Homeರಾಜಕೀಯಭಟ್ಕಳದಲ್ಲಿ “ಗಂಟೆ” ಹಿಡಿದವರು ಗಂಡಾಂತರದಲ್ಲಿ!!

ಭಟ್ಕಳದಲ್ಲಿ “ಗಂಟೆ” ಹಿಡಿದವರು ಗಂಡಾಂತರದಲ್ಲಿ!!

- Advertisement -
ಮುಸ್ಲಿಮ್ ಭಯೋತ್ಪಾದಕರಿಂದ ಭಟ್ಕಳದ ಹೆಸರು ಹಾಳಾಗಿದೆ ಎಂದು ಬೊಬ್ಬಿರಿಯುವ ಹಿಂದೂ ಹರಿಕಾರಗಳು ವಾಸ್ತವ ಮರೆಮಾಚುತ್ತಿದ್ದಾರೆ. ಅಸಲಿಗೆ ಭಟ್ಕಳಕ್ಕೆ ಮತಾಂಧತೆಯ ಕಳಂಕ ತಟ್ಟಿದ್ದೇ ಮೋದಿ ಮಾಮನ ಪುಟಗೋಸಿ ಮಂತ್ರಿ ಅನಂತ್ಮಾಣಿ ಯಾನೆ ಅನಂತ್‍ಕುಮಾರ್ ಹೆಗಡೆಯ ಕೇಸರಿ ಕ್ರೌರ್ಯದ ಕರಾಮತ್ತಿನಿಂದ! 1990ರ ದಶಕದಲ್ಲಿ ಭಟ್ಕಳ ಅನಂತ್ಮಾಣಿಯ ಹಿಂದೂತ್ವದ ಆಡಂಬೋಲವಾಗಿತ್ತು ನವಾಯಣ ಮುಸಲರು ಹೆಚ್ಚಿರುವ ಭಟ್ಕಳ 1990ರ ದಶಕದಾರಂಭದಲ್ಲಿ ಒಂದಿಡೀ ವರ್ಷ ಕೋಮುದಳ್ಳುರಿಯಲ್ಲಿ ಬೆಂದು ಬಸವಳಿದಿತ್ತು. ಈ ಹಿಂಸಾಕಾಂಡದ ಹಿಂದಿದ್ದದ್ದು ಇದೇ ಅನಂತ್ಮಾಣಿಯ ಕಾಣದ ಕೈಗಳು!!
ಅಂದು ಹಿಂದೂ ಜಾಗರಣಾ ವೇದಿಕೆಯ ಭೂಗತ ಹಿಂಸಾ ರಾಯಭಾರಿಯಾಗಿ ಭಟ್ಕಳದ ಹಳ್ಳಿ-ಹಳ್ಳಿಗಳಲ್ಲಿ ಅಂಡಲೆಯುತ್ತಿದ್ದ ಮಾಣಿ ಮತೀಯ ಉನ್ಮಾದಕ್ಕೆ ಚಿತಾವಣೆ ನಡೆಸುತ್ತಿದ್ದ. ಮಾಣಿಗೆ ಕೇಸರಿ ರಾಜಕಾರಣದ ದೀಕ್ಷೆ ಕೊಟ್ಟಿದ್ದು ಡಾ| ಚಿತ್ತರಂಜನ್ ಎಂಬ ಚೆಡ್ಡಿ ಪಿತಾಮಹ. ಅಚಾನಕ್ ರಂಜನ್ ಎಮ್ಮೆಲ್ಲೆಯಾಗಲು ಮಾಣಿಯ ಕೋಮು ಕಿತಾಪತಿಯೇ ಕಾರಣವಾಗಿತ್ತು. ಭಟ್ಕಳದ ಪರಿಸ್ಥಿತಿ ಅದೆಂಥ ರೌರವ ನರಕದಂತಾಯಿತೆಂದರೆ, ಹಿಂದೂತ್ವದ ಉಗ್ರ ಪ್ರತಾಪವೇ ಡಾ| ರಂಜನ್‍ರ ಬಲಿ ಪಡೆದುಬಿಟ್ಟಿತು! ಆಗ ಖುಲಾಯಿಸಿತು ಒಂದ್ಹೊತ್ತಿನ ಮಜ್ಗೆ ತಂಬ್ಳಿ-ಅನ್ನದ ಮಾಣಿಯ ಅದೃಷ್ಟ!! ಎರಡು ದಶಕದ ಹಿಂದೆ ಡಾ| ರಂಜನ್‍ರ ಹೆಣ ಮುಂದಿಟ್ಟುಕೊಂಡು ರಾಜಕೀಯ ಜೀವನ ಆರಂಭಿಸಿದ್ದ ಅನಂತ್ಮಾಣಿ ಬಡಿವಾರಕ್ಕೆ ಇವತ್ತಿಗೂ ಹಿಂದೂ ಅಮಾಯಕರ ಹೆಣವೇ ಬಂಡವಾಳ!
ಎಂಪಿಯಾಗುವ ಯಾವ ಯೋಗ್ಯತೆಯೂ ಇಲ್ಲದ ಪುಂಡ ಅನಂತ್ಮಾಣಿಗೆ ದಿಲ್ಲಿ ಪಾರ್ಲಿಮೆಂಟ್‍ನಲ್ಲಿ ನತದೃಷ್ಟ ಉತ್ತರ ಕನ್ನಡ ಪ್ರತಿನಿಧಿಸುವ ಯೋಗವೂ ಬಂತು! ಬರೀ ಬುರ್ನಾಸ್ ಭಾಷಣ-ದೂಷಣೆ ಮಾಡುವ ಮಾಣಿಯಿಂದ ಉತ್ತರ ಕನ್ನಡಕ್ಕೆ ಒಳ್ಳೆಯದೇನೂ ಆಗಲಿಲ್ಲ. ಆತನ ಹಿಂದೂತ್ವದ ದಗಲುಬಾಜಿತನ  ಭಟ್ಕಳದ ಜನರಿಗೆ ತಿಳಿಯಲು ತಡವಾಗಲಿಲ್ಲ. ಅನಂತ್ಮಾಣಿ ಮುಂದಾಳತ್ವದ ಹಿಂಜಾವೇ-ಆರೆಸ್ಸೆಸ್-ಬಿಜೆಪಿಯ “ಬೇಧವಾಕ್ಯ”ಕ್ಕೆ ಮರುಳಾಗಿ ಲಾಠಿ-ಬೂಟಿನ ಏಟಿನ ಹಿಂಸೆ, ಕೋರ್ಟು-ಕಚೇರಿ ಅಲೆದಾಟದ ನೋವು ಅನುಭವಿಸಿದ ಭಟ್ಕಳದ ಮಂದಿಗೆ ಮಾಣಿ ಅವತಾರ ಅರಿವಾಯಿತು! ಕೋಮುಗಲಭೆಯ ಉಸಾಬರಿಯಿಂದ ಜನರು ದೂರಾದರು. ಅನಂತ್ಮಾಣಿ ವಿರುದ್ಧ ತಿರುಗಿಬಿದ್ದರು. ಲೋಕಸಭೆಯ ಚುನಾವಣೆಯಲ್ಲಿ ಅನಂತ್ಮಾಣಿಗೆ ಸತತ ಹಿನ್ನಡೆಯಾಯ್ತು, ಭಟ್ಕಳದ ನೆಲೆ ಕುಸಿಯಿತು ಕಳೆಗುಂದಿದ ಮಾಣಿ  ಚಿಂತಾಕ್ರಾಂತನಾದ. ಭಟ್ಕಳದಲ್ಲಿ ಮತ್ತೆ ಹಿಂದಿನ ಹಿಡಿತ ಸಾಧಿಸಲು ಆತ ಕುತಂತ್ರ ಶುರುಹಚ್ಚಿಕೊಂಡ.
ಗೋವಿಂದ ನಾಯ್ಕ, ಸುನೀಲ್ ನಾಯ್ಕ(ಈಗ ಶಾಸಕ)ನಂಥ ಹುಂಬ ನಾಮಧಾರಿ ಯುವಕರಿಗೆ ಎಮ್ಮೆಲ್ಲೆ, ಜಿಪಂ ಸದಸ್ಯತ್ವ, ಜುಜುಬಿ ಅಧಿಕಾರದ ಆಸೆ ತೋರಿಸಿ ಗಂಟೆ(ಜಾನುವಾರು) ಹಿಡಿದು ದೊಂಬಿ ಎಬ್ಬಿಸಿ ಹಿಂದೂಗಳ ಮತಾಂಧ ಧ್ರುವೀಕರಣ ಮಾಡುವ ತರಬೇತಿ ನೀಡತೊಡಗಿದ. ಹುಚ್ಚನೊಬ್ಬನ ಕೈಲಿ ದನದ ಮಾಂಸ ಕಟ್ಟುಕೊಟ್ಟು ನಾಗರಬನದಲ್ಲಿ ಹಾಕಿಸಿದ ಭಾನ್ಗಡಿ ಮತ್ತು ಗಂಟೆ ಹಿಡಿಯೋ ಗಾಂಚಾಲಿಯ ಫಲಾನುಭವಿಯಾದ ಸುನೀಲ್ ನಾಯ್ಕ ಶಾಸಕನೂ ಆಗಿಹೋದ!
ಅನಂತ್ಮಾಣಿ ಮತ್ತು ಸುನೀಲ್ ನಾಯ್ಕ್ ಗುರು-ಶಿಷ್ಯರ ಗಂಟೆ ರಾಜಕಾರಣವೀಗ ಹಿಂದೂ ಹುಡುಗರಿಗೆ, ಅದರಲ್ಲೂ ಕಟ್ಟಾ ಬಿಜೆಪಿ ಕಾರ್ಯಕರ್ತರಾದ ದೀವರ ಪೋರರಿಗೇ ಉಲ್ಟಾ ಹೊಡೆಯುತ್ತಿದೆ. ಅನಂತ್ಮಾಣಿ-ಸುನೀಲ್ ನಂಬಿ ಗಂಟೆಗಾಡಿ(ಜಾನುವಾರು ಸಾಗಾಟದ ವಾಹನ) ಅಡ್ಡಹಾಕಿ ಅದರಲ್ಲಿದ್ದವರು ಹಿಂದುವೋ, ಸಾಬಿಯೋ ಎಂದೂ ನೋಡದೆ ಹೊಡೆದು-ಬಡಿದು ರಕ್ತ ಹರಿಸಿ ಹೀರೋ ಆಗಿ ಮೆರೆಯಲು ಹವಣಿಸಿದ ಭಂಡ ಬಿಜೆಪಿ ತರುಣರೀಗ ಜೈಲಲ್ಲಿ ಕೊಳೆಯುತ್ತಿದ್ದಾರೆ; ಅವರ ಹೆತ್ತವರು-ಒಡಹುಟ್ಟಿದವರು ಸಂಕಟ ತಡೆಯಲಾಗದೆ ಮಾಣಿ ಮತ್ತವನ ಚೇಲ ಸುನೀಲನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಜೈಲು ಪಾಲಾಗಿರುವ ಒಬ್ಬೊಬ್ಬ ಹಿಂದುಳಿದ ವರ್ಗದ ಹುಡುಗನ ಕುಟುಂಬದ ಕಣ್ಣೀರ ಕತೆ ಹೇಳತೀರದು. ಎರಡು ತಿಂಗಳಿಂದ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿರುವ ಹುಡುಗರು ಅವರವರ ಕುಟುಂಬದ ತುತ್ತಿಗೆ ಆಧಾರವಾಗಿದ್ದವರು. ದುಡಿದು ತರುವ ಮನೆ ಮಗನೇ ಇಲ್ಲದ ಉಪವಾಸ-ವನವಾಸ ಅನುಭವಿಸುತ್ತಿರುವ ಚಡಪಡಿಕೆ ಎಂಥ ಕಲ್ಲು ಹೃದಯವನ್ನೇ ಕರಗಿಸುವಂತಿದೆ. ಆದರೆ ಘಾತುಕ ಅನಂತ್ಮಾಣಿ-ಸುನೀಲ್ ನಾಯ್ಕ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಹಾಯಾಗಿ ಅಧಿಕಾರ ಸುಖ ಅನುಭವಿಸುತ್ತಿದ್ದಾರೆ.
ಕಳೆದ ಮೇ 20ರಂದು ಭಟ್ಕಳದ ಮುರ್ಡೇಶ್ವರ ಬಳಿಯ ತೆರ್ನಮಕ್ಕಿ ಎಂಬಲ್ಲಿ ನಡೆದ ಗಂಟೆಗಾಡಿ ಅಡ್ಡಹಾಕಿ ಡ್ರೈವರ್-ಕ್ಲೀನರ್‍ಗೆ ಬಡಿದು, ದನ ದರೋಡೆ ಮಾಡುವ “ಹಿಂದೂತ್ವ ಅಭಿಯಾನ” ಬಿಜೆಪಿ ಮಹಾಮಹಿಮರ ವಿಕಾರಮುಖ ಅನಾವರಣಗೊಳಿಸಿಬಿಟ್ಟಿದೆ! ಹಿಂದೂತ್ವದ ಹುಲಿ ಸವಾರಿ ಹೊರಟವರನ್ನು ಅದೇ ಹುಲಿ ನುಂಗುತ್ತಿರುವುದು ಮೇಲುನೋಟಕ್ಕೆ ಮಜಾ ಅನಿಸಿದರೂ ಆಳದಲ್ಲಿ ಘನಘೋರವಾಗಿದೆ ಪರಿಸ್ಥಿತಿ!! ಅಂದು ಸಂಜೆ ಸುಮಾರು 7 ಗಂಟೆ ಹೊತ್ತಿಗೆ ಹದಿನಾಲ್ಕು ವಿಶೇಷ ತಳಿಯ ಹಾಲು ಕೊಡುವ ದನ ಮತ್ತು ಕರು ಇರುವ ದೊಡ್ಡದೊಂದು ಲಾರಿ ತೆರ್ನಮಕ್ಕಿ ರಸ್ತೆಬದಿಯಲ್ಲಿ ನಿಂತಿರುತ್ತದೆ. ಗುಜರಾತ್‍ನಿಂದ ಕೇರಳದ ಕೊಚ್ಚಿಗೆ ಹೊರಟಿದ್ದ ಈ ದನದ ಲಾರಿಯ ಡ್ರೈವರ್ ಮತ್ತು ಕ್ಲೀನರ್ ಗೂಡಂಗಡಿಯಲ್ಲಿ ಚಹಾ ಕುಡಿಯಲೆಂದು ಲಾರಿ ನಿಲ್ಲಿಸಿದ್ದರು. ತೆರ್ನಮಕ್ಕಿ-ಬಸ್ತಿ ಏರಿಯಾ ಎಂದರೆ ನೂತನ ಶಾಸಕ ಸಾಹೇಬ ಸುನಿಲ್ ನಾಯ್ಕನ ಪುಂಡರ ದಂಡಿನ ಗೂಂಡಾ ಮೆಟ್ಟಿನ ಸ್ಥಳ.
ಲಾರಿಯಲ್ಲಿದ್ದ ದನ-ಕರು ಕಂಡಿದ್ದೇ ತಡ, ಶಾಸಕ ಸುನಿಲ್‍ನ ಸಹಚರರಾದ ಶಬರೀಶ್ ನಾಯ್ಕ, ಜನಾರ್ದನ ನಾಯ್ಕ…. ವಗೈರೆ ಹದಿನೈದಿಪ್ಪತ್ತು ಹುಡುಗರು ಜಮೆಯಾಗಿದ್ದಾರೆ. ಸಾಬರು ಸಮೃದ್ಧವಾದ ದನ-ಕರು ಕಡಿಯಲು ಒಯ್ಯುತ್ತಿದ್ದಾರೆಂಬುದು ಗುಲ್ಲೆಬ್ಬಿಸಿದ್ದಾರೆ. “ಕಸಾಯಿಖಾನೆಗೆ ಹೋಗುತ್ತಿಲ್ಲ; ಕೊಚ್ಚಿಯ ಹಾಲಿನ ಡೈರಿಗೆ ಹೋಗುತ್ತಿದೆ ದನ-ಕರು….” ಎಂದು ಡ್ರೈವರ್-ಕ್ಲೀನರ್ ಅದೆಷ್ಟೇ ಹೇಳಿದರೂ ಕೇಳುವ ವ್ಯವಧಾನ ಶಾಸಕ ಸಾಹೇಬರ ಹಿಂಬಾಲಕರಿಗೆ ಇರಲಿಲ್ಲ. ಬರೀ ಐದೇ ದಿನದ ಹಿಂದೆ ಬಿಜೆಪಿ ಸುನಿಲ್ ನಾಯ್ಕ ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಗೆದ್ದಿದ್ದ ಅಮಲಿನ್ನೂ ಆತನ ಹಿಂಬಾಲಕರಿಗೆ ಇಳಿದಿರಲಿಲ್ಲ! ಡ್ರೈವರ್-ಕ್ಲೀನರ್‍ಗೆ ಮನಸೋ ಇಚ್ಛೆ ಥಳಿಸಿ ರಕ್ತ ಹರಿಸಿದರು; ಲಾರಿಯಲ್ಲಿದ್ದ ಅಷ್ಟು ದನ-ಕರು ಇಳಿಸಿದರು. ಕೆಲವರು ದನ-ಕರು ಮನೆಗೊಯ್ದು ಕಟ್ಟಿಕೊಂಡರು; ಇನ್ನೂ ಕೆಲವರು ಒಂದಿಷ್ಟು ದನ-ಕರುವನ್ನು ಕಾಡಿಗೆ ಅಟ್ಟಿದರು. ಸುದ್ದಿ ತಿಳಿದುಬಂದ ಪೊಲೀಸರಿಗೂ ಚೆಡ್ಡಿ ರೌಡಿಪಡೆ ಹೊಡೆದು ಹಿಮ್ಮೆಟ್ಟಿಸಿತು!
ಶಾಸಕ ವೇದವ್ಯಾಸ್ ಕಾಮತ್ ಎಂಟ್ರಿ!
ತೆರ್ನಮಕ್ಕಿಯಲ್ಲಿ ಶಾಸಕ ಸುನಿಲ್‍ನ ಕೌಬ್ರಿಗೇಡ್‍ನ “ಗೋಸಂಸ್ಕರಣೆ” ಪುಣ್ಯ್ಯಕಾರ್ಯ ಮುಗಿದು, ಡ್ರೈವರ್-ಕ್ಲೀನರ್‍ನ ಪೊಲೀಸರು ಬಚಾಯಿಸಿ ಸುರಕ್ಷಿತ ಸ್ಥಳ ತಲಪುವಾಗ ರಾತ್ರಿ 10 ಗಂಟೆ ಆಗಿತ್ತು. ಆಗ ಡ್ರೈವರ್ ಗುಜರಾತಿಗೆ ನಡೆದ ಘಟನೆಯನ್ನೆಲ್ಲ ಫೋನಲ್ಲಿ ತಿಳಿಸಿದ್ದಾನೆ. ಆಗ ಎಂಟ್ರಿ ಹೊಡೆದಿದ್ದೇ ಮಂಗಳೂರು ದಕ್ಷಿಣ ಕ್ಷೇತ್ರದ ಹೊಚ್ಚಹೊಸ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್!! ಪೊಲೀಸರಿಗೆ ದನ-ಕರು ಒಂದೂ ಬಿಡದೆ ಹುಡುಕಿ ತರುವಂತೆ ಮೇಲಧಿಕಾರಿಗಳು ಖಡಕ್ ಆರ್ಡರ್ ಮಾಡುತ್ತಾರೆ. ಕೇಸ್ ಸೀರಿಯಸ್ ಆಗುತ್ತದೆ. ಬರೋಬ್ಬರಿ ಹದಿಮೂರು ಮಂದಿ ಸುನಿಲ್ ಬಂಟರ ಮೇಲೆ ದರೋಡೆ-ಹಲ್ಲೆ ಕೇಸು ಬೀಳುತ್ತದೆ. ಪೊಲೀಸರು ಪೀಕಲಾಟ ಆರಂಭವಾಗುತ್ತದೆ. ಒಂದುಕಡೆ ದನ-ಕರು ಹುಡುಕಬೇಕು; ಮತ್ತೊಂದೆಡೆ ಆರೋಪಿಗಳ ಹಿಡಿದು ತಂದು ಲಾಕಪ್ಪಿಗೆ ಜಡಿಯಬೇಕು.
ದನ-ಕರುಗಳೆಲ್ಲ ಸಿಗುತ್ತದೆ, ಆದರೆ ಅನಂತ್ಮಾಣಿ-ಸುನಿಲ್‍ನ ಸೈನ್ಯದ ಹದಿಮೂರು ಮಂದಿ ದರೋಡೆ ಕೇಸಲ್ಲಿ ಜಾಮೀನು ಸಿಗದೆ ಕಾರವಾರ ಜೈಲಿಗೆ ಹೋಗಬೇಕಾಗುತ್ತದೆ. ಇದರಲ್ಲಿ ಬಿಜೆಪಿ ಲೀಡರ್‍ಗಳ ಪ್ರಚೋದನೆಗೆ ಸಿಲುಕಿ ಗಂಟೆ ಹಿಡಿಯಲು ಬಂದ ಪಾಪದ ಪೋರರೂ ಇದ್ದಾರೆ. ಇವರಿಗೆಲ್ಲ ಎರಡು ತಿಂಗಳಿಂದ ಜಾಮೀನು ಸಿಗುತ್ತಿಲ್ಲ. ದರೋಡೆ ಕೇಸ್(ಸೆಕ್ಷನ್ 395)ಗೆ ಜ್ಜಾಮೀನು ಇಲ್ಲ. ಅದು ನಾನ್ ಬೇಲಬಲ್!! ಗಂಟೆ ಹುಡುಗರ ಕೇಸು ಇಷ್ಟು ಗಟ್ಟಿಯಾಗಲು ಕಾರಣವೇನು ಗೊತ್ತಾ? ಗುಜರಾತ್‍ನಿಂದ ಹೊರಟಿದ್ದ ದನ-ಕರು ಲಾರಿ ಹೋಗುತ್ತಿದ್ದದ್ದು ಕೇರಳ ಕೊಚ್ಚಿಯ ಹಾಲು ಡೈರಿಗೆ. ಇದು ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್‍ನ ಸಹೋದರನದು. ವಿಶೇಷ ತಳಿಯ ದುಬಾರಿ ಹಸುಗಳನ್ನು ಕೊಂಡುಕೊಂಡಿದ್ದರು ಕಾಮತ್ ಬ್ರದರ್ಸ್! ಹೀಗಾಗಿ ಕೆರಳಿದ ಕಾಮತ್ ಶಾಸಕಗಿರಿ ಬಲ ಬಳಸಿ ಪೊಲೀಸರ ಮೇಲೆ ಒತ್ತಡ ಹಾಕಿ ದನ-ಕರು ಹುಡುಕಿ ತಂದುಕೊಡುವಂತೆ ಪ್ಲಾನು ಮಾಡಿದ್ದರು.
ಮೊದ-ಮೊದಲು ಭಟ್ಕಳ ಕೇಸರಿ ಶಾಸಕ ಸುನಿಲ್‍ನಾಯ್ಕ ಹಿಂಬಾಲಕರ ಬಚಾಯಿಸಲು ಪ್ರಯತ್ನ ಮಾಡಿದ್ದಾನೆ. ಯಾವಾಗ ತನ್ನ ಪಕ್ಷದ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್‍ನ ಫೋನು ಬಂತೋ ಆಗ ಅನುಯಾಯಿಗಳ ಬಲಿಗೊಟ್ಟು ತಲೆ ತಪ್ಪಿಸಿಕೊಂಡಿದ್ದಾನೆ. ಜಾಮೀನು ಕೊಡಿಸಿ ಎಂದು ಹೋದವರಿಗೆ- “ಆ ಗಂಟೆಗಾಡಿ ಮುಟ್ಟು ಕೆಲ್ಸ ಎಂತ ಇದ್ದಿತ್ತು ಮಾರಾಯ್ರೆ…. ದನ-ಕರು ಬಿಚ್ಚಿ ಓಡಿಸ್ತ್ರು ಅಂದ್ರೆ…? ಡ್ರೈವರ್‍ಗೆ ಅಷ್ಟೆಲ್ಲ ಹೊಡೋದೆಂತಕ್ಕಿಂತು… ಅವ್ರೆಂಥ ಹೊಟ್ಟೆಗೆ ಅನ್ನ ತಿಂತ್ರೋ… ಸಗಣಿ ತಿಂತ್ರೋ…” ಎಂದಬ್ಬರಿಸಿದ್ದಾನೆ. ಅಲ್ಲಿಗೆ ಆತನ ಗೆಲ್ಲಿಸಲು ಬೆವರಿಳಿಸಿದ ಹಿಂದೂತ್ವದ ಅಮಲುಕೋರರ ನಶೆ ಇಳಿದಿದೆ. ಸುನಿಲ್ ಢೋಂಗಿ ಅಂತ ಸಾಬ್ರ ಫ್ರೆಂಡು; ಅವ್ರ ಸಂಗ್ತಿಗೆ ಪಾರ್ಟಿ ಮಾಡ್ತಾ ಮಹಾ ಮೋಸಗಾರ ಎಂದೆಲ್ಲ ಸಾಹಿತ್ಯ ಸೃಷ್ಟಿಸಿ ವಾಟ್ಸ್‍ಆ್ಯಪ್‍ಗೆ ಹಾಕಿದ್ದಾರೆ. ಸಾಬರ ಜತೆ ಆತ ಉಣ್ಣುತ್ತ ಕುಳಿತ ಫೋಟೋ ಅಂತೂ ವೈರಲ್ ಆಗಿದೆ ಹಿಂದೂ ಹುಡುಗರ ನಡುವೆ.
ಭಟ್ಕಳದ ಹಿಂದೂಗಳು ಕೆರಳುತ್ತಿರುವ ವರ್ತಮಾನ ಕೇಳಿದ ಕೇಂದ್ರಮಂತ್ರಿ ಅನಂತ್ಮಾಣಿ ಇದು ತನಗೆ ಮುಂದಿನ ಪಾರ್ಲಿಮೆಂಟ್ ಇಲೆಕ್ಷನ್‍ನಲ್ಲಿ ದುಬಾರಿಯಾಗುತ್ತದೆ ಎಂದು ಲೆಕ್ಕಹಾಕಿ ರಾಜಿಗೆ ನೋಡಿದ್ದಾನೆ. ಕೇಸು ವಾಪಸ್‍ಗೆ ಶಾಸಕ ವೇದವ್ಯಾಸ್ ಕಾಮತ್ ಪರಿವಾರ ಒಪ್ಪದೆ ಅನಂತ್ಮಾಣಿ ನೀರಿಳಿಸಿದ್ದಾರೆ. ದರೋಡೆ ಕೇಸು ವಾಪಸ್ ತೆಗೆಸುವುದು ಅಷ್ಟು ಸುಲಭವಲ್ಲ ಎಂದು ಪೊಲೀಸರು ಮಾಣಿಗೆ ಬುದ್ದಿ ಹೇಳಿದ್ದಾರೆ. ಇದಕ್ಕೆ ಕೋರ್ಟ್ ಒಪ್ಪುವುದು ಕಷ್ಟ ಆಗ ಪೊಲೀಸರ ತಲೆದಂಡವಾಗುತ್ತದೆ. ಸಂದಿಗ್ಧಕ್ಕೆ ಸಿಲುಕಿದ ಅನಂತ್ಮಾಣಿ ಈ ಗಂಟೆ ಗಲಾಟೆಯಿಂದ ಸಾವಕಾಶವಾಗಿ ದೂರವಾಗಿದ್ದಾನೆ. ದಿಲ್ಲಿ-ಬೆಂಗಳೂರಲ್ಲಿ ಬಿಜಿ ಎಂದ್ಹೇಳಿ ನಾಟಕ ನಡೆಸಿದ್ದಾನೆ. ಅಲ್ಲಿಗೆ “ಹಿಂದೂ ಹುಲಿ” ಅನಂತ್ಮಾಣಿಯ ನರಿಗಿರಿ ಬಟಾಬಯಲಾಗಿದೆ. ಅನಂತ್ಮಾಣಿಗೆ ಭಟ್ಕಳದ ಹುಡುಗರು ಸಲೀಸಾಗಿ ಜೈಲಿಂದ ಬರುವುದು ಬೇಕಾಗಿಲ್ಲ, ಅಲ್ಲಿ ಆ ಹುಡುಗರು ಕೊಳೆತಷ್ಟೂ ಇಲ್ಲಿ ಭಟ್ಕಳ ಮತ್ತಿತರೆಡೆ ಹಿಂದೂಗಳಲ್ಲಿ ಹಿಂದೂತ್ವದ ಕೆಚ್ಚು ಹೆಚ್ಚುತ್ತದೆ. ಅದು ಮುಂದಿನ ಇಲೆಕ್ಷನ್‍ನಲ್ಲಿ ಬಿಜೆಪಿಗೆ ಓಟಾಗಿ ಪರಿವರ್ತನೆ ಆಗುತ್ತದೆ ಎಂಬ ದೂ(ದು)ರಾಲೋಚನೆ ಮಾಣಿಯದು. ಇನ್ನೊಂದು ಕಾರಣ-ಸ್ವಪಕ್ಷದ ಮಂಗಳೂರು ಎಮ್ಮೆಲ್ಲೆ ಕಾಮತ್‍ಗೆ ತೊಂದರೆ ಆಗಬಾರದೆಂಬುದು.
ಬಡ ದೀವರ ಪೋರರ ಬಲಿಕೊಟ್ಟು ಲಾಭ-ನಷ್ಟದ ಲೆಕ್ಕಾಚಾರ ಮಾಣಿ ಹಾಕುತ್ತಿದ್ದಾನೆ. ಇಷ್ಟಕ್ಕೂ ಭಟ್ಕಳ ಬಿಜೆಪಿ ಭೂಪರಿಗೆ, ಶಾಸಕ ಸುನಿಲ್ ನಾಯ್ಕನಿಗೆ ಮತ್ತು ಕೇಂದ್ರ ಮಂತ್ರಿ ಅನಂತ್ಮಾಣಿಗೆ ಜೈಲಲ್ಲಿರುವ 13 ಮಂದಿ ಬಿಜೆಪಿ ಬೆಂಬಲಿಗರಿಗೆ ಜಾಮೀನು ಕೊಡಿಸೋದು ಕಷ್ಟದ ಕೆಲಸವೇನೂ ಅಲ್ಲ, 13 ಜನರ ಮೇಲೆ ಎರಡು ಎಫ್‍ಐಆರ್ ಆಗಿತ್ತು. ಸೆಕ್ಷನ್ 353ರಲ್ಲಿ ಬೇಲಾಗಿದೆ. ಇನ್ನೊಂದರಲ್ಲಿ(395) ದೂರುಕೊಟ್ಟ ಡ್ರೈವರ್ ಹತ್ತಿರ ಮರುಹೇಳಿಕೆ ಪಡೆದು 395ನೇ ಸೆಕ್ಷನ್ ವಾಪಸ್ ಪಡೆಯಲು ಅವಕಾಶವಿತ್ತು. ಕಂಪ್ಲೇಂಟು ವಾಪಸ್ ಪಡೀಬೇಕೆಂದು ಲಾರಿ ಚಾಲಕ ಗುಜರಾತಿಂದ ಒಮ್ಮೆ ಬಂದಿದ್ದ. ಆಗ ಬಿಜೆಪಿ ಎಂಪಿ ಮಂತ್ರಿ-ಎಮ್ಮೆಲ್ಲೆ ಯಾರೂ ಕೇರ್ ಮಾಡಲಿಲ್ಲ, ಇದರರ್ಥ ಇಷ್ಟೇ-ಲೋಕಸಭೆ ಇಲೆಕ್ಷನ್ ಬರುವವರೆಗೆ ಕಂಡವರ ಮನೆ ಮಕ್ಕಳು ಸಾಯಬೇಕು. ಜೈಲಿಗೆ ಬೀಳಬೇಕು. ಆಗ ಬಿಜೆಪಿ ಭರ್ಜರಿ ಲಾಭ ಗಳಿಸುತ್ತದೆಂಬ ಕ್ರೂರ ರಾಜಕಾರಣ ನೀತಿ ಸಂಘಪರಿವಾರದ್ದು.
ಇಲ್ಲೊಂದು ಮಹತ್ವದ-ಅಚ್ಚರಿಯ ಸಂಗತಿಯೊಂದಿದೆ. ದನಗಳು ಬಿಜೆಪಿಯ ಮಂಗಳೂರು ಶಾಸಕನ ಕುಟುಂಬದ್ದು, ದನ ಸಾಗಿಸುತ್ತಿದ್ದದ್ದು ಕಾಮತರ ಫ್ಯಾಮಿಲಿಯ ಬಿಜೆಪಿಗರೇ. ದನ ಹಿಡಿದದ್ದು ಭಟ್ಕಳ ಬಿಜೆಪಿ ಭಂಡ ಹುಡುಗರು. ಅವರ ಮೇಲೆ ನಾನ್‍ಬೇಲೇಬಲ್ ಕೇಸು ಹಾಕಿಸಿದ್ದು ಬಿಜೆಪಿ ಶಾಸಕ! ಜೈಲಲ್ಲಿರುವ ಅಮಾಯಕರಿಗೆ ಬೇಲ್ ಕೊಡಿಸುತ್ತೇವೆಂದು ನಯವಂಚನೆ-ಮೋಸ ಮಾಡುತ್ತಿರುವುದೂ ಬಿಜೆಪಿಯ ಸ್ವಯಂ ಘೋಷಿತ  ನಾಯಕ ಅನಂತ್ಮಾಣಿ, ಆತನ ಆಜ್ಞಾನುದಾರಿ ಶಿಷ್ಯ-ಶಾಸಕ ಸುನಿಲ್ ನಾಯ್ಕ ಮತ್ತು ಸ್ಥಳೀಯ ಬಿಜೆಪಿ ಲೀಡರ್‍ಗಳು. ಜೈಲಲ್ಲಿ ಇರುವವರ ಬಿಡಿಸುವ ಮನಸ್ಸು ಇದ್ದರೆ ಈ ಬಿಜೆಪಿಗಳಿಗೆಲ್ಲ ನಿರ್ಧಾರ ಮಾಡೋದು ಒಂದು ನಿಮಿಷದ ಕೆಲಸ. ಆದರೆ ಸಂತ್ರಸ್ತ ಕುಟುಂಬದವರನ್ನು ಅನಂತ್ಮಾಣಿ ಗ್ಯಾಂಗ್ ಬೇಲ್ ಮಾಡಿಸುತ್ತೇವೆಂದು ಮಂಗ ಮಾಡುತ್ತಿದೆ. ತನ್ನ ರಾಜಕೀಯ-ಆರ್ಥಿಕ ಲಾಭದ ಹಿಂದೂತ್ವದ ಹೋರಾಟಕ್ಕೆ ಅಮಾಯಕ ಶೂದ್ರರನ್ನು ಕಾಲಾಳುಗಳಾಗಿ ಮಾಡಿಕೊಳ್ಳುವ ಬ್ರಾಹ್ಮಣಿಕೆ ನಂಜಿನ ಮಾಣಿ ಮಸಲತ್ತೀಗ ಜನರಿಗೆ ಅರ್ಥವಾಗುತ್ತಿದೆ. ಇದು ಮುಂದಿನ ಚುನಾವಣೆಯಲ್ಲಿ ಮಾಣಿಗೆ ದೊಡ್ಡ “ದಂಡ” ಆಗುವುದಂತೂ ಗ್ಯಾರಂಟಿ.
– ವರದಿಗಾರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....