Homeಅಂಕಣಗಳುಬಹುಜನ ಭಾರತ; ಬಿಜೆಪಿಗೆ ಉಳಿಗಾಲವಿಲ್ಲವೇ ಯುಪಿಯಲ್ಲಿ?

ಬಹುಜನ ಭಾರತ; ಬಿಜೆಪಿಗೆ ಉಳಿಗಾಲವಿಲ್ಲವೇ ಯುಪಿಯಲ್ಲಿ?

- Advertisement -
- Advertisement -

ಉತ್ತರಪ್ರದೇಶದ ಮೊದಲ ಎರಡು ಹಂತಗಳ ಮತದಾನದಲ್ಲಿ ಬಿಜೆಪಿ ಮುಳುಗುವ ನಿಶ್ಚಿತ ಸುಳಿವುಗಳು ಮೇಲೆ ತೇಲಿವೆ. ಮೋದಿ-ಶಾ-ಯೋಗಿ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ರಾಜ್ಯವು ಬಿಜೆಪಿ ಬಡಿದೆಬ್ಬಿಸಬಹುದಾದ ಭಾವೋದ್ವೇಗದ ಬಿರುಗಾಳಿಗೆ ಸಿಕ್ಕರೆ ಅಚ್ಚರಿಪಡಬೇಕಿಲ್ಲ.

ಹಾಲಿ ಯೋಗಿ ಸರ್ಕಾರ ಮಾತ್ರವಲ್ಲ, ಎರಡು ವರ್ಷಗಳ ನಂತರ 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರದ ಅಳಿವು ಉಳಿವನ್ನೂ ಪ್ರಭಾವಿಸುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಏಳು ಹಂತದ ಮತದಾನ ಜರುಗಿದೆ. ಸೋಮವಾರ ಎರಡನೆಯ ಹಂತದ ಮತದಾನ ಮುಗಿದಿದ್ದು ಬಿಜೆಪಿಯನ್ನು ಕಳವಳಕ್ಕೆ ತಳ್ಳಿದೆ.

ಕಳೆದ ಸಲ ಬೀಸಿದ್ದ ಬಿಜೆಪಿ ಪರ ಗಾಳಿ ಈ ಸಲ ಕಂಡುಬಂದಿಲ್ಲ. ಪರವಾದ ಗಾಳಿ ಒತ್ತಟ್ಟಿಗಿರಲಿ, ಮೊದಲ ಎರಡು ಹಂತಗಳಲ್ಲಿ ಎದುರು ಗಾಳಿ ಬೀಸಿರುವ ಸೂಚನೆಗಳಿವೆ. ಬಿಜೆಪಿ ಬೆಂಬಲಿಗರು ಉತ್ಸಾಹ ಕಳೆದುಕೊಂಡಿದ್ದು ಮತಗಟ್ಟೆಯಿಂದ ದೂರ ಉಳಿದಿದ್ದಾರೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ತನ್ನ ಸರ್ಕಾರಗಳನ್ನು ಕಳೆದುಕೊಳ್ಳುವ ದುಸ್ಥಿತಿ ಎದುರಿಸಿದೆ.

ಜಯಂತ್ ಚೌಧರಿ

ಉತ್ತರಪ್ರದೇಶದಲ್ಲಿ ಉಳಿದ ಆರು ಹಂತಗಳಲ್ಲಿ ತಡವಾಗಿಯಾದರೂ ತನ್ನ ರಣತಂತ್ರ ಬದಲಿಸಿ ಬಿಜೆಪಿಗೆ ಚುನಾವಣೆಗಳನ್ನು ಗೆದ್ದುಕೊಡುವ ಜಾದೂಗಾರ ಅಮಿತ್ ಶಾ ’ಚಮತ್ಕಾರ’ ಮಾಡದೆ ಹೋದರೆ ಸೋಲು ಗೋಡೆ ಮೇಲಿನ ಬರೆಹ.

ಹಿಂದೂ-ಮುಸ್ಲಿಮ್ ಧ್ರುವೀಕರಣ, ಯಾದವೇತರ ಹಿಂದುಳಿದ ಜಾತಿಗಳು ಮತ್ತು ಮೇಲ್ಜಾತಿಗಳ ಸಾಮಾಜಿಕ ಎಂಜಿನಿಯರಿಂಗ್‌ನ ಬಿಜೆಪಿ ತಂತ್ರಗಳು ಶಿಖರ ಮುಟ್ಟಿಬಿಟ್ಟಿವೆ. ಅಲ್ಲಿಂದ ಕೆಳಗೆ ಇಳಿಯಬೇಕೇ ವಿನಾ ಮೇಲೇರುವ ಸಾಧ್ಯತೆ ಇಲ್ಲ. ಶಿಖರದಲ್ಲೇ ಉಳಿಯುವ ಶಕ್ತಿಯೂ ಬಿಜೆಪಿಗೆ ಉಳಿದಿಲ್ಲ. ಧ್ರುವೀಕರಣದ ಹೊಸ ಪ್ರಯತ್ನಗಳು ಫಲ ನೀಡುತ್ತಿಲ್ಲ. ಧ್ರುವೀಕರಣದ ಬೆಂಕಿಗೆ ಅರಿವಿಲ್ಲದೆ ತುಪ್ಪ ಸುರಿಯುವ ತಪ್ಪುಗಳನ್ನು ಪ್ರತಿಪಕ್ಷಗಳು ಮಾಡುತ್ತಿಲ್ಲ.

ಯೋಗಿ-ಮೋದಿ ಅವರನ್ನು ಅಭಿವೃದ್ಧಿ ಕಾರ್ಯಗಳ ತಕ್ಕಡಿಯಲ್ಲಿಟ್ಟು ನೋಡಲಾಗುತ್ತಿದೆ. ಈ ದಿಸೆಯಲ್ಲಿ ಇಬ್ಬರ ಸಾಧನೆಗಳೂ ನಿರಾಶಾದಾಯಕ.

2014ರ ಲೋಕಸಭೆ, 2017ರ ವಿಧಾನಸಭೆ ಹಾಗೂ 2019ರ ಲೋಕಸಭೆ ಚುನಾವಣೆಗಳಲ್ಲಿ ಉತ್ತರಪ್ರದೇಶದ ಮತದಾರರು ನರೇಂದ್ರ ಮೋದಿ ಮತ್ತು ಬಿಜೆಪಿಗೆ ಅಭೂತಪೂರ್ವ ಗೆಲುವು ಗಳಿಸಿಕೊಟ್ಟಿದ್ದಾರೆ. ಮೂರು ಚುನಾವಣೆಗಳ ಸತತ ಗೆಲುವು ಆಳುವ ಪಕ್ಷ ಬಿಜೆಪಿಯಲ್ಲಿ ಅತಿಯಾದ ಆತ್ಮವಿಶ್ವಾಸ ಮೂಡಿಸಿದ್ದುಂಟು.

ಆದರೆ ಇತ್ತೀಚೆಗೆ ಸಿಡಿದಿರುವ ಸಂಕೇತಗಳು ಬಿಜೆಪಿಯ ನಿದ್ದೆ ಕೆಡಿಸಿವೆ. ದೆಹಲಿಯ ಗಡಿಗಳಲ್ಲಿ ಹದಿಮೂರು ತಿಂಗಳ ಕಾಲ ಜರುಗಿದ ರೈತ ಚಳವಳಿ ವಿಶೇಷವಾಗಿ ಪಶ್ಚಿಮ ಉತ್ತರಪ್ರದೇಶದಲ್ಲಿ ಬಿಜೆಪಿಯ ಕಾಲಕೆಳಗಿನ ನೆಲವನ್ನು ನಡುಗಿಸಿದೆ. ಚುನಾವಣೆಗಳಲ್ಲಿ ಪಶ್ಚಿಮ ಉತ್ತರಪ್ರದೇಶದಲ್ಲಿ ಬೀಸುವ ಗಾಳಿ ಈ ದೈತ್ಯ ರಾಜ್ಯದ ಇತರೆ ಸೀಮೆಗಳ ಮೇಲೂ ಪ್ರಭಾವ ಬೀರುತ್ತದೆಂಬ ನಂಬಿಕೆಗೆ ಆಧಾರಗಳಿವೆ.

ಸಾಮಾಜಿಕ-ಆರ್ಥಿಕ-ರಾಜಕೀಯ ನೆಲೆಗಳಲ್ಲಿ ಕರ್ನಾಟಕದ ಒಕ್ಕಲಿಗ ಜನಾಂಗಕ್ಕೆ ಹೋಲಿಸಬಹುದಾದ ಉತ್ತರ ಭಾರತದ ಬಲಿಷ್ಠ ಜಾತಿ ಜಾಟರದು. ವಿಶೇಷವಾಗಿ ಪಶ್ಚಿಮ ಉತ್ತರಪ್ರದೇಶದಲ್ಲಿ ಅವರ ಜನಸಂಖ್ಯಾ ಪ್ರಮಾಣ ಶೇ.20ಕ್ಕೂ ಹೆಚ್ಚು. ರಾಜ್ಯದಲ್ಲಿ ಇವರ ಪ್ರಮಾಣ ಶೇ.2ರಷ್ಟು. ಮೊದಲ ಹಂತದ ಮತದಾನ ಜರುಗಿರುವ ಪಶ್ಚಿಮ ಉತ್ತರಪ್ರದೇಶದಲ್ಲಿ ಈ ಜನಾಂಗದ ಪ್ರಭಾವ ಮಾಮೂಲಾಗಿಯೇ ಬಲು ದಟ್ಟ.

ಮೋದಿಯವರು ಮೂರು ಕೃಷಿ ಕಾನೂನುಗಳನ್ನು ವಾಪಸು ತೆಗೆದುಕೊಂಡ ನಂತರ ರೈತರ ನೈತಿಕ ಸ್ಥೈರ್ಯ ಎತ್ತರದಲ್ಲಿದೆ. ಗೋರಕ್ಷಣೆಯ ಹೆಸರಿನಲ್ಲಿ ಯೋಗಿ ಸರ್ಕಾರ ತಂದಿರುವ ಕಾನೂನಿನ ಫಲವಾಗಿ ಬೀಡಾಡಿ ದನಗಳು ಹಿಂಡುಹಿಂಡಾಗಿ ಹೊಲಗಳನ್ನು ನುಗ್ಗಿ ಮೇಯುತ್ತಿವೆ. ಅಡುಗೆ ಅನಿಲ ಸಿಲಿಂಡರ್ ದರ, ಟ್ರ್ಯಾಕ್ಟರುಗಳಿಗೆ ತುಂಬಿಸಬೇಕಿರುವ ಡೀಸೆಲ್ ದರ ಮುಗಿಲು ಮುಟ್ಟಿರುವ ಕುರಿತು ಭಾರೀ ಅಸಮಾಧಾನ ನೆಲೆಸಿದೆ. ಮೂರೂ ಚುನಾವಣೆಗಳಲ್ಲಿ ಬಲವಾಗಿ ಬಿಜೆಪಿಯ ಕೈಹಿಡಿದಿದ್ದ ಯುವಜನರು ನಿರುದ್ಯೋಗ ಸಮಸ್ಯೆಯಿಂದ ಭ್ರಮನಿರಸನ ಹೊಂದಿದ್ದಾರೆ.

ಇದೇ ಹತ್ತರಂದು ನಡೆದ ಮೊದಲ ಹಂತದ ಮತದಾನ ಹನ್ನೊಂದು ಜಿಲ್ಲೆಗಳಲ್ಲಿ ಹಂಚಿ ಹೋಗಿರುವ 58 ಸೀಟುಗಳಲ್ಲಿ ಪಕ್ಷಗಳ ಹಣೆಬರೆಹ ಬರೆಯಲಿದೆ. ಕಳೆದ ಬಾರಿ ಮೊದಲ ಹಂತದ ಈ 58 ಸೀಟುಗಳ ಪೈಕಿ 53ನ್ನು ಮತ್ತು ಎರಡನೆಯ ಹಂತದ 55 ಸೀಟುಗಳ ಪೈಕಿ 38ನ್ನು ಗೆದ್ದು ವಿಕ್ರಮ ಸ್ಥಾಪಿಸಿತ್ತು ಬಿಜೆಪಿ. ಕಳೆದ ಮೂರು ಚುನಾವಣೆಗಳಲ್ಲಿ ಜಾಟರು ದೊಡ್ಡ ಪ್ರಮಾಣದಲ್ಲಿ ಬಿಜೆಪಿಯತ್ತ ಸರಿದಿದ್ದರು. ಚರಣಸಿಂಗ್ ನಿಧನದ ನಂತರ ಅವರ ಮಗ ಅಜಿತ್ ಸಿಂಗ್ ಬಿಜೆಪಿಯೊಂದಿಗೆ ಸರಸವಾಡಿದ ಕಾರಣ ಮುಸ್ಲಿಮರು ಲೋಕದಳದಿಂದ ದೂರವಾಗಿದ್ದರು. ಅಜಿತ್ ಸಿಂಗ್ ನಿಧನದ ನಂತರ ಪಕ್ಷದ ಆಡಳಿತಸೂತ್ರ ಅವರ ಮಗ ಜಯಂತ್ ಚೌಧರಿ ಕೈಯಲ್ಲಿದೆ. ಸಮಾಜವಾದಿ ಪಕ್ಷದ ತಲೆಯಾಳು ಅಖಿಲೇಶ್ ಸಿಂಗ್ ಈ ಸಲ ಹಲವು ಸಣ್ಣ ಪಕ್ಷಗಳನ್ನು ಸೆಳೆದು ಬಣ್ಣಬಣ್ಣದ ಬೆಚ್ಚನೆಯ ಕೌದಿ ಹೊಲಿದಿದ್ದಾರೆ. ಪಕ್ಷ ಕಳೆದುಕೊಂಡಿರುವ ಜನಾಧಾರವನ್ನು ಮರಳಿ ಗಳಿಸಲು ಹಗಲಿರುಳು ಶ್ರಮಿಸಿರುವ ಜಯಂತ್ ಮತ್ತು ಅಖಿಲೇಶ್ ಚುನಾವಣಾ ಮೈತ್ರಿ ಮಾಡಿಕೊಂಡಿರುವುದು ಇಬ್ಬರ ಶಕ್ತಿಯನ್ನು ಇಮ್ಮಡಿಗೊಳಿಸಿದೆ. ದೆಹಲಿ ಗಡಿಗಳಲ್ಲಿ ಜರುಗಿದ ರೈತ ಚಳವಳಿಯು ಅವರ ಈ ಪ್ರಯತ್ನಕ್ಕೆ ಅನುಕೂಲಕರವಾಗಿ ಪರಿಣಮಿಸಿದೆ. ಅಜಿತ್ ಸಿಂಗ್ ಮತ್ತು ಜಯಂತ್ ಚೌಧರಿ ಅವರ ಲೋಕದಳವನ್ನು ಸೋಲಿಸಿದ್ದ ಜಾಟ ಜನಾಂಗ ಅದಕ್ಕಾಗಿ ಪಶ್ಚಾತ್ತಾಪಪಡುತ್ತಿದೆ. ಬಿಜೆಪಿ ಹುಟ್ಟಿ ಹಾಕಿದ ಹಿಂದೂ-ಮುಸ್ಲಿಮ್ ಧ್ರುವೀಕರಣದ ಅಲೆಯಲ್ಲಿ ತೇಲಿಹೋಗಿದ್ದ ಬಹುತೇಕ ಜಾಟರು ಈ ಸಲ ಬಿಜೆಪಿಗೆ ಎದುರಾಗಿ ನಿಂತಿದ್ದಾರೆ.

ಉತ್ತರಪ್ರದೇಶದಲ್ಲಿ ಯಾದವರದು ಸಂಖ್ಯಾಬಾಹುಳ್ಯದಲ್ಲಿ ಪ್ರಭಾವೀ ಹಿಂದುಳಿದ ಜಾತಿ. ಇವರ ಪ್ರಾಬಲ್ಯದಿಂದ ಅಸಮಾಧಾನಗೊಂಡ ಇತರೆ ಹಿಂದುಳಿದ ಮತ್ತು ಅತಿ ಹಿಂದುಳಿದ ಜನಾಂಗಗಳನ್ನು ಒಲಿಸಿಕೊಂಡಿದ್ದು ಬಿಜೆಪಿಗೆ ಕಳೆದ ಮೂರು ಚುನಾವಣೆಗಳಲ್ಲಿ ಭಾರೀ ಶಕ್ತಿ ನೀಡಿತ್ತು. ಮುಖ್ಯಮಂತ್ರಿ ಆದಿತ್ಯನಾಥ ಅವರ ಕಾರ್ಯವೈಖರಿಯಿಂದ ಕುದಿಯುತ್ತಿದ್ದ ಕೆಲ ಪ್ರಮುಖ ಓ.ಬಿ.ಸಿ. ನಾಯಕರು ಪಕ್ಷ ತೊರೆದು ಅಖಿಲೇಶ್ ಅವರೊಂದಿಗೆ ಕೈ ಜೋಡಿಸಿರುವ ವಿದ್ಯಮಾನ ಬಿಜೆಪಿಯ ಶಕ್ತಿಯನ್ನು ಕುಂದಿಸಿರುವುದರಲ್ಲಿ ಅನುಮಾನವಿಲ್ಲ. ತಮ್ಮ ಜಾತಿ ರಜಪೂತರ ಪಕ್ಷಪಾತಿಯೆಂದು ಆಡಳಿತದಲ್ಲಿ ಢಾಳಾಗಿ ತೋರಿಸಿಕೊಂಡಿರುವ ಮುಖ್ಯಮಂತ್ರಿ ಆದಿತ್ಯನಾಥ ಅವರು ಬಿಜೆಪಿಯ ಕಟ್ಟರ್ ಬೆಂಬಲಿಗರಾಗಿದ್ದ ಬ್ರಾಹ್ಮಣರನ್ನೂ ಸಾಕಷ್ಟು ಎದುರು ಹಾಕಿಕೊಂಡಿದ್ದಾರೆ. ಉತ್ತರಪ್ರದೇಶದಲ್ಲಿ ಶೇ.12ಕ್ಕೂ ಹೆಚ್ಚು ಪ್ರಮಾಣದಲ್ಲಿರುವ ಬ್ರಾಹ್ಮಣರು ಈಗಲೂ ಬಿಜೆಪಿಯ ಬೆಂಬಲಿಗರೇ. ಆದರೆ ಕಳೆದ ಮೂರೂ ಚುನಾವಣೆಗಳಲ್ಲಿ ಕಂಡುಬಂದಿದ್ದ ಅವರ ಅಖಂಡ ಬೆಂಬಲದಲ್ಲಿ ಈ ಸಲ ಬಿರುಕುಗಳು ಮೂಡಿವೆ.

ಪಶ್ಚಿಮ ಉತ್ತರಪ್ರದೇಶ ಸೀಮೆಯಲ್ಲಿ ಮುಸಲ್ಮಾನರ ಪ್ರಮಾಣ ರಾಜ್ಯದಲ್ಲೇ ಅತಿ ಹೆಚ್ಚು. ಹನ್ನೆರಡು ಜಿಲ್ಲೆಗಳ ಲೆಕ್ಕ ಹಿಡಿದರೆ ಈ ಪ್ರಮಾಣ ಶೇ.35. ಲಾಗಾಯತಿನಿಂದ ಚೌಧರಿ ಚರಣಸಿಂಗ್ ಅವರ ಅನುಯಾಯಿಗಳು. ಜಯಂತ್ ಚೌಧರಿ ಕಾಲದಲ್ಲಿ ಲೋಕದಳದಿಂದ ದೂರ ಸರಿದಿದ್ದರು. 2013ರಲ್ಲಿ ಬಿಜೆಪಿ ಬಡಿದೆಬ್ಬಿಸಿದ್ದ ಕೋಮುವಾದಿ ಧ್ರುವೀಕರಣವನ್ನು ರೈತ ಚಳವಳಿ ಕರಗಿಸಿರುವ ನಿಚ್ಚಳ ಸೂಚನೆಗಳಿವೆ. ಜಾಟರು ಮತ್ತು ಮುಸಲ್ಮಾನರು ಪುನಃ ಹತ್ತಿರವಾಗಿದ್ದಾರೆ. ಇಬ್ಬರ ಸಂಯುಕ್ತ ಶಕ್ತಿ ಬಿಜೆಪಿಗೆ ಮುಳುವಾಗಬಲ್ಲದು. ಮಾಯಾವತಿ ಅವರ ಬಿ.ಎಸ್.ಪಿ. ಮತ್ತು ಅಖಿಲೇಶ್-ಜಯಂತ್ ಅವರ ಮೈತ್ರಿಕೂಟದ ನಡುವೆ ಅವರು ಆಯ್ಕೆ ಮಾಡಿಕೊಳ್ಳಬೇಕಿದೆ. ಬಿಜೆಪಿ ವಿರುದ್ಧ ಮಾಯಾವತಿ ಅವರ ವಿರೋಧ ಇತ್ತೀಚಿನ ದಿನಗಳಲ್ಲಿ ಮೊಂಡಾಗಿರುವ ಬೆಳವಣಿಗೆಯನ್ನು ಮುಸಲ್ಮಾನರು ಗಮನಿಸಿದ್ದಾರೆ.

ಮೋದಿ ಮತ್ತು ಶಾ ಕ್ರೊನಾಲಜಿಸೋಮವಾರ ಮತದಾನ ನಡೆದ ಉತ್ತರಪ್ರದೇಶದ ಹನ್ನೊಂದು ಜಿಲ್ಲೆಯ ಐದರಲ್ಲಿ ಮುಸಲ್ಮಾನರ ಮತದಾರರ ಪ್ರಮಾಣ ಶೇ.40ರಿಂದ 50. ರಾಂಪುರದಲ್ಲಿ ಶೇ.60. ಮುರಾದಾಬಾದಿನಲ್ಲಿ ಶೇ.47, ಬಿಜನೂರಿನಲ್ಲಿ ಶೇ.43, ಶಹಜಹಾನಪೂರ ಮತ್ತು ಮುಝಫ್ಫರ್ ಪುರದಲ್ಲಿ ಶೇ.41. ಈ ಮತಗಳು ಕಳೆದ ಸಲದಂತೆ ಬಿ.ಎಸ್.ಪಿ. ಮತ್ತು ಸಮಾಜವಾದಿ ಪಾರ್ಟಿಯ ನಡುವೆ ದೊಡ್ಡ ಪ್ರಮಾಣದಲ್ಲಿ ಚದುರಿರುವ ಸಂಕೇತಗಳಿಲ್ಲ. ಈ ಬೆಳವಣಿಗೆ ಬಿಜೆಪಿಗೆ ಒಳ್ಳೆಯ ಸುದ್ದಿಯೇನೂ ಅಲ್ಲ. ಕಡೆಯ ಗಳಿಗೆಯ ತನಕ ಯಾವ ಪಕ್ಷಕ್ಕೆ ಮತ ನೀಡಬೇಕೆಂದು ನಿರ್ಧರಿಸದೆ ಗೋಡೆಯ ಮೇಲೆ ಕುಳಿತುಕೊಳ್ಳುವ ಮತದಾರರ ಸಂಖ್ಯೆ ಸಣ್ಣದೇನೂ ಅಲ್ಲ. ಅವರು ಕಡೆಯ ನಿಮಿಷಗಳಲ್ಲಿ ಗೆಲ್ಲುವ ಪಕ್ಷದತ್ತ ವಾಲುತ್ತಾರೆ. ಈ ಬಾಬತ್ತಿನಲ್ಲಿಯೂ ಬಿಜೆಪಿ ಏಟು ತಿನ್ನುವ ಸಾಧ್ಯತೆಯೇ ಹೆಚ್ಚು.

ರಾಜ್ಯದ ಉಳಿದ ಭಾಗಗಳಾದ ಬುಂದೇಲಖಂಡ ಮತ್ತು ಅವಧದಲ್ಲಿ ಬಿಜೆಪಿ ಅಷ್ಟಾಗಿ ಶಕ್ತಿಗುಂದಿಲ್ಲ. ಪೂರ್ವಾಂಚಲದಲ್ಲಿ ಸಮಸಮ ಸ್ಪರ್ಧೆ ಏರ್ಪಡುವ ಸೂಚನೆಗಳಿವೆ. ಒಂದು ಮತ್ತು ಎರಡನೆಯ ಹಂತದ ಒಟ್ಟು ಸೀಟುಗಳ ಸಂಖ್ಯೆ 113. ಈ ಪೈಕಿ 91 ಸೀಟು ಬಾಚಿದ್ದ ಬಿಜೆಪಿ ಈ ಸಲ ಭಾರೀ ನಷ್ಟ ಎದುರಿಸಲಿದೆ.

ಪಶ್ಚಿಮ ಯುಪಿಯ ಗಾಳಿ ಇತರೆಡೆಗೆ ಬೀಸಿದ್ದನ್ನು ಕಳೆದ ಚುನಾವಣೆಗಳಲ್ಲಿ ಕಂಡುಬಂದಿದೆ. ಈ ಗಾಳಿಯನ್ನು ತಡೆದು ನಿಲ್ಲಿಸಲು ಬಿಜೆಪಿ ಯಾವ ತಂತ್ರ ಬಳಸಲಿದೆಯೆಂದು ಕಾದು ನೋಡಬೇಕಿದೆ.


ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ -2022: ಬಿಜೆಪಿ ಸೋಲಿನ ಭವಿಷ್ಯ ನುಡಿದ ನಾಯಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...