ಬರ್ಬರ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಹತ್ರಾಸ್ ದಲಿತ ಯುವತಿ ಕುರಿತು ದೇಶವೇ ಮರುಗುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಒಂದೂ ಮಾತಾಡುತ್ತಿಲ್ಲ ಏಕೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಪಂಜಾಬ್ನ ಪಟಿಯಾಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು “ಕೊಲೆಗೀಡಾದ ಭಾರತದ ಮಗಳಿಗೆ ನ್ಯಾಯಕ್ಕಾಗಿನ ಹೋರಾಟದಲ್ಲಿ ಸಂತ್ರಸ್ತ ಕುಟುಂಬ ಮಾತ್ರವಲ್ಲದೇ ನಾವೆಲ್ಲರೂ ಜೊತೆಗಿದ್ದೇವೆ ಎಂಬುದನ್ನು ಸಾರಲು ನಾನು ಹತ್ರಾಸ್ಗೆ ಭೇಟಿ ನೀಡಿದ್ದೆ. ದೇಶದಲ್ಲಿ ಲಕ್ಷಾಂತರ ಮಹಿಳೆಯರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ, ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರವಾಗುತ್ತಿದೆ. ಹಾಗಾಗಿ ನಾವು ನಿಮಗಾಗಿ ಮಾತ್ರವಲ್ಲದೇ, ಅವರೆಲ್ಲರಿಗಾಗಿ ದನಿ ಎತ್ತಲು ಬಂದಿದ್ದೇವೆ ಎಂದು ಸಂತ್ರಸ್ತ ಕುಟುಂಬಕ್ಕೆ ಹೇಳಿದ್ದೇನೆ” ಎಂದು ರಾಹುಲ್ ತಿಳಿಸಿದ್ದಾರೆ.
19 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆಯಾಗಿದೆ. ಯುಪಿ ಸರ್ಕಾರ ಶವವನ್ನು ಕುಟುಂಬಕ್ಕೆ ನೀಡದೇ ಸುಟ್ಟುಹಾಕಿದೆ. ಆ ಸರ್ಕಾರದ ನಡವಳಿಕೆಯ ವಿರುದ್ಧ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ. ಆದರೆ ನಮ್ಮ ಮೋದಿಜಿ ಮಾತ್ರ ಒಂದು ಮಾತು ಆಡುತ್ತಿಲ್ಲ ಏಕೆ? ಎಂದು ಅವರು ಪ್ರಶ್ನಿಸಿದ್ದಾರೆ.
ಇದೇ ಸಂದರ್ಭದಲ್ಲಿ “ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆಯ ಬಗ್ಗೆ ನನ್ನೊಂದಿಗೆ ಮಾತನಾಡಿದ್ದಾರೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸುವಂತೆ ನಿರ್ದೇಶಿಸಿದ್ದಾರೆ” ಎಂದು ಯಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಹತ್ರಾಸ್: ಶವ ಸುಟ್ಟಿದ್ದನ್ನು ಸುಪ್ರೀಂನಲ್ಲಿ ಸಮರ್ಥಿಸಿಕೊಂಡ ಯುಪಿ ಸರ್ಕಾರ!