Homeಅಂಕಣಗಳುಹೇಳದೆ ಮಾಡುವ ಉತ್ತಮ ಪ್ರಧಾನಿ ಮೋದಿ!

ಹೇಳದೆ ಮಾಡುವ ಉತ್ತಮ ಪ್ರಧಾನಿ ಮೋದಿ!

- Advertisement -
- Advertisement -

ಹೇಳದೆ ಮಾಡುವವ ರೂಢಿಯೊಳಗುತ್ತಮ. ಹೇಳಿ ಮಾಡುವವ ಮಧ್ಯಮ. ಹೇಳಿಯೂ ಮಾಡದವನು ಅಧಮನಿಗೆ ಸಮವಾಗುತ್ತಾನಂತೆ. ಇದೊಂದು ಕನ್ನಡದ ಜನಪ್ರಿಯ ಗಾದೆ ಮಾತು. ಇದನ್ನು ಚಾಚುತಪ್ಪದೆ ಮಾಡುತ್ತ, ಭಾರತ ಈವರೆಗೆ ಕಂಡರಿಯದ ಉತ್ತಮ ಪ್ರಧಾನಿಯಾಗಿ ಮೋದಿ ಮೆರೆದಾಡುತ್ತಿದ್ದಾರಂತಲ್ಲಾ. ಉದಾಹರಣೆ ಕೊಡುವುದಾದರೆ ರಾತ್ರೋರಾತ್ರಿ ನೋಟ್‌ಬ್ಯಾನ್ ಮಾಡಿಬಿಟ್ಟರು. ಅದರ ಪರಿಣಾಮಗಳು ಅನುಭವಿಸುವವರಿಗೆ ಬಿಟ್ಟದ್ದು. ಹಾಗೆಯೇ ಜಿಎಸ್‌ಟಿ ತಂದುಬಿಟ್ಟರು. ಅದೂ ಕೂಡ ಸಂಬಂಧಪಟ್ಟ ಸಾವಿರಾರು ಸಣ್ಣ ಉದ್ಯಮಗಳು ಮಧ್ಯಮ ಸ್ಥಿತಿಗೆ ಬಂದು ನಂತರ ಅಧಃಪಥನ ಕಂಡವು. ಲಾಕ್‌ಡೌನ್ ಮಾಡಿದರು. ಸಾವಿರಾರು ಜನ ಸತ್ತು ಹೋದರು. ಕೃಷಿ ಕಾಯ್ದೆ ತಂದರು. ಅದರ ವಿರುದ್ಧ ಪ್ರತಿಭಟಿಸುತ್ತಲೇ ಬರೋಬ್ಬರಿ ಏಳುನೂರ ಐವತ್ತು ಜನ ರೈತರು ಮಣ್ಣುಪಾಲಾದರು. ಈಗ ಅಗ್ನಿಪಥ ಜಾರಿಗೆ ತಂದು ಇಡೀ ದೇಶಕ್ಕೆ ಕೊಳ್ಳಿ ಇಟ್ಟು ನಮ್ಮ ರೈಲ್ವೆ ನಿಲ್ದಾಣಗಳು ಉರಿಯುತ್ತಿರಬೇಕಾದರೆ ಮನಃಶಾಂತಿಗಾಗಿ ಮೋದಿ ನಮ್ಮ ಮೈಸೂರಿಗೆ ಬಂದು ಯೋಗ ಧ್ಯಾನದಲ್ಲಿ ಕುಳಿತುಬಿಟ್ಟರಂತಲ್ಲಾ. ಭಾರತದ ಯಾವುದೇ ಸ್ಥಿತಿಗೆ ಮೊದಲು ಉತ್ತರಿಸಬೇಕಾದವರು ಪ್ರಧಾನಿ. ಆದರೆ ದೇಶ ಹಿಂದೆಂದೂ ಕಂಡರಿಯದ ಕ್ಷೋಭೆಗೆ ತುತ್ತಾಗಿರುವ ಈ ಸಮಯದಲ್ಲೂ ಕೂಡ ಮೋದಿಯವರ ಮುಖದಲ್ಲಿ ದೇಶದ ತಲ್ಲಣದ ಗೆರೆಯೇ ಕಾಣುತ್ತಿಲ್ಲವಂತಲ್ಲಾ, ಥೂತ್ತೇರಿ.

****

ಅಗ್ನಿಪಥದ ದೆಸೆಯಿಂದ ದೇಶಬಾಂಧವರಲ್ಲಿ ಹಲವಾರು ಸಂಶಯದ ಅಲೆಗಳು ಎದ್ದು ಜನಸಾಮಾನ್ಯರಲ್ಲಿ ಭೀತಿಹುಟ್ಟಿಸುತ್ತಿವೆಯಂತಲ್ಲಾ. ಆ ಪೈಕಿ ಈ ಬಿಜೆಪಿ ಸರಕಾರ ಅಗ್ನಿಪಥಕ್ಕೆ ಸೇರಿಸಿಕೊಳ್ಳುವ ಹುಡುಗರು ನಾಲ್ಕೆ ವರುಷಕ್ಕೆ ವಾಪಸು ಬರುತ್ತಾರಂತಲ್ಲಾ. ಅವರು ಮುಂದೆ ಮಾಡಬಹುದಾದ ಕೆಲಸಗಳೇನೆಂದು ಈಗಾಗಲೇ ಬಿಜೆಪಿ ನಾಯಕರು ಮಾತನಾಡುವುದನ್ನು ಕೇಳಿಸಿಕೊಂಡರೆ ಬಂದವರು ಬಿಜೆಪಿ ಪಾರ್ಟಿಯ ಅಂಗರಕ್ಷಕ ಪಡೆಯಾಗುವುದರಲ್ಲಿ ಸಂಶಯವಿಲ್ಲಾ. ತರಬೇತಿ ಪಡೆದು ಶತ್ರು ಸೈನ್ಯದ ಎದುರು ಯುದ್ಧ ಮಾಡುವ ಹುಡುಗರು ದೇಶದ ಆಂತರಿಕ ಕ್ಷೋಭೆ ಸಮಯದಲ್ಲಿ ಏನು ಮಾಡಬಲ್ಲರು? ಅವರ ತರಬೇತಿ ಕೌಶಲಗಳು ದೇಶದ ಪ್ರಜೆಗಳ ಮೇಲೆಯೇ ನಡೆದರೆ ಗತಿಯೇನು? ಈಗಾಗಲೇ ಶಿವಮೊಗ್ಗದ ಕಡೆ ಈಶ್ವರಪ್ಪ ಎಂಬ ರಾಜಕಾರಣಿ 144 ಸೆಕ್ಷನ್ ಜಾರಿಯಿದ್ದರೂ ಮೆರವಣಿಗೆ ತೆಗೆದು, ತನ್ನದೇ ಗೂಂಡಾ ಪಡೆಯಿಂದ ಅಲ್ಪಸಂಖ್ಯಾತರು ಮತ್ತು ದಲಿತರ ಮನೆಗಳ ಮೇಲೆ ದಾಳಿ ಮಾಡಿ, ಮನೆಯೊಳಗಿದ್ದ ಪದಾರ್ಥಗಳನ್ನು ಬೀದಿಗೆ ಎಸೆದು ಜಯಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಮುಂದೆ ಇಂತಹ ಸನ್ನಿವೇಶ ಬಂದಾಗ ಪಾರ್ಟಿ ಜನರ ಜೊತೆಗೆ ಅಗ್ನಿಪಥದಲ್ಲಿ ತರಬೇತಿ ಪಡೆದು ಬಂದವರೂ ಸೇರಿಕೊಳ್ಳುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಎಂಬ ಅನುಮಾನಗಳು ದೇಶವಾಸಿಗಳಿಗೆ ಕಾಡುತ್ತಿರುವಾಗ, ಭಾರತದ ಪ್ರಧಾನಿ ಬಾಯಿಬಿಡದೆ ಯೋಗದಲ್ಲಿ ನಿರತರಾಗಿದ್ದಾರಂತಲ್ಲಾ, ಥೂತ್ತೇರಿ.

******

ಇದು ಭಾರತವನ್ನಾಳುವ ಮೋದಿಯ ಕಥೆಯಾಯ್ತು. ಇನ್ನ ಕರ್ನಾಟಕವನ್ನಾಳುತ್ತಿರುವ ಬೊಮ್ಮಾಯಿ ಎಂಬ ಬೊಮ್ಮಾಯಿ ಅವರ ಮಗ ಮುಖ್ಯಮಂತ್ರಿಯಾಗಿ ಹೇರಲ್ಪಟ್ಟಾಗ ಚಡ್ಡಿ ವಿರೋಧಿಗಳೂ ಕೂಡ ಸಮಾಧಾನಗೊಂಡಿದ್ದರು. ಏಕೆಂದರೆ ಈ ಬೊಮ್ಮಾಯಿ ಹೆಸರು ಬಸವರಾಜ ಬೊಮ್ಮಾಯಿ. ಬಸವಣ್ಣನ ಹೆಸರು ಹೊತ್ತು ಬಂದವರು. ಜೊತೆಗೆ ಕರ್ನಾಟಕದ ಜೋಡೆತ್ತಿನಂತಿದ್ದ ದೇವೆಗೌಡರು ಮತ್ತು ಎಸ್.ಆರ್ ಬೊಮ್ಮಾಯಿಯವರ ರಾಜಕಾರಣ ಕಂಡವರು. ಅದರಲ್ಲೂ ರಾಜಕಾರಣದ ಯಾವ ಸಿದ್ಧಾಂತವನ್ನು ಮೈಗೂಡಿಸಿಕೊಳ್ಳದ ದೇವೆಗೌಡರು ಒಂದು ಕಡೆಯಾದರೆ ಎಂ.ಎಸ್ ರಾಯ್‌ರವರ ಅನುಯಾಯಿಯಾಗಿದ್ದ ಬೊಮ್ಮಾಯಿವರ ಮಗ ಮುಖ್ಯಮಂತ್ರಿಯಾಗಿದ್ದು ರಾಜಕಾರಣದ ಪಂಡಿತರಿಗೆ ಒಂದು ಭರವಸೆ ಮೂಡಿಸಿತ್ತು. ಅದಕ್ಕೆ ಕಾರಣ ಬೊಮ್ಮಾಯಿ ಆರೆಸ್ಸೆಸ್‌ನಿಂದ ಬಂದವರಲ್ಲ ಎಂಬುದು. ಹೀಗಿರುವಾಗ ದುರಂತವೆಂದರೆ ಆರೆಸ್ಸೆಸ್ ಅಲ್ಲದ ಬೊಮ್ಮಾಯಿ ಆರೆಸ್ಸೆಸಿಗರೂ ಅಂಜಿಕೊಳ್ಳುವಂತಹ ಆಡಳಿತ ನಡೆಸತೊಡಗಿರುವುದು. ಇದಕ್ಕೆ ಸ್ಪಷ್ಟ ಉದಾಹರಣೆರಯೆಂದರೆ ಆರೆಸ್ಸೆಸ್ ಪಡೆ ಕುಳಿತುಕೊಂಡು ತಿದ್ದಿಕೊಟ್ಟ ಪಠ್ಯಪುಸ್ತಕವನ್ನ ನಾಗೇಶನೆಂಬ ಮಂತ್ರಿ ಮತ್ತು ರೋಹಿತ್ ಚಕ್ರತೀರ್ಥ ಎಂಬ ಮೂರ್ಖನಿಗೆ ಒಪ್ಪಿಸಿದ ಹಾಗೆ, ಇದೇ ಬೊಮ್ಮಾಯಿ ಹೆಡ್ಗೇವಾರ್ ಪಾಠವನ್ನು ಕೈ ಬಿಡುವುದಿಲ್ಲ ಮತ್ತು ಪಠ್ಯವನ್ನು ಹಿಂಪಡೆಯುವುದಿಲ್ಲ ಎಂದು ತಂದೆ ಸಮಾನರಾದ ದೇವೆಗೌಡರಿಗೆ ಧಮಕಿ ಹಾಕಿದ್ದಾರಲ್ಲಾ, ಥೂತ್ತೇರಿ.

******

ನಿಜಕ್ಕೂ ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಎಂದೂ ನಡೆಯದ ಹಗರಣವೊಂದು ಈ ಬಿಜೆಪಿ ಸರಕಾರದಲ್ಲಿ ನಡೆದು ಹೋಗಿದೆಯಂತಲ್ಲಾ. ತಮ್ಮ ಪುರೋಹಿತಶಾಹಿ ಅಜೆಂಡಾಗಳನ್ನ ಜಾರಿ ಮಾಡುವ ಸಲುವಾಗಿ ಪಠ್ಯದ ಸಾಲುಗಳನ್ನು ತಿದ್ದಿರುವುದೂ ಅಲ್ಲದೇ ಅದಕ್ಕೆ ಕಾರಣರಾದವರನ್ನ ಹೊಣೆಗಾರರನ್ನಾಗಿ ಮಾಡಬೇಕಿರುವಾಗ, ಜವಾಬ್ದಾರಿಯುತ ಅಧಿಕಾರಿಗಳು ಹಿಂದೆ ಸರಿದಾಗ, ತಿದ್ದಲು ಮುಖ್ಯ ಕಾರಣನಾದ ರೋಹಿತ್ ಚಕ್ರತೀರ್ಥ ಎಂಬವನು ಜನ ಕೇಳುವ ಪ್ರಶ್ನೆಗಳಿಗೆಲ್ಲಾ ಉತ್ತರಿಸಬೇಕೆಂದು ಹೇಳಿ ಜನರು ಮುಗಿಬಿದ್ದಾಗ ಸರಕಾರವೇ ಉತ್ತರಿಸಲು ಮುಂದಾಗಿದೆಯಂತಲ್ಲಾ. ಹೀಗೆ ಒಂದು ತಪ್ಪು ಮುಚ್ಚಲು ಇನ್ನೊಂದು ತಪ್ಪು ಮಾಡುತ್ತ ತಪ್ಪುಗಳ ಸರಣಿಯನ್ನ ಹೆಣಿಯುತ್ತ ಕುಳಿತ ಸರಕಾರ ಎಲ್ಲ ಜನಾಂಗದ ಆಕ್ರೋಶ ಎದುರಿಸಲಾರದೆ ಪಠ್ಯಪರಿಷ್ಕರಣ ಸಮಿತಿಯನ್ನು ರದ್ದು ಮಾಡಿದ್ದೇವೆ ಇನ್ಯಾವ ಸಮಸ್ಯೆಯೂ ಇಲ್ಲವೆಂದು ಭೋಜನಕ್ಕೆ ಕುಳಿತುಕೊಂಡರಂತಲ್ಲಾ. ತಪ್ಪು ಮಾಡಿದ ಮೇಲೆ ಸಮಿತಿ ರದ್ದುಪಡಿಸಿದರೆ ಏನು ಬಂತು, ತಪ್ಪು ತಿದ್ದುವವರು ಯಾರು, ಆಗಿರುವ ನಷ್ಟ ಭರಿಸುವರು ಯಾರು ಎಂದು ಜನ ಆಕ್ರೋಶ ವ್ಯಕ್ತಪಡಿಸಿ ಆ ಕೆಲಸ ಮೊದಲು ಮಾಡಿ ನಂತರ ಭೋಜನ ಆರಂಭಿಸಿ ಎಂದು ಹೇಳಿದ್ದಾರಲಾ, ಥೂತ್ತೇರಿ.

*****

ರೋಹಿತ್ ಚಕ್ರತೀರ್ಥ ಎಂಬುವನು ಕುವೆಂಪುಗೆ ಅವಮಾನ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಕುವೆಂಪು ಸನ್ನಿಧಿಯ ರಾಜಕಾರಣಿ ಕಿಮ್ಮನೆ ರತ್ನಾಕರ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಜಾಥ ತೆಗೆದರು. ಅಲ್ಲಿ
ರಾಜಕಾರಣಿಗಳನ್ನ ಹಿಂದೆಬಿಟ್ಟು, ಸಾಹಿತಿಗಳನ್ನು ಮುಂದೆ ಮಾಡಿ ತೀರ್ಥಹಳ್ಳಿಯಲ್ಲಿ ಬೃಹತ್ ಸಭೆಯನ್ನು ಮಾಡಿದರಲ್ಲಾ. ಅಷ್ಟು ಮಾತ್ರವಲ್ಲ ಕುವೆಂಪು ಜ್ಯೋತಿಯನ್ನು ಕುಪ್ಪಳಿಯಿಂದ ತೆಗೆದುಕೊಂಡು ಹೋಗಿ ಬೆಂಗಳೂರಿನ ಫ್ರೀಡಂ ಪಾರ್ಕಿಗೆ ತಲುಪಿಸಿದಾಗ ನಾಡಿನ ಪ್ರಜ್ಞಾವಂತರು ಮತ್ತು ಮಾಜಿ ಪ್ರಧಾನಿ ದೇವೆಗೌಡರ ಉಪಸ್ಥಿತಿ ಎಲ್ಲರಿಗೂ ಸ್ಪೂರ್ತಿದಾಯಕವಾಗಿದ್ದರೆ, ಒಕ್ಕಲಿಗ ಜನಾಂಗದ ಇಂಗ್ಲಿಷ್ ಸ್ವಾಮಿ ನಿರ್ಮಲಾನಂದರು ಗೈರು ಹಾಜರಿ ಎದ್ದು ಕಾಣುತ್ತಿತ್ತಂತಲ್ಲಾ. ಇದರಿಂದ ಸಿಟ್ಟಾದ ಕೆಲವರು ಈತ ಮೈಗೆ ಎಣ್ಣೆ ಹಚ್ಚಿಕೊಂಡಿರುವ ಸ್ವಾಮಿ ಎಂದಾಗ ಹೌದು ಜನಾಂಗದ ಮಠಗಳ ನಿರ್ವಹಣೆ ಮತ್ತು ಬಿಜೆಪಿ ನಡುವೆ ಕುಸ್ತಿಯಾಗಬೇಕಾದರೆ ಮೈಗೆ ಎಣ್ಣೆ ಹಚ್ಚಿಕೊಳ್ಳುವುದು ಅನಿವಾರ್ಯ ಎಂದು ಕೆಲವರು ವಾದಿಸಿದರೆ, ಮತ್ತೆ ಕೆಲವರು ಈತ ಬಾಲಗಂಗಾಧರನಾಥರು ನೇಮಿಸಿ ಹೋದ ಸ್ವಾಮಿಯೇ ಹೊರತು ಜನಾಂಗ ಆರಿಸಿ ಹರಸಿದವರಲ್ಲ ಎಂದರಂತಲ್ಲಾ. ಮತ್ತಷ್ಟು ಜನ ಉತ್ತರಪ್ರದೇಶಕ್ಕೆ ಹೇಗೆ ಆದಿತ್ಯನಾಥನೊ ಹಾಗೆಯೇ ಕರ್ನಾಟಕಕ್ಕೆ ಮುಂದೆ ನಿರ್ಮಲನಾಥ ಎಂದು ಬಿಜೆಪಿಗಳು ಭಾವಿಸಿದ್ದಾರೆ, ಆದುದರಿಂದ ಅಂಥವರ ಮನನೋಯಿಸಲಾಗದ ನಿರ್ಮಲ ಮನಸ್ಸಿನ ನಿರ್ಮಲಾನಂದರು ಕುವೆಂಪುಗೆ ಅವಮಾನವಾದರೂ ಕ್ಯಾರೆ ಅನ್ನಲಿಲ್ಲವೆಂದರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಮೋಟಮ್ಮಾ ಕಾಂಗ್ರೆಸಿಗಲ್ಲಾದವಳು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...