Homeಮುಖಪುಟಯಡಿಯೂರಪ್ಪನವರ ಮೊಗದಲ್ಲಿ ದುರಂತ ನಾಯಕನ ಗೆರೆಗಳು

ಯಡಿಯೂರಪ್ಪನವರ ಮೊಗದಲ್ಲಿ ದುರಂತ ನಾಯಕನ ಗೆರೆಗಳು

- Advertisement -
- Advertisement -

ಈ ಬಾರಿಯ ವಿಧಾನ ಸಭಾ ಚುನಾವಣೆ ನಂತರ ಬಿ.ಎಸ್ ಯಡಿಯೂರಪ್ಪನವರ ಕತೆ ಏನಾಗಲಿದೆ! ಇಂತಹದೊಂದು ಪ್ರಶ್ನೆ ಇವತ್ತು ಬಿಜೆಪಿಯ ಒಳಗೂಹೊರಗೂ ಚರ್ಚೆಯಾಗುತ್ತಿದೆ. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಈ ಬಾರಿ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬಿಡುವಿಲ್ಲದ ಓಡಾಟದಲ್ಲಿ ತೊಡಗಿಕೊಂಡಿರುವ ಯಡಿಯೂರಪ್ಪನವರಿಗೂ ಈ ಚುನಾವಣೆಯ ನಂತರ ತಮ್ಮ ಭವಿಷ್ಯ ಏನಾಗಲಿದೆ ಎಂಬ ಆತಂಕವಿರುವಂತಿದೆ. ಯಡಿಯೂರಪ್ಪನವರ ರಾಜಕೀಯ ನಡೆಯನ್ನು ಗಮನಿಸುತ್ತಾ ಬಂದವರಿಗೆಲ್ಲಾ ಚುನಾವಣೆ ಮುಗಿಯುವಷ್ಟರಲ್ಲಿ ಬಿಎಸ್‍ವೈ ದುರಂತ ನಾಯಕನಾಗಿ ಹೊರಹೊಮ್ಮುವ ಸಾಧ್ಯತೆಯೇ ಹೆಚ್ಚಾಗಿ ಕಂಡುಬರುತ್ತಿದೆ.

ನಿಜ ಹೇಳಬೇಕೆಂದರೆ, ಯಡಿಯೂರಪ್ಪ ಇವತ್ತು ಈ ಮಟ್ಟಕ್ಕೆ ಬಂದು ನಿಲ್ಲಲು ಸಿಕ್ಕಾಪಟ್ಟೆ ಬೆವರಿಳಿಸಿದ್ದಾರೆ. ಇಲ್ಲದೇ ಹೋಗಿದ್ದರೆ ಮಂಡ್ಯ ಸೀಮೆಯ ಬೂಕನಕೆರೆಯ ಆಸಾಮಿ ವಯಾ ಶಿಕಾರಿಪುರ ದಾಟಿ ವಿಧಾನಸೌಧ ಸಿಎಂ ಕುರ್ಚಿಯ ಮೇಲೆಯೇ ಕೂರಲು ಸಾಧ್ಯವಾಗುತ್ತಿರಲಿಲ್ಲ. ಒಂದು ಜೀವ ವಿರೋಧಿ ಸಿದ್ಧಾಂತದ ಜೊತೆ ರಾಜಕೀಯವಾಗಿ ಬೆಳೆದು ಬಂದರೂ ಯಡಿಯೂರಪ್ಪ ಫುಲ್‍ಟೈಂ ಕೋಮುವಾದಿಯಾಗಿ ಮೈದಳೆಯದೆ ಹೋರಾಟಗಾರ ಎಂಬ ಇಮೇಜು ದಕ್ಕಿಸಿಕೊಳ್ಳಲು ಪಟ್ಟ ಪಡಿಪಾಟಲುಗಳು ಅಷ್ಟಿಷ್ಟಲ್ಲ. ಇದೇ ಕಾರಣಕ್ಕೆ ಆರೆಸ್ಸೆಸ್‍ಗೆ ಯಡಿಯೂರಪ್ಪ ಅಂದ್ರೆ ಅಷ್ಟಕ್ಕಷ್ಟೆ. ನಿಜವಾದರೂ ಯಡಿಯೂರಪ್ಪ ತಮ್ಮದೇ ಹೋರಾಟ ವರ್ಚಸ್ಸು ಬೆಳೆಸಿಕೊಂಡವರು ಹಾಗೂ ಅದಕ್ಕಾಗಿ ಅಪಾರ ದೈಹಿಕ ಶ್ರಮ ಹಾಕಿದವರು ಎಂಬುದನ್ನು ಒಪ್ಪಲೇಬೇಕು.

ದಕ್ಷಿಣ ಭಾರತದ ಯಾವ ರಾಜ್ಯಗಳಲ್ಲೂ ಏಳಿಗೆ ಕಾಣಲಾಗದ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಕೇಂದ್ರದ ಹತ್ತಿರದಲ್ಲಿದೆ ಎಂದರೆ ಅದರಲ್ಲಿ ಯಡಿಯೂರಪ್ಪನವರ ಪಾಲು ದೊಡ್ಡದೇ ಇದೆ. ಕರ್ನಾಟಕದಲ್ಲಿ ಸಂಘಪರಿವಾರ ಲಾಠಿ ತಿರುಗಿಸುತ್ತಾ, ಜನರ ತಲೆ ಕೆಡಿಸುತ್ತಾ ಕೋಮುವಾದಿ ರಾಜಕಾರಣದ ಮೂಲಕ ತನ್ನ ಹೆಜ್ಜೆ ಗುರುತು ಮೂಡಿಸುತ್ತಾ ಬರುತ್ತಿತ್ತಾದರೂ ಅದಕ್ಕೊಂದು ಜನಪರ ರಾಜಕೀಯ ಮುಖ ದೊರೆತದ್ದು ಯಡಿಯೂರಪ್ಪನಿಂದಲೇ. ಸಂಘ ಪರಿವಾರ ಕೂಡಾ ಕೊಂಚಮಟ್ಟಿಗೆ ತನ್ನೆಲ್ಲಾ ಅಜೆಂಡಾಗಳನ್ನ ತೆರೆಹಿಂದಕ್ಕೆ ತಳ್ಳಿ ಯಡಿಯೂರಪ್ಪನ ಬೆನ್ನಿಗೆ ನಿಂತಿತು. ಬಿಜೆಪಿಗೆ ಕರ್ನಾಟಕದಲ್ಲಿ ಒಂದು ನೆಲೆ ಸಿಕ್ಕಿದ್ದೇ ಆಗ.

ಅಂತಹ ಯಡಿಯೂರಪ್ಪ ಇವತ್ತು ತಮಗಿಂತ ರಾಜಕೀಯದಲ್ಲಿ ಕಿರಿಯರಾದ ಹಾಗೂ ಜನಸಾಮಾನ್ಯರ ಪರವಾದ ಯಾವ ಹೋರಾಟಗಳಲ್ಲೂ ತೊಡಗಿಸಿಕೊಳ್ಳದ ನರೇಂದ್ರಮೋದಿ ಮತ್ತು ಅಮಿತ್ ಶಾ ಜೋಡಿಯ ಎದುರು ನಡುಬಗ್ಗಿಸಿ ನಿಂತು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಿ ಎಂಬುದಾಗಿ ಯಾಚಿಸುತ್ತಿರುವುದನ್ನು ಗಮನಿಸಿದರೆ ಈ ಚುನಾವಣೆ ನಂತರ ಅವರ ಗತಿ ಏನಾಗಲಿದೆ ಎಂಬುದನ್ನು ಊಹಿಸುವುದು ಕಷ್ಟವಾಗಲಾರದು.

ತಮ್ಮ ರಾಜಕೀಯ ಹಿರಿತನವನ್ನು ಬಳಸಿಕೊಂಡು ಸೆಟೆದು ನಿಲ್ಲಲೂ ಆಗದೆ, ಮೋದಿ-ಶಾ ಜೋಡಿಯ ಹುಕುಂಗಳನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ತೆಪ್ಪಗಿರಲೂ ಆಗದೆ ಯಡಿಯೂರಪ್ಪ ತಮ್ಮ ರಾಜಕೀಯ ಚಹರೆಯನ್ನೇ ಕಳೆದುಕೊಳ್ಳತೊಡಗಿದ್ದಾರೆ.

ತಾನು ಮದುವೆಯಾದ ಪತ್ನಿಯ ಕುಟುಂಬದ ಆಸ್ತಿಯನ್ನು ಕಬಳಿಸಿದವರು, ವಿರೋಧ ಪಕ್ಷದಲ್ಲಿದ್ದುಕೊಂಡೆ ಬ್ಲಾಕ್‍ಮೇಲ್ ರಾಜಕಾರಣ ಮಾಡಿದವರು ಇತ್ಯಾದಿ ಆರೋಪಗಳನ್ನೆಲ್ಲ ನಗಣ್ಯವಾಗಿಸಿ ಯಡಿಯೂರಪ್ಪ ಬಿಜೆಪಿಯ ಏಕಮಾತ್ರ ನಾಯಕನಾಗಿ ಬೆಳೆಯಲು ಕಾರಣವಾದುದು ಅವರ ಹೋರಾಟದ ಸೋಗಿನ ಚಟುವಟಿಕೆಗಳೇ ಕಾರಣವಾಗಿದ್ದವು. ಆದರೆ ಕುಟುಂಬ ರಾಜಕಾರಣ ಮತ್ತು ಅಧಿಕಾರದ ಹಪಾಹಪಿ ಇವತ್ತು ಅವರನ್ನು ರಾಜಕೀಯವಾಗಿ ದೈನೇಸಿ ಸ್ಥಿತಿಗೆ ತಂದು ನಿಲ್ಲಿಸಿರುವುದನ್ನು ಗಮನಿಸಿದರೆ ಅವರ ಹಿಂದಿನದೆಲ್ಲಾ ಹೋರಾಟದ ಚಟುವಟಿಕೆಗಳ ಹಿಂದಿದ್ದ ಕಾಳಜಿಯೇ ಪ್ರಶ್ನಾರ್ಥವಾಗತೊಡಗುತ್ತದೆ.

ಯಡಿಯೂರಪ್ಪ 6 ಬಾರಿ ಶಿಕಾರಿಪುರ ಶಾಸಕರಾಗಿ ಗೆದ್ದವರು, ಬಿಜೆಪಿ ರಾಜ್ಯಾಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿದ್ದವರು. ಹಾಲಿ ಸಂಸದರೂ ಹೌದು. ಅಷ್ಟಾಗಿಯೂ ಅವರ ಸ್ವಂತ ಜಿಲ್ಲೆಯಲ್ಲೂ ಯಡಿಯೂರಪ್ಪರ ಅಭಿಪ್ರಾಯ ಪಕ್ಷದ ಟಿಕೇಟ್ ನೀಡುವಲ್ಲಿ ಪರಿಗಣನೆಯಾಗುತ್ತಿಲ್ಲ ಎನ್ನುವುದಾದರೆ ಬಿಜೆಪಿಯಲ್ಲಿ ಯಡಿಯೂರಪ್ಪ ಕತೆ ಏನಾಗಿದೆ ಎಂಬುದನ್ನು ಯಾರು ಬೇಕಾದರು ಊಹಿಸಬಹುದು. ಯಡಿಯೂರಪ್ಪ ಕತೆ ಮಾತ್ರವಲ್ಲ. ಸಂಘಪರಿವಾರದ ಮುದ್ದಿನ ಕೂಸುಮರಿಯಾದ ಕೆ.ಎಸ್.ಈಶ್ವರಪ್ಪ ತಮ್ಮ ಸ್ವಂತ ಕ್ಷೇತ್ರಕ್ಕೆ ಟಿಕೆಟ್ ಪಡೆಯಲು ಏನೆಲ್ಲ ಹೋರಾಟ-ಹಾರಾಟ ಮಾಡಬೇಕಾಯಿತು ಎಂಬುದನ್ನು ಗಮನಿಸಿದರೆ ಮೋದಿ-ಶಾ ಜೋಡಿ ಬಿಜೆಪಿಯ ರಾಜ್ಯ ನಾಯಕಮಣಿಗಳನ್ನು ಹೇಗೆ ಕಸಕ್ಕಿಂತ ಕಡೆಯಾಗಿ ಪರಿಗಣಿಸಿದೆ ಎಂಬುದು ತಿಳಿಯುತ್ತೆ. ಅದಿರಲಿ, ಈ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮಾಡಿಕೊಂಡ ಹಳವಂಡಗಳು, ಭ್ರಷ್ಟಾಚಾರ, ಜೈಲು, ಮಕ್ಕಳ ಹುಚ್ಚಾಟ, ಮಾಡಿದ ಸಾವಿರಾರು ಕೋಟಿ ಆಸ್ತಿ ಇವೆಲ್ಲವುಗಳಿಂದ ಸೃಷ್ಟಿಯಾದ ವೈಯಕ್ತಿಕ ಇಕ್ಕಟ್ಟು-ಬಿಕ್ಕಟ್ಟಿನಿಂದ ಪಾರಾಗುವುದಕ್ಕೆಂದೇ ಮರಳಿ ಬಿಜೆಪಿ ಸೇರಿದ್ದು. ಹೀಗೆ ಮರಳಿ ಬಂದಿರುವ ಯಡಿಯೂರಪ್ಪ ಬಿಜೆಪಿಯ ವರಿಷ್ಠರಾದ ಮೋದಿ ಶಾ ಜೋಡಿಗೆ ಯೂಸ್ ಅಂಡ್ ಥ್ರೋ ಐಟಂ ಅಷ್ಟೆ! ಈ ಸಲದ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಗೆಲ್ಲಬೇಕೆನ್ನುವುದು ಅವರ ಮೋದಿ-ಶಾ ಜೋಡಿಯ ಉದ್ದೇಶವಾದರೂ ಅದಕ್ಕಿಂತಲೂ ಹೆಚ್ಚಾಗಿ 2019ರ ಎಲೆಕ್ಷನ್ ಮೇಲೂ ಅವರ ಕಣ್ಣಿದೆ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಹೆಚ್ಚು ಸೀಟು ಕಬಳಿಸುವುದಕ್ಕೆಂದೇ ಅವರೆಲ್ಲ ಲೆಕ್ಕಾಚಾರಗಳು ನಡೆಯುತ್ತಿವೆ. ಯಡಿಯೂರಪ್ಪ ಹೊರತಾಗಿ ಕರ್ನಾಟಕದಲ್ಲಿ ಬಿಜೆಪಿಗೆ ಒಂದಿಷ್ಟು ನಿರ್ದಿಷ್ಟ ಮತಗಳನ್ನು ತರಬಲ್ಲ ಯಾವ ನಾಯಕನೂ ಇಲ್ಲವೇ ಇಲ್ಲ.

ಯಡಿಯೂರಪ್ಪರನ್ನು ಹದ್ದುಬಸ್ತಿನಲ್ಲಿ ಇಡಬೇಕೆಂಬ ಉದ್ದೇಶದಿಂದಲೇ ಸಂಘಪರಿವಾರ ಈಶ್ವರಪ್ಪ ಮೂಲಕ ರಾಯಣ್ಣ ಬ್ರಿಗೇಡ್ ಹುಟ್ಟುವಂತೆ ನೋಡಿಕೊಂಡದ್ದು ಈಗ ರಹಸ್ಯವಾಗೇನೂ ಉಳಿದಿಲ್ಲ. ಈಶ್ವರಪ್ಪನಿಗೆ ಶಿವಮೊಗ್ಗದಲ್ಲಿ ಬಿಜೆಪಿ ಟಿಕೆಟ್ ಪಡೆಯಲೋಸುಗವಾದರೂ ಹಿಂದುಳಿದ ನಾಯಕನೆಂದು ಯಡಿಯೂರಪ್ಪನವರೆದುರು ಗುಟರಿಕೆ ಹಾಕಲು ಸಕಾರಣವೊಂದು ಬೇಕಾಗಿತ್ತು. ಇಂಥಾ ಕ್ಷೀಣ ಉದ್ದೇಶ ಇದ್ದುದರಿಂದಲೇ ರಾಯಣ್ಣ ಬ್ರಿಗೇಡು ಸಿಎಂ ಸಿದ್ದರಾಮಯ್ಯನವರ ಹಿಂದುಳಿದ ವರ್ಗದ ಓಟ್ ಬ್ಯಾಂಕನ್ನು ಕಿಂಚಿತ್ತೂ ಅಲುಗಾಡಿಸಲಿಲ್ಲ. ರಾಯಣ್ಣ ಬ್ರಿಗೇಡ್‍ನಿಂದ ಯಡಿಯೂರಪ್ಪರನ್ನು ಬೆದರಿಸುವಲ್ಲಿ ಸಫಲವಾದ, ಯಡಿಯೂರಪ್ಪ ವಿರೋಧಿಗಳು ಬ್ರಿಗೇಡ್ ಅನ್ನು ಹಿನ್ನೆಲೆಗೆ ಸರಿಸಿದರು. ಹಕೀಕತ್ತು ಏನೆಂದರೆ ಇಂತಹದೊಂದು ಒಳಬೇಗುದಿಯನ್ನು ಹುಟ್ಟುಹಾಕಿ ಮೋದಿ-ಶಾ ಜೋಡಿ ಇವತ್ತು ಯಡಿಯೂರಪ್ಪ-ಈಶ್ವರಪ್ಪ ಇಬ್ಬರನ್ನು ತಾವು ಹೇಳಿದಂತೆ ಕೇಳುವ ಕೀಲುಗೊಂಬೆಗಳನ್ನಾಗಿ ಮಾಡಿಕೊಳ್ಳುವಲ್ಲಿಯಂತೂ ಯಶಸ್ವಿಯಾಗಿದ್ದಾರೆ.

ಇವತ್ತು ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿಯೇ ಯಡಿಯೂರಪ್ಪನವರ ಮಾತಿಗೆ ಮೂರು ಕಾಸಿನ ಬೆಲೆ ಇಲ್ಲವಾಗಿದೆ. ಸಮೀಕ್ಷೆಯನ್ನಾಧರಿಸಿ ಟಿಕೆಟ್ ನೀಡಲಾಗುತ್ತದೆ ಎಂಬ ಗಿಳಿಪಾಠವನ್ನೂ ಅಮಿತ್ ಶಾ ಒಪ್ಪಿಸುತ್ತಿದ್ದಾರಾದರೂ ಕರ್ನಾಟಕದಲ್ಲಿ ಬಿಜೆಪಿ ಯಾವ ಕಾರಣಕ್ಕೂ ಪೂರ್ಣಪ್ರಮಾಣದಲ್ಲಿ ಅಧಿಕಾರಕ್ಕೇನು ಬರುವುದಿಲ್ಲವೆಂದರಿತು, ಈ ಹಂತದಲ್ಲೇ ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಾಚರಣೆ ಶುರುವಾಗಿದೆ. ಇದು ಯಡಿಯೂರಪ್ಪನವರ ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ಮರಣ ಶಾಸನವೇ ಆಗಲಿದೆ. ಯಾಕೆಂದರೆ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರನ್ನು ಬಳಸಿಕೊಂಡು ಕೈಬಿಟ್ಟಂತೆಯೇ ಈ ಚುನಾವಣೆಯಲ್ಲೂ ಆಗಲಿದೆ. ಟಿಕೆಟ್ ಹಂಚಿಕೆ ಹಂತದಲ್ಲೇ ಯಡಿಯೂರಪ್ಪನವರನ್ನು ಹೊರಗಿಡುವುದರಿಂದ ರಾಜ್ಯ ಬಿಜೆಪಿ ಮೇಲಿನ ಯಡಿಯೂರಪ್ಪನವರ ಹಿಡಿತ ತಪ್ಪಿಹೋಗಲಿದೆ. ಮೈತ್ರಿ ಸರ್ಕಾರವೇ ಗತಿಯೆಂಬ ಲೆಕ್ಕಾಚಾರದಲ್ಲಿರುವ ಬಿಜೆಪಿ ಪಾಳಯ ಅಧಿಕಾರ ಪಡೆಯುವ ಸಂದರ್ಭ ಬಂದಾಗಲೂ ಸಹಜವಾಗಿಯೇ ಯಡಿಯೂರಪ್ಪ ಮೂಲೆ ಸೇರಬೇಕಾಗುತ್ತದೆ. ಇಂತಹದೊಂದು ಸನ್ನಿವೇಶವನ್ನು ಸೃಷ್ಟಿಸುವುದನ್ನು ಗಮನಿಸಿದರೆ ಯಡಿಯೂರಪ್ಪ ಚುನಾವಣೆ ಮುಗಿಯುವಷ್ಟರಲ್ಲಿ ದುರಂತ ನಾಯಕನಾದಲ್ಲಿ ಅಚ್ಚರಿ ಇಲ್ಲ.

ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮಾಡಬಾರದ್ದು ಮಾಡಿದ್ದೇನೊ ನಿಜ. ಗಣಿ ಲೂಟಿ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕುಟುಂಬ ರಾಜಕಾರಣ ಒಂದಾ.. ಎರಡಾ… ಆದರೆ ಸಂಘಪರಿವಾರದ ಕೈಮೇಲಾಗದಂತೆ ನೋಡಿಕೊಂಡಿದ್ದೇ ಮುಂದೆ ಅವರಿಗೆ ಮುಳುವಾಯ್ತು. ವ್ಯವಸ್ಥಿತವಾಗಿ ಸಿಎಂ ಗಾದಿಯಿಂದ ಕೆಳಗಿಳಿಸಿದ್ದಲ್ಲದೆ, ಪಕ್ಷವನ್ನೇ ತೊರೆಯುವಷ್ಟು ಕಿರಿಕಿರಿ ಕೊಟ್ಟಿದ್ದರು. ಯಡಿಯೂರಪ್ಪನವರನ್ನು ಅವರ ಪಾಪಕೃತ್ಯಗಳ ಸಮೇತ ಹೂತು ಹಾಕುವ ಯತ್ನವನ್ನು ಸ್ವತಃ ಸಂಘ ಪರಿವಾರವೇ ನಡೆಸಿತು. ಯಡಿಯೂರಪ್ಪ ಮೇಲಿರುವ ಭ್ರಷ್ಟಾಚಾರದ ಆರೋಪದ ಹೊರತಾಗಿಯೂ ಹೊಂದಿರುವ ಮಾಸ್‍ಲೀಡರ್ ಎಂಬ ಚಹರೆಯನ್ನು ವೀರಶೈವ ಲಿಂಗಾಯತ ಸಮುದಾಯದ ಮೇಲೆ ಅವರಿಗಿರುವ ಹಿಡಿತವನ್ನು ಬಳಸಿಕೊಳ್ಳುವುದಕ್ಕಷ್ಟೇ ಸಂಘ ಪರಿವಾರ ಮತ್ತು ಮೋದಿ-ಶಾ ಜೋಡಿ ಸೀಮಿತಗೊಂಡಿರುವುದನ್ನು ಗಮನಿಸಿದರೆ ಶಿಕಾರಿಪುರ ಪುರಸಭೆಯಿಂದ ಹೊರಟ ಯಡಿಯೂರಪ್ಪನವರ ರಾಜಕೀಯ ಯಾತ್ರೆ 2018-19 ಎರಡು ಚುನಾವಣೆ ಮುಗಿಯುವಷ್ಟರಲ್ಲಿ ದುರಂತ ಕಾಣುವ ಎಲ್ಲ ಲಕ್ಷಣಗಳೂ ಗೋಚರವಾಗುತ್ತಿವೆ. ಈ ಚುನಾವಣಾ ಪ್ರಚಾರದಲ್ಲಿನ ಯಡಿಯೂರಪ್ಪನವರ ನಿಸ್ಸಹಾಯಕ ಮಾತುಗಳು, ಅವರನ್ನು ಬಲಿಹಾಕಲು ಪಕ್ಷದಲ್ಲೇ ನಡೆಯುತ್ತಿರುವ ಮಸಲತ್ತುಗಳು ಇದಕ್ಕೆ ಸಾಕ್ಷ್ಯ ಒದಗಿಸುತ್ತವೆ.

ದೋಸ್ತಿಗಳ ದುಷ್ಮನಿ

ಒಂದು ಕಾಲದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಒಟ್ಟಿಗೆ ಓಡಾಡಿಕೊಂಡು ಪಕ್ಷ ಕಟ್ಟಿದವರು. ಯಡಿಯೂರಪ್ಪನವರ ನೆರಳಲ್ಲೇ ಬೆಳೆದ ಈಶ್ವರಪ್ಪನ ಇಷ್ಟು ವರ್ಷಗಳ ಗೆಲುವಲ್ಲಿ ಯಡಿಯೂರಪ್ಪನವರ ಪಾತ್ರ ಮುಖ್ಯವಾಗಿತ್ತು. ಆದರೀಗ ಶರಂಪರ ಜಗಳವಾಡುತ್ತಾ ಬೀದಿಗೆ ಬಂದಿದ್ದಾರೆ. ಒಬ್ಬರನ್ನೊಬ್ಬರು ರಾಜಕೀಯವಾಗಿ ಮುಗಿಸುವಷ್ಟು ಜಿದ್ದು ಸಾಕಿಕೊಂಡಿದ್ದಾರೆ.

ಅದೊಂದು ಕಾಲವಿತ್ತು. ಯಡಿಯೂರಪ್ಪ ಶಿಕಾರಿಪುರದಿಂದ ಬಂದು ಶಿವಮೊಗ್ಗ ಬಸ್‍ಸ್ಟಾಂಡ್‍ನಲ್ಲಿ ಇಳಿಯುತ್ತಿದ್ದಂತೆಯೇ ಕಾದು ನಿಂತಿರುತ್ತಿದ್ದ ಈಶ್ವರಪ್ಪ ತಮ್ಮ ಸ್ಕೂಟರ್‍ನಲ್ಲಿ ಕೂರಿಸಿಕೊಂಡು ಎನ್.ಎನ್.ಮಾರ್ಕೆಟ್ ಮೇಲಿದ್ದ ಬಿಜೆಪಿ ಆಫೀಸಿಗೆ ಕರೆದೊಯ್ಯುತ್ತಿದ್ದರು. ವಾಪಾಸ್ ಬಸ್ ಸ್ಟಾಂಡಿಗೆ ಕರೆತಂದು ಬಸ್ ಹತ್ತಿಸುವ ಹೊಣೆಯೂ ಈಶ್ವರಪ್ಪನದ್ದಾಗಿತ್ತು. ಈ ಜೋಡಿ ಡಿ.ಎಚ್. ಶಂಕರಮೂರ್ತಿ ಜೊತೆ ಪಾಲುದಾರಿಕೆಯಲ್ಲಿ ಜಾಮ್ ಪೈಪ್ಸ್ ಹೆಸರಿನ ಸಿಮೆಂಟ್ ಪೈಪ್‍ಗಳ ಫ್ಯಾಕ್ಟರಿಯನ್ನೂ ಮಾಡಿದ್ದರು. ವಿರೋಧ ಪಕ್ಷಗಳ ಪ್ರಭಾವಿ ಮುಖಂಡರಾಗಿದ್ದಾಗ ಪಂಚಾಯತ್ ಇಂಜನಿಯರಿಂಗ್ ವಿಭಾಗದ ಅಧಿಕಾರಿಗಳ ಮೂಲಕ ತಮ್ಮ ಪೈಪ್‍ಗಳನ್ನು ಖರೀದಿಸುವಂತೆ ಮಾಡಿ ಭಾರೀ ಲಾಭವನ್ನು ಮಾಡಿಕೊಂಡವರು. ಅಂದಹಾಗೆ, ಜಾಮ್ ಎಂದರೆ ಈ ಮೂವರ ಪತ್ನಿಯರ ಮೊದಲಕ್ಷರ.

ಹೀಗಿದ್ದವರು ಈಗ ಒಬ್ಬರ ಮುಖ ಮತ್ತೊಬ್ಬರು ನೋಡದ ಸ್ಥಿತಿಯಲ್ಲಿದ್ದಾರೆ. ಈಶ್ವರಪ್ಪರಿಗೆ ಟಿಕೆಟ್ ತಪ್ಪಿಸಲು ಯಡಿಯೂರಪ್ಪ ಕಸರತ್ತು ನಡೆಸಿದರೆ, ಶಂಕರಮೂರ್ತಿ ಮಗನಿಗೆ ಎಂಎಲ್‍ಸಿ ಸೀಟು ಈಶ್ವರಪ್ಪ ಹೆಣಗಾಡುತ್ತಿದ್ದಾರೆ. ಯಡಿಯೂರಪ್ಪನೇ ಮತ್ತೆ ಮುಖ್ಯಮಂತ್ರಿಯಾಗುವುದಾದರೆ ಬಿಜೆಪಿ ರಾಜ್ಯದಲ್ಲಿ ಗೆಲ್ಲುವುದೇ ಬೇಡ ಎನ್ನುವ ಆರೆಸ್ಸೆಸ್ ಅಜೆಂಡಾಕ್ಕೆ ಈಶ್ವರಪ್ಪ ರಾಯಣ್ಣ ಬ್ರಿಗೇಡಿನ ಸೋಪಾನ ಹಾಕುತ್ತಾರೆ!

ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಈಶ್ವರಪ್ಪನಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ಕೊಡದೆ ಏಟು ಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಅನಂತ್‍ಕುಮಾರ್ ಜೊತೆ ಸೇರಿ ಈಶ್ವರಪ್ಪ, ಅಡ್ವಾಣಿಗೆ ದೂರು ಹೇಳಿ ಕಾಟ ಕೊಟ್ಟಿದ್ದುಂಟು. ಕಳೆದ ಚುನಾವಣೆಯಲ್ಲಿ ಈಶ್ವರಪ್ಪ ಮೂರನೇ ಕುಸಿದದ್ದು ಕೆಜೆಪಿಯಿಂದ ಕಣಕ್ಕಿಳಿದಿದ್ದ ಎಸ್.ರುದ್ರೇಗೌಡರಿಂದಾಗಿ. ಇವರಿಬ್ಬರ ಕಿತ್ತಾಟದಲ್ಲಿ ಗೆದ್ದು ಬಂದ ಕಾಂಗ್ರೆಸ್‍ನ ಕೆ.ಬಿ. ಪ್ರಸನ್ನಕುಮಾರ್ ಇವತ್ತು ಯಡಿಯೂರಪ್ಪ ಈಶ್ವರಪ್ಪ ಇಬ್ಬರನ್ನು ಎದುರಿಸಿ ಮತ್ತೆ ಗೆಲ್ಲುವ ಪ್ರಾಬಲ್ಯ ಸಾಧಿಸಿದ್ದಾರೆ.

ಈ ಬಾರಿ ಈಶ್ವರಪ್ಪರಿಗೆ ಬಿಜೆಪಿ ಟಿಕೆಟ್ ಇಲ್ಲ, ಎಸ್. ರುದ್ರೇಗೌಡರೇ ಬಿಜೆಪಿ ಅಭ್ಯರ್ಥಿ ಎಂಬುದಾಗಿ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದಾಗಲೇ ಗುಲ್ಲೆದ್ದಿತ್ತು. ಬಿಜೆಪಿ ಟಿಕೆಟ್ ಕೈತಪ್ಪುವ ಆತಂಕದಲ್ಲಿ ಯಡ್ಡಿಯೂರಪ್ಪನಿಗೆ ಎದಿರೇಟು ಕೊಡುವ ಸಲುವಾಗಿಯೇ ಈಶ್ವರಪ್ಪ ಪರಿವಾರದ ಕುಮ್ಮಕ್ಕಿನಿಂದ ರಾಯಣ್ಣ ಬ್ರಿಗೇಡ್ ಮಾಡಿದ್ರು. ಕೊನೆಗೆ ರಾಜಿಯಾಗುವ ಹಂತದಲ್ಲಿ ರಾಯಣ್ಣ ಬ್ರಿಗೇಡ್ ಕೈಬಿಡಬೇಕಾದರೆ ಶಿವಮೊಗ್ಗದಲ್ಲಿ ಈಶ್ವರಪ್ಪರಿಗೆ ಟಿಕೆಟ್ ಕೊಡಬೇಕು ಅಂತ ತೀರ್ಮಾನವಾಗಿತ್ತು. ಯಡಿಯೂರಪ್ಪ ಮೊನ್ನೆಮೊನ್ನೆವರೆಗೂ ರುದ್ರೇಗೌಡರ ಹೆಸರನ್ನು ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಎಂಬುದಾಗಿ ಚಾಲನೆಯಲ್ಲಿಟ್ಟಿದ್ದರು. ರಾಯಣ್ಣ ಬ್ರಿಗೇಡ್ ಎಸ್. ರುದ್ರೇಗೌಡರ ಹೆಸರು ಚಲಾವಣೆ ಪಡೆದದ್ದು ಎಲ್ಲವೂ ಇವರಿಬ್ಬರ ನಡುವಿನ ಮತ್ತು ಸಂಘಪರಿವಾರ ಹಾಗು ಯಡಿಯೂರಪ್ಪನವರ ನಡುವಿನ ಕೊಡು-ಕೊಳ್ಳುವ ಕಿತ್ತಾಟ ಭಾಗವಾಗಿಯೇ ನಡೆಯುತ್ತಿರುವುದು ಎಂಬುದು ಬಹುಜನರಿಗೆ ತಿಳಿದಿಲ್ಲ.

@ ಈಶ್ವರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...