Homeರಾಜಕೀಯಕರ್ನಾಟಕದ ಚುನಾವಣಾ ಕಣದಲ್ಲಿ ಅನಾಥವಾಗುತ್ತಿರುವ ಸೆಕ್ಯುಲರ್ ವಾದ

ಕರ್ನಾಟಕದ ಚುನಾವಣಾ ಕಣದಲ್ಲಿ ಅನಾಥವಾಗುತ್ತಿರುವ ಸೆಕ್ಯುಲರ್ ವಾದ

- Advertisement -
- Advertisement -

ಎಲ್ಲಾ ಪಕ್ಷಗಳ ದೃಷ್ಟಿಯಿಂದಲೂ ಅತ್ಯಂತ ಪ್ರಮುಖವಾದ ಒಂದು ಚುನಾವಣೆಯಲ್ಲಿ ಪ್ರಮುಖವಾದ ಚುನಾವಣಾ ವಿಷಯವೇ ಇಲ್ಲದಾಗ ಏನೆಲ್ಲಾ ಆಗಬಹುದೋ ಅವೆಲ್ಲವೂ ಮತ್ತೊಂದು ವಿಧಾನಸಭಾ ಚುನಾವಣೆಯ ಹೊಸ್ತಿಲಿಗೆ ಬಂದು ನಿಂತಿರುವ ಕರ್ನಾಟಕದಲ್ಲಿ ಆಗುತ್ತಿವೆ. ಐದು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಅದ್ಬುತ ಎನ್ನಬಹುದಾದ ಆಡಳಿತ ನೀಡದೆ ಹೋಗಿದ್ದರೂ ತನ್ನ ವಿರುದ್ಧ ದೊಡ್ಡ ಮಟ್ಟಿನ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗದಂತೆ ನೋಡಿಕೊಂಡಿದೆ. ಆಡಳಿತ ವಿರೋಧಿ ಅಲೆ ಇಲ್ಲದಲ್ಲಿ ಆಡಳಿತ ಪಕ್ಷವನ್ನು ಪ್ರಚಾರದಲ್ಲಿ ಹೇಗೆ ಮಣಿಸುವುದು ಎನ್ನುವುದರ ಬಗ್ಗೆ ಪ್ರಮುಖ ವಿರೋಧ ಪಕ್ಷಗಳಿಗೆ ಸ್ಪಷ್ಟತೆ ಇದ್ದಂತಿಲ್ಲ. ಶತಾಯಗತಾಯ ಕಾಂಗ್ರೆಸ್ಸಿನಿಂದ ಅಧಿಕಾರ ಕಸಿದುಕೊಳ್ಳಲೇಬೇಕು ಎಂದು ಟೊಂಕ ಕಟ್ಟಿಕೊಂಡು ನಿಂತಿರುವ ಬಿಜೆಪಿ ಈ ಗೊಂದಲದಲ್ಲಿ ತನ್ನ ಬತ್ತಳಿಕೆಯಲ್ಲಿ ಸುಲಭವಾಗಿ ನಿಲುಕುವ ಜಾತಿ-ಧರ್ಮಗಳ ವಿಷಯಗಳನ್ನು ಚುನಾವಣಾ ಕಣಕ್ಕೆ ಎಳೆದು ತಂದಿದೆ. ಕಾಂಗ್ರೆಸ್ಸಿನ ಕೆಲ ನಡೆಗಳು ಮತ್ತು ನಡವಳಿಕೆಗಳು ಇದಕ್ಕೆ ಪರೋಕ್ಷವಾಗಿ ನೆರವಾಗಿವೆ.

1994 ರಿಂದ ಪ್ರತೀ ಚುನಾವಣೆಯಲ್ಲೂ ಕರ್ನಾಟಕದಲ್ಲಿ ಅಧಿಕಾರ ಪಡೆಯಲು ಬಿಜೆಪಿ ತೀವ್ರ ಪ್ರಯತ್ನ ಮಾಡುತ್ತಲೇ ಬಂದಿದ್ದರೂ ಈ ಹಿಂದಿನ ಯಾವ ಚುನಾವಣೆಯಲ್ಲೂ ಜಾತಿ-ಧರ್ಮಗಳ ವಿಷಯ ಈ ಬಾರಿಯಷ್ಟು ತೀಕ್ಷ ್ಣವಾಗಿ ರಾಜ್ಯದಲ್ಲಿ ಮುಂಚೂಣಿಗೆ ಬಂದದ್ದಿಲ್ಲ. ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದ 2008 ರ ಚುನಾವಣೆಯಲ್ಲೂ ಜಾತಿ-ಧರ್ಮಗಳು ಈ ಮಟ್ಟಿಗೆ ಜೋತುಬೀಳುವ ಪರಿಸ್ಥಿತಿ ಆ ಪಕ್ಷಕ್ಕೆ ಇರಲಿಲ್ಲ. ಹಿಂದೂ ಮತೀಯವಾದ ಎನ್ನುವುದು ಸುಪ್ತವಾಗಿ ಬಿಜೆಪಿಯ ಅಸ್ತ್ರವಾಗಿ ಸದಾ ಇದ್ದರೂ ಎದ್ದುಕಾಣುವಂತೆ ಅದನ್ನು ಮುಂಚೂಣಿಗೆ ಬಿಜೆಪಿ ಹಿಂದೆಂದೂ ಇಲ್ಲಿ ತಂದದ್ದಿಲ್ಲ. ಈ ಹಿಂದೆ ಈದ್ಗಾ ಮೈದಾನ, ಬಾಬಾ ಬುಡನಗಿರಿ ಮುಂತಾದ ಮತೀಯ ಆಯಾಮಗಳಿರುವ ವಿಷಯಗಳನ್ನು ಬಿಜೆಪಿ ಪಕ್ಷ ಸಂವರ್ಧಿಸಲು ಬಳಸಿಕೊಂಡಿತ್ತೇ ವಿನಃ ಚುನಾವಣೆಯಲ್ಲಿ ಅವುಗಳನ್ನು ಪ್ರಮುಖ ವಿಷಯಗಳನ್ನಾಗಿಸಿಕೊಂಡದ್ದಿಲ್ಲ. ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಪ್ರಮುಖವಾಗಿ ಪ್ರಧಾನಮಂತ್ರಿ ಮೋದಿಯವರ ಪ್ರಭಾವಳಿಯನ್ನೇ ಆಶ್ರಯಿಸಿ ಬಿಜೆಪಿ ಈ ಚುನಾವಣೆಯನ್ನು ಎದುರಿಸುತ್ತಿದ್ದರೂ ಜತೆಜತೆಗೆ ಅದು ಹಿಂದೂ ಮತೀಯವಾದವನ್ನು ದೊಡ್ಡ ಮಟ್ಟಿಗೆ ಪಣಕ್ಕಿಟ್ಟಂತೆ ಕಾಣಿಸುತ್ತದೆ.

ಮೇಲ್ನೋಟಕ್ಕೆ ಬಿಜೆಪಿ ಇತರ ಎರಡು ವಿಚಾರಗಳನ್ನೂ ಪ್ರಸ್ತಾಪಿಸುತ್ತಿದೆ. ಒಂದು ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಅಭಿವೃದ್ಧಿಯೇ ಆಗಿಲ್ಲ ಎನ್ನುವುದು. ಇನ್ನೊಂದು ಸಿದ್ದರಾಮಯ್ಯ ಸರಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ಇತ್ತು ಎನ್ನುವುದು. ಈ ಎರಡೂ ವಾದಗಳಿಗೆ ಜನರ ಕಣ್ಣಿಗೆ ರಾಚುವ ಪುರಾವೆಗಳನ್ನು ಒದಗಿಸಲು ಬಿಜೆಪಿಗೆ ಇನ್ನೂ ಸಾಧ್ಯವಾಗಿಲ್ಲ. ಅಭಿವೃದ್ಧಿಯ ಬಗೆಗಿನ ಮಾತುಗಳು ಕೇವಲ ಅಂಕಿ-ಅಂಶಗಳಾಗುತ್ತಿವೆ. ಭ್ರಷ್ಟಾಚಾರದ ಕುರಿತಾದ ಮಾತುಗಳು ಕೇವಲ ಆಪಾದನೆಗಳಂತೆ ಕೇಳಿಸುತ್ತಿವೆ. ಇವೆರಡೂ ದೊಡ್ಡ ಮಟ್ಟಿಗೆ ಮತದಾರರನ್ನು ತಟ್ಟಲಾರದು. ಆದುದರಿಂದಲೇ ಬಿಜೆಪಿ ಸಾಧ್ಯವಾದಷ್ಟು ಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ಮುನ್ನೆಲೆಗೆ ಎಳೆದು ತರುತ್ತಿರುವುದು.ಕಾಂಗ್ರೆಸ್ಸಿನ ಹಲವು ಎಡವಟ್ಟುಗಳು, ಗೊಂದಲಗಳು ಈ ವಿಚಾರದಲ್ಲಿ ಬಿಜೆಪಿಗೆ ನೆರವಾಗುತ್ತಿವೆ ಎನ್ನುವುದು ಇನ್ನೊಂದು ವಿಶೇಷ.

ಈ ಹಿಂದೆ ಬಿಜೆಪಿ ಕಾಂಗ್ರೆಸ್ ವಿರುದ್ಧ ತನ್ನ ಹಿಂದೂವಾದಿ ಅಸ್ತ್ರವನ್ನು ಪ್ರಯೋಗಿಸುವಾಗ ಜಪಿಸುತ್ತಿದ್ದ ಪ್ರಮುಖ ಮಂತ್ರ ಕಾಂಗ್ರೆಸ್ ಮುಸ್ಲಿಮರ ಓಲೈಕೆ ಯಲ್ಲಿ ತೊಡಗಿ ಹಿಂದೂಗಳ ಹಿತಾಸಕ್ತಿಯನ್ನು ಕಡೆಗಣಿಸಿದೆ ಎನ್ನುವುದಾಗಿತ್ತು. ಎಲ್.ಕೆ. ಅಡ್ವಾಣಿ ಕಾಲದಿಂದಲೂ ಈ ಅಲ್ಪಸಂಖ್ಯಾತರ ತುಷ್ಟೀಕರಣದ ಆಪಾದನೆ ಕಾಂಗ್ರೆಸ್ ವಿರುದ್ಧ ಬಿಜೆಪಿಯ ಪ್ರಮುಖ ಚುನಾವಣಾ ಪ್ರಚಾರ ಸಾಧನ. ಈ ಬಾರಿ ಬಿಜೆಪಿ ತನ್ನ ಈ ಹಳೆಯ ಅಸ್ತ್ರಕ್ಕೆ ಹೊಸ ಹೊಸ ಮಂತ್ರಗಳನ್ನು ಆವಾಹಿಸುವ ಕೆಲಸ ಮಾಡುತ್ತಿದೆ. ಅದರಲ್ಲಿ ಪ್ರಮುಖವಾದದ್ದು ಸಿದ್ದರಾಮಯ್ಯ ಸರಕಾರ ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣ ನಡೆಸಿದ್ದು ಮಾತ್ರವಲ್ಲದೆ ಅದು ಹಿಂದೂ ವಿರೋಧಿ ಕೂಡಾ ಆಗಿತ್ತು ಎನ್ನುವ ಆಪಾದನೆ. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಹಿಂದೂಗಳ “ಮಾರಣಹೋಮ” ನಡೆಯಿತು ಎಂದು ಪ್ರಖರ ಪದಗಳನ್ನು ಬಳಸಿ ಬಿಜೆಪಿ ತನ್ನ ಹಳೆಯ ಅಸ್ತ್ರವನ್ನು ಹರಿತಗೊಳಿಸುತ್ತಿದೆ. ಹೇಗಾದರೂ ಮಾಡಿ ಈ ಒಂದು ವಾದವನ್ನು ಜನರ ಮನಮುಟ್ಟುವಂತೆ ಮಾಡಬೇಕು ಎನ್ನುವ ಬಿಜೆಪಿಯ ಹತಾಶೆ ಎಷ್ಟರಮಟ್ಟಿಗೆ ಇದೆ ಎನ್ನುವುದಕ್ಕೆ ಅದು ಅಂಕೆ-ಸಂಖ್ಯೆಗಳನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿರುವುದೇ ಒಂದು ಸಾಕ್ಷಿ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 24 ಹಿಂದೂಗಳ ಕಗ್ಗೊಲೆಯಾಯಿತು ಎನ್ನುವಲ್ಲಿ ಬಿಜೆಪಿಗೆ ಈ 24 ಎನ್ನುವ ಸಂಖ್ಯೆ ಬಹಳ ಮುಖ್ಯ. ರಾಜ್ಯ ಸರಕಾರ ಅಧಿಕೃತವಾಗಿಯೇ ಈ ಕುರಿತು ಸ್ಪಷ್ಟೀಕರಣ ನೀಡಿದರೂ ಯಾವುದೇ ಎಗ್ಗಿಲ್ಲದೆ ಬಿಜೆಪಿ ಅದೇ ಹಳೆಯ ತಪ್ಪು ಅಂಕಿಯನ್ನು ಬಳಸುತ್ತಿದೆ. ಜೀವಂತ ಇದ್ದವರನ್ನು ಈ ಲೆಕ್ಕದಲ್ಲಿ ಸೇರಿಸಿದ್ದು, ಸ್ವತಃ ತಮ್ಮ ಕಾರ್ಯಕರ್ತರೇ ಆಪಾದಿತರಾಗಿರುವ ಕೊಲೆ ಪ್ರಕರಣಗಳನ್ನು ಇದರಲ್ಲಿ ಸೇರಿಸಿದ್ದು, ಖಾಸಗಿ ಕಾರಣಗಳಿಗೆ ಕೊಲೆ ಆದವರನ್ನು ಹಿಂದೂ ಕಾರ್ಯಕರ್ತರು ಎಂದು ತೋರಿಸುತ್ತಿರುವುದು, ಈ ಅವಧಿಯಲ್ಲಿ ಆದ ಮುಸ್ಲಿಮರ ಕೊಲೆಗಳನ್ನು ಪ್ರಸ್ತಾಪಿಸದೆ ಇರುವುದು ಇತ್ಯಾದಿಗಳೆಲ್ಲ ಅರೆ-ಸತ್ಯಗಳನ್ನಾದರೂ ಆಶ್ರಯಿಸಿ ಹಿಂದೂ ಅಸುರಕ್ಷತೆಯ ಬಗ್ಗೆ ಹೊಸದೊಂದು ಸಂಕತನವನ್ನು ಹೇಗಾದರೂ ಹುಟ್ಟುಹಾಕಬೇಕು ಎನ್ನುವ ಬಿಜೆಪಿಯ ಹತಾಶೆ ಮತ್ತು ಹಪಹಪಿಯನ್ನುಎತ್ತಿ ತೋರಿಸುತ್ತದೆ. ಈ ಮಧ್ಯೆ ಕಾಂಗ್ರೆಸ್ ಸರಕಾರ ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕೆಂಬ ಹಳೆಯ ಬೇಡಿಕೆಗೆ ತನ್ನ ಸಹಾಯಹಸ್ತ ಚಾಚಿದ್ದು ಕೂಡಾ ಬಿಜೆಪಿಗೆ ಕಾಂಗ್ರೆಸ್ಸನ್ನು ಹಿಂದೂ ವಿರೋಧಿಯಾಗಿ ಬಿಂಬಿಸಲು ಇನ್ನಷ್ಟೂ ನೆರವಾಯಿತು. ಕಾಂಗ್ರೆಸ್ ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದೆ ಎನ್ನುವ ಹೊಸ ಉಪಕತನವೊಂದನ್ನು ಬಿಜೆಪಿ ಈ ಹಿನ್ನೆಲೆಯಲ್ಲಿ ಹುಟ್ಟುಹಾಕಿತು. ಹಳೆಯ ತುಷ್ಟೀರಣ ರಾಜಕಾರಣದ ಜತೆ “ಹಿಂದೂ ಮಾರಣಹೋಮ” “ಹಿಂದೂ ಧರ್ಮ ಭಂಜನೆ” ಮುಂತಾದ ಹೊಸ ಪದಪುಂಜಗಳು ಸೇರಿಕೊಂಡವು. ಇದೇ ವೇಳೆ ಕಾಂಗ್ರೆಸ್ ಸರಕಾರ ಅಲ್ಪ ಸಂಖ್ಯಾತರ ವಿರುದ್ಧ ಇರುವ ಕೆಲ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡಲು ಸಾಧ್ಯವೇ ಎಂದು ಪರಿಶೀಲಿಸಿ ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು, ಹಿಂದೂ ಮಠಗಳನ್ನು ನಿಯಂತ್ರಿಸಲು ಆದೇಶ ಹೊರಡಿಸಲು ಮುಂದಾಗಿ ಮತ್ತೆ ಹಿಂದೆ ಸರಿದದ್ದು ನಡೆಯಿತು. ಇವೆಲ್ಲ ರಾಜ್ಯ ಸರಕಾರದ ಮತೀಯ ಅಜೆಂಡವಾಗಿರದೆ ಕೇವಲ ಆಡಳಿತಾತ್ಮಕ ಎಡವಟ್ಟುಗಳಾಗಿದ್ದರೂ ಅವಕಾಶಕ್ಕಾಗಿ ಕಾಯುತ್ತಿದ್ದ ಬಿಜೆಪಿಗೆ ಕಾಂಗೆಸ್ಸ್ ವಿರುದ್ಧ ಪ್ರಬಲವಾದ ಹಿಂದೂ ವಿರೋಧಿ ಸಂಕತನವೊಂದನ್ನು ನಿರ್ಮಿಸಲು ನೆರವಾದ ಅಂಶಗಳು..

ರಾಜ್ಯದ ಮತದಾರರು ಈ ಹೊಸ ವರಸೆಯನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಈಗಲೇ ಹೇಳಲಾಗದು. ವಿಚಿತ್ರ ಎಂದರೆ ಕಾಂಗ್ರೆಸ್ಸಿನಂತಹ ಹಳೆಯ ಪಕ್ಷ ತನ್ನ ವಿರುದ್ಧ ಸೃಷ್ಟಿಯಾಗುತ್ತಿರುವ ಹೊಸ ಅಪಾಯಕಾರಿ ಆಪಾದನೆಗಳ ಸರಮಾಲೆಯನ್ನು ಎದುರಿಸುವಲ್ಲಿ ಹೇಗೆ ಹಿಂಜರಿಯುತ್ತಿದೆ ಎನ್ನುವುದು. “ಹಿಂದೂಗಳ ಕಗ್ಗೊಲೆಯ” ಅಂಕಿ-ಅಂಶಗಳಿಗೆ ಸಂಬಂಧಿಸಿದ ಸತ್ಯಾಸತ್ಯತೆಯನ್ನು ಕಾಂಗ್ರೆಸ್ ಅಧಿಕೃತವಾಗಿ ಅಲ್ಲಲ್ಲಿ ಸ್ಪಷ್ಟಪಡಿಸಿದರೂ ಬಿಜೆಪಿಯ ವಾದವನ್ನು ಸಮರ್ಥವಾಗಿ ಖಂಡಿಸುವುದರಲ್ಲಿ ಅದು ಸಫಲವಾಗಿಲ್ಲ. ಮೊನ್ನೆ ಮೊನ್ನೆ ಸ್ಕ್ರಾಲ್.ಇನ್ ಎನ್ನುವ ವೆಬ್-ಆಧಾರಿತ ನಿಯತಕಾಲಿಕವೊಂದು ಬಿಜೆಪಿ ಪ್ರಸ್ತಾಪಿಸುತ್ತಿರುವ ಅಷ್ಟೂ ಹಿಂದೂ ಕೊಲೆ ಪ್ರಕರಣಗಳ ಸಂತ್ರಸ್ತ ಕುಟುಂಬಗಳನ್ನು ಸಂದರ್ಶಿಸಿ ವಾಸ್ತವ ಸ್ಥಿತಿ ಏನು ಎನ್ನುವ ವರದಿ ಪ್ರಕಟಿಸಿತು. ಬಿಜೆಪಿಯ ಅರ್ಧ-ಸತ್ಯ ಆಧಾರಿತ ಪ್ರಚಾರವನ್ನು ಎದುರಿಸಲು ಕಾಂಗ್ರೆಸ್ಸಿಗೆ ಇದಕ್ಕಿಂತ ದೊಡ್ಡ ವಸ್ತು ಬೇಕಾಗಿರಲಿಲ್ಲ. ಆದರೆ ಕಾಂಗ್ರೆಸ್ ಈತನಕ ಈ ವರದಿಯನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ. ಕಾಂಗ್ರೆಸ್ ಈ ಚುನಾವಣೆಯಲ್ಲಿ ಪ್ರಮುಖವಾಗಿ ಬಳಸುತ್ತಿರುವುದು ಸಿದ್ದರಾಮಯ್ಯ ಸರಕಾರ ಕೈಗೊಂಡಿರುವ ಸಾಮಾಜಿಕ-ನ್ಯಾಯ ಆಧಾರಿತ ಅಭಿವೃದ್ಧಿ ಮಾದರಿಯನ್ನು. ಬಿಜೆಪಿ ಇದರ ಸುತ್ತ ಕೂಡಾ ಒಂದು ಮತೀಯ-ಜಾತೀಯ ಆಯಾಮವನ್ನು ಸೃಷ್ಟಿಸಿದೆ. ಸಿದ್ದರಾಮಯ್ಯ ಸರಕಾರದ ಸಾಮಾಜಿಕ ನ್ಯಾಯದ ಅಷ್ಟೂ ಯೋಜನೆಗಳೂ ಜಾತಿ-ಜಾತಿಗಳ ಮಧ್ಯೆ ಕಂದಕ ನಿರ್ಮಿಸಿದ ಅಭಿವೃದ್ಧಿ ಮಾದರಿ ಎಂದು ಹಳಿಯುತ್ತಿದೆ. ಬಿಜೆಪಿಯ ಈ ವಾದವನ್ನು ಪರಿಣಾಮಕಾರಿಯಾಗಿ ಅಲ್ಲಗಳೆಯುವ ಕೆಲಸವನ್ನು ಕೂಡಾ ಈತನಕ ಕಾಂಗ್ರೆಸ್ ಮಾಡಿಲ್ಲ. ಬಿಜೆಪಿ ಸಮರ್ಥ ಖಾಸಗಿ ವಕೀಲರಂತೆ ತನ್ನ ವಾದ ಮುಂದಿರಿಸಿದರೆ ಉದಾಸೀನ ಮನಸ್ಸಿನಿಂದ ವಾದಿಸುವ ಸರಕಾರೀ ವಕೀಲರಂತೆ ಕಾಂಗ್ರೆಸ್ ಪ್ರತಿವಾದ ಮಂಡಿಸುತ್ತದೆ. ಅಲ್ಲಲ್ಲಿ ಕಾಂಗ್ರೆಸ್ ನೀಡುತ್ತಿರುವ ಸಮರ್ಥನೆ ಒಂದು ಚುನಾವಣಾ ನುಡಿ-ವರಸೆಯಾಗಿ ರೂಪುಗೊಂಡಿಲ್ಲ. ಬರಬರುತ್ತಾ ಬಿಜೆಪಿ ಹೇಳುತ್ತಿರುವುದರಲ್ಲಿ ಸತ್ಯವಿದೆಯೇನೋ ಎನ್ನುವ ಮನೋಭಾವ ಜನರಲ್ಲಿ ಸೃಷ್ಟಿಯಾದರೂ ಆದೀತು. ಕಾಂಗ್ರೆಸ್‍ನಿಂದ ತುಷ್ಟೀಕರಣದ ಕೆಲಸ ಆಗಿದ್ದರೆ, ಅಲ್ಪಸಂಖ್ಯಾತ ಮತೀಯವಾದವನ್ನು ಮಟ್ಟಹಾಕುವ ಕೆಲಸದಲ್ಲಿ ಅದು ವಿಫಲವಾಗಿದ್ದರೆ ಆ ತಪ್ಪುಗಳನ್ನು ಒಪ್ಪಿಕೊಂಡುವಿಫಲವಾಗಿದ್ದರೆ ಆ ಕುರಿತು ಆತ್ಮಾವಲೋಕನ ಮಾಡಿಕೊಂಡರೆ, ತಪ್ಪೊಪ್ಪಿಕೊಂಡರೆ ಅದು ರಾಜಕೀಯವಾಗಿ ಅನಾಹುತಕಾರಿಯಾದ ನಡೆ ಖಂಡಿತವಾಗಿಯೂ ಆಗುವುದಿಲ್ಲ. ಧರ್ಮನಿರಪೇಕ್ಷ ಮೌಲ್ಯವನ್ನು ಎತ್ತಿಹಿಡಿಯುವ ಮೂಲಕ, ಎಲ್ಲಾ ಧರ್ಮಗಳ ಬಗ್ಗೆ ಗೌರವದಿಂದ ಮಾತನಾಡುತ್ತಲೇ ಒಂದು ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕಾಂಗ್ರೆಸ್ಸಿಗೆ ಬಿಜೆಪಿಯಿಂದ ಭಿನ್ನವಾದ ರಾಜಕೀಯ ನುಡಿಗಟ್ಟನ್ನು ಮತದಾರರ ಮುಂದಿಡಲು ಇನ್ನೂ ಸಾಧ್ಯವಿದೆ. ಸೆಕ್ಯುಲರ್ ವಾದದ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸುವುದರ ಮೂಲಕ, ಸೆಕ್ಯುಲರ್ ವಾದ ಎಂದರೆ ಅದು ಹಿಂದೂ ವಿರೋಧಿ ವಾದವೂ ಅಲ್ಲ, ಮುಸ್ಲಿಂ ಪರ ವಾದವೂ ಎಲ್ಲ ಎಂದು ಮತದಾರರಿಗೆ ಮನದಟ್ಟು ಮಾಡುವ ಮೂಲಕ ಬಿಜೆಪಿಯನ್ನು ಎದುರಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದರೆ ಅದಕ್ಕೊಂದು ಅರ್ಥವಿದೆ. ಬದಲಿಗೆ ಬಿಜೆಪಿಯ ತಂತ್ರಗಳನ್ನೇ ಅನುಕರಿಸುವ ಮೂಲಕ ಕಾಂಗ್ರೆಸ್ ನಗೆಪಾಟಲಿಗೆ ಗುರಿಯಾಗುತ್ತಿದೆ. ಚುನಾವಣೆಯ ಕಾಲದಲ್ಲಿ ಧಾರ್ಮಿಕ ಕ್ಷೇತ್ರಗಳದರ್ಶನಮಾಡುವುದರ ಮೂಲಕ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ವಿರುದ್ಧ ಬಿಜೆಪಿಯವರು ಮಾಡುತ್ತಿರುವ ಹುಸಿ-ಸೆಕ್ಯುಲರಿಸಂನ ಆಪಾದನೆಯನ್ನು ಪರೋಕ್ಷವಾಗಿ ಸಮರ್ಥಿಸುವಂತೆ ಕಾಣಿಸುತ್ತಿದೆ.. ಬಿಜೆಪಿಯದ್ದು ಹುಸಿ ರಾಷ್ಟ್ರೀಯವಾದ ಮತ್ತು ಹುಸಿ ಹಿಂದೂವಾದ ಎನ್ನುವ ಚುನಾವಣಾ ನುಡಿಗಟ್ಟೊಂದನ್ನು ಸಮರ್ಥವಾಗಿ ರೂಪಿಸಲು ಕಾಂಗ್ರೆಸ್ ಮುಂದಾಗುತ್ತಿಲ್ಲ. ಹೀಗಾಗಿ ಕರ್ನಾಟಕದ ಚುನಾವಣಾ ಕಣದಲ್ಲಿ ಸಾಂವಿಧಾನಿಕ ಸೆಕ್ಯುಲರ್ ಮೌಲ್ಯ ಅನಾಥವಾದಂತೆ ತೋರುತ್ತದೆ.

– ಎ. ನಾರಾಯಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...