Homeಅಂಕಣಗಳುಹಾಸುಹೊಕ್ಕು ಅಂಕಣ: ಊರಭಾಷೆಯ ಸೆಳೆತ

ಹಾಸುಹೊಕ್ಕು ಅಂಕಣ: ಊರಭಾಷೆಯ ಸೆಳೆತ

- Advertisement -
- Advertisement -

ರಹಮತ್ ತರೀಕೆರೆ |

ಚರಿತ್ರೆಯ ವಿದ್ವಾಂಸರಾದ ಪ್ರೊ. ಷ. ಶೆಟ್ಟರ್ ಅವರು, ಒಮ್ಮೆ ನನ್ನನ್ನು ‘ಹರಿಹರನ ಹಾಗೆ ಹೊಯ್ಸಳರ ನಾಡಿನಿಂದ ವಿಜಯನಗರ ನಾಡಿಗೆ ವಲಸೆ ಬಂದವನು’ ಎಂದು ವರ್ಣಿಸಿದರು. ಆಡಳಿತಾನುಕೂಲಕ್ಕೆ ಮಾಡಿಕೊಂಡಿರುವ ಜಿಲ್ಲೆ-ತಾಲೂಕು ಎಂಬ ಕಂದಾಯ ಪರಿಭಾಷೆಗಿಂತ, ರಾಜಮನೆತನಗಳ ಚರಿತ್ರೆಯ ಪರಿಭಾಷೆಯಲ್ಲಿ ನನ್ನ ವಲಸೆಯನ್ನು ವಿವರಿಸಿದ್ದು ವಿಶಿಷ್ಟವಾಗಿ ಕಂಡಿತು. ಆದರೂ ನನ್ನ ವಲಸೆಯ ಪರಿಯನ್ನು ಕಂದಾಯವೂ ಅಲ್ಲದ, ರಾಜಕೀಯ ಚರಿತ್ರೆಗೂ ಸೇರದ ನುಡಿಗಟ್ಟುಗಳಲ್ಲಿ ಹೇಳಿಕೊಳ್ಳಲು ಅವಕಾಶ ಸಿಕ್ಕರೆ, ನಾನು ಭದ್ರಾ ಪ್ರದೇಶದಿಂದ ತುಂಗಭದ್ರಾ ಪ್ರದೇಶಕ್ಕೆ ಬಂದವನು ಎಂದು ಕರೆದುಕೊಳ್ಳುವೆನು. ಅಥವಾ ರಾಗಿ ಸೀಮೆಯಿಂದ ಜೋಳದ ಸೀಮೆಗೆ, ಲಕ್ಷ್ಮೀಶನ ಸೀಮೆಯಿಂದ ರಾಘವಾಂಕರ ಸೀಮೆಗೆ, ಬಾಬಾಬುಡನ್ ಸೀಮೆಯಿಂದ ಹೇರೂರ ವಿರುಪನಗೌಡರ ಸೀಮೆಗೆ ಬಂದವನು-ಎಂದರೂ ಸರಿಯೇ. ಕಾರಣ, ನೀರು ಆಹಾರ ಕಾವ್ಯ ಅಧ್ಯಾತ್ಮದ ಪರಿಭಾಷೆಗೆ ವರ್ತಮಾನದ ಜನಬದುಕಿನ ಜತೆ ರಾಜಕೀಯ ಚರಿತ್ರೆಗಿಂತಲೂ ಆಪ್ತವಾದ ಸಂಬಂಧವಿರುತ್ತದೆ.

ಮೇಲ್ಕಾಣಿಸಿದ ನುಡಿಗಟ್ಟುಗಳಲೆಲ್ಲ ಜಲಸಂಸ್ಕೃತಿಯದೇ ನನಗೆ ಪ್ರಿಯ. ಇದಕ್ಕೆ ಕಾರಣ, ನನ್ನೂರಿನ ಹೆಸರಲ್ಲೇ ನೀರಿನ ಕುರುಹಿದೆ. ಇದಕ್ಕೆ ತಕ್ಕನಾಗಿ ನಮ್ಮೂರನ್ನು ನಾಲ್ಕು ದೊಡ್ಡಕೆರೆ ಆವರಿಸಿಕೊಂಡಿವೆ. ನಮ್ಮೂರ ಹೆಸರಿನ ಹಿನ್ನೆಲೆ ಕುರಿತು ಎರಡು ಊಹೆಗಳಿವೆ. ಮೊದಲನೆಯದು- ಮೈತುಂಬ ಮುಳ್ಳುಗಳುಳ್ಳ ತರೀ ಗಿಡಗಳ ಕಾರಣಗಳಿಂದ ಬಂದಿದ್ದು. ಎರಡನೆಯದು-ಬೌದ್ಧಯಕ್ಷಿ ತಾರಾ ಭಗವತಿಯ ಹೆಸರಲ್ಲಿ ಕಟ್ಟಿದ ಕೆರೆಯ ಕಾರಣದಿಂದ ಬಂದಿದ್ದು. ಇದರಲ್ಲಿ ಮೊದಲನೆಯದೇ ಹೆಚ್ಚು ನಿಜವಿರಬೇಕು. ಆದರೆ ಬೌದ್ಧಧರ್ಮದ ಬಗ್ಗೆ ಸೆಳೆತವುಳ್ಳ ನನಗೆ ಎರಡನೆಯ ವ್ಯಾಖ್ಯಾನದ ಬಗ್ಗೆ ತುಸು ಭಾವಪಕ್ಷಪಾತ. ಚರಿತ್ರೆಯ ಈ ಯಾವ ಖಬರೂ ಇಲ್ಲದೆ, ಬೆಸಗರಹಳ್ಳಿ, ಬರಗೂರು, ದೇವನೂರು, ನಾಗವಾರ ಇತ್ಯಾದಿ ಊರ ಹೆಸರಿಟ್ಟುಕೊಂಡು ಬರೆಯುತಲಿದ್ದ ಹಿರೀಕರನ್ನು ಅನುಕರಿಸುತ್ತ, ಊರ ಹೆಸರನ್ನು ಲಗತ್ತಿಸಿಕೊಂಡೆವು. ಆದರೆ ಊರಿನ ಕುರುಹು, ಅದರಿಂದ ದೂರಹೋದಂತೆಲ್ಲ ಕಾಡುವ ಪರಿ ಎಷ್ಟು ಸಂಕೀರ್ಣ ಎಂಬುದು ಬಳಿಕ ಹೊಳೆಯುತ್ತ ಹೋಯಿತು. ನಾನು ವಿದ್ಯಾಭ್ಯಾಸಕ್ಕಾಗಿ ಕಾವೇರಿ ದಡದ ಮೈಸೂರಿಗೆ ಹೋದೆ. ನೌಕರಿ ಶಿವಮೊಗ್ಗೆಯಲ್ಲಿ ಸಿಕ್ಕಿತು-ಅದು ತುಂಗಾಸೀಮೆ. ಬಳಿಕ ತುಂಗಭದ್ರೆಯ ಮಡಿಲಿಗೆ ಬಂದುಬಿದ್ದೆ. ನನ್ನ ಬಾಳಿನಲ್ಲಿ ನದಿ ಪ್ರದೇಶಗಳು ಹೇಗೋ ತೊಡಕಿಕೊಂಡಿವೆ. ಹೊಸಪೇಟೆಯಲ್ಲಿ ಈಗಿರುವ ಮನೆಗೆ ಸಮೀಪದಲ್ಲೆ ತುಂಗಭದ್ರೆಯ ಎಡದಂಡೆ ಕಾಲುವೆಯಿದ್ದು, ಅದರಲ್ಲಿ ಹರಿವ ನೀರನ್ನು ನೋಡುವಾಗ, ಇದರಲ್ಲಿ ನಮ್ಮ ಕೆರೆಗಳಿಂದ ಕೋಡಿಬಿದ್ದು ಹೊಳೆಸೇರಿದ ನೀರಿನ ಪಾಲೂ ಇರಬಹುದೆಂದು ಪುಳಕಿತನಾಗುತ್ತೇನೆ. ಹುಟ್ಟಿದ ಪ್ರದೇಶದ ಮಾಯೆ ಹಲವು ನೆಪಗಳಲ್ಲಿ ಹಿಂಬಾಲಿಸಿ ಬರುತ್ತದೆ. ಅದರಲ್ಲೂ ಕರ್ಣಕವಚದಂತೆ ನನ್ನ ನಾಮಕ್ಕೆ ಅಂಟಿಕೊಂಡಿರುವ ಕೆರೆಯ ಕುರುಹು, ಬಾಲ್ಯದ ಸುಪ್ತ ನೆನಪುಗಳನ್ನು ಸದಾ ಬಡಿದೆಬ್ಬಿಸುತ್ತದೆ. ನಾನು ಆಗಾಗ್ಗೆ ಬರೆಯುವ ಸಣ್ಣಕತೆ ಮತ್ತು ಲಲಿತ ಪ್ರಬಂಧಗಳಲ್ಲಿ, ನಮ್ಮ ಕಡೆಯ ಪಾತ್ರಗಳು ನಮ್ಮ ಸೀಮೆಯ ಭಾಷೆಯನ್ನಾಡುತ್ತ ಪ್ರತ್ಯಕ್ಷವಾಗುತ್ತವೆ. ಊರಭಾಷೆ, ಕುಡಿದು ಬೆಳೆದ ನೀರನಷ್ಟೇ ಉಂಡು ಬೆಳೆದ ಊಟದಷ್ಟೇ ಭಾವನಾತ್ಮಕ ಸಂಗತಿ.

ನಾನು, ನಮ್ಮ ಸೀಮೆಯ ಕನ್ನಡ ನುಡಿಯ ವಿಶಿಷ್ಟಲಯಗಳನ್ನು ಮೊದಲು ಕೇಳಿಸಿಕೊಂಡಿದ್ದು ಶಾಲೆಯಲ್ಲಲ್ಲ; ಬೀದಿಯಲ್ಲಿ, ಸಂತೆಯಲ್ಲಿ, ಹೊಲದಲ್ಲಿ, ಅಪ್ಪ ಕೆಲಸ ಮಾಡುತ್ತಿದ್ದ ಕುಲುಮೆ ಮನೆಯಲ್ಲಿ. ಕನ್ನಡ ತೆಲುಗು ತಮಿಳು ಹೀಗೆ ವಿಭಿನ್ನ ಭಾಷೆಯಾಡುವ ಬೇರೆಬೇರೆ ಜಾತಿಯ ಕುಟುಂಬಗಳ ನಡುವೆ ನಾವು ಬೆಳೆದೆವು. ಮನೆಯ ಹಿಂದಿನ ಬೀದಿ ಲಿಂಗಾಯತರದಾಗಿದ್ದು, ನಮ್ಮ-ಅವರ ಹಿತ್ತಲುಗಳ ನಡುವೆ ಸೋರೆ ಹಬ್ಬಿಸಿದ ಬೇಲಿಯಿರುತ್ತಿತ್ತು. ಬೇಲಿಯ ಆಚೀಚೆ ನಿಂತು ನಾವು ಮಾತಾಡುತ್ತಿದ್ದೆವು. ನಮ್ಮೂರ ಲಿಂಗಾಯತರಾದವರೂ ನಮ್ಮಂತೆ ಉರ್ದು ಮಾತಾಡುತ್ತಿದ್ದರು. ಅಪ್ಪ-ಅಮ್ಮನ ಗೆಳೆಯರು ಸಹ ನಾನಾ ಭಾಷೆಗೆ ಸೇರಿದವರಾಗಿದ್ದರು. ನಮ್ಮ ಕುಟುಂಬಕ್ಕೆ ಬಹಳ ಆಪ್ತವಾಗಿದ್ದುದು ಬೆಟ್ಟದಾವರೆಕೆರೆಯ ಒಂದು ಲಿಂಗಾಯತ ಕುಟುಂಬ. ಮಕ್ಕಳಿಲ್ಲದ ಪಾರ್ವತಕ್ಕ ನನ್ನನ್ನು ಎಳವೆಯಲ್ಲಿ ತನ್ನ ಮನೆಯಲ್ಲಿಟ್ಟುಕೊಂಡು ಸಾಕಿದಳು. ಅವಳ ಕನ್ನಡ ಅದೆಷ್ಟು ಒಗರಿನಿಂದ ಕೂಡಿರುತ್ತಿತ್ತು! ನಮ್ಮ ಕುಲುಮೆಗೆ ತರೀಕೆರೆ ಅಜುಬಾಜಿನ ಇಪ್ಪತ್ತು ಹಳ್ಳಿಯ ರೈತರು ಬರುತ್ತಿದ್ದರು. ಅವರು ತಮ್ಮ ಕುಡ ಕುಳಗಳು ಸಿದ್ಧವಾಗುವವರೆಗೆ ಅಥವಾ ಗಾಡಿಗೆ ಹಳಿಕಟ್ಟುವ ಕೆಲಸ ಮುಗಿಯುವವರೆಗೆ ಅಪ್ಪನ ಜತೆ ಹರಟುತ್ತಿದ್ದರು. ಬೀಡಿಯಿಂದ ಹಿಡಿದು ಇಂದಿರಾಗಾಂಧಿಯ ತನಕ ವಿಷಯಗಳು ಚರ್ಚೆಗೆ ಬಂದು, ಕುಲುಮೆ ಮನೆ ಸಂಸತ್ತಾಗುತ್ತಿತ್ತು. ತಿದಿ ಎಳೆಯುತ್ತ ನಾನು ಅವನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದೆ. ಅವುಗಳಲ್ಲಿ ಬೇರೆಬೇರೆ ವೃತ್ತಿಗೆ ಸಂಬಂಧಿಸಿದ ಶಬ್ದಗಳು ವಿಶೇಷವಾಗಿದ್ದವು. ನನ್ನ ಅಜ್ಜಿ ಮತ್ತು ಅಮ್ಮ ಕನಲಿದಾಗ, ಚೂಪಾದ ಕನ್ನಡದ ಗಾದೆ ಮತ್ತು ಬೈಗುಳಗಳನ್ನು ಹೆಕ್ಕಿ ತೆಗೆದು ಎದುರಾಳಿಗಳ ಮೇಲೆ ಪ್ರಯೋಗಿಸುತ್ತಿದ್ದರು. ಭಾಷೆ ಮತ್ತು ಧರ್ಮದ ವಿಷಯದಲ್ಲಿ ನಾನು ಜಾತ್ಯತೀತತೆಯ ಮೊದಲ ಪಾಠಗಳ ಕಲಿತಿದ್ದು ಹೀಗೆ ಹರಟೆ ಜಗಳ ಪ್ರೀತಿಯ ಸನ್ನಿವೇಶಗಳಲ್ಲಿ.

ಈ ಕಾರಣದಿಂದ, ಮನೆಮಾತು ಉರ್ದುವಾದರೂ ಬೀದಿಯಲ್ಲಿ ಕಲಿತ ಕನ್ನಡವು ನನ್ನ ಪಾಲಿಗೆ ಲೋಕ ಗ್ರಹಿಸುವ, ಚಿಂತನೆ ಮಾಡುವ, ಪರಿಭಾವಿಸುವ, ಭಾವನೆ, ಚಿಂತನೆ ಅನುಭವಗಳನ್ನು ಹಂಚಿಕೊಳ್ಳುವ ಅಭಿವ್ಯಕ್ತಿ ಮಾಧ್ಯಮವಾಯಿತು. ನಾನು ವಿಶ್ವವಿದ್ಯಾಲಯ ಸೇರಿ, ಸಂಶೋಧನೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡು ಬಳಸುತ್ತಿರುವ ವಿಶ್ಲೇಷಣೆ-ವ್ಯಾಖ್ಯಾನದ ಭಾಷೆಯು, ಕನ್ನಡದ ಸಮಸ್ತ ಸಂಶೋಧಕರೂ ಬಳಸುತ್ತಿರಬಹುದಾದ ವಿದ್ವತ್ತಿನ ಸಾಮಾನ್ಯ ಭಾಷೆ. ಅಲ್ಲಿ ನನ್ನ ಸೀಮೆಯ ಸೊಗಡಿಗೆ ಆಸ್ಪದ ಸಹಜವಾಗಿಯೇ ಕಮ್ಮಿ. ಆದರೆ ನಾನು ತಿರುಗಾಟದ ಅನುಭವ ಬರೆಯಲು ಕೂತರೆ, ಹೇಗೂ ಮೆಲ್ಲಗೆ ನನ್ನ ಬಾಲ್ಯದ ಅನುಭವಗಳೂ ಅದರ ಜತೆ ನಮ್ಮ ಸೀಮೆಯ ನುಡಿಗಟ್ಟುಗಳು ನುಸುಳಲು ಆರಂಭಿಸುತ್ತವೆ. ಬಹುಶಃ ಕತೆ ಕಾದಂಬರಿಯ ಭಿತ್ತಿಯಲ್ಲಿ ಪಾತ್ರಗಳನ್ನು ಸೃಷ್ಟಿಸಿಕೊಳ್ಳದ ಹೊರತು ಯಾವುದೇ ಸೀಮೆಯ ಭಾಷೆ ತನ್ನೆಲ್ಲ ಸೊಕ್ಕಿನಲ್ಲಿ ವೈವಿಧ್ಯದಲ್ಲಿ ಜೀವಂತಿಕೆಯಲ್ಲಿ ಅವತರಿಸುವುದಿಲ್ಲ. ಆದರೆ ಕತೆ ಕಾದಂಬರಿ ನನಗೆ ಕೈವಶವಾಗಿಲ್ಲ. ಹೀಗಾಗಿ ನಮ್ಮ ಸೀಮೆಯ ಕನ್ನಡವು ನನ್ನ ಅಭಿವ್ಯಕ್ತಿಯ ಹೊರಗೇ ಉಳಿದುಬಿಟ್ಟಿದೆ.

ನಾವು ಹುಟ್ಟಿಬೆಳೆದ ಹಕ್ಕೆ ತೊರೆದು ಹೊಸ ಜಾಗಗಳಿಗೆ ಹೋಗದ ಹೊರತು, ನಮ್ಮ ಸೀಮೆಯ ಜನಜೀವನ, ಭಾಷೆ ಸಂಸ್ಕೃತಿಗಳ ಇತಿಮಿತಿ ವಿಶಿಷ್ಟತೆ ಗೊತ್ತಾಗುವುದಿಲ್ಲ; ವಲಸೆಯು ಹೋದ ಸೀಮೆಯ ವಿಶಿಷ್ಟತೆ ಮಿತಿಯನ್ನೂ ಕಾಣಿಸುತ್ತದೆ. ವಲಸೆಯ ಹೊರತು ನಮ್ಮ ವ್ಯಕ್ತಿತ್ವಕ್ಕೂ ಹೊಸ ಆಯಾಮ ದೊರಕುವುದಿಲ್ಲ. ಆದರೆ ಈ ವ್ಯಕ್ತಿತ್ವ ನಿರ್ಮಾಣದಲ್ಲಿ ಯಾವಾಗಲೂ ಹುಟ್ಟಿಬೆಳೆದ ಸೀಮೆಯ ಅನುಭವ ಮತ್ತು ಭಾಷೆಗಳು ಬುನಾದಿ ರೂಪದಲ್ಲಿರುತ್ತವೆ. ವಲಸೆ ಹೋಗಿ ನೆಲೆಸುವ ಕರ್ಮಭೂಮಿಯು ಜನ್ಮಭೂಮಿಯ ಭಾಷೆಗೆ ಅನುಭವಕ್ಕೆ ಹೊಸ ರೂಪಾಂತರ ಒದಗಿಸುತ್ತದೆ. ಕನ್ನಡದಲ್ಲಿ ತಾವು ಹುಟ್ಟಿ ಬೆಳೆದ ಪರಿಸರದಲ್ಲೇ ಇದ್ದು ಬರೆಹ ಮಾಡಿದವರುಂಟು-ಗುಲ್ವಾಡಿ ವೆಂಕಟರಾವ್, ಕಾರಂತ, ವೈದೇಹಿ, ಶಾಂತರಸರ ತರಹ. ಆದರೆ ಹುಟ್ಟಿದೂರನ್ನು ಬಿಟ್ಟು, ನೆಲೆಸಿದ ಊರಲ್ಲಿದ್ದು ಬರೆದವರೇ ಹೆಚ್ಚು-ಕುವೆಂಪು, ಚಿತ್ತಾಲ, ದೇವನೂರು, ಲಂಕೇಶ್ ತರಹ; ಅನಂತಮೂರ್ತಿ ‘ಸಂಸ್ಕಾರ’ ಬರೆದಿದ್ದು ಇಂಗ್ಲೆಂಡಿನಲ್ಲಿ. ಅನುಭವ ಪಡೆದ ಸ್ಥಳವನ್ನೂ ಅಲ್ಲಿನ ಭಾಷಿಕ ಪರಿಸರವನ್ನೂ ಬಿಟ್ಟು ದೂರಹೋದ ಕಾರಣದಿಂದಲೇ, ಅವುಗಳ ಸೆಳೆತ ಮಾತ್ರವಲ್ಲ, ಅದರೊಳಗಿನ ಮಾಂತ್ರಿಕತೆ ಕೂಡ ಹೆಚ್ಚು ಗಾಢವಾಗಿ ಅವತರಿಸುತ್ತದೆಯೊ ಏನೊ?

ಮಾತುಕತೆ, ಸಂಸ್ಕೃತಿ, ಆಹಾರದ ದೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲೆಯ ಘಟ್ಟಪ್ರದೇಶದಲ್ಲಿ ಒಂದು ಬಗೆಯಿದ್ದರೆ, ಬಯಲು ಸೀಮೆಯ ಭಾಗದಲ್ಲಿ ಇನ್ನೊಂದು ಬಗೆಯಿದೆ. ಅಜ್ಜಂಪುರದಲ್ಲಿ ‘ಏಸ್ ಕೊತಂಬರಿ ಚೀಲಕ್ಕೆ ಬಾಳಿದೀಯೊ ನೀನು?’ ಎಂದು ಜನ ಜಗಳ ಮಾಡುತ್ತಿದ್ದರು. ಜನರನ್ನು ಧಾನ್ಯದ ಚೀಲದ ಜತೆಗಿಟ್ಟು ತೂಕಮಾಡುವುದು ಸೋಜಿಗವಾಗುತ್ತಿತ್ತು. ಇದು ೧೫ ಕಿಮೀ ದೂರದ ಕೆಮ್ಮಣ್ಣಿನ ಜಮೀನುಳ್ಳ ತರೀಕೆರೆಯಲ್ಲಿ ಇರಲಿಲ್ಲ. ಅಜ್ಜಂಪುರವು ಈರುಳ್ಳಿ, ದನಿಯಾ, ಜೋಳ ಬೆಳೆಯುವುದಕ್ಕೆ ಬೇಕಾದ ಎರೆಭೂಮಿ. ಭೂಮಿಗೂ ಬೆಳೆಗೂ ಭಾಷೆಗೂ ಒಳನಂಟಿದೆ. ಒಂದು ಪ್ರದೇಶದ ಭಾಷೆಯ ಸಾಂಸ್ಕೃತಿಕ ವೈಖರಿಯನ್ನು, ಅಮೂರ್ತ ಚಿಂತನೆ ಭಾವನೆಗಳ ಮೇಲೆ ಹುಟ್ಟುವ ಕವಿತೆ ಹೆಚ್ಚಾಗಿ ದುಡಿಸಿಕೊಳ್ಳುವುದಿಲ್ಲ. ಆದರೆ ಸ್ಥಳೀಯ ಅನುಭವ ಪ್ರಧಾನವಾದ ಗದ್ಯಕಥನಗಳು ದುಡಿಸಿಕೊಳ್ಳುತ್ತದೆ. ಈ ಮೂಲಕ ಆಯಾ ಪ್ರದೇಶದ ಬದುಕಿನ ಚಿತ್ರ ಕಟ್ಟಿಕೊಡುತ್ತವೆ. ‘ಮದುಮಗಳು’ ‘ಗ್ರಾಮಾಯಣ’ ‘ನಿಸರ್ಗ’ ‘ಒಡಲಾಳ’ ‘ಬದುಕು’ ‘ಮುಸ್ಸಂಜೆಯ ಕಥಾಪ್ರಸಂಗ’ ‘ಬೆಟ್ಟದಜೀವ’ ಕಾದಂಬರಿಗಳನ್ನು; ಮಾಸ್ತಿ, ಕುಂವೀ, ರಾಘವೇಂದ್ರ ಪಾಟೀಲ, ನಾಗವೇಣಿ, ಮೊಗಳ್ಳಿ, ರಶೀದ್, ವಸುಧೇಂದ್ರ, ನುಗಡೋಣಿಯವರ ಕತೆಗಳನ್ನು; ಬಿ. ಚಂದ್ರೇಗೌಡರ ಅಂಕಣಗಳನ್ನು ಓದುವಾಗ, ಆಯಾ ಲೇಖಕರ ಸೀಮೆಯ ಜನಬದುಕು ಮತ್ತು ಸಂಸ್ಕೃತಿಗಳು, ಅಲ್ಲಿನ ಭಾಷೆಯ ಬಾಗುಬಳುಕುಗಳ ಮೂಲಕ ಪ್ರಕಟವಾಗುವುದನ್ನು ಗಮನಿಸಬಹುದು. ಕನ್ನಡವು ಸಾಂಸ್ಕೃತಿಕವಾಗಿ ಏಕರೂಪಿಯಲ್ಲ. ಅದಕ್ಕೆ ಬಹರೂಪಿಯಾದ ಪ್ರಾದೇಶಿಕ ಒಳಸ್ತರಗಳಿವೆ. ಈ ಹಿನ್ನೆಲೆಯಲ್ಲಿ ಕನ್ನಡದ ವಿಭಿನ್ನ ಸೀಮೆಯ ಜೀವಂತ ಭಾಷೆಯನ್ನು ದುಡಿಸಿಕೊಳ್ಳಬಲ್ಲ, ಸಂಸ್ಕೃತಿಯನ್ನು ಸೃಜನಶೀಲವಾಗಿ ಮರುಸೃಷ್ಟಿಸಿ ಕೊಡಬಲ್ಲ ಕಥನಗಳು ಎಲ್ಲ ಮೂಲೆಗಳಿಂದಲೂ ಮೂಡಬೇಕಿದೆ. ತರೀಕೆರೆಯ ಸೀಮೆಯ ಕನ್ನಡ ಮತ್ತು (ಹೈದರಾಬಾದ್-ಲಖನೊ-ಬಿಜಾಪುರದ ಉರ್ದುವಿಗಿಂತ ವಿಶಿಷ್ಟವಾಗಿರುವ) ಉರ್ದುವಿನಲ್ಲೂ ಇದು ಸಂಭವಿಸಬೇಕು. ಅದನ್ನು ಮುಂಬರುವ ಯಾವುದೊ ಒಂದು ಪ್ರತಿಭೆ ಸಾಕಾರಗೊಳಿಸಬಹುದು ಎಂದು ಆಶಿಸುವೆ.

ಆದರೆ ಕತೆ-ಕಾದಂಬರಿ ಬರೆಯಲಾಗದ ನಾನು, ನಮ್ಮ ಸೀಮೆಗೆ ಹೋದರೆ ಜನರಾಡುವ ಭಾಷೆಯನ್ನು ಸಂಗೀತದ ಹಾಗೆ ಆಸಕ್ತಿಯಿಂದ ಪ್ರೀತಿಯಿಂದ ಆಲಿಸುತ್ತೇನೆ. ಅದು ನನ್ನ ಬಾಲ್ಯದ ಶಬ್ದಕೋಶವನ್ನೂ ವಾಕ್ಯರಚನೆಯನ್ನೂ ದನಿಯಲ್ಲಿರುವ ಕಾಕನ್ನೂ ಸಜೀವಗೊಳಿಸುತ್ತದೆ; ಆಗ ತುಂಗಭದ್ರೆಯ ಬಾಗಿನ ತೆಗೆದುಕೊಂಡು ಭದ್ರೆಗೆ ಅರ್ಪಿಸಲು ಹೋದಂತೆ ಆನಂದವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

"ಒಳಮೀಸಲಾತಿ ಇಲ್ಲದೆ ಒಂದೇಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ" ಎಂದು ಆಹಾರ...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...