Homeಅಂಕಣಗಳುಯೆಮೆನ್ ಜಗತ್ತಿನ ಅತಿದೊಡ್ಡ ಮಾನವ ಬಿಕ್ಕಟ್ಟು

ಯೆಮೆನ್ ಜಗತ್ತಿನ ಅತಿದೊಡ್ಡ ಮಾನವ ಬಿಕ್ಕಟ್ಟು

- Advertisement -
- Advertisement -

ಹಳೆಯ ಕನ್ನಡ ಪೌರಾಣಿಕ ಸಿನಿಮಾಗಳಲ್ಲಿ ಕೇಡಿಗಳ ಪಾತ್ರ ಮಾಡಿದವರು ತಮ್ಮ ಶತ್ರುಗಳನ್ನು ಮತ್ತು ಎದುರಾಳಿಗಳನ್ನು ಆಕಾಶಕಾಯಗಳ ಮೂಲಕ ನಾಶ ಮಾಡುವುದನ್ನು ನೋಡುತ್ತಿದ್ದೆವು. 2017ರ ಮೇ ತಿಂಗಳಿನಲ್ಲಿ ಅಮೆರಿಕದ ಅಧ್ಯಕ್ಷ ಮತ್ತು ಥಿಯೇಟ್ರಿಕ್ಸ್‍ನ ದೊಡ್ಡ ಅಭಿಮಾನಿ ಡೊನಾಲ್ಡ್‍ಟ್ರಂಪ್ ಅವರು ಸೌದಿಯದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಹಾಗೂ ಈಜಿಪ್ಟಿನ ಅಧ್ಯಕ್ಷ ಅಬ್ದುಲ್ ಫತೇಹ್ ಅಲ್-ಸಿಸಿಯ ಆಕಾಶಕಾಯದ ಮೇಲೆ ಕೈ ಹಿಡಿದುಕೊಂಡು ರಿಯಾದ್‍ನ ಮಹತ್ವಾಕಾಂಕ್ಷೆಯ ತೀವ್ರವಾದಿ ಸಿದ್ಧಾಂತದ ವಿರುದ್ಧ ಹೋರಾಡುವ ಗ್ಲೋಬಲ್ ಸೆಂಟರ್ ಒಂದಕ್ಕೆ ಚಾಲನೆ ನೀಡಿದರು. ಅದು ದುಖಾಂತ್ಯ ಕಾಣದಿದ್ದರೆ ಬಹಳ ತಮಾಷೆಯಾಗಿರುತ್ತಿತ್ತು. ಅವರ ತಥಾಕಥಿತ ಭಯೋತ್ಪಾದನಾ ಮಧ್ಯಪ್ರವೇಶ ಎಂಬುದು ಇಂದು ಪ್ರಪಂಚದ ಇತಿಹಾಸದಲ್ಲೇ ಅತಿದೊಡ್ಡ ಮನುಷ್ಯ ನಿರ್ಮಿತ ಬಿಕ್ಕಟ್ಟನ್ನು ಸೃಷ್ಟಿಸಿದೆ. ಸೌದಿ ಅರೇಬಿಯಾದ ದಕ್ಷಿಣಕ್ಕಿರುವ ಯೆಮೆನ್ ಮಧ್ಯಪ್ರಾಚ್ಯದಲ್ಲೇ ಅತ್ಯಂತ ಬಡದೇಶ. 2015ರಲ್ಲಿ ಶುರುವಾದ ಈಗಿನ ಸಂಘರ್ಷಕ್ಕೆ ಮುನ್ನ ಅಲ್ಲಿನ ಜನಸಂಖ್ಯೆ 2.8 ಕೋಟಿಯಿತ್ತು. ಯೆಮೆನ್‍ನೊಂದಿಗೆ ಗಡಿ ಹಂಚಿಕೊಳ್ಳು ಸೌದಿ ಅರೇಬಿಯಾ ಮಧ್ಯಪ್ರಾಚ್ಯದ ಅತ್ಯಂತ ಶ್ರೀಮಂತ ದೇಶ. ಇಂದುಯೆಮೆನ್‍ನಲ್ಲಿರುವ ಬಿಕ್ಕಟ್ಟನ್ನು ಹೆಚ್ಚಿಸಿದ್ದು ಅಲ್ಲಿನ ವರ್ಷಾನುಗಟ್ಟಲೆಯ ನಿರುದ್ಯೋಗ, ಬಡತನ, ಬೆಲೆಯೇರಿಕೆ ಹಾಗೂ ಮುಸ್ಲಿಮರ ಭಿನ್ನ ಪಂಗಡಗಳ ನಡುವಿನ ತಾರತಮ್ಯಗಳು. ಶಿಯಾ ಹೌತಿಸ್ ಎಂದು ಕರೆಯಲಾಗುವ ಗುಂಪು ಚಾರಿತ್ರಿಕ ತಾರತಮ್ಯಕ್ಕೆ ಒಳಗಾಗಿದ್ದು ಸರ್ಕಾರದ ವಿರುದ್ಧ ಬಂಡಾಯ ಹೂಡಿದೆ. 2004ರಲ್ಲಿ ಈ ಪಂಗಡವು ತನ್ನ ನ್ಯಾಯಬದ್ಧಅಧಿಕಾರ ಹಂಚಿಕೆಗಾಗಿ ಸರಣಿ ಬಂಡಾಯಗಳನ್ನು ನಡೆಸಿತು. 2011ರಲ್ಲಿ ಅರಬ್‍ದಂಗೆಯ ತರುವಾಯ ಅಧ್ಯಕ್ಷ ಸಾಲೆಹ್ ಪದಚ್ಯುತನಾಗಿ 2012ರಲ್ಲಿ ಪ್ರಬಲ ಸೌದಿ ಅರೇಬಿಯಾ ಹಾಗೂ ಗಲ್ಫ್ ದೇಶಗಳ ಮೇಲ್ವಿಚಾರಣೆಯಲ್ಲಿ ಅಬ್ದ್-ರಬ್ಬು ಮನ್ಸೂರ್ ಹೌದಿ ನೇತೃತ್ವದ ಮಧ್ಯಂತರ ಸರ್ಕಾರ ರಚನೆಯಾಯಿತು. ಹೌತಿಸ್ ಬಣವು ಈ ಮಧ್ಯಂತರ ಸರ್ಕಾರವನ್ನು ನಿರಾಕರಿಸಿ ರಾಜಧಾನಿ ಸನಾ ನಗರಕ್ಕೆ ಮುತ್ತಿಗೆ ನಡೆಸಿ 2014ರ ಸೆಪ್ಟೆಂಬರ್‍ನಲ್ಲಿ ರಾಜಧಾನಿಯನ್ನು ವಶಕ್ಕೆ ಪಡೆದುಕೊಂಡಿತು. ಅಧ್ಯಕ್ಷ ಹೌದಿ ಸನಾದಿಂದ ಸುನ್ನಿಗಳ ಬಾಹುಳ್ಯದ ಅಡೆನ್ ನಗರಕ್ಕೆ ಪರಾರಿಯಾದರು. ಪರಿಸ್ಥಿತಿ ಇನ್ನೂ ವಿಕೋಪಕ್ಕೆ ಹೋಗುತ್ತಿದ್ದಂತೆ ಅವರು ಯೆಮೆನ್‍ನಿಂದಲೇ ಓಡಿ ಹೋದರು. ಅಂದಿನಿಂದಲೂ ಸೌದಿ ಅರೇಬಿಯಾ ನೇತೃತ್ವದ ಮೈತ್ರಿಕೂಟವು ನಿರಂತರವಾಗಿ ಹಿಂಸಾಚಾರದಲ್ಲಿ ತೊಡಗಿದೆ.
ಮೂರು ವರ್ಷಗಳ ಆಂತರಿಕ ಯುದ್ಧದ ನಂತರದಲ್ಲಿ ಯೆಮೆನ್ ಜನರು ದೊಡ್ಡ ಮಾನವ ಬಿಕ್ಕಟ್ಟನ್ನೆದುರಿಸುತ್ತಿದ್ದಾರೆ. ದೇಶದ 50 ಲಕ್ಷ ಮಕ್ಕಳು ಹಸಿವಿನ ದವಡೆಯಲ್ಲಿ ಸಿಲುಕಿದ್ದಾರೆ. ದೇಶದ ಪ್ರಮುಖ ಮೂಲಸೌಕರ್ಯ ವ್ಯವಸ್ಥೆ ಬಹುತೇಕ ನಾಶವಾಗಿದೆ. ದೇಶದ ಸಂಸ್ಕøತಿ ಪಾರಂಪರೆಯ ಗುರುತುಗಳೆಲ್ಲವೂ ಧ್ವಂಸಗೊಂಡಿವೆ. ಜಗತ್ತಿನ ಅತ್ಯಂತ ಹಳೆಯ ನಗರಗಳಲ್ಲಿ ಒಂದಾದ ಈಗಿನ ಯೆಮೆನ್ ರಾಜಧಾನಿ ಸನಾ ಮತ್ತು ಸದಾ ನಗರಗಳೂ ಇದರಲ್ಲಿ ಸೇರಿವೆ. ಯೆಮೆನ್‍ನ ನಾಗರಿಕ ಯುದ್ಧದ ಸೌದಿ ಮತ್ತು ಇರಾನ್‍ಗಳ ನಡುವಿನ ಬದಲಿ ಯುದ್ಧದಂತೆ (ಪ್ರಾಕ್ಸಿ ವಾರ್) ತೋರಿದರೂ ನಿಜವಾದ ಕಾರಣ ಬಹಳ ಸಂಕೀರ್ಣವಾಗಿದೆ. ಎರಡೂ ಕಡೆಯಿಂದ ಪರಸ್ಪರ ನಿಂದನೆಗಳು ನಡೆದು ಇಬ್ಬರೂ ಅಪರಾಧಿ ಸ್ಥಾನದಲ್ಲಿ ನಿಂತಿದ್ದರೂ ಈ ಯುದ್ಧಕ್ಕೆ ಯುಕೆ, ಅಮೆರಿಕ, ಫ್ರಾನ್ಸ್ ಮತ್ತು ಕೆನಡಾಗಳು ಒದಗಿಸಿರುವ ಶಸ್ತ್ರಾಸ್ತ್ರಗಳ ಪ್ರಮಾಣ ಬೆಚ್ಚಿ ಬೀಳಿಸುತ್ತದೆ. ಮುಖ್ಯವಾಹಿನಿ ಮಾಧ್ಯಮಗಳಿಂದ ನಿರ್ಲಕ್ಷ್ಯಗೊಳಗಾಗಿ ಅತ್ಯಂತ ಬಾಧಿತವಾಗಿರುವ ಯೆಮೆನ್ ನಾಗರಿಕರು ಮಾಧ್ಯಮಗಳ ಮೂಲಕ ಜಗತ್ತಿನ ಗಮನ ಸೆಳೆಯಲು ಸಾಧ್ಯವಾಗಲಿಲ್ಲ.
ಹೌತಿ ಬಂಡುಕೋರರ ನೆಲೆಗಳ ಮೇಲೆ ಸೌದಿ ಬೆಂಬಲಿತ ಮೈತ್ರಿಕೂಟವು ವಾಯುದಾಳಿಗಳನ್ನು ನಡೆಸಿತು. ಲೆಕ್ಕವಿಲ್ಲದಷ್ಟು ಅಮಾಯಕ ಜನರು ಕೊಲ್ಲಲ್ಪಟ್ಟರೆ, ಅಪಾರ ಮಟ್ಟದ ಆಸ್ತಿಪಾಸ್ತಿ ನಾಶವಾಯಿತು. ಈ ಮೈತ್ರಿಕೂಟದಲ್ಲಿ ಮುಖ್ಯವಾಗಿ ಸೌದಿ ಅರೇಬಿಯಾ ಹಾಗೂ ಸಂಯುಕ್ತ ಅರಬ್ ಸಂಸ್ಥಾನಗಳು, ಅಮೆರಿಕ, ಬ್ರಿಟನ್, ಕೆನಡಾ ಮತ್ತು ಫ್ರಾನ್ಸ್‍ಗಳ ಸೈನಾ ತರಬೇತಿ, ಶಸ್ತ್ರಾಸ್ತ್ರ ಪೂರೈಕೆಗಳಿವೆ. ಮಕ್ಕಳ ಮೇಲೆ ನಡೆಯುತ್ತಿರುವ ಅಪರಾಧಗಳ ಹಿನ್ನೆಲೆಯಲ್ಲಿ ಕಳೆದ ವರ್ಷ ವಿಶ್ವಸಂಸ್ಥೆಯು ಇದನ್ನು ಕಪ್ಪುಪಟ್ಟಿಗೆ ಸೇರಿಸಿದ ತರುವಾಯ ಹಾಲೆಂಡ್ ಮತ್ತು ನಾರ್ವೆಗಳು ಶಸ್ತ್ರಾಸ್ತ್ರಗಳ ಪೂರೈಕೆಯನ್ನು ನಿಲ್ಲಿಸಿದರೂ ಇತರ ದೇಶಗಳ ಮೇಲೆ ಸೌದಿ ಒತ್ತಡ ತಂದು ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡಿತು. ಕಪ್ಪುಪಟ್ಟಿಗೆ ಸೇರಿಸಿದ ವಿಶ್ವಸಂಸ್ಥೆಯ ವರದಿಯಲ್ಲಿ ಹೇಳುವ ಪ್ರಕಾರ, ಸೌದಿ ನೇತೃತ್ವದ ಮಿತ್ರಕೂಟವು 10 ಆಸ್ಪತ್ರೆಗಳು, ಮದುವೆ ಸಮಾರಂಭಗಳು, ಶವಸಂಸ್ಕಾರಗಳು, ನಿರಾಶ್ರಿತರ ಶಿಬಿರಗಳು, ಆಹಾರ ಸರಬರಾಜು ಟ್ರಕ್‍ಗಳು, ಕಾರ್ಖಾನೆಗಳು, ಸಾರಿಗೆ ಮಾರ್ಗಗಳು, ಕೃಷಿ ಭೂಮಿಗಳು, ವಸತಿ ಪ್ರದೇಶಗಳು ಮತ್ತು ಶಾಲೆಗಳನ್ನು ಗುರಿಪಡಿಸಿ ದಾಳಿ ನಡೆಸಿದೆ. ಇವ್ಯಾವೂ ಭಯೋತ್ಪಾದಕರ ತಾಣಗಳಲ್ಲ. ಮಕ್ಕಳು, ಸಾಮಾನ್ಯಜನರು ಹೋಗುವ ಸ್ಥಳಗಳು. ತಮ್ಮನ್ನು ವಿಶ್ವಸಂಸ್ಥೆ ಕಪ್ಪುಪಟ್ಟಿಗೆ ಸೇರಿಸದ ಮೇಲೆ ಸೌದಿಯ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ತನ್ನ ಸೇನಾ ಪಡೆಗಳಿಗೆ `ಅಂತರರಾಷ್ಟ್ರೀಯ ಟೀಕೆಗೆಲ್ಲಾ ತಲೆಕೆಡಿಸಿಕೊಳ್ಳಬೇಡಿ. ಯೆಮೆನ್‍ನ ಮುಂದಿನ ಪೀಳಿಗೆಗಳ ಪ್ರಜ್ಞೆಯ ಮೇಲೆ ದೊಡ್ಡ ಪರಿಣಾಮವನ್ನು ನಾವು ಉಂಟು ಮಾಡಬೇಕಿದೆ. ಸೌದಿ ಅರೇಬಿಯಾ ಹೆಸರು ಕೇಳಿದರೇ ಅವರ ಹೆಂಗಸರು, ಮಕ್ಕಳು ಮತ್ತು ಗಂಡಸರೂ ಗಡಗಡ ನಡುಗುವಂತೆ ಮಾಡಬೇಕು’’ ಎಂದು ಹೇಳಿದ್ದಾನೆ. ಮಿತ್ರಕೂಟದ ವಾಯುಸೇನಾ ದಾಳಿಯು 1000ಕ್ಕಿಂತ ಹೆಚ್ಚು ಮಕ್ಕಳೂ ಸೇರಿದಂತೆ ಸುಮಾರು 10,000 ಜನರ ಕಗ್ಗೊಲೆಗೈದಿದೆ. 30 ಲಕ್ಷ ಯೆಮೆನ್ ನಾಗರಿಕರು ತಮ್ಮ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಆಕ್ಸ್‍ಫಾಮ್ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ ಈ ಯುದ್ಧವು ಯೆಮೆನ್‍ನನ್ನು ಸಂಪೂರ್ಣಕ್ಷಾಮದ ಸ್ಥಿತಿಗೆ ತಳ್ಳಿದೆ. ಇಲ್ಲಿನ ಜನರ ಪರಿಸ್ಥಿತಿ ಇಡೀ ಭೂ ಗ್ರಹದಲ್ಲಿಯೇ ಅತ್ಯಂತ ಹೀನ ಸ್ಥಿತಿಗೆ ಮುಟ್ಟಿದೆ ಎಂದು ಅದರಲ್ಲಿ ತಿಳಿಸಲಾಗಿದೆ. ದೇಶದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ, ಸುಮಾರು 1.7ಕೋಟಿ ಜನರಿಗೆ ಸರಿಯಾದ ಗಂಜಿ ನೀರಿಗೂ ತತ್ವಾರವಾಗಿದೆ. ಸು.70 ಲಕ್ಷಜನರು ಕ್ಷಾಮ ಸ್ಥಿತಿಗೆ ಒಂದು ಹೆಜ್ಜೆ ಹಿಂದಿದ್ದಾರಷ್ಟೆ. ಮನುಷ್ಯರು ಎಲೆಗಳನ್ನು ಮತ್ತು ಹುಲ್ಲನ್ನು ತಿನ್ನುವ ದಾರುಣ ಸ್ಥಿತಿ ಏರ್ಪಟ್ಟಿದೆ. ಮಿತ್ರಕೂಟವು ಯೆಮೆನ್‍ಗೆ ಆಹಾರ, ಔಷದಿ ಸಹಾಯದ 80% ಬರುತ್ತಿದ್ದ ಹೊಡೆದಾಹ್ ಬಂದರನ್ನು ಬಂದ್ ಮಾಡಿ ಯೆಮೆನ್‍ಗೆ ಯಾವುದೇ ಮಾನವಿಕ ನೆರವು ಸಿಗದಂತೆ ಮಾಡಿದೆ.
ಇಂಡಿಯಾದ ಮಾಧ್ಯಮಗಳಿಗೆ ಐಸಿಸ್ ಮತ್ತು ಕಿಮ್‍ಜಾಂಗ್ ವಿಷಯಗಳನ್ನು ಬಿಟ್ಟರೆ ಯೆಮೆನ್‍ನ ಬಿಕ್ಕಟ್ಟು ಕಾಣುತ್ತಿಲ್ಲ. ನಿರಾಶ್ರಿತರ ಸುದ್ದಿ ಎಂದಾಗ ಪ್ಯಾಲೆಸ್ತೀನ್ ಮತ್ತು ಸಿರಿಯಾಗಳ ಬಗ್ಗೆ ತಲೆಬರಹಗಳು ಕಾಣುತ್ತವೆಯೇ ಹೊರತು ಯೆಮೆನ್ ಕಾಣಿಸುವುದಿಲ್ಲ. ಯೆಮೆನ್‍ಗಾಗಿ ಯಾರೂ ಕಾಳಜಿ ವಹಿಸುತ್ತಿಲ್ಲ. ವಿಕಟ ವಿಪರ್ಯಾಸವೆಂದರೆ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳು ಇಲ್ಲಿನ ಸ್ಥಿತಿಯ ಕುರಿತು ವರದಿ ನೀಡಿದ ಮೇಲೂ, ವಿಶ್ವಸಂಸ್ಥೆಯು ಕಪ್ಪುಪಟ್ಟಿಗೆ ಸೇರಿಸಿದ ಮೇಲೆಯೂ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದ ಮುಖ್ಯಸ್ಥನಾಗಿ ಮುಂದುವರೆದಿರುವುದು ಸೌದಿ ಆರೇಬಿಯಾ!!

– ಭರತ್ ಹೆಬ್ಬಾಳ್
ಕನ್ನಡಕ್ಕೆ:
ಹರ್ಷಕುಮಾರ್ ಕುಗ್ವೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ

0
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದ್ದ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು...