Homeರಾಜಕೀಯಭಟ್ಕಳದಲ್ಲಿ “ಗಂಟೆ” ಹಿಡಿದವರು ಗಂಡಾಂತರದಲ್ಲಿ!!

ಭಟ್ಕಳದಲ್ಲಿ “ಗಂಟೆ” ಹಿಡಿದವರು ಗಂಡಾಂತರದಲ್ಲಿ!!

- Advertisement -
ಮುಸ್ಲಿಮ್ ಭಯೋತ್ಪಾದಕರಿಂದ ಭಟ್ಕಳದ ಹೆಸರು ಹಾಳಾಗಿದೆ ಎಂದು ಬೊಬ್ಬಿರಿಯುವ ಹಿಂದೂ ಹರಿಕಾರಗಳು ವಾಸ್ತವ ಮರೆಮಾಚುತ್ತಿದ್ದಾರೆ. ಅಸಲಿಗೆ ಭಟ್ಕಳಕ್ಕೆ ಮತಾಂಧತೆಯ ಕಳಂಕ ತಟ್ಟಿದ್ದೇ ಮೋದಿ ಮಾಮನ ಪುಟಗೋಸಿ ಮಂತ್ರಿ ಅನಂತ್ಮಾಣಿ ಯಾನೆ ಅನಂತ್‍ಕುಮಾರ್ ಹೆಗಡೆಯ ಕೇಸರಿ ಕ್ರೌರ್ಯದ ಕರಾಮತ್ತಿನಿಂದ! 1990ರ ದಶಕದಲ್ಲಿ ಭಟ್ಕಳ ಅನಂತ್ಮಾಣಿಯ ಹಿಂದೂತ್ವದ ಆಡಂಬೋಲವಾಗಿತ್ತು ನವಾಯಣ ಮುಸಲರು ಹೆಚ್ಚಿರುವ ಭಟ್ಕಳ 1990ರ ದಶಕದಾರಂಭದಲ್ಲಿ ಒಂದಿಡೀ ವರ್ಷ ಕೋಮುದಳ್ಳುರಿಯಲ್ಲಿ ಬೆಂದು ಬಸವಳಿದಿತ್ತು. ಈ ಹಿಂಸಾಕಾಂಡದ ಹಿಂದಿದ್ದದ್ದು ಇದೇ ಅನಂತ್ಮಾಣಿಯ ಕಾಣದ ಕೈಗಳು!!
ಅಂದು ಹಿಂದೂ ಜಾಗರಣಾ ವೇದಿಕೆಯ ಭೂಗತ ಹಿಂಸಾ ರಾಯಭಾರಿಯಾಗಿ ಭಟ್ಕಳದ ಹಳ್ಳಿ-ಹಳ್ಳಿಗಳಲ್ಲಿ ಅಂಡಲೆಯುತ್ತಿದ್ದ ಮಾಣಿ ಮತೀಯ ಉನ್ಮಾದಕ್ಕೆ ಚಿತಾವಣೆ ನಡೆಸುತ್ತಿದ್ದ. ಮಾಣಿಗೆ ಕೇಸರಿ ರಾಜಕಾರಣದ ದೀಕ್ಷೆ ಕೊಟ್ಟಿದ್ದು ಡಾ| ಚಿತ್ತರಂಜನ್ ಎಂಬ ಚೆಡ್ಡಿ ಪಿತಾಮಹ. ಅಚಾನಕ್ ರಂಜನ್ ಎಮ್ಮೆಲ್ಲೆಯಾಗಲು ಮಾಣಿಯ ಕೋಮು ಕಿತಾಪತಿಯೇ ಕಾರಣವಾಗಿತ್ತು. ಭಟ್ಕಳದ ಪರಿಸ್ಥಿತಿ ಅದೆಂಥ ರೌರವ ನರಕದಂತಾಯಿತೆಂದರೆ, ಹಿಂದೂತ್ವದ ಉಗ್ರ ಪ್ರತಾಪವೇ ಡಾ| ರಂಜನ್‍ರ ಬಲಿ ಪಡೆದುಬಿಟ್ಟಿತು! ಆಗ ಖುಲಾಯಿಸಿತು ಒಂದ್ಹೊತ್ತಿನ ಮಜ್ಗೆ ತಂಬ್ಳಿ-ಅನ್ನದ ಮಾಣಿಯ ಅದೃಷ್ಟ!! ಎರಡು ದಶಕದ ಹಿಂದೆ ಡಾ| ರಂಜನ್‍ರ ಹೆಣ ಮುಂದಿಟ್ಟುಕೊಂಡು ರಾಜಕೀಯ ಜೀವನ ಆರಂಭಿಸಿದ್ದ ಅನಂತ್ಮಾಣಿ ಬಡಿವಾರಕ್ಕೆ ಇವತ್ತಿಗೂ ಹಿಂದೂ ಅಮಾಯಕರ ಹೆಣವೇ ಬಂಡವಾಳ!
ಎಂಪಿಯಾಗುವ ಯಾವ ಯೋಗ್ಯತೆಯೂ ಇಲ್ಲದ ಪುಂಡ ಅನಂತ್ಮಾಣಿಗೆ ದಿಲ್ಲಿ ಪಾರ್ಲಿಮೆಂಟ್‍ನಲ್ಲಿ ನತದೃಷ್ಟ ಉತ್ತರ ಕನ್ನಡ ಪ್ರತಿನಿಧಿಸುವ ಯೋಗವೂ ಬಂತು! ಬರೀ ಬುರ್ನಾಸ್ ಭಾಷಣ-ದೂಷಣೆ ಮಾಡುವ ಮಾಣಿಯಿಂದ ಉತ್ತರ ಕನ್ನಡಕ್ಕೆ ಒಳ್ಳೆಯದೇನೂ ಆಗಲಿಲ್ಲ. ಆತನ ಹಿಂದೂತ್ವದ ದಗಲುಬಾಜಿತನ  ಭಟ್ಕಳದ ಜನರಿಗೆ ತಿಳಿಯಲು ತಡವಾಗಲಿಲ್ಲ. ಅನಂತ್ಮಾಣಿ ಮುಂದಾಳತ್ವದ ಹಿಂಜಾವೇ-ಆರೆಸ್ಸೆಸ್-ಬಿಜೆಪಿಯ “ಬೇಧವಾಕ್ಯ”ಕ್ಕೆ ಮರುಳಾಗಿ ಲಾಠಿ-ಬೂಟಿನ ಏಟಿನ ಹಿಂಸೆ, ಕೋರ್ಟು-ಕಚೇರಿ ಅಲೆದಾಟದ ನೋವು ಅನುಭವಿಸಿದ ಭಟ್ಕಳದ ಮಂದಿಗೆ ಮಾಣಿ ಅವತಾರ ಅರಿವಾಯಿತು! ಕೋಮುಗಲಭೆಯ ಉಸಾಬರಿಯಿಂದ ಜನರು ದೂರಾದರು. ಅನಂತ್ಮಾಣಿ ವಿರುದ್ಧ ತಿರುಗಿಬಿದ್ದರು. ಲೋಕಸಭೆಯ ಚುನಾವಣೆಯಲ್ಲಿ ಅನಂತ್ಮಾಣಿಗೆ ಸತತ ಹಿನ್ನಡೆಯಾಯ್ತು, ಭಟ್ಕಳದ ನೆಲೆ ಕುಸಿಯಿತು ಕಳೆಗುಂದಿದ ಮಾಣಿ  ಚಿಂತಾಕ್ರಾಂತನಾದ. ಭಟ್ಕಳದಲ್ಲಿ ಮತ್ತೆ ಹಿಂದಿನ ಹಿಡಿತ ಸಾಧಿಸಲು ಆತ ಕುತಂತ್ರ ಶುರುಹಚ್ಚಿಕೊಂಡ.
ಗೋವಿಂದ ನಾಯ್ಕ, ಸುನೀಲ್ ನಾಯ್ಕ(ಈಗ ಶಾಸಕ)ನಂಥ ಹುಂಬ ನಾಮಧಾರಿ ಯುವಕರಿಗೆ ಎಮ್ಮೆಲ್ಲೆ, ಜಿಪಂ ಸದಸ್ಯತ್ವ, ಜುಜುಬಿ ಅಧಿಕಾರದ ಆಸೆ ತೋರಿಸಿ ಗಂಟೆ(ಜಾನುವಾರು) ಹಿಡಿದು ದೊಂಬಿ ಎಬ್ಬಿಸಿ ಹಿಂದೂಗಳ ಮತಾಂಧ ಧ್ರುವೀಕರಣ ಮಾಡುವ ತರಬೇತಿ ನೀಡತೊಡಗಿದ. ಹುಚ್ಚನೊಬ್ಬನ ಕೈಲಿ ದನದ ಮಾಂಸ ಕಟ್ಟುಕೊಟ್ಟು ನಾಗರಬನದಲ್ಲಿ ಹಾಕಿಸಿದ ಭಾನ್ಗಡಿ ಮತ್ತು ಗಂಟೆ ಹಿಡಿಯೋ ಗಾಂಚಾಲಿಯ ಫಲಾನುಭವಿಯಾದ ಸುನೀಲ್ ನಾಯ್ಕ ಶಾಸಕನೂ ಆಗಿಹೋದ!
ಅನಂತ್ಮಾಣಿ ಮತ್ತು ಸುನೀಲ್ ನಾಯ್ಕ್ ಗುರು-ಶಿಷ್ಯರ ಗಂಟೆ ರಾಜಕಾರಣವೀಗ ಹಿಂದೂ ಹುಡುಗರಿಗೆ, ಅದರಲ್ಲೂ ಕಟ್ಟಾ ಬಿಜೆಪಿ ಕಾರ್ಯಕರ್ತರಾದ ದೀವರ ಪೋರರಿಗೇ ಉಲ್ಟಾ ಹೊಡೆಯುತ್ತಿದೆ. ಅನಂತ್ಮಾಣಿ-ಸುನೀಲ್ ನಂಬಿ ಗಂಟೆಗಾಡಿ(ಜಾನುವಾರು ಸಾಗಾಟದ ವಾಹನ) ಅಡ್ಡಹಾಕಿ ಅದರಲ್ಲಿದ್ದವರು ಹಿಂದುವೋ, ಸಾಬಿಯೋ ಎಂದೂ ನೋಡದೆ ಹೊಡೆದು-ಬಡಿದು ರಕ್ತ ಹರಿಸಿ ಹೀರೋ ಆಗಿ ಮೆರೆಯಲು ಹವಣಿಸಿದ ಭಂಡ ಬಿಜೆಪಿ ತರುಣರೀಗ ಜೈಲಲ್ಲಿ ಕೊಳೆಯುತ್ತಿದ್ದಾರೆ; ಅವರ ಹೆತ್ತವರು-ಒಡಹುಟ್ಟಿದವರು ಸಂಕಟ ತಡೆಯಲಾಗದೆ ಮಾಣಿ ಮತ್ತವನ ಚೇಲ ಸುನೀಲನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಜೈಲು ಪಾಲಾಗಿರುವ ಒಬ್ಬೊಬ್ಬ ಹಿಂದುಳಿದ ವರ್ಗದ ಹುಡುಗನ ಕುಟುಂಬದ ಕಣ್ಣೀರ ಕತೆ ಹೇಳತೀರದು. ಎರಡು ತಿಂಗಳಿಂದ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿರುವ ಹುಡುಗರು ಅವರವರ ಕುಟುಂಬದ ತುತ್ತಿಗೆ ಆಧಾರವಾಗಿದ್ದವರು. ದುಡಿದು ತರುವ ಮನೆ ಮಗನೇ ಇಲ್ಲದ ಉಪವಾಸ-ವನವಾಸ ಅನುಭವಿಸುತ್ತಿರುವ ಚಡಪಡಿಕೆ ಎಂಥ ಕಲ್ಲು ಹೃದಯವನ್ನೇ ಕರಗಿಸುವಂತಿದೆ. ಆದರೆ ಘಾತುಕ ಅನಂತ್ಮಾಣಿ-ಸುನೀಲ್ ನಾಯ್ಕ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಹಾಯಾಗಿ ಅಧಿಕಾರ ಸುಖ ಅನುಭವಿಸುತ್ತಿದ್ದಾರೆ.
ಕಳೆದ ಮೇ 20ರಂದು ಭಟ್ಕಳದ ಮುರ್ಡೇಶ್ವರ ಬಳಿಯ ತೆರ್ನಮಕ್ಕಿ ಎಂಬಲ್ಲಿ ನಡೆದ ಗಂಟೆಗಾಡಿ ಅಡ್ಡಹಾಕಿ ಡ್ರೈವರ್-ಕ್ಲೀನರ್‍ಗೆ ಬಡಿದು, ದನ ದರೋಡೆ ಮಾಡುವ “ಹಿಂದೂತ್ವ ಅಭಿಯಾನ” ಬಿಜೆಪಿ ಮಹಾಮಹಿಮರ ವಿಕಾರಮುಖ ಅನಾವರಣಗೊಳಿಸಿಬಿಟ್ಟಿದೆ! ಹಿಂದೂತ್ವದ ಹುಲಿ ಸವಾರಿ ಹೊರಟವರನ್ನು ಅದೇ ಹುಲಿ ನುಂಗುತ್ತಿರುವುದು ಮೇಲುನೋಟಕ್ಕೆ ಮಜಾ ಅನಿಸಿದರೂ ಆಳದಲ್ಲಿ ಘನಘೋರವಾಗಿದೆ ಪರಿಸ್ಥಿತಿ!! ಅಂದು ಸಂಜೆ ಸುಮಾರು 7 ಗಂಟೆ ಹೊತ್ತಿಗೆ ಹದಿನಾಲ್ಕು ವಿಶೇಷ ತಳಿಯ ಹಾಲು ಕೊಡುವ ದನ ಮತ್ತು ಕರು ಇರುವ ದೊಡ್ಡದೊಂದು ಲಾರಿ ತೆರ್ನಮಕ್ಕಿ ರಸ್ತೆಬದಿಯಲ್ಲಿ ನಿಂತಿರುತ್ತದೆ. ಗುಜರಾತ್‍ನಿಂದ ಕೇರಳದ ಕೊಚ್ಚಿಗೆ ಹೊರಟಿದ್ದ ಈ ದನದ ಲಾರಿಯ ಡ್ರೈವರ್ ಮತ್ತು ಕ್ಲೀನರ್ ಗೂಡಂಗಡಿಯಲ್ಲಿ ಚಹಾ ಕುಡಿಯಲೆಂದು ಲಾರಿ ನಿಲ್ಲಿಸಿದ್ದರು. ತೆರ್ನಮಕ್ಕಿ-ಬಸ್ತಿ ಏರಿಯಾ ಎಂದರೆ ನೂತನ ಶಾಸಕ ಸಾಹೇಬ ಸುನಿಲ್ ನಾಯ್ಕನ ಪುಂಡರ ದಂಡಿನ ಗೂಂಡಾ ಮೆಟ್ಟಿನ ಸ್ಥಳ.
ಲಾರಿಯಲ್ಲಿದ್ದ ದನ-ಕರು ಕಂಡಿದ್ದೇ ತಡ, ಶಾಸಕ ಸುನಿಲ್‍ನ ಸಹಚರರಾದ ಶಬರೀಶ್ ನಾಯ್ಕ, ಜನಾರ್ದನ ನಾಯ್ಕ…. ವಗೈರೆ ಹದಿನೈದಿಪ್ಪತ್ತು ಹುಡುಗರು ಜಮೆಯಾಗಿದ್ದಾರೆ. ಸಾಬರು ಸಮೃದ್ಧವಾದ ದನ-ಕರು ಕಡಿಯಲು ಒಯ್ಯುತ್ತಿದ್ದಾರೆಂಬುದು ಗುಲ್ಲೆಬ್ಬಿಸಿದ್ದಾರೆ. “ಕಸಾಯಿಖಾನೆಗೆ ಹೋಗುತ್ತಿಲ್ಲ; ಕೊಚ್ಚಿಯ ಹಾಲಿನ ಡೈರಿಗೆ ಹೋಗುತ್ತಿದೆ ದನ-ಕರು….” ಎಂದು ಡ್ರೈವರ್-ಕ್ಲೀನರ್ ಅದೆಷ್ಟೇ ಹೇಳಿದರೂ ಕೇಳುವ ವ್ಯವಧಾನ ಶಾಸಕ ಸಾಹೇಬರ ಹಿಂಬಾಲಕರಿಗೆ ಇರಲಿಲ್ಲ. ಬರೀ ಐದೇ ದಿನದ ಹಿಂದೆ ಬಿಜೆಪಿ ಸುನಿಲ್ ನಾಯ್ಕ ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಗೆದ್ದಿದ್ದ ಅಮಲಿನ್ನೂ ಆತನ ಹಿಂಬಾಲಕರಿಗೆ ಇಳಿದಿರಲಿಲ್ಲ! ಡ್ರೈವರ್-ಕ್ಲೀನರ್‍ಗೆ ಮನಸೋ ಇಚ್ಛೆ ಥಳಿಸಿ ರಕ್ತ ಹರಿಸಿದರು; ಲಾರಿಯಲ್ಲಿದ್ದ ಅಷ್ಟು ದನ-ಕರು ಇಳಿಸಿದರು. ಕೆಲವರು ದನ-ಕರು ಮನೆಗೊಯ್ದು ಕಟ್ಟಿಕೊಂಡರು; ಇನ್ನೂ ಕೆಲವರು ಒಂದಿಷ್ಟು ದನ-ಕರುವನ್ನು ಕಾಡಿಗೆ ಅಟ್ಟಿದರು. ಸುದ್ದಿ ತಿಳಿದುಬಂದ ಪೊಲೀಸರಿಗೂ ಚೆಡ್ಡಿ ರೌಡಿಪಡೆ ಹೊಡೆದು ಹಿಮ್ಮೆಟ್ಟಿಸಿತು!
ಶಾಸಕ ವೇದವ್ಯಾಸ್ ಕಾಮತ್ ಎಂಟ್ರಿ!
ತೆರ್ನಮಕ್ಕಿಯಲ್ಲಿ ಶಾಸಕ ಸುನಿಲ್‍ನ ಕೌಬ್ರಿಗೇಡ್‍ನ “ಗೋಸಂಸ್ಕರಣೆ” ಪುಣ್ಯ್ಯಕಾರ್ಯ ಮುಗಿದು, ಡ್ರೈವರ್-ಕ್ಲೀನರ್‍ನ ಪೊಲೀಸರು ಬಚಾಯಿಸಿ ಸುರಕ್ಷಿತ ಸ್ಥಳ ತಲಪುವಾಗ ರಾತ್ರಿ 10 ಗಂಟೆ ಆಗಿತ್ತು. ಆಗ ಡ್ರೈವರ್ ಗುಜರಾತಿಗೆ ನಡೆದ ಘಟನೆಯನ್ನೆಲ್ಲ ಫೋನಲ್ಲಿ ತಿಳಿಸಿದ್ದಾನೆ. ಆಗ ಎಂಟ್ರಿ ಹೊಡೆದಿದ್ದೇ ಮಂಗಳೂರು ದಕ್ಷಿಣ ಕ್ಷೇತ್ರದ ಹೊಚ್ಚಹೊಸ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್!! ಪೊಲೀಸರಿಗೆ ದನ-ಕರು ಒಂದೂ ಬಿಡದೆ ಹುಡುಕಿ ತರುವಂತೆ ಮೇಲಧಿಕಾರಿಗಳು ಖಡಕ್ ಆರ್ಡರ್ ಮಾಡುತ್ತಾರೆ. ಕೇಸ್ ಸೀರಿಯಸ್ ಆಗುತ್ತದೆ. ಬರೋಬ್ಬರಿ ಹದಿಮೂರು ಮಂದಿ ಸುನಿಲ್ ಬಂಟರ ಮೇಲೆ ದರೋಡೆ-ಹಲ್ಲೆ ಕೇಸು ಬೀಳುತ್ತದೆ. ಪೊಲೀಸರು ಪೀಕಲಾಟ ಆರಂಭವಾಗುತ್ತದೆ. ಒಂದುಕಡೆ ದನ-ಕರು ಹುಡುಕಬೇಕು; ಮತ್ತೊಂದೆಡೆ ಆರೋಪಿಗಳ ಹಿಡಿದು ತಂದು ಲಾಕಪ್ಪಿಗೆ ಜಡಿಯಬೇಕು.
ದನ-ಕರುಗಳೆಲ್ಲ ಸಿಗುತ್ತದೆ, ಆದರೆ ಅನಂತ್ಮಾಣಿ-ಸುನಿಲ್‍ನ ಸೈನ್ಯದ ಹದಿಮೂರು ಮಂದಿ ದರೋಡೆ ಕೇಸಲ್ಲಿ ಜಾಮೀನು ಸಿಗದೆ ಕಾರವಾರ ಜೈಲಿಗೆ ಹೋಗಬೇಕಾಗುತ್ತದೆ. ಇದರಲ್ಲಿ ಬಿಜೆಪಿ ಲೀಡರ್‍ಗಳ ಪ್ರಚೋದನೆಗೆ ಸಿಲುಕಿ ಗಂಟೆ ಹಿಡಿಯಲು ಬಂದ ಪಾಪದ ಪೋರರೂ ಇದ್ದಾರೆ. ಇವರಿಗೆಲ್ಲ ಎರಡು ತಿಂಗಳಿಂದ ಜಾಮೀನು ಸಿಗುತ್ತಿಲ್ಲ. ದರೋಡೆ ಕೇಸ್(ಸೆಕ್ಷನ್ 395)ಗೆ ಜ್ಜಾಮೀನು ಇಲ್ಲ. ಅದು ನಾನ್ ಬೇಲಬಲ್!! ಗಂಟೆ ಹುಡುಗರ ಕೇಸು ಇಷ್ಟು ಗಟ್ಟಿಯಾಗಲು ಕಾರಣವೇನು ಗೊತ್ತಾ? ಗುಜರಾತ್‍ನಿಂದ ಹೊರಟಿದ್ದ ದನ-ಕರು ಲಾರಿ ಹೋಗುತ್ತಿದ್ದದ್ದು ಕೇರಳ ಕೊಚ್ಚಿಯ ಹಾಲು ಡೈರಿಗೆ. ಇದು ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್‍ನ ಸಹೋದರನದು. ವಿಶೇಷ ತಳಿಯ ದುಬಾರಿ ಹಸುಗಳನ್ನು ಕೊಂಡುಕೊಂಡಿದ್ದರು ಕಾಮತ್ ಬ್ರದರ್ಸ್! ಹೀಗಾಗಿ ಕೆರಳಿದ ಕಾಮತ್ ಶಾಸಕಗಿರಿ ಬಲ ಬಳಸಿ ಪೊಲೀಸರ ಮೇಲೆ ಒತ್ತಡ ಹಾಕಿ ದನ-ಕರು ಹುಡುಕಿ ತಂದುಕೊಡುವಂತೆ ಪ್ಲಾನು ಮಾಡಿದ್ದರು.
ಮೊದ-ಮೊದಲು ಭಟ್ಕಳ ಕೇಸರಿ ಶಾಸಕ ಸುನಿಲ್‍ನಾಯ್ಕ ಹಿಂಬಾಲಕರ ಬಚಾಯಿಸಲು ಪ್ರಯತ್ನ ಮಾಡಿದ್ದಾನೆ. ಯಾವಾಗ ತನ್ನ ಪಕ್ಷದ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್‍ನ ಫೋನು ಬಂತೋ ಆಗ ಅನುಯಾಯಿಗಳ ಬಲಿಗೊಟ್ಟು ತಲೆ ತಪ್ಪಿಸಿಕೊಂಡಿದ್ದಾನೆ. ಜಾಮೀನು ಕೊಡಿಸಿ ಎಂದು ಹೋದವರಿಗೆ- “ಆ ಗಂಟೆಗಾಡಿ ಮುಟ್ಟು ಕೆಲ್ಸ ಎಂತ ಇದ್ದಿತ್ತು ಮಾರಾಯ್ರೆ…. ದನ-ಕರು ಬಿಚ್ಚಿ ಓಡಿಸ್ತ್ರು ಅಂದ್ರೆ…? ಡ್ರೈವರ್‍ಗೆ ಅಷ್ಟೆಲ್ಲ ಹೊಡೋದೆಂತಕ್ಕಿಂತು… ಅವ್ರೆಂಥ ಹೊಟ್ಟೆಗೆ ಅನ್ನ ತಿಂತ್ರೋ… ಸಗಣಿ ತಿಂತ್ರೋ…” ಎಂದಬ್ಬರಿಸಿದ್ದಾನೆ. ಅಲ್ಲಿಗೆ ಆತನ ಗೆಲ್ಲಿಸಲು ಬೆವರಿಳಿಸಿದ ಹಿಂದೂತ್ವದ ಅಮಲುಕೋರರ ನಶೆ ಇಳಿದಿದೆ. ಸುನಿಲ್ ಢೋಂಗಿ ಅಂತ ಸಾಬ್ರ ಫ್ರೆಂಡು; ಅವ್ರ ಸಂಗ್ತಿಗೆ ಪಾರ್ಟಿ ಮಾಡ್ತಾ ಮಹಾ ಮೋಸಗಾರ ಎಂದೆಲ್ಲ ಸಾಹಿತ್ಯ ಸೃಷ್ಟಿಸಿ ವಾಟ್ಸ್‍ಆ್ಯಪ್‍ಗೆ ಹಾಕಿದ್ದಾರೆ. ಸಾಬರ ಜತೆ ಆತ ಉಣ್ಣುತ್ತ ಕುಳಿತ ಫೋಟೋ ಅಂತೂ ವೈರಲ್ ಆಗಿದೆ ಹಿಂದೂ ಹುಡುಗರ ನಡುವೆ.
ಭಟ್ಕಳದ ಹಿಂದೂಗಳು ಕೆರಳುತ್ತಿರುವ ವರ್ತಮಾನ ಕೇಳಿದ ಕೇಂದ್ರಮಂತ್ರಿ ಅನಂತ್ಮಾಣಿ ಇದು ತನಗೆ ಮುಂದಿನ ಪಾರ್ಲಿಮೆಂಟ್ ಇಲೆಕ್ಷನ್‍ನಲ್ಲಿ ದುಬಾರಿಯಾಗುತ್ತದೆ ಎಂದು ಲೆಕ್ಕಹಾಕಿ ರಾಜಿಗೆ ನೋಡಿದ್ದಾನೆ. ಕೇಸು ವಾಪಸ್‍ಗೆ ಶಾಸಕ ವೇದವ್ಯಾಸ್ ಕಾಮತ್ ಪರಿವಾರ ಒಪ್ಪದೆ ಅನಂತ್ಮಾಣಿ ನೀರಿಳಿಸಿದ್ದಾರೆ. ದರೋಡೆ ಕೇಸು ವಾಪಸ್ ತೆಗೆಸುವುದು ಅಷ್ಟು ಸುಲಭವಲ್ಲ ಎಂದು ಪೊಲೀಸರು ಮಾಣಿಗೆ ಬುದ್ದಿ ಹೇಳಿದ್ದಾರೆ. ಇದಕ್ಕೆ ಕೋರ್ಟ್ ಒಪ್ಪುವುದು ಕಷ್ಟ ಆಗ ಪೊಲೀಸರ ತಲೆದಂಡವಾಗುತ್ತದೆ. ಸಂದಿಗ್ಧಕ್ಕೆ ಸಿಲುಕಿದ ಅನಂತ್ಮಾಣಿ ಈ ಗಂಟೆ ಗಲಾಟೆಯಿಂದ ಸಾವಕಾಶವಾಗಿ ದೂರವಾಗಿದ್ದಾನೆ. ದಿಲ್ಲಿ-ಬೆಂಗಳೂರಲ್ಲಿ ಬಿಜಿ ಎಂದ್ಹೇಳಿ ನಾಟಕ ನಡೆಸಿದ್ದಾನೆ. ಅಲ್ಲಿಗೆ “ಹಿಂದೂ ಹುಲಿ” ಅನಂತ್ಮಾಣಿಯ ನರಿಗಿರಿ ಬಟಾಬಯಲಾಗಿದೆ. ಅನಂತ್ಮಾಣಿಗೆ ಭಟ್ಕಳದ ಹುಡುಗರು ಸಲೀಸಾಗಿ ಜೈಲಿಂದ ಬರುವುದು ಬೇಕಾಗಿಲ್ಲ, ಅಲ್ಲಿ ಆ ಹುಡುಗರು ಕೊಳೆತಷ್ಟೂ ಇಲ್ಲಿ ಭಟ್ಕಳ ಮತ್ತಿತರೆಡೆ ಹಿಂದೂಗಳಲ್ಲಿ ಹಿಂದೂತ್ವದ ಕೆಚ್ಚು ಹೆಚ್ಚುತ್ತದೆ. ಅದು ಮುಂದಿನ ಇಲೆಕ್ಷನ್‍ನಲ್ಲಿ ಬಿಜೆಪಿಗೆ ಓಟಾಗಿ ಪರಿವರ್ತನೆ ಆಗುತ್ತದೆ ಎಂಬ ದೂ(ದು)ರಾಲೋಚನೆ ಮಾಣಿಯದು. ಇನ್ನೊಂದು ಕಾರಣ-ಸ್ವಪಕ್ಷದ ಮಂಗಳೂರು ಎಮ್ಮೆಲ್ಲೆ ಕಾಮತ್‍ಗೆ ತೊಂದರೆ ಆಗಬಾರದೆಂಬುದು.
ಬಡ ದೀವರ ಪೋರರ ಬಲಿಕೊಟ್ಟು ಲಾಭ-ನಷ್ಟದ ಲೆಕ್ಕಾಚಾರ ಮಾಣಿ ಹಾಕುತ್ತಿದ್ದಾನೆ. ಇಷ್ಟಕ್ಕೂ ಭಟ್ಕಳ ಬಿಜೆಪಿ ಭೂಪರಿಗೆ, ಶಾಸಕ ಸುನಿಲ್ ನಾಯ್ಕನಿಗೆ ಮತ್ತು ಕೇಂದ್ರ ಮಂತ್ರಿ ಅನಂತ್ಮಾಣಿಗೆ ಜೈಲಲ್ಲಿರುವ 13 ಮಂದಿ ಬಿಜೆಪಿ ಬೆಂಬಲಿಗರಿಗೆ ಜಾಮೀನು ಕೊಡಿಸೋದು ಕಷ್ಟದ ಕೆಲಸವೇನೂ ಅಲ್ಲ, 13 ಜನರ ಮೇಲೆ ಎರಡು ಎಫ್‍ಐಆರ್ ಆಗಿತ್ತು. ಸೆಕ್ಷನ್ 353ರಲ್ಲಿ ಬೇಲಾಗಿದೆ. ಇನ್ನೊಂದರಲ್ಲಿ(395) ದೂರುಕೊಟ್ಟ ಡ್ರೈವರ್ ಹತ್ತಿರ ಮರುಹೇಳಿಕೆ ಪಡೆದು 395ನೇ ಸೆಕ್ಷನ್ ವಾಪಸ್ ಪಡೆಯಲು ಅವಕಾಶವಿತ್ತು. ಕಂಪ್ಲೇಂಟು ವಾಪಸ್ ಪಡೀಬೇಕೆಂದು ಲಾರಿ ಚಾಲಕ ಗುಜರಾತಿಂದ ಒಮ್ಮೆ ಬಂದಿದ್ದ. ಆಗ ಬಿಜೆಪಿ ಎಂಪಿ ಮಂತ್ರಿ-ಎಮ್ಮೆಲ್ಲೆ ಯಾರೂ ಕೇರ್ ಮಾಡಲಿಲ್ಲ, ಇದರರ್ಥ ಇಷ್ಟೇ-ಲೋಕಸಭೆ ಇಲೆಕ್ಷನ್ ಬರುವವರೆಗೆ ಕಂಡವರ ಮನೆ ಮಕ್ಕಳು ಸಾಯಬೇಕು. ಜೈಲಿಗೆ ಬೀಳಬೇಕು. ಆಗ ಬಿಜೆಪಿ ಭರ್ಜರಿ ಲಾಭ ಗಳಿಸುತ್ತದೆಂಬ ಕ್ರೂರ ರಾಜಕಾರಣ ನೀತಿ ಸಂಘಪರಿವಾರದ್ದು.
ಇಲ್ಲೊಂದು ಮಹತ್ವದ-ಅಚ್ಚರಿಯ ಸಂಗತಿಯೊಂದಿದೆ. ದನಗಳು ಬಿಜೆಪಿಯ ಮಂಗಳೂರು ಶಾಸಕನ ಕುಟುಂಬದ್ದು, ದನ ಸಾಗಿಸುತ್ತಿದ್ದದ್ದು ಕಾಮತರ ಫ್ಯಾಮಿಲಿಯ ಬಿಜೆಪಿಗರೇ. ದನ ಹಿಡಿದದ್ದು ಭಟ್ಕಳ ಬಿಜೆಪಿ ಭಂಡ ಹುಡುಗರು. ಅವರ ಮೇಲೆ ನಾನ್‍ಬೇಲೇಬಲ್ ಕೇಸು ಹಾಕಿಸಿದ್ದು ಬಿಜೆಪಿ ಶಾಸಕ! ಜೈಲಲ್ಲಿರುವ ಅಮಾಯಕರಿಗೆ ಬೇಲ್ ಕೊಡಿಸುತ್ತೇವೆಂದು ನಯವಂಚನೆ-ಮೋಸ ಮಾಡುತ್ತಿರುವುದೂ ಬಿಜೆಪಿಯ ಸ್ವಯಂ ಘೋಷಿತ  ನಾಯಕ ಅನಂತ್ಮಾಣಿ, ಆತನ ಆಜ್ಞಾನುದಾರಿ ಶಿಷ್ಯ-ಶಾಸಕ ಸುನಿಲ್ ನಾಯ್ಕ ಮತ್ತು ಸ್ಥಳೀಯ ಬಿಜೆಪಿ ಲೀಡರ್‍ಗಳು. ಜೈಲಲ್ಲಿ ಇರುವವರ ಬಿಡಿಸುವ ಮನಸ್ಸು ಇದ್ದರೆ ಈ ಬಿಜೆಪಿಗಳಿಗೆಲ್ಲ ನಿರ್ಧಾರ ಮಾಡೋದು ಒಂದು ನಿಮಿಷದ ಕೆಲಸ. ಆದರೆ ಸಂತ್ರಸ್ತ ಕುಟುಂಬದವರನ್ನು ಅನಂತ್ಮಾಣಿ ಗ್ಯಾಂಗ್ ಬೇಲ್ ಮಾಡಿಸುತ್ತೇವೆಂದು ಮಂಗ ಮಾಡುತ್ತಿದೆ. ತನ್ನ ರಾಜಕೀಯ-ಆರ್ಥಿಕ ಲಾಭದ ಹಿಂದೂತ್ವದ ಹೋರಾಟಕ್ಕೆ ಅಮಾಯಕ ಶೂದ್ರರನ್ನು ಕಾಲಾಳುಗಳಾಗಿ ಮಾಡಿಕೊಳ್ಳುವ ಬ್ರಾಹ್ಮಣಿಕೆ ನಂಜಿನ ಮಾಣಿ ಮಸಲತ್ತೀಗ ಜನರಿಗೆ ಅರ್ಥವಾಗುತ್ತಿದೆ. ಇದು ಮುಂದಿನ ಚುನಾವಣೆಯಲ್ಲಿ ಮಾಣಿಗೆ ದೊಡ್ಡ “ದಂಡ” ಆಗುವುದಂತೂ ಗ್ಯಾರಂಟಿ.
– ವರದಿಗಾರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....