ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಂಗಳವಾರ ಹೊಸ ಆದೇಶ ಪ್ರಕಟಿಸಿದ್ದು, ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಪ್ರವೇಶಕ್ಕಾಗಿ ಹನ್ನೆರಡನೇ ತರಗತಿ ಅಂಕಗಳನ್ನು ಪರಿಗಣಿಸಿದೆ ಮತ್ತೊಂದು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) ನಡೆಸಲು ಮುಂದಾಗಿದೆ.
ಜುಲೈ ವೇಳೆಗೆ ಪರೀಕ್ಷೆಗಳನ್ನು ಆರಂಭಿಸುವ ಗುರಿಯನ್ನು ಇಟ್ಟುಕೊಂಡಿದ್ದು ಏಪ್ರಿಲ್ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಯುಜಿಸಿ ಅಧ್ಯಕ್ಷ ಎಂ.ಜಗದೇಶ್ ಕುಮಾರ್ ಹೇಳಿದ್ದಾರೆ. “ಒಂದು ರಾಷ್ಟ್ರ, ಒಂದು ಪ್ರವೇಶ ಪರೀಕ್ಷೆ” ಎಂಬ ಗುರಿಯನ್ನು ಸಾಧಿಸುವತ್ತ ಹೆಜ್ಜೆ ಇರಿಸಲಾಗುತ್ತಿದೆ ಎಂಬುದು ಯುಜಿಸಿ ಅಧ್ಯಕ್ಷರ ಅಭಿಪ್ರಾಯ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿರುವ ಈ ಪ್ರಯೋಗವು ಶೈಕ್ಷಣಿಕ ಅಸಮಾನತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂಬ ಆತಂಕವನ್ನು ಶಿಕ್ಷಣ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.
ಸಾಮಾನ್ಯ ಪ್ರವೇಶ ಪರೀಕ್ಷೆ ಏಕೆ? ಯುಜಿಸಿ ಅಧ್ಯಕ್ಷರ ಅಭಿಪ್ರಾಯವೇನು?
ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆ ಮಾಡುವುದಕ್ಕಾಗಿ ನಾವು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಪರಿಚಯಿಸುತ್ತಿದ್ದೇವೆ ಎನ್ನುತ್ತಾರೆ ಯುಜಿಸಿ ಅಧ್ಯಕ್ಷರು.
“ವಿದ್ಯಾರ್ಥಿಗಳು ಇದೀಗ ವಿವಿಧ ವಿಶ್ವವಿದ್ಯಾಲಯಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಪ್ರವೇಶಾತಿಗಾಗಿ ಹಲವು ಪ್ರವೇಶ ಪರೀಕ್ಷೆಗಳನ್ನು ಬರೆಯುತ್ತಾರೆ. ಎಲ್ಲಾ ಕೇಂದ್ರೀಯ ವಿಶ್ವವಿದ್ಯಾನಿಲಯಗಳು 12ನೇ ತರಗತಿಯ ಅಂಕಗಳ ಆಧಾರದ ಮೇಲೆ ಪ್ರವೇಶವನ್ನು ನಡೆಸುತ್ತಿವೆ ಎಂದು ನಾವು ಭಾವಿಸಬಾರದು. ಅನೇಕ ವಿಶ್ವವಿದ್ಯಾನಿಲಯಗಳು ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತಿವೆ. ನಾವು ವಿವಿಧ ಪರೀಕ್ಷೆಗಳಿಂದಾಗಿ ಪೋಷಕರಲ್ಲಿ, ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚುತ್ತದೆ. ಹೀಗಾಗಿ ಏಕರೂಪದ ಪ್ರವೇಶ ಪರೀಕ್ಷೆ ಅಗತ್ಯ” ಎಂದಿದ್ದಾರೆ.
ಇದನ್ನೂ ಓದಿರಿ: ದಿಢೀರ್ ಪಠ್ಯ ಬದಲಾವಣೆ ಸುತ್ತೋಲೆ: ಎನ್ಇಪಿಯಿಂದ ವಿದ್ಯಾರ್ಥಿಗಳು ಹೈರಾಣು
ಶಿಕ್ಷಣ ತಜ್ಞರು ಏನಂತಾರೆ?
ರಾಷ್ಟ್ರೀಯ ಶಿಕ್ಷಣ ನೀತಿ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ ಎಂದು ಎನ್ಇಪಿಯ ಆಳ, ಅಗಲ, ಉದ್ದೇಶ, ಗುರಿಯನ್ನು ಸೂಕ್ಷ್ಮವಾಗಿ ಗಮನಿಸಿದವರು ಹೇಳುತ್ತಿದ್ದಾರೆ. ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ ಈಗ ಜಾರಿಗೆ ತರುತ್ತಿರುವ ಪರೀಕ್ಷೆಯು ಎನ್ಇಪಿಯ ಒಂದು ಭಾಗವಷ್ಟೇ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂ ಜೊತೆ ಮಾತನಾಡಿದ ಶಿಕ್ಷಣ ತಜ್ಞರಾದ ಶ್ರೀಪಾದ್ ಭಟ್, “ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಪ್ರವೇಶಾತಿಗೆ ಮೊದಲಿನಿಂದಲೂ ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ ಏಕರೂಪದ ಪರೀಕ್ಷೆ ಇರಲಿಲ್ಲ. ಕೆಲವು ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಒಟ್ಟುಗೂಡಿ ಪರೀಕ್ಷೆಯನ್ನು ಆಯೋಜಿಸುತ್ತಿದ್ದವು. ಈಗ ದೇಶದಲ್ಲಿರುವ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಪ್ರವೇಶ ಪರೀಕ್ಷೆ ಏಕರೂಪವಾಗಿರುತ್ತದೆ. ಇದು ಕೇಂದ್ರೀಯ ವಿಶ್ವವಿದ್ಯಾನಿಲಯಕ್ಕಷ್ಟೇ ಅಲ್ಲದೆ, ಇತರ ವಿವಿಗಳಿಗೂ ಕಾಲಿಡುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು” ಎಂದರು.
“ಎಲ್ಲ ಹಂತದಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು ಎನ್ನುತ್ತದೆ ಎನ್ಇಪಿ. ಕಾಲೇಜು ಸೇರ್ಪಡೆಗೆ, ಹಾಸ್ಟೆಲ್ ಪ್ರವೇಶಾತಿಗೆ- ಹೀಗೆ ಎಲ್ಲೆಡೆಯೂ ಸ್ಪರ್ಧಾತ್ಮಕ ಪರೀಕ್ಷೆ ನಡೆಯಬೇಕು. ಸ್ಪರ್ಧೆ ಇರಬೇಕು ಅನ್ನುತ್ತದೆ. ನಾವು ಎಷ್ಟೇ ಅಸಮಾನ ಶಿಕ್ಷಣ ವ್ಯವಸ್ಥೆ, ಗ್ರಾಮೀಣ ಶಿಕ್ಷಣ ಪರಿಸ್ಥಿತಿ, ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಎಂದರೂ, ಶೇ. 66ರಷ್ಟಿರುವ ಗ್ರಾಮೀಣ ವಿದ್ಯಾರ್ಥಿಗಳು, ಎಲ್ಲ ಸೌಲಭ್ಯಗಳನ್ನು ಹೊಂದಿರುವ ನಗರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗದು ಎಂದು ಹೇಳುತ್ತಾ ಬಂದಿದ್ದರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಮಸ್ಯೆಗಳಿದ್ದರೆ ನಿಮ್ಮ ಹಣೆಬರಹ ಎನ್ನುತ್ತಾರೆ. ರಾಜ್ಯದ ಹಣೆಬರಹ ಎನ್ನುತ್ತಾರೆ. ಬಳ್ಳಾರಿಯಲ್ಲಿ, ಚಾಮರಾಜನಗರದಲ್ಲಿ ಶಾಲೆ ಸರಿ ಇಲ್ಲವೆಂದಾರೆ ಎನ್ಟಿಎ ಏನು ಮಾಡಲಾಗದು ಎಂದು ಪ್ರತಿಕ್ರಿಯಿಸುತ್ತಾರೆ” ಎಂಬ ಬೇಸರವನ್ನು ವ್ಯಕ್ತಪಡಿಸುತ್ತಾರೆ ಶ್ರೀಪಾದ್ ಭಟ್.
ಇದನ್ನೂ ಓದಿರಿ: ರಾಶ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020: ಹಿಂದು-ಮುಂದು
“ಶಿಕ್ಷಣ ಎಂದರೆ ಪರೀಕ್ಷೆ ಎಂದಾಗಿದೆ. ಶಾಲಾ ಶಿಕ್ಷಕರಾಗಬೇಕಾದರೆ ಪದವಿ, ಬಿಎಡ್, ಟಿಇಟಿ, ಪ್ರವೇಶ ಪರೀಕ್ಷೆ ಈ ಎಲ್ಲದರಲ್ಲೂ ಅರ್ಹತೆ ಪಡೆದಿರಬೇಕು. ಇಷ್ಟೊಂದು ಪರೀಕ್ಷೆ ಯಾಕೆಂದು ಕೇಳಿದರೆ, ನಮಗೆ ಪ್ರತಿಭಾವಂತರು ಬೇಕು; ಹೀಗಾಗಿ ಫಿಲ್ಟರ್ ಮಾಡುತ್ತೇವೆ ಎನ್ನುತ್ತಾರೆ. ಅಂದರೆ ಪದವಿ ತರಗತಿ ನಡೆಸಿದ್ದು ಇವರೇ ಅಲ್ಲವೇ? ಇವರೇ ನಡೆಸುವ ಪದವಿ ತರಗತಿಯಲ್ಲಿ ಗುಣಮಟ್ಟ ಇಲ್ಲವೆಂದು ಅರ್ಥವೇ? ಈ ಮಾತು ಎಲ್ಲ ಅರ್ಹತಾ ಪರೀಕ್ಷೆಗೂ ಅನ್ವಯಿಸುತ್ತದೆ. ಎನ್ಇಪಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾತನಾಡುತ್ತದೆ. ನಾವು ಆರಂಭದಲ್ಲಿಯೇ ಎನ್ಇಪಿಯನ್ನು ಹಿಮ್ಮೆಟ್ಟಿಸಬೇಕಿತ್ತು. ಈಗ ತಡವಾಗಿದೆ; ಆದರೆ ಕಾಲಮಿಂಚಿಲ್ಲ” ಎಂದರು.
“ಸ್ಪರ್ಧೆ ನಡೆಯದೆ ಇದ್ದರೆ ಪ್ರತಿಭೆ ಗೊತ್ತಾಗಲ್ಲ ಎನ್ನುತ್ತಾರೆ. ಇವರನ್ನು ಶಿಕ್ಷಣ ಪಾಲುದಾರರು ಹಿಮ್ಮೆಟ್ಟಿಸಬೇಕಿದೆ. ಶಿಕ್ಷಕರು, ಪೋಷಕರು, ವಿದ್ಯಾರ್ಥಿ ಸಂಘಟನೆಗಳು ಒಟ್ಟಿಗೆ ಸೇರಬೇಕು. ಎನ್ಇಪಿ ಜಾರಿಯಾದಾಗಿನಿಂದಲೂ ನೋಡುತ್ತಿದ್ದೇವೆ. ಶಿಕ್ಷಕರು, ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ. ಪೋಷಕರು ಗೊಂದಲದಲ್ಲಿದ್ದಾರೆ” ಎಂದು ತಿಳಿಸಿದರು.
“ಸ್ಕಾಲರ್ಶಿಪ್ಗೂ ಪರೀಕ್ಷೆ ಬರುವ ಸಮಯ ಬರುತ್ತದೆ. ಪ್ರಶ್ನಿಸಿದರೆ, ನವೋದಯ, ಮೊರಾರ್ಜಿ ಶಾಲೆಗಳ ಉದಾಹರಣೆಗಳನ್ನು ನೀಡುತ್ತಾರೆ. ನವೋದಯದಲ್ಲಿ 40 ಮಕ್ಕಳನ್ನು ತೆಗೆದುಕೊಳ್ಳುತ್ತಾರೆ. ಮಿಕ್ಕ ಲಕ್ಷಾಂತರ ಮಕ್ಕಳನ್ನು ಸೇರುವಂತೆಯೇ ಇಲ್ಲವಲ್ಲ” ಎಂದರು.
“ಕೇಂದ್ರದ ಸಂಪರ್ಕದಲ್ಲಿ ಸ್ಥಳೀಯತೆಯನ್ನು ಬೆಳೆಸಬೇಕೆಂದು ಕೇಂದ್ರೀಯ ವಿಶ್ವವಿದ್ಯಾನಿಲಯ ಆರಂಭಿಸಲಾಯಿತು. ಆದರೆ ಮುಂದೆ ಬದಲಾವಣೆಗಳಾದವು” ಎನ್ನುವ ಶ್ರೀಪಾದ್ ಭಟ್, “8ನೇ ತರಗತಿಯಿಂದಲೇ ಎನ್ಸಿಇಆರ್ಟಿ ಸಿಲಬಸ್ ಹೇಳಿಕೊಡುತ್ತಿದ್ದಾರೆ. ಅಂದರೆ ಕೆಳಮಟ್ಟದಿಂದ ಹೋರಾಟ ಮಾಡಬೇಕಿದೆ. ಸ್ಟೇಟ್ ಸಿಲಬಸ್ ಬರಬೇಕು. ಸ್ಥಳೀಯತೆಗಾಗಿ ಹೋರಾಡಬೇಕು. ವ್ಯಾಸಂಗ ಕ್ರಮವೇ ಇಲ್ಲವಾಗುತ್ತಿದೆ. ಎನ್ಇಪಿ ಉದ್ದೇಶವೇ ಶಿಕ್ಷಣದ ಕೇಂದ್ರೀಕರಣ. ಶಾಸನ ಸಭೆಯ ನಿರ್ಧಾರ ಕೋರ್ಟ್ನಲ್ಲಿ ನಿಲ್ಲಲ್ಲ. ಬಿಜೆಪಿ ಅಧಿಕಾರ ಇಲ್ಲದ ರಾಜ್ಯಗಳಲ್ಲಿ ಎನ್ಇಪಿಗೆ ವಿರೋಧ ಬಂದಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಎನ್ಇಪಿಯನ್ನು ವಿರೋಧಿಸಬೇಕಿದೆ. ಕೊನೆಯದಾಗಿ, ಎನ್ಇಪಿ ನಿಲ್ಲಬೇಕೆಂದರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಬೇಕೆಂಬ ಉತ್ತರ ಬರುತ್ತದೆ” ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿರಿ: ಈ ಎನ್ಇಪಿ ಅಂದ್ರೆ ಏನು? ಅದರೊಳಗ ಏನೈತಿ, ಏನಿಲ್ಲ?
ಇದು ಮತ್ತೊಂದು ನೀಟ್ ಕಥೆಯಾಗುತ್ತದೆ: ವಿ.ಪಿ.ನಿರಂಜನಾರಾಧ್ಯ
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಅವರು, “ಕೇಂದ್ರೀಯ ವಿವಿ ಪ್ರವೇಶಾತಿ ಪರೀಕ್ಷೆ ಮತ್ತೊಂದು ನೀಟ್ನಂತಾಗುತ್ತದೆ” ಎಂದು ತಿಳಿಸಿದರು.
“ಕೇಂದ್ರೀಯ ವಿಶ್ವವಿದ್ಯಾನಿಲಯವಾದರೂ ಅಲ್ಲಿ ಓದುವವರು ರಾಜ್ಯದ ಮಕ್ಕಳೇ ಆಗಿರುತ್ತಿದ್ದರು. ಆದರೆ ಈ ರೀತಿಯ ಪರೀಕ್ಷೆಗಳನ್ನು ತಂದರೆ ಆಯಾ ರಾಜ್ಯಗಳ ವಿದ್ಯಾರ್ಥಿಗಳಿಗೆ ಅವಕಾಶಗಳು ತಪ್ಪಿ ಹೋಗುತ್ತವೆ. ಇದು ಮತ್ತೊಂದು ನೀಟ್ ಕಥೆಯಾಗುತ್ತದೆ. ನಮ್ಮ ಮಕ್ಕಳು ಹನ್ನೆರಡನೇ ತರಗತಿ ಪರೀಕ್ಷೆಯಲ್ಲಿ ಶೇ.90ರಷ್ಟು ಅಂಕ ಪಡೆದರೂ ನೀಟ್ ಪಾಸ್ ಆಗುತ್ತಿಲ್ಲ. ಉನ್ನತ ಶಿಕ್ಷಣದ ಸ್ವಾಯತ್ತತೆಯನ್ನು ಹಾಳು ಮಾಡಲಾಗುತ್ತಿದೆ. ಯಾವ ರೀತಿ ಪಠ್ಯಕ್ರಮ ಇರಬೇಕು, ಪ್ರವೇಶಾತಿ ಹೇಗಿರಬೇಕು, ಬೇರೆ ಬೇರೆ ವರ್ಗದ ಮಕ್ಕಳಿಗೆ ಹೇಗೆ ಅವಕಾಶ ಕಲ್ಪಿಸಬೇಕು ಎಂಬುದೆಲ್ಲ ವಿಶ್ವವಿದ್ಯಾನಿಲಯಕ್ಕೆ ಬಿಟ್ಟ ವಿಚಾರವಾಗಿತ್ತು. ಈಗ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುತ್ತಿದೆ” ಎಂದು ಹೇಳಿದರು.
“ಪ್ರವೇಶಾತಿ ಪರೀಕ್ಷೆಗಳೇ ತಪ್ಪು. ಯಾಕೆಂದರೆ ಪ್ರವೇಶಾತಿ ಪರೀಕ್ಷೆಗಳನ್ನು ನಡೆಸಿದರೆ ಹತ್ತನೇ ತರಗತಿ, ಹನ್ನೆರಡನೇ ತರಗತಿಯ ಕ್ವಾಲಿಫೈ ಪರೀಕ್ಷೆಗಳಿಗೆ ಅರ್ಥವಿಲ್ಲದಂತಾಗುತ್ತದೆ. ಶಿಕ್ಷಣವನ್ನು ಕೇಂದ್ರೀಕೃತ ಮಾಡುವುದು ಸರಿಯಲ್ಲ. ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದೆ. ಅಂದರೆ ಆಯಾ ರಾಜ್ಯದ ತೀರ್ಮಾನಕ್ಕೆ ಬರುತ್ತದೆ. ಕೇಂದ್ರೀಯ ವಿಶ್ವವಿದ್ಯಾನಿಲಯವನ್ನು ಕೇಂದ್ರ ಸ್ಥಾಪಿಸಿರಬಹುದು, ಅನುದಾನ ಕೊಟ್ಟಿರಬಹುದು. ಆದರೆ ಆಯಾ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಮಧ್ಯೆ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಅದರ ವಿರುದ್ಧ ರಾಜ್ಯ ಸರ್ಕಾರ ಧ್ವನಿ ಎತ್ತಬೇಕಾಗುತ್ತದೆ” ಎಂದರು.
“ನ್ಯಾಷನಲ್ ಟೆಸ್ಟಿಗ್ ಏಜೆನ್ಸಿಯನ್ನು ಪರೀಕ್ಷೆಗಳನ್ನು ನಡೆಸಲೆಂದೇ ರೂಪಿಸಲಾಗಿದೆ. ಎಲ್ಲ ಕೋರ್ಸ್ಗಳ ಪರೀಕ್ಷೆಗಳನ್ನು ಇದು ನಡೆಸುತ್ತಿದೆ. ಹೇಳಬೇಕೆಂದರೆ ಇದು ಸಂವಿಧಾನ ಬಾಹಿರ. ಸ್ವಾಯತ್ತತೆಗೆ ಧಕ್ಕೆ. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಎಲ್ಲ ವಿವಿಗಳ ಪ್ರವೇಶಾತಿಗೂ ಬರುವ ಸಾಧ್ಯತೆ ಅಲ್ಲಗಳೆಯಲಾಗದು. ಎನ್ಇಪಿಯ ಉದ್ದೇಶವೇ ಸ್ಪರ್ಧಾತ್ಮಕ ಪರೀಕ್ಷೆ” ಎಂದು ತಿಳಿಸಿದರು.
“ಮುಂದಿನ ದಿನಗಳಲ್ಲಿ ಗುಣಾತ್ಮಕ ಶಿಕ್ಷಣದ ಬದಲು ಕೋಚಿಂಗ್ ಸೆಂಟರ್ಗಳು ಪ್ರಾರಂಭವಾಗುತ್ತವೆ. ಪ್ರವೇಶಾತಿ ಪಡೆಯಲಿಕ್ಕಾಗಿ ಕೋಚಿಂಗ್ ಪಡೆಯಲು ವಿದ್ಯಾರ್ಥಿಗಳು ಹೋಗುತ್ತಾರೆ. ಇಡೀ ಶಿಕ್ಷಣ ವ್ಯವಸ್ಥೆಯನ್ನು ಕೋಚಿಂಗ್ ಕೇಂದ್ರೀತ ಮಾಡಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸುತ್ತಾರೆ ವಿ.ಪಿ.ನಿರಂಜನಾರಾಧ್ಯ.
ಇದನ್ನೂ ಓದಿರಿ: ಉನ್ನತ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸಲು ಒತ್ತಾಯಿಸಬೇಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ


