Homeರಾಷ್ಟ್ರೀಯನೋಟ್‌ ಬ್ಯಾನ್‌ಗೆ 6 ವರ್ಷ: ಮೋದಿ ನೇತೃತ್ವದ BJP ಸರ್ಕಾರ ಅಂದು ಹೇಳಿದ್ದೇನು? ಈಗ ಆಗಿದ್ದೇನು?

ನೋಟ್‌ ಬ್ಯಾನ್‌ಗೆ 6 ವರ್ಷ: ಮೋದಿ ನೇತೃತ್ವದ BJP ಸರ್ಕಾರ ಅಂದು ಹೇಳಿದ್ದೇನು? ಈಗ ಆಗಿದ್ದೇನು?

- Advertisement -
- Advertisement -

ಬಿಜೆಪಿ ಪಕ್ಷದ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ‘1000’ ಮತ್ತು ‘500’ ಮುಖ ಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡಿ ಆರು ವರ್ಷ ಪೂರ್ಣಗೊಂಡಿವೆ. ಪ್ರಧಾನಿ ಅಂದು ನೋಟ್‌ ಬ್ಯಾನ್‌ಗೆ ಹಲವಾರು ಕಾರಣಗಳು ಮತ್ತು ಸಮರ್ಥನೆಗಳನ್ನು ನೀಡಿದ್ದರು. ಪ್ರಧಾನಿ ಮೋದಿ ಅಂದು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾ, “ಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು ತಡೆಗೆ ಹಾಗೂ ನಗದು ರಹಿತ ಆರ್ಥಿಕತೆಗೆ” ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು.

ಆದರೆ, ಇವುಗಳಿಗೆ ವಿರುದ್ದವಾಗಿ ದೇಶದ ಬ್ಯಾಂಕುಗಳಲ್ಲಿ, ತಮ್ಮ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಈ ಸಮಯದಲ್ಲಿ ಹಲವರು ಮೃತಪಟ್ಟರು. ತಮ್ಮ ಅಗತ್ಯಗಳಿಗೆ ಬೇಕಾದಷ್ಟು ಹಣವಿಲ್ಲದೆ ಜನರು ಪರದಾಡಬೇಕಾಯಿತು. ಈ ಕ್ರಮಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ದೇಶದಾದ್ಯಂತ ಆಕ್ರೋಶ ವ್ಯಕ್ತಪವಾಗುತ್ತಿದ್ದಂತೆ 2016 ನವೆಂಬರ್‌ 13 ರಂದು ಗೋವಾದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಐವತ್ತು ದಿನಗಳ ಕಾಲಾವಕಾಶವನ್ನು ದೇಶದ ಜನತೆಯಿಂದ ಕೇಳಿದ್ದರು. ನಂತರವೂ ತಾವು ಕೈಗೊಂಡ ಕ್ರಮದಲ್ಲಿ ಲೋಪದೋಷಗಳಿದ್ದರೆ ದೇಶ ನೀಡುವ ಶಿಕ್ಷೆಗೆ ನಾನು ಸಿದ್ದನಿದ್ದೇನೆ ಎಂದು ಭಾವೋದ್ವೇಗದಿಂದ ಮಾತನಾಡಿದ್ದರು.

ಇದನ್ನೂ ಓದಿ: ಸ್ವಿಸ್‌ ಬ್ಯಾಂಕ್‌: 20,700 ಕೋಟಿಗೆ ಏರಿಕೆಯಾದ ಭಾರತೀಯರ ಹಣ; 13 ವರ್ಷಗಳಲ್ಲೇ ಹೆಚ್ಚು!

ನೋಟ್‌ ಬ್ಯಾನ್ ನಡೆದು ಮೂರು ವರ್ಷಗಳ ನಂತರ ಸರಿ ಸುಮಾರು 99.3% ನಷ್ಟು ನೋಟುಗಳು ವಾಪಾಸು ಬ್ಯಾಂಕಿಗೆ ಬಂದಿವೆ ಎಂದು ಆರ್‌ಬಿಐ 2018 ರಲ್ಲಿ ವರದಿ ಮಾಡಿತ್ತು. ಪ್ರಮುಖ ಆರ್ಥಿಕ ತಜ್ಞರು ಒಕ್ಕೂಟ ಸರ್ಕಾರದ ಈ ನೀತಿ ವಿಫಲ ಯತ್ನ ಎಂದು ತಿಳಿಸಿದ್ದರು. ಸರ್ಕಾರದ ಈ ಕ್ರಮದಿಂದಾಗಿ ದೇಶದ ಕೈಗಾರಿಕಾ ಉತ್ಪಾದನೆ ಮತ್ತು ಅದರ GDP ಬೆಳವಣಿಗೆ ದರವನ್ನು ಕಡಿಮೆ ಆಯಿತು. ನೋಟ್‌ ರದ್ದತಿಯಿಂದಲೇ 15 ಲಕ್ಷ ಉದ್ಯೋಗಗಳು ನಷ್ಟವಾಗಿವೆ ಎಂದು ಅಂದಾಜಿಸಲಾಗಿದೆ.

ಪ್ರಧಾನಿ ಮೋದಿ ನೋಟ್‌ ರದ್ದು ಮಾಡಲು ಭಾರತೀಯ ರಿಸರ್ವ್‌ ಬ್ಯಾಂಕಿನ ಅನುಮತಿಗೂ ಕಾಯಲಿಲ್ಲ. ಅವರು ಏಕಪಕ್ಷೀಯವಾಗಿ ಒಬ್ಬರೇ ತೀರ್ಮಾನ ತೆಗೆದುಕೊಂಡರು ಎಂದು ನಂತರ ವರದಿಯಾಗಿತ್ತು.

ಏನೇ ಆದರೂ ಪ್ರಧಾನಿ ನೋಟ್‌ ಬ್ಯಾನ್‌ ಮಾಡುವಾಗ ಹೇಳಿದ್ದ ಉದ್ದೇಶಗಳು ಪೂರ್ಣಗೊಂಡಿದೆಯೇ ಎಂದು ನಾವು ಗಮನಿಸೋಣ.

ಇದನ್ನೂ ಓದಿ: ಮತ್ತೊಂದು ಫೇಕ್ ನ್ಯೂಸ್ : ಸ್ವಿಸ್‌ ಬ್ಯಾಂಕ್‌ನ ಪಟ್ಟಿ ಸಿಕ್ತು ಎಂಬ ಅಪ್ಪಟ ಸುಳ್ಳು.!

ಕಪ್ಪು ಹಣ ಇಲ್ಲವಾಯಿತೇ?

ಜನರು ಕಪ್ಪು ಹಣವನ್ನು ಸ್ವಿಸ್‌ ಬ್ಯಾಂಕ್‌ನಲ್ಲಿ ಇಡುತ್ತಾರೆ ಎಂದು ಬಿಜೆಪಿ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಪದೇ ಪದೇ ಹೇಳಿತ್ತು. 2021 ಜೂನ್‌ನಲ್ಲಿ ಮಾಧ್ಯಮಗಳು ವರದಿ ಮಾಡಿದಂತೆ, ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಹಣದ ಮೊತ್ತ 20,700 ಕೋಟಿಗೆ ಏರಿಕೆಯಾಗಿದೆ. ಇದು ಕಳೆದ 13 ವರ್ಷಗಳಲ್ಲೆ ಭಾರತದಿಂದ ಸ್ವಿಸ್‌ ಬ್ಯಾಂಕಿಗೆ ಹರಿದ ಅತಿ ಹೆಚ್ಚಿನ ಮೊತ್ತವಾಗಿದೆ ಎಂದು ವರದಿಗಳು ಉಲ್ಲೇಖಿಸಿತ್ತು.

ಕಪ್ಪುಹಣ ನಿರ್ಮೂಲನೆಯೇ ನೋಟು ರದ್ದತಿಯ ಪ್ರಮುಖ ಗುರಿಯಾಗಿತ್ತು. ಕಪ್ಪು ಹಣವೆಂದರೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಲೆಕ್ಕ ಹಾಕದ ನಗದು ಅಥವಾ ರಾಜ್ಯಕ್ಕೆ ತೆರಿಗೆ ಪಾವತಿಸದ ಹಣವಾಗಿದೆ. ಆದರೆ ವಾಸ್ತವದಲ್ಲಿ ಏನಾಗಿದೆಯೆಂದರೆ, ರದ್ದುಗೊಂಡ ಬಹುತೇಕ ಸಂಪೂರ್ಣ ಹಣ (99% ಕ್ಕಿಂತ ಹೆಚ್ಚು) ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿವೆ ಎಂದು ಆರ್‌ಬಿಐ ಅಂಕಿಅಂಶಗಳು ಹೇಳುತ್ತದೆ. 15.41 ಲಕ್ಷ ಕೋಟಿ ಮೌಲ್ಯದ ಅಮಾನ್ಯಗೊಂಡ ನೋಟುಗಳ ಪೈಕಿ 15.31 ಲಕ್ಷ ಕೋಟಿ ಮೌಲ್ಯದ ನೋಟುಗಳು ವಾಪಸ್ ಬಂದಿವೆ. ನೋಟು ರದ್ದತಿಯಿಂದ ಕನಿಷ್ಠ 3-4 ಲಕ್ಷ ಕೋಟಿ ರೂಪಾಯಿ ಕಪ್ಪುಹಣ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗುಳಿಯುತ್ತದೆ ಎಂದು ಸರ್ಕಾರ ನಿರೀಕ್ಷಿಸಿತ್ತು, ಆದರೆ ಅದು ಹಾಗಾಗಲಿಲ್ಲ. ಹೀಗಾಗಿ, ನೋಟು ರದ್ದತಿ ಕಪ್ಪುಹಣವನ್ನು ಹೊರಗೆಡವುವಲ್ಲಿ ವಿಫಲವಾಗಿದೆ ಎಂದು ಅಂಕಿ ಅಂಶ ಸೂಚಿಸುತ್ತದೆ.

ಭ್ರಷ್ಟಾಚಾರ ನಿಂತುಹೋಯಿತೇ?

2021 ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ (ಸಿಪಿಐ) 180 ದೇಶಗಳಲ್ಲಿ ಭಾರತದ ಸ್ಥಾನವು 85 ರಲ್ಲಿದೆ. 2020 ರಲ್ಲಿ 86 ನೇ ಸ್ಥಾನಕ್ಕೆ ಇಳಿದಿತ್ತು. ಅದಕ್ಕಿಂತಲೂ ಹಿಂದೆ 2016 ರಲ್ಲಿ ಭಾರತದ ಸ್ಥಾನವು 79 ರಲ್ಲಿತ್ತು. ಈ ಸೂಚ್ಯಾಂಕ 2017 ರಲ್ಲಿ 81 ಕ್ಕೆ ಇಳಿದಿತ್ತು. 2018 ರಲ್ಲಿ ಇದು 79 ಕ್ಕೆ ಏರಿದ್ದರೂ, 2019 ರಲ್ಲಿ 80 ಕ್ಕೆ ಇಳಿದಿತ್ತು.

ಇದನ್ನೂ ಓದಿ: ಕಪ್ಪು ಹಣ, ಅನಿಲ್ ಅಂಬಾನಿ, ಮೋದಿ, ಅಕೌಂಟಿಗೆ 15 ಲಕ್ಷ, ರಫೇಲ್ ಡೀಲ್: ಒಂದು ಸ್ಫೋಟಕ ವರದಿ

ಖೋಟಾ ನೋಟು ಇಲ್ಲವಾಯಿತೆ?

ನೋಟ್‌ ರದ್ದು ಮಾಡುವ ಮೋದಿ ಸರ್ಕಾರದ ಘೋಷಣೆಗೆ ಖೋಟಾ ನೋಟುಗಳನ್ನು ಇಲ್ಲವಾಗಿಸುವುದು ಎರಡನೆ ಅತೀ ದೊಡ್ಡ ಗುರಿಯಾಗಿತ್ತು. ನೋಟು ರದ್ದತಿ ಜಾರಿಯಾದ 2016ರಲ್ಲಿ ದೇಶಾದ್ಯಂತ 6.32 ಲಕ್ಷ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಮುಂದಿನ ನಾಲ್ಕು ವರ್ಷಗಳಲ್ಲಿ ಕೂಡಾ ದೇಶಾದ್ಯಂತ ಒಟ್ಟು 18. 87 ಲಕ್ಷ ನಕಲಿ ನೋಟುಗಳನ್ನು ವಿವಿಧ ಮುಖಬೆಲೆಗಳಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಆರ್‌ಬಿಐ ಅಂಕಿ ಅಂಶಗಳು ಹೇಳುತ್ತವೆ.

RBI ವಾರ್ಷಿಕ ವರದಿಯ ಪ್ರಕಾರ, ಬ್ಯಾಂಕಿಂಗ್ ವ್ಯವಸ್ಥೆಯಿಂದ ಪತ್ತೆಯಾದ ₹500 ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆಯು ಹಿಂದಿನ ವರ್ಷಕ್ಕಿಂತ 2021-22 ರ ಆರ್ಥಿಕ ವರ್ಷದಲ್ಲಿ ದ್ವಿಗುಣಗೊಂಡಿದ್ದು, 79,669 ನೋಟುಗಳು ಸಿಕ್ಕಿವೆ. ₹2,000 ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆಯು 2021-22ರಲ್ಲಿ 13,604 ನೋಟುಗಳಾಗಿದ್ದು, ಇದು ಹಿಂದಿನ ಹಣಕಾಸು ವರ್ಷಕ್ಕಿಂತ 54.6% ಹೆಚ್ಚಾಗಿದೆ.

2019-20ರಲ್ಲಿ ಮಾತ್ರವೆ ಬ್ಯಾಂಕಿಂಗ್ ವಲಯದಲ್ಲಿ ಪತ್ತೆಯಾದ ಒಟ್ಟು ನಕಲಿ ನೋಟುಗಳಲ್ಲಿ 4.6% ರಿಸರ್ವ್ ಬ್ಯಾಂಕ್‌ನಲ್ಲಿ ಮತ್ತು 95.4% ಇತರ ಬ್ಯಾಂಕ್‌ಗಳಿಂದ ಪತ್ತೆಯಾಗಿದೆ.

ಹೊಸ ಸರಣಿಯ ನೋಟುಗಳ ಖೋಟಾ ನೋಟುಗಳು ಚಲಾವಣೆಗೆ ಬಂದ ನಂತರ ಹಿಂದಿಗಿಂತಲೂ ಈಗ ಹೆಚ್ಚಾಗಿದೆ ಎಂದು ಆರ್‌ಬಿಐ ಅಂಕಿ ಅಂಶ ತೋರಿಸಿವೆ. ಈಗಲೂ ನಕಲಿ ನೋಟುಗಳ ಚಲಾವಣೆ ಮುಂದುವರೆದಿದೆ.

ನಗದು ರಹಿತ ಆರ್ಥಿಕತೆ ಜಾಸ್ತಿಯಾಯಿತೆ?

ನಗದು ರಹಿತ ಆರ್ಥಿಕತೆಯನ್ನು ಸೃಷ್ಟಿ ಮಾಡುವುದು ನೋಟು ರದ್ದತಿಯ ಮತ್ತೊಂದು ಪ್ರಮುಖ ಗುರಿಯಾಗಿದೆ. ನೋಟು ನಿಷೇಧದ ನಂತರದ ವರ್ಷಗಳಲ್ಲಿಯೂ ‘ನಗದು’ ರಹಿತ ಆರ್ಥಿಕತೆ ಸಫಲವಾಗಿಲ್ಲ ಎಂಬುವುದು ಸಾಬೀತಾಗಿದೆ.

ಆರ್‌ಬಿಐ ಶುಕ್ರವಾರ ಬಿಡುಗಡೆ ಮಾಡಿದ ಹಣದ ಪೂರೈಕೆಯ ಹದಿನೈದು ದಿನಗಳ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 21 ರ ಹೊತ್ತಿಗೆ ಸಾರ್ವಜನಿಕರ ಬಳಿಯಿರುವ ಕರೆನ್ಸಿ 30.88 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

2016 ರಲ್ಲಿ ಚಲಾವಣೆಯಲ್ಲಿರುವ ಕರೆನ್ಸಿಯು 16.4 ಲಕ್ಷ ಕೋಟಿ ರೂಪಾಯಿಗಳಿಂದ 2020 ರ ಮಾರ್ಚ್‌ಗೆ 24.2 ಲಕ್ಷ ಕೋಟಿಗೆ ಏರಿದೆ ಎಂದು RBI ಅಂಕಿಅಂಶಗಳು ತಿಳಿಸುತ್ತದೆ. ಕರೆನ್ಸಿ ನೋಟುಗಳ ಪ್ರಮಾಣವು 2016 ರಲ್ಲಿ 9 ಲಕ್ಷದಿಂದ 2020 ರಲ್ಲಿ 11.6 ಲಕ್ಷ ನೋಟುಗಳಿಗೆ ಹೆಚ್ಚಾಗಿವೆ.

ಆದರೆ, ಹಿಂದಿಗಿಂತಲೂ ಈಗ ಡಿಜಿಟಲ್ ಪಾವತಿ ಹೆಚ್ಚಾಗಿದೆ ಎಂಬುವುದು ನಿಜವೇ ಆಗಿದೆ. 2016 ರಲ್ಲಿ 70,466 ರಷ್ಟಿದ್ದ ಒಟ್ಟು ಡಿಜಿಟಲ್ ಪಾವತಿಗಳು 2020 ರಲ್ಲಿ 3.4 ಲಕ್ಷಕ್ಕೆ ಏರಿತ್ತು. ಡಿಜಿಟಲ್ ವಹಿವಾಟುಗಳಲ್ಲಿ ಹೆಚ್ಚಳವಾಗಿದ್ದರೂ ಜನರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಗದು ವ್ಯವಹಾರವನ್ನೆ ಬಯಸುತ್ತಿದ್ದಾರೆ.

ಒಟ್ಟಿನಲ್ಲಿ ಉದ್ಭವಿಸುವ ಪ್ರಶ್ನೆಯೇನೆಂದರೆ ನೋಟು ಬ್ಯಾನ್‌ ಮಾಡದೆ ಡಿಜಿಟಲ್ ಪಾವತಿ ಹೆಚ್ಚುತ್ತಿರಲಿಲ್ಲವೆ? ಅಥವಾ ಡಿಜಿಟಲ್‌ ಪಾವತಿ ಹೆಚ್ಚಿಸಲು ಬೇರೆ ಮಾರ್ಗ ಇರಲಿಲ್ಲವೆ? ಎಂಬುದು.

ಇದನ್ನೂ ಓದಿ:ಈ 45 ವರ್ಷಗಳಲ್ಲಿ ರೈತರ ಬೆಳೆಯ ಬೆಲೆ ಹೆಚ್ಚಳ & ಸರ್ಕಾರಿ ನೌಕರರ ವೇತನ ಹೆಚ್ಚಳದ ನಡುವಿನ ವ್ಯತ್ಯಾಸ 

ನಂತರದ ಪರಿಣಾಮಗಳು

ನೋಟು ರದ್ದತಿಯು ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರಿದೆ ಎಂದು ಸರ್ಕಾರವು ಮತ್ತೆ ಮತ್ತೆ ಹೇಳಿಕೊಂಡಿದೆ. ಆದರೆ ಅರ್ಥಶಾಸ್ತ್ರಜ್ಞರು ಈ ದೃಷ್ಟಿಕೋನವನ್ನು ಒಪ್ಪುವುದಿಲ್ಲ. ಗ್ರಾಮೀಣ ಭಾಗದಲ್ಲಿ ಡಿಜಿಟಲ್‌ ಪಾವತಿಗಿಂತ ನಗದಿನಲ್ಲೇ ವಹಿವಾಟು ನಡೆಯುತ್ತಿದ್ದರಿಂದ ನೋಟು ರದ್ದತಿಯು ಗ್ರಾಮೀಣ ಆರ್ಥಿಕತೆಯ ಬುಡವನ್ನು ಅಲ್ಲಾಡಿಸಿತು.

ನೋಟು ನಿಷೇಧವು ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಅಂತರರಾಷ್ಟ್ರೀಯ ಸಂಶೋಧಕರು ನಡೆಸಿದ ಹಲವಾರು ಅಧ್ಯಯನಗಳು ಭಾರತದ ಆರ್ಥಿಕತೆಯ ಮೇಲೆ ನೋಟು ಅಮಾನ್ಯೀಕರಣದ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿವೆ.

“ನಗದು ಮತ್ತು ಆರ್ಥಿಕತೆ: ಭಾರತದ ನೋಟು ಅಮಾನ್ಯೀಕರಣದಿಂದ ಪುರಾವೆ” ಎಂಬ ಶೀರ್ಷಿಕೆಯಡಿಯಲ್ಲಿ, ಯುಎಸ್ ಮೂಲದ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್‌ನ ಅಧ್ಯಯನವು ನೋಟು ನಿಷೇಧ ನಡೆದ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಕಡಿಮೆ ಆಗಿತ್ತು ಮತ್ತು ಉದ್ಯೋಗಗಳಲ್ಲಿ 2-3% ಕಡಿತವಾಗಿತ್ತು ಎಂದು ಹೇಳುತ್ತದೆ. 2016 ರ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಭಾರತದ ಆರ್ಥಿಕ ಚಟುವಟಿಕೆಯು 2.2% ದಷ್ಟು ಕುಸಿದಿದೆ ಎಂದು ಅಧ್ಯಯನ ತೋರಿಸಿದೆ.

ಕಪ್ಪುಹಣದ ಮೇಲೆ ದಾಳಿ ಮಾಡುವ ಕ್ರಮವಾಗಿ ನೋಟು ಅಮಾನ್ಯೀಕರಣದ ಪರಿಣಾಮಕಾರಿತ್ವದ ಬಗ್ಗೆ ಚರ್ಚೆ ಇನ್ನೂ ನಡೆಯುತ್ತಿದೆ. ಆರ್‌ಟಿಐ ಉತ್ತರದ ಪ್ರಕಾರ, ಕಪ್ಪುಹಣವನ್ನು ಎದುರಿಸುವ ಕ್ರಮವಾಗಿ ಆರ್‌ಬಿಐ ಮಂಡಳಿಯು ನೋಟು ಅಮಾನ್ಯೀಕರಣವನ್ನು ಬೆಂಬಲಿಸಲಿಲ್ಲ. ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ತಮ್ಮ ಪುಸ್ತಕದಲ್ಲಿ, ನೋಟ್‌ಬ್ಯಾನ್ ಕಲ್ಪನೆಯನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು.


ಇದನ್ನೂ ಓದಿ: ಬಡವರ ಪರವೆಂಬ ಮುಖವಾಡ ಕಳಚಿ ಮೇಲ್ಜಾತಿ, ಮಧ್ಯಮವರ್ಗ, ನಗರ ಬೇರುಗಳಿಗೆ ಮರಳಿದ ಬಿಜೆಪಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...