Homeರಾಜಕೀಯಅನಿತಾ ಪಟ್ಟಾಭಿಷೇಕ?

ಅನಿತಾ ಪಟ್ಟಾಭಿಷೇಕ?

- Advertisement -
- Advertisement -

1994ರಲ್ಲಿ ದೇವೇಗೌಡರು ರಾಮನಗರದಿಂದ ಸ್ಪರ್ಧಿಸುವ ತೀರ್ಮಾನ ಮಾಡುವುದಕ್ಕೆ ಮೂರು ಕಾರಣಗಳಿದ್ದವು. ರಾಮನಗರದಿಂದ ಗೆದ್ದ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದರಿಂದ, ಆ ಸಾರಿ ಮುಖ್ಯಮಂತ್ರಿಯಾಗಲು ಆ ಅದೃಷ್ಟ ಕೆಲಸ ಮಾಡುತ್ತದೆಂಬ ನಂಬಿಕೆ. (ಅದೇ ರಾಮನಗರದಿಂದ ಗೆದ್ದ ಕುಮಾರಸ್ವಾಮಿ ಎರಡು ಸಾರಿ ಮುಖ್ಯಮಂತ್ರಿಯಾಗಿದ್ದರಿಂದ ಈ ನಂಬಿಕೆ ಇನ್ನಷ್ಟು ಗಟ್ಟಿಯಾಗಿರಲೂಬಹುದು). ಹೊಳೆನರಸೀಪುರದಲ್ಲಿ ಗೆಲ್ಲುವ ಸಾಧ್ಯತೆ ಇದ್ದರೂ, ಅದನ್ನು ಮಗ ರೇವಣ್ಣರಿಗೆ ಬಿಟ್ಟುಕೊಟ್ಟರೆ, ಪಕ್ಷಕ್ಕೆ ಒಂದು ಸೀಟು ಹೆಚ್ಚಾಗುತ್ತದೆ ಮತ್ತು ರಾಜಕೀಯ ಉತ್ತರಾಧಿಕಾರಿಯನ್ನು ಕುಟುಂಬದೊಳಗೇ ಹುಡುಕಿಕೊಳ್ಳುವುದು ಸಾಧ್ಯವಾಗುತ್ತದೆ. ಮೂರನೆಯದಾಗಿ, ರಾಮನಗರ ಅವರಿಗೆ ಹೊಸದಾಗಿರಲಿಲ್ಲ. ಅಂದಿನ್ನೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರದ ಪಕ್ಕದ ಸಾತನೂರಿನಲ್ಲಿ ಆಗಲೇ ಒಂದು ಬಾರಿ ಡಿ.ಕೆ.ಶಿವಕುಮಾರ್‍ರನ್ನು 1985ರಲ್ಲಿ ಸೋಲಿಸಿದ್ದರು. ಅದೇ ವರ್ಷ ಹೊಳೆನರಸೀಪುರದಲ್ಲೂ ಗೆದ್ದುದರಿಂದ ಸಾತನೂರನ್ನು ಬಿಟ್ಟುಕೊಟ್ಟಿದ್ದರು. ಆದರೆ, 1989ರಲ್ಲಿ ತಮ್ಮದೇ ಸಮಾಜವಾದಿ ಜನತಾಪಕ್ಷದಿಂದ ಎರಡೂ ಕ್ಷೇತ್ರಗಳಲ್ಲಿ ಸೋತಿದ್ದರು. ಈ ಸೋಲು ಗೆಲುವುಗಳ ಮಧ್ಯೆ ಆ ಭಾಗದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಿತ್ತು.
ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಒಬ್ಬ ದೊಡ್ಡ ನಾಯಕ ತನ್ನ ಕ್ಷೇತ್ರದಿಂದಾಚೆ ಬೇರೆ ಕಡೆಯೂ ಗೆಲ್ಲಲು ಸಾಧ್ಯವಾಗುವುದು ಅವರ ಹೆಗ್ಗಳಿಕೆಯೇ. ಆದರೆ, ಇಲ್ಲಿಂದಾಚೆಗೆ ಈ ಭಾಗದ ಪಾರುಪತ್ಯಕ್ಕೆ ಡಿ.ಕೆ.ಶಿವಕುಮಾರ್ ಜೊತೆ ಸತತವಾದ ಜಿದ್ದಾಜಿದ್ದಿ ನಡೆದೇ ಇದೆ. ಆ ಜಿದ್ದಾಜಿದ್ದಿಯಲ್ಲಿ ಗೌಡರು ಆರಿಸಿಕೊಂಡಿರುವುದು ತಮ್ಮ ಕುಟುಂಬದ ಹುರಿಯಾಳುಗಳನ್ನೇ.

ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗಲೇ ಕನಕಪುರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದು ಆಗಿನ್ನೂ ರಾಜಕಾರಣಕ್ಕೆ ಹೊಸಬರಾಗಿದ್ದ ತಮ್ಮ ಪುತ್ರ ಎಚ್.ಡಿ.ಕುಮಾರಸ್ವಾಮಿಯವರನ್ನು. ಜನತಾದಳದಿಂದ ಕರ್ನಾಟಕದಲ್ಲಿ 16 ಲೋಕಸಭಾ ಸದಸ್ಯರನ್ನು ಗೆಲ್ಲಿಸಿಕೊಂಡಿದ್ದು, ಕೇಂದ್ರದಲ್ಲಿ ಬೇರೆ ಆಯ್ಕೆ ಇಲ್ಲದ್ದು ಎಲ್ಲವೂ ಸೇರಿ, ಸಾಂದರ್ಭಿಕ ಶಿಶುವಾಗಿ ಪ್ರಧಾನಿ ಪಟ್ಟಕ್ಕೇರಿದರು. ಅವರು ರಾಜೀನಾಮೆ ಕೊಟ್ಟ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳದಿಂದ ಚಿತ್ರನಟ ಅಂಬರೀಷ್‍ರನ್ನು ಕಣಕ್ಕಿಳಿಸಿದರಾದರೂ, ಅವರು ಸಿ.ಎಂ.ಲಿಂಗಪ್ಪರ ಎದುರು ಸೋತರು.
ಅದರ ಮುಂದಿನ ಚುನಾವಣೆಯಲ್ಲಿ ವಿಭಜಿತವಾಗಿದ್ದ ಜನತಾದಳದ ‘ಜಾತ್ಯತೀತ’ ಬಣದಿಂದ ಡಿಕೆಶಿ ವಿರುದ್ಧ ಸಾತನೂರು ಕ್ಷೇತ್ರದಲ್ಲಿ ಸೋತರಷ್ಟೇ ಅಲ್ಲದೇ, ಕನಕಪುರ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಠೇವಣಿ ಸಹ ಕಳೆದುಕೊಂಡರು. ಮಗ ಕುಮಾರಸ್ವಾಮಿಯನ್ನು ಈ ಪರಿ ಸೋಲಿಸಿದ್ದ ಎಂ.ವಿ. ಚಂದ್ರಶೇಖರ ಮೂರ್ತಿಯವರು ನಿಧನರಾದ್ದರಿಂದ ನಡೆದ ಉಪಚುನಾವಣೆಯಲ್ಲಿ ತಂದೆ ದೇವೇಗೌಡರು ಹುರಿಯಾಳಾದರು. ಆಗ ಕಾಂಗ್ರೆಸ್‍ನ ಸ್ಪರ್ಧಿ ಡಿ.ಕೆ.ಶಿವಕುಮಾರ್. ಈ ಹೊತ್ತಿಗೆ ಮಾಜಿ ಪ್ರಧಾನಿಯಾಗಿ ಹಾಸನ ಲೋಕಸಭಾ ಕ್ಷೇತ್ರದಲ್ಲೂ ಸೋತಿದ್ದ ದೇವೇಗೌಡರಿಗೆ ಜನತಾಪರಿವಾರವೆಲ್ಲವೂ ಬೆಂಬಲಿಸಿತು. ಗೌಡರು ಗೆದ್ದರು.
2004ರಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳೆರಡಕ್ಕೂ ಒಟ್ಟಿಗೆ ಚುನಾವಣೆ ನಡೆಯಿತು. ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಗೆದ್ದರೆ, ಕನಕಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ದೇವೇಗೌಡರು ಮೂರನೇ ಸ್ಥಾನಕ್ಕೆ ದೂಡಲ್ಪಟ್ಟರು. ಅವರ ವಿರುದ್ಧ ಗೆದ್ದದ್ದು ಡಿ.ಕೆ.ಶಿ ಅವರು ಜ್ಯೋತಿಷಿಗಳ ಮಾತು ಕೇಳಿ ಹುಡುಕಿ ತಂದಿದ್ದ ಮಹಿಳಾ ಅಭ್ಯರ್ಥಿ ತೇಜಸ್ವಿನಿ. ಆದರೆ ಹಾಸನದಲ್ಲಿ ಗೌಡರು ಗೆದ್ದಿದ್ದರು. ಜೆಡಿಎಸ್‍ನ ಕಥೆ ಮುಗಿಯಿತು ಎಂದು ಹೇಳಿದ್ದ ಸಮೀಕ್ಷೆಗಳನ್ನು ಸುಳ್ಳು ಮಾಡಿ 58 ಸ್ಥಾನ ಗೆದ್ದಿದ್ದ ಪಕ್ಷವು ಕಾಂಗ್ರೆಸ್‍ನೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಿತು.
ಕೇವಲ ರಾಮನಗರ ಶಾಸಕರಾಗಿದ್ದ ಕುಮಾರಸ್ವಾಮಿಯವರು ಈ ಮೈತ್ರಿಯನ್ನು ಮುರಿದು ಬಿಜೆಪಿಯೊಂದಿಗೆ ಕೈಜೋಡಿಸಿ ಮುಖ್ಯಮಂತ್ರಿಯಾದರು. ಈ ಹೊತ್ತಿಗೆ ಹಾಸನ ಜಿಲ್ಲೆಯ ರಾಜಕಾರಣದ ಮೇಲೆ ಅವರ ಅಣ್ಣ ಎಚ್.ಡಿ.ರೇವಣ್ಣರ ಅಧಿಪತ್ಯ ಸ್ಥಾಪನೆಯಾಗಿತ್ತು. ನಿರಂತರವಾಗಿ ದೊಡ್ಡ ಗೌಡರು ಅಲ್ಲಿಂದ ಲೋಕಸಭಾ ಸದಸ್ಯರಾಗುತ್ತಿದ್ದರೆ, ಒಂದೆರಡು ಕ್ಷೇತ್ರಗಳನ್ನು ಬಿಟ್ಟರೆ ಹಾಸನ ಜಿಲ್ಲೆಯುದ್ದಕ್ಕೂ ಜೆಡಿಎಸ್ ಗೆಲ್ಲುತ್ತಾ ಬರುತ್ತಿದೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಅಲ್ಲಿಗೆ ಮಾತ್ರ ರೇವಣ್ಣನವರೇ ಮುಖ್ಯಮಂತ್ರಿ. ಅಲ್ಲಿ ರೇವಣ್ಣನವರ ಪತ್ನಿ ಭವಾನಿಯವರು ಜಿ.ಪಂ. ಸದಸ್ಯೆ. ಕಾಂಗ್ರೆಸ್‍ನವರು ಉದ್ದೇಶಪೂರ್ವಕವಾಗಿ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಬದಲಿಸದೇ ಹೋಗಿದ್ದರೆ, ಅವರೀಗ ಜಿ.ಪಂ ಅಧ್ಯಕ್ಷೆಯಾಗಿ ವಿರಾಜಮಾನರಾಗಿರುತ್ತಿದ್ದರು.
ಇಷ್ಟಾಗಿದ್ದರೂ ಸಹಿಸಿಕೊಳ್ಳಬಹುದಿತ್ತು. ಬಿಜೆಪಿಯ ಆಪರೇಷನ್ ಕಮಲದ ಭಾಗವಾಗಿ ಮಧುಗಿರಿಯ ಗೌರಿಶಂಕರ್ ಸನ್‍ಆಫ್ ಚೆನ್ನಿಗಪ್ಪ ಜೆಡಿಎಸ್‍ನಿಂದ ಪಕ್ಷಾಂತರ ಮಾಡಿದಾಗ, ಅಲ್ಲಿ ಜೆಡಿಎಸ್ ಕ್ಯಾಂಡಿಡೇಟಾಗಿದ್ದು ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ. ಅಲ್ಲಿ ಶಾಸಕರಾದ ಮೇಲೆ ಯಾವ ಕೆಲಸವನ್ನೂ ಮಾಡದ ಅನಿತಾ ನಂತರದ ಚುನಾವಣೆಯಲ್ಲಿ ಅಲ್ಲಿಂದ ಸ್ಪರ್ಧಿಸಲಿಲ್ಲ. ಬದಲಿಗೆ 2013ರ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಿದರು. ವಾಸ್ತವದಲ್ಲಿ ಇದಕ್ಕೆ ಹಿಂದಿನ 5 ವರ್ಷಗಳಲ್ಲಿ ಚನ್ನಪಟ್ಟಣವು ಎರಡು ಸಾರಿ ಉಪಚುನಾವಣೆ ಕಂಡಿತ್ತು. ಒಮ್ಮೆ ಯೋಗೇಶ್ವರ್ ಪಕ್ಷ ಬದಲಾಯಿಸಿ ಬಿಜೆಪಿಗೆ ಆಪರೇಷನ್ ಕಮಲವಾದ್ದರಿಂದ, ಜೆಡಿಎಸ್‍ನ ಎಂ.ಸಿ.ಅಶ್ವತ್ಥ್ ಗೆದ್ದು ಬಂದರು. ಅವರೂ ಬಿಜೆಪಿಗೆ ಹೋದಾಗ, ಜೆಡಿಎಸ್‍ನಿಂದ ಟಿಕೆಟ್ ಕೊಟ್ಟಿದ್ದು ಸಿಂ.ಲಿಂ.ನಾಗರಾಜು ಅವರಿಗೆ. ಅತ್ಯಂತ ಸಾಮಾನ್ಯ ಕುಟುಂಬದ, ಸಾಮಾಜಿಕ ಹೋರಾಟಗಳಲ್ಲೂ ಪಾಲ್ಗೊಳ್ಳುತ್ತಿದ್ದ ಸಿಂ.ಲಿಂ ಗೆಲ್ಲಲಿಲ್ಲ.
ಈ ಮಧ್ಯೆ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಚನ್ನಪಟ್ಟಣ ತಾಲೂಕಿನ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳೇ ಗೆದ್ದಿದ್ದರು. ಅಷ್ಟು ಬಲವಾಗಿದ್ದ ಕ್ಷೇತ್ರದಲ್ಲಿ ಸಿಂ.ಲಿಂ ಅವರಿಗೇ ಮತ್ತೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬರಲು ಬೇಕಾದ ಕೆಲಸವನ್ನು ಗೌಡರ ಫ್ಯಾಮಿಲಿ ಮಾಡಲಿಲ್ಲ. ಬದಲಿಗೆ, ಅನಿತಾ ಕುಮಾರಸ್ವಾಮಿಯವರನ್ನು ತಂದು ನಿಲ್ಲಿಸಿದರು. ಅನಿತಾ ಸೋತು ಯೋಗೇಶ್ವರ್ ಗೆದ್ದರು. ಅದರ ಮುಂದಿನ ಸಾರಿಗೆ ಯೋಗೇಶ್ವರ್ ಹಣಿಯಲು ಎಚ್‍ಡಿಕೆ, ಡಿಕೆಶಿ ಕೈ ಜೋಡಿಸಿದರು. ಸ್ವತಃ ಎಚ್‍ಡಿಕೆ ರಾಮನಗರ, ಚನ್ನಪಟ್ಟಣ ಎರಡೂ ಕಡೆ ನಿಂತು ಎರಡೂ ಕಡೆ ಗೆದ್ದರು.
ಗೆದ್ದು ಸಿಎಂ ಆಗಿರುವ ಎಚ್‍ಡಿಕೆ ಚನ್ನಪಟ್ಟಣ ಉಳಿಸಿಕೊಂಡಿದ್ದಾರೆ. ರಾಮನಗರದಲ್ಲಿ ಕಾಂಗ್ರೆಸ್ ಮುಖಂಡರು ಸುಮ್ಮನಿರಲು ಸಿದ್ಧರಿಲ್ಲ. ಏಕೆಂದರೆ ಈ ಚುನಾವಣೆಯಲ್ಲಿ ರಾಮನಗರದಲ್ಲಿ ಇನ್ನು ಸ್ವಲ್ಪ ಏರುಪೇರಾಗಿದ್ದರೆ ಎಚ್‍ಡಿಕೆ ಸೋತುಬಿಡುವ ಸನ್ನಿವೇಶವಿತ್ತು. ಏಕೆಂದರೆ ಸಾಂಪ್ರದಾಯಿಕ ಕಾಂಗ್ರೆಸ್ ಮತಗಳ ಜೊತೆಗೆ ಮುಸ್ಲಿಮರು ಸಾರಾಸಗಟಾಗಿ ಎಚ್‍ಡಿಕೆ ವಿರುದ್ಧ ಓಟು ಹಾಕಿದ್ದರು. ಅಂತಹ ಕಡೆ ಅಭ್ಯರ್ಥಿಯನ್ನೇ ಹಾಕದಿದ್ದರೆ ತಮ್ಮ ಅಸ್ತಿತ್ವವೇನು ಎಂದು ಚಿಂತೆಗೆ ಬಿದ್ದವರು ಬಿಜೆಪಿ ಕಡೆಗೆ ಮುಖ ಮಾಡಿದ್ದಾರೆ. ಬಿಜೆಪಿಗೆ ಮುಸ್ಲಿಮರು ಓಟು ಹಾಕುವ ಸಾಧ್ಯತೆಯಿಲ್ಲ; ಕಾಂಗ್ರೆಸ್ ಅಭ್ಯರ್ಥಿಯೇ ಇರುವುದಿಲ್ಲ. ಹೀಗಾಗಿ ಬೇರೊಬ್ಬರಿಗೆ ಟಿಕೆಟ್ ಕೊಡುವ ಮನಸ್ಸು ಗೌಡರ ಕುಟುಂಬಕ್ಕಿಲ್ಲ.
ಮತ್ತೆ ಅನಿತಾ ಕುಮಾರಸ್ವಾಮಿಯವರೇ ಅಭ್ಯರ್ಥಿ ಎಂದು ಘೋಷಣೆಯಾಗಿದೆ. ಈ ಹಿಂದೆ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳೆರಡರಲ್ಲೂ ಎಚ್‍ಡಿಕೆಯೇ ಸ್ಪರ್ಧಿಯಾಗಲು ಯೋಗೇಶ್ವರ್ ಹಣಿಯುವುದೊಂದೇ ಕಾರಣವಾಗಿರಲಿಲ್ಲ. ಆಗ ಅನಿತಾ ಅವರಿಗೆ ಟಿಕೆಟ್ ಕೊಟ್ಟಿದ್ದರೆ, ರೇವಣ್ಣರ ಪತ್ನಿ ಅಥವಾ ಪುತ್ರ ಪ್ರಜ್ವಲ್‍ಗೂ ಟಿಕೆಟ್ ಕೊಡಬೇಕಾಗುತ್ತಿತ್ತು ಎಂಬ ಕಾರಣವಿತ್ತು. ಅಂದರೆ ಗೌಡರ ಕುಟುಂಬದ ಜಗಳಗಳನ್ನು ಸರಿಪಡಿಸಲು ರಾಜ್ಯದ ಜನರು ಉಪಚುನಾವಣೆಗಳನ್ನು ನೋಡಬೇಕು.
ಹೌದು, ಮಧುಗಿರಿಯಲ್ಲಿ ಚೆನ್ನಿಗಪ್ಪರನ್ನು ಸೋಲಿಸಲು ಕುಮಾರಸ್ವಾಮಿ (ಕುಟುಂಬದ ಸದಸ್ಯರನ್ನು, ಅದರಲ್ಲೂ ಪತ್ನಿಯನ್ನು ಜನರು ಹೀಗೇ ನೋಡುತ್ತಾರೆ) ಕ್ಯಾಂಡಿಡೇಟ್ ಆಗುವ ಅಗತ್ಯ ಆ ಪಕ್ಷಕ್ಕೂ ಇದ್ದಿರಬಹುದು. ಆದರೆ, ನಿರಂತರವಾಗಿ ಪಕ್ಷಕ್ಕೆ ದುಡಿಯುತ್ತಾ ಬಂದ ಕಾರ್ಯಕರ್ತರ ಪಾಡೇನು? ಜೆಡಿಎಸ್ ಪಕ್ಷವು ಈ ರೀತಿ ಗೌಡರ ಕುಟುಂಬದ ಪಕ್ಷವಾಗಿದೆ; ಅಧಿಕಾರಕ್ಕಾಗಿ ಅವರು ಏನು ಬೇಕಾದರೂ ಮಾಡಬಹುದು, ಬಿಜೆಪಿಯ ಜೊತೆಗೂ ಕೈಜೋಡಿಸಬಹುದು ಎಂದು ಮುಸ್ಲಿಮರಿಗೆ ಅನ್ನಿಸಿದ್ದರಿಂದಲೇ ಅವರು ಜೆಡಿಎಸ್ ವಿರುದ್ಧ ಓಟು ಹಾಕಿದ್ದು. ಕುಮಾರಸ್ವಾಮಿ ರಾಮನಗರದಲ್ಲಿ ಕಷ್ಟಪಟ್ಟು ಗೆಲ್ಲಬೇಕಾಗಿ ಬಂದಿದ್ದು ಅದರಿಂದಲೇ. ಹಾಸನ ನಗರದಲ್ಲಿ ಮುಸ್ಲಿಮರು ಜೆಡಿಎಸ್‍ಗೆ ಮತ ಹಾಕದೇ ಇದ್ದುದರಿಂದಲೇ ಗೆಲ್ಲಲು ಬೇಕಿದ್ದ ಹೆಚ್ಚುವರಿ ಮತಗಳು ಇಲ್ಲದೇ ಬಿಜೆಪಿ ಶಾಸಕ ಗೆದ್ದದ್ದು. ಮಂಡ್ಯ ನಗರದಲ್ಲಿ ಬೋರ್ಡಿಗೇ ಇಲ್ಲದಿದ್ದ ಗಣಿಗ ರವಿಕುಮಾರ್, ಚುನಾವಣೆಯ ಹಿಂದಿನ ದಿನ ತಲೆ ತಪ್ಪಿಸಿಕೊಂಡು ಹೋದರು, ಮುಸ್ಲಿಮರ ಓಟು ಪಡೆದುಕೊಂಡಿದ್ದರಿಂದ ತೀರಾ ಹತ್ತಿರಕ್ಕೇ ಬಂದದ್ದು.
ಇಂತಹುದ್ದೇ ಕಾರಣಕ್ಕೆ ಪ್ರತೀ ಚುನಾವಣೆಯ ನಂತರ ಜೆಡಿಎಸ್‍ನ ಒಂದಷ್ಟು ಶಾಸಕರು ಪಕ್ಷ ಬಿಟ್ಟು ಹೋಗುವುದು. ಆಶ್ಚರ್ಯಕರ ಸಂಗತಿಯೆಂದರೆ, ಎಂದೂ ಜೆಡಿಎಸ್‍ನಿಂದ ಹೊರಗೆ ಹೋಗುವ ಆಲೋಚನೆ ಇಲ್ಲದ ಸಿ.ಎಸ್.ಪುಟ್ಟರಾಜು ಒಳಗೊಳಗೇ ಮುನಿಸಿ ಕೊಂಡಿದ್ದಾರೆ. ಜಿ.ಟಿ. ದೇವೇಗೌಡರೂ ಮುಂದಿನ ಚುನಾವಣೆಯ ಹೊತ್ತಿಗೆ ಎಲ್ಲಿರುತ್ತಾರೆ ಹೇಳಲಾಗದು. ಏಕೆಂದರೆ, ಕಡೆಯವರೆಗೂ ಪಟ್ಟಿಯಲ್ಲೇ ಇರದಿದ್ದ ಗೌಡರ ಕುಟುಂಬದ ಬೀಗ ಡಿ.ಸಿ.ತಮ್ಮಣ್ಣರನ್ನು ಕ್ಯಾಬಿನೆಟ್‍ಗೆ ಸೇರಿಸಿಕೊಂಡು ಒಳ್ಳೆಯ ಸಾರಿಗೆ ಖಾತೆ ಕೊಟ್ಟರು; ತಮಗೆ ಇಷ್ಟವಿಲ್ಲದಿದ್ದ ಸಣ್ಣ ನೀರಾವರಿ ಕೊಟ್ಟರು ಎಂದು ಪುಟ್ಟರಾಜುವಿಗೆ ಕೋಪ. ಎಸ್‍ಎಸ್‍ಎಲ್‍ಸಿ ಪಾಸಾಗದ ತನಗೆ ಉನ್ನತ ಶಿಕ್ಷಣ ಕೊಟ್ಟು ಇನ್ನೊಬ್ಬ ಬೀಗ ಕೆ.ಎಸ್.ರಂಗಪ್ಪರನ್ನು ಸಲಹೆಗಾರನ ರೂಪದಲ್ಲಿ ತಲೆ ಮೇಲೆ ಕೂರಿಸಲು ಹೊರಟಿದ್ದರು ಎಂದು ಜಿ.ಟಿ.ದೇವೇಗೌಡರಿಗೆ ಸಿಟ್ಟು. ಈ ರೀತಿಯ ಇನ್ನೊಂದು ಪಕ್ಷಾಂತರವನ್ನು ಕರ್ನಾಟಕದ ಜನತೆ ನೋಡಲಿದ್ದಾರೆ. ಆದರೂ, ಮೂರನೆಯ ಶಕ್ತಿಯೊಂದು ಇಲ್ಲದಿರುವುದರಿಂದ ಈ ಭಾಗದಲ್ಲಿ ಜೆಡಿಎಸ್ ಚಲಾವಣೆಯಲ್ಲಿ ಮುಂದುವರೆಯಬಹುದು.
ಆದರೆ, ಇದು ಪ್ರಜಾಪ್ರಭುತ್ವದ ದುರಂತಗಳಲ್ಲೊಂದು. ದೇವೇಗೌಡರು ಹೊಂದಿರುವ ಸುದೀರ್ಘ ರಾಜಕೀಯ ಅನುಭವವು ಇದಕ್ಕಿಂತ ಹೆಚ್ಚಿನ ಜನಪರ ರಾಜಕಾರಣವನ್ನು ಕಟ್ಟಲು ಅವರಿಗೆ ನೆರವಾಗದಿರುವುದು ದುರಂತ. ಬಿಜೆಪಿಯನ್ನು ದೂರವಿಡುವ ಏಕೈಕ ಕಾರಣಕ್ಕೆ ಇಂತಹದ್ದೆಲ್ಲವನ್ನೂ ಕರ್ನಾಟಕದ ಜನರು ಸಹಿಸಬೇಕೇ?

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...