ಭಯೋತ್ಪಾದನೆ ಆರೋಪದ ಮೇಲೆ ಗುಜರಾತ್ ಪೊಲೀಸರು 11 ವರ್ಷಗಳ ಹಿಂದೆ ಬಂಧಿಸಿದ್ದ ಶ್ರೀನಗರದ ವ್ಯಕ್ತಿಯನ್ನು ಆರೋಪ ಸಾಬೀತು ಪಡಿಸಲು ಪೊಲೀಸರು ವಿಫಲವಾದ ಹಿನ್ನೆಲೆ ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ. ಕಂಪ್ಯೂಟರ್ ವೃತ್ತಿಪರರಾಗಿರುವ ಬಶೀರ್ ಅಹ್ಮದ್ ಬಾಬಾ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ವಡೋದರಾ ನ್ಯಾಯಾಲಯ ಹೇಳಿದೆ.
ರಾಜ್ಯದಲ್ಲಿ ಭಯೋತ್ಪಾದಕ ಜಾಲವನ್ನು ಸ್ಥಾಪಿಸಲು ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಾಗಿ 2002 ರ ಗಲಭೆಯ ಬಗ್ಗೆ ಕೋಪಗೊಂಡಿರುವ ಮುಸ್ಲಿಂ ಯುವಕರನ್ನು ಸಂಘಟಿಸಲು ಬಶೀರ್ ಅಹ್ಮದ್ ಬಾಬಾ ಗುಜರಾತ್ಗೆ ಬಂದಿದ್ದಾರೆ ಎಂದು ಗುಜರಾತ್ ಎಟಿಎಸ್ ಮಾರ್ಚ್ 13, 2010 ರಂದು 43 ವರ್ಷದ ಅಹ್ಮದ್ ಅವರನ್ನು ಬಂಧಿಸಿದ್ದರು.
ಅಹ್ಮದ್ ಅವರು, ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಮತ್ತು ಬಿಲಾಲ್ ಅಹ್ಮದ್ ಶೇರಾ ಅವರೊಂದಿಗೆ ದೂರವಾಣಿ ಮತ್ತು ಇಮೇಲ್ ಮೂಲಕ ಸಂಪರ್ಕದಲ್ಲಿದ್ದಾರೆ ಎಂದು ಗುಜರಾತ್ ಎಟಿಎಸ್ ಆರೋಪಿಸಿತ್ತು. ಆದರೆ ಈಗ ಆರೋಪ ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದಾರೆ.
ಇದನ್ನೂ ಓದಿ: ಹೋರಾಟಗಾರ ಅಖಿಲ್ ಗೊಗೋಯ್ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಕೈಬಿಟ್ಟ ಎನ್ಐಎ ನ್ಯಾಯಾಲಯ
ಕ್ಯಾನ್ಸರ್ ನಂತರದ ಆರೈಕೆಗಾಗಿ ಮಾಡಲಾಗಿದ್ದ ನಾಲ್ಕು ದಿನಗಳ ಶಿಬಿರದಲ್ಲಿ ಪಾಲ್ಗೊಳ್ಳಲು ಅಹ್ಮದ್ ಗುಜರಾತ್ಗೆ ಬಂದಿದ್ದರು. ಕಿಮಾಯ ಫೌಂಡೇಶನ್ ಮೂಲಕ ಕಾಶ್ಮೀರದ ಕಣಿವೆಯ ಜನರಿಗೆ ಸೇವೆಗಳನ್ನು ಒದಗಿಸಲು, ಈ ಕ್ಯಾಂಪ್ನ ಭಾಗವಾಗಿದ್ದರು ಎಂಬ ವಾದವನ್ನು ನ್ಯಾಯಾಲಯವು ಜೂನ್ 19 ರಂದು ಎತ್ತಿಹಿಡಿದಿದೆ.
ಜೂನ್ 23 ರಂದು 11 ವರ್ಷಗಳ ಬಳಿಕ ಬಶೀರ್ ಅಹ್ಮದ್ ಬಾಬಾ ಶ್ರೀನಗರದ ರೈನಾವರಿಯಲ್ಲಿರುವ ತಮ್ಮ ಮನೆಗೆ ತಲುಪಿದ್ದಾರೆ. ಬಶೀರ್ ಅವರು ಶ್ರೀನಗರದ ರೈನವರಿ ಪ್ರದೇಶದ ತಮ್ಮ ನಿವಾಸದ ಹತ್ತಿರ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ನಡೆಸುತ್ತಿದ್ದರು. ಅವರು ಎನ್ಜಿಓ ಒಂದರಲ್ಲಿ ಸಹಾಯಕ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು, ಅವರ ಭಾಗವಾಗಿ ಹಲವಾರು ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು.
87 ಪುಟಗಳ ತೀರ್ಪಿನಲ್ಲಿ, ಆನಂದ್ ಜಿಲ್ಲಾ ನ್ಯಾಯಾಲಯದ 4 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್.ಎ.ನಕುಮ್, “ಗುಜರಾತ್ನಲ್ಲಿ ಭಯೋತ್ಪಾದಕ ಜಾಲವನ್ನು ಸ್ಥಾಪಿಸುವುದಕ್ಕಾಗಿ ಬಂದಿದ್ದರು ಎಂಬುದು ಸಾಬೀತಾಗಿಲ್ಲ, ಭಯೋತ್ಪಾದಕ ಘಟಕವನ್ನು ಸ್ಥಾಪಿಸಿದರು ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ. ಆರೋಪಿ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸ್ಪಷ್ಟವಾಗಿ ವಿಫಲವಾಗಿದೆ. ಜೊತೆಗೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ಗಳೊಂದಿಗೆ ಸಂಪರ್ಕದಲ್ಲಿದ್ದರು ಎಂಬುದನ್ನು ಸಾಬೀತುಪಡಿಸಲು ಕೂಡ ಪ್ರಾಸಿಕ್ಯೂಷನ್ ಸಂಪೂರ್ಣ ವಿಫಲವಾಗಿದೆ” ಎಂದಿದ್ದಾರೆ.
ಇದನ್ನೂ ಓದಿ: ಅನ್ನದಾತರ ವಿರುದ್ದ ಕತ್ತಿ ಎತ್ತಿ, ರೈತ ವಿರೋಧಿ ಘೋಷಣೆ ಕೂಗಿದ BJP ಕಾರ್ಯಕರ್ತರು



ಬಶೀರ್ ಅಹಮದ್ ಬಾಬಾರವರಿಗೆ ಒಳ್ಳೆಯದಾಗಲಿ. ಅಮಾಯಕರನ್ನು ವರ್ಷಾನುಗಟ್ಟಲೆ ಜೈಲಿನಲ್ಲಿ ಕೊಳೆಸುವಂತಹ ಯು.ಎ.ಪಿ.ಎ. ಅಂತಹ ಅಮಾನುಷ ಕಾನೂನುಗಳನ್ನು ರದ್ದುಪಡಿಸಬೇಕು. ಒಬ್ಬ ವ್ಯಕ್ತಿಯ ಜೀವನದಲ್ಲಿ ೧೧ ವರ್ಷಗಳು ಅಮೂಲ್ಯವಾದ ಅವದಿ.