Homeಅಂಕಣಗಳುಬೊಲ್ಸೊನಾರೊ ಪತನ; ಸರ್ವಾಧಿಕಾರಿ ಆಡಳಿತದ ಕೊನೆ ಭಾರತಕ್ಕೂ ಸ್ಫೂರ್ತಿಯಾಗುವುದೇ?

ಬೊಲ್ಸೊನಾರೊ ಪತನ; ಸರ್ವಾಧಿಕಾರಿ ಆಡಳಿತದ ಕೊನೆ ಭಾರತಕ್ಕೂ ಸ್ಫೂರ್ತಿಯಾಗುವುದೇ?

- Advertisement -
- Advertisement -

ಭಾರತದಲ್ಲಿ ಕೋವಿಡ್ ನಿರ್ವಹಣೆಯ ಅದಕ್ಷತೆಗೆ ಮತ್ತು ವೈಫಲ್ಯತೆಗೆ ಗಂಗಾ ನದಿಯಲ್ಲಿ ತೇಲಿದ ಹೆಣಗಳಿಂದ ಹಿಡಿದು, ತುರ್ತಿನಲ್ಲಿ ಆಮ್ಲಜನಕ ಸಿಗದೆ ಒದ್ದಾಡಿ ಮಡಿದ ಘಟನೆಗಳ ಅಸಂಖ್ಯಾತ ವರದಿಗಳವರೆಗೆ ಹಲವು ಸಂಗತಿಗಳು ಸಾಕ್ಷ್ಯ ನುಡಿದಿದ್ದವು. ಸರ್ಕಾರದ ಅವೈಚಾರಿಕ-ಅತಾರ್ಕಿಕ ನಿರ್ಧಾರಗಳು ಜನರನ್ನು ಹೈರಾಣುಗೊಳಿಸಿದ್ದವು. ಅಷ್ಟು ಸಾಲದೆಂಬಂತೆ ಮೊದಲ ಅಲೆಯ ಸಮಯದಲ್ಲಿ ಕೋವಿಡ್ ವೈರಾಣುವನ್ನು ಓಡಿಸಲು, ಮನೆಯ ಹೊರಗೆ ನಿಂತು ತಟ್ಟೆ ಮತ್ತು ಪಾತ್ರೆಗಳನ್ನು ಜೋರಾಗಿ ಬಡಿಯಿರಿ ಎಂಬ ಪ್ರಧಾನಿ ಮೋದಿಯವರ ಕರೆ ತಮಾಷೆಯಾಗಿ ಕಂಡರೂ ಅದನ್ನು ಪರಿಪಾಲಿಸಿದ ಕೋಟ್ಯಂತರ ನಾಗರಿಕರಿದ್ದರು. ಬಹುಶಃ ಇಲ್ಲಿಗಿಂತಲೂ ಕೋವಿಡ್‌ಅನ್ನು ಕೆಟ್ಟದಾಗಿ ನಿರ್ವಹಿಸಿದವರಲ್ಲಿ ಯುಕೆಯ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ಯುಎಸ್‌ಎ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬ್ರೆಜಿಲ್‌ನ ಜೈರ್ ಬೊಲ್ಸೊನಾರೊ ಅಗ್ರ ಸ್ಥಾನಗಳಲ್ಲಿ ನಿಲ್ಲುತ್ತಾರೆ. ಮೂವರಲ್ಲಿ ಮೊದಲ ಇಬ್ಬರು ಆಗಲೇ ಮಾಜಿಗಳಾಗಿದ್ದರೆ, ಕೋವಿಡ್‌ಅನ್ನು ’ಒಂದು ಸಣ್ಣ ಜ್ವರ’ ಎಂದು, ಐಸೋಲೇಷನ್ ಪ್ರೊಟೋಕಾಲ್‌ಅನ್ನು ಅನುಸರಿಸಿದವರನ್ನು ಮೂರ್ಖರೆಂದು, ಸ್ವತಃ ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳಲು ನಿರಾಕರಿಸಿದ ಬೊಲ್ಸೊನಾರೊ ಕೂಡ ಮಾಜಿಯಾಗುತ್ತಿದ್ದಾರೆ. ದಕ್ಷಿಣ ಅಮೆರಿಕದ ಮತ್ತೊಂದು ರಾಷ್ಟ್ರ ತೀವ್ರ ಬಲಪಂಥೀಯ ಸರ್ವಾಧಿಕಾರಿ ಧೋರಣೆಯ ನಾಯಕನಿಗೆ ಹೊರದಾರಿ ತೋರಿಸಿದೆ. ಜನಪರ ನೀತಿಗಳ ಚಾಂಪಿಯನ್ ಎಂದು ಬಣ್ಣಿಸಲಾಗುವ, ಯೂನಿಯನ್ ಲೀಡರ್ ಆಗಿದ್ದು ನಂತರ ಎರಡು ಅವಧಿಗಳ ಕಾಲ ಬ್ರೆಜಿಲ್ ಅಧ್ಯಕ್ಷರಾಗಿ, ಬಲಪಂಥೀಯ ದ್ವೇಷ ರಾಜಕಾರಣದ ಬಲಿಪಶುವಾಗಿ ಜೈಲುವಾಸ ಅನುಭವಿಸಿ ಹೊರಬಂದು ಈಗ ಬೊಲ್ಸೊನಾರೊರನ್ನ ಸಣ್ಣ ಅಂತರದಲ್ಲಿ ಮಣಿಸಿ ಮತ್ತೆ ಅಧ್ಯಕ್ಷರಾಗುವತ್ತ ಲೂಯಿಜ್ ಇನಾಷಿಯೊ ’ಲೂಲಾ’ ಡಾ ಸಿಲ್ವ ಮುನ್ನಡೆದಿದ್ದಾರೆ. ಇದು ಲ್ಯಾಟಿನ್ ಅಮೆರಿಕದಲ್ಲಿ ಎಡಪಂಥೀಯ ಚಿಂತನೆಯ ಸರ್ಕಾರಗಳು ಜನಮನ್ನಣೆ ಪಡೆಯುತ್ತಿರುವ ವಿದ್ಯಮಾನಕ್ಕೆ ಒಂದೆಡೆ ಸಾಕ್ಷಿಯಾದರೆ, ಜಾಗತಿಕವಾಗಿ ಸರ್ವಾಧಿಕಾರಿ ಧೋರಣೆಯ ಬಲಪಂಥೀಯ ನಾಯಕರ ಪತನದ ಮುಂದುವರಿಕೆಯಾಗಿಯೂ ಮಹತ್ವ ಪಡೆದುಕೊಂಡಿದೆ.

ಬೊಲ್ಸೊನಾರೊ

ತುಸು ಭಿನ್ನವೆನಿಸಿದರೂ ಭಾರತದ ಸದ್ಯದ ಸರ್ಕಾರ ಮತ್ತು ಬ್ರೆಜಿಲ್‌ನ ಬೊಲ್ಸೊನಾರೊ ಆಡಳಿತಕ್ಕೂ ಕಣ್ಣಿಗೆ ಕುಕ್ಕುವಂತ ಮತ್ತೊಂದು ಹೋಲಿಕೆಯಿದೆ. ಲೂಲಾ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ’ಕಾರ್ ವಾಷ್’ ಎಂಬ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದಿತ್ತು. ಇದರ ವಿಚಾರಣೆ ಬ್ರೆಜಿಲ್ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿತ್ತು. ಇದರ ವಿಚಾರಣೆಯನ್ನು ನಿಷ್ಪಕ್ಷಪಾತವಾಗಿ ನಡೆಸದ ನ್ಯಾಯಾಧೀಶ ಸೆರ್ಗಿಯೋ ಮೋರೊ ಜುಲೈ 2017ರಲ್ಲಿ ತರಾತುರಿಯಲ್ಲಿ ಲೂಲಾ ಅವರನ್ನು ತಪ್ಪಿತಸ್ಥ ಎಂದು ಷರಾ ಬರೆಯುತ್ತಾರೆ. 10 ವರ್ಷಕ್ಕಿಂತಲೂ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಗುರಿಯಾಗಿಸಿ ಲೂಲಾ ಅವರನ್ನು ಬಂಧಿಸಲಾಗುತ್ತದೆ. ಇದರಿಂದ 2018ರಲ್ಲಿ ನಡೆದ ಚುನಾವಣೆಯಲ್ಲಿ ಲೂಲಾ ಸ್ಪರ್ಧಿಸದಂತೆ ನೋಡಿಕೊಳ್ಳಲಾಗುತ್ತದೆ. ಇದು ಮಿಲಿಟರಿ ದಂಗೆಯನ್ನು ಆರಾಧಿಸುವ ಬೊಲ್ಸೊನಾರೊನ ಗೆಲುವಿಗೆ ದಾರಿ ಸುಗಮ ಮಾಡಿಕೊಡುತ್ತದೆ. ಆದರೆ, ಲೂಲಾ ವಿರುದ್ಧ ನಡೆದದ್ದು ಬೋಗಸ್ ವಿಚಾರಣೆ ಎಂಬ ಆರೋಪಕ್ಕೆ ಪುರಾವೆಯೆಂಬಂತೆ ನ್ಯಾಯಾಧೀಶ ಮೋರೊ ಅವರನ್ನು ಬೊಲ್ಸೊನೊರಾ ತನ್ನ ಸಂಪುಟದಲ್ಲಿ ಜಸ್ಟಿಸ್ ಮತ್ತು ಸಾರ್ವಜನಿಕ ರಕ್ಷಣಾ ಸಚಿವರಾಗಿ ನೇಮಿಸುತ್ತಾರೆ. ತಾನೆಂದಿಗೂ ರಾಜಕೀಯ ಸೇರುವುದಿಲ್ಲ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ್ದ ನ್ಯಾಯಾಧೀಶರ ಬಣ್ಣ ಬಯಲಾಗುತ್ತದೆ. ಮುಂದೆ ಹಲವು ತಿಂಗಳುಗಳ ಬಳಿಕ ಈ ವಿಚಾರಣೆ ಸರಿಯಾಗಿ ನಡೆದಿಲ್ಲ ಎಂದು ತೀರ್ಮಾನಿಸುವ ಸುಪ್ರೀಂ ಕೋರ್ಟ್ ಲೂಲಾ ಅವರ ಬಿಡುಗಡೆಗೆ ಆದೇಶಿಸುತ್ತದೆ. ಇಲ್ಲಿ, ಭಾರತದಲ್ಲಿ ರಂಜನ್ ಗೊಗೊಯ್ ಅವರು ರಾಮಮಂದಿರ ವಿವಾದದ ತೀರ್ಪಿನಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸಿರುವ ಬಿಜೆಪಿಯ ಬಲಪಂಥೀಯ ರಾಜಕಾರಣಕ್ಕೆ ಅನುವಾಗುವಂತೆ ತೀರ್ಪು ನೀಡಿ, ನಿವೃತ್ತಿಯ ನಂತರ ರಾಜ್ಯಸಭಾ ಸದಸ್ಯರಾದದ್ದು ತೀವ್ರ ಟೀಕೆಗೆ ಗುರಿಯಾಗಿತ್ತು. ರಾಜಕೀಯ ಮತ್ತು ನ್ಯಾಯಾಂಗದ ಒಳಒಪ್ಪಂದ ಹಾಗೂ ಸರ್ವಾಧಿಕಾರಿ ಪ್ರಭುತ್ವಗಳು ಎಲ್ಲ ಸ್ವತಂತ್ರ ಸಂಸ್ಥೆಗಳನ್ನು ಆಪೋಶನ ತೆಗೆದುಕೊಳ್ಳುವ ಜಾಗತಿಕ ಬಲಪಂಥೀಯ ಬೆಳವಣಿಗೆಯ ವಿದ್ಯಮಾನಕ್ಕೆ ಇವೆಲ್ಲಾ ಒಂದಕ್ಕೊಂದು ಬೆಸೆದುಕೊಂಡಂತೆ ಕಾಣುತ್ತವೆ.

ಇನ್ನು ಮಾಧ್ಯಮಗಳ ಕತ್ತು ಹಿಸುಕುವ ಭಾರತ ಮತ್ತು ಬ್ರೆಜಿಲ್ ಪ್ರಭುತ್ವಗಳ ವರ್ತನೆ ಹೆಚ್ಚುಕಡಿಮೆ ಒಂದೇ ತೆರನಾಗಿತ್ತು. ತನ್ನ ವಿರುದ್ಧದ ಟೀಕೆಯನ್ನೆಲ್ಲಾ ಫೇಕ್ ನ್ಯೂಸ್ ಎಂದು ತಳ್ಳಿಹಾಕುತ್ತಿದ್ದ ಬೊಲ್ಸೊನಾರೊ, ಮಾಧ್ಯಮದ ಸ್ವಾತಂತ್ರ್ಯಕ್ಕೆ ಕಂಟಕಪ್ರಾಯವಾಗಿದ್ದರು. ಸಾಮಾಜಿಕ ಮಾಧ್ಯಮಗಳು ಯಾವುದನ್ನಾದರೂ ಫೇಕ್ ನ್ಯೂಸ್ ಎಂದು ಕಂಡುಹಿಡಿದರೆ, ಅದನ್ನು ತೆಗೆದುಹಾಕದಂತೆ ನಿಷೇಧ ಹೇರುವ ನೀತಿಯನ್ನು ಬೊಲ್ಸೊನಾರೊ ಹೊರಡಿಸಿದ್ದರು. ಆದರೆ ಈ ಸರ್ವಾಧಿಕಾರದಿಂದ ತನ್ನ ಸುತ್ತಮುತ್ತಲಿನವರೇ ಎಷ್ಟು ರೋಸಿಹೋಗಿದ್ದರೆಂದರೆ, ಬ್ರೆಜಿಲ್ ಕಾಂಗ್ರೆಸ್ ಮತ್ತು ಸುಪ್ರೀಂ ಕೋರ್ಟ್ ಎರಡೂ ಈ ನೀತಿಯನ್ನು ವಜಾ ಆಗುವಂತೆ ನೋಡಿಕೊಂಡಿದ್ದವು. ಒಂದು ಕಡೆಗೆ ತನ್ನ ಚುನಾವಣಾ ರ್‍ಯಾಲಿಗಳಲ್ಲಿ ಅತ್ಯಧಿಕ ಜನಗಳನ್ನು ಸೆಳೆದು ತನ್ನ ವಿರುದ್ಧ ಗೆಲ್ಲಲು ಈ ಚುನಾವಣೆಯನ್ನು ಫಿಕ್ಸ್ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿದ್ದ ಬೊಲ್ಸೊನಾರೊ ಅತಿ ಸಣ್ಣ ಅಂತರದಿಂದ ಸೋತಿರುವುದನ್ನು ಈ ವೈರುಧ್ಯಗಳು ವಿವರಿಸುತ್ತವೆ. ಹೆಚ್ಚುಕಡಿಮೆ, ಯುಎಸ್‌ಎನಲ್ಲಿ ತನ್ನ ಜನಪ್ರಿಯತೆಯನ್ನು ಅಷ್ಟೇನು ಕಳೆದುಕೊಳ್ಳದೆಯೇ, ತನ್ನ ವಿರುದ್ಧ ಹೆಚ್ಚು ಜನ ಮತ ಚಲಾಯಿಸಬಹುದೆಂದು ಊಹಿಸಿ ಚುನಾವಣೆಗಳನ್ನು ಕದಿಯಲಾಗುತ್ತಿದೆ ಎಂದು ಪ್ರಚಾರ ಮಾಡಿದ ಡೊನಾಲ್ಡ್ ಟ್ರಂಪ್‌ನ ಪ್ರಚಾರದಂತೆಯೇ ಇದೂ ಇತ್ತು! ಬ್ರೆಜಿಲ್‌ನ ’ಮೆಟ್ರೋಪೊಲೀಸ್’ ಆನ್‌ಲೈನ್ ಸುದ್ದಿಜಾಲದ ರಾಜಕೀಯ ವರದಿಗಾರ ಫೇಬಿಯೋ ಲೆಯ್ಟೆ ’ನ್ಯಾಯಪಥ’ದೊಂದಿಗೆ ಮಾತನಾಡಿ ಈ ಸಣ್ಣ ಅಂತರದ ಗೆಲುವನ್ನು ಹೀಗೆ ಬಣ್ಣಿಸುತ್ತಾರೆ:

“ಇದು ಬ್ರೆಜಿಲ್‌ನ ಭವಿಷ್ಯದ ಪ್ರಶ್ನೆಯಾಗಿತ್ತು. ಆದರೆ ಮುಂದಿನ ವರ್ಷಗಳಲ್ಲಿ ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಏನು ಮಾಡುತ್ತೇವೆ ಎಂಬ ಯೋಜನೆಗಳೊಂದಿಗೆ ಈ ಅಧ್ಯಕ್ಷೀಯ ಚುನಾವಣೆ ನಡೆಯಲಿಲ್ಲ. ಹಿಂದೆಂದೂ ಕಾಣದಂತಹ ರಾಜಕೀಯ ಧ್ರುವೀಕರಣದ ನಡುವೆ ತೀವ್ರ ಬಲಪಂಥೀಯ ಮುಖಂಡ ಬೊಲ್ಸೊನಾರೊ ಆಯ್ಕೆ ಅಥವಾ ಎಡಪಂಥೀಯ ಆಯ್ಕೆ ಲೂಲಾ ನಡುವೆ ನಡೆದ ಚುನಾವಣೆಯಷ್ಟೇ ಇದು. ಆ ಕಾರಣಕ್ಕಾಗಿಯೇ ಇಷ್ಟು ಜಿದ್ದಾಜಿದ್ದಿಯ ಹೋರಾಟ ನಡೆದಿದೆ” ಎನ್ನುತ್ತಾರೆ.

ಇದನ್ನೂ ಓದಿ: ಇಂಟರ್‌ನ್ಯಾಷನಲ್ ಫೋಕಸ್; ಇದು ಬ್ರೆಜಿಲ್‌ನ ಕೊನೆಯ ಚುನಾವಣೆಯಾಗಲಿದೆಯೇ?

ಚುನಾವಣಾ ಸಮಯದಲ್ಲಿ ಮಾಧ್ಯಮಗಳ ಪಾತ್ರವೇನಾಗಿತ್ತು ಎಂಬ ಪ್ರಶ್ನೆಗೆ “ಹಲವು ಮುಖ್ಯವಾಹಿನಿ ಮಾಧ್ಯಮಗಳು, ಬೊಲ್ಸೊನಾರೊ ತಮ್ಮ ವಿರುದ್ಧ ನಡೆಸಿದ ದಾಳಿಯಿಂದ ರೋಸಿಹೋಗಿದ್ದವು. ಆದುದರಿಂದ ಅವುಗಳಲ್ಲಿ ಬಹುತೇಕ ಮಾಧ್ಯಮಗಳು ಈ ಚುನಾವಣೆಯಲ್ಲಿ ಬೊಲ್ಸೊನಾರೊನ ಆಡಳಿತ ಅವಧಿಯ ವೈಫಲ್ಯಗಳನ್ನು ಬಹಿರಂಗಗೊಳಿಸುವುದರಲ್ಲಿ ನಿರತವಾದವು. ಅವು ಲೂಲಾನ ನೀತಿಗಳ, ಸಿದ್ಧಾಂತದ ಪರವಾಗಿಲ್ಲದೆ ಹೋದರೂ, ಬೊಲ್ಸೊನಾರೊನ ತಪ್ಪುಗಳನ್ನು ತೋರಿಸುವುದರಲ್ಲಿ ಯಶಸ್ವಿಯಾದುದರಿಂದ ಲೂಲಾ ಗೆಲುವಿಗೆ ಅದು ಸಹಕಾರಿಯಾಯಿತು” ಎನ್ನುತ್ತಾರೆ ಫೇಬಿಯೋ.

ಚುನಾವಣಾ ಫಲಿತಾಂಶ ಬಂದು 24 ತಾಸು ಕಳೆದರೂ ಲೂಲಾ ಅವರಿಗೆ ಕನಿಷ್ಠ ಒಂದು ಅಭಿನಂದನೆಯನ್ನೂ ಬೊಲ್ಸೊನಾರೊ ತಿಳಿಸಿಲ್ಲ. ಇದು ಯಾವುದಾದರೂ ಅಪ್ರಜಾಸತ್ತಾತ್ಮಕ ಕ್ರಮಕ್ಕೆ ಮುಂದಾಗುವ ಮುನ್ಸೂಚನೆಯೇ ಎಂಬ ಆತಂಕಗಳೂ ಮನೆಮಾಡಿವೆ. ಈ ಆತಂಕಕ್ಕೆ ಪುಷ್ಠಿ ನೀಡುವಂತೆ ಬ್ರೆಜಿಲ್‌ನ ಹಲವು ಹೈವೇಗಳಲ್ಲಿ ಟ್ರಕ್‌ಗಳಲ್ಲಿ ಬಂದಿಳಿದ ಬೊಲ್ಸೊನಾರೊ ಬೆಂಬಲಿಗರು ರಸ್ತೆ ತಡೆ ನಡೆಸಿದ ಘಟನೆಗಳೂ ಜರುಗಿವೆ. (ಒಂದು ದಿನದ ನಂತರ ರಸ್ತೆಗಳನ್ನು ಬ್ರೆಜಿಲ್ ಅಧಿಕಾರಿಗಳು ತೆರವುಗೊಳಿಸುತ್ತಿರುವ ವರದಿಗಳು ಬಂದಿವೆ.) ಅದೂಅಲ್ಲದೆ, ಅಧ್ಯಕ್ಷ ಬೊಲ್ಸೊನಾರೊ ಅವರ ಮಗ ಫ್ಲೇವಿಯೋ ಬೊಲ್ಸೊನಾರೊ ಚುನಾವಣಾ ಫಲಿತಾಂಶದ ನಂತರ ಮಾಡಿದ ಟ್ವೀಟ್‌ಗಳು ಅಸ್ಪಷ್ಟವಾಗಿವೆ: “ನಾವು ನಮ್ಮ ತಲೆಗಳನ್ನು ಎತ್ತಿ ನಿಲ್ಲೋಣ ಮತ್ತು ಬ್ರೆಜಿಲ್‌ಅನ್ನು ಕೈಬಿಡುವುದು ಬೇಡ” ಎಂದಿದ್ದು “ದೇವರು ಇನ್‌ಚಾರ್ಜ್ ಆಗಿದ್ದಾರೆ” ಎಂಬ ಕ್ರಿಪ್ಟಿಕ್ ಸಂದೇಶಗಳನ್ನು ರವಾನಿಸಿದ್ದಾರೆ. ಟ್ರಂಪ್ ಅವರ ಸಹಾಯಕ ಸ್ಟೀವ್ ಬ್ಯಾನನ್ ಅವರಿಗೆ ಫ್ಲೇವಿಯೋ ಆಪ್ತರು ಎನ್ನಲಾಗುತ್ತದೆ. ಟ್ರಂಪ್ ಸೋಲಿನ ನಂತರದ ಕ್ಯಾಪಿಟೊಲ್ ಕಟ್ಟಡದ ಮೇಲೆ ನಡೆದ ಹಿಂಸಾತ್ಮಕ ದಾಳಿಯಲ್ಲಿ ಬ್ಯಾನನ್ ಅವರ ಕೈವಾಡವಿತ್ತೆಂಬ ಆರೋಪದಲ್ಲಿ ಅವರು ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

ಈ ಎಲ್ಲಾ ಅಡೆತಡೆಗಳನ್ನು ದಾಟಿ ಲೂಲಾ ಅಧ್ಯಕ್ಷರಾಗಿ ಮತ್ತೆ ಅಧಿಕಾರ ಸ್ವೀಕರಿಸಿದರೆ ಎಡಪಕ್ಷಗಳ ಗುಲಾಬಿ ಕ್ರಾಂತಿಗೆ ಇದು ಮತ್ತೊಂದು ಸೇರ್ಪಡೆಯಾಗಲಿದೆ. ಯುಎಸ್‌ಎ ರಾಜಕೀಯದಿಂದ ಪ್ರೇರಿತರಾದ ಮತ್ತು ಅದನ್ನೇ ಪ್ರತಿಪಾದಿಸುವ ’ಕ್ಲಾಸಿಕಲ್ ಲಿಬರಲ್’ಗಳು ಹಲವು ಬಾರಿ ಎಷ್ಟೋ ಎಡಪಂಥೀಯ ಮುಖಂಡರನ್ನೂ, ಟ್ರಂಪ್, ಬೋರಿಸ್ ಜಾನ್ಸನ್ ಹಾಗೂ ಬೊಲ್ಸೊನಾರೊರಂತವರ ಸಾಲಿಗೆ ಸೇರಿಸಿ, ’ಪಾಪ್ಯುಲಿಸ್ಟ್’ ನಾಯಕರು ಎಂದು ವರ್ಗೀಕರಿಸುವ ಚಾಳಿಯನ್ನು ಮುಂದುವರಿಸುತ್ತಾರೆ. ಅವರಿಗೆ ಧಾರ್ಮಿಕವಾಗಿ ’ಲಿಬರಲ್’ ಆಗಿದ್ದುಕೊಂಡು, ಆರ್ಥಿಕವಾಗಿ ಕಾರ್ಪೊರೆಟ್‌ಗಳು ಮಾತ್ರ ಬೆಳೆಯುವ ಮತ್ತು ಅವು ಶೋಷಿಸುವ ವಾತಾವರಣಕ್ಕೆ ಯಾವ ಅಡೆತಡೆಯೂ ಒಡ್ಡದ ನಾಯಕನಿರಬೇಕು. ಆರ್ಥಿಕ ಸಮಾನತೆ, ಅತಿ ಶ್ರೀಮಂತರಿಗೆ ಹೆಚ್ಚಿನ ತೆರಿಗೆ, ಬಡವರಿಗೆ ಸಮನಾಗಿ ಸಂಪನ್ಮೂಲಗಳನ್ನು ಹಂಚುವ ಕಾರ್ಯಕ್ರಮಗಳು ಇಂತಹ ಕ್ಲಾಸಿಕಲ್ ಲಿಬರಲ್‌ಗಳಿಗೆ ಅವಾಸ್ತವ ಮತ್ತು ಪಾಪ್ಯುಲಿಸ್ಟ್ ಯೋಜನೆಗಳಂತೆ ಕಾಣುತ್ತವೆ. ಹೀಗಾಗಿ ಚಿಲಿಯಲ್ಲಿನ ಅಧ್ಯಕ್ಷ ಗೇಬ್ರಿಯಲ್ ಬೋರಿಚ್ ಅವರನ್ನೂ ಪಾಪ್ಯುಲಿಸ್ಟ್ ಎಂದು ಬಗೆದು ಬದಿಗೆ ಸರಿಸಬಲ್ಲರು. ಬೋರಿಚ್ ಸರ್ಕಾರ ನೀಡಿದ ಸಮಾನತೆಯ ಸಂವಿಧಾನವನ್ನು ಜನಾಭಿಮತದಲ್ಲಿ ಸೋಲುವಂತೆ ಮಾಡಬಲ್ಲರು. ಇಂತಹ ಕ್ಲಾಸಿಕಲ್ ಲಿಬರಲ್‌ಗಳನ್ನು ಕೂಡ ಮೋಡಿ ಮಾಡಬಲ್ಲ ಮುಖಂಡ ಲೂಲಾ ಎಂಬ ಜನಪ್ರಿಯತೆ ಅವರಿಗಿದೆ. ಒಟ್ಟಿನಲ್ಲಿ ಪತ್ರಕರ್ತ ಫ್ಲೇವಿಯೋ ಹೇಳುವಂತೆ ಒಡೆದ ಬ್ರೆಜಿಲ್ ಮನೆಯನ್ನು ಒಂದುಗೂಡಿಸುವ ಕೆಲಸ ಎಲ್ಲಕ್ಕಿಂತ ತುರ್ತಾಗಿ ಮತ್ತು ಪ್ರಮುಖವಾಗಿ ಲೂಲಾ ಅವರ ಮುಂದಿದೆ. ಉಳಿದ ಸುಧಾರಣೆಗಳು ಅದನ್ನು ಅನುಸರಿಸುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...