Homeಅಂಕಣಗಳುಬೆಂಗಾವಲೂರು ಎಂಬೋ ದಂಡು ಪ್ರದೇಶದ ಪಾಳೇಗಾರರಲ್ಲಿ ಬಡಪಾಯಿ ಕನ್ನಡಿಗರ ಬಿನ್ನವತ್ತಲೆ

ಬೆಂಗಾವಲೂರು ಎಂಬೋ ದಂಡು ಪ್ರದೇಶದ ಪಾಳೇಗಾರರಲ್ಲಿ ಬಡಪಾಯಿ ಕನ್ನಡಿಗರ ಬಿನ್ನವತ್ತಲೆ

- Advertisement -
- Advertisement -

ಮಾನ್ಯರೇ,

ತಾವು ನಮ್ಮ ವೋಟು ಪಡೆದು ಟಾಟಾ ಬೈ ಬೈ ಹೇಳಿ ನಮ್ಮ ಸುಂಕದ ಹಣದಿಂದ ಖರೀದಿ ಮಾಡಿದ ಪುಷ್ಪಕ ವಿಮಾನ ಹತ್ತಿ ಬೆಂಗಾವಲು ಊರಿಗೆ ಹೋದಮೇಲೆ ನಮ್ಮ ನಿಮ್ಮ ಭೇಟಿ ಇಲ್ಲ. ಒಂದು ಪತ್ರ ಇಲ್ಲ, ಈಮೇಲೂ ಇಲ್ಲ, ಎಸ್‌ಎಂಎಸ್‌ಗೆ ಉತ್ತರ ಇಲ್ಲ. ವಾಟ್ಸ್‌ಅಪ್ ಸಂದೇಶಕ್ಕೆ ಬ್ಲೂ ಟಿಕ್‌ನ ಪರತ್ ಪಾವತಿ ಸಹಿತ ಸಿಗಲಿಲ್ಲ. ವೋಟು ಕೇಳುವ ಮುನ್ನ ನೀವೇ ನಮ್ಮನ್ನು ಹುಡುಕಿಕೊಂಡು ಬಂದಿರಿ. ಆದರೆ ವೋಟು ಎಣಿಕೆ ನಂತರ ನೀವು ಅಂತರ್ದಾನವಾಗಿಬಿಟ್ಟಿರಿ. ನಮ್ಮ ಓಣಿಯಲ್ಲಿ ಪಿಕ್‌ಪಾಕೆಟ್ ಮಾಡಿ ಜೈಲಿಗೆ ಹೋಗಿದ್ದ, ನಿಮ್ಮ ಆಶೀರ್ವಾದದಿಂದ ಹೊರಗೆಬಂದಿದ್ದ ಕಳ್ಳ ಕಿಟ್ಯಾ ಈಗ ಕೆ. ಕೃಷ್ಣ ಕುಮಾರ್ ಆಗಿ ಬಿಟ್ಟಿದ್ದಾನೆ. ಅವನು ಈಗ ತಮ್ಮ ಪಿಎ ಆಗಿದ್ದೇನೆ ಎಂದೂ, ತಮ್ಮ ಸ್ವಯಂ ಘೋಷಿತ ಸಲಹೆಗಾರನಾಗಿಬಿಟ್ಟಿದ್ದಾನೆ ಎಂದೂ ಹೇಳಿಕೊಂಡಿದ್ದಾನೆ. ನನ್ನಂಥ ಬಡಪಾಯಿಗಳ ಪಾಲಿಗೆ ಅವನೇ ಮುಖ್ಯಮಂತ್ರಿಯಾಗಿ ಬಿಟ್ಟಿದ್ದಾನೆ.

ನಮಗೆ ಅವನ ಭೇಟಿಯೇ ದೇವ ದುರ್ಲಭವಾಗಿಬಿಟ್ಟಿದೆ. ಇನ್ನು ನಿಮ್ಮಂಥವರ ಮಾತು ಕೇವಲ ಆಕಾಶವಾಣಿಯಲ್ಲಿ ಕೇಳುತ್ತಿದೆ. ನೀವು ನಮ್ಮನ್ನು ಬಂದು ಭೇಟಿ ಆಗುವುದು ಇನ್ನು ಐದು ವರ್ಷದ ನಂತರ ಇದ್ದೇ ಇದೆ ಅಂತ ನಾವು ಸುಮ್ಮನೆ ಇದ್ದು ಬಿಡುತ್ತೇವೆ. ನೀವು ನಮ್ಮ ಊರನ್ನು ಉದ್ಧಾರ ಮಾಡ್ತೀರಿ ಅಂತ ಆಶ್ವಾಸನೆ ನೀಡಿದ್ದರೂ ಸಹಿತ ಮಾಡಿಲ್ಲ. ನಿಮ್ಮ ಊರಿನ ಮೇಲೆ ನಿಮಗೆ ಎಷ್ಟು ಪ್ರೀತಿ ಎಂದರೆ ನಿಮ್ಮ ಬಾಲ್ಯದಾಗ ನೀವು ಬಿಟ್ಟು ಹೋದಾಗ ಅದು ಹೆಂಗ ಇತ್ತೋ ಹಾಂಗೆ ಇರಬೇಕು ಅಂತ ನೀವು ಏನೂ ಬದಲಾವಣೆ ಮಾಡಿಲ್ಲ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ. ಇರಲಿ.

ಇದು ಎಲ್ಲಾ ಹೆಂಗ ಐತಿ ಅಂದರ, ಜಗಜಿತ್ ಸಿಂಗ್ ಅವರ ಗಜಲ್‌ನ ಸಾಲಿನ ಹಂಗ ಐತಿ.

“ಈ ವರ್ಷ ಬಹಳ ಮಳೆ ಆಗ್ತದ, ಬೆಳೆ ಬರ್ತದ, ಎಲ್ಲಾ ಛಲೋ ಆಗ್ತೆತಿ,

ಹಿಂಗ ಆಗ್ತದೋ, ಇಲ್ಲೋ, ಗೊತ್ತಿಲ್ಲ,

ಆದರ ಹಿಂಗ ಆಗ್ತದ ಅನ್ನುವ ಕನಸು ಮಾತ್ರ ಭಾರಿ ಛಲೋ ಐತಿ”.

ಇದೆಲ್ಲಾ ಐತಿ. ಇರಲಿ, ಆದರೂ ಉಭಯ ಕುಶಲೋಪರಿ ಸಾಂಪ್ರತ. ಇನ್ನು ನಮ್ಮ ಊರಿನವರ ಕಡೆಯಿಂದ ನಿಮಗೆ ಒಂದು ಮೂಕ ಅರ್ಜಿ.

ಮೆಹರ್‌ಬಾನ್ ಸಾಹೇಬರೇ,

ರಾಜ್ಯ ಸರಕಾರ ನೇಮಿಸಿದ ವಿಜಯ ಭಾಸ್ಕರ ಸಮಿತಿ ಆಡಳಿತ ಸುಧಾರಣೆ ಬಗ್ಗೆ ಕೆಲವು ಶಿಫಾರಸುಗಳನ್ನು ಮಾಡಿದೆ. ಮೊದಲ ಹಂತದಲ್ಲಿ ಕಂದಾಯ, ಆಹಾರ ಹಾಗೂ ರಸ್ತೆ ಸಾರಿಗೆ ಇಲಾಖೆಗಳ ಬಗ್ಗೆ ಸಲಹೆಗಳನ್ನು ನೀಡಿದೆ. ಇವುಗಳಲ್ಲಿ ಕೆಲವು ಜನಪರ ಸಲಹೆಗಳಾಗಿದ್ದು ಅವುಗಳನ್ನು ನಾವು ಸ್ವಾಗತ ಮಾಡುತ್ತೇವೆ. ಇನ್ನು ಕೆಲವು ವಿಷಯಗಳನ್ನು ನಾವು ಸಕಾರಣವಾಗಿ ವಿರೋಧಿಸುತ್ತೇವೆ.

ಅವುಗಳು ಇಂತಿವೆ:

ಸರಕಾರದ 800ಕ್ಕೂ ಹೆಚ್ಚು ಸೇವೆಗಳನ್ನು ಸೇವಾಸಿಂಧು ಎನ್ನುವ ಒಂದೇ ಜಾಲತಾಣ ಹಾಗೂ ತಂತ್ರಾಂಶದ ಮೂಲಕ ನೀಡುವುದು ಸ್ವಾಗತಾರ್ಹ. ಈ ಸೇವೆಗಳನ್ನು ಜನರಿಗೆ ದೊರಕಿಸಲು ನಗರಗಳಲ್ಲಿ ಕರ್ನಾಟಕ-ಒನ್ ಹಾಗೂ ಅಟಲ್‌ಜಿ ಜನಸ್ನೇಹಿ ಕೇಂದ್ರ ಹಾಗೂ ಹಳ್ಳಿಗಳಲ್ಲಿ ಗ್ರಾಮ ಪಂಚಾಯತ್ ಬಾಪೂಜಿ ಸೇವಾ ಕೇಂದ್ರಗಳನ್ನು ಏಕ ಗವಾಕ್ಷಿಗಳಾಗಿ ಬಳಸುವ ಯೋಜನೆ ಸಹಿತ ಸ್ವಾಗತಾರ್ಹ. ಇದರಿಂದ ಜನ ಅನೇಕ ಕಚೇರಿಗಳಿಗೆ ಅನಗತ್ಯವಾಗಿ ಎಡತಾಕುವುದು ತಪ್ಪುತ್ತದೆ.

PC : mandya.nic.in

ಆಹಾರ ಧಾನ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಸಹಿತ ಬಹಳ ಅನುಕೂಲಕರವಾದದು. ಆದರೆ ಇದಕ್ಕಾಗಿ ಜನರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದು ಒಳ್ಳೆಯದಲ್ಲ. ಇದರಿಂದ ಬಡವರ ಹೊಟ್ಟೆಯ ಮೇಲೆ ಹೊಡೆದಂತೆ ಆಗುತ್ತದೆ. ಇದರ ಇನ್ನೊಂದು ಅಪಾಯಕಾರಿ ಸಾಧ್ಯತೆ ಏನು ಎಂದರೆ, ಈ ರೀತಿಯ ನಿಯಮ ಜಾರಿಗೆ ಬಂದರೆ, ಹಳ್ಳಿಗಳಲ್ಲಿ ಮನೆಗೆ ಆಹಾರ ಧಾನ್ಯ ತಂದು ಕೊಡುವ ಏಜೆಂಟ್‌ಗಳು ಹುಟ್ಟಿಕೊಳ್ಳಬಹುದು. ಆಹಾರ ಧಾನ್ಯಗಳನ್ನು ಮನೆಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ಆರಂಭವಾದರೆ ಸರಕಾರಕ್ಕೆ ವಿವಿಧ ಮಟ್ಟದ ಮಧ್ಯವರ್ತಿಗಳ ಲಾಭ ಹಾಗೂ ಅವರ ಕಮಿಷನ್ ಹಣದ ಹಣ ಉಳಿತಾಯವಾಗುತ್ತದೆ. ಇದೆ ಹಣವನ್ನು ಮನೆ ಬಾಗಿಲಿಗೆ ತಲುಪಿಸುವ ಖರ್ಚಿಗೆ ಬಳಸಬಹುದು.

ಜನಸಂಖ್ಯೆ, ರಹವಾಸ, ಬೆಲೆ ಹಾಗೂ ರೈತಾಪಿ ಕುಟುಂಬದ ಪ್ರಮಾಣಪತ್ರಗಳು ಅನವಶ್ಯಕ ಎಂದು ಹೇಳಿ ಅವುಗಳನ್ನು ರದ್ದುಮಾಡಬೇಕು ಎನ್ನುವ ಶಿಫಾರಸು ಮಾಡಲಾಗಿದೆ. ಇದನ್ನು ಇನ್ನೊಮ್ಮೆ ಪರಿಶೀಲಿಸಬೇಕು. ಇದನ್ನು ಕೇವಲ ಆಡಳಿತಾತ್ಮಕ ಅನುಕೂಲಕತೆ ದೃಷ್ಟಿಯಿಂದ ನೋಡದೆ, ನಾಳೆ ಜನರಿಗೆ ಈ ಪ್ರಮಾಣ ಪತ್ರಗಳನ್ನು ನ್ಯಾಯಾಲಯಗಳ ಮುಂದೆ ಹಾಜರು ಪಡಿಸಲಿಕ್ಕೆ ಬರಬೇಕಾಗುವುದೋ ಬೇಡವೋ ಅನ್ನುವುದನ್ನು ನೋಡಿ ನಿರ್ಧಾರ ಮಾಡಬೇಕು. ಹಾಗೆ ರದ್ದುಮಾಡುವುದೇ ಆದಲ್ಲಿ, ಅವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡ ಬಳಿಕವಷ್ಟೇ ರದ್ದುಮಾಡಬೇಕು.

ರಸ್ತೆ ಸಾರಿಗೆ ಅಧಿಕಾರಿಗಳು ಜಫ್ತಿ ಮಾಡಿದ ವಾಹನಗಳನ್ನು ಮಾರಾಟ ಮಾಡಲು ನ್ಯಾಯಾಲಯದ ಅನುಮತಿಗೆ ಕಾಯುವುದು ಬೇಡ ಎನ್ನುವ ಶಿಫಾರಸು ಇದರಲ್ಲಿ ಇದೆ.

ಇದನ್ನು ಜಾರಿಮಾಡುವ ಮುನ್ನ, ರಸ್ತೆ ಸಾರಿಗೆ ಇಲಾಖೆಯ ವಿವಿಧ ವಿಷಯಗಳಿಗೆ ಅನ್ವಯವಾಗುವಂತೆ, ವಿದ್ಯುತ್ ಪ್ರಾಧಿಕಾರ, ವಿಮೆ ಪ್ರಾಧಿಕಾರ, ಆಹಾರ ಪದಾರ್ಥ ಗುಣಮಟ್ಟ ನಿಯಂತ್ರಣ ಪ್ರಾಧಿಕಾರದ
ಮಾದರಿಯಲ್ಲಿ ಸಾರಿಗೆ ಪ್ರಾಧಿಕಾರ ಸ್ಥಾಪಿಸಬೇಕು.

ಈ ಸಮಿತಿಯ ಅತಿ ಮುಖ್ಯ ಶಿಫಾರಸು ಎಂದರೆ ಪ್ರಾದೇಶಿಕ ಆಯುಕ್ತರ ಕಚೆರಿಗಳನ್ನು ರದ್ದು ಮಾಡುವುದು. ಇದನ್ನು ನಾವು ವಿರೋಧಿಸುತ್ತೇವೆ. ಇದು ಅತ್ಯಂತ ಅಪಾಯಕಾರಿ. ಇದು ಭಾರತದ ಸಂವಿಧಾನದ ಮೂಲ ತತ್ವವಾದ ವಿಕೇಂದ್ರೀಕರಣ ವಿರೋಧಿ ಬೆಳವಣಿಗೆ. ಇದು ರಾಜ್ಯದ ಜನರಿಗಾಗಲಿ, ಅಭಿವೃದ್ಧಿ-ಸುಶಾಸನಕ್ಕಾಗಲಿ ಅನುಕೂಲಕರವಾದದ್ದಲ್ಲ. ಕೆಲವು ಜನ ಹಿರಿಯ ಐಎಎಸ್ ಅಧಿಕಾರಿಗಳು ಬೆಂಗಳೂರು ಬಿಟ್ಟುಹೋಗಲು ಮನಸು ಮಾಡುವುದಿಲ್ಲ ಎನ್ನುವ ಕಾರಣಕ್ಕೆ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದು ಮಾಡುವುದು ಸಾಧುವಲ್ಲ.

ರಾಜ್ಯದ 350 ಐಎಎಸ್ ಅಧಿಕಾರಿಗಳಲ್ಲಿ 60 ಜನ ಮಾತ್ರ ಬೆಂಗಾವಲು ಊರು ಬಿಟ್ಟು ಹೊರಗೆ ಇದ್ದಾರೆ. ಅವರಲ್ಲಿ ಮೂರು ಜನ ಪ್ರಾದೇಶಿಕ ಆಯುಕ್ತರು ಮಾತ್ರ ವಿಭಾಗ ಮಟ್ಟದಲ್ಲಿ ಇದ್ದಾರೆ. ಆ ಮೂರು ಹುದ್ದೆಗಳ ಸಲುವಾಗಿ ನೀವು ಆರು ಕೋಟಿ ಕನ್ನಡಿಗರ ಎದುರು ಕಣ್ಕಟ್ಟು ಆಡಬಾರದು ಎಂದು ನಮ್ಮ ಅಂಬೋಣ.

ನಿಜವಾಗಿ ಬೇಕಾಗಿರುವುದು ಏನು ಎಂದರೆ,

ಅ) ರಾಜ್ಯದಲ್ಲಿ ಈಗ ಇರುವ ನಾಲ್ಕು ಕಂದಾಯ ವಿಭಾಗಗಳನ್ನು ಎಂಟು ವಿಭಾಗಗಳನ್ನಾಗಿ ಮಾಡಬೇಕು. ಪ್ರತಿ ವಿಭಾಗಕ್ಕೆ ಈಗ 7-8 ಜಿಲ್ಲೆಗಳು ಬರುತ್ತವೆ. ಪ್ರತಿ ವಿಭಾಗಕ್ಕೆ 3-4 ಜಿಲ್ಲೆಗಳು ಬರುವಂತೆ ಮಾಡಿ ಮರುಹಂಚಿಕೆ ಮಾಡಬೇಕು.

ಆ) ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ಹಿಂದಿನಂತೆ ವಿಭಾಗೀಯ ಅಧಿಕಾರಿಗಳ ಕಚೇರಿಗಳಾಗಿ ಉನ್ನತೀಕರಣ ಮಾಡಬೇಕು. ಅವರಿಗೆ ಜಿಲ್ಲಾಧಿಕಾರಿಗಳ ಮೇಲೆ ಮೇಲು ಉಸ್ತುವಾರಿ ಹಾಗೂ ಜಿಲ್ಲೆ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ಹಾಗೂ ಜವಾಬುದಾರಿ ನೀಡಬೇಕು.

ಇ) ಪ್ರಾದೇಶಿಕ ಆಯುಕ್ತರಿಗೆ ಅಭಿವೃದ್ಧಿಯ ಜವಾಬುದಾರಿಯನ್ನು ಸಹಿತ ಕೊಡಬೇಕು. ಅವರಿಗೆ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿ ಹಾಗೂ ನಗರಪಾಲಿಕೆ-ನಗರಸಭೆಗಳು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳ ಮೇಲೆ ವಿಚಕ್ಷಣೆ ಹಾಗೂ ಮೇಲು ಉಸ್ತುವಾರಿ ನಡೆಸುವ ಅಧಿಕಾರ ನೀಡಬೇಕು.

ಈ) ವಿಭಾಗಾಧಿಕಾರಿ ಮಟ್ಟದಲ್ಲಿ ಕಂದಾಯ ನ್ಯಾಯಾಲಯ ಸ್ಥಾಪಿಸಬೇಕು. ಇದರಿಂದ ಜನ ತಮ್ಮ ಕಂದಾಯ ಪ್ರಕರಣಗಳ ಸಲುವಾಗಿ ಬೆಂಗಳೂರಿಗೆ ಹೋಗುವುದು ತಪ್ಪುತ್ತದೆ.

ಉ) ವಿಭಾಗಾಧಿಕಾರಿಗಳಿಗೆ ಸಾರ್ವಜನಿಕ ಕುಂದುಕೊರತೆಗಳನ್ನು ಸ್ವೀಕರಿಸುವ ಹಾಗೂ ಅವುಗಳನ್ನು ಪರಿಹರಿಸುವ ಅಧಿಕಾರ ಹಾಗೂ ಜವಾಬುದಾರಿ ಕೊಡಬೇಕು. ಜನಸಾಮಾನ್ಯರು ಜಿಲ್ಲಾ ಮಟ್ಟದ ಯಾವುದೇ ಅಧಿಕಾರಿಗಳ ವಿರುದ್ಧ ದೂರು ಕೊಟ್ಟರೆ ಅವುಗಳ ವಿಚಾರಣೆ ವಿಭಾಗ ಮಟ್ಟದಲ್ಲಿ ನಡೆಯಬೇಕು.

ಊ) ವಿಭಾಗಾಧಿಕಾರಿಗಳನ್ನು ಸಕಾಲ ಯೋಜನೆಯ ನಿಯಂತ್ರಣ ಪ್ರಾಧಿಕಾರಿಯನ್ನಾಗಿ ಮಾಡಬೇಕು. ಸಕಾಲ ಯೋಜನೆಯಲ್ಲಿನ ಕೆಲಸಗಳು ಸರಿಯಾದ ಸಮಯಕ್ಕೆ ಆಗದೆ ಹೋದರೆ, ಆ ಕಾಲಹರಣದ ಬಗ್ಗೆ ತನಿಖೆ ನಡೆಸುವ ಅಧಿಕಾರ ಕೊಡಬೇಕು.

ಎ) ಈ ಎಲ್ಲಾ ಜವಾಬುದಾರಿಗಳನ್ನು ಸರಿಯಾಗಿ ನಿರ್ವಹಿಸಲು ವಿಭಾಗಾಧಿಕಾರಿಗಳಿಗೆ ಸೂಕ್ತ ಸಿಬ್ಬಂದಿಗಳನ್ನು ನೀಡಬೇಕು. ಅವರ ಕಚೇರಿಗೆ ಪ್ರಮುಖ ಇಲಾಖೆಗಳ ಜಂಟಿ ನಿರ್ದೇಶಕರ ಮಟ್ಟದ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು. ಜಿಲ್ಲೆ ಹಾಗೂ ಪ್ರದೇಶ ಮಟ್ಟದ ಯಾವುದೇ ಕೆಲಸಗಳು ಆಯಾ ಜಿಲ್ಲೆ ಹಾಗೂ ಪ್ರದೇಶ ಮಟ್ಟದಲ್ಲಿ ಆಗಬೇಕು. ಇಂತಹ ಎಲ್ಲಾ ಕೆಲಸಗಳಿಗೆ ಜನರು ಬೆಂಗಳೂರಿಗೆ ಅಲೆದಾಡುವ ಅನಿವಾರ್ಯತೆಯನ್ನು ತಪ್ಪಿಸಬೇಕು.

ನಮ್ಮ ಸಲಹೆಗಳನ್ನು ಪರಿಗಣಿಸಬೇಕು, ನೀವು ಮುಂದಿನ ಬಾರಿ ಬರುವಾಗ ಇದನ್ನು ಮರೆಯಬಾರದು ಎಂದು ನಮ್ಮ ಎಲ್ಲಾ ಬಡಪಾಯಿಗಳ ಕೋರಿಕೆ.


ಇದನ್ನೂ ಓದಿ: ಸುದ್ದಿಯೇನೇ ಮನೋಲ್ಲಾಸಿನಿ; ಮಾಧ್ಯಮ ನಲ್ಲರು – ರಾಜಧಾನಿ ಎಂಬ ಮಾಯಾಮೋಹಿನಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...