Homeಕರ್ನಾಟಕರಾಜೀವ ತಾರಾನಾಥ: ಜಾತ್ಯತೀತ ಪರಂಪರೆಯ ಮಾತು

ರಾಜೀವ ತಾರಾನಾಥ: ಜಾತ್ಯತೀತ ಪರಂಪರೆಯ ಮಾತು

- Advertisement -
- Advertisement -

ರಾಜೀವ ತಾರಾನಾಥರಿಗೆ 90 ವರ್ಷ ತುಂಬಿತು. ಅವರ ಶಿಷ್ಯರೂ ಅಭಿಮಾನಿಗಳು ಸೇರಿ, ಮೈಸೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದರಲ್ಲಿ ಅವರು ಮಾಡಿದ ಭಾಷಣದ ಕೆಲವು ಭಾಗಗಳು ಹೀಗಿವೆ: “ನನ್ನ ತಾಯಿಮಾತು, ಮಾತೃಭಾಷೆಯಲ್ಲ, ತಾಯಿನುಡಿ ಕನ್ನಡವಲ್ಲ. ತಮಿಳು. ಆದರೆ ಕನ್ನಡ ನನಗೆ ಮೈಗೂಡಿತು. ಎಷ್ಟೋ ಮಟ್ಟಿಗೆ ಬೇರೆಬೇರೆ ಅಭ್ಯಾಸಗಳನ್ನು ಬೇರೆಬೇರೆ ಪರಂಪರೆಗಳನ್ನು ಇಡೀ ಈ ಉಪಖಂಡದಲ್ಲಿ, ಈ ನಮ್ಮ ಕರ್ನಾಟಕದಲ್ಲಿ ಮಾತ್ರ ಕಾಣಬಹುದು. ಈ ಉಪಖಂಡದ ಎರಡೂ ಅಭಿಜಾತ ಸಂಗೀತಗಳು ಇಲ್ಲಿ ಬದುಕಿವೆ, ಬೆಳೆದಿವೆ, ಇವತ್ತೂ ಇವೆ. ಬೇರೆಬೇರೆ ಭಾಷೆಯವರು ತೆಲುಗು ಮಾತಾಡೋರು, ತಮಿಳು ಮಾತಾಡೋರು ಕೊಂಕಣಿ ಮಾತಾಡೋರು-ಅದು ನನ್ನ ಪಿತೃಭಾಷೆ-ಇವೆಲ್ಲವನ್ನು ಮೈಗೂಡಿಸಿಕೊಂಡ ಕರ್ನಾಟಕ ಇವಾಗ ಇದೆಯಾ? ಸ್ವಲ್ಪ ವಿಚಾರ ಮಾಡಬೇಕು. ಹಾಗೆ ಮಾಡಿದಾಗ ನನಗೆ ಬೇಸರ ಬರತದ. ಈ ಕರ್ನಾಟಕದಲ್ಲಿ ತಮಿಳರಾದ ಮಾಸ್ತಿ, ಪು.ತಿ. ನರಸಿಂಹಾಚಾರ್, ನ ರತ್ನ, ಬಹಳ ಚೆನ್ನಾಗಿ ಬರೆದರು. ಗಿರೀಶ್ ಕಾರ್ನಾಡ್, ಒಬ್ಬ ಕೊಂಕಣಿಗ. ಈ ಪಂಡಿತ ತಾರಾನಾಥ ಕೊಂಕಣೀನೂ ಹೌದು, ಕನ್ನಡಾನೂ ಹೌದು, ಉರ್ದೂನೂ ಹೌದು. ಎಲ್ಲ ಸೇರಿ ಒಂದು ಸೀಕರಣೆಯಾಗಿ ಈ ಕರ್ನಾಟಕದಲ್ಲಿ ನಾವು ಇದ್ದೀವಿ. ಆದರೆ ಇವತ್ತಿನ ದಿವಸ ನಾವು ಬೇವಿನ ರಸ ಕುಡೀತಿದೀವಿ ಅನಸ್ತದ. ಇದು ಹೋಗಬೇಕು. ಮತ್ತ ಆ ಸೀಕರಣೆ ಬರಬೇಕು. ಮತ್ತ ಈ ಸಿಹಿ ಬರಬೇಕು. ಮತ್ತ ನಾವೆಲ್ಲ ಒಟ್ಟಾಗಿ ಬದುಕಬೇಕು.

“ಏನೋ ಒಂದು ಇಮಾರತು ಅದ. ಅದನ್ನು ಹೊಡದ ಕೆಡವಿಬಿಡೋಣ. ಅದರ ಕೆಳಗೆ ಮತ್ತೇನನ್ನೋ ಹುಡುಕೋದು. ಎಲ್ಲಾ ಕಡೆ ಅದೇ ಹುಡಕೋದು. ಏನಾಗಿದೆ ನಮಗೆ? ವಿವೇಚನೆ ಸಹನೆ ವಿವೇಕ ಸೂಕ್ಷ್ಮತೆ ಇವೆಲ್ಲ ಹೋಗಿಬಿಟ್ಟಿವೆ. ನಮ್ಮ ಸಂಗೀತದಲ್ಲಿ ಅವನು ಗುಡೀಗೆ ಹೋಗ್ತಾನೊ ಮಸೀದಿಗೆ ಹೋಗ್ತಾನೊ ಪ್ರಶ್ನೇನೆ ಇಲ್ಲ. ನಾವೆಲ್ಲ ಸಂಗೀತಕ್ಕೆ ಹೋಗತೀವಿ. ಹೋಗೋ ಪ್ರಯತ್ನ ಮಾಡತೀವಿ. ಆ ಸಂಗೀತದಲ್ಲಿ ಬದುಕ್ತೀವಿ. ಸಂಗೀತದಲ್ಲೇ ಸಾಯತೀವಿ. ಬಹಳ ದೊಡ್ಡವರೊಬ್ಬರ ಕತೀ ಹೇಳತೇನಿ. ಖಾನಸಾಹೇಬ್ ಉಸ್ತಾದ್ ಅಬ್ದುಲ್ ಕರೀಂಖಾನ್ ಅಂತ ಹೇಳಿ. ಇಲ್ಲಿ ಆಳುವ ಮಹಾರಾಜರು ಅವರನ್ನ ಆಸ್ಥಾನ ವಿದ್ವಾಂಸರನ್ನಾಗಿ ಮಾಡಿದ್ದರು. ಅವರೊಮ್ಮೆ ಮದರಾಸಿನಿಂದ ಪಾಂಡಿಚೇರಿಗೆ ಹೋಗಬೇಕಾದರೆ, ದಾರಿಯೊಳಗೆ ಒಂದು ದೊಡ್ಡ ಜಂಕ್ಷನ್, ವೀಳ್ಳುಪುರಂ ಅಂತ. ಆಗ ಅವರಿಗೆ ಏನೋ ಅನಿಸಿತು. ಬೆಳಗಾನ ಮುಂಚೆ. ಅವರೂ ಅವರ ಶಿಷ್ಯರೂ ಇಳಿದರು. ಪ್ಲಾಟ್‌ಫಾರಂ ಮೇಲೆ ಕೂತ್ಕೊಂಡು, ತಂಬೂರಿ ಶೃತಿ ಮಾಡಕೊಂಡು ಭೈರವಿ ರಾಗ ಹಾಡಲಿಕ್ಕೆ ಶುರುಮಾಡಿದರು. ಅತ್ಲಾಗೆ ಸೂರ್ಯೋದಯ ಆಗತಾ ಇದ್ದಾಗಲೇ ಇಲ್ಲಿ ಇವರ ಪ್ರಾಣ ಹಂಗೇ ಹೋಗಿಬಿಡ್ತು. ಅದಕ್ಕೆ ಪುಣ್ಯಾ ಮಾಡಿರಬೇಕರಿ. ಅವರು ಹೋದೋರು ಮಾತ್ರ ಅಲ್ಲ, ಆ ಒಂದು ಗಳಿಗೆ ಬಗ್ಗೆ ತಿಳಿದವರು, ತಿಳಕೊಳ್ಳೋಕೆ ಬಯಸೋರು, ನೀವು ನಾವು ಎಲ್ಲರೂ ಪುಣ್ಯಾ ಮಾಡಿರಬೇಕು.

“ಸಂಗೀತಕ್ಕೆ ದಿಲ್‌ದಾರತನ, ದೊಡ್ಡಹೃದಯ ಇರಬೇಕು. ನಾವು ಇಂಥಾ ಅಬ್ದುಲ್ ಕರೀಂ ಖಾನಸಾಹೇಬರನ್ನ ನೆನೆಸೊ ಕ್ಷಮತಾ ಕಳಕೊಂಡುಬಿಟ್ಟಿದೀವಿ. ಯಾಕಂದರೆ, ಅವರು ನಮ್ಮ ಜಾತಿಯವರಲ್ಲ. ಆದರೆ ನಾವೆಲ್ಲ ಅವರಲ್ಲಿ ಕಲತೋರು. ಇಲ್ಲಿ ಸೇರಿದ ನಾವೆಲ್ಲರೂ ಅವರಿಂದ ಕಲತೋರು. ಅವರ ಮಕ್ಕಳು ಮೊಮ್ಮಕ್ಕಳು, ಅವರ ಮಾನಸ ಮಕ್ಕಳು ಮಾನಸ ಮೊಮ್ಮಕ್ಕಳಲ್ಲಿ ಕಲಿತವರು. ನನ್ನ ಗುರುಗಳು ಅಲಿ ಅಕಬರಖಾನರು ನನ್ನ ಕಡೆಯಿಂದ ಒಂದು ರೂಪಾಯಿ ತಗೊಂಡೋರಲ್ಲ. ಬೈದರು. ಬೈಯ್ಯಲಿ. ಅವರು ಸಂಗೀತದ ಗುಂಗಿನಲ್ಲಿದ್ದವರು.

“ಇವತ್ತು ಬೆಳಗಿನಿಂದ ನನ್ನ ಮನೆಯೊಳಗೆ ಒಂದು ದೊಡ್ಡ ಪ್ರವಾಹ, ಹೊಳೆ, ಬೆಳಗಿನ ಐದು ಗಂಟೆಯಿಂದ ಶುರುವಾಗಿಬಿಟ್ಟದೆ. ಇವತ್ತು ಮುಂಜಾನೆ ಒಂದು ಅಪರೂಪದ ರಾಗ ನೆನಪಾತು. ಲಲಿತಾಗೌರಿ. ಅದರಲ್ಲಿ ಒಂದು ಬಂದಿಶ್ ಗುರುಗಳು ಕಲಿಸಿದ್ದು ಹೀಂಗ ಬಂತು. ಹಾಡಿದೆ. ನಮ್ಮ ಫಯ್ಯಾಜ್ ಖಾನ್ ನನಗ ಇದು ಬೇಕು ಅಂತ ರೆಕಾರ್ಡ್ ಮಾಡಿಕೊಂಡರು.

“ನನಗ ತೊಂಬತ್ತು ವರ್ಷ. ನಾನು ಏನು ಮಾಡಬೇಕು? ಮಂದಿ ಹೇಳತಾರೆ ‘ನೀವು ಆರಾಮ ಮಾಡ್ರಿ, ದೇವರ ಧ್ಯಾನಾ ಮಾಡತಾ ಕೂಡ್ರಿ’ ಅಂತ. ಆದರೆ ನಮಗೆ ಸಂಗೀತವೇ ದೇವರು. ಅಲಿ ಅಕಬರಖಾನರೇ ದೇವರು. ಅವರೇ ಸಂಗೀತ. ಅಷ್ಟು ಸಾಕು. ಹಾಡ್ತಾ ಹೋಗ್ತೀನಿ.”

ಸುಮಾರು 16 ನಿಮಿಷಗಳ ತಮ್ಮ ಈ ಭಾಷಣವನ್ನು ರಾಜೀವ ತಾರಾನಾಥರು, ಉಸಿರಾಟದ ಸಮಸ್ಯೆಯಿಂದ ಒಂದೊಂದೇ ಪದವನ್ನು ನಿಧಾನವಾಗಿ ನಿಟ್ಟುಸಿರುಬಿಡುವಂತೆ ಮಾತಾಡಿದರು. ಅವರು ಉಪನ್ಯಾಸದಲ್ಲಿ ಮೂರು ಸಂಗತಿಗಳಿವೆ.

ಇದನ್ನೂ ಓದಿ: ಗುಂಡ್ಲುಪೇಟೆ: ದಲಿತ ಮಹಿಳೆಯ ಕೆನ್ನೆಗೆ ಥಳಿಸಿದ ಸಚಿವ ಸೋಮಣ್ಣ

1. ಭಾಷಾ ಸಾಮರಸ್ಯ. ಹಲವು ಭಾಷಿಕರು ಒಂದಾಗಿ ಬಾಳುವ ಕರ್ನಾಟಕ ಕಟ್ಟುವ ಭಾಷಾ ಬಹುತ್ವ ಮತ್ತು ಬಾಂಧವ್ಯಕ್ಕೆ ಬಹುಶಃ ಕರ್ನಾಟಕದಲ್ಲಿ ಹೆಚ್ಚಿನ ಧಕ್ಕೆ ಬಂದಿಲ್ಲ. ಬೇರೆಬೇರೆ ಮನೆಮಾತಿನವರು ಕನ್ನಡದಲ್ಲಿ ಬರೆಯುವುದರ ಬಗ್ಗೆ ಸ್ವಾಗತವಿದೆ. ಮನ್ನಣೆಯಿದೆ. ಅವರ ಮನೆಮಾತಿನ ಕಾರಣಕ್ಕೆ ಅವರ ಬರೆಹಕ್ಕೆ ಅನ್ಯಾಯವಾಗಿದೆ ಎನಿಸುವುದಿಲ್ಲ. ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯ, ವಿಜಯಮ್ಮ (ತೆಲುಗು), ಬೇಂದ್ರೆ, ಶಂಬಾ (ಮರಾಠಿ) ಗಿರೀಶ್, ವಿವೇಕ, ಜಯಂತ್ (ಕೊಂಕಣಿ) ಕಟ್ಪಾಡಿ, ಬೊಳುವಾರು (ಬ್ಯಾರಿ), ರಶೀದ, ಸಾರಾ (ಮಲೆಯಾಳ), ನಿಸಾರ್ ಅಹಮದ್, ಶರೀಫಾ (ಉರ್ದು), ಲಲಿತಾ ನಾಯಕ (ಲಂಬಾಣಿ)-ಹೀಗೆ ಈ ಪಟ್ಟಿಯನ್ನು ಮುಂದುವರಿಸಬಹುದು. ಅಪಾರ ಜನಪ್ರಿಯತೆ ಪಡೆದಿದ್ದ ನಿಸಾರ್, ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಎಂದು ನೋವಿನ ಪದ್ಯ ಬರೆದಿದ್ದು, ಕನ್ನಡ ಲೇಖಕನಾಗಿ ಅನುಭವಿಸಿದ ಪಕ್ಷಪಾತದಿಂದಲ್ಲ. ಮುಸ್ಲಿಮನಾಗಿ ಮತೀಯವಾದಿ ರಾಷ್ಟ್ರೀಯವಾದದ ಕಣ್ಣಲ್ಲಿ ಶಂಕಿತನಾಗಿದ್ದಕ್ಕೆ.

2. ಸಂಗೀತಲೋಕದಲ್ಲಿರುವ ಜಾತ್ಯತೀತ ಪರಂಪರೆ. ಈ ಹೇಳಿಕೆ, ಕರ್ನಾಟಕ ಸಂಗೀತಕ್ಕಿಂತಲೂ ಹಿಂದೂಸ್ತಾನಿ ಸಂಗೀತಕ್ಕೆ ಹೆಚ್ಚು ಅನ್ವಯವಾಗುತ್ತದೆ. ನಮಗೆಲ್ಲ ತಿಳಿದಂತೆ ಮಲ್ಲಿಕಾರ್ಜುನ ಮನ್ಸೂರರು, ತಮ್ಮ ವಿದ್ಯಾಗುರುಗಳಾದ ಬುರ್ಜಿಖಾನ್ ಹಾಗೂ ಮಂಜಿಖಾನ್ ಅವರ ಪುಣ್ಯತಿಥಿಗಳನ್ನು ಕೊನೆಯ ತನಕ ಮಾಡುತ್ತಿದ್ದರು. ಆದರೆ ಭಾರತೀಯ ಸಮಾಜದಲ್ಲಿ ಮತೀಯವಾದವು ಎಲ್ಲ ಕ್ಷೇತ್ರಗಳನ್ನೂ ಪ್ರವೇಶಿಸಿದ್ದರಿಂದ ಈ ಪರಂಪರೆಯಲ್ಲೂ ಬಿರುಕುಗಳಿವೆ. ಮುಸ್ಲಿಮ ಕಲಾವಿದರ ಉಸ್ತಾದ್ ಪರಂಪರೆಯನ್ನು ಬದಿಗೆ ಸರಿಸುವ ವಿಸ್ಮೃತಿಗೆ ತಳ್ಳುವ ಯತ್ನಗಳು ಸೂಕ್ಷ್ಮಸ್ತರದಲ್ಲಿ ನಡೆಯುತ್ತಿವೆ. ಹಿಂದೂಸ್ತಾನಿ ಸಂಗೀತವನ್ನು ಮುಸ್ಲಿಂ ಉಸ್ತಾದರ ಹಿಡಿತದಿಂದ ತಪ್ಪಿಸಬೇಕೆಂದು 20ನೇ ಶತಮಾನದ ಆದಿಯಲ್ಲೇ ಪ್ರಯತ್ನಗಳು ಶುರುವಾಗಿದ್ದವು. ಇದನ್ನು ಪಂಡಿತ್ ಫಲುಸ್ಕರ್ ಹಾಗೂ ಉಸ್ತಾದ್ ಅಬ್ದುಲ್ ಕರೀಂಖಾನರನ್ನು ಇಟ್ಟುಕೊಂಡು ಚರ್ಚೆ ಮಾಡಿರುವ ಸಂಗೀತ ಚಿಂತಕರಾದ ಜಾನಕಿ ಭಾಕ್ಲೆಯವರು ವಿಶ್ಲೇಷಣೆ ಮಾಡಿರುವರು.

ರಾಜೀವ ತಾರಾನಾಥರು ಆದರ್ಶವೆಂದು ಪ್ರತಿಪಾದಿಸುವ ಕಲಾಲೋಕದ ಜಾತ್ಯತೀತತೆಯು, ಆಲೋಚನೆಯಾಗಿ ಹುಟ್ಟಿದದಲ್ಲ. ಅವರ ಸ್ವಂತ ಅನುಭವದಿಂದ ಹುಟ್ಟಿದ್ದು. ಈ ಜಾತ್ಯತೀತ ಕಲಾಸಂಬಂಧವು ರಕ್ತಸಂಬಂಧವಾಗಿ ಮುಂದುವರಿದಿದ್ದೂ ಇದೆ. ರಾಜೀವರ ಗುರು ಅಲಿ ಅಕಬರಖಾನರ ಸೋದರಿ ಅನ್ನಪೂರ್ಣಾದೇವಿ, ಪಂಡಿತ ರವಿಶಂಕರ್ ಅವರ ಜೀವನಸಂಗಾತಿಯಾದರು. ಸ್ವತಃ ರಾಜೀವರ ತಂದೆ ಪಂಡಿತ ತಾರಾನಾಥರು ಬೆಳೆಸಿದ ಸಂಗೀತ ಮತ್ತು ವೈದ್ಯ ಶಿಷ್ಯರಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರು ಇದ್ದರು. ಮುಸ್ಲಿಂ ಧಾರ್ಮಿಕ ಹಿನ್ನೆಲೆಯಿಂದ ಬಂದ, ಕರೀಂಖಾನರು ಭೈರವಿ ರಾಗವನ್ನು ಹಾಡುತ್ತ ಪ್ರಾಣವಿಸರ್ಜನೆ ಮಾಡುವ ಪ್ರಕರಣವು, ಹಿಂದೂಸ್ತಾನಿ ಸಂಗೀತ ಲೋಕದಲ್ಲಿರುವ ಜಾತ್ಯತೀತತೆಗೂ ಆತ್ಯಂತಿಕ ಪ್ರತೀಕವಾಗಿದೆ.

3. ವೃದ್ಧಾಪ್ಯದಲ್ಲಿಯೂ ಸಂಗೀತ ಅಥವಾ ತನ್ನ ಮಾಧ್ಯಮವನ್ನೇ ದೈವವನ್ನಾಗಿ ಭಾವಿಸಿ, ಅನುಸಂಧಾನ ಮಾಡುವ ಕಲಾವಿದರ ಹೊಸಧರ್ಮದ ಕಲ್ಪನೆ. ಕಲಾಧರ್ಮದ ಕಲ್ಪನೆ. ಬರವಣಿಗೆಯ ಲೋಕದಲ್ಲಿಯೂ ಅತ್ಯುತ್ತಮ ಸಾಹಿತ್ಯ ಸೃಷ್ಟಿಮಾಡುವುದನ್ನು ಜೀವನ್ಮರಣ ಪ್ರಶ್ನೆಯಾಗಿಸಿಕೊಂಡ ಲೇಖಕರು ಇದ್ದಾರೆ. ತನಗೆ ಬರವಣಿಗೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಲೇಖಕರೂ ಇದ್ದಾರೆ. ಆದರೆ ಸಂಗೀತದ ಲೋಕದಲ್ಲಿ ಕಲೆಯ ದೈವೀಕರಣವು, ಬೇರೆ ಬಗೆಯ ಆಧ್ಯಾತ್ಮಿಕ ಆಯಾಮವನ್ನು ಒಳಗೊಂಡಿದೆ. ಇದು ಸೂಫಿ ಕಬೀರಪಂಥ ಒಳಗೊಂಡಂತೆ ಸಂಗೀತವು ಟ್ರಾನ್ಸ್ ಅವಸ್ಥೆಗೆ ಕಲಾವಿದರು ಮತ್ತು ಕೇಳುಗರು ಹೋಗುವ ಸಾಧನೆಯ ಸಂಗತಿಯಾಗಿದೆ. ಹೀಗಾಗಿ, ಸಂಗೀತದಲ್ಲಿ ರಿಯಾಜ್ ಮಾಡಲು ಆಗದೆ ಇರುವುದು ಎಂದರೆ ಅವರಿಗೆ ಮರಣಕ್ಕೆ ಸಮಾನ. ತನ್ನ ಸಾವನ್ನು ಹಾಡುವಾಗಲೇ ಅನುಭವಿಸುವ ಕರೀಂಖಾನರ ಪ್ರಕರಣವು ಇದನ್ನು ಸೂಚಿಸುತ್ತಿದೆ.

ಆತಂಕವೆಂದರೆ, ರಾಜೀವರ ಈ ಆದರ್ಶ ಪ್ರತಿಪಾದನೆ ಮತ್ತು ವರ್ತಮಾನದ ವೈರುಧ್ಯಗಳ ಬಗೆಗಿನ ಸಂಕಟಗಳು, ಯಾವುದೊ ಕಾಲಕ್ಕೆ ಸೇರಿದ, ವರ್ತಮಾನಕ್ಕೆ ಸಲ್ಲದ ಗೊಣಗಾಟದಂತೆ ತೋರುವ ಹಾಗೆ ವಾತಾವರಣ ಬದಲಾಗಿರುವುದು. ಕಲಾಲೋಕದ ಆದರ್ಶದ ದಂತಕತೆಗಳನ್ನು ಕೇಳಿ ತಲೆದೂಗಿ ಚಪ್ಪಾಳೆ ಹೊಡೆದು ಎಂದಿನಂತೆ ಕೆಲವು ಕಲಾವಿದರು, ಕಲೆಯನ್ನು ಜಾತಿ ಮತ್ತು ಧರ್ಮಗಳ ಸಂಕುಚಿತ ಚೌಕಟ್ಟಿನೊಳಗೇ ಮುಂದುವರಿಸುವ ಸಾಧ್ಯತೆಯಿರುವುದು. ಕರ್ನಾಟಕ ಸಂಗೀತದ ಟಿ.ಎಂ. ಕೃಷ್ಣ ಅವರು ಅನುಭವಿಸುತ್ತಿರುವ ಒಂಟಿತನವನ್ನು ಗಮನಿಸಬಹುದು. ಸಂಗೀತ ಲೋಕದಲ್ಲಿರುವ ಬ್ರಾಹ್ಮಣರ ಯಜಮಾನಿಕೆ ಮತ್ತು ಜಾತೀಯತೆಗಳ ವಿರುದ್ಧ ದಿಟ್ಟವಾಗಿ ಮಾತಾಡುತ್ತಿರುವ, ಸಂಗೀತದೊಳಗೆ ಎಲ್ಲ ಧರ್ಮಗಳ ಸಂವೇದನೆಯನ್ನು ಪ್ರವೇಶಗೊಳಿಸುವಂತೆ ಹಾಡುತ್ತಿರುವ, ಮೃದಂಗವನ್ನು ಮಾಡುವ ಕ್ರೈಸ್ತ ಕುಟುಂಬಗಳ ಬಗ್ಗೆ ಗ್ರಂಥವನ್ನು ಬರೆದಿರುವ, ಜನಪದರ ದೇಶಿ ಸಂಗೀತದ ಜತೆ ಮಾರ್ಗ ಸಂಗೀತವನ್ನು ಬೆರೆಸಿನೋಡುವ ಅನುಸಂಧಾನ ಮಾಡುತ್ತಿರುವ ಕೃಷ್ಣ ಅವರಿಗೆ ಕಛೇರಿಗಳು ಸಿಗದಂತೆ, ಸಿಕ್ಕರೆ ಅವನ್ನು ರದ್ದುಗೊಳಿಸುವಂತೆ ಮಾಡಲಾಗುತ್ತಿದೆ. ಆಳುವ ರಾಜಕೀಯ ಪ್ರಭುತ್ವಕ್ಕೆ ವಿಮರ್ಶೆ ಮಾಡಿದ್ದಕ್ಕೆ ಪತ್ರಕರ್ತರನ್ನು ಜೈಲಿಗೆ ಅಟ್ಟಿರುವ, ಸ್ಟ್ಯಾಂಡ್‌ಅಪ್ ಕಮೆಡಿಯನ್ನರನ್ನು ಕಾರ್ಯಕ್ರಮ ಎಲ್ಲೂ ಮಾಡದಂತೆ ನಿಷೇಧ ಹೇರಿರುವ ಸಂಗತಿಗಳು ಇದಕ್ಕೆ ಪೂರಕವಾಗಿವೆ. ಜಾತ್ಯತೀತ ಮುಕ್ತತೆಯನ್ನು ಪ್ರತಿಪಾದಿಸುವ, ಪ್ರಭುತ್ವ ವಿಮರ್ಶಕವಾಗಿರುವ ಕಲಾಲೋಕವು ಎದುರಿಸುತ್ತಿರುವ ಬಿಕ್ಕಟ್ಟು ಕೇವಲ ಮತೀಯವಾದದಿಂದ ಮಾತ್ರ ಅಲ್ಲ. ಆಳುವ ಪ್ರಭುತ್ವದಿಂದ ಕೂಡ. ಯಾಕೆಂದರೆ ಪ್ರಭುತ್ವ ಮತ್ತು ಮತೀಯವಾದ ಎರಡೂ ಏಕೀಭವಿಸಿರುವ ವಿಚಿತ್ರ ಸನ್ನಿವೇಶವಿದು. ಇಂತಹ ಚಾರಿತ್ರಿಕ ಬಿಕ್ಕಟ್ಟಿನಲ್ಲಿ ರಾಜೀವ ತಾರಾನಾಥರ ಭಾಷಣದೊಳಗಿನ ಅಳಲು ಮತ್ತು ಆಶೋತ್ತರಗಳನ್ನು ಗಮನಿಸಬೇಕಾಗಿದೆ. ಕೆರೆಯ ನೀರು ಕಲುಷಿತವಾದರೆ ಅದು ಜಲಚರಗಳನ್ನು ಮಾತ್ರ ಉಸಿರುಗಟ್ಟಿಸುವುದಿಲ್ಲ; ವಿಹರಿಸಲು ಬರುವ ಹಕ್ಕಿಗಳನ್ನೂ, ದಂಡೆಯ ಗಿಡಮರ ಹುಲ್ಲನ್ನೂ ಬಾಧಿಸುತ್ತದೆ. ಸಾಹಿತ್ಯ ಸಂಗೀತ ಸಿನಿಮಾ ರಂಗಭೂಮಿಯನ್ನು ಒಳಗೊಂಡಂತೆ, ಜಾತ್ಯತೀತವಾಗಿರಬೇಕಾದ ಕಲಾಲೋಕದೊಳಗಿನ ನಂಜಿನ ವಾಸ್ತವವನ್ನು ರಾಜೀವರ ಭಾಷಣವು ವಿಷಾದದಿಂದ ಬೆರಳಿಟ್ಟು ತೋರಿಸುತ್ತಿದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...