ನಾವು ಇದುವರೆಗೂ ಹೆಡಗೇವಾರ್ರನ್ನ, ಹೆಡಗೇವಾರ್ ಎಂದು ಭಾವಿಸಿದ್ದರೆ, ಎಸ್. ಎಲ್. ಭೈರಪ್ಪನವರು ಪರಮಪೂಜ್ಯ ಹೆಡಗೇವಾರ್ ಎಂದು ಕರೆದು ಈ ನಾಡಿಗೇ ಅಚ್ಚರಿ ಮೂಡಿಸಿದ್ದಾರಲ್ಲಾ. ನಾವು ತಿಳಿದಂತೆ ಭೈರಪ್ಪನ ಪೂಜ್ಯರು ಸಂತೇಶಿವರದ ಚನ್ನಿಗ ರಾಯ ಅಂತೆ. ಅಥವ ಆ ಹೆಸರಿನ ಆಸುಪಾಸಿನವರು. ಆದರೀಗ
ಭೈರಪ್ಪ ನಮ್ಮ ಪರಮಪೂಜ್ಯರು ಎನ್ನಲಾಗಿ, ಪರಮಪೂಜ್ಯ ಎಂದರೆ ಪಿತಾಮಹರ ಸಮಾನ ಎಂಬ ಅರ್ಥವು ಬರುವುದರಿಂದ ಸದರಿ ಹೆಡೆಗೆವಾರ್ ಭೈರಪ್ಪನವರಿಗೆ ಪಿತಾಮಹನ ಸಮನಾಗಿರುವ ಪ್ರಯುಕ್ತ ಅವರು ಪಠ್ಯದಲ್ಲಿ ಇದ್ದರೆ ತಪ್ಪೇನು ಎನ್ನುವ ವಾದವೂಂದು ಮುಗ್ಧ ಜನರಿಂದ ಶುರುವಾಗಿದೆಯಂತಲ್ಲಾ. ಈ ಸಂಚನ್ನ ಅರಿತೇ ಭೈರಪ್ಪ ಅಳೆದು ತೂಗಿ ಪರಮಪೂಜ್ಯ ಪದ ಎಸೆದಿದ್ದಾರಂತಲ್ಲಾ.
ಸದರಿ ಭೈರಪ್ಪರನ್ನ ಸಂತೆಶಿವರದ ಒಕ್ಕಲಿಗರು ಕುರುಬರು ಅಕ್ಕಿ ರಾಗಿ ಕಾಯಿ ಕಸಿ ಕೊಟ್ಟು ಸಾಕಿದರು. ಓದಲು ಸಹಾಯ ಮಾಡಿದರು. ಅದರೆ ಭೈರಪ್ಪ ಬೆಳೆದು ದೂಡ್ಡವರಾಗಿ ವಿದ್ವಾಂಸನಾಗಿ ಆರೆಸ್ಸೆಸ್ ಪ್ರೋಫೆಸರ್ರಾದರೂ ಸಂತೇಶಿವರದ ಜನಕ್ಕೆ ಮಹಾದ್ರೋಹವಾಗಿ ಕಂಡೇ ಇಲ್ಲವಂತಲ್ಲಾ. ಸದ್ಯ ಪಠ್ಯ ಪರಿಷ್ಕರಣವಷ್ಟೇ ಅಲ್ಲ. ಈ ಸಾಹಿತಿಗಳು ಜಗಳಗಂಟರು, ಕಳೆದ ಅರವತ್ತು ವರ್ಷದಿಂದ ನನ್ನ ವಿರುಧ್ಧ ಜಗಳವಾಡಿದ್ದಾರೆ, ಈಗಲೂ ಅವರ ಮುಂದುವರೆದ ಸಂತತಿ ಈ ಎಲ್ಲದಕ್ಕೂ ಜಗಳ ಕಾಯುತ್ತಿದೆ ಎಂದರಂತಲ್ಲಾ. ಹೀಗಿರುವಾಗ ಈ ಭೈರಪ್ಪನ ಪಾದಗೋಚರಿಸಿದ ಕೂಡಲೇ ಡೈ ಹೊಡೆಯುವ ಜ್ಞಾನಪೀಠಿ ಕಂಬಾರರು ಈವರೆಗೆ ಬಾಯನ್ನೆ ಬಿಡದಿರುವುದು ಯಾರಿಗೂ ಆಶ್ಚರ್ಯ ತಂದಿಲ್ಲವಂತಲ್ಲಾ ಥೂತ್ತೇರಿ
******
ಇದ್ದಕ್ಕಿದ್ದಂತೆ ಆಮ್ಆದ್ಮಿ ಪಕ್ಷ ಈಶ್ವರಪ್ಪನ ಮೇಲೆ ಕಾರ್ಯಕ್ರಮ ಹಾಕಿಕೊಂಡು, ಅಂದು ಕಾಡುಗಳ್ಳ ವೀರಪ್ಪ ಇಂದು ಶಿವಮೊಗ್ಗ ಕಳ್ಳ ಈಶ್ವರಪ್ಪ ಎಂಬ ಪ್ಲೆಕ್ಸ್ಗಳನ್ನು ಹಿಡಿದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟ ಬಗ್ಗೆ ಕುತೂಹಲಗೊಂಡು, ಈ ಬಗ್ಗೆ ಈಶ್ವರಪ್ಪನವರಿಗೆ ಪೋನ್ ಮಾಡಿ ತಿಳಿದುಕೊಳ್ಳಬೇಕೆನಿಸಿದ ಕೂಡಲೇ, ಯಡೂರಪ್ಪನವರ ಕಡೆಯಿಂದ ಪೋನ್ ನಂಬರ್ ಪಡೆದು ಪೋನ್ ಮಾಡಿದರೆ ರಿಂಗಾಯ್ತು. ರಿಂಗ್ ಟೋನ್ ’ನಮಸ್ತೇ ಸದಾವತ್ಸಲೇ ಮಾತೃಭೂಮಿ’.
“ಹಲೊ ಹಲೊ ನಾನು ಸರ್ ಯಾಹೂ”.
“ಏನ್ರಿ ಯಾಹೂ ಭಾಳ ದಿನದ ಮ್ಯಾಲೆ ಫೋನ್ ಮಾಡಿದ್ದೀರಿ”.
“ಒಂದಿಷ್ಟು ಮಾತಾಡಬೇಕು ಸಾರ್”.
“ಬನ್ರಿ ಮನಿಗೆ ಆರಾಮಾಗಿದ್ದಿನಿ ಮಾತಾಡನ”.
“ಬರ್ತಿನಿ ಸಾರ್ ಯಾವಾಗ್ಲಾರ ಬಿಡುವು ಮಾಡಿಕೊಂಡು. ಮಾತಾಡನ. ಈಗೊಂದೆರಡು ಪ್ರಶ್ನೆ ಸಾರ್”.
“ಕೇಳಿ, ಅದಕೆ ಅಲವ ನೀವು ಪೋನ್ ಮಾಡಿದ್ದು. ನಿಮ್ಮ ಪತ್ರಕರ್ತರ ಚಾಳಿ ನಂಗೊತ್ತಿಲ್ವ”.
“ಸಿದ್ದರಾಮಯ್ಯ ಆರೆಸ್ಸೆಸ್ ಬಗ್ಗೆ ಭಯ ಅಂದವುರಲ್ಲ ಸಾರ್”.
“ಭಯನೆ ಮತ್ತೆ. ಅರೆಸ್ಸೆಸ್ಗೆ ಸಿದ್ದರಾಮಯ್ಯನೂ ಹೆದರಬೇಕು, ಮತ್ತೊಬ್ಬನೂ ಹೆದರಬೇಕು”.
“ನಿಜ ಸಾರ್ ಅಂತ ಗಾಂಧಿನೆ ಕೊಂದಾಕಿದ ಗೋಡ್ಸೆ ಪ್ರಕರಣದಲ್ಲಿ ಆರೋಪಿತನಾಗಿ ಜಯಿಸಿಗಂಡ ಸಂಘಟನೆ ಅದು. ಇನ್ನ ಸಿದ್ದರಾಮಯ್ಯ ಯಾವ ಲೆಕ್ಕ ಅಲ್ವೆ”.
“ರಿ ಗಾಂಧಿ ಕೊಂದಿದ್ದು ಅರೆಸ್ಸೆಸ್ ಅಲ್ಕಂಡ್ರಿ. ಅಲ್ಲಿ ಬೇರೆ ಕಡಿಂದ ಒಂದು ಗುಂಡು ಬಂತು. ಅದನ್ನ ಯಾರು ತನಿಖೆ ಮಾಡಲಿಲ್ಲ”.
“ಪಾಕಿಸ್ತಾನದ ಕಡಿಂದ ಬಂದಿರಬೇಕಲ್ಲವ ಸಾರ್”.
“ಇನ್ನೇನ್ರಿ ಮತ್ತೆ, ಆ ಬಗ್ಗೆ ತನಿಖೆನೆ ಮಾಡಲಿಲ್ಲ”.
“ಅರೆಸ್ಸೆಸ್ ವಿಷಯಕ್ಕೆ ಬಂದ್ರೆ ಉರುದೋಯ್ತಿರಿ ಅಂತ ಸಿದ್ದರಾಮಯ್ಯನ್ನ ಹೆಸರಿಸಿದಿರಿ. ಯಾಕ್ ಸಾರ್”.
“ಅರೆಸ್ಸೆಸ್ ಒಂದು ದೇಶಭಕ್ತಿ ಸಂಘಟನೆ ಕಂಡ್ರಿ. ಪಾಪ ಅವುರು ಮನೆಮಠದ ಯೋಚನೆ ಬಿಟ್ಟು, ಸಂಸಾರದ ಸುಖ ಬಿಟ್ಟು ಯಾವಾಗ್ಲೂ ದೇಶದ ಬಗ್ಗೆ ಯೋಚನೆ ಮಾಡ್ತರೆ”.
“ಹುಡುಗರಿಗೆ ದೇಶಭಕ್ತಿ ಕಲುಸ್ತರೆ. ಹುಡುಗರನ್ನ ಜೊತೆಲೆ ಇಟ್ಟುಕೊಂಡು ದೇಶಭಕ್ತಿ ಅಂದ್ರೇನು, ನಮ್ಮ ಸಂಸ್ಕೃತಿ ಅಂದ್ರೇನು ಅಂತ ಹೇಳಿಕೊಡ್ತಾರೆ”.
“ನೀವು ಆರೆಸ್ಸೆಸ್ನಲ್ಲಿ ಇದ್ರಲ್ಲವ ಸಾರ್?”
“ಈಗ್ಲು ಇದ್ದಿನಿ”.
“ಮತ್ತೆ ಸಂಸಾರಸ್ಥರಾಗಿದಿರಿ. ಕೋಟ್ಯಾನು ಕೋಟಿ ಆಸ್ತಿ ಮಾಡಿದಿರಿ. ಭ್ರಷ್ಟಾಚಾರ ಮಾಡದು ದೇಶದ್ರೋಹದ ಕೆಲಸವಂತೆ. ಅಂತ ಕೆಲಸ ಮಾಡಿ ಮಂತ್ರಿಗಿರಿ ಕಳಕೊಂಡು ಮನೆಲಿದಿರಿ. ಮತ್ತೆ ಆರೆಸ್ಸೆಸ್ಸು ಅಂತ ಹೇಳ್ತಿರಿ. ಇದ್ಯಾರಿಗೆ ಸಾರ್?”
“ರೀ ಯಾಹು ತಲೆಹರಟೆ ಪ್ರಶ್ನೆ ಬೇಡಿ. ಆರೆಸ್ಸೆಸ್ ಬಗ್ಗೆ ಕೇಳಿ”.
“ಹೇಳಿ ಸರ್”.
“ಆರೆಸ್ಸೆಸ್ ಒಂದು ಸುಸಂಸ್ಕೃತ ಸಂಸ್ಥೆ. ಅದು ಒಳ್ಳೆ ಸಂಸ್ಕೃತಿ ಕಲಸತ್ತೆ. ಒಳ್ಳೆ ಭಾಷೆ ಕಲಸತ್ತೆ”.
“ಅಂಗಾದ್ರೆ ನೀವು ಅವೆರಡನ್ನೂ ಕಲೀಲ್ಲವಾ ಸಾರ್”.
“ಯಾಕ್ರಿ ಅಂಗಂತಿರಿ”.
“ದನ ತಿಂದರೆ ಗಂಟಲು ಸೀಳಬೇಕು, ಕೈ ಕಡಿಬೇಕು ಅಂತಿರಿ. ಸಿದ್ದರಾಮಯ್ಯನ್ನ ಹುಚ್ಚ ಅಂತಿರಿ. ಹೆಣ್ಣು ಮಕ್ಕಳ ಬೈತಿರಿ. ನೀವಷ್ಟೇ ಅಲ್ಲ. ಅವನ್ಯಾರೊ ಸಿ.ಟಿ. ರವಿ, ಪ್ರತಾಪ, ನಿಮ್ಮ ಕಟೀಲ ಇವುರ ಮಾತಲ್ಲಿ ನಾನು ಸಂಸ್ಕೃತಿನೂ ನೋಡಲಿಲ್ಲ, ಭಾಷೆನೂ ನೋಡಲಿಲ್ಲ”.
“ಸಿಟ್ಟು ಬಂದ್ರೆ ಏನು ಮಾಡಕ್ಕಾಯ್ತದ್ರೀ?”
“ಸಂಸ್ಕೃತಿ ಅಂದ್ರೆ ಸಿಟ್ಟು ಗೆಲ್ಲೋದೆ ಅಲವಾ ಸಾರ್”.
“ಈ ಸಾಬರು ಮಾಡೋ ಗೂಂಡಾ ಕೆಲಸ, ಕ್ರಿಶ್ಚಿಯನ್ರು ಮಾಡೋ ಮತಾಂತರ ನೋಡಿಕಂಡು ಸುಮ್ಮನಿರಬೇಕೇನ್ರಿ?”
“ಸಾರ್ ಸಾಬರು ಗೂಂಡಾಗಳಾದ್ರೆ ಅವರನ್ನ ವಿಚಾರಿಸಿಕೊಳ್ಳೋಕೆ ಪೋಲಿಸ್ ಅದೆ. ಇನ್ನ ಕ್ರಿಶ್ಚಿಯನ್ರು ಮತಾಂತರ ಮಾಡ್ತರೆ ಅಂದ್ರೆ, ಅವರ್ನ ಕರೆದು ನೀವೆ ಕುರುಬರನ್ನಾಗಿ ಮತಾಂತರ ಮಾಡಿ ಸಾರ್”.
“ಯಾರು ಕುರುಬರಾಗಕ್ಕೆ ಬರ್ತಾರ್ರೀ”.
“ಬತ್ತರೆ ಸಾರ್, ಗುಡಿಸಲ್ಲಿರೋ ದಕ್ಕಲಿಗರು, ಕೊರಮರು, ಕೊರಚರು ಇವ್ರರತ್ರ ಹೋಗಿ ತಲಾ ಒಂದು ಲಕ್ಷಕೊಟ್ಟು ಕುರುಬರ ಮಾಡಿದ್ರೆ. ಅವರ ಲೀಡ್ರಾಗಿ. ನೀವು ಅಹಿಂದಾ ಸಿದ್ದರಾಮಯ್ಯನ್ನೆ ತೆಗೆದು ವರುಣಾ ನಾಲೆಗೆ ಯಸಿಬಹುದು”.
“ಅಂಗೆ ಮಾಡಕ್ಕೆ ಆರೆಸ್ಸೆಸ್ಸಿನವುರು ಬುಡಲ್ಲ ಕಂಡ್ರಿ”.
“ಯಾಕೆ ಸಾರ್”.
“ನಮ್ಮ ಹಿಂದೂ ಜನ ಏನಾಗಿದ್ದೆವೋ, ಅವುರು ಅಂಗೇಯಿದ್ದು, ನಮಿಗೆ ಸಪೋರ್ಟು ಮಾಡಬೇಕು ಅನ್ನದು ನಮ್ಮ ಸಿದ್ದಾಂತ”.
“ನಿಜ ಸಾರ್. ಇಲ್ದೆಯಿದ್ರೆ ನೀವು ಕುರುಬರ ಜಾತಿ ಬುಟ್ಟು ಮಾಧ್ವರಾಯ್ತಿದ್ರಿ ಅಲ್ವ”.
“ಇಲ್ಲ ಆಯ್ತಿರಲಿಲ್ಲ. ನಾವು ನಮ್ಮನಮ್ಮ ಜಾತಿಲಿ ಗಟ್ಟಿಯಾಗಿ ನಿಂತು ಹಿಂದೂ ಧರ್ಮನ ಕಾಪಾಡಬೇಕು”.
“ಕಾಪಾಡಕ್ಕೆ ಅದೇನು ಪ್ರಾಣಿನೋ, ಪಕ್ಷಿನೋ ಅಥವಾ ನಿಮ್ಮ ಗೋಮಾತೆನೊ”?
“ಗೋ ಮಾತೆನೆ ಅನ್ಕಳಿ”.
“ಸಾರ್ ನಿಮ್ಮ ಗೋಮಾತೆ ಕಾಳಜಿ ನನಿಗೆ ಗೊತ್ತು. ಯಾವ ಬಿ.ಜೆ.ಪಿ. ಆರೆಸ್ಸೆಸ್ನವರ ಮನೆಲೂ ಈ ಗೋವುಗಳಿಲ್ಲ. ಗೋಹತ್ಯೆ ನಿಷೇಧ ಮಾಡಿದ್ರಿ. ಗೋಶಾಲೆ ಮಾಡಲಿಲ್ಲ. ದನಗಳ ಜೊತೆಗೆ ರೈತನೂ ಬಡಕಲಾದ. ನಿಮ್ಮ ಹಿಂದೂ ಧರ್ಮದ ರಕ್ಷಣೆ ನನಿಗ್ಯಾಕೊ ಗೋರಕ್ಷಣೆ ತರ ಕಾಣ್ತಾ ಅದೆ”.
“ಅದಕ್ಯಲ್ಲ ಟೈಂ ಬೇಕು ಕಂಡ್ರಿ”.
“ಗೋವುಗಳೆಲ್ಲ ಸತ್ತಮ್ಯಾಲೆ ಅನ್ನಿ. ಈಗ್ ನೋಡಿದ್ರೆ ಯಲ್ಲಾನು ಬಿಟ್ಟು ಮಸೀದಿಗೆ ನುಗ್ಗಕೋಯ್ತಿರಿ. ಇದು ಮುಂದೆ ನಿಮಗೇ ತಿರುಗುಬಾಣಾಗಿ ಜೈನ ಮಂದಿರ ಬೌದ್ಧ ಸ್ತೂಪ ಯಲ್ಲಾ ಸದ್ದು ಮಾಡ್ತವೆ. ದೇಶ ಕಟ್ಟೋರಿಗೆ ವಿವೇಕಾನಂದರು ಒಂದು ಮಾತೇಳಿದ್ರು ಗೊತ್ತಾ ಸಾರ್?
“ನನಗೇಳಿಲ್ಲ”.
“ಈ ದೇಶನ ಮುಸ್ಲಿಂ ದೇಹಶಕ್ತಿ ಹಿಂದೂ ಬುದ್ಧಿ ಶಕ್ತಿಯಿಂದ ಕಟ್ಟಿ ಅಂದವುರೆ”.
“ಅದ್ಯಂಗಾಯ್ತದರಿ”?
“ಆಗುತ್ತೆ ಸಾರ್. ಮುಸ್ಲಿಮರು ದೈಹಿಕವಾಗಿ ಶಕ್ತಿಶಾಲಿ ಜನ, ಆ ಶಕ್ತಿನ ದೇಶಕಟ್ಟಕ್ಕೆ ಬಳಸಬೇಕು. ಹಾಗೆ ಬ್ರಾಹ್ಮಣರ ಬುದ್ಧಿಶಕ್ತಿನ್ನ ಬಳಸಿದ್ರೆ ದೇಶ ಬಲಿಷ್ಟ ಆಗುತ್ತೆ”.
“ಆಗ ನಾವೇನು ಮಾಡದ್ರಿ?”
“ಆರೆಸ್ಸೆಸ್ ಸಿದ್ಧಾಂತದ ಪ್ರಕಾರ ನೀವು ನೂರಾರು ಕುರಿ ಸಾಕಿ, ದೈಹಿಕ ಶಕ್ತಿಗಾಗಿ ಜನಕ್ಕೆ ಮಾಂಸ ಒದಗಿಸಿ. ಚಳಿ ತಡೆಯಕ್ಕೆ ಜನರಿಗೆ ಕಂಬಳಿ ಒದಗಿಸಬೇಕು ಸಾರ್”.
“ಏನ್ರಿ ಹೇಳ್ತಿರಿ”.
“ಸಾರ್ ಒಂದು ವಿಷಯ ಕೇಳದ್ನೆ ಮರತೆ. ಅಮ್ಆದ್ಮಿ ಜನ ಅಂದು ವೀರಪ್ಪ ಇಂದು ಈಶ್ವರಪ್ಪ ಅಂತ ಶಿವಮೊಗ್ಗಕ್ಕೆ ಬಂದಿದ್ರು ಸಾರ್”.
“ಬರ್ಲಿ ಬುಡ್ರಿ ಒಂದು ಕಾಲದಲ್ಲಿ ನಾವು ಇಂತ ಪ್ರತಿಭಟನೆನ ಬೇಕಾದಷ್ಟು ಮಾಡಿದೀವಿ. ಶಿವಮೊಗ್ಗದಿಂದ ಬೆಂಗಳೂರುವರೆಗೂ ನಡೆದಿದ್ವಿ ಗೊತ್ತಾ”?
ಥೂತ್ತೇರಿ..
ಇದನ್ನೂ ಓದಿ: “ದ್ರಾವಿಡರು ಆರೆಸ್ಸೆಸ್ಸಾಗ್ಯವುರಲ್ಲ ಸಾ”


