Homeಅಂಕಣಗಳು"ದ್ರಾವಿಡರು ಆರೆಸ್ಸೆಸ್ಸಾಗ್ಯವುರಲ್ಲ ಸಾ"

“ದ್ರಾವಿಡರು ಆರೆಸ್ಸೆಸ್ಸಾಗ್ಯವುರಲ್ಲ ಸಾ”

- Advertisement -
- Advertisement -

ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ಮೇಧಾವಿ ಮತ್ತು ಮುಂದಾಲೋಚನೆಯ ಶಿಕ್ಷಣ ಸಚಿವ ಪಠ್ಯಪುಸ್ತಕದ ಗಲಾಟೆ ಹಚ್ಚಿದ ಕೂಡಲೇ ತರಾತುರಿಯಿಂದ ಪಠ್ಯಗಳು ಪ್ರಿಂಟಾಗಿ, ಆಯಾ ಜಿಲ್ಲೆಗೆ ತಲುಪುವ ವ್ಯವಸ್ಥೆ ಮಾಡಿ, ನಿರ್ಮಲಾನಂದ ಸ್ವಾಮಿಯನ್ನು ಭೇಟಿ ಮಾಡಲು ಓಡಿದರಂತಲ್ಲಾ. ಇದಪ್ಪ ರಾಜಕಾರಣ ಅಂದರೆ! ಈಗಾಗಲೇ ಪ್ರಿಂಟಾಗಿರುವ ಪಠ್ಯ ಎಲ್ಲಿಗೆ ತಲುಪಬೇಕೂ ಅಲ್ಲಿಗೆ ತಲುಪುವಂತೆ ಮಾಡಿದ ಮೇಲೆ ಚಕ್ರತೀರ್ಥ ಎಂಬುವನು ಮನೆಗೆ ಹೋದರೇನು ಇನ್ನೆಲ್ಲೋ ಹೋದರೇನು, ಅಂತೂ ತಮ್ಮ ಅಜೆಂಡಾ ಜಾರಿಯಾದಂತಾಯ್ತಲ್ಲಾ. ಅಷ್ಟಕ್ಕೂ ಆತನಿಗೆ ಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷನಾಗಲು ಈ ಜನ್ಮದಲ್ಲಿ ಸಾಧ್ಯವಿರಲಿಲ್ಲ. ಏಕೆಂದರೆ ಅಂತಹ ಯೋಗ್ಯತೆ ಪಡೆಯಬೇಕಾದರೆ ಕನ್ನಡ ನಾಡಿಗೆ, ಕನ್ನಡ ಸಾಹಿತ್ಯ-ಚಿಂತನೆಗೆ ಮೌಲಿಕ ಕೊಡುಗೆ ಕೊಟ್ಟಿರಬೇಕು. ಶಿಕ್ಷಣ ತಜ್ಞನಾಗಿರಬೇಕು, ಪ್ರೊಫೆಸರ್‌ಗಿರಿಯಲ್ಲಿ ಪಳಗಿರಬೇಕು. ಯಾವುದಾದರೂ ವಿವಿಗೆ ವೈಸ್ ಚಾನ್ಸಲರಾಗುವ ಅರ್ಹತೆ ಪಡೆದಿರಬೇಕು. ಇಂತಹ ಯಾವ ಯೋಗ್ಯತೆಯೂ ಇಲ್ಲದೆ ಲೂಟಿ ಬಹದ್ದೂರನಾಗಿ ಹೆಸರು ಮಾಡಿದವನು ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷನಾಗುತ್ತಾನೆಂದರೆ ಅದಕ್ಕೆ ಇದೇ ಸಚಿವರು ಬರಬೇಕಾಯಿತ್ತಂತೆಲ್ಲಾ. ತನ್ನ ಸ್ವಜಾತಿ ಬಾಂಧವರಲ್ಲೇ ದೊಡ್ಡ ವಿದ್ವಾಂಸನನ್ನ ಹುಡುಕಿರಬೇಕಂತಲ್ಲಾ. ಅವನೇ ಈ ಚಕ್ರತೀರ್ಥನಂತಲ್ಲಾ, ಥೂತ್ತೇರಿ.

*****

ಬುದ್ಧಿ ಕಡಿಮೆಯಿದ್ದ ಮನುಷ್ಯ ಭಂಡಬಾಳಿನ ಮೊರೆ ಹೋಗುತ್ತಾನೆ. ಅದು ಈ ಬಿಜೆಪಿ ಜನರನ್ನು ನೋಡಿದ ಮೇಲೆ ನಾಡಿನ ಜನಕ್ಕೆ ಅರ್ಥವಾಗತೊಡಗಿದೆಯಂತಲ್ಲಾ. ಮುಖ್ಯವಾಗಿ ಶಿಕ್ಷಣ ಸಚಿವ ತಾನು ಮಾಡಿದ ಎಲ್ಲ ಕೃತ್ಯಗಳನ್ನ ಸಮರ್ಥಿಸಿಕೊಳ್ಳುತ್ತಾ ಹೊರಟಿರುವಾಗ ಅವರನ್ನ ಆ ಕೆಲಸ ಮಾಡಲು ಬಿಟ್ಟವರೂ ಕೂಡ ಇದೇ ದಾರಿ ಹಿಡಿದಿದ್ದಾರಲ್ಲಾ. ಇನ್ನ ವಿರೋಧ ಪಕ್ಷದ ನಾಯಕ ಆರೆಸ್ಸೆಸ್ ಟೀಕಿಸಿದರೆ ಯಾವ ಆರೆಸ್ಸೆಸಿಗಳು ಬಾಯಿಬಿಡದೆ ಬಿಜೆಪಿಯ ಸಿ.ಟಿ ರವಿ ಮತ್ತು ಈಶ್ವರಪ್ಪ ಉತ್ತರ ಕೊಡತೊಡಗಿದ್ದಾರೆ. ಹಾಗೆ ನೋಡಿದರೆ ಸಿ.ಟಿ ರವಿ ಪ್ರತಿನಿಧಿಸುವ ಜಿಲ್ಲೆಯಾದ ಚಿಕ್ಕಮಗಳೂರಿನ ಹಿರೇಕೊಡಿಗೆಯಲ್ಲಿ ವಿಶ್ವಮಾನವ ಸಂದೇಶ ಬೀರಿದ ಕವಿಯಾದ ಕುವೆಂಪು ಜನ್ಮತಾಳಿದವರು. ಇಂತಹ ಕುವೆಂಪುಗೆ ಅವಮಾನ ಮಾಡಿದವರ ವಿರುದ್ದ ಸಿ.ಟಿ ರವಿ ತುಟಿ ಬಿಚ್ಚಿಲ್ಲ.

ಇನ್ನ ಈಶ್ವರಪ್ಪ. ಉಡುಪಿಯ ಕನಕಗೋಪುರ ಕೆಡವಿದಾಗ ದೊಡ್ಡ ಆಕ್ರೋಶ ಬಂತು. ಆಗ ಪೇಜಾವರಸ್ವಾಮಿ ಅಲ್ಲಿದ್ದದ್ದು. ಅದು ಕನಕ ಗೋಪುರವಲ್ಲ ರಾಜಗೋಪುರ ಎಂಬ ಹೇಳಿಕೆಯನ್ನು ಈಶ್ವರಪ್ಪನಿಂದ ಕೊಡಿಸಿದರು. ಆಗ ಈಶ್ವರಪ್ಪ ಪೇಜಾವರರಿಗಿಂತ ಮುಂದೆ ಹೋಗಿ, ಅಲ್ಲಿ ಕನಕಗೋಪುರ ಇತ್ತು ಅಂದಾದರೆ ನಾನು ರಾಜಕಾರಣ ಬಿಟ್ಟು ಅಡಿಕೆ ಪ್ಯಾಕೆಟ್ ಮಾಡುತ್ತೇನೆ ಎಂದುಬಿಟ್ಟರಲ್ಲಾ. ಈಗ ಬಿಜೆಪಿ ಇದೇ ತರಹದ ಛಲವಾದಿ ನಾರಾಯಣಸ್ವಾಮಿಯನ್ನ ತಯಾರು ಮಾಡುತ್ತಿದೆಯಂತಲ್ಲಾ, ಥೂತ್ತೇರಿ.

*****

ಜನಸಾಮಾನ್ಯರ ಜಗಳಗಳು ಜಾತಿ ಆವರಣ ತಲಪುತ್ತವಂತೆ. ಹಾಗೆಯೇ ನೀನು ನಮ್ಮೂರಿನವನಲ್ಲೆಂಬ ದನಿಯೂ ಹೋರಾಡುತ್ತದೆ. ಹೀಗೆ ಮುಸ್ಲಿಮರು ಇಲ್ಲಿ ಉದ್ಭವಿಸಿದವರಲ್ಲಾ, ದಾಳಿ ಮಾಡಿಕೊಂಡು ಬಂದವರು ಎಂದು ಪುರೋಹಿತರು ಜನಗಳನ್ನ ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುತ್ತಿರುವುದನ್ನು ನೋಡಲಾರದ ಸಿದ್ದರಾಮಯ್ಯ ಅಂತಿಮವಾಗಿ ಆರೆಸ್ಸೆಸ್ಸಿಗಳು ಇಲ್ಲಿಯವರಲ್ಲಾ ಮಧ್ಯ ಏಷ್ಯಾದಿಂದ ಬಂದವರು ಎಂದಕೂಡಲೇ ಎಲ್ಲರ ಕಿವಿಗಳು ನೆಟ್ಟಗಾಗಿವೆಯಂತಲ್ಲಾ. ಈ ಬಗ್ಗೆ ಸಿದ್ದರಾಮಯ್ಯನವರಿಗೇ ಫೋನ್ ಮಾಡಿ ಮಾತನಾಡಿಸಿದರೆ ಹೇಗೆ ಅನ್ನಿಸಿ, ಕಡೆಗೆ ಫೋನ್ ಮಾಡಲಾಗಿ, ರಿಂಗಾಯ್ತು. ರಿಂಗ್‌ಟೋನ್, ’ಕರಿಯ ಕಂಬಳಿ ಗದ್ದಿಗೆ ಮಾಡೀ ವೀರದೊಳ್ಳ
ತಂದಿರಿಸಿದರೋ……….’

“ಹಲೋ ಯಾರು”.

“ನಾನು ಸಾರ್ ಯಾಹೂ, ತಾವ್ಯಾರು ಸಾರ್”.

“ನಾನು ಸೋಷಲಿಸ್ಟ್ ಶಿವಣ್ಣ ಏನಾಗಬೇಕು”.

“ಸಾರಿ ಸಾರ್, ಸಿದ್ದರಾಮಯ್ಯನವರ ಜೊತೆ ಮಾತಾಡಬೇಕಾಗಿತ್ತು”.

“ಪತ್ರಕರ್ತರಾ, ಕೊಟ್ಟೆಯಿರಿ ಒಂದು ನಿಮಿಷ”.

“ಹಲೋ”.

“ನಮಸ್ಕಾರ ಸಾರ್. ನಾನು ಯಾಹೂ”.

“ಏನ್ರಿ ಯಾಹೂ, ಈ ಕಡೆ ಬರಲೇಯಿಲ್ಲ”.

“ನೀವೀಗ ಪವರಲಿಲ್ಲ, ಏನು ಮಾಡಕ್ಕೆ ಬರನ ಸಾರ್”.

“ಇಲ್ದಾಗ್ಲೆ ಬಂದ್ರೆ ವಳ್ಳೆದು, ಮಾತಾಡಬಹುದು ಬನ್ನಿ”.

“ಅಮ್ಯಾಲೆ ಬರ್‌ತಿನಿ, ಈಗೊಂದೆರಡು ಪ್ರಶ್ನೆಗೆ ಉತ್ತರ ಕೊಡಿ ಸಾ”.

“ಅದೇನು ಕೇಳಿ”.

“ಈ ಆರೆಸ್ಸೆಸಿನವರು ಇಲ್ಲಿಯವರಲ್ಲ, ಹೊರಗಿಂದ ಬಂದವುರು ಅಂದಿದ್ದಿರಲ್ಲಾ, ವಸಿ ವಿವರಸ್ತಿರಾ”.

“ಅದ್‌ಹಳೇ ವಿಷಯ ಕಂಡ್ರಿ. ನಮಿಗೆ ಮಿಡ್ಲಿಸ್ಕೂಲಲ್ಲೇ ಪಾಠ ಇತ್ತು. ಆರ್ಯರು ಆಕಡಿಂದ ಬಂದ್ರು, ಅವುರು ಚೆನ್ನಾಗಿ ಎತ್ತರಕ್ಕೆ ಕೆಂಪುಗಿದ್ರು ಬ್ಯಳ್ಳಗಿದ್ರು ನಾಗರಿಕರು ಅಂತ”.

“ನಾಗರಿಕರು ಅಂತ ಇತ್ತ”.

“ಊ”.

“ಅಂಗಾದ್ರೆ ಆರೆಸ್ಸೆಸಿಗರು, ಬಿಜೆಪಿಗಳು ಆರ್ಯರಲ್ಲ ಬುಡಿ”.

“ಆರ್ಯರೆ ಕಂಡ್ರಿ, ಆಗ ಪಠ್ಯಪುಸ್ತಕ ಬರಿಯೋರು ಅವುರೇ ಆಗಿದ್ರು. ಅದ್ಕೆ ನಾಗರಿಕರು ಅಂತ ಬರ್‌ಕಂಡವುರೆ”.

“ಅದೇನೋ ನಿಜ, ದೇಶದ್ರೋಹಿಗಳನ್ನ ದೇಶಭಕ್ತರು ಅಂತ ಬರಕಳದು. ಹುಟ್ಟು ಪುಕ್ಕಲಗಳನ್ನು ವೀರ ಉತ್ತರಕುಮಾರ ಅಂತ ಬರಕಳದ್ರಲ್ಲಿ ಅವುರು ನಿಸ್ಸೀಮರು”.

“ಸುಳ್ಳು ಹೇಳದ್ರಲ್ಲೂ ನಿಸ್ಸೀಮರು. ನನ್ನ ಮಾತಿಗೆ ಆರೆಸ್ಸೆಸಿನವುರು ಉಸರೆತ್ತಿಲ್ಲ. ಆ ಬಸವರಾಜ ನೀವು ದ್ರಾವಿಡ್ರ ಅಂತ ಕೇಳ್ಯವುನೆ”.

“ನಿಜ ಸಾರ್, ಮುಖ್ಯಮಂತ್ರಿ ದ್ರಾವಿಡರೊ ಆರ್ಯರೊ ಸಾರ್”.

“ಅವುನ್ಯಾವಾರ್ಯ, ದ್ರಾವಿಡ ಅವುನು. ಬಸವಣ್ಣ ಬರದ್ಕು ಮದ್ಲು ಅವುರಜ್ಜಾರಜ್ಜಾರಜ್ಜ ಯಾವು ಜಾತಿಯಾಗಿದ್ನೊ ಏನೊ, ಈಗಿವುನು ಸಾದರ ಲಿಂಗಾಯತ ಅಂತನೆ”.

“ನಿಜ ಸಾರ್, ಬಸವಣ್ಣ ಕರದೇಟಿಗೆ ಹತ್ರುಕೋದೋರ್‌ಯೆಲ್ಲ ದ್ರಾವಿಡರೇ ಸಾರ್, ನೋ ಡವುಟು”.

“ಈ ಆರ್ಯರು ಯಂಗೆ ಬಂದ್ರು ಅಂತ ವಸಿ ಹೇಳ್ತಿರಾ”.

“ಅದೇ ಕಂಡ್ರಿ, ಆಗ ಈಗಿನ ಪಾಕೀಸ್ತಾನದ ಬಾರ್ಡರಿಂದ ಮಧ್ಯ ಪ್ರಾಚ್ಯದವರಿಗೂ ದಾರಿನೆ ಇತ್ತು. ಅಲ್ಲಿದ್ದ ಜನ ಫಲವತ್ತಾದ ಜಾಗ ಹುಡುಕ್ತ ಕತ್ತೆ ದನ ಯೆಮ್ಮೆ ಜೊತೆ ಬಂದ್ರು. ಇಲ್ಲಿದ್ದ ಆದಿವಾಸಿ ದ್ರಾವಿಡರ್ನ ಹೆದರಿಸಿದ್ರು. ಅವುರ್ ಯೆಲ್ಲ ದಕ್ಷಿಣಕ್ಕೆ ಓಡಿ ಬಂದ್ರು. ಕೆಲುವುರು ಅಲ್ಲೇ ಉಳಕಂಡ್ರು”.

“ಗೊತ್ತಾಯ್ತು ಬುಡಿ ಸಾರ್, ಈ ಬಿಜೆಪಿಗಳು ಮದ್ಲು, ಉತ್ತರಭಾರತದಲ್ಲಿ ನೆಲೆಗೊಂಡು, ಆಮೇಲೆ ಈ ದಕ್ಷಿಣಕ್ಕೆ ಬಂದ್ರಲ್ಲ ಅಂಗೆ.”

“ಅದಕ್ಕಿಂತ್ಲೂ ಆರ್ಯರು ಯಾವಾಗ್ಲೂ ಫಲವತ್ತಾದ ಜಾಗ ಹುಡುಕ್ತಾರೆ. ಅಂಗೆ ನಮ್ಮ ದೇಶದ ಫಲವತ್ತಾದ ನ್ಯಲ ಹಿಡದ್ರು. ದ್ರಾವಿಡರ ಕೈಲಿ ಸೇವೆ ಮಾಡಿಸಿಗಂಡು ಜಾತಿ ಮಾಡಿದ್ರು. ನಮ್ಮ ತೇಜಸ್ವಿ ಹೇಳತಿದ್ರಲ್ಲ ಅಂಗೇ. ಇಡೀ ದೇಶನೆ ಬಾಳೆಎಲೆ ಮಾಡಿಕಂಡು ಉಂಡ್ರು. ನಾವು ಪಾಲು ಕೇಳಿದ ಮ್ಯಾಲೆ ಇಲ್ಲದ ಜಾತಿ ಜಗಳ ತಗದವೆ, ದ್ರಾವಿಡರನ್ನೆ ಆರೆಸ್ಸೆಸ್ ಮಾಡಿಕಂಡವೆ”.

“ಈಗೇನು ಮಾಡದು ಸಾರ್”.

“ಭಾಳ ಕಷ್ಟ. ನನ್ನ ವಿರುದ್ಧ ಈಶ್ವರಪ್ಪನ ಛೂ ಬುಟ್ಟವೆ. ನಮ್ಮ ಡಿ.ಕೆ ಶಿವಕುಮಾರನ ವಿರುದ್ಧ ಅಶ್ವತ್ಥ ನಾರಾಯಣ ಸಿ.ಟಿ ರವಿನ ಬುಟ್ಟವೆ. ಮಾದೇವಪ್ಪನ ವಿರುದ್ಧ ನಾರಾಯಣಸ್ವಾಮಿ, ಶ್ರೀನಿವಾಸ್ ಪ್ರಸಾದನ್ನ ಎತ್ತಿಕಟ್ಟವುರೆ. ನಮ್ಮೆದುರಿಗೆ ನಮ್ಮವುರೇ ನಿಂತವುರೆ. ನಿಜವಾದ ಶತ್ರುಗಳು ಗರ್ಭಗುಡಿಲಿ ಅವುತಗಂಡವುರೆ. ಜನಸಾಮಾನ್ಯರು ಹಣ್ಣು ಕಾಯಿ ತಗಂಡೋಗಿ ಮಡಗಿ ಪ್ರಸಾದ ಕೇಳ್ತ ಅವೆ. ಏನು ಮಾಡನಾ”.

“ಥೂತ್ತೇರಿ”.


ಇದನ್ನೂ ಓದಿ: ಸನ್ಯಾಸಿಗಳೆಂದರೆ ನಿಮಗೇನು ಗೊತ್ತಯ್ಯಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...