ಕೊಡಗು: ಹಿರಿಯ ಪತ್ರಕರ್ತ, ಕೊಡಗು ಪತ್ರಿಕಾಭವನದ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ, ಕೊಡಗು ಸಮಾಚಾರ ಪತ್ರಿಕೆಯ ಸಂಪಾದಕ ಬಿ.ಎನ್.ಮನು ಶೆಣೈ (64) ರವಿವಾರ ಮುಂಜಾನೆ ನಿಧನರಾಗಿದ್ದಾರೆ.
ಕಳೆದ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮನು ಶೆಣೈಯವರು ಪ್ರಗತಿಪರ ಚಿಂತಕ, ದಿವಂಗತ ಎ.ಕೆ.ಸುಬ್ಬಯ್ಯನವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡಿದ್ದರು. ಮನು ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಗೆಳೆಯರ ಬಳಗವನ್ನು ಅಗಲಿದ್ದಾರೆ.
ಅಗಲಿಗೆ ಜೀವಕ್ಕೆ ಸಂತಾಪ
“ವಿರಾಜಪೇಟೆ ನಗರದ ನಿವಾಸಿ ಮನು ಶೆಣೈ ಅವರ ಅಗಲಿಕೆ ಕೊಡಗು ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟ. ಅರವತ್ತಮೂರು ವರ್ಷದ ಮನುಶೆಣೈ ಅವರಿಗೆ ಕಳೆದ ಕೆಲದಿನಗಳಿಂದ ಅನಾರೋಗ್ಯ ಸಮಸ್ಯೆ ಕಾಡಿತ್ತು. ಅವರ ಅಗಲಿಕೆಗೆ ಸಂತಾಪ, ಅವರ ಆತ್ಮಕ್ಕೆ ಶಾಂತಿ ಪ್ರಾಪ್ತಿಯಾಗಲಿ” ಎಂದು ಕೊಡಗು ಪತ್ರಕರ್ತರ ಸಂಘ ಸಂತಾಪ ಸೂಚಿಸಿದೆ.
‘ರಾಜೀಯಾಗದ ಗೆಳೆಯ’
“ಮನು ನನ್ನ ಅತ್ಯಂತ ಆಪ್ತ ಗೆಳೆಯ. ನನ್ನೂರು ವಿರಾಜಪೇಟೆಯವರು. ನಿಷ್ಠುರ ಪ್ರಾಮಾಣಿಕ, ಪತ್ರಕರ್ತ. ಅನೇಕ ಪತ್ರಿಕೆಗಳಲ್ಲಿ ಕೆಲಸ ಮಾಡಿ, 1996ರಲ್ಲಿ ತನ್ನದೇ ಸ್ವಂತ ಪತ್ರಿಕೆ “ಕೊಡಗು ಸಮಾಚಾರ” ಆರಂಭಿಸಿಯೇ ಬಿಟ್ಟರು. ಒಂದು ಪತ್ರಿಕೆ ನಡೆಸೋದು ಎಷ್ಟು ಕಷ್ಟ ಎನ್ನುವುದು ಅದರ ಅನುಭವ ಇರುವವರಿಗೆ ಗೊತ್ತು. ಅನೇಕ ಸಮಸ್ಯೆಗಳ ಮಧ್ಯೆಯೂ ಅದನ್ನು ನಿಲ್ಲಿಸದೆ, ತಾನು ನಂಬಿದ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿ 25 ವರ್ಷಗಳ ಕಾಲ ನಡೆಸಿದರು. ವಸ್ತು ನಿಷ್ಟ ವರದಿಗಾಗಿ ಅಲೆದಾಡಿ ಇದ್ದುದನ್ನ ಇದ್ದ ಹಾಗೆ ಬರೆಯುವ ಧೈರ್ಯ ಇದ್ದ ಮನು, ಅದರಿಂದ ಅನೇಕರ ಪಾಲಿಗೆ ‘ಶತ್ರು’ ಆಗಿದ್ದರು” ಎಂದು ಪತ್ರಕರ್ತ ಬೋಪಯ್ಯ ಚೋವಂಡ ಸ್ಮರಿಸಿದ್ದಾರೆ.
“ಇದು ಕಂಪ್ರೊಮೈಸ್ ಕಾಲ. ಸ್ವಲ್ಪ ಕಂಪ್ರೊಮೈಸ್ ಮಾಡ್ಕೊಂಡರೆ ಎಲ್ಲಾ ಸವಲತ್ತುಗಳು, ಪ್ರಶಸ್ತಿ, ಪುರಸ್ಕಾರಗಳು ಸಿಗುತ್ತವೆ. ಆದ್ರೆ ಮನು ಎಂದೂ ಅದನ್ನು ಮಾಡಲಿಲ್ಲ. ಹಾಗಾಗಿ ಅವನಿಗೆ ಸಿಗಬೇಕಿದ್ದ ಪ್ರಶಸ್ತಿಗಳೂ ಸಿಗಲಿಲ್ಲ. ಮನು ತುಂಬಾ ಕಷ್ಟ ಪಟ್ಟ. ಕಷ್ಟಪಡ್ತಾನೆ ಹೋಗಿ ಬಿಟ್ಟ! ಪ್ರಗತಿಪರ ಚಿಂತಕ, ಫೈರ್ ಬ್ರಾಂಡ್ ಎಂದೇ ಖ್ಯಾತರಾದ ಸುಬ್ಬಯ್ಯ ಅವರ ಬಗ್ಗೆ ಎರಡು ಪುಸ್ತಕಗಳನ್ನು ಬರೆದಿದ್ದರು. ಅಲ್ಲದೆ ಸುಬ್ಬಯ್ಯ ಅವರ ಬಗ್ಗೆ ಸಂಪಾದಿಸಿದ ಆರು ಪುಸ್ತಕಗಳನ್ನು ಹೊರತಂದಿದ್ದರು. ಮನು ನಡೆಸುತ್ತಿದ್ದ ಪತ್ರಿಕೆಗೆ ಸುಬ್ಬಯ್ಯನವರು ಸುಮಾರು 150 ವಾರಗಳ ಕಾಲ ಲೇಖನ ಬರೆದಿದ್ದರು” ಎಂದು ನೆನೆದಿದ್ದಾರೆ.
ಎಸ್ಡಿಪಿಐ ಕೊಡಗು ಘಟಕ ಸಂತಾಪ ಸೂಚಿಸಿದ್ದು, “ಪ್ರಸ್ತುತ ಕಾಲದಲ್ಲಿ ಹೆಚ್ಚಿನ ಪತ್ರಕರ್ತರು ಫ್ಯಾಸಿಸ್ಟರ ಎಂಜಲು ಕಾಸಿನ ಆಸೆಗೋಸ್ಕರ ಪತ್ರಿಕಾ ಧರ್ಮವನ್ನು ಮೆರೆತು ವರದಿ ಮಾಡುತ್ತಿರುವ ಸಂದರ್ಭದಲ್ಲಿ ಬಿ.ಎನ್.ಮನು ಶೆಣೈ ಯವರು ಯಾವುದೇ ಆಸೆ ಆಮಿಷಗಳಿಗೆ ಬಲಿ ಬೀಳದೆ ತನ್ನ ಬರಹದ ಮೂಲಕ ಫ್ಯಾಸಿಸಂಅನ್ನು ಕಟು ಶಬ್ದದ ಮೂಲಕ ವಿರೋಧಿಸುತ್ತಿದ್ದರು. ಇವರ ನಿಧನವು ಸಮಾಜಕ್ಕೆ ಮತ್ತು ಫ್ಯಾಸಿಸ್ಟ್ ವಿರೋಧಿ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ” ಎಂದು ತಿಳಿಸಿದೆ.
“ಜೀವಪರ ದನಿ, ಪತ್ರಕರ್ತ ಮನು ಶೆಣೈ ಇನ್ನಿಲ್ಲ ಎಂಬ ಸುದ್ದಿ ಕೇಳಿದೆ. ನಿಜಕ್ಕೂ ನೋವಿನ ಸಂಗತಿ” ಎಂದು ಪತ್ರಕರ್ತ ಶಶಿಧರ್ ಹೆಮ್ಮಾಡಿ ಪೋಸ್ಟ್ ಮಾಡಿದ್ದಾರೆ.