Homeಅಂತರಾಷ್ಟ್ರೀಯಇಂಟರ್‌ನ್ಯಾಷನಲ್ ಫೋಕಸ್; ಇದು ಬ್ರೆಜಿಲ್‌ನ ಕೊನೆಯ ಚುನಾವಣೆಯಾಗಲಿದೆಯೇ?

ಇಂಟರ್‌ನ್ಯಾಷನಲ್ ಫೋಕಸ್; ಇದು ಬ್ರೆಜಿಲ್‌ನ ಕೊನೆಯ ಚುನಾವಣೆಯಾಗಲಿದೆಯೇ?

- Advertisement -
- Advertisement -

ಅಕ್ಟೋಬರ್ 2ರಂದು ಬ್ರೆಜಿಲ್‌ನ ಚುನಾವಣೆಗಳು ನಡೆದವು. ಚುನಾವಣಾ ಪೊಲ್‌ಗಳು ಮಾಜಿ ಅಧ್ಯಕ್ಷ ಲುಯೀಜ್ ಇನಾಷಿಯೊ ಲೂಲಾ ಡಾ ಸಿಲ್ವಾ ಹೊಸ ಅಧ್ಯಕ್ಷರಾಗಿ ಆಯ್ಕೆ ಆಗಬಹುದು ಎಂಬ ಸೂಚನೆಗಳನ್ನು ನೀಡಿವೆ. ಬ್ರೆಜಿಲ್‌ನ ಹೋಪ್ ಅಲಾಯನ್ಸ್ (ಭರವಸೆಯ ಮೈತ್ರಿಕೂಟ)ವನ್ನು ಪ್ರತಿನಿಧಿಸುತ್ತಿರುವ ಲೂಲಾ, ಹಾಲಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರನ್ನು ಸೋಲಿಸುವ ಲಕ್ಷಣಗಳು ಕಾಣುತ್ತಿವೆ. ಈ ಚುನಾವಣೆ ಇಡೀ ವಿಶ್ವಕ್ಕೆ ಮಹತ್ವದ ಚುನಾವಣೆಯಾಗಿದೆ. ಹವಾಮಾನ ವೈಪರೀತ್ಯವು ಅತ್ಯಂತ ಪ್ರಮುಖ ವಿಷಯವಾದ ಈ ಸಂದರ್ಭದಲ್ಲಿ, ಈ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಡೆಯುವಲ್ಲಿ ಅದರ ಮೂಲಕ ಇಡೀ ವಿಶ್ವವನ್ನು ಅದರಿಂದ ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅಮೆಜಾನ್ ರೇನ್ ಫಾರೆಸ್ಟ್‌ಗಳು ಬ್ರೆಜಿಲ್‌ನಲ್ಲಿವೆ. ಲೂಲಾ ಅವರ ಗೆಲವು ಥರ್ಡ್ ಪಿಂಕ್ ಅಲೆಯ ಗೆಲುವಿನಲ್ಲಿ (ದಕ್ಷಿಣ ಅಮೆರಿಕದಲ್ಲಿ ಎಡಪಂಥಕ್ಕೆ ವಾಲುವ ಚುನಾವಣೆಗಳನ್ನು ಹೀಗೆ ಕರೆಯಲಾಗುತ್ತದೆ) ಹೊಸ ಸೇರ್ಪಡೆಯಾಗಲಿದೆ. ಬ್ರೆಜಿಲ್ ಎಡಪಂಥದ ಕಡೆಗೆ ತಿರುಗಿದರೆ, ಇಡೀ ಲಾಟಿನ್ ಅಮೆರಿಕದಲ್ಲಿಯ ಪ್ರಗತಿಪರ ರಾಜಕೀಯಕ್ಕೆ ದೊಡ್ಡ ಗೆಲುವು ಬಂದಂತಾಗುತ್ತದೆ. ಈ ಚುನಾವಣೆಗಳಿಂದ ಬೊಲ್ಸೊನಾರೊನ ಮಿಲಿಟರಿ ಪರ ರಾಜಕೀಯದಿಂದಲೂ ದೂರ ಸರಿದಂತಾಗಬಹುದಾಗಿದೆ ಹಾಗೂ ಇದು ಬ್ರೆಜಿಲ್‌ನಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ನಿರ್ಣಾಯಕವಾಗಿದೆ. ಚುನಾವಣೆಗಳನ್ನು ಎರಡು ಸುತ್ತಿನಲ್ಲಿ ನಡೆಸಲಾಗುತ್ತದೆ. ಒಂದು ವೇಳೆ ಯಾವ ಅಭ್ಯರ್ಥಿಯೂ 50% ಮತಗಳನ್ನು ಪಡೆಯುವಲ್ಲಿ ವಿಫಲವಾದರೆ, ವಿಜಯಿ ಯಾರು ಎಂದು ನಿರ್ಣಯಿಸಲು ಎರಡನೆಯ ಹಂತದ ಚುನಾವಣೆ ನಡೆಯಲಿದೆ. ಹೆಚ್ಚಿನ ಮುನ್ಸೂಚನೆಗಳು ಲೂಲಾ ಅವರ ಗೆಲುವಿನತ್ತ ಬೊಟ್ಟು ಮಾಡಿವೆ.

ತನ್ನ ಬೆಂಬಲಿಗರಿಗೆ ಚುನಾವಣೆಯ ಫಲಿತಾಂಶಗಳನ್ನು ವಿರೋಧಿಸಲು ಸೂಚಿಸಿದ ಬೊಲ್ಸೊನಾರೊ

ಈ ಚುನಾವಣೆಗಳು ಇನ್ನಷ್ಟು ಕ್ಲಿಷ್ಟಕರವಾದವು ಏಕೆಂದರೆ 2022ರ ಸೆಪ್ಟೆಂಬರ್ 7ರಂದು ಬೊಲ್ಸೊನಾರೊ ತನ್ನ ಎರಡು ಪ್ರಚೋದನಾಕಾರಿ ಭಾಷಣಗಳ ಮೂಲಕ ಜಗತ್ತನ್ನೇ ಬೆಚ್ಚಿಬೀಳಿಸಿದರು. ಮುಂದಿನ ಚುನಾವಣೆಗಳಲ್ಲಿ ಒಂದು ವೇಳೆ ತಾನು ಸೋತರೆ ಬೀದಿಗಿಳಿದು ಪ್ರತಿಭಟನೆ ಮಾಡಬೇಕು ಎಂದು ತನ್ನ ಬೆಂಬಲಿಗರಿಗೆ ಬೊಲ್ಸೊನಾರೊ ತಾಕೀತು ಮಾಡಿದರು. ಈ ಭಾಷಣಗಳನ್ನು ದೇಶದ ರಾಜಧಾನಿಯಾದ ಬ್ರೆಸಿಲಿಯಾ ಮತ್ತು ದೇಶದ ಅತ್ಯಂತ ದೊಡ್ಡ ನಗರವಾದ ಸಾವೊ ಪಾವ್ಲೊನಲ್ಲಿ ಮಾಡಿದರು. ತನ್ನ ವಿರುದ್ಧ ಚುನಾವಣೆಗಳನ್ನು ಫಿಕ್ಸ್ ಮಾಡಲಾಗಿದೆ ಎಂಬ ಪಿತೂರಿಯ ಸಿದ್ಧಾಂತಗಳನ್ನು ಹರಡಲು ಬೊಲ್ಸೊನಾರೊ ಈ ಭಾಷಣಗಳಲ್ಲಿ ಶುರು ಹಚ್ಚಿಕೊಂಡರು. ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್‌ಗಳನ್ನು (ಇವಿಎಂ) ತನ್ನ ವಿರುದ್ಧ ಕೆಲಸ ಮಾಡುವಂತೆ ತಿರುಚಲಾಗಿದೆ ಎಂದು ಪ್ರತಿಪಾದಿಸಿದರು. ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಸೈನ್ಯವನ್ನು ಬಳಸಿಕೊಳ್ಳಲು ಕೂಡ ಬೊಲ್ಸೊನಾರೊ ಸಿದ್ಧರಾಗಿದ್ದಾರೆ. ಅವರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಲೂಯಿಜ್ ಫಕ್ಸ್ ಅವರಿಗೇ ಬೆದರಿಕೆ ಹಾಕಿದರು ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ತಾನು ಗೌರವಿಸುವುದಿಲ್ಲ ಎಂತಲೂ ಹೇಳಿದ್ದಾರೆ. ದೇವರು ಮಾತ್ರವೇ ತನ್ನನ್ನು ಅಧಿಕಾರದಿಂದ ಕೆಳಗಿಳಿಸಬಹುದು ಹಾಗೂ ತಾನು ಅಧಿಕಾರದಿಂದ ಕೆಳಗಿಳಿಯಬೇಕಾದರರೆ ತಾನು ಸಾಯಬೇಕು ಅಥವಾ ತನ್ನನ್ನು ಬಂಧಿಸಬೇಕು ಎಂತಲೂ ಹೇಳಿದ್ದಾರೆ, ಆದರೆ ಅವರನ್ನು ಬಂಧಿಸಲಾಗುವುದಿಲ್ಲ. ರ್‍ಯಾಲಿಗಳಲ್ಲಿ 1 ರಿಂದ 2 ಲಕ್ಷ ಜನರು ಭಾಗವಹಿಸಿದ್ದರು ಹಾಗೂ ಅನೇಕ ಸಣ್ಣ ನಗರಗಳಲ್ಲೂ ಬೊಲ್ಸೊನಾರೊ ಬೆಂಬಲಿಗರಿಂದ ಪ್ರದರ್ಶನಗಳು ನಡೆದಿವೆ.

ಪ್ರಜಾಪ್ರಭುತ್ವ ಅಥವಾ ಸೈನ್ಯ

ಅಮೆರಿಕದಿಂದ ಪ್ರಾಯೋಜಿತ ಕ್ಷಿಪ್ರ ಕ್ರಾಂತಿಯ ನಂತರ, 1964ರಿಂದ 1965ರವರೆಗೆ ಬ್ರೆಜಿಲ್ ಮಿಲಿಟರಿ ಆಡಳಿತದಲ್ಲಿತ್ತು. ಈ ಮಿಲಿಟರಿ ಆಳ್ವಿಕೆಯು ಅತ್ಯಂತ ಕ್ರೂರವಾದ ಆಡಳಿತವಾಗಿತ್ತು. ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಸೈನ್ಯವು ಚಿತ್ರಹಿಂಸೆಯನ್ನು ಕೂಡ ತನ್ನ ಆಯುಧವನ್ನಾಗಿಸಿಕೊಂಡಿತು. ಸೈನ್ಯವು ಅಮೆರಿಕ ಮತ್ತು ಬ್ರಿಟಿಷ್ ಸರಕಾರಗಳಿಂದ ತರಬೇತಿ ಪಡೆಯಿತು ಹಾಗೂ ಕಮ್ಯುನಿಸ್ಟ್ ಅಂಶಗಳನ್ನು ದೇಶದಿಂದ ಕಿತ್ತೊಗೆಯಲು ಅದನ್ನು ಬಳಸಿಕೊಂಡಿತು.

ಇದನ್ನೂ ಓದಿ: ಸ್ವೀಡನ್ ಸಾರ್ವತ್ರಿಕ ಚುನಾವಣೆಗಳು ಏನನ್ನು ಸೂಚಿಸುತ್ತದೆ?

ಪ್ರಜಾಪ್ರಭುತ್ವಕ್ಕೆ ಮರಳಿ ಬಂದರೂ, ಬ್ರೆಜಿಲ್‌ನ ಸಶಸ್ತ್ರ ಪಡೆಗಳು ಸರಕಾರದಲ್ಲಿ ಒಂದು ಪ್ರಬಲ ಶಕ್ತಿಯಾಗಿ ಉಳಿದಿವೆ. ಸರಕಾರದ ಒಳಗಡೆಯೇ, ನಾಯಕತ್ವದ ಅನೇಕ ಸ್ಥಾನಗಳನ್ನು ಬ್ರೆಜಿಲ್‌ನ ಸೈನ್ಯವು ನಿಯಂತ್ರಿಸುತ್ತದೆ. ಪ್ರಜಾಪ್ರಭುತ್ವಕ್ಕೆ ಮರಳಿ ಬಂದ ನಂತರ ಹಲವಾರು ಸುಧಾರಣೆಗಳಾದರೂ ಅವುಗಳು ಪೊಲೀಸ್ ಮತ್ತು ಸಶಸ್ತ್ರ ಪಡೆಗಳನ್ನು ಮುಟ್ಟಲಿಲ್ಲ. ಇಡೀ ಅಮೆರಿಕ ಖಂಡದಲ್ಲಿ ಯುಎಸ್‌ಎ ನಂತರ ಅತ್ಯಂತ ದೊಡ್ಡ ಸೈನ್ಯವನ್ನು ಹೊಂದಿರುವುದು ಬ್ರೆಜಿಲ್ ದೇಶವೇ ಆಗಿದೆ. ಯುಎಸ್‌ಎಯಂತೆಯೇ, ಮಿಲಿಟರಿಗೆ ಪೊಲೀಸ್‌ನೊಂದಿಗೆ ಗಟ್ಟಿಯಾದ ಆರ್ಥಿಕ ಸಂಬಂಧಗಳಿವೆ. ತಮ್ಮ ಇರುವಿಕೆಯನ್ನು ಸಮರ್ಥಿಸಿಕೊಳ್ಳಲು 80ರ ದಶಕದ ಪ್ರಾರಂಭದಿಂದ ಬ್ರೆಜಿಲ್‌ನ ಸಶಸ್ತ್ರ ಪಡೆಗಳು, ನಂತರ ಪೊಲೀಸ್ ವ್ಯವಸ್ಥೆಯು ತಮ್ಮ ಗಮನವನ್ನು ಕಮ್ಯುನಿಸ್ಟ್‌ರನ್ನು ಹತ್ತಿಕ್ಕುವುದರಿಂದ ಮಾದಕ ವಸ್ತುಗಳ ಗ್ಯಾಂಗ್‌ಗಳನ್ನು ಸದೆಬಡಿಯುವುದಕ್ಕೆ ಬದಲಿಸಿಕೊಂಡವು. ಪ್ರಜಾಪ್ರಭುತ್ವಕ್ಕೆ ಮರಳಿದ ನಂತರದಿಂದ ಬ್ರೆಜಿಲ್‌ನ ಪೊಲೀಸರು ಮಿಲಿಟರಿ ಮಟ್ಟದ ಉಪಕರಣಗಳನ್ನು ಬಳಸಲು ಶುರು ಮಾಡಿದ್ದಾರೆ ಹಾಗೂ ಮಿಲಿಟರಿ ತರಬೇತಿಯನ್ನು ಪಡೆಯುತ್ತಿದ್ದಾರೆ.

ಹಿಂದಿನ ಕಾಲದ ವಸಾಹತುಗಳ ಹೆಚ್ಚಿನ ಪ್ರದೇಶಗಳಲ್ಲಿ ಸ್ಥಳೀಯ ಜನರನ್ನು ನಿಯಂತ್ರಿಸಲು ಸೈನ್ಯವನ್ನು ರಚಿಸಲಾಗಿತ್ತೇ ಹೊರತು ಶತ್ರುಗಳಿಂದ ದೇಶವನ್ನು ರಕ್ಷಿಸಲು ರಚಿಸಲಾಗಿದ್ದಿಲ್ಲ. ಕೆಲವು ಪ್ರಕರಣಗಳಲ್ಲಿ ಸೈನ್ಯವು ದೇಶದ ಒಂದು ಸಣ್ಣ ವಲಯವನ್ನು ಆಕ್ರಮಿಸಿಕೊಂಡಿದೆ ಹಾಗೂ ಅಲ್ಲಿ ಅದೇ ಒಂದು ಆಕ್ರಮಣಕಾರಿ ಶಕ್ತಿಯಾಗಿ ಉಳಿದುಕೊಂಡಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ಸೈನ್ಯವು ಸರಕಾರದ ಭಾಗವಾಗಿದೆ. ಇನ್ನು ಕೆಲವು ಪ್ರಕರಣಗಳಲ್ಲಿ, ಮುಖ್ಯವಾಗಿ ಅಸ್ಥಿರತೆಯ ಸಮಯದಲ್ಲಿ ಸರಕಾರವನ್ನು ಕಬಳಿಸಲು ಕಾಯುತ್ತ ನಿಂತಿದೆ. ಸ್ವಾತಂತ್ರ್ಯ ಪಡೆದ ನಂತರ ಅನೇಕ ಸ್ವತಂತ್ರ ನಾಯಕರು ಒಂದು ಬಲಶಾಲಿಯಾದ ಸೈನ್ಯವು ಒಡ್ಡಬಹುದಾದ ಸಮಸ್ಯೆಗಳನ್ನು ಬಗೆಹರಿಸಲು ಬೇರೆಬೇರೆ ತಂತ್ರಗಳನ್ನು ಬಳಸಿದ್ದಾರೆ. ಕೆಲವು ಸಲ ಅವರುಗಳು ಒಂದು ನಾಗರಿಕ ಸರಕಾರದ ನಿಯಂತ್ರಣವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಆದರೆ ಎಲ್ಲಾ ಸಮಯದಲ್ಲಿ ಅದು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಇಂಟರ್‌ನ್ಯಾಷನಲ್ ಫೋಕಸ್; ಇಟಲಿಯಲ್ಲಿ ಮೆಲೋನಿ ಜಯ: ಬಲಕ್ಕೆ ವಾಲುತ್ತಿರುವ ಯುರೋಪ್

ಪ್ರಜಾಪ್ರಭುತ್ವಕ್ಕೆ ಸೈನ್ಯವೇ ಅಪಾಯವೊಡ್ಡಿದ್ದಲ್ಲಿ, ಸೈನ್ಯವನ್ನು ಬೆಂಬಲಿಸುವವರು ಯಾರು?

ಸೈನ್ಯಕ್ಕೆ ಎರಡು ಕಡೆಗಳಿಂದ ಬೆಂಬಲ ಬರುತ್ತದೆ. ಮೊದಲನೆಯದಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಸಾಹತುಶಾಹಿ ಶಕ್ತಿಗಳಿಗೆ ಮಿಲಿಟರಿಯೊಂದಿಗೆ ವ್ಯವಹಾರ ಮಾಡುವುದು, ನಾಗರಿಕ ಸರಕಾರದೊಂದಿಗೆ ವ್ಯವಹಾರ ಮಾಡುವುದಕ್ಕಿಂತ ತುಂಬಾ ಸುಲಭ. ದೇಶದೊಳಿಗೆ ಆಂತರಿಕವಾಗಿ ನೋಡಿದರೆ, ಸೈನ್ಯಕ್ಕೆ ಶ್ರೀಮಂತ ಮತ್ತು ಮಧ್ಯಮ ವರ್ಗದ ಬೆಂಬಲ ಸಿಗುತ್ತದೆ. ಮಿಲಿಟರಿ ಸರಕಾರಗಳು ಹಾಗೂ ಬೊಲ್ಸೊನಾರೊ ತರಹದ ಮಿಲಿಟರಿ ಪರ ರಾಜಕಾರಿಣಿಗಳು ಸಾಮಾನ್ಯವಾಗಿ ಕಾರ್ಪೊರೆಟ್ ಪರವಾಗಿ ಇರುತ್ತಾರೆ ಹಾಗೂ ಕಾರ್ಪೊರೆಟ್‌ಗಳ ಹಿಡಿತದಲ್ಲಿರುವ ಮಾಧ್ಯಮಗಳಿಂದ ಬಹಳಷ್ಟು ಬೆಂಬಲ ಪಡೆಯುತ್ತಾರೆ. ಚುನಾವಣೆಯ ಸಂದರ್ಭದಲ್ಲಿ ಕಾರ್ಪೊರೆಟ್ ಮಾಲೀಕತ್ವದ ಮಾಧ್ಯಮಗಳು ಜನಸಮೂಹದ ಬೆಂಬಲವನ್ನು ಪ್ರಭಾವಿಸಬಹುದು. ಇಂತಹ ಬಲಪಂಥೀಯ ನಾಯಕರು ತಂದೊಡ್ಡುವ ಅಪಾಯಗಳ ಬಗ್ಗೆ ಜನಸಮೂಹಕ್ಕೆ ಅರಿವಿದ್ದರೂ, ಮಾಧ್ಯಮಗಳು ಮಾಡುವ ಪ್ರಚಾರದ ಅಬ್ಬರಕ್ಕೆ ಮತ್ತು ಅವರ ಕಾರ್ಯವೈಖರಿಯ ಕಾರಣದಿಂದ ಹಲವು ರೀತಿಯ ಸೂಕ್ಷ್ಮತೆಯ ಚರ್ಚೆಗಳು ಮಾಧ್ಯಮಗಳಲ್ಲಿ ಇರಲು ಸಾಧ್ಯವಾಗದಂತೆ ಮಾಡಿವೆ. ಜನರಲ್ಲಿಯ ಅಭಿಪ್ರಾಯಗಳಲ್ಲಿ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ತಿರುಚುವ ಕೆಲಸ ಮಾಡಿ, ಪ್ರಗತಿಪರ ಅಭ್ಯರ್ಥಿಗಳು ದುಷ್ಟರೆಂಬಂತೆ ಬಿಂಬಸಲು ಸಾಧ್ಯವಾಗುತ್ತದೆ. ಆತಂಕವನ್ನು ಸೃಷ್ಟಿಸಲು ಕೆಲವು ಸಂದೇಶಗಳನ್ನು ಪದೇಪದೇ ಬಿತ್ತರಿಸಬಹುದಾಗಿದೆ. ಎಡಪಂಥೀಯ ರಾಜಕಾರಿಣಿಗಳನ್ನು ಬೆಂಬಲಿಸುವ ಜನರಿಗೆ, ಇಂತಹ ಸಂದೇಶಗಳು ಆತ್ಮವಿಶ್ವಾಸ ಕಳೆದುಕೊಳ್ಳುವಂತೆ ಮಾಡುವ ಶಕ್ತಿ ಹೊಂದಿವೆ. ಬಲಪಂಥೀಯ ರಾಜಕಾರಣವನ್ನು ಬೆಂಬಲಿಸುವವರಿಗೆ ಇಂತಹ ಸಂದೇಶಗಳು ಆತ್ಮವಿಶ್ವಾಸ ಹೆಚ್ಚಿಸುವ ಸಾಮರ್ಥ್ಯ ಹೊಂದಿವೆ.

ಬೊಲ್ಸೊನಾರೊಗೆ ಬ್ರೆಜಿಲ್‌ನ ಮಧ್ಯಮವರ್ಗದಲ್ಲಿಯೂ ಗಟ್ಟಿಯಾದ ಬೆಂಬಲವಿದೆ. ಅನೇಕರು ಅವರನ್ನು ಸ್ಥಿರತೆಯ ಮೂಲವನ್ನಾಗಿ ನೋಡುತ್ತಾರೆ. ಕೋವಿಡ್19 ಸಾಂಕ್ರಾಮಿಕವನ್ನು ಭಯಾನಕ ಎನ್ನುವಂತೆ ತಪ್ಪಾಗಿ ನಿರ್ವಹಿಸಿದ್ದರೂ, ಸಾಂಕ್ರಾಮಿಕಕ್ಕಿಂತ ಮುನ್ನವೇ ಅನೇಕ ರಾಜಕೀಯ ಮತ್ತು ಆರ್ಥಿಕ ಹಗರಣಗಳು ಹೊರಬಂದಿದ್ದರೂ ಹಾಗೂ ದೇಶದ ಆರ್ಥಿಕತೆಯನ್ನು ನಿರ್ವಹಿಸುವುದರಲ್ಲಿ ಸ್ಪಷ್ಟವಾಗಿ ವಿಫಲವಾಗಿದ್ದರೂ, ತಮ್ಮ ಸಾಮಾಜಿಕ ಸ್ಥಾನವನ್ನು ಯಥಾವತ್ತಾಗಿ ಉಳಿಸಲೇಬೇಕೆಂದು ಬಯಸುವ ಅನೇಕರಿಗೆ ಬೊಲ್ಸೊನಾರೊನ ಆಕ್ರಮಣಕಾರಿ ಮತ್ತು ಹುಸಿಪೌರುತ್ವದ ಶೈಲಿ ಇಷ್ಟವಾಗುತ್ತದೆ. ತಾಂತ್ರಿಕವಾಗಿ ನೋಡಿದರೆ, ಅವರು ಅಲ್ಪಸಂಖ್ಯಾತರಾದರೂ ತನ್ನ ರ್‍ಯಾಲಿಗಳಿಗೆ ಲಕ್ಷಾಂತರ ಜನರನ್ನು ಸೇರಿಸುವಲ್ಲಿ ಬೊಲ್ಸೊನಾರೊ ಯಶಸ್ವಿಯಾಗುತ್ತಾರೆ. ಚುನಾವಣಾ ಸಮೀಕ್ಷೆಗಳಲ್ಲಿ ಲೂಲಾಗಿಂತ ಹಿಂದಿದ್ದರೂ, 30-40% ಮತಗಳನ್ನು ಪಡೆಯುವ ನಿರೀಕ್ಷೆ ಇದೆ. ಬೊಲ್ಸೊನಾರೊಗೆ ಧಾರ್ಮಿಕ ಮತಗಳ ಗಟ್ಟಿಯಾದ ಬೆಂಬಲವಿದೆ; ಅವರು ಬೊಲ್ಸೊನಾರೊನನ್ನು ಒಬ್ಬ ಸಾಂಪ್ರದಾಯಿಕ ಶಕ್ತಿಯಾಗಿ ಕಾಣುತ್ತಾರೆ. ಮಿಲಿಟರಿ ಪರ ಅಭ್ಯರ್ಥಿಯಾಗಿರುವ ಬೊಲ್ಸೊನಾರೊ, ಮಾದಕ ವಸ್ತುಗಳ ವಿಷಯದಲ್ಲಿ ಕಟುವಾಗಿದ್ದಾರೆ ಹಾಗೂ ಸಾಂಪ್ರದಾಯಿಕ ಮೌಲ್ಯಗಳ ಸಂಕೇತವಾಗಿದ್ದಾರೆ ಎಂದು ಬಿಂಬಿಸಲಾಗಿದೆ. ಮಧ್ಯಮ ವರ್ಗದ ಹತಾಶೆಗಳೊಂದಿಗೆ ಆಟವಾಡುತ್ತ, ತನ್ನ ನೀತಿಗಳು ಮತ್ತು ವರ್ತನೆಗಳಲ್ಲಿ ಆದ ದೋಷಗಳನ್ನು ಮರೆಮಾಚಲು ಯಾವ್ಯಾವುದೋ ಪಿತೂರಿಯ ಸಿದ್ಧಾಂತಗಳನ್ನು ತೇಲಿಬಿಟ್ಟಿದ್ದಾರೆ, ಹಾಗಾಗಿ ಅವರನ್ನು ಸಂಪೂರ್ಣವಾಗಿ ಸೋಲಿಸುವುದು ಕಷ್ಟಸಾಧ್ಯ.

ಉದ್ವಿಘ್ನ ಭವಿಷ್ಯ

ವಿಶ್ವಾದ್ಯಂತ ತೀವ್ರ ಬಲಪಂಥೀಯ ಪಕ್ಷಗಳು ಅಧಿಕಾರಕ್ಕೆ ಬಂದಾಗಲೆಲ್ಲ, ಅದು ಪ್ರಜಾಪ್ರಭುತ್ವದ ಕೊನೆಯೇ ಎಂದು ಪ್ರಗತಿಪರರು ಆತಂಕ ವ್ಯಕ್ತಪಡಿಸಿದ್ದಾರೆ. ಮಿಲಿಟರಿಯ ಸಖ್ಯ ಮತ್ತು ಬೊಲ್ಸೊನಾರೊನ ರ್‍ಯಾಲಿಗಳಲ್ಲಿ ಬಂದ ಲಕ್ಷಾಂತರ ಜನಸಮೂಹವನ್ನು ನೋಡಿದರೆ, ಭವಿಷ್ಯ ಚಿಂತಾಜನಕವಾಗಿದೆ ಎಂದು ಹೇಳಬಹುದು.

(ಮೊದಲ ಸುತ್ತಿನ ಚುನಾವಣೆಯಲ್ಲಿ ಯಾರೂ ನಿರ್ಣಾಯಕ 50% ಮತಗಳನ್ನು ಪಡೆಯದ ಕಾರಣ, ಎರಡನೆಯ ಹಂತದ ರನ್‌ಆಫ್ ಚುನಾವಣೆಗಳು ಅಕ್ಟೋಬರ್ 30 ರಂದು ನಡೆಯಲಿವೆ – ಅನುವಾದಕರ ಟಿಪ್ಪಣಿ)

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...