Homeಅಂಕಣಗಳುಜನರ ತಲೆಗೆ ಮೌಢ್ಯದ ‘ಚಿಪ್ಪು’!

ಜನರ ತಲೆಗೆ ಮೌಢ್ಯದ ‘ಚಿಪ್ಪು’!

- Advertisement -
- Advertisement -

ಬುರುಡೆ ಜ್ಯೋತಿಷ್ಯವು ಹೇಗೆ ಹುಟ್ಟಿದ ಮಗುವನ್ನು ತಕ್ಷಣವೇ ಸುತ್ತಿಕೊಳ್ಳುತ್ತದೆ ಮತ್ತು ಹೆಸರಿನ ನೆಪದಲ್ಲಿ ಹೇಗೆ ‘ಹ್ಯೂಮನ್ ಐಡೆಂಟಿಟಿ, ಸ್ಟೇಟಸ್ ರೆಕಗ್ನಿಷನ್ ಸಿಸ್ಟಮ್’ ಎಂಬ ಅದ್ಭುತ ಆವಿಷ್ಕಾರವು ಮನುಷ್ಯನ ಜಾತಿ ಮತ್ತು ಹಿನ್ನೆಲೆಯನ್ನು ಹೇಗೆ ಗುರುತಿಸುತ್ತದೆ ಹಾಗೂ ‘ಹ್ಯೂಮನ್ ಫಿಲ್ತ್ ಸೆಪರೇಶನ್ ಎಂಡ್ ಸೆಗ್ರೆಗೇಶನ್ ಸಿಸ್ಟಮ್’ ಎಂಬ ಅವಿಷ್ಕಾರವು ಹೇಗೆ ನಿಕೃಷ್ಟ ಮಾನವರನ್ನು ಗುರುತಿಸಿ, ಜೀವನದುದ್ದಕ್ಕೂ ಪ್ರತ್ಯೇಕಿಸಿ ಮೂಲೆಗುಂಪು ಮಾಡುತ್ತದೆ ಎಂಬುದನ್ನು ಕಳೆದ ಸಂಚಿಕೆಯಲ್ಲಿ ನೋಡಿದೆವು.

ದಶಕಗಳ ಹಿಂದೆ ಪಂಚಾಂಗಗಳು ಮನೆಮನೆಯನ್ನು ಪ್ರವೇಶಿಸಲು ಅರಂಭಿಸಿದವು. ದಿನಮಾನವನ್ನು ಅಂದರೆ ಭೂಮಿ ಚಂದ್ರಾದಿ ಗ್ರಹಗಳ ಚಲನೆಯನ್ನು, ಋತುಗಳನ್ನು, ಗ್ರಹಣಗಳನ್ನು ನಿಖರವಾಗಿ ಗುರುತಿಸುವ ಈ ಪಂಚಾಂಗಗಳು ವಾಸ್ತವಿಕವಾಗಿ ನಮ್ಮ ಪುರಾತನ ಖಗೋಳಶಾಸ್ತ್ರಜ್ಞರ, ಗಣಿತಜ್ಞರ, ವೈಜ್ಞಾನಿಕ ಕೊಡುಗೆ. ಅದರೆ, ಅದರ ಪೇಟೆಂಟ್ ಪಡೆದುಕೊಂಡ ಬುರುಡೆ ಶಾಸ್ತ್ರಜ್ಞರು ಅದಕ್ಕೆ ತಮ್ಮದೇ ಆದ ಹೊಸಹೊಸ ಆವಿಷ್ಕಾರಗಳನ್ನು ಸೇರಿಸಿ, ಮುಗ್ಧ ಜನರ ‘ಇಯರ್ ಮೇಲೆ ಫ್ಲವರ್’ ಇಡಲು ಪ್ರಾರಂಭಿಸಿದರು.
ಒಂದು ಪ್ರದೇಶದ ಋತುಮಾನ, ಹವಾಮಾನ, ಮಳೆಯ ಸಮಯವನ್ನು ಗುರುತಿಸಲು ಈ ಲೆಕ್ಕಾಚಾರಗಳು ರೈತಾಪಿ ಜನರಿಗೆ ಅನುಕೂಲಕರವಾದುದರಿಂದ ಸ್ವಲ್ಪ ಅಕ್ಷರ ಬಲ್ಲವರ ಮನೆಗಳಲ್ಲಿ ಪಂಚಾಂಗಗಳು ಇರುತ್ತಿದ್ದವು. ಅವರು ಕಾಂಪೌಂಡರ್‍ಗಳಂತೆ ಉಳಿದವರ ಚಿಕ್ಕಪುಟ್ಟ ಸಮಸ್ಯೆಗಳಿಗೆ ಮದ್ದು ಕೊಡುತ್ತಿದ್ದರು. ದೊಡ್ಡ ಸಮಸ್ಯೆಗಳು ಎದುರಾದರೆ ಜೋಯಿಸರ ಬಳಿಯೇ ಹೋಗಬೇಕಾಗುತ್ತಿತ್ತು.
ಈ ಪಂಚಾಂಗಗಳಲ್ಲಿ ನಕ್ಷತ್ರಗಳ ಪಟ್ಟಿ, ಘಳಿಗೆ, ಇಲ್ಲದ ರಾಹುಕಾಲ, ಗುಳಿಕಕಾಲ, ಯಮಗಂಡ ಕಾಲ, ರಾಶಿ, ದೋಷಗಳು, ಫಲಗಳು, ಕಾಟಗಳು ಇತ್ಯಾದಿಗಳನ್ನು ಸೇರಿಸಲಾಯಿತು. ಇವರ ಅತ್ಯಂತ ದೊಡ್ಡ ಆವಿಷ್ಕಾರವೆಂದರೆ ವೈಜ್ಞಾನಿಕವಾದ ಪುರಾತನ ಆವಿಷ್ಕಾರಗಳಿಗೆ ಬುರುಡೆ ಅಪ್ಲಿಕೇಷನ್‍ಗಳನ್ನು ಕಂಡುಹಿಡಿದು, ಅವುಗಳ ಜೊತೆಗೆ ಭಯದ ಪ್ರೋಗ್ರಾಮ್ ಚಿಪ್ಪನ್ನು ಜನರ ಮೆದುಳಿಗೆ ಇಂಪ್ಲಾಂಟ್ ಮಾಡಿದ್ದು! ಇಂದಿಗೂ ವಿದ್ಯಾವಂತರೆನಿಸಿಕೊಂಡವರು ಕೂಡಾ ಇಂತಹ ಒಂದು ಚಿಪ್ಪನ್ನು ತಲೆಯೊಳಗೆ ಹೊತ್ತು ತಿರುಗುವುದನ್ನು ನೋಡಬಹುದು. ನಮ್ಮ ಮಾಧ್ಯಮದಲ್ಲೂ ಇಂತಹ ‘ಚಿಪ್ಪು’ ಹಂದಿಗಳು ದಂಡಿಯಾಗಿವೆ!
ಪಂಚಾಂಗಗಳ ದೊಡ್ಡ

ಸಾಧನೆ ಎಂದರೆ ಮನುಷ್ಯನ ಹುಟ್ಟು-ಸಾವು-ಕರ್ಮಗಳಿಗೂ ಗ್ರಹ-ನಕ್ಷತ್ರ-ಘಳಿಗೆಗಳಿಗೂ, ಭವಿಷ್ಯಕ್ಕೂ ಇಲ್ಲದ ಸಂಬಂಧ ಕಲ್ಪಿಸಿದ್ದು! ಮತ್ತು ಮಂತ್ರವಾದಿ ಕತೆಗಳಂತಹ ಕಾಲ್ಪನಿಕ ಚಿತ್ರಣವನ್ನು ಪಂಚಾಂಗಕ್ಕೆ ಸೇರಿಸಿ ಸಂವತ್ಸರಗಳು ಪಿಶಾಚಿಗಳಂತೆ ಜನರ ತಲೆಯಲ್ಲಿ ಕುಣಿಯುವಂತೆ ಮಾಡಿದ್ದು.
ನನ್ನ ಬಾಲ್ಯದಲ್ಲಿ ಪಂಚಾಂಗ ಮನೆ ಸೇರಿದ ಕೂಡಲೇ ತಂದೆಯವರು ಒಮ್ಮೆ ಕಣ್ಣಾಡಿಸಿದ್ದೇ ತಡ ಅದು ನನ್ನ ಪಾಲಾಗುತ್ತಿತ್ತು. ಯಾಕೆಂದರೆ ಶಾಲೆಗಳಲ್ಲಿ ಅಶ್ವಿನಿ, ಭರಣಿ, ಕೃತ್ತಿಕಾ… ಮುಂತಾದ ನಕ್ಷತ್ರಗಳು, ಮೇಷ, ವೃಷಭ, ಮಿಥುನ… ಮುಂತಾದ ರಾಶಿಗಳು, ಚೈತ್ರ, ವೈಶಾಖ, ಆಷಾಡ…ಇತ್ಯಾದಿ ಋತುಗಳು, ಪ್ರಭವ, ವಿಭವ, ಶುಕ್ಲ…ಇತ್ಯಾದಿ ಸಂವತ್ಸರಗಳನ್ನು ಉರುಹೊಡೆಸಲಾಗುತ್ತಿತ್ತು.
ಮಹಾ ಕುತೂಹಲಕಾರಿ, ಅದ್ಭುತ, ಭಯಾನಕವಾಗಿದ್ದುದು ಮಾತ್ರ ಚಂದಾಮಾಮ ಕತೆಗಳನ್ನು ಮೀರಿಸುವ ಸಂವತ್ಸರ ಫಲ! ಅವುಗಳಲ್ಲಿ ಆಯಾ ಸಂವತ್ಸರಕ್ಕೆ ಒಂದೊಂದು ಭಯಾನಕ ರೂಪ ಕೊಡಲಾಗುತ್ತಿತ್ತು. “ರಕ್ತಾಕ್ಷಿ ನಾಮದ ದೇವತೆಯು ಪೀತವಸ್ತ್ರಧಾರಿಣಿಯಾಗಿ, ಒಂದು ಕೈಯಲ್ಲಿ ಕಪಾಳವನ್ನೂ ಇನ್ನೊಂದು ಕೈಯ್ಯಲ್ಲಿ ಶೂಲವನ್ನೂ ಹಿಡಿದುಕೊಂಡು, ನೇರಳೆ ಬಣ್ಣದ ಹೂವಿನ ಮಾಲೆಯನ್ನು ಧರಿಸಿಕೊಂಡು, ಭಿಕ್ಷಾನ್ನವನ್ನು ಮುಕ್ಕುತ್ತಾ, ಪಶ್ಚಿಮದಿಂದ ಪೂರ್ವಾಭಿಮುಖವಾಗಿ ದಕ್ಷಿಣ ದಿಕ್ಕನ್ನು ದಿಟ್ಟಿಸುತ್ತಾ ಕತ್ತೆಯ ಮೇಲೇರಿ ಪಯಣಿಸುವಳು… ಎರಡು ಕೊಳಗ ಮಳೆಯನ್ನು ಸುರಿಸುವಳು… ಇಷ್ಟ ಧಾನ್ಯ ಗೋಧಿ… ಆಕೆ ಬಳಸಿದ ವಸ್ತುಗಳಿಗೆ ಕೊರತೆಯಾಗುವುದು… ಹೀಗೆ ಸಾಗುವ ಕತೆಯನ್ನು ಓದಿ ನಾವು ಮಕ್ಕಳು ರಾತ್ರಿ ವೇಳೆ ಭಯಾನಕ ಕನಸುಬಿದ್ದು ಬೆವರುತ್ತಿದ್ದರೆ, ಹಿರಿಯರು ಇವುಗಳಿಗೆ ತಮ್ಮದೇ ಕಾಲ್ಪನಿಕ ಅರ್ಥ ಕಲ್ಪಿಸಿ, ಈ ಸಲ ಮಳೆ ಕಡಿಮೆ, ಕಾಲ ಕಷ್ಟ, ಗೋಧಿಗೆ ಹೇಗೋ ಗೊತ್ತಿಲ್ಲ; ಭತ್ತಕ್ಕೆ ತೊಂದರೆಯಿಲ್ಲ ಎಂಬಿತ್ಯಾದಿ ಚಿಂತೆಗಳಲ್ಲಿ ಮುಳುಗಿರುತ್ತಿದ್ದರು. ಇಂತಹಾ ಒಂದು ಸಾಮೂಹಿಕ ಸನ್ಮೋಹನದ, ಸಮೂಹ ಸನ್ನಿಯ ಮನಶ್ಶಾಸ್ತ್ರೀಯ ಆವಿಷ್ಕಾರವನ್ನು ಭಾರತದ ಬುರುಡೆ ಜ್ಯೋತಿಷಿಗಳು ಬಿಟ್ಟರೆ ಪ್ರಪಂಚದಲ್ಲಿ ಬೇರಾರೂ ಮಾಡಿರಲಿಕ್ಕಿಲ್ಲ.
ಒಂದೆರಡು ಕೊಳಗ ಮಳೆ ಎಂದರೆ ಬರ ಬರುತ್ತದೆಂದೂ, ನಾಲ್ಕು ಕೊಳಗ ಎಂದರೆ ಪ್ರಳಯವೆಂದೂ ನಂಬುವ ರೈತಾಪಿ ಜನರು, ಈ ಸಂವತ್ಸರವು ಇಡೀ ಜಗತ್ತಿಗೆ ಅನ್ವಯಿಸುವುದಾದರೆ ಮರುಭೂಮಿಯಲ್ಲಿ ಕಡಿಮೆ ಮಳೆ, ಕರಾವಳಿ-ಮಲೆನಾಡುಗಳಲ್ಲಿ ಹೆಚ್ಚು ಮಳೆ ಯಾಕೆ ಸುರಿಸುತ್ತದೆ ಎಂದು ಎಂದಿಗೂ ಯೋಚಿಸುವುದಿಲ್ಲ! ಏನಾದರೂ ಹೆಚ್ಚುಕಡಿಮೆ ಅದರೆ, ಸಮಜಾಯಿಷಿ ಕೊಡಲು ಜೋಯಿಸರಿಗೆ ಮಾತ್ರ ಈ ತರ್ಕ ಅನುಕೂಲಕ್ಕೆ ಬರುತ್ತದೆ.
ನಾಲ್ಕು ಕೊಳಗ ಮಳೆ ಎಂದಿದ್ದಾಗ ತೀರಾ ಕಡಿಮೆ ಮಳೆ ಬಂದಿದ್ದನ್ನೂ, 1974ರಲ್ಲಿ ಎರಡೋ ಮೂರೋ ಕೊಳಗ ಎಂದಿದ್ದಾಗ, ನೇತ್ರಾವತಿ ನದಿಯಲ್ಲಿ ಒಂದು ಇಡೀ ತಲೆಮಾರು ಮರೆಯದ, ಪ್ರಳಯದಂತಹ ಮಳೆ ಮತ್ತು ನೆರೆ ಬಂದದ್ದನ್ನೂ ನಾನು ಕಂಡಿದ್ದೇನೆ, ಆ ಮಾತು ಬೇರೆ.
ಈ ಜೋಯಿಸರು ಒಳ್ಳೆಯ ಹಾಸ್ಯಪಟುಗಳೂ ಹೌದು! ಅದಕ್ಕಾಗಿಯೇ ಅವರು ‘ಗವಳಿ ಪತನ ಫಲ’ ಎಂದೇನೋ ಒಂದು ಶಕುನವನ್ನೂ ಕೊಡುತ್ತಿದ್ದರು. ಅಂದರೆ, ಅಕಸ್ಮಾತ್ ಹಲ್ಲಿಯೇನಾದರೂ ಮೈಮೇಲೆ ಬಿದ್ದರೆ ಯಾವ ಫಲ ಇತ್ಯಾದಿ. ಕೈಗೆ ಬಿದ್ದರೆ, ಹೆಗಲಿಗೆ ಬಿದ್ದರೆ…ಹೀಗೆ ಫಲಗಳಿರುತ್ತವೆ. ಇರುವ ಎಲ್ಲಾ ಮನೆವಾರ್ತೆ ಪ್ರಾಣಿಗಳಲ್ಲಿ ಹಲ್ಲಿ ಏಕೆ ವಿಶೇಷ ಎಂದು ನನಗಿನ್ನೂ ಒಗಟು. ಹಲ್ಲಿ ಏನಾದರೂ ಬ್ಯಾಲೆನ್ಸ್ ತಪ್ಪಿ ಜೋಕಾಲಿಯಿಂದ ಬಲೆಗೆ ಬೀಳುವ ಸರ್ಕಸಿನ ಜೋಕರ್‍ನಂತೆ ಅನ್ನದ ಪಾತ್ರೆಗೆ ಬಿದ್ದರೆ ಏನು ಫಲ ಎಂದರೆ, ತಿಂದವರಿಗೆ ವಾಂತಿ-ಬೇಧಿ ಎಂದು ಕಂಡಿದ್ದೇನೆ. ಅದರೆ ಹಲ್ಲಿ ಬೀಳುವುದಕ್ಕೂ ಭವಿಷ್ಯಕ್ಕೂ ಏನು ಸಂಬಂಧ? ಆಗ ಭವಿಷ್ಯದ ಮೇಲೆ ಪ್ರಭಾವ ಬೀರುವ ಗ್ರಹ, ನಕ್ಷತ್ರಗಳು ರಜೆ ಹಾಕಿರುತ್ತವೆಯೆ!?
ನಾನು ಏಳನೇ ತರಗತಿಯಲ್ಲಿರುವಾಗ ಹಲ್ಲಿ ಪತನದ ಪರಿಣಾಮವನ್ನು ಕಣ್ಣಾರೆ ಕಾಣುವಂತಾಯಿತು. ಆ ಭಯಾನಕ ಘಟನೆ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದಂತಿದೆ! ನಮ್ಮದು ಅಗಲೇ ಏಳ್ನೂರು ವಿದ್ಯಾರ್ಥಿಗಳಿದ್ದ ಅತ್ಯಂತ ಹಳೆಯ ಖಾಸಗಿ ಅನುದಾನಿತ ಕನ್ನಡ ಮಾಧ್ಯಮ ಶಾಲೆ! ಭಾರಿ ಕಟ್ಟಡ, ಇಪ್ಪತ್ತೈದು ಅಡಿ ಮೀರಿದ ಛಾವಣಿ.
ಒಂದು ದಿನ ಬೋಳು ತಲೆಯ ಒಬ್ಬರು ಮೇಷ್ಟ್ರು ಪಾಠ ಮಾಡುತ್ತಿದ್ದರು. ಮೇಲ್ಜಾತಿಗೆ ಸೇರಿದ ಅವರು ಮಕ್ಕಳನ್ನು ಜಾತಿ-ಧರ್ಮದ ಹೆಸರೆತ್ತಿ ಅವಮಾನಿಸುತ್ತಿದ್ದರಿಂದ, ಹೊಡೆಯುತ್ತಿದ್ದುದರಿಂದ ಅವರನ್ನು ಕಂಡರೆ ನಮಗ್ಯಾರಿಗೂ ಆಗುತ್ತಿರಲಿಲ್ಲ! ಆ ದಿನ ಮಟಮಟ ಮಧ್ಯಾಹ್ನ! ಒಂದು ಹಲ್ಲಿ ತಟಕ್ಕನೇ ಅವರ ಬೋಳು ನೆತ್ತಿಯ ಮೇಲೆ ಬಿತ್ತು! ಇಡೀ ತರಗತಿ ದಂಗಾಯಿತು. ನನ್ನನ್ನೂ ಸೇರಿದಂತೆ ಹೆಚ್ಚಿನವರಿಗೇ ಒಳಗೊಳಗೇ ಖುಷಿ ಕೂಡ- “ಮಾಷ್ಟ್ರು ಸಾಯುತ್ತಾರೆ!”. ನಡುನೆತ್ತಿಗೆ ಹಲ್ಲಿ ಬಿದ್ದರೆ ಮರಣ ಅಂತ ಪಂಚಾಂಗದಲ್ಲಿ ಬರೆದಿದೆ! ಕೊನೆಗೂ ಹಾಗೆಯೇ ಆಯಿತು!
ಮೇಷ್ಟ್ರು ಕೇಳಿದರು, “ಪಂಚಾಂಗ ನೋಡುತ್ತೀರ?! ನಡು ನೆತ್ತಿಯ ಮೇಲೆ ಹಲ್ಲಿ ಬಿದ್ದರೆ ಏನು ಫಲ?”
ನಾನು ತಟ್ಟನೇ ಉತ್ತರಿಸಿದೆ, “ಮರಣ!”
ಮೇಷ್ಟ್ರು “ಹೌದು! ಮರಣ! ಯಾರಿಗೆ?…ಹಲ್ಲಿಗೆ!” ಎಂದವರೇ ನೆಲ ತೋರಿಸಿದರು. ಅಲ್ಲಿ ಅಷ್ಟು ಎತ್ತರದಿಂದ ಬಿದ್ದಿದ್ದ ಹಲ್ಲಿ ಕಾಲು ಮೇಲಾಗಿ ಬಿಳಿಹೊಟ್ಟೆ ತೋರಿಸುತ್ತಾ ಸತ್ತುಬಿದ್ದಿತ್ತು! ಅಂದೇ, ಈ ಬುರುಡೆ ಜ್ಯೋತಿಷ್ಯ ಕುರಿತ ನನ್ನ ನಂಬಿಕೆ ಕಳಚಿಹೋಯಿತು. ಈ ಮೇಷ್ಟ್ರು ಇಂದಿಗೂ ಮುಂಬಯಿಯಲ್ಲಿ ಮಕ್ಕಳ ಮನೆಯಲ್ಲಿ ಇದ್ದಾರೆಂದು ಕೇಳಿದ್ದೆ!
ಇವೆಲ್ಲವುಗಳ ವಾಸ್ತವವನ್ನು ಮುಂದೆ ಆಧುನಿಕ ವಿಜ್ಞಾನದ ಮೂಲಕ ವಿವರವಾಗಿ ಮತ್ತು ತಾರ್ಕಿಕವಾಗಿ ಪರಿಶೀಲಿಸುವ ಮೊದಲು ಇಂತಹ ಇನ್ನಷ್ಟು ಆವಿಷ್ಕಾರಗಳ ಕತೆಗಳನ್ನು ಕೇಳೋಣ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...