Homeಅಂಕಣಗಳುಸುದ್ದಿಯೇನೇ ಮನೋಲ್ಲಾಸಿನಿ; ಮಾಧ್ಯಮ ನಲ್ಲರು - ರಾಜಧಾನಿ ಎಂಬ ಮಾಯಾಮೋಹಿನಿ

ಸುದ್ದಿಯೇನೇ ಮನೋಲ್ಲಾಸಿನಿ; ಮಾಧ್ಯಮ ನಲ್ಲರು – ರಾಜಧಾನಿ ಎಂಬ ಮಾಯಾಮೋಹಿನಿ

- Advertisement -
- Advertisement -

ಮೊನ್ನೆ ಭಾರತಮಾತೆಯ ಅನೇಕ ಸುಪುತ್ರರು, ‘ವಿಕೇಂದ್ರೀಕರಣ ವಿನಾಶಕ್ಕೆ ದಾರಿ’, ‘ಒಕ್ಕೂಟ ಸರಕಾರ ಒಡೆದು ಹಾಕೀತು’, ‘ರಾಜ್ಯ ಸರಕಾರಗಳು ರಜೆಯ ಮೇಲೆ ಹೋಗಲಿ’, ‘ಒಂದು ದೇಶ, ಒಂದು ಸರಕಾರ’ ಅಂತೆಲ್ಲಾ ಸೋಷಿಯಲ್ ಮೀಡಿಯಾದಾಗ ಬರಕೊಂಡರು. ಅದು ಲಸಿಕೆ ಪೂರೈಕೆಗೆ ಸಂಬಂಧಪಟ್ಟ ಗೊಂದಲದ ಸಲುವಾಗಿ.

ಅವರ ಪ್ರಕಾರ ಭಾರತ ಎಂಬೊ ಉಪಖಂಡಕ್ಕ ದೆಹಲಿ ಎಂಬ ದೂರದ ಊರಿನಲ್ಲಿ ಒಂದು ಸರಕಾರ ಅಂತ ಇದ್ದರೆ ಸಾಕು. ದೇಶದ ಇತರ ರಾಜ್ಯಗಳು, ಅವುಗಳ ರಾಜಧಾನಿಗಳು, ಕೇವಲ ಭಾರತದ ಭೂಪಟದ ಮೇಲಿನ ಬಿಂದುಗಳು ಅಷ್ಟೇ ಮತ್ತು ದೆಹಲಿಯ ಸುಲ್ತಾನರು ನೀಡುವ ಭಿಕ್ಷೆಯಲ್ಲಿ ಬದುಕುವ ಭಿಕಾರಿಗಳು ಎಂಬಂತಾಗಿತ್ತು.

ಇದನ್ನ ನಾವು ಭಾವನಾತ್ಮಕವಾಗಿ ನೋಡದೆ, ಲಭ್ಯ ದತ್ತಾಂಶಗಳ ಮೂಲಕ ನೋಡೋಣ. ಉದಾಹರಣೆಗೆ ಒಕ್ಕೂಟ ಸರಕಾರದ ಕೇಂದ್ರ ಸ್ಥಾನ ದೆಹಲಿ ಒಳಗ 55 ಇಲಾಖೆಗಳ ಸುಮಾರು 1335 ಕಚೇರಿಗಳು ಅದಾವು. ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’ ಅಂದರ ‘ಬರೆ ದೆಹಲಿಗೆ ಬಂತು’ ಅಂದಂಗ ಆಗೇದ. ಸುಮಾರು 130 ಕೋಟಿ ಜನ ಇರುವ, 30 ರಾಜ್ಯಗಳ, 600 ಜಿಲ್ಲೆಗಳ, 200 ಸ್ಮಾರ್ಟ್ ಸಿಟಿಗಳ, 30 ಲಕ್ಷ ಕಿಲೋಮೀಟರ್ ಚದುರ ಕಿಲೋಮೀಟರ್ ವ್ಯಾಪ್ತಿಯ, ಈ ದೇಶದ ಒಳಗ ಕೆಲವು ಕಚೇರಿಗಳನ್ನ ಆದರೂ ದೆಹಲಿಯಿಂದ ದೂರ ತೊಗೊಂಡು ಹೋಗಬೇಕು ಅಂತ ಇಲ್ಲಿಯವರೆಗಿನ 14 ಪ್ರಧಾನ ಮಂತ್ರಿಗಳಿಗೆ, ಅವರು ನಡೆಸಿದ ಸರಕಾರಗಳಿಗೆ ಅವಶ್ಯಕ ಅನ್ನಿಸಲಿಲ್ಲ. ಅದು ಹೋಗಲಿ, 545 ಲೋಕಸಭಾ ಕ್ಷೇತ್ರಗಳಿಂದ ನಮ್ಮ ವೋಟು ತೊಗೊಂಡು, ನಮ್ಮ ಸುಂಕದ ಹಣದಿಂದ ಬಿಂಕ ಮಾಡಿ ಮೆರೆಯುವ ಸಂಸತ್ತು ಸದಸ್ಯರಿಗೂ ಅನ್ನಿಸಲಿಲ್ಲ. ಸ್ವಾತಂತ್ರ ಬಂದು 75 ವರ್ಷ ಆಗಲಿಕ್ಕೆ ಬಂದರೂ ಈ ಹಣೆಬಾರ ಐತಿ ಅಂದರ, ಇನ್ನು ಮುಂದೆ ಅದು ಬದಲು ಆಗತದೋ ಇಲ್ಲೋ ಖಾತ್ರಿ ಇಲ್ಲ.

ಹಂಗ ಅಂತ ಅದು ಬರಿಯ ದೆಹಲಿಗೆ ಸೀಮಿತವಾದ ಭಾವ ಅಂತ ಅಂದುಕೋ ಬ್ಯಾಡ್ರಿ. ಇದೇ ಭಾವ ಇತರರಲ್ಲೂ ಕಾಣತದ. ಇನ್ನು ಬೆಂಗಳೂರಿಗೆ ಬಂದರ, ಅಲ್ಲಿಯೂ ಇದೆ ಹಣೆಬಾರ.

ರಾಜ್ಯ ವಿಧಾನಸಭಾ ಅಧಿವೇಶನ: ಸಭಾಧ್ಯಕ್ಷರಿಂದ ವ್ಯವಸ್ಥೆಗಳ ಪರಿಶೀಲನೆ

ವರ್ಷಕ್ಕೆ ಎರಡು ಬಾರಿ ಯಾವುದೋ ಹೆಸರು ಕೇಳದ ಪ್ರವಾಸೋದ್ಯಮ ಪತ್ರಿಕೆಯವರು ಮಾಡಿದ ಸರ್ವೇಪ್ರಕಾರ ಇಡೀ ದೇಶದಾಗ ವಾಸಕ್ಕ ಅತ್ಯಂತ ಸೂಕ್ತವಾದ ನಗರ ‘ನಮ್ಮ ಬೆಂಗಳೂರು’ ಅಂತ ಸೋಶಿಯಲ್ ಮೀಡಿಯಾದಾಗ ಚೀರಿಕೊಳ್ಳುವ ಅನೇಕ ಕನ್ನಡಿಗರ ಕಣ್ಣಿಗೆ ಇತರ ಜಿಲ್ಲೆ, ನಗರ, ಹಳ್ಳಿಗಳು ಕಾಣೋದ ಇಲ್ಲ. ಇದು ಮಕ್ಕಳ ಕೂಟ ಒಂದನೇ ಕ್ರಾಸ್‌ನಲ್ಲಿ ಹುಟ್ಟಿ, ಬಸವನಗುಡಿ ಕಾಲೇಜಿಗೆ ಹೋಗಿ, ಮಲ್ಲೇಶ್ವರದಲ್ಲಿ ಮನೆ ಮಾಡಿ, ಪಕ್ಕದ ಕ್ರಾಸ್ ಅಂಕಲ್ ಅವರ ಮಗಳನ್ನು ಮದುವೆ ಮಾಡಿಕೊಂಡು ರಾಜಾಜಿನಗರದಲ್ಲಿ ಅಂತಿಮ ಯಾತ್ರೆ ಮುಗಿಸಿದ ‘ಸೆವೆಂತ್ ಜನರೇಷನ್ ಬ್ಯಾಂಗಲೋರಿಯನ್ಸ್’ ಕತೆ ಅಷ್ಟೇ ಅಲ್ಲ. ಕೂಗನಹಳ್ಳಿ ಎಂಬೊ ಕುಗ್ರಾಮದಲ್ಲಿ ಹುಟ್ಟಿ ಹೊಟ್ಟೆಪಾಡಿಗೆ ರಾಜಧಾನಿಯ ಸಿಂಗಲ್ ರೂಮಿನಲ್ಲಿ ಬೆಂದಕಾಳೂರು ತಿಂದು ಬದುಕಿದ ಉತ್ತರ ಕರ್ನಾಟಕದ ವೀರ ಕನ್ನಡಿಗರ ಕತೆಯೂ ಹೌದು.

ಮೂಲ ಇಲಾಖೆಗಳು ಹೋಗಲಿ, ರಾಜ್ಯದ ವಿವಿಧ ಭೂಭಾಗಗಳಿಗೆ ಸಂಬಂಧಿಸಿದ ಅನೇಕ ಕಚೇರಿಗಳು ಬೆಂಗಳೂರಿನಾಗ ಮುರಕೊಂಡು ಬಿದ್ದಾವು. ಉದಾಹರಣೆಗೆ ಬಯಲುಸೀಮೆ ಅಭಿವೃದ್ಧಿ ಮಂಡಳಿ, ಪಶ್ಚಿಮಘಟ್ಟ ಕಾವಲು ಸಮಿತಿ, ಮೀನುಗಾರಿಕೆ ನಿಗಮ, ಕಾಫಿ ಬೋರ್ಡು, ತೊಗರಿ ಬೋರ್ಡು, ಹರಳೆಣ್ಣೆ ಬೋರ್ಡು ಮುಂತಾದ ಕಚೇರಿಯ ಅದಕ್ಷ ಅಧ್ಯಕ್ಷರು, ಅದರ ಮೇಲೂ – ಕೆಳಗೂ ಜವಾಬುದಾರಿ ಇಲ್ಲದ ಮೇಲುಸ್ತುವಾರಿ ಅಧಿಕಾರಿಗಳು, ಅವರ ರಕ್ಷಕರು, ಭಕ್ಷಕರು, ಚಪರಾಸಿಗಳು, ಚಾಲಕರು, ಏಜೆಂಟ್ರು ಎಲ್ಲರೂ ಬೆಂಗಳೂರಿನಾಗ, ಅಲ್ಲಿನ ಹೆಚ್ಚುವರಿ ಭತ್ತೆ ಮತ್ತು ಇತರ ಆನುಷಿಂಗಿಕ ಫಲಗಳನ್ನು ಅನುಭೋಗಿಸುತ್ತಾ ಇದ್ದಾರ.

ಹಿಂದೊಮ್ಮೆ ವಿಧಾನಪರಿಷತ್ತಿನ ಸದಸ್ಯರೊಬ್ಬರು “ರಾಜ್ಯದ 350 ಜನ ಐಎಎಸ್ಸು ಅಧಿಕಾರಿಗಳ ಪೈಕಿ 300 ಜನ ಬರೆ ಬೆಂಗಳೂರಿನಲ್ಲಿ ಅದಾರ. ಇದು ಅನವಶ್ಯಕ, ಅವರನ್ನ ಜಿಲ್ಲೆಗಳಿಗೆ ಕಳಿಸಿರಿ”, ಅಂತ ಕೇಳಿದಾಗ, ಹಳೆ ಮೈಸೂರಿನ ಕೆಲ ಹಳೆ ತಲೆಗಳು ಆಕ್ಷೇಪಿಸಿದರು. “ಯಾಕೆ ನಂ ಬ್ಯಾಂಗಲೋರ್‌ಗೆ ಒಳ್ಳೆ ಆಫೀಸರ್ಸ್ ಬೇಡವಾ?” ಅಂತ ತರಲೆ ಮಾಡಿದರು.

ಘನ ರಾಜ್ಯ ಸರಕಾರ ಪ್ರತಿ ಜಿಲ್ಲೆಗೆ ಒಂದು ಉಸ್ತುವಾರಿ ಕಾರ್ಯದರ್ಶಿ ಅಂತ ಇಟಗೊಂಡದ. ಇವರಲ್ಲಿ ಕೆಲ ಪುಣ್ಯಾತರು ಮತ್ತು ಪುಣ್ಯಾತಗಿತ್ತಿಯರು ವಿಕ್ಟೋರಿಯಾ ರಾಣಿಯ ದತ್ತು ಪುತ್ರರು. ವಿಕ್ಟೋರಿಯಾ ರಾಣಿಯ ಕೆಲಸದ ಅವಧಿ ಬೆಳಿಗ್ಗೆ 11ರಿಂದ ಸಂಜೆ 5 ಆಗಿತ್ತಲ್ಲಾ, ಹಿಂಗಾಗಿ ಇವರೆಲ್ಲ, ಅದನ್ನು ಚಾಚೂತಪ್ಪದೆ ಪಾಲಿಸುವರು. ಆ ಜಿಲ್ಲೆಗೆ ಫ್ಲಯಿಟ್ ಇದೆಯಾ ಅಂತ ಕೇಳಿ, ತಿಳಕೊಂಡ ಮ್ಯಾಲೆನೆ ಆ ಜವಾಬುದಾರಿ ಒಪ್ಪಿಕೊಂಡವರು. ಬೆಳಿಗ್ಗೆ 11 ಗಂಟೆ ಫ್ಲಯಿಟ್‌ಗೆ ಬಂದು ಒಂದು ಮೀಟಿಂಗ್ ಮಾಡಿ, ಎಲ್ಲರ ಕಡೆಯಿಂದ ‘ಯಸ್ ಸರ್’, ‘ಓಕೆ ಸಾರ್’ ಅನ್ನಿಸಿಕೊಂಡು, ಯಾವಾಗ ಸಂಜೆ 5 ಗಂಟೆ ಆದೀತೋ, ಯಾವಾಗ ಫ್ಲಯಿಟ್ ಹಿಡಕೊಂಡು ವಾಪಸ್ ಬೆಂಗಳೂರಿಗೆ ಹೋದೆನೋ ಅಂತ ಓಡಿ ಹೋಗತಾರ. ಅಲ್ಲಿ ಏನು ಗಂಟು ಇಟ್ಟಿರತಾರೋ, ರಾತ್ರಿ ಮನಿಗೆ ಹೋಗಲಿಲ್ಲ ಅಂದ್ರ ಯಾವ ದರೊಡೆಕೋರರು ದೋಚಿಕೊಂಡು ಹೋಗತಾರೋ ಗೊತ್ತಿಲ್ಲ.

ಇದು ಬರೆ ಬೀದರ್- ಗುಲ್ಬರ್ಗದ ಕತಿ ಅಲ್ಲ. ಚಾಮರಾಜನಗರ, ಚಿತ್ರದುರ್ಗದ ಕತಿನೂ ಹೌದು. ಕೇವಲ ಹಿಂದಿ ಮಾತಾಡುವ ಕಾಶ್ಮೀರಿ ಲಾಲಾಗಳ ಸ್ವಭಾವ ಅಲ್ಲ. ಇಲ್ಲೇ ಬಳ್ಳಾರಿಯ ಹಳ್ಳಿಯಲ್ಲಿ ಹುಟ್ಟಿ ಐಎಎಸ್ಸು ಪಾಸಾಗಿ ಬೆಂಗಳೂರಿಗೆ ಹೋದಮ್ಯಾಲೆ ತನ್ನೂರು ಮರೆತವನ ಕತಿನೂ ಹೌದು.

ಬೆಳಗಾವಿಯ ಹೊರಗ ಒಂದು ಕಲ್ಲು ಹೃದಯದ ಕಟ್ಟಡ ಅದ. ಸುಮಾರು 400 ಕೋಟಿ ರೂಪಾಯಿಯಲ್ಲಿ ಲೋಕೋ ಗೈರು ಉಪಯೋಗಿ ಇಲಾಖೆಯವರು ಕಟ್ಟಿದ ಈ ಅನಗತ್ಯ ಆಲಯಕ್ಕೆ ಸುವರ್ಣಸೌಧ ಅಂತ ಹೆಸರು. ಈ ಬಿಳಿಯಾನೆಯನ್ನು ಸ್ವಚ್ಛ ಮಾಡಿ, ಮೈ ತೊಳದು, ಹುಲ್ಲು ತಿನಿಸಲಿಕ್ಕೆ ವರ್ಷಕ್ಕೆ 2-3 ಕೋಟಿ ಖರ್ಚು ಆಗತದ. ಬೆಂಗಳೂರು ಎಂಬೊ ದಂತಗೋಪುರದ ಮುತ್ತುಗದ ಕುರ್ಚಿಗಳ ಮ್ಯಾಲೆ ಫೆವಿಕಾಲ್ ಮೆತ್ತಿ ಕೂತಿರುವ ಪುಢಾರಿ ಹಾಗೂ ಅಧಿಕಾರಿಗಳಿಗೆ ಇಲ್ಲಿಯೂ ಸದನ ನಡೆಸಬಹುದು ಅಂತ ಅನ್ನಿಸಿ ನಾಲ್ಕು ವರ್ಷ ಆತು.

“ವಿಕೇಂದ್ರೀಕರಣ ಇರಲೇಬೇಕು, ಆದರ ಬರೆ ನನ್ನ ಲೆವೆಲ್ ತನಕ ಆಷ್ಟ ಇರಬೇಕು. ನನ್ನ ಕೆಳಗಿನ ಎಲ್ಲ ಅಧಿಕಾರವೂ ನನ್ನಲ್ಲೇ ಕೇಂದ್ರೀಕೃತ ಆಗಿರಬೇಕು” ಅನ್ನೋದು ಪುಢಾರಿ-ಅಧಿಕಾರಿಗಳ ಬಯಕೆ, ಅಂತ ಒಂದು ಹಳೆ ಜೋಕು ಐತಿ. ಇದೆ ಲಾಜಿಕ್ ಜಿಲ್ಲೆ, ತಾಲೂಕ, ಗ್ರಾಮ ಪಂಚಾಯತಿವರೆಗೂ ಅನ್ವಯ ಆಗತದ. ರಾಜಧಾನಿ ರಾಜಕೀಯ ಅನ್ನೋದು ಸದ್ಯದ ಮಟ್ಟಿಗೆ ಐದು ಅಂಕದ ನಾಟಕ.

ಸಂಸತ್ತು ಅಧಿವೇಶನದ ಪ್ರಶ್ನೆಯ ಅವಧಿ ರದ್ದುಗೊಳಿಸಿದ ಕೇಂದ್ರ: ಖಂಡಿಸಿ ಪತ್ರಬರೆದ 800 ತಜ್ಞರು
PC: Jagran Josh

ಅಂದಹಂಗ ದೆಹಲಿ ಅಂದರೆ ಪರ್ಷಿಯನ್, ಉರ್ದು ಭಾಷೆಯಲ್ಲಿ ಮೆಟ್ಟಿಲು. ದೇಹಲವಿ ಅನ್ನೋದು ಉರ್ದು ಭಾಷೆಯ ಇನ್ನೊಂದು ಹೆಸರು. ಆದರ ನಮಗ ಎಲ್ಲರಿಗೂ ಗೊತ್ತಿರೋ ಹಂಗ, ಮನಿ ಅನ್ನೋದು ಮೆಟ್ಟಿಲಿನಿಂದ ಶುರು ಆಗಬೇಕೇ ಹೊರತು ಅಲ್ಲಿಗೆ ಮುಗದು ಹೋಗಬಾರದು. ಇನ್ನು ದೆಹಲಿಯ ದೊರೆಗಳು ಗೆದ್ದ ದಕ್ಷಿಣದ ಮೊದಲ ನಗರ ಔರಂಗಾಬಾದ್. ಇದರ ಮೂಲ ಹೆಸರು ‘TIQ’, ಅಂದ್ರ ದಕ್ಷಿಣದ ಕಿಡಕಿ. ಕಿಡಕಿಯಿಂದ ಹೊರ ಜಗತ್ತು ತೆರೀಬೇಕು ಆಷ್ಟ, ಮುಚ್ಚಬಾರದು.

ಶರ್ಲಾಕ್ ಹೋಮ್ಸ್, ಡಾ. ವಾಟ್ಸನ್ ಎನ್ನುವ ಅಜರಾಮರ ಪಾತ್ರಗಳನ್ನು ಸೃಷ್ಟಿಸಿ ಜಗತ್ತನ್ನೇ ದಂಗುಬಡಿಸಿದ. ಮನುಕುಲ ಮರೆಯಲಾರದ ಪತ್ತೇದಾರಿ ಬರಹಗಾರ ಆರ್ಥರ್ ಕೋನಾನ್ ಡಾಯ್ಲನ ಒಂದು ಮಾತು ಇಲ್ಲೇ ನೆನಪು ಆಗತದ: “ಈ ಲಂಡನ್ ಅನ್ನುವುದು ಒಂದು ಮಹಾನ್ ಕಸದ ಗುಂಡಿ. ಈ ಸಾಮ್ರಾಜ್ಯದ ಎಲ್ಲ
ಸೋಮಾರಿಗಳು ಹಾಗೂ ಕೂತು ತಿನ್ನುವವರು ಇದರ ಆಕರ್ಷಣೆ ತಪ್ಪಿಸಿಕೊಳ್ಳಲಾರದೆ ಇಲ್ಲಿ ಬಂದು ಬೀಳುತ್ತಾರೆ. ಅಂತೆಯೇ ನಾನೂ ಇಲ್ಲಿಗೆ ಬಂದು ಬಿದ್ದೆ.”

ಹುಟ್ಟಿನಿಂದ ಲಂಡನ್‌ನವನಾಗಿರದ, ವೃತ್ತಿಯಿಂದ ವೈದ್ಯನಾಗಿ, ಬರಹದಿಂದ ಜನಪ್ರಿಯತೆ ಪಡೆದ ಡಾ. ಡಾಯ್ಲ, ತನ್ನದೇ ಪ್ರತಿಬಿಂಬವಾದ ಡಾ. ವಾಟ್ಸನ್‌ನ ಬಾಯಿಯಿಂದ ಈ ಮಾತು ಹೇಳಿಸಿದ. ಇದು ವಿಶ್ವದ ಪ್ರತಿ ನಾಗರಿಕತೆಗೆ, ಅನಾದಿಕಾಲದವರೆಗೂ ಅನ್ವಯ ಆಗತದ ಅಂತ ಅನ್ನಸತದ.

ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ಡೇಟಾಖೋಲಿ: ಮಾಧ್ಯಮ ನಲ್ಲರು – ಯಾರ ಕೆಲಸ ಏನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...