Homeಅಂಕಣಗಳುಸೆಕ್ಯುಲರಿಸಂ: ಕಿವುಡರ ನಡುವಿನ ವಾಗ್ವಾದವೆ?

ಸೆಕ್ಯುಲರಿಸಂ: ಕಿವುಡರ ನಡುವಿನ ವಾಗ್ವಾದವೆ?

- Advertisement -
- Advertisement -

ನಮ್ಮ ದೇಶದಲ್ಲಿ ನಡೆಯುವ ಬಹುಪಾಲು ಚರ್ಚೆಗಳು ಕಿವುಡರ ನಡುವೆ ನಡೆಯುವ ವಾಗ್ವಾದಗಳೇ ಆಗಿವೆ. ನಮ್ಮಲ್ಲಿ ಸಹಜವಾಗಿ ಚರ್ಚೆಗಳು ಯಾವಾಗಲು ಏರ್ಪಡುವುದು ಎದುರಾಳಿಗಳ ನಡುವೆ ಇಲ್ಲವೆ ಶತ್ರುಗಳ ನಡುವೆ. ಈ ಚರ್ಚೆಯ ಯಾವ ಹಂತದಲ್ಲೂ ಪರಸ್ಪರರು ಒಂದು ಅಂಶವನ್ನೂ ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ ಇಲ್ಲವೇ ಚರ್ಚೆ ಎಂದು ಆರಂಭವಾಗುವ ಜಗಳದಲ್ಲಿ ಪರಸ್ಪರರನ್ನು ಸೋಲಿಸಲು ಯಾವಾಗಲೂ ಪ್ರಯತ್ನಿಸುತ್ತಿರುತ್ತಾರೆ. ಗೆಳೆಯರೆ, ಸಾರ್ವಜನಿಕವಾಗಿ ಪರಸ್ಪರ ಯಾವತ್ತೂ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಬೇಡಿ. ಏಕೆಂದರೆ ಟಿವಿಯಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿ ಮಾತನಾಡಲು ಯಾವ ಸ್ವಾರಸ್ಯಕರ ವಿಷಯಗಳಿಲ್ಲ, ಯಾವುದೇ ನಿರ್ದಿಷ್ಟ ವಿಷಯದ ಮೇಲೆ ತರ್ಕಬದ್ಧ ವಾದ ಮಂಡನೆಯಾಗುವುದಿಲ್ಲ. ಅಲ್ಲಿರುವುದು ಯುದ್ಧೋಪಾದಿಯ ವಿಪರೀತ ಗದ್ದಲ ಮಾತ್ರ.

ಈ ದೇಶದಲ್ಲಿ ಸೆಕ್ಯುಲರಿಸವiನ್ನು ಸೈದ್ಧಾಂತಿಕವಾಗಿ ಗ್ರಹಿಸುವ ಮತ್ತು ಆಚರಣೆಗೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಚರ್ಚೆಗಳು ನಡೆಯುವ ಅಗತ್ಯವಿದೆ. ಈ ಚರ್ಚೆ ಅಷ್ಟು ಅಗತ್ಯ ಯಾಕೆಂದರೆ, ಸೆಕ್ಯುಲರಿಸಮ್ ಈ ಗಣರಾಜ್ಯದ ಪವಿತ್ರ ತತ್ವ. ಈ ಕಾರಣಕ್ಕಾಗಿಯೇ 1975ರಲ್ಲಿ ಸೆಕ್ಯುಲರಿಸಮ್‍ನ್ನು ನಮ್ಮ ಸಂವಿಧಾನದ ಪೂರ್ವಪೀಠಿಕೆಯಲ್ಲಿ ಸೇರಿಸಲಾಗಿದೆ. ನಮ್ಮ ಸಂವಿಧಾನದ ಪ್ರಾಣಸ್ವರೂಪಿ ಮೂಲ ಆಶಯಗಳಲ್ಲಿ ಸೆಕ್ಯುಲರಿಸಮ್ ಅತ್ಯಂತ ಪ್ರಮುಖವಾದದ್ದು. ಸೆಕ್ಯುಲರ್ ಇಲ್ಲದ ಇಂಡಿಯಾ ನಮ್ಮ ಆಯ್ಕೆಯಾಗಬಾರದು. ನಮಗೆ ಸೆಕ್ಯುಲರ್ ಇಂಡಿಯಾದ ಅಗತ್ಯವಿದೆ, ಇಲ್ಲದಿದ್ದರೆ ಇಂಡಿಯಾ ಎಂಬ ದೇಶ ಇರಲು ಸಾಧ್ಯವಿಲ್ಲ. ಸೆಕ್ಯುಲರಿಸಮ್ ಎಂಬ ತತ್ವವನ್ನು ಆಚರಿಸುವ ಸಂದರ್ಭದಲ್ಲಿ ನಾವು ತೀವ್ರವಾದ ವೈರುಧ್ಯಗಳನ್ನು ಎದುರಿಸುತ್ತಾ ಬಂದಿದ್ದೇವೆ. ಏಕೆಂದರೆ, ಸೆಕ್ಯುಲರಿಸಮ್‍ನ ಗ್ರಹಿಕೆ ಮತ್ತು ಆಚರಣೆಗಳು ಎರಡು ಮೂಲ ನ್ಯೂನತೆಗಳಿಂದ ಬಳಲುತ್ತಿವೆ. ಈ ವಿಷಯದ ಕುರಿತು ಮುಕ್ತವಾಗಿ ಮತ್ತು ಗಟ್ಟಿಯಾಗಿ ಮಾತನಾಡುವ ಕಾಲ ಈಗ ಬಂದಿದೆ. ಈ ಮೂಲ ನ್ಯೂನತೆಗಳನ್ನು ಪ್ರಧಾನವಾಗಿ ರಾಜಕೀಯ ಸೆಕ್ಯುಲರಿಸಮ್ ಮತ್ತು ಬೌದ್ಧಿಕ ಸೆಕ್ಯುಲರಿಸಮ್ ಎಂದು ನಾವು ನೋಡೋಣ.

ಮೊದಲ ಸಮಸ್ಯೆ ರಾಜಕೀಯ ಸೆಕ್ಯುಲರಿಸಮ್‍ನದು. ರಾಜಕಾರಣದಲ್ಲಿ ಸೆಕ್ಯುಲರಿಸಮ್ ಅಸಂಗತವಾಗಿ, ಪಕ್ಷಪಾತದ ನೆಲೆಯಲ್ಲಿ ಮತ್ತು ಸಮಯಸಾಧಕ ಹುನ್ನಾರಗಳ ಮೂಲಕ ಆಚರಣೆಗೊಳಪಡುತ್ತಿದೆ. ಇದು ಹೇಗೆ ಆರಂಭವಾಯಿತೆಂದರೆ, ಸಹಜವಾಗಿಯೇ ಇರುವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯು ಪ್ರಧಾನ ಆದ್ಯತೆಯಾಯಿತು, ಬದ್ಧತೆಯು ಕಾಲಾನಂತರ ಅಲ್ಪಸಂಖ್ಯಾತ ಗಣ್ಯರಿಗೆ ಒಂದು ಸಿನಿಕತನದ ಸಂಗತಿಯಾಗಿ ಪರಿಣಮಿಸಿತು. ಬಹುಸಂಖ್ಯಾತರ ಕೋಮುವಾದ ಮತ್ತು ಅಲ್ಪಸಂಖ್ಯಾತರ ಕೋಮುವಾದಗಳ ನಡುವಿನ ವ್ಯತ್ಯಾಸಗಳನ್ನು ನ್ಯಾಯಬದ್ಧಗೊಳಿಸಲು ಆರಂಭವಾದಾಗಿನಿಂದ ನಾವು ಪ್ರಗತಿ ವಿರೋಧಿಗಳಾಗುತ್ತಾ ಹೋದೆವು. ಇದು ಹೀಗೇ ಮುಂದುವರೆದು, ಮುಸ್ಲಿಮ್ ಅಲ್ಪಸಂಖ್ಯಾತರ ಕೋಮು ಧ್ರುವೀಕರಣಕ್ಕೂ ಇದು ಕಾರಣವಾಯಿತು.

ಹಿಂದೂ ಸಾಮಾಜಿಕ ಶ್ರೇಣೀಕರಣ ವ್ಯವಸ್ಥೆಯಲ್ಲಿನ ಅಪದ್ಧಗಳ ಕುರಿತು ಮುಕ್ತ ಚರ್ಚೆ ನಡೆಯುತ್ತಿರುವಾಗ ಮತ್ತು ಅದರಲ್ಲಿರುವ ಒಪ್ಪಲಾರದಂತಹ ಆಚರಣೆಗಳನ್ನು ವಿಮರ್ಶೆಗೊಳಪಡಿಸುವ ಸಂದರ್ಭದಲ್ಲಿ ಬೇರೆ ಧರ್ಮಗಳ ಸಾಮಾಜಿಕ ವ್ಯವಸ್ಥೆ ಮತ್ತು ಧಾರ್ಮಿಕ ಆಚರಣೆಗಳ ಕುರಿತು ನಾವು ಮೌನ ವಹಿಸಿದೆವು. ಬಹುಸಂಖ್ಯಾತ ಹಿಂದು ಸಂಘಟನೆಗಳ ಹಿಂಸೆ ಮತ್ತು ದೌರ್ಜನ್ಯಗಳನ್ನು ಗುರಿಯಾಗಿಸಿಕೊಂಡು ವಿಮರ್ಶೆ ಮಾಡುವಾಗ, ಚರ್ಚ್ ಅಥವಾ ಎಸ್‍ಜಿಪಿಸಿಯಂತಹ ಸಂಘಟನೆಗಳ ಅದೇ ತರಹದ ದೌರ್ಜನ್ಯಗಳನ್ನು ವಿಮರ್ಶೆಗೊಳಪಡಿಸಲಿಲ್ಲ.

ಅಲ್ಪಸಂಖ್ಯಾತರ ಓಲೈಕೆಯು ತಪ್ಪು ಎನ್ನುತ್ತಿರುವಾಗಲೆ, ಸಾಮಾನ್ಯ ಮುಸ್ಲಿಮ್ ಯಾವತ್ತೂ ಹಿಂದುಳಿಯುತ್ತಲೇ ಹೋದದ್ದನ್ನು ಮತ್ತು ಅವನು ಹಿಂದುಳಿಯಲು ಕಾರಣವಾದ ಕ್ಷೇತ್ರಗಳನ್ನು ನೋಡಿ ನಾವು ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿದ್ದೆವು. ಸಾಮಾನ್ಯ ಮುಸ್ಲಿಮ್ ಒಬ್ಬ ಹಿಂದುಳಿದಿದ್ದಾನೆ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲು ನಾವು ಕಷ್ಟಪಡಬೇಕಿಲ್ಲ. ಇದೇ ಸಂದರ್ಭದಲ್ಲಿ ಮುಸ್ಲಿಂ ಮೌಲ್ವಿಗಳ ಓಲೈಕೆಯ ರಾಜಕಾರಣ ನಡೆದೇ ಇಲ್ಲ ಎಂಬುದನ್ನು ನಂಬಲು ಕಷ್ಟ. ಬಿಜೆಪಿ ಮತ್ತು ಆರೆಸ್ಸೆಸ್‍ಗಳು ಮುಸ್ಲಿಮರನ್ನು ಕೇವಲ `ಮುಸ್ಲಿಮೀಕರಣ’ಕ್ಕೆ ಸೀಮಿತಗೊಳಿಸಲು ಬಯಸಿದರೆ, `ಸೆಕ್ಯುಲರ್’ ಪಕ್ಷಗಳು ಎಂದು ಕರೆಸಿಕೊಳ್ಳುತ್ತಿರುವ ಪಕ್ಷಗಳೂ ಅದನ್ನೇ ಮಾಡಿದವು. ಕಾಲಾನಂತರ `ಸೆಕ್ಯುಲರ್’ ಪಕ್ಷಗಳು ಮುಸ್ಲಿಮರ ಹೊರಗುಳಿದಿರುವಿಕೆಯನ್ನು, ಅವರ ರಕ್ಷಣೆಯನ್ನು, ಅವರ ಧಾರ್ಮಿಕ ಆಸ್ಮಿತೆಯನ್ನು ಎತ್ತಿ ಹಿಡಿದು ಇವರ ಓಟುಗಳನ್ನು ಮಾತ್ರ ಗಳಿಸಲು ಲೆಕ್ಕಾಚಾರ ಹಾಕಿದವು.

ಸಾರ್ವಜನಿಕ ಸೇವೆಗಳಲ್ಲಿ ಮತ್ತು ಸಾರ್ವಜನಿಕ ಬದುಕಿನಲ್ಲಿ ಸಾಮಾನ್ಯ ಭಾರತೀಯನಿಗೆ ಲಭ್ಯವಾಗುವ ಮಾನ್ಯತೆಯನ್ನು ದಕ್ಕಿಸಿಕೊಳ್ಳುವ ಸಲುವಾಗಿ ಭಾರತದ ಸೆಕ್ಯುಲರ್ ರಾಜಕಾರಣ ಮುಸ್ಲಿಮರನ್ನು ಸಂಘಟಿಸಿದ್ದು ಅತ್ಯಂತ ವಿರಳ. ಸೆಕ್ಯುಲರ್ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿನ ಹತಭಾಗ್ಯ ಮುಸ್ಲಿಮರಿಗೆ ಸಿಕ್ಕಿರುವ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸೇವೆಗಳು, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗಿಂತ ಉತ್ತಮವಾಗೇನೂ ಇಲ್ಲ. ಮತಬ್ಯಾಂಕ್ ರಾಜಕಾರಣದ ಕುರಿತು ನಾವು ಕೇವಲ ಬಿಜೆಪಿಯನ್ನು ಮಾತ್ರ ಗುರಿ ಮಾಡುವಂತಿಲ್ಲ. ಸೆಕ್ಯುಲರ್ ಪಕ್ಷಗಳು ಅಲ್ಪಸಂಖ್ಯಾತರನ್ನು, ಅದರಲ್ಲೂ ಮುಸ್ಲಿಮರ ಕಲ್ಯಾಣಕ್ಕಿಂತ ಅವರನ್ನು ಭಯದ ವಾತಾವರಣದಲ್ಲಿಯೇ ಗುಲಾಮರಂತೆ ಇಟ್ಟು ಅವರನ್ನು ಯಾವತ್ತೂ ಮತ ಬ್ಯಾಂಕ್‍ನಂತೆ ಮಾತ್ರ ನೋಡುತ್ತಾ ಬಂದಿವೆ. ಸೆಕ್ಯುಲರ್ ರಾಜಕಾರಣದ ಟ್ರ್ಯಾಕ್ ರೆಕಾರ್ಡನ್ನು ನೋಡಿದರೆ ಒಂದು ಸಣ್ಣ ಆಶ್ಚರ್ಯ ನಮಗೆದುರಾಗುತ್ತದೆ. ಸೆಕ್ಯುಲರ್ ರಾಜಕಾರಣ ಅಂದರೆ ಏನೂ ಅಲ್ಲ ಅದು `ಅಲ್ಪಸಂಖ್ಯಾತವಾದ’ವನ್ನು ಪ್ರತಿಪಾದಿಸುತ್ತಿದೆ ಎಂದು ಪ್ರಚಾರ ಮಾಡುತ್ತಲೇ ಸಾಮಾನ್ಯ ಹಿಂದುಗಳನ್ನು ಸಂಘ ಪರಿವಾರ ಧ್ರುವೀಕರಿಸುತ್ತಿದೆ.

ಬೌದ್ಧಿಕ ಸೆಕ್ಯುಲರಿಸಮ್‍ನ ಸಮಸ್ಯೆ ಏನೆಂದರೆ, ಅದು ನಿರಾಶೆಯ ಹಂತ ತಲುಪಿದೆ. ಸೆಕ್ಯುಲರ್ ಬುದ್ಧಿಜೀವಿಗಳು ಸಾಮಾನ್ಯ ಜನರ ಭಾಷೆ, ನಂಬಿಕೆ ಮತ್ತು ಸಂಪ್ರದಾಯಗಳಿಂದ ದೂರ ಸರಿದಿದ್ದಾರೆ. ಸೆಕ್ಯುಲರಿಸಮ್ ಕುರಿತ ಬಹುಪಾಲು ಚರ್ಚೆಗಳು ನಡೆಯುವುದು ಸಾಮಾನ್ಯವಾಗಿ ಇಂಗ್ಲಿಷ್ ಭಾಷೆಯಲ್ಲಿ. ಸೆಕ್ಯುಲರಿಸಮ್‍ನ್ನು ಸಂಕೇತಿಸುವ ಒಂದೇ ಒಂದು ಭಾರತೀಯ ಹೆಸರು ನಮ್ಮ ಬಳಿ ಇಲ್ಲ. ಸೆಕ್ಯುಲರಿಸಮ್‍ನ್ನು ಅಧಿಕೃತವಾಗಿ `ಧರ್ಮನಿರಪೇಕ್ಷ’ ಎಂದು ಭಾಷಾಂತರಿಸಲಾಗಿದೆ. `ಧರ್ಮನಿರಪೇಕ್ಷ’ ಎಂಬುದೂ ಸಹ ಅಪಾರ್ಥಕ್ಕೆ ಒಳಗಾಗುತ್ತ ಬಂದಿದೆ, ಜೊತೆಗೆ `ಧರ್ಮನಿರಪೇಕ್ಷ’ ಎಂಬ ಪದ ಸಾಂಸ್ಕೃತಿಕವಾಗಿ ಬರಿದಾಗಿದೆ ಮತ್ತು ಬಳಕೆಯಲ್ಲಿ ನಕಾರಾತ್ಮಕವಾಗಿದೆ.

ಸೆಕ್ಯುಲರ್ ಸಂಕಥನ ಯಾವತ್ತೂ ಗುರಿಯಾಗಿಸಿಕೊಳ್ಳುವುದು ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಕೇತಗಳಾದ ಬುರ್ಖಾ ಮತ್ತು ತಿಲಕಗಳನ್ನು. ಸೆಕ್ಯುಲರಿಸಮ್ ಮತ್ತು ಆಧುನಿಕ ಶಿಕ್ಷಣಗಳು ನಮ್ಮ ಧಾರ್ಮಿಕ ಪರಂಪರೆಯ ಬಗ್ಗೆ ಒಂದು ಸಾಮುದಾಯಿಕ ಅನಕ್ಷರತೆಯನ್ನು ನಮ್ಮಲ್ಲಿ ಹುಟ್ಟುಹಾಕಿವೆ. ಇದರಿಂದಾಗಿ ಸೆಕ್ಯುಲರಿಸಮ್ ಎಂದರೆ ಅದು ನಮ್ಮದಲ್ಲದ ಬೇರೆ ಯಾವುದೋ ಅನ್ಯ ನಂಬಿಕೆಗಳ ಗುಚ್ಛ, ಅದು ಪಶ್ಚಿಮದ ನಾಸ್ತಿಕವಾದಕ್ಕೆ ಸರಿಹೊಂದುತ್ತದೆ, ಇದು ನಮ್ಮ ಸಂಸ್ಕøತಿ ಮತ್ತು ಪರಂಪರೆಗಳ ಜೊತೆ ಬೆರೆಯಲಾರದ ಸಂಗತಿ ಎಂಬ ನಂಬಿಕೆ ಜನಪ್ರಿಯವಾಗಿದೆ. ಈ ಸಂಕಥನವನ್ನು ಕಳೆದೆರಡು ವರ್ಷಗಳಿಂದ ಕಟುವಾಗಿ ವಿಮರ್ಶಿಸುವಾಗ ಇದರ ಸಮರ್ಥಕರು ಕೆಲವರಾದರೂ ಇರುವುದು ಗೋಚರಿಸುತ್ತಿದೆ.

ರಾಮಚಂದ್ರ ಗುಹಾ

ಈ ಕಾರಣದಿಂದ ಇತ್ತೀಚೆಗೆ ಅಲ್ಪಸಂಖ್ಯಾತರ ಕುರಿತ ವಾಗ್ವಾದಗಳಲ್ಲಿ ಕೆಲವು ಆಶಾದಾಯಕ ಬೆಳವಣಿಗೆಗಳು ಸಂಭವಿಸುತ್ತಿವೆ. ಕೆಲವು ಸೆಕ್ಯುಲರ್ ಬುದ್ಧಿಜೀವಿಗಳು ಮತ್ತು ಆಕ್ಟಿವಿಸ್ಟ್‍ಗಳು ಸೆಕ್ಯುಲರಿಸಮ್ ಕುರಿತ ಚರ್ವಿತಚರ್ವಣ ಚರ್ಚೆಗೆ ತಮ್ಮ ಭಿನ್ನಾಭಿಪ್ರಾಯಗಳನ್ನು ದಾಖಲಿಸುತ್ತಿದ್ದಾರೆ. ಸಾಮಾಜಿಕ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಮತ್ತು ಖ್ಯಾತ ವಿದ್ವಾಂಸರಾದ ಹರ್ಷ ಮಂದರ್ ಅವರು, ಸೋನಿಯಾ ಗಾಂಧಿ `ಕಾಂಗ್ರೆಸ್ ಪಕ್ಷ ಸೋತದ್ದಕ್ಕೆ ಕಾರಣ ಅದು ಮುಸ್ಲಿಮರ ಪಕ್ಷವೆಂದು ಬಿಂಬಿಸಲ್ಪಟ್ಟಿತು’ ಎಂಬ ಅಭಿಪ್ರಾಯವನ್ನು ಒಪ್ಪಲಿಲ್ಲ. ಹರ್ಷಮಂದರ್ ಅವರು ಸೋನಿಯಾ ಗಾಂಧಿಯವರ ಹೇಳಿಕೆಯನ್ನು, ಮುಸ್ಲಿಮರು ಬುರ್ಖ ಮತ್ತು ಟೋಪಿಗಳನ್ನು ತೆಗೆದಿಟ್ಟು ಬನ್ನಿ ಎನ್ನುವ ಸಂಘಿಗಳ ಹೇಳಿಕೆಗೆ ಹೋಲಿಸಿದರು. ಮುಸ್ಲಿಮರು ಇಂದು ರಾಜಕೀಯವಾಗಿ ಅನಾಥರಾಗಿದ್ದಾರೆ ಎಂಬುದು ಹರ್ಷ ಮಂದರ್ ಅಭಿಪ್ರಾಯ. ಆದರೆ, ಹರ್ಬಂದ್ ಮುಖಿಯಾ ಪ್ರಕಾರ ಈ ಸಂಕುಚಿತ ಮನಸ್ಥಿತಿಗೆ ಎರಡು ರಾಷ್ಟ್ರಗಳ ಸಿದ್ಧಾಂತದ ಪ್ರತಿಪಾದಕರಾದ ವಿ.ಡಿ ಸಾವರ್ಕರ್ ಮತ್ತು ಎಂ.ಎ. ಜಿನ್ಹಾ ಕಾರಣ ಎನ್ನುತ್ತಾರೆ. ಆದರೆ ಈ ಇಬ್ಬರೂ ಮಹನೀಯರು ತಮ್ಮ ತಮ್ಮ ಹಾದಿಗಳನ್ನು ಹಿಡಿದು ಕಣ್ಮರೆಯಾದರು, ಆದರೆ ರಾಷ್ಟ್ರ ವಿಭಜನೆಯ ಫಲವಾಗಿ ರೂಪುಗೊಂಡ ಸಂಕುಚಿತ ಮನಸ್ಥಿತಿ ಇನ್ನೂ ಬದುಕಿದೆ ಮತ್ತು ಹೆಚ್ಚು ಹೆಚ್ಚು ಶಕ್ತಿಶಾಲಿಯಾಗುತ್ತಿದೆ.

ಇರೇನಾ ಅಕ್ಬರ್

ಪ್ರಖ್ಯಾತ ಉದಾರವಾದಿ ಚಿಂತಕ ರಾಮಚಂದ್ರ ಗುಹ, ಮುಸ್ಲಿಮರು ಬುರ್ಖ ಬೇಕೇ ಬೇಕು ಎಂದು ಒತ್ತಾಯಿಸುತ್ತಿರುವುದು ಅವರ ಹಿಂದುಳಿದಿರುವಿಕೆಯನ್ನು ಸೂಚಿಸುತ್ತಿದೆ ಎನ್ನುತ್ತಾರೆ. ಈ ವಾದವನ್ನು ಯಾವ ಉದಾರವಾದಿ ಚಿಂತಕರು ಬೆಂಬಲಿಸಬಾರದು ಎನ್ನುತ್ತಾರೆ. ಸುಹಾಸ್ ಪಳ್ಶೀಕರ್, ಇರೇನಾ ಅಕ್ಬರ್ ಮತ್ತು ಮುಕುಲ್ ಕೇಶವನ್ ತರಹದ ಚಿಂತಕರು ಈ ವಾದವನ್ನು ಬೆಂಬಲಿಸಿದ್ದಾರೆ. ಬುರ್ಖ ಇರಬೇಕೆಂದು ತಹತಹಿಸುವ ಮತ್ತು ಮುಸ್ಲಿಮರ ಹೆಣ್ಣುಮಕ್ಕಳ ರಕ್ಷಕರಂತೆ ನಟಿಸುವ ಈ ಜನ ಭವಿಷ್ಯದಲ್ಲಿ ಮುಸ್ಲಿಮ್ ಸಮುದಾಯದ ನಾಶಕ್ಕೆ ಕಾರಣರಾಗುತ್ತಾರೆ ಎಂದು ಈ ಚಿಂತಕರು ಕಿಡಿಕಾರಿದ್ದಾರೆ. ಮತ್ತೊಂದೆಡೆ, ಆಧುನಿಕ ಜಗತ್ತಿನಲ್ಲಿ ಮುಸ್ಲಿಮ್ ಹೆಣ್ಣುಮಕ್ಕಳು ಬುರ್ಖ ಧರಿಸುವುದು ಪ್ರಚ್ಛನ್ನ ಸನಾನತೆ ಎನ್ನುತ್ತಾರೆ. ಮುಸ್ಲಿಮರ ಚರ್ವಿತಚರ್ವಣ ಚಹರೆಯ ಪ್ರಶ್ನೆಯನ್ನು ಎರಡೂ ಪಕ್ಷಗಳು ಬಳಸಿಕೊಳ್ಳುತ್ತಿವೆ.

ಹರ್ಷ ಮಂದರ್

ಇರೇನ್ ಅಕ್ಬರ್ ರಾಮಚಂದ್ರ ಗುಹ ಅವರ ವಾದಕ್ಕೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತ, ವಿಮೋಚನೆಯನ್ನು, ಸ್ವಾತಂತ್ರ್ಯವನ್ನು ಹೊರಗಿನಿಂದ ಹೇರಲ್ಪಡಲಾಗುವುದಿಲ್ಲ. ಹಲವು ಸಮಸ್ಯೆಗಳಿಂದ ಸುತ್ತುವರೆಯಲ್ಪಟ್ಟ, ಸಾಂಸ್ಕೃತಿಕವಾಗಿ ಏಕಾಂಗಿಗಳಾಗಿರುವ ಅಲ್ಪಸಂಖ್ಯಾತರಿಗೆ ಬುರ್ಖ ಒಂದು ಸಂಕೇತ ಎನ್ನುತ್ತಾರೆ. ಅಲ್ಪಸಂಖ್ಯಾತರು ಇಂದು ಅನೇಕ ತಲ್ಲಣಗಳ ಮಧ್ಯೆ ಬದುಕುತ್ತಿರುವಾಗ ನನ್ನ ಈ ಚರ್ಚೆ ಏತಕ್ಕಾಗಿ ಎಂದು ಕೆಲವು ಸೆಕ್ಯುಲರ್ ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರು ಪ್ರಶ್ನಿಸಬಹುದು. ಇದನ್ನು ನಾನು ಒಪ್ಪುವುದಿಲ್ಲ. ಸಾರ್ವಜನಿಕ ಬದುಕಿನ ಆಳವಾದ ಆತ್ಮಾವಲೋಕನಕ್ಕೆ ಕಠಿಣ ಸಂದರ್ಭಗಳೇ ಸೂಕ್ತ ಎಂದು ಭಾವಿಸುತ್ತೇನೆ. ನಾನು ಒಂದು ಸಂಗತಿಯನ್ನು ಸ್ಪಷ್ಟಪಡಿಸುವೆ, ನನ್ನ ವಾದಮಂಡನೆ ಸೆಕ್ಯುಲರಿಸಮ್‍ನ ವಿರುದ್ಧವಿಲ್ಲ. ಭಾರತ ಗಣರಾಜ್ಯವಾಗುವುದಕ್ಕಿಂತ ಪೂರ್ವದಲ್ಲಿಯೇ ಇಲ್ಲಿ ಸೆಕ್ಯುಲರ್ ಸಮಾಜವಿತ್ತು. ನನ್ನ ವಾದ ಇಷ್ಟೆ, ಸೆಕ್ಯುಲರಿಸಮ್ ಎಂದು ಯಾವುದನ್ನು ನಾವು ಕರೆಯುತ್ತೇವೆಯೋ ಅದರ ಸೈದ್ಧಾಂತಿಕ ವಿಶ್ಲೇಷಣೆ ಮತ್ತು ಆಚರಣೆಗಳ ಕುರಿತು ನಾವು ಮರು ಆಲೋಚಿಸುವುದು ಸೂಕ್ತ. ನಮಗೆ ಬದ್ಧತೆಯುಳ್ಳ, ತತ್ಷನಿಷ್ಠವಾದ ರಾಜಕೀಯ ಸೆಕ್ಯುಲರಿಸಮ್‍ನ ಅಗತ್ಯವಿದೆ. ನಮ್ಮ ಬಹುಧರ್ಮೀಯ ಪರಂಪರೆಯೊಳಗೆ ಬೇರು ಬಿಟ್ಟ ಬೌದ್ಧಿಕ ಸೆಕ್ಯುಲರಿಸಮ್‍ನ ಅಗತ್ಯ ನಮಗಿದೆ. ಈ ನಿಟ್ಟಿನಲ್ಲಿ ಬಹುಶಃ ಗಾಂಧೀಜಿಯಿಂದ ನಾವು ಇನ್ನೂ ಕಲಿಯಬೇಕಿದೆ.

ಅನುವಾದ
ಎ.ಎಸ್. ಪ್ರಭಾಕರ
ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...