವುದಾಗಿ ಹೇಳುತ್ತದೆ. ಆದರೆ ಧಾರ್ಮಿಕ ಉಗ್ರಗಾಮಿಗಳಿಗೆ ಮಣಿದಿದೆ. ಸರಕಾರ ಮೂಲಭೂತವಾದಿಗಳ ಜೊತೆಗಿದೆ ಎಂಬುದನ್ನು ಸಾಬೀತುಪಡಿಸಿದೆ” ಎಂದಿದ್ದಾರೆ.
ವೇದಿಕೆ ಕಾರ್ಯಕ್ರಮವು ಭಾರತೀಯ ರಕ್ಷಣಾ ಪಡೆಗಳ ನಿಸ್ವಾರ್ಥ ಸೇವೆಯನ್ನು ಬಿಂಬಿಸುತ್ತದೆ. ಈಗ, ವಿ ಶಿವನ್ಕುಟ್ಟಿ ಮತ್ತು ಮೊಹಮ್ಮದ್ ರಿಯಾಸ್ ಭಾರತೀಯ ಸೇನೆಯ ಸೇವೆಯನ್ನು ಬಿಂಬಿಸುವುದು ಅಪರಾಧ ಎಂದು ಹೇಳುತ್ತಾರೆ. ಇದು ಸಂಪೂರ್ಣ ದೇಶ ವಿರೋಧಿ ವಿಧಾನವಾಗಿದೆ ಎಂದು ಟೀಕಿಸಿದ್ದಾರೆ.
ಈ ವಿವಾದ ಬಗ್ಗೆ ಪ್ರತಿಕ್ರಿಯಿಸಿರುವ ಕಲಾ ನಿರ್ದೇಶಕ ಕನಕದಾಸ್ ಅವರು, “ಇದು ದುರದೃಷ್ಟಕರ” ಎಂದಿದ್ದು, “ಪ್ರದರ್ಶನದ ಹಿಂದೆ ಯಾವುದೇ ರಾಜಕೀಯವಿಲ್ಲ ಮತ್ತು ನಮ್ಮ ಕಲಾವಿದರು ಎಲ್ಲಾ ರಾಜಕೀಯ ಪಕ್ಷಗಳಿಗೆ ಸೇರಿದವರು. ನಾವು ಹಲವಾರು ಸರ್ಕಾರಿ ಕಾರ್ಯಕ್ರಮಗಳಿಗೆ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದೇವೆ. ಶಾಲಾ ಉತ್ಸವದಲ್ಲಿ ವೇದಿಕೆ ಕಾರ್ಯಕ್ರಮದ ನಂತರ ಸಚಿವ ರಿಯಾಸ್ ನಮ್ಮನ್ನು ಅಭಿನಂದಿಸಿದರು. ನಂತರ, ಯಾರೂ ಕಾರ್ಯಕ್ರಮದ ವಿರುದ್ಧ ಯಾವುದೇ ದೂರು ನೀಡಲಿಲ್ಲ” ಎಂದು ತಿಳಿಸಿದ್ದಾರೆ.