Homeರಾಜಕೀಯಕರ್ನಾಟಕದ ಚುನಾವಣಾ ಕಣದಲ್ಲಿ ಅನಾಥವಾಗುತ್ತಿರುವ ಸೆಕ್ಯುಲರ್ ವಾದ

ಕರ್ನಾಟಕದ ಚುನಾವಣಾ ಕಣದಲ್ಲಿ ಅನಾಥವಾಗುತ್ತಿರುವ ಸೆಕ್ಯುಲರ್ ವಾದ

- Advertisement -
- Advertisement -

ಎಲ್ಲಾ ಪಕ್ಷಗಳ ದೃಷ್ಟಿಯಿಂದಲೂ ಅತ್ಯಂತ ಪ್ರಮುಖವಾದ ಒಂದು ಚುನಾವಣೆಯಲ್ಲಿ ಪ್ರಮುಖವಾದ ಚುನಾವಣಾ ವಿಷಯವೇ ಇಲ್ಲದಾಗ ಏನೆಲ್ಲಾ ಆಗಬಹುದೋ ಅವೆಲ್ಲವೂ ಮತ್ತೊಂದು ವಿಧಾನಸಭಾ ಚುನಾವಣೆಯ ಹೊಸ್ತಿಲಿಗೆ ಬಂದು ನಿಂತಿರುವ ಕರ್ನಾಟಕದಲ್ಲಿ ಆಗುತ್ತಿವೆ. ಐದು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಅದ್ಬುತ ಎನ್ನಬಹುದಾದ ಆಡಳಿತ ನೀಡದೆ ಹೋಗಿದ್ದರೂ ತನ್ನ ವಿರುದ್ಧ ದೊಡ್ಡ ಮಟ್ಟಿನ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗದಂತೆ ನೋಡಿಕೊಂಡಿದೆ. ಆಡಳಿತ ವಿರೋಧಿ ಅಲೆ ಇಲ್ಲದಲ್ಲಿ ಆಡಳಿತ ಪಕ್ಷವನ್ನು ಪ್ರಚಾರದಲ್ಲಿ ಹೇಗೆ ಮಣಿಸುವುದು ಎನ್ನುವುದರ ಬಗ್ಗೆ ಪ್ರಮುಖ ವಿರೋಧ ಪಕ್ಷಗಳಿಗೆ ಸ್ಪಷ್ಟತೆ ಇದ್ದಂತಿಲ್ಲ. ಶತಾಯಗತಾಯ ಕಾಂಗ್ರೆಸ್ಸಿನಿಂದ ಅಧಿಕಾರ ಕಸಿದುಕೊಳ್ಳಲೇಬೇಕು ಎಂದು ಟೊಂಕ ಕಟ್ಟಿಕೊಂಡು ನಿಂತಿರುವ ಬಿಜೆಪಿ ಈ ಗೊಂದಲದಲ್ಲಿ ತನ್ನ ಬತ್ತಳಿಕೆಯಲ್ಲಿ ಸುಲಭವಾಗಿ ನಿಲುಕುವ ಜಾತಿ-ಧರ್ಮಗಳ ವಿಷಯಗಳನ್ನು ಚುನಾವಣಾ ಕಣಕ್ಕೆ ಎಳೆದು ತಂದಿದೆ. ಕಾಂಗ್ರೆಸ್ಸಿನ ಕೆಲ ನಡೆಗಳು ಮತ್ತು ನಡವಳಿಕೆಗಳು ಇದಕ್ಕೆ ಪರೋಕ್ಷವಾಗಿ ನೆರವಾಗಿವೆ.

1994 ರಿಂದ ಪ್ರತೀ ಚುನಾವಣೆಯಲ್ಲೂ ಕರ್ನಾಟಕದಲ್ಲಿ ಅಧಿಕಾರ ಪಡೆಯಲು ಬಿಜೆಪಿ ತೀವ್ರ ಪ್ರಯತ್ನ ಮಾಡುತ್ತಲೇ ಬಂದಿದ್ದರೂ ಈ ಹಿಂದಿನ ಯಾವ ಚುನಾವಣೆಯಲ್ಲೂ ಜಾತಿ-ಧರ್ಮಗಳ ವಿಷಯ ಈ ಬಾರಿಯಷ್ಟು ತೀಕ್ಷ ್ಣವಾಗಿ ರಾಜ್ಯದಲ್ಲಿ ಮುಂಚೂಣಿಗೆ ಬಂದದ್ದಿಲ್ಲ. ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದ 2008 ರ ಚುನಾವಣೆಯಲ್ಲೂ ಜಾತಿ-ಧರ್ಮಗಳು ಈ ಮಟ್ಟಿಗೆ ಜೋತುಬೀಳುವ ಪರಿಸ್ಥಿತಿ ಆ ಪಕ್ಷಕ್ಕೆ ಇರಲಿಲ್ಲ. ಹಿಂದೂ ಮತೀಯವಾದ ಎನ್ನುವುದು ಸುಪ್ತವಾಗಿ ಬಿಜೆಪಿಯ ಅಸ್ತ್ರವಾಗಿ ಸದಾ ಇದ್ದರೂ ಎದ್ದುಕಾಣುವಂತೆ ಅದನ್ನು ಮುಂಚೂಣಿಗೆ ಬಿಜೆಪಿ ಹಿಂದೆಂದೂ ಇಲ್ಲಿ ತಂದದ್ದಿಲ್ಲ. ಈ ಹಿಂದೆ ಈದ್ಗಾ ಮೈದಾನ, ಬಾಬಾ ಬುಡನಗಿರಿ ಮುಂತಾದ ಮತೀಯ ಆಯಾಮಗಳಿರುವ ವಿಷಯಗಳನ್ನು ಬಿಜೆಪಿ ಪಕ್ಷ ಸಂವರ್ಧಿಸಲು ಬಳಸಿಕೊಂಡಿತ್ತೇ ವಿನಃ ಚುನಾವಣೆಯಲ್ಲಿ ಅವುಗಳನ್ನು ಪ್ರಮುಖ ವಿಷಯಗಳನ್ನಾಗಿಸಿಕೊಂಡದ್ದಿಲ್ಲ. ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಪ್ರಮುಖವಾಗಿ ಪ್ರಧಾನಮಂತ್ರಿ ಮೋದಿಯವರ ಪ್ರಭಾವಳಿಯನ್ನೇ ಆಶ್ರಯಿಸಿ ಬಿಜೆಪಿ ಈ ಚುನಾವಣೆಯನ್ನು ಎದುರಿಸುತ್ತಿದ್ದರೂ ಜತೆಜತೆಗೆ ಅದು ಹಿಂದೂ ಮತೀಯವಾದವನ್ನು ದೊಡ್ಡ ಮಟ್ಟಿಗೆ ಪಣಕ್ಕಿಟ್ಟಂತೆ ಕಾಣಿಸುತ್ತದೆ.

ಮೇಲ್ನೋಟಕ್ಕೆ ಬಿಜೆಪಿ ಇತರ ಎರಡು ವಿಚಾರಗಳನ್ನೂ ಪ್ರಸ್ತಾಪಿಸುತ್ತಿದೆ. ಒಂದು ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಅಭಿವೃದ್ಧಿಯೇ ಆಗಿಲ್ಲ ಎನ್ನುವುದು. ಇನ್ನೊಂದು ಸಿದ್ದರಾಮಯ್ಯ ಸರಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ಇತ್ತು ಎನ್ನುವುದು. ಈ ಎರಡೂ ವಾದಗಳಿಗೆ ಜನರ ಕಣ್ಣಿಗೆ ರಾಚುವ ಪುರಾವೆಗಳನ್ನು ಒದಗಿಸಲು ಬಿಜೆಪಿಗೆ ಇನ್ನೂ ಸಾಧ್ಯವಾಗಿಲ್ಲ. ಅಭಿವೃದ್ಧಿಯ ಬಗೆಗಿನ ಮಾತುಗಳು ಕೇವಲ ಅಂಕಿ-ಅಂಶಗಳಾಗುತ್ತಿವೆ. ಭ್ರಷ್ಟಾಚಾರದ ಕುರಿತಾದ ಮಾತುಗಳು ಕೇವಲ ಆಪಾದನೆಗಳಂತೆ ಕೇಳಿಸುತ್ತಿವೆ. ಇವೆರಡೂ ದೊಡ್ಡ ಮಟ್ಟಿಗೆ ಮತದಾರರನ್ನು ತಟ್ಟಲಾರದು. ಆದುದರಿಂದಲೇ ಬಿಜೆಪಿ ಸಾಧ್ಯವಾದಷ್ಟು ಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ಮುನ್ನೆಲೆಗೆ ಎಳೆದು ತರುತ್ತಿರುವುದು.ಕಾಂಗ್ರೆಸ್ಸಿನ ಹಲವು ಎಡವಟ್ಟುಗಳು, ಗೊಂದಲಗಳು ಈ ವಿಚಾರದಲ್ಲಿ ಬಿಜೆಪಿಗೆ ನೆರವಾಗುತ್ತಿವೆ ಎನ್ನುವುದು ಇನ್ನೊಂದು ವಿಶೇಷ.

ಈ ಹಿಂದೆ ಬಿಜೆಪಿ ಕಾಂಗ್ರೆಸ್ ವಿರುದ್ಧ ತನ್ನ ಹಿಂದೂವಾದಿ ಅಸ್ತ್ರವನ್ನು ಪ್ರಯೋಗಿಸುವಾಗ ಜಪಿಸುತ್ತಿದ್ದ ಪ್ರಮುಖ ಮಂತ್ರ ಕಾಂಗ್ರೆಸ್ ಮುಸ್ಲಿಮರ ಓಲೈಕೆ ಯಲ್ಲಿ ತೊಡಗಿ ಹಿಂದೂಗಳ ಹಿತಾಸಕ್ತಿಯನ್ನು ಕಡೆಗಣಿಸಿದೆ ಎನ್ನುವುದಾಗಿತ್ತು. ಎಲ್.ಕೆ. ಅಡ್ವಾಣಿ ಕಾಲದಿಂದಲೂ ಈ ಅಲ್ಪಸಂಖ್ಯಾತರ ತುಷ್ಟೀಕರಣದ ಆಪಾದನೆ ಕಾಂಗ್ರೆಸ್ ವಿರುದ್ಧ ಬಿಜೆಪಿಯ ಪ್ರಮುಖ ಚುನಾವಣಾ ಪ್ರಚಾರ ಸಾಧನ. ಈ ಬಾರಿ ಬಿಜೆಪಿ ತನ್ನ ಈ ಹಳೆಯ ಅಸ್ತ್ರಕ್ಕೆ ಹೊಸ ಹೊಸ ಮಂತ್ರಗಳನ್ನು ಆವಾಹಿಸುವ ಕೆಲಸ ಮಾಡುತ್ತಿದೆ. ಅದರಲ್ಲಿ ಪ್ರಮುಖವಾದದ್ದು ಸಿದ್ದರಾಮಯ್ಯ ಸರಕಾರ ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣ ನಡೆಸಿದ್ದು ಮಾತ್ರವಲ್ಲದೆ ಅದು ಹಿಂದೂ ವಿರೋಧಿ ಕೂಡಾ ಆಗಿತ್ತು ಎನ್ನುವ ಆಪಾದನೆ. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಹಿಂದೂಗಳ “ಮಾರಣಹೋಮ” ನಡೆಯಿತು ಎಂದು ಪ್ರಖರ ಪದಗಳನ್ನು ಬಳಸಿ ಬಿಜೆಪಿ ತನ್ನ ಹಳೆಯ ಅಸ್ತ್ರವನ್ನು ಹರಿತಗೊಳಿಸುತ್ತಿದೆ. ಹೇಗಾದರೂ ಮಾಡಿ ಈ ಒಂದು ವಾದವನ್ನು ಜನರ ಮನಮುಟ್ಟುವಂತೆ ಮಾಡಬೇಕು ಎನ್ನುವ ಬಿಜೆಪಿಯ ಹತಾಶೆ ಎಷ್ಟರಮಟ್ಟಿಗೆ ಇದೆ ಎನ್ನುವುದಕ್ಕೆ ಅದು ಅಂಕೆ-ಸಂಖ್ಯೆಗಳನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿರುವುದೇ ಒಂದು ಸಾಕ್ಷಿ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 24 ಹಿಂದೂಗಳ ಕಗ್ಗೊಲೆಯಾಯಿತು ಎನ್ನುವಲ್ಲಿ ಬಿಜೆಪಿಗೆ ಈ 24 ಎನ್ನುವ ಸಂಖ್ಯೆ ಬಹಳ ಮುಖ್ಯ. ರಾಜ್ಯ ಸರಕಾರ ಅಧಿಕೃತವಾಗಿಯೇ ಈ ಕುರಿತು ಸ್ಪಷ್ಟೀಕರಣ ನೀಡಿದರೂ ಯಾವುದೇ ಎಗ್ಗಿಲ್ಲದೆ ಬಿಜೆಪಿ ಅದೇ ಹಳೆಯ ತಪ್ಪು ಅಂಕಿಯನ್ನು ಬಳಸುತ್ತಿದೆ. ಜೀವಂತ ಇದ್ದವರನ್ನು ಈ ಲೆಕ್ಕದಲ್ಲಿ ಸೇರಿಸಿದ್ದು, ಸ್ವತಃ ತಮ್ಮ ಕಾರ್ಯಕರ್ತರೇ ಆಪಾದಿತರಾಗಿರುವ ಕೊಲೆ ಪ್ರಕರಣಗಳನ್ನು ಇದರಲ್ಲಿ ಸೇರಿಸಿದ್ದು, ಖಾಸಗಿ ಕಾರಣಗಳಿಗೆ ಕೊಲೆ ಆದವರನ್ನು ಹಿಂದೂ ಕಾರ್ಯಕರ್ತರು ಎಂದು ತೋರಿಸುತ್ತಿರುವುದು, ಈ ಅವಧಿಯಲ್ಲಿ ಆದ ಮುಸ್ಲಿಮರ ಕೊಲೆಗಳನ್ನು ಪ್ರಸ್ತಾಪಿಸದೆ ಇರುವುದು ಇತ್ಯಾದಿಗಳೆಲ್ಲ ಅರೆ-ಸತ್ಯಗಳನ್ನಾದರೂ ಆಶ್ರಯಿಸಿ ಹಿಂದೂ ಅಸುರಕ್ಷತೆಯ ಬಗ್ಗೆ ಹೊಸದೊಂದು ಸಂಕತನವನ್ನು ಹೇಗಾದರೂ ಹುಟ್ಟುಹಾಕಬೇಕು ಎನ್ನುವ ಬಿಜೆಪಿಯ ಹತಾಶೆ ಮತ್ತು ಹಪಹಪಿಯನ್ನುಎತ್ತಿ ತೋರಿಸುತ್ತದೆ. ಈ ಮಧ್ಯೆ ಕಾಂಗ್ರೆಸ್ ಸರಕಾರ ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕೆಂಬ ಹಳೆಯ ಬೇಡಿಕೆಗೆ ತನ್ನ ಸಹಾಯಹಸ್ತ ಚಾಚಿದ್ದು ಕೂಡಾ ಬಿಜೆಪಿಗೆ ಕಾಂಗ್ರೆಸ್ಸನ್ನು ಹಿಂದೂ ವಿರೋಧಿಯಾಗಿ ಬಿಂಬಿಸಲು ಇನ್ನಷ್ಟೂ ನೆರವಾಯಿತು. ಕಾಂಗ್ರೆಸ್ ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದೆ ಎನ್ನುವ ಹೊಸ ಉಪಕತನವೊಂದನ್ನು ಬಿಜೆಪಿ ಈ ಹಿನ್ನೆಲೆಯಲ್ಲಿ ಹುಟ್ಟುಹಾಕಿತು. ಹಳೆಯ ತುಷ್ಟೀರಣ ರಾಜಕಾರಣದ ಜತೆ “ಹಿಂದೂ ಮಾರಣಹೋಮ” “ಹಿಂದೂ ಧರ್ಮ ಭಂಜನೆ” ಮುಂತಾದ ಹೊಸ ಪದಪುಂಜಗಳು ಸೇರಿಕೊಂಡವು. ಇದೇ ವೇಳೆ ಕಾಂಗ್ರೆಸ್ ಸರಕಾರ ಅಲ್ಪ ಸಂಖ್ಯಾತರ ವಿರುದ್ಧ ಇರುವ ಕೆಲ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡಲು ಸಾಧ್ಯವೇ ಎಂದು ಪರಿಶೀಲಿಸಿ ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು, ಹಿಂದೂ ಮಠಗಳನ್ನು ನಿಯಂತ್ರಿಸಲು ಆದೇಶ ಹೊರಡಿಸಲು ಮುಂದಾಗಿ ಮತ್ತೆ ಹಿಂದೆ ಸರಿದದ್ದು ನಡೆಯಿತು. ಇವೆಲ್ಲ ರಾಜ್ಯ ಸರಕಾರದ ಮತೀಯ ಅಜೆಂಡವಾಗಿರದೆ ಕೇವಲ ಆಡಳಿತಾತ್ಮಕ ಎಡವಟ್ಟುಗಳಾಗಿದ್ದರೂ ಅವಕಾಶಕ್ಕಾಗಿ ಕಾಯುತ್ತಿದ್ದ ಬಿಜೆಪಿಗೆ ಕಾಂಗೆಸ್ಸ್ ವಿರುದ್ಧ ಪ್ರಬಲವಾದ ಹಿಂದೂ ವಿರೋಧಿ ಸಂಕತನವೊಂದನ್ನು ನಿರ್ಮಿಸಲು ನೆರವಾದ ಅಂಶಗಳು..

ರಾಜ್ಯದ ಮತದಾರರು ಈ ಹೊಸ ವರಸೆಯನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಈಗಲೇ ಹೇಳಲಾಗದು. ವಿಚಿತ್ರ ಎಂದರೆ ಕಾಂಗ್ರೆಸ್ಸಿನಂತಹ ಹಳೆಯ ಪಕ್ಷ ತನ್ನ ವಿರುದ್ಧ ಸೃಷ್ಟಿಯಾಗುತ್ತಿರುವ ಹೊಸ ಅಪಾಯಕಾರಿ ಆಪಾದನೆಗಳ ಸರಮಾಲೆಯನ್ನು ಎದುರಿಸುವಲ್ಲಿ ಹೇಗೆ ಹಿಂಜರಿಯುತ್ತಿದೆ ಎನ್ನುವುದು. “ಹಿಂದೂಗಳ ಕಗ್ಗೊಲೆಯ” ಅಂಕಿ-ಅಂಶಗಳಿಗೆ ಸಂಬಂಧಿಸಿದ ಸತ್ಯಾಸತ್ಯತೆಯನ್ನು ಕಾಂಗ್ರೆಸ್ ಅಧಿಕೃತವಾಗಿ ಅಲ್ಲಲ್ಲಿ ಸ್ಪಷ್ಟಪಡಿಸಿದರೂ ಬಿಜೆಪಿಯ ವಾದವನ್ನು ಸಮರ್ಥವಾಗಿ ಖಂಡಿಸುವುದರಲ್ಲಿ ಅದು ಸಫಲವಾಗಿಲ್ಲ. ಮೊನ್ನೆ ಮೊನ್ನೆ ಸ್ಕ್ರಾಲ್.ಇನ್ ಎನ್ನುವ ವೆಬ್-ಆಧಾರಿತ ನಿಯತಕಾಲಿಕವೊಂದು ಬಿಜೆಪಿ ಪ್ರಸ್ತಾಪಿಸುತ್ತಿರುವ ಅಷ್ಟೂ ಹಿಂದೂ ಕೊಲೆ ಪ್ರಕರಣಗಳ ಸಂತ್ರಸ್ತ ಕುಟುಂಬಗಳನ್ನು ಸಂದರ್ಶಿಸಿ ವಾಸ್ತವ ಸ್ಥಿತಿ ಏನು ಎನ್ನುವ ವರದಿ ಪ್ರಕಟಿಸಿತು. ಬಿಜೆಪಿಯ ಅರ್ಧ-ಸತ್ಯ ಆಧಾರಿತ ಪ್ರಚಾರವನ್ನು ಎದುರಿಸಲು ಕಾಂಗ್ರೆಸ್ಸಿಗೆ ಇದಕ್ಕಿಂತ ದೊಡ್ಡ ವಸ್ತು ಬೇಕಾಗಿರಲಿಲ್ಲ. ಆದರೆ ಕಾಂಗ್ರೆಸ್ ಈತನಕ ಈ ವರದಿಯನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ. ಕಾಂಗ್ರೆಸ್ ಈ ಚುನಾವಣೆಯಲ್ಲಿ ಪ್ರಮುಖವಾಗಿ ಬಳಸುತ್ತಿರುವುದು ಸಿದ್ದರಾಮಯ್ಯ ಸರಕಾರ ಕೈಗೊಂಡಿರುವ ಸಾಮಾಜಿಕ-ನ್ಯಾಯ ಆಧಾರಿತ ಅಭಿವೃದ್ಧಿ ಮಾದರಿಯನ್ನು. ಬಿಜೆಪಿ ಇದರ ಸುತ್ತ ಕೂಡಾ ಒಂದು ಮತೀಯ-ಜಾತೀಯ ಆಯಾಮವನ್ನು ಸೃಷ್ಟಿಸಿದೆ. ಸಿದ್ದರಾಮಯ್ಯ ಸರಕಾರದ ಸಾಮಾಜಿಕ ನ್ಯಾಯದ ಅಷ್ಟೂ ಯೋಜನೆಗಳೂ ಜಾತಿ-ಜಾತಿಗಳ ಮಧ್ಯೆ ಕಂದಕ ನಿರ್ಮಿಸಿದ ಅಭಿವೃದ್ಧಿ ಮಾದರಿ ಎಂದು ಹಳಿಯುತ್ತಿದೆ. ಬಿಜೆಪಿಯ ಈ ವಾದವನ್ನು ಪರಿಣಾಮಕಾರಿಯಾಗಿ ಅಲ್ಲಗಳೆಯುವ ಕೆಲಸವನ್ನು ಕೂಡಾ ಈತನಕ ಕಾಂಗ್ರೆಸ್ ಮಾಡಿಲ್ಲ. ಬಿಜೆಪಿ ಸಮರ್ಥ ಖಾಸಗಿ ವಕೀಲರಂತೆ ತನ್ನ ವಾದ ಮುಂದಿರಿಸಿದರೆ ಉದಾಸೀನ ಮನಸ್ಸಿನಿಂದ ವಾದಿಸುವ ಸರಕಾರೀ ವಕೀಲರಂತೆ ಕಾಂಗ್ರೆಸ್ ಪ್ರತಿವಾದ ಮಂಡಿಸುತ್ತದೆ. ಅಲ್ಲಲ್ಲಿ ಕಾಂಗ್ರೆಸ್ ನೀಡುತ್ತಿರುವ ಸಮರ್ಥನೆ ಒಂದು ಚುನಾವಣಾ ನುಡಿ-ವರಸೆಯಾಗಿ ರೂಪುಗೊಂಡಿಲ್ಲ. ಬರಬರುತ್ತಾ ಬಿಜೆಪಿ ಹೇಳುತ್ತಿರುವುದರಲ್ಲಿ ಸತ್ಯವಿದೆಯೇನೋ ಎನ್ನುವ ಮನೋಭಾವ ಜನರಲ್ಲಿ ಸೃಷ್ಟಿಯಾದರೂ ಆದೀತು. ಕಾಂಗ್ರೆಸ್‍ನಿಂದ ತುಷ್ಟೀಕರಣದ ಕೆಲಸ ಆಗಿದ್ದರೆ, ಅಲ್ಪಸಂಖ್ಯಾತ ಮತೀಯವಾದವನ್ನು ಮಟ್ಟಹಾಕುವ ಕೆಲಸದಲ್ಲಿ ಅದು ವಿಫಲವಾಗಿದ್ದರೆ ಆ ತಪ್ಪುಗಳನ್ನು ಒಪ್ಪಿಕೊಂಡುವಿಫಲವಾಗಿದ್ದರೆ ಆ ಕುರಿತು ಆತ್ಮಾವಲೋಕನ ಮಾಡಿಕೊಂಡರೆ, ತಪ್ಪೊಪ್ಪಿಕೊಂಡರೆ ಅದು ರಾಜಕೀಯವಾಗಿ ಅನಾಹುತಕಾರಿಯಾದ ನಡೆ ಖಂಡಿತವಾಗಿಯೂ ಆಗುವುದಿಲ್ಲ. ಧರ್ಮನಿರಪೇಕ್ಷ ಮೌಲ್ಯವನ್ನು ಎತ್ತಿಹಿಡಿಯುವ ಮೂಲಕ, ಎಲ್ಲಾ ಧರ್ಮಗಳ ಬಗ್ಗೆ ಗೌರವದಿಂದ ಮಾತನಾಡುತ್ತಲೇ ಒಂದು ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕಾಂಗ್ರೆಸ್ಸಿಗೆ ಬಿಜೆಪಿಯಿಂದ ಭಿನ್ನವಾದ ರಾಜಕೀಯ ನುಡಿಗಟ್ಟನ್ನು ಮತದಾರರ ಮುಂದಿಡಲು ಇನ್ನೂ ಸಾಧ್ಯವಿದೆ. ಸೆಕ್ಯುಲರ್ ವಾದದ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸುವುದರ ಮೂಲಕ, ಸೆಕ್ಯುಲರ್ ವಾದ ಎಂದರೆ ಅದು ಹಿಂದೂ ವಿರೋಧಿ ವಾದವೂ ಅಲ್ಲ, ಮುಸ್ಲಿಂ ಪರ ವಾದವೂ ಎಲ್ಲ ಎಂದು ಮತದಾರರಿಗೆ ಮನದಟ್ಟು ಮಾಡುವ ಮೂಲಕ ಬಿಜೆಪಿಯನ್ನು ಎದುರಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದರೆ ಅದಕ್ಕೊಂದು ಅರ್ಥವಿದೆ. ಬದಲಿಗೆ ಬಿಜೆಪಿಯ ತಂತ್ರಗಳನ್ನೇ ಅನುಕರಿಸುವ ಮೂಲಕ ಕಾಂಗ್ರೆಸ್ ನಗೆಪಾಟಲಿಗೆ ಗುರಿಯಾಗುತ್ತಿದೆ. ಚುನಾವಣೆಯ ಕಾಲದಲ್ಲಿ ಧಾರ್ಮಿಕ ಕ್ಷೇತ್ರಗಳದರ್ಶನಮಾಡುವುದರ ಮೂಲಕ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ವಿರುದ್ಧ ಬಿಜೆಪಿಯವರು ಮಾಡುತ್ತಿರುವ ಹುಸಿ-ಸೆಕ್ಯುಲರಿಸಂನ ಆಪಾದನೆಯನ್ನು ಪರೋಕ್ಷವಾಗಿ ಸಮರ್ಥಿಸುವಂತೆ ಕಾಣಿಸುತ್ತಿದೆ.. ಬಿಜೆಪಿಯದ್ದು ಹುಸಿ ರಾಷ್ಟ್ರೀಯವಾದ ಮತ್ತು ಹುಸಿ ಹಿಂದೂವಾದ ಎನ್ನುವ ಚುನಾವಣಾ ನುಡಿಗಟ್ಟೊಂದನ್ನು ಸಮರ್ಥವಾಗಿ ರೂಪಿಸಲು ಕಾಂಗ್ರೆಸ್ ಮುಂದಾಗುತ್ತಿಲ್ಲ. ಹೀಗಾಗಿ ಕರ್ನಾಟಕದ ಚುನಾವಣಾ ಕಣದಲ್ಲಿ ಸಾಂವಿಧಾನಿಕ ಸೆಕ್ಯುಲರ್ ಮೌಲ್ಯ ಅನಾಥವಾದಂತೆ ತೋರುತ್ತದೆ.

– ಎ. ನಾರಾಯಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....