Homeಅಂಕಣಗಳುಗಂಗೆ ತೊಳೆಯಬಲ್ಲಳೇ ಈ ಪಾಪವನ್ನು?

ಗಂಗೆ ತೊಳೆಯಬಲ್ಲಳೇ ಈ ಪಾಪವನ್ನು?

- Advertisement -
- Advertisement -

ಇವರ್ಯಾರೂ ರಾಜಕಾರಣಿಗಳಲ್ಲ. ಯಾವೊಂದು ಪಕ್ಷದ ಪರ ಅಥವಾ ವಿರುದ್ಧವಾಗಿ ಅವರು ಇಲ್ಲ. ಕೇಂದ್ರದಲ್ಲಿ ಸಂಯುಕ್ತರಂಗದ ಸರ್ಕಾರವಿದ್ದಾಗ, 1998ರಲ್ಲಿ ಗಂಗಾನದಿಯನ್ನು ಉಳಿಸಿಕೊಳ್ಳುವ ಅವರ ಆಂದೋಲನ ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಉತ್ತರಾಖಂಡದಲ್ಲಿ 3 ಸಾರಿ ಆಡಳಿತ ಪಕ್ಷಗಳು ಬದಲಾಗಿವೆ; ಕೇಂದ್ರದಲ್ಲೂ ಬದಲಾಗಿವೆ. ಇವರ ಹೋರಾಟ ನಿರಂತರವಾಗಿ ಮುಂದುವರೆದಿದೆ. ಗಂಗೆಯ ಮಾಲಿನ್ಯವನ್ನು ತೊಳೆಯಬೇಕೆಂಬುದು ಅವರಿಗೆ ಆಧ್ಯಾತ್ಮಿಕ ಸಂಗತಿಯಾಗಿತ್ತು. ಮಾಲಿನ್ಯಕ್ಕಿಂತ ಅವರು ವಿರೋಧಿಸಿದ್ದು, ಗಂಗೆಯ ಹರಿವನ್ನು ನಿರ್ಬಂಧಿಸುವ ಅಣೆಕಟ್ಟುಗಳ ನಿರ್ಮಾಣವನ್ನು. ಗಂಗಾನದಿ ಉಗಮ ಸ್ಥಾನದಿಂದ ಕನಿಷ್ಠ 125 ಕಿ.ಮೀ.ಗಳಷ್ಟು ಉದ್ದದ ಭಾಗದಲ್ಲಾದರೂ ಜಲವಿದ್ಯುತ್ ಸ್ಥಾವರ ನಿಲ್ಲಿಸಿ ಎಂದು ಕೇಳಿದರು. ಗಂಗಾನದಿಯಲ್ಲಿ ಮರಳು ಗಣಿಗಾರಿಕೆ ನಿಲ್ಲಿಸಬೇಕೆಂದು ಪದೇ ಪದೇ ಮನವಿ ಸಲ್ಲಿಸಿದರು. ಕೋರ್ಟುಗಳ ಮೊರೆ ಹೊಕ್ಕರು. ಅಂತಿಮವಾಗಿ ಉಪವಾಸ ಸತ್ಯಾಗ್ರಹವನ್ನು ತಮ್ಮ ಹೋರಾಟದ ಮಾರ್ಗವಾಗಿಸಿಕೊಂಡರು.
ಉಪವಾಸ ಮಾಡುತ್ತಲೇ ತೀರಿ ಹೋದವರಲ್ಲಿ ಮೂರು ದಿನದ ಕೆಳಗೆ ಇಲ್ಲವಾದ ಸಂತ ಸ್ವಾಮಿ ಗ್ಯಾನ್ ಸ್ವರೂಪ್ ಆನಂದ್ ಮೂರನೆಯವರು. ಇದಕ್ಕೆ ಹಿಂದೆ ಸ್ವಾಮಿ ನಿಗಮಾನಂದ್ ಮತ್ತು ಸ್ವಾಮಿ ಗೋಕುಲಾನಂದರು ಸಹಾ ಉಪವಾಸನಿರತರಾಗಿದ್ದಾಗಲೇ ಮರಣ ಹೊಂದಿದ್ದರು. ಸ್ವಾಮಿ ನಿಗಮಾನಂದ್ ಕೋಮಾದಲ್ಲಿದ್ದಾಗ, ಹೈಕೋರ್ಟು ಅಣೆಕಟ್ಟು ನಿರ್ಮಾಣವನ್ನು ನಿಲ್ಲಿಸಲು ಆದೇಶ ಹೊರಡಿಸಿತು. ಒಂದಲ್ಲಾ, ಎರಡಲ್ಲಾ ಹಲವು ಗೆಲುವುಗಳನ್ನು ಈ ಸಂತರು ಸಾಧಿಸಿದ್ದಾರೆ. ಆ ಅರ್ಥದಲ್ಲಿ ಇವರದ್ದು ಫಲವಿಲ್ಲದ ಹೋರಾಟವೂ ಅಲ್ಲ.
ಗಂಗೆಯ ಪಾವಿತ್ರ್ಯದ ಕಲ್ಪನೆ ಇಟ್ಟುಕೊಂಡು ವಾರಣಾಸಿ (ಕಾಶಿ)ಗೆ ಹೋದವರಿಗೆ ಅದರ ಕೊಳಕು ಗಾಬರಿ ಹುಟ್ಟಿಸುತ್ತದೆ; ‘ಹಿಂದುಗಳಿಗೆ ಪವಿತ್ರ’ವೆಂದು ಹೇಳಲಾಗುವ ಈ ನದಿಯ ಸ್ವಚ್ಛತೆಗೆ ಯಾರೂ ಏನೂ ಮಾಡುತ್ತಲೇ ಇಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಸಿನಿಕರೂ, ಧಾರ್ಮಿಕ ಢಾಂಬಿಕತೆಯ ಕುರಿತು ತಿರಸ್ಕಾರ ಹೊಂದಿರುವವರು ‘ಶ್ರದ್ಧಾವಂತ ಹಿಂದೂ ಧಾರ್ಮಿಕ’ ವ್ಯಕ್ತಿಗಳನ್ನು ಆಡಿಕೊಳ್ಳುತ್ತಾರೆ. ಆದರೆ, ‘ಧಾರ್ಮಿಕ ನೆಲೆ’ಯಲ್ಲಿ ಈ ಕುರಿತು ಕೆಲಸ ಮಾಡುತ್ತಿರುವ ಎರಡು ಬಗೆಯ ಜನರಿದ್ದಾರೆ. ಒಂದು, ಉತ್ತರಾಖಂಡದ ವಿವಿಧ ಹಿಂದೂ ಸಂತರು ಮತ್ತು ಅವರ ಅನುಯಾಯಿಗಳು. ಇವರಿಗೆ ಇದು ಗಂಗಾ ತಪಸ್ಯಾ. ಎರಡು, ‘ತಾಯಿ ಗಂಗೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ’ ಎಂದು ಹೇಳಿ ವಾರಣಾಸಿಯಲ್ಲಿ ರಾಜಕಾರಣ ಮಾಡಲು ಹೋದ ‘ಹಿಂದುತ್ವ’ವಾದಿಗಳು. ಎಲ್ಲಾ ಪಕ್ಷಗಳ ಎಲ್ಲಾ ಸರ್ಕಾರಗಳ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಬಂದ ನಿಜಸಂತರಿಗೂ, ಈ ವಾದಿಗಳಿಗೂ ಈಗ ವೈರುಧ್ಯ ಏರ್ಪಟ್ಟಿರುವುದು ಆಶ್ಚರ್ಯವೇನಲ್ಲ.
ವಾರಣಾಸಿಯ ಲೋಕಸಭಾ ಸದಸ್ಯರೂ ಆದ ಪ್ರಧಾನಮಂತ್ರಿಗಳಿಗೆ ಸಂತ ಗ್ಯಾನ್ ಆನಂದರು ಈ ವರ್ಷದಲ್ಲಿ ಎರಡು ಬಾರಿ ಪತ್ರ ಬರೆದಿದ್ದರು. ‘ನೀವು ಗಂಗಾಜೀ (ಗಂಗೆಯನ್ನು ಅವರು ಬೇರೆ ರೀತಿಯಲ್ಲಿ ಸಂಬೋಧಿಸುತ್ತಿರಲಿಲ್ಲ) ಕುರಿತು ಆಸಕ್ತಿ ತೋರಿ, ಅದಕ್ಕೆಂದೇ ಒಂದು ಇಲಾಖೆಯನ್ನು ಸೃಷ್ಟಿಸಿದಾಗ ನಾನು ಬಹಳ ನಿರೀಕ್ಷೆಗಳನ್ನಿಟ್ಟುಕೊಂಡಿದ್ದೆ. ದೊಡ್ಡ ಮೊತ್ತದ ಹಣ ಇದಕ್ಕಾಗಿ ಕಾದಿರಿಸಿದಿರಿ. ಆದರೆ, ಈ ಕುರಿತು ನೀವು ಮಾಡಿದ್ದೆಲ್ಲವೂ ಕಾರ್ಪೊರೇಟ್ ಕಂಪೆನಿಗಳ ಹಿತಕ್ಕಾಗಿ ಎಂದು ಕಂಡುಕೊಂಡಿದ್ದೇನೆ.’ ಸೂಕ್ತ ಕ್ರಮಗಳಿಗೆ ಮುಂದಾಗದಿದ್ದಲ್ಲಿ ‘ಗಂಗಾ ದಸರಾ’ದ ಆರಂಭದ ದಿನದಿಂದ ತಾನು ಉಪವಾಸ ಆರಂಭಿಸುವುದಾಗಿ ಸಂತ ಆನಂದರು ತಿಳಿಸಿದ್ದರು. ಅದರಂತೆ ಜೂನ್ 22ರಂದು ಹರಿದ್ವಾರದಲ್ಲಿ ಶುರುವಾದ ಉಪವಾಸ ಅಂತ್ಯಗೊಂಡಿದ್ದು, 111 ದಿನಗಳ ನಂತರ ಅವರ ಮರಣದೊಂದಿಗೆ. ನವರಾತ್ರಿ ಶುರುವಾಗುವ ದಿನದಿಂದ ತಾನು ನೀರನ್ನೂ ನಿಲ್ಲಿಸುತ್ತೇನೆಂದು ಹೇಳಿದ್ದವರು ಅದೇ ರೀತಿ ನಡೆದುಕೊಂಡಿದ್ದಾರೆ.
ಸಾವಿನ ಹಿಂದಿನ ದಿನವೂ ಸ್ಪಷ್ಟವಾಗಿ, ನಿಷ್ಠುರವಾಗಿ ಮಾತನಾಡಿದ್ದಾರೆ. ಕಾನೂನುಪ್ರಕಾರ ತನ್ನ ಒಪ್ಪಿಗೆಯಿಲ್ಲದೇ ಚಿಕಿತ್ಸೆ ಕೊಡುವ ಹಕ್ಕು ಇಲ್ಲ ಎಂದು ಪ್ರತಿಪಾದಿಸಿದ್ದಾರೆ. ಸಾವಿನ ದಿನ ಬೆಳಿಗ್ಗೆ ಒಂದು ಪತ್ರವನ್ನು ಬರೆದು ಪತ್ರಿಕೆಗಳಿಗೆ ಬಿಡುಗಡೆ ಮಾಡಲು ಹೇಳಿದ್ದಾರೆ. ತನ್ನ ಆಧ್ಯಾತ್ಮಿಕ ಗುರು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರಿಗೆ ತನ್ನ ಆರೋಗ್ಯ ಸ್ಥಿತಿ ಚೆನ್ನಾಗಿರುವುದರ ಕುರಿತು ಪತ್ರ ಬರೆದಿದ್ದಾರೆ. ಹೀಗಾಗಿಯೇ ಅವರ ಗುರು ಇದನ್ನೊಂದು ಕೊಲೆಯೆಂದು ಕರೆದು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.
ತಮಗೆ ತಿಳಿದಿರಲಿ, ಈ ಹಿಂದೆ 68 ದಿನಗಳ ಉಪವಾಸದ ನಂತರ ತೀರಿಕೊಂಡ ಸ್ವಾಮಿ ನಿಗಮಾನಂದರ ಮರಣದ ತನಿಖೆಯನ್ನೂ ಸಿಬಿಐ ನಡೆಸುತ್ತಿದೆ. ಬಲವಂತವಾಗಿ ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದ ಅವರ ಮರಣಾನಂತರದ ದೇಹಸ್ಥಿತಿಯನ್ನು ನೋಡಿ ಅನುಯಾಯಿಗಳು ದನಿಯೆತ್ತಿದ್ದರು. ವೈದ್ಯಕೀಯ ವರದಿ ಪ್ರಕಾರ ಅವರ ದೇಹದಲ್ಲಿ ಆರ್ಗನೋಫಾಸ್ಫೇಟ್ ವಿಷವಿತ್ತು. 2003ರಲ್ಲಿ ಅದೇ ಆಶ್ರಮದ ಇನ್ನೊಬ್ಬ ಸ್ವಾಮಿ ಗೋಕುಲಾನಂದರಿಗೆ ಸ್ಕೋಲೀನ್ ಎಂಬ ಇಂಜೆಕ್ಷನ್ ಕೊಟ್ಟು ಕೊಲ್ಲಲಾಯಿತು ಎಂದು ಹೇಳಲಾಗುತ್ತಿದೆ.
ಆಶ್ಚರ್ಯವೆನಿಸಬಹುದು, ಆದರೆ ನಿಜ. ಇದೇ ದೇಶದಲ್ಲಿ ‘ಹಿಂದೂ ಸಂತ’ರು ಕಾರ್ಪೋರೇಟ್ ಸಂಸ್ಥೆಗಳು ಮತ್ತು ಮೈನಿಂಗ್ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾ ವಿರುದ್ಧ ಇಂತಹ ಆಂದೋಲನವನ್ನು 2 ದಶಕಗಳಿಂದ ನಡೆಸುತ್ತಿದ್ದಾರೆ. 2003ರಲ್ಲಿ ತೀರಿಹೋದ (?ಕೊಲ್ಲಲ್ಪಟ್ಟ) ಸ್ವಾಮಿ ಗೋಕುಲಾನಂದರು ನೈನಿತಾಲ್ ಅರಣ್ಯದಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳನ್ನು ವಿರೋಧಿಸುತ್ತಿದ್ದರು.
ಇನ್ನೊಬ್ಬ ಸಂತ ಶಿವಾನಂದರೂ 2011ರ ಹೊತ್ತಿಗೇ ಸುಮಾರು ಆರು ದೀರ್ಘ ಉಪವಾಸಗಳನ್ನು ನಡೆಸಿದ್ದರು. ಅವರ ವೈಶಿಷ್ಟ್ಯವೆಂದರೆ, ಅವರು ಉಪವಾಸ ತಡೆಯಲು ಬರುವವರ ಕೈಗೆ ಸಿಗದಂತಿರಲು ತಮ್ಮ ಆಶ್ರಮದ ಸುತ್ತ ಭದ್ರ ಮಾಡಿಕೊಂಡು, ಒಳಗಿನಿಂದ ಬೀಗ ಹಾಕಿ ಉಪವಾಸ ಕೂರುತ್ತಾರೆ. ಸರ್ಕಾರದ ವತಿಯಿಂದ ಗಣಿಗಾರಿಕೆ ನಿಲ್ಲಿಸುವ ಆದೇಶವನ್ನು ಅವರ ಆಶ್ರಮದ ಬಾಗಿಲಿಗೆ ಅಂಟಿಸಿ, ಭಕ್ತರು ಅದನ್ನು ಶಿವಾನಂದರಿಗೆ ತಲುಪಿಸಿ ಅವರು ಓದಿದ ನಂತರವೇ ಬಾಗಿಲು ತೆಗೆದು ಸತ್ಯಾಗ್ರಹ ನಿಲ್ಲಿಸುತ್ತಾರೆ.
ಹಿಮಾಲಯದ ತಪ್ಪಲಲ್ಲಿ, ಗಂಗೆಯಂತಹ ಜೀವನದಿಗಳು ಹರಿಯುವ ಪ್ರದೇಶದಲ್ಲೂ ಅಂತರ್ಜಲದ ಮಟ್ಟ ಕುಸಿದಿದ್ದು, 10 ಲಕ್ಷ ಎಕರೆಗಳಿಗೂ ಹೆಚ್ಚು ಪ್ರದೇಶ ಬಂಜರಾಗಿರಲು ಮರಳು ಮತ್ತು ಕಲ್ಲು ಗಣಿಗಾರಿಕೆಯೇ ಕಾರಣವೆಂದು ಉತ್ತರಾಖಂಡದ ಹೈಕೋರ್ಟ್ ಹೇಳಿದೆ. ಬಹುಶಃ ಈಗ ನಿಮಗೆ ಬಲಪಂಥೀಯರು ಉತ್ತರಾಂಚಲವೆಂದು (ಅದು ‘ದೇವರಿರುವ ಜಾಗ’ವೆನ್ನುವ ಕಾರಣಕ್ಕೆ) ಕರೆಯಬಯಸುವ ಉತ್ತರಾಖಂಡ ರಾಜ್ಯದಲ್ಲಿ ಭೂಮಿ, ನೀರು ಮತ್ತು ಅರಣ್ಯ ಲೂಟಿಯ ಪ್ರಮಾಣ ಹಾಗೂ ಅದರ ಹಿಂದಿನ ಕಾರ್ಪೋರೇಟ್ ಮಾಫಿಯಾ ಅರ್ಥವಾಗುತ್ತಿರಬಹುದು.
ಇದೊಂದು ಉದಾಹರಣೆ ಹೇಳಿದರೆ ಆ ಲಾಬಿಯ ಕಾರ್ಯವಿಧಾನದ ಕುರಿತು ಅರಿವಾಗಬಹುದು. ಮರಳು ಲೂಟಿಯ ವಿರುದ್ಧ ಒಮ್ಮೆ 20 ವರ್ಷದ ಸ್ವಾಮಿ ಯಜ್ಞಾನಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾಗ ಆತನ ಆರೋಗ್ಯ ವಿಚಾರಿಸುವ ನೆಪದಲ್ಲಿ ಸ್ಥಳೀಯ ಅಧಿಕಾರಿಗಳು ಬಂದರು. ಅವರು ಮಾತನಾಡಿಸುವ ನಾಟಕ ಮಾಡುತ್ತಿದ್ದಾಗಲೇ, ಅವರ ಹಿಂದೆಯೇ ಬಂದಿದ್ದ ಮುಸುಕುಧಾರಿಗಳು ಆತನನ್ನು ಹೊತ್ತೊಯ್ದರು. ನಂತರ ಆ ಮುಸುಕುಧಾರಿಗಳನ್ನು ಪೊಲೀಸರೆಂದು ಹೇಳಲಾಯಿತು. ಯಜ್ಞಾನಂದರನ್ನು 2 ತಿಂಗಳ ಕಾಲ ಜೈಲಿನಲ್ಲಿಡಲಾಗಿತ್ತು. ಈ ಬಂಧನ ಅಕ್ರಮವೆಂದು ನ್ಯಾಯಾಲಯವು ಹೇಳಿದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
ಗಂಗೆಯನ್ನು ಉಳಿಸಿಕೊಳ್ಳುವ ಆಂದೋಲನವು ಅಹಿಂಸಾತ್ಮಕವಾಗಿ ಈ ಪ್ರಮಾಣಕ್ಕೆ ನಡೆದ ಇಷ್ಟೆಲ್ಲಾ ಇತಿಹಾಸ ಇರುವುದರಿಂದಲೇ, ವಾರಣಾಸಿಯ ಸಂಸದರೂ ಸಹಾ ತಮ್ಮ ವಿರುದ್ಧವೇ ಉಪವಾಸ ನಡೆಸುತ್ತಿದ್ದ ಸಂತರೊಬ್ಬರು ತೀರಿಕೊಂಡಾಗ ಸಂತಾಪಸೂಚಕ ಟ್ವೀಟ್ ಮಾಡಬೇಕಾಯಿತು. ಆದರೆ, ಈ ಸಂತಾಪ ಸಂದೇಶದಿಂದ ಅವರ ಪಾಪ ತೊಳೆದು ಹೋಗುವುದು ಸಾಧ್ಯವಿಲ್ಲ. ಇದು ಕಾಂಗ್ರೆಸ್ ಅಥವಾ ಇನ್ನಾವುದೋ ಬಾಹ್ಯ ಶಕ್ತಿಯ ಚಿತಾವಣೆಯಿಂದ ನಡೆದ ಹೋರಾಟವೆಂದು ತಳ್ಳಿಹಾಕುವುದು ಸಾಧ್ಯವಿಲ್ಲ. ಸಂತ ಸ್ವಾಮಿ ಗ್ಯಾನ್ ಸ್ವರೂಪ್ ಆನಂದರ ಸಾವು ವಾರಣಾಸಿಯ ಸಂಸದರನ್ನು ಮಾತ್ರವಲ್ಲದೇ, ದೇಶದ ಜನರೆಲ್ಲರನ್ನೂ ಕಾಡುತ್ತದೆ.
ಜುಲೈ 2011ರಲ್ಲಿ ಈ ಹೆಸರು ಪಡೆದುಕೊಂಡು ಸನ್ಯಾಸಿಯಾಗುವ ಮುಂಚೆ ಅವರು ಪ್ರೊ.ಜಿ.ಡಿ.ಅಗರ್‍ವಾಲ್. ಮುಜಫ್ಪರ್‍ನಗರದ ಬಳಿಯ ರೈತ ಕುಟುಂಬವೊಂದರ ಹಿನ್ನೆಲೆಯ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪರಿಸರ ವಿಜ್ಞಾನದಲ್ಲಿ ಪಿಎಚ್‍ಡಿ ಪಡೆದಿದ್ದರು. ಐಐಟಿ ಕಾನ್‍ಪುರದಲ್ಲಿ ಸಿವಿಲ್ ಮತ್ತು ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದುದಲ್ಲದೇ, 1979-80ರಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಐಐಟಿ ಕಾನ್‍ಪುರದ ತನ್ನ ವಿದ್ಯಾರ್ಥಿಗಳೊಂದಿಗೆ ಆರಂಭಿಸಿದ ಕಂಪೆನಿ director of Envirotech Instruments (P) Limited, New Delhi ಯ ನಿರ್ದೇಶಕರಾಗಿದ್ದರು. ನವದೆಹಲಿಯ ಪ್ರಸಿದ್ಧ ವಿಜ್ಞಾನ ಮತ್ತು ಪರಿಸರ ಸಂಸ್ಥೆಯ ಸ್ಥಾಪಕ ಅನಿಲ್ ಅಗರ್‍ವಾಲ್ ಇವರ ವಿದ್ಯಾರ್ಥಿ. ಇಂತಹ ಹಿನ್ನೆಲೆಯ ಪ್ರೊ.ಜಿ.ಡಿ.ಅಗರ್‍ವಾಲ್ ‘ಶ್ರದ್ಧಾವಂತ ಹಿಂದೂ’ ಆಗಿದ್ದರು. ಪರಿಸರ ಮತ್ತು ಗಂಗಾಜೀ ಅವರಿಗೆ ವಿಜ್ಞಾನವೂ ಆಗಿತ್ತು, ಆಧ್ಯಾತ್ಮವೂ ಆಗಿತ್ತು.
ಭಾಗೀರಥಿಗೆ ಅಣೆಕಟ್ಟು ಕಟ್ಟಿ ಲೊಹಾರಿನಾಗ್ ಪಾಲಾ ಜಲವಿದ್ಯುತ್ ಯೋಜನೆ ಮಾಡುವುದರ ವಿರುದ್ಧ 2009ರಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಸರ್ಕಾರವು ಅದನ್ನು ಹಿಂತೆಗೆದುಕೊಳ್ಳುವ ಘೋಷಣೆ ಮಾಡುವ ಹೊತ್ತಿಗೆ ಉಪವಾಸವು 38ನೇ ದಿನ ತಲುಪಿ ಅಗರ್‍ವಾಲ್ ಸಾವಿನಂಚಿಗೆ ಸರಿದಿದ್ದರು. ಇವರ ಇನ್ನೊಂದು ಉಪವಾಸವನ್ನು ಬೆಂಬಲಿಸಿ, ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರದೇಶ ಪ್ರಾಧಿಕಾರದ ಸದಸ್ಯರಾದ ರಾಜೇಂದ್ರ ಸಿಂಗ್, ರವಿ ಚೋಪ್ರಾ, ಹಯಾತ್ ಸಿದ್ದಿಖಿ ಇವರುಗಳು 2012ರ ಮಾರ್ಚ್‍ನಲ್ಲಿ ರಾಜೀನಾಮೆ ನೀಡಿದ್ದರು.
ಪರಿಸರ ನಾಶ ಮತ್ತು ಲಾಬಿಗಳ ಜೊತೆ ಕೈ ಜೋಡಿಸುವುದರಲ್ಲಿ ಯಾವ ಪಕ್ಷಗಳೂ ಸಾಚಾ ಅಲ್ಲ. ಆದರೆ, ಗಂಗೆ ಕುರಿತಾದ ಧಾರ್ಮಿಕ ಭಾವನೆಗಳನ್ನು ಉದ್ದೀಪಿಸಿ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದ ಪಕ್ಷದ ಟ್ರ್ಯಾಕ್ ರೆಕಾರ್ಡ್ ಮಿಕ್ಕೆಲ್ಲರಿಗಿಂತ ಕೆಟ್ಟದಾಗಿದೆ. ಗಂಗೆಗೆ ನಿಷ್ಠರಾದ ಹಿಂದೂ ಸಂತರ ವಿಚಾರದಲ್ಲೂ ಮಿಕ್ಕೆಲ್ಲರಿಗಿಂತ ಕೆಟ್ಟದಾಗಿ ನಡೆದುಕೊಂಡಿರುವುದು ಅದೇ ಪಕ್ಷ. 2013ರವರೆಗೆ ಗಂಗೆಯ ಹೆಸರಿನಲ್ಲಿ ಖರ್ಚಾದ ಹಣ ಒಂದು ಕಾರ್ಗಿಲ್ ಯುದ್ಧಕ್ಕೆ ಆದ ಖರ್ಚಿನಷ್ಟಾದರೆ, ಈ ಒಂದು ಸರ್ಕಾರದ ಅವಧಿಯಲ್ಲಿ ಮತ್ತೆ ಅಷ್ಟು ಹಣ ಮಂಜೂರಾಗಿದೆ ಮತ್ತು ಆಗಲೇ ಮುಕ್ಕಾಲು ಭಾಗ ಖರ್ಚಾಗಿದೆ. ಆದರೆ, ತೀರಿಕೊಳ್ಳುವ ಮುಂಚೆ ಸಂತ ಗ್ಯಾನ್ ಆನಂದರು ಹೇಳಿರುವಂತೆ ಇದು ಕಾರ್ಪೋರೇಟ್‍ಗಳ ಜೇಬಿಗೆ ಹೋಗಿದೆ.
ಹಾಗಾದರೆ, ಮಾ ಗಂಗಾ, ನಮಾಮಿ ಗಂಗೆ, ಗಂಗಾರತಿ, ಪವಿತ್ರ ಗಂಗೆ ಈ ಮಾತುಗಳಿಗೆಲ್ಲಾ ಏನು ಅರ್ಥ? ನಿಜವಾದ ಸಂತರು ಮಾತ್ರವೇ ತೋರಬಹುದಾದ ಧೈರ್ಯ, ಬದ್ಧತೆಯನ್ನು ತೋರುತ್ತಾ ಗಂಗಾ ತಪಸ್ಸಿನಲ್ಲಿ ನಿರತರಾಗಿರುವವರ ಮಾತನ್ನು ಕೇಳಿಸಿಕೊಳ್ಳಲಾಗದಷ್ಟು ನಮ್ಮ ಸರ್ಕಾರಗಳು ಮತಿಗೆಟ್ಟಿವೆಯೇ? ಈ ಪಾಪವನ್ನು ಗಂಗೆ ತೊಳೆಯಲಾದೀತೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...