ದಕ್ಷಿಣ ಕನ್ನಡ ಯಾವ ಮೂಲೆಯಲ್ಲಿ ನಿಂತು ಎಂಥ ತಾಳೆಹಾಕಿ ಲೆಕ್ಕಮಾಡಿದರೂ ಇದೊಂದು ಸಂಘಪರಿವಾರದ ರಿಪಬ್ಲಿಕ್ ಎಂಬುದು ಪಕ್ಕಾ ಆಗುತ್ತದೆ! ಸಂಸ್ಕೃತಿ ಹಾಗೂ ಗೋರಕ್ಷಣೆ ಮುಖವಾಡ ಹೊದ್ದ ಕ್ರಿಮಿನಲ್ಗಳ – ಹಫ್ತಾ ವಸೂಲಿಗಾರ ಅನೈತಿಕ ಪೊಲೀಸ್ ಪಡೆಯ ಹಾವಳಿ ಜಿಲ್ಲೆಯಲ್ಲಿ ಮಿತಿಮೀರಿದೆ!
ಜಾನುವಾರು ಸಾಗಾಟಗಾರರನ್ನು ತಡೆದು ಹೊಡೆದು ಬಡಿದು ಲೂಟಿ ಮಾಡಿ ಆ ಜಾನುವಾರುಗಳನ್ನು ಗೋಶಾಲೆಗೆ ಸಾಗಿಸುವ ಪ್ರಹಸನ ನಡೆಸುತ್ತಲೇ ಗುಟ್ಟಾಗಿ ಕಸಾಯಿಖಾನೆಗೆ ಮಾರುವ ನಕಲಿ ಗೋರಕ್ಷಕರ ಆಟ ಕರಾವಳಿಯಲ್ಲಿ ಬಹಿರಂಗ ರಹಸ್ಯ. ತಮ್ಮ ಬೆನ್ನ ಹಿಂದೆ ಸಂಘಪರಿವಾರದ ಡಾನ್ಗಳು ಮತ್ತು ಪರಿವಾರದ ಮಂತ್ರಿ, ಎಂ.ಪಿ. ಎಮ್ಮೆಲ್ಲೆಗಳಂಥ ಬಲಾಢ್ಯರಿದ್ದಾರೆಂಬ ಸೊಕ್ಕಿನ ಅನೈತಿಕ ಪೊಲೀಸ್ ಬೆಟಾಲಿಯನ್ ಅಧಿಕೃತ ಪೊಲೀಸ್ ಇಲಾಖೆಯನ್ನೇ ನಿಯಂತ್ರಿಸುವಷ್ಟು ಭೀಭತ್ಸವಾಗಿ ಬೆಳೆದುಬಿಟ್ಟಿದೆ!
ಅಧಿಕಾರಸ್ಥರ ಕೃಪಾಶೀರ್ವಾದದ ಕೌಬ್ರಿಗೇಡ್ ಡಿಸಿ, ಎಸ್ಪಿಯಂಥ ಉನ್ನತ ಅಧಿಕಾರಿಗಳಿಗೂ ಕೇರ್ ಮಾಡದೆ ಕಾನೂನು ಕೈಗೆತ್ತಿಕೊಳ್ಳುವಷ್ಟು ಕೊಬ್ಬಿದ್ದಾರೆಂಬುದಕ್ಕೆ ಕಳೆದ ವಾರ ನಡೆದ ‘ಕೊಲೆಬೆದರಿಕೆ’ ಪ್ರಕರಣ ನಿಸ್ಸಂಶಯವಾಗಿ ಸಾಬೀತುಪಡಿಸಿದೆ. ಬಕ್ರೀದ್ ಹೊತ್ತಲ್ಲಿ ಅಕ್ರಮ ಗೋಸಾಗಾಟ-ಅನಧಿಕೃತ ಕಸಾಯಿಖಾನೆ ನಡೆಯದಂತೆ ನೋಡಿಕೊಳ್ಳಿ; ಅಕ್ರಮ ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ ಮಾಡುವವರನ್ನು ಕಠಿಣವಾಗಿ ನಿಭಾಯಿಸಿ ಎಂಬ ಎರಡು ಆದೇಶ ಜಿಲ್ಲಾಧಿಕಾರಿಣಿ ಸಿಂಧೂ ರೂಪೇಶ್ ಪೊಲೀಸ್ ಅಧಿಕಾರಿಗಳಿಗೆ ನೀಡಿದ್ದರು.
ಇದರಲ್ಲಿ ಎರಡನೇ ನಿರ್ದೇಶನ ಕೌಬಾಯ್ಗಳ ಕೆರಳಿಸಿದೆ. ಸಂಘಪರಿವಾರದ ವಾಟ್ಸಾಪ್ ಗ್ರೂಪ್ಗಳಲ್ಲಿ ಜಿಲ್ಲಾಧಿಕಾರಿಣಿಯನ್ನು ಟೀಕಿಸುವ, ನಿಂದಿಸುವ, ಕೊಂದೇಹಾಕುವ ಸಂದೇಶಗಳ ವಿನಿಮಯ ಬಿರುಸಾಗಿ ನಡೆದಿದೆ!
ದಕಿಣ ಕನ್ನಡದಲ್ಲಿ ದಿನಗಳೆದಂತೆ ಜಾನುವಾರು ದಂಧೆ ಮಾಡುವ ಮುಸ್ಲಿಮರನ್ನು ಅಟ್ಟಾಡಿಸಿ ಹಿಂಸಿಸುವ, ದರೋಡೆ ಮಾಡಿ ದಾಂಧಲೆ ಎಬ್ಬಿಸುವ ‘ಸಂಸ್ಕೃತಿವಂತರ’ ಉಪಟಳ ಜೋರಾಗುತ್ತಿರುವುದು ಸಹಜವಾಗೇ ಕರ್ತವ್ಯನಿಷ್ಠ ಜಿಲ್ಲಾಧಿಕಾರಿ ಸಿಂಧೂ ಅವರ ತಲೆಬಿಸಿ ಮಾಡಿತ್ತು.
ಇದು ಬಕ್ರೀದ್ ಹಬ್ಬದ ಹೊತ್ತಲ್ಲಿ ಹೆಚ್ಚಾಗುವ ಆತಂಕವೂ ಆಕೆಯಲ್ಲಿತ್ತು. ಹಾಗಾಗಿ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದ ಸಿಂಧೂ ಮೇಡಮ್ ‘ಅಕ್ರಮ ಗೋಸಾಗಾಟಗಾರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು; ಪೊಲೀಸರೇ ಅಂಥವರ ವಿರುದ್ಧ ಕೇಸು ಹಾಕುತ್ತಾರೆ; ಗೋಸಾಗಾಟಗಾರರ ಮೇಲೆ ಗೂಂಡಾಗಿರಿ, ಥಳಿತ ನಡೆಸಿದರೆ ಅಂಥವರನ್ನು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲಾಗುತ್ತದೆ..’ ಎಂದು ಎಚ್ಚರಿಕೆ ನೀಡಿದ್ದರು.
ಮಾಧ್ಯಮದಲ್ಲಿ ಬಂದಿದ್ದ ಈ ಹೇಳಿಕೆ ಸಂಘಪರಿವಾರದ ‘ರಾಮ್ಸೇನಾ ಅಭಿಯಾನ್’ ಎಂಬ ವಾಟ್ಸಾಪ್ ಗ್ರೂಪಿನಲ್ಲಿ ಪೋಸ್ಟ್ ಆಗಿದೆ. ಇದರ ಸುತ್ತ ಚರ್ಚೆ ನಡೆದು ಡಿಸಿ ಸಿಂಧೂ ಅವರನ್ನ ಮೂದಲಿಸಲಾಗಿದೆ. +919632188546 ಮೊಬೈಲ್ ಸಂಖ್ಯೆಯ ತೆಂಕಮಿಜಾರಿನ ರಂಜಿತ್ ಎಂಬ ಹರೆಯದ ಹುಡುಗ ‘ಫಸ್ಟ್ ಮೊಲೆನ್ ಕರ್ತೆ ಕೆರೊಡು’ ಎಂದು ತುಳು ಭಾಷೆಯ ಸಂದೇಶ ಪೋಸ್ಟ್ ಮಾಡಿದ್ದಾನೆ. ಇದರರ್ಥ ‘ಮೊದಲು ಇವಳನ್ನು (ಡಿಸಿಯನ್ನು) ಕಡಿದು ಕೊಲ್ಲಬೇಕು’ ಎಂಬುದಾಗಿದೆ.
ಈ ಕೊಲ್ಲುವ ಕ್ರೌರ್ಯದ ಚರ್ಚೆ ದಕ್ಷಿಣ ಕನ್ನಡದ ಮಾನವೀಯ ಮಂದಿಯನ್ನು ಬೆಚ್ಚಿಬೀಳಿಸಿದೆ. ಡಿಸಿಯನ್ನೇ ಬಿಡದವರು ಸಾಮಾನ್ಯರನ್ನು ಬಿಡುವರಾ? ಇಂಥವರ ಮೇಲೆ ಕಾನೂನು ಕ್ರಮ ತಕ್ಷಣ ಜರುಗಬೇಕೆಂಬ ಒತ್ತಾಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನಡೆದಿದೆ. ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡು ರಂಜಿತ್ನನ್ನು ಬಂಧಿಸಿದ್ದಾರೆ.
ಇಷ್ಟು ದೊಡ್ಡ ಗಲಾಟೆಯಾದರೂ ದಕ್ಷಿಣ ಕನ್ನಡದಲ್ಲಿ ತುಂಬಿ ತುಳುಕುವ ಬಿಜೆಪಿ ಎಂಪಿ, ಎಮ್ಮೆಲ್ಲೆ, ಎಮ್ಮೆಲ್ಸಿಗಳಲ್ಲಿ ಒಬ್ಬೇ ಒಬ್ಬ ಪ್ರತಿಕ್ರಿಯಿಸುವುದಿಲ್ಲ; ಶಾಂತಿ ಸುವ್ಯವಸ್ಥೆ ಕಾಪಾಡುವ ಕರ್ತವ್ಯ ಬದ್ಧತೆ ತೋರಿದ ಜಿಲ್ಲಾಧಿಕಾರಿ ಸಿಂಧೂಗೆ ನೈತಿಕ ಬೆಂಬಲ ನೀಡಬೇಕಿದ್ದ ಜಿಲ್ಲಾ ಉಸ್ತುವಾರಿ ಮಂತ್ರಿ ಕೋಟಾ ಶ್ರೀನಿವಾಸ ಪೂಜಾರಿ, ಉಳಿದ ಶಾಸಕ, ಸಂಸದರು ಬುದ್ಧಿಪೂರ್ವಕವಾಗೇ ಸುಮ್ಮನಿದ್ದರು.
ಜಿಲ್ಲೆಯ ನೆಮ್ಮದಿ ಕಾಪಾಡುವುದು ತಮ್ಮದೂ ಕರ್ತವ್ಯವೆಂಬುದು ಈ ಹೊಣೆಗೇಡಿ ರಾಜಕಾರಣಿಗಳಿಗೆ ಅನ್ನಿಸಲಿಲ್ಲ. ಮೌನ ಪ್ರದರ್ಶಿಸಿ ಗೂಂಡಾಗಳಿಗೆ ‘ಧೈರ್ಯ’ ತುಂಬಿದ್ದಾರೆ. ಇದಾದ ಎರಡೇ ದಿನಕ್ಕೆ ಮುಖ್ಯಮಂತ್ರಿ ಯಡ್ಡಿಯೂರಪ್ಪ ಸರ್ಕಾರ ಸಿಂಧೂ ಅವರನ್ನು ಬೆಂಗಳೂರಿಗೆ ವರ್ಗಾಯಿಸಿ ಖೋಟಾ ಗೋ ಸಂರಕ್ಷಕರ ತಂಟೆಗೆ ಹೋದವರಿಗೆ ದಕ್ಷಿಣ ಕನ್ನಡದಲ್ಲಿ ಉಳಿಗಾಲವಿಲ್ಲ ಎಂಬುದು ಖಾತ್ರಿಗೊಳಿಸಿದ್ದಾರೆ!
ದಕ್ಷಿಣ ಕನ್ನಡದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಬೇಕಿದ್ದ ಪೊಲೀಸ್ ಇಲಾಖೆ, ಅದನ್ನು ಸಂಘ ಪರಿವಾರದ ತರಹೇವಾರಿ ತಂಡಗಳ ಪುಂಡರ ಕೈಗೊಪ್ಪಿಸಿ ಆ ಗ್ಯಾಂಗುಗಳು ಹೇಳಿದಂತೆ ಕೇಳುತ್ತಿದೆಯೇನೋ ಎಂಬ ಅನುಮಾನ ಬಲವಾಗಲು ಕಾರಣವಿದೆ. ಜಾನುವಾರು ವ್ಯಾಪಾರಿ ಮುಸ್ಲಿಮರ ರಕ್ತ ಹರಿಸಿ ಅವರ ಮೊಬೈಲ್, ಹಣ ಕೊಳ್ಳೆಹೊಡೆಯುವ ನಕಲಿ ಗೋರಕ್ಷಕರು ನಂತರ ‘ಆರೋಪಿ’ಗಳನ್ನು ಠಾಣೆಗೊಯ್ದು ತಾವು ಹೇಳಿದಂತೆ ಪೊಲೀಸರಿಂದ ಎಫ್ಐಆರ್ ಬರೆಸುತ್ತಾರೆ. ಹೀಗಾಗಿ ಅಧಿಕೃತ ಪರವಾನಗಿಯೊಂದಿಗೆ ದನ, ಎಮ್ಮೆ ಸಾಗಿಸಿದರೂ ಜಾಮೀನುರಹಿತ ಕೇಸು ಬೀಳುತ್ತದೆ.
ಮಾರಣಾಂತಿಕ ದಾಳಿ ಮಾಡಿದ ಸಂಘ ಸದಸ್ಯರ ಮೇಲೆ ಪೆಟ್ಟಿಕೇಸ್ ಹಾಕಿ ಗೌರವದೊಂದಿಗೆ ಬೀಳ್ಕೊಡಲಾಗುತ್ತದೆ. ಅನೈತಿಕ ಪೊಲೀಸರು ಧರ್ಮ, ಸಂಸ್ಕೃತಿ ದೇವರು ತೋರಿಸಿ ಬ್ಲಾಕ್ಮೇಲ್ ಮಾಡಿ ಪಾರಾಗುತ್ತಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡದಲ್ಲಿ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದಿದೆ. ಪೊಲೀಸರು ಮತ್ತು ಗೋಗೂಂಡಾಗಳ ಅನೈತಿಕ ಮೈತ್ರಿಯಿಂದಾಗಿ ರೌಡಿಗಳೆಂದು ಸಮಾಜದಿಂದ ತಿರಸ್ಕರಿಸಲ್ಪಟ್ಟವರು ಇಂದು ಧರ್ಮರಕ್ಷಕ ಗೆಟಪ್ಪಿನಲ್ಲಿ ಮೆರೆದಾಡುತ್ತಿದ್ದಾರೆ.
ದಕ್ಷಿಣಕನ್ನಡದ ಕಾನೂನು ಮತ್ತು ಸುವ್ಯವಸ್ಥೆ ಅದೆಂಥ ಮಟ್ಟಕ್ಕೆ ತಲುಪಿದೆಯೆಂದರೆ ಬಿಜೆಪಿ ಶಾಸಕರು ಕರೆಯುವ ಅಧಿಕಾರಿಗಳ ಸಭೆಯಲ್ಲಿ ಹತ್ತಾರು ಕ್ರಿಮಿನಲ್ ಕೇಸ್ ರೂವಾರಿಗಳು ಪೊಲೀಸರಿಗೆ, ಅಧಿಕಾರಿಗಳಿಗೆ ಸಲಹೆ, ಸೂಚನೆ ಕೊಡುತ್ತಿದ್ದಾರೆ. ಡಿಸಿ ಸಿಂಧೂ ಮೇಡಮ್ಗೆ ಬಂದ ಕೊಲೆ ಬೆದರಿಕೆ ಪ್ರಕರಣದ ಬೆನ್ನಲ್ಲೇ ಬೆಳ್ತಗಂಡಿ ಶಾಸಕ ಹರೀಶ್ಪೂಂಜಾ ಕರೆದಿದ್ದ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳ ಸರಿಸಮನಾಗಿ ಗೋ-ಗೂಂಡಾಗಳು ಕುಳಿತಿದ್ದರು.
ಅಕ್ರಮ ಗೋಸಾಗಾಟ ತಡೆಯುವ ಕುರಿತು ಶಾಸಕ ಪೂಂಜಾ ನಡೆಸಿದ್ದ ಮೀಟಿಂಗ್ ಇದು. ಇಲ್ಲಿ ಸಂಘಪರಿವಾರದ ಗೋ-ಗೂಂಡಾಗಳು ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ವಾಣಿಯಲ್ಲಿ ‘ಸಲಹೆ, ಮಾರ್ಗದರ್ಶನ’ ಕೊಡುತ್ತಿದ್ದರು. ಪೊಲೀಸರ ನೈತಿಕ ಸ್ಥೈರ್ಯವನ್ನೇ ಕುಗ್ಗಿಸುವ ಸಭೆಗಳನ್ನು ನಡೆಸುವ ಶಾಸಕ ಪೂಂಜಾರಿಂದ ಬೆಳ್ತಗಂಡಿಯಲ್ಲಿ ನೆಮ್ಮದಿ ನಿರೀಕ್ಷಿಸಲು ಸಾಧ್ಯವಾ?
‘ದಕ್ಷಿಣ ಕನ್ನಡಕ್ಕೆ ಬೆಂಕಿ ಹಾಕೋದು ಹೇಗೆಂದು ನಂಗೆ ಗೊತ್ತಿದೆ’ ಎಂದು ಬಹಿರಂಗವಾಗೇ ಹೇಳುವ ಸಂಸದ ನಳಿನ್ ಕುಮಾರ್ ಕಟೀಲ್ ಈಗ ಆಳುವ ಬಿಜೆಪಿಯ ರಾಜ್ಯಾಧ್ಯಕ್ಷ. ಗೋರಕ್ಷಕ ತಂಡಗಳ ಅನಭಿಷಕ್ತ ದೊರೆಯಂತಿರುವ ನಳಿನ್ನ ಮನದಿಚ್ಛೆಯಂತೆ ಜಿಲ್ಲಾಡಳಿತ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಮಂತ್ರಿ ಕೋಟಾ ಶ್ರೀನಿವಾಸ ಪೂಜಾರಿ “ಪಾಪ ಪೂಜಾರಿ” ಅನ್ನಿಸಿಕೊಳ್ಳುತ್ತಿದ್ದಾರೆ ಬಿಜೆಪಿ ಕಾರ್ಯಕರ್ತರಿಂದ! ಇಂಥ ಕಾನೂನು ಸುವ್ಯವಸ್ಥೆಯ ಸಮಸ್ಯೆಯ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಡಾ|| ರಾಜೇಂದ್ರ ಬಂದಿದ್ದಾರೆ. ಹೊಸ ಡಿಸಿ ಸಾಹೇಬರಿಂದ ಜಿಲ್ಲೆಯ ಜನರು ನೆಮ್ಮದಿಯ ನಾಳೆಗಳ ನಿರೀಕ್ಷಿಸುತ್ತಿದ್ದಾರಷ್ಟೇ!!
-ಶುದ್ದೋಧನ


