Homeಕರ್ನಾಟಕರಾಜೀವ ತಾರಾನಾಥ: ಜಾತ್ಯತೀತ ಪರಂಪರೆಯ ಮಾತು

ರಾಜೀವ ತಾರಾನಾಥ: ಜಾತ್ಯತೀತ ಪರಂಪರೆಯ ಮಾತು

- Advertisement -
- Advertisement -

ರಾಜೀವ ತಾರಾನಾಥರಿಗೆ 90 ವರ್ಷ ತುಂಬಿತು. ಅವರ ಶಿಷ್ಯರೂ ಅಭಿಮಾನಿಗಳು ಸೇರಿ, ಮೈಸೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದರಲ್ಲಿ ಅವರು ಮಾಡಿದ ಭಾಷಣದ ಕೆಲವು ಭಾಗಗಳು ಹೀಗಿವೆ: “ನನ್ನ ತಾಯಿಮಾತು, ಮಾತೃಭಾಷೆಯಲ್ಲ, ತಾಯಿನುಡಿ ಕನ್ನಡವಲ್ಲ. ತಮಿಳು. ಆದರೆ ಕನ್ನಡ ನನಗೆ ಮೈಗೂಡಿತು. ಎಷ್ಟೋ ಮಟ್ಟಿಗೆ ಬೇರೆಬೇರೆ ಅಭ್ಯಾಸಗಳನ್ನು ಬೇರೆಬೇರೆ ಪರಂಪರೆಗಳನ್ನು ಇಡೀ ಈ ಉಪಖಂಡದಲ್ಲಿ, ಈ ನಮ್ಮ ಕರ್ನಾಟಕದಲ್ಲಿ ಮಾತ್ರ ಕಾಣಬಹುದು. ಈ ಉಪಖಂಡದ ಎರಡೂ ಅಭಿಜಾತ ಸಂಗೀತಗಳು ಇಲ್ಲಿ ಬದುಕಿವೆ, ಬೆಳೆದಿವೆ, ಇವತ್ತೂ ಇವೆ. ಬೇರೆಬೇರೆ ಭಾಷೆಯವರು ತೆಲುಗು ಮಾತಾಡೋರು, ತಮಿಳು ಮಾತಾಡೋರು ಕೊಂಕಣಿ ಮಾತಾಡೋರು-ಅದು ನನ್ನ ಪಿತೃಭಾಷೆ-ಇವೆಲ್ಲವನ್ನು ಮೈಗೂಡಿಸಿಕೊಂಡ ಕರ್ನಾಟಕ ಇವಾಗ ಇದೆಯಾ? ಸ್ವಲ್ಪ ವಿಚಾರ ಮಾಡಬೇಕು. ಹಾಗೆ ಮಾಡಿದಾಗ ನನಗೆ ಬೇಸರ ಬರತದ. ಈ ಕರ್ನಾಟಕದಲ್ಲಿ ತಮಿಳರಾದ ಮಾಸ್ತಿ, ಪು.ತಿ. ನರಸಿಂಹಾಚಾರ್, ನ ರತ್ನ, ಬಹಳ ಚೆನ್ನಾಗಿ ಬರೆದರು. ಗಿರೀಶ್ ಕಾರ್ನಾಡ್, ಒಬ್ಬ ಕೊಂಕಣಿಗ. ಈ ಪಂಡಿತ ತಾರಾನಾಥ ಕೊಂಕಣೀನೂ ಹೌದು, ಕನ್ನಡಾನೂ ಹೌದು, ಉರ್ದೂನೂ ಹೌದು. ಎಲ್ಲ ಸೇರಿ ಒಂದು ಸೀಕರಣೆಯಾಗಿ ಈ ಕರ್ನಾಟಕದಲ್ಲಿ ನಾವು ಇದ್ದೀವಿ. ಆದರೆ ಇವತ್ತಿನ ದಿವಸ ನಾವು ಬೇವಿನ ರಸ ಕುಡೀತಿದೀವಿ ಅನಸ್ತದ. ಇದು ಹೋಗಬೇಕು. ಮತ್ತ ಆ ಸೀಕರಣೆ ಬರಬೇಕು. ಮತ್ತ ಈ ಸಿಹಿ ಬರಬೇಕು. ಮತ್ತ ನಾವೆಲ್ಲ ಒಟ್ಟಾಗಿ ಬದುಕಬೇಕು.

“ಏನೋ ಒಂದು ಇಮಾರತು ಅದ. ಅದನ್ನು ಹೊಡದ ಕೆಡವಿಬಿಡೋಣ. ಅದರ ಕೆಳಗೆ ಮತ್ತೇನನ್ನೋ ಹುಡುಕೋದು. ಎಲ್ಲಾ ಕಡೆ ಅದೇ ಹುಡಕೋದು. ಏನಾಗಿದೆ ನಮಗೆ? ವಿವೇಚನೆ ಸಹನೆ ವಿವೇಕ ಸೂಕ್ಷ್ಮತೆ ಇವೆಲ್ಲ ಹೋಗಿಬಿಟ್ಟಿವೆ. ನಮ್ಮ ಸಂಗೀತದಲ್ಲಿ ಅವನು ಗುಡೀಗೆ ಹೋಗ್ತಾನೊ ಮಸೀದಿಗೆ ಹೋಗ್ತಾನೊ ಪ್ರಶ್ನೇನೆ ಇಲ್ಲ. ನಾವೆಲ್ಲ ಸಂಗೀತಕ್ಕೆ ಹೋಗತೀವಿ. ಹೋಗೋ ಪ್ರಯತ್ನ ಮಾಡತೀವಿ. ಆ ಸಂಗೀತದಲ್ಲಿ ಬದುಕ್ತೀವಿ. ಸಂಗೀತದಲ್ಲೇ ಸಾಯತೀವಿ. ಬಹಳ ದೊಡ್ಡವರೊಬ್ಬರ ಕತೀ ಹೇಳತೇನಿ. ಖಾನಸಾಹೇಬ್ ಉಸ್ತಾದ್ ಅಬ್ದುಲ್ ಕರೀಂಖಾನ್ ಅಂತ ಹೇಳಿ. ಇಲ್ಲಿ ಆಳುವ ಮಹಾರಾಜರು ಅವರನ್ನ ಆಸ್ಥಾನ ವಿದ್ವಾಂಸರನ್ನಾಗಿ ಮಾಡಿದ್ದರು. ಅವರೊಮ್ಮೆ ಮದರಾಸಿನಿಂದ ಪಾಂಡಿಚೇರಿಗೆ ಹೋಗಬೇಕಾದರೆ, ದಾರಿಯೊಳಗೆ ಒಂದು ದೊಡ್ಡ ಜಂಕ್ಷನ್, ವೀಳ್ಳುಪುರಂ ಅಂತ. ಆಗ ಅವರಿಗೆ ಏನೋ ಅನಿಸಿತು. ಬೆಳಗಾನ ಮುಂಚೆ. ಅವರೂ ಅವರ ಶಿಷ್ಯರೂ ಇಳಿದರು. ಪ್ಲಾಟ್‌ಫಾರಂ ಮೇಲೆ ಕೂತ್ಕೊಂಡು, ತಂಬೂರಿ ಶೃತಿ ಮಾಡಕೊಂಡು ಭೈರವಿ ರಾಗ ಹಾಡಲಿಕ್ಕೆ ಶುರುಮಾಡಿದರು. ಅತ್ಲಾಗೆ ಸೂರ್ಯೋದಯ ಆಗತಾ ಇದ್ದಾಗಲೇ ಇಲ್ಲಿ ಇವರ ಪ್ರಾಣ ಹಂಗೇ ಹೋಗಿಬಿಡ್ತು. ಅದಕ್ಕೆ ಪುಣ್ಯಾ ಮಾಡಿರಬೇಕರಿ. ಅವರು ಹೋದೋರು ಮಾತ್ರ ಅಲ್ಲ, ಆ ಒಂದು ಗಳಿಗೆ ಬಗ್ಗೆ ತಿಳಿದವರು, ತಿಳಕೊಳ್ಳೋಕೆ ಬಯಸೋರು, ನೀವು ನಾವು ಎಲ್ಲರೂ ಪುಣ್ಯಾ ಮಾಡಿರಬೇಕು.

“ಸಂಗೀತಕ್ಕೆ ದಿಲ್‌ದಾರತನ, ದೊಡ್ಡಹೃದಯ ಇರಬೇಕು. ನಾವು ಇಂಥಾ ಅಬ್ದುಲ್ ಕರೀಂ ಖಾನಸಾಹೇಬರನ್ನ ನೆನೆಸೊ ಕ್ಷಮತಾ ಕಳಕೊಂಡುಬಿಟ್ಟಿದೀವಿ. ಯಾಕಂದರೆ, ಅವರು ನಮ್ಮ ಜಾತಿಯವರಲ್ಲ. ಆದರೆ ನಾವೆಲ್ಲ ಅವರಲ್ಲಿ ಕಲತೋರು. ಇಲ್ಲಿ ಸೇರಿದ ನಾವೆಲ್ಲರೂ ಅವರಿಂದ ಕಲತೋರು. ಅವರ ಮಕ್ಕಳು ಮೊಮ್ಮಕ್ಕಳು, ಅವರ ಮಾನಸ ಮಕ್ಕಳು ಮಾನಸ ಮೊಮ್ಮಕ್ಕಳಲ್ಲಿ ಕಲಿತವರು. ನನ್ನ ಗುರುಗಳು ಅಲಿ ಅಕಬರಖಾನರು ನನ್ನ ಕಡೆಯಿಂದ ಒಂದು ರೂಪಾಯಿ ತಗೊಂಡೋರಲ್ಲ. ಬೈದರು. ಬೈಯ್ಯಲಿ. ಅವರು ಸಂಗೀತದ ಗುಂಗಿನಲ್ಲಿದ್ದವರು.

“ಇವತ್ತು ಬೆಳಗಿನಿಂದ ನನ್ನ ಮನೆಯೊಳಗೆ ಒಂದು ದೊಡ್ಡ ಪ್ರವಾಹ, ಹೊಳೆ, ಬೆಳಗಿನ ಐದು ಗಂಟೆಯಿಂದ ಶುರುವಾಗಿಬಿಟ್ಟದೆ. ಇವತ್ತು ಮುಂಜಾನೆ ಒಂದು ಅಪರೂಪದ ರಾಗ ನೆನಪಾತು. ಲಲಿತಾಗೌರಿ. ಅದರಲ್ಲಿ ಒಂದು ಬಂದಿಶ್ ಗುರುಗಳು ಕಲಿಸಿದ್ದು ಹೀಂಗ ಬಂತು. ಹಾಡಿದೆ. ನಮ್ಮ ಫಯ್ಯಾಜ್ ಖಾನ್ ನನಗ ಇದು ಬೇಕು ಅಂತ ರೆಕಾರ್ಡ್ ಮಾಡಿಕೊಂಡರು.

“ನನಗ ತೊಂಬತ್ತು ವರ್ಷ. ನಾನು ಏನು ಮಾಡಬೇಕು? ಮಂದಿ ಹೇಳತಾರೆ ‘ನೀವು ಆರಾಮ ಮಾಡ್ರಿ, ದೇವರ ಧ್ಯಾನಾ ಮಾಡತಾ ಕೂಡ್ರಿ’ ಅಂತ. ಆದರೆ ನಮಗೆ ಸಂಗೀತವೇ ದೇವರು. ಅಲಿ ಅಕಬರಖಾನರೇ ದೇವರು. ಅವರೇ ಸಂಗೀತ. ಅಷ್ಟು ಸಾಕು. ಹಾಡ್ತಾ ಹೋಗ್ತೀನಿ.”

ಸುಮಾರು 16 ನಿಮಿಷಗಳ ತಮ್ಮ ಈ ಭಾಷಣವನ್ನು ರಾಜೀವ ತಾರಾನಾಥರು, ಉಸಿರಾಟದ ಸಮಸ್ಯೆಯಿಂದ ಒಂದೊಂದೇ ಪದವನ್ನು ನಿಧಾನವಾಗಿ ನಿಟ್ಟುಸಿರುಬಿಡುವಂತೆ ಮಾತಾಡಿದರು. ಅವರು ಉಪನ್ಯಾಸದಲ್ಲಿ ಮೂರು ಸಂಗತಿಗಳಿವೆ.

ಇದನ್ನೂ ಓದಿ: ಗುಂಡ್ಲುಪೇಟೆ: ದಲಿತ ಮಹಿಳೆಯ ಕೆನ್ನೆಗೆ ಥಳಿಸಿದ ಸಚಿವ ಸೋಮಣ್ಣ

1. ಭಾಷಾ ಸಾಮರಸ್ಯ. ಹಲವು ಭಾಷಿಕರು ಒಂದಾಗಿ ಬಾಳುವ ಕರ್ನಾಟಕ ಕಟ್ಟುವ ಭಾಷಾ ಬಹುತ್ವ ಮತ್ತು ಬಾಂಧವ್ಯಕ್ಕೆ ಬಹುಶಃ ಕರ್ನಾಟಕದಲ್ಲಿ ಹೆಚ್ಚಿನ ಧಕ್ಕೆ ಬಂದಿಲ್ಲ. ಬೇರೆಬೇರೆ ಮನೆಮಾತಿನವರು ಕನ್ನಡದಲ್ಲಿ ಬರೆಯುವುದರ ಬಗ್ಗೆ ಸ್ವಾಗತವಿದೆ. ಮನ್ನಣೆಯಿದೆ. ಅವರ ಮನೆಮಾತಿನ ಕಾರಣಕ್ಕೆ ಅವರ ಬರೆಹಕ್ಕೆ ಅನ್ಯಾಯವಾಗಿದೆ ಎನಿಸುವುದಿಲ್ಲ. ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯ, ವಿಜಯಮ್ಮ (ತೆಲುಗು), ಬೇಂದ್ರೆ, ಶಂಬಾ (ಮರಾಠಿ) ಗಿರೀಶ್, ವಿವೇಕ, ಜಯಂತ್ (ಕೊಂಕಣಿ) ಕಟ್ಪಾಡಿ, ಬೊಳುವಾರು (ಬ್ಯಾರಿ), ರಶೀದ, ಸಾರಾ (ಮಲೆಯಾಳ), ನಿಸಾರ್ ಅಹಮದ್, ಶರೀಫಾ (ಉರ್ದು), ಲಲಿತಾ ನಾಯಕ (ಲಂಬಾಣಿ)-ಹೀಗೆ ಈ ಪಟ್ಟಿಯನ್ನು ಮುಂದುವರಿಸಬಹುದು. ಅಪಾರ ಜನಪ್ರಿಯತೆ ಪಡೆದಿದ್ದ ನಿಸಾರ್, ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಎಂದು ನೋವಿನ ಪದ್ಯ ಬರೆದಿದ್ದು, ಕನ್ನಡ ಲೇಖಕನಾಗಿ ಅನುಭವಿಸಿದ ಪಕ್ಷಪಾತದಿಂದಲ್ಲ. ಮುಸ್ಲಿಮನಾಗಿ ಮತೀಯವಾದಿ ರಾಷ್ಟ್ರೀಯವಾದದ ಕಣ್ಣಲ್ಲಿ ಶಂಕಿತನಾಗಿದ್ದಕ್ಕೆ.

2. ಸಂಗೀತಲೋಕದಲ್ಲಿರುವ ಜಾತ್ಯತೀತ ಪರಂಪರೆ. ಈ ಹೇಳಿಕೆ, ಕರ್ನಾಟಕ ಸಂಗೀತಕ್ಕಿಂತಲೂ ಹಿಂದೂಸ್ತಾನಿ ಸಂಗೀತಕ್ಕೆ ಹೆಚ್ಚು ಅನ್ವಯವಾಗುತ್ತದೆ. ನಮಗೆಲ್ಲ ತಿಳಿದಂತೆ ಮಲ್ಲಿಕಾರ್ಜುನ ಮನ್ಸೂರರು, ತಮ್ಮ ವಿದ್ಯಾಗುರುಗಳಾದ ಬುರ್ಜಿಖಾನ್ ಹಾಗೂ ಮಂಜಿಖಾನ್ ಅವರ ಪುಣ್ಯತಿಥಿಗಳನ್ನು ಕೊನೆಯ ತನಕ ಮಾಡುತ್ತಿದ್ದರು. ಆದರೆ ಭಾರತೀಯ ಸಮಾಜದಲ್ಲಿ ಮತೀಯವಾದವು ಎಲ್ಲ ಕ್ಷೇತ್ರಗಳನ್ನೂ ಪ್ರವೇಶಿಸಿದ್ದರಿಂದ ಈ ಪರಂಪರೆಯಲ್ಲೂ ಬಿರುಕುಗಳಿವೆ. ಮುಸ್ಲಿಮ ಕಲಾವಿದರ ಉಸ್ತಾದ್ ಪರಂಪರೆಯನ್ನು ಬದಿಗೆ ಸರಿಸುವ ವಿಸ್ಮೃತಿಗೆ ತಳ್ಳುವ ಯತ್ನಗಳು ಸೂಕ್ಷ್ಮಸ್ತರದಲ್ಲಿ ನಡೆಯುತ್ತಿವೆ. ಹಿಂದೂಸ್ತಾನಿ ಸಂಗೀತವನ್ನು ಮುಸ್ಲಿಂ ಉಸ್ತಾದರ ಹಿಡಿತದಿಂದ ತಪ್ಪಿಸಬೇಕೆಂದು 20ನೇ ಶತಮಾನದ ಆದಿಯಲ್ಲೇ ಪ್ರಯತ್ನಗಳು ಶುರುವಾಗಿದ್ದವು. ಇದನ್ನು ಪಂಡಿತ್ ಫಲುಸ್ಕರ್ ಹಾಗೂ ಉಸ್ತಾದ್ ಅಬ್ದುಲ್ ಕರೀಂಖಾನರನ್ನು ಇಟ್ಟುಕೊಂಡು ಚರ್ಚೆ ಮಾಡಿರುವ ಸಂಗೀತ ಚಿಂತಕರಾದ ಜಾನಕಿ ಭಾಕ್ಲೆಯವರು ವಿಶ್ಲೇಷಣೆ ಮಾಡಿರುವರು.

ರಾಜೀವ ತಾರಾನಾಥರು ಆದರ್ಶವೆಂದು ಪ್ರತಿಪಾದಿಸುವ ಕಲಾಲೋಕದ ಜಾತ್ಯತೀತತೆಯು, ಆಲೋಚನೆಯಾಗಿ ಹುಟ್ಟಿದದಲ್ಲ. ಅವರ ಸ್ವಂತ ಅನುಭವದಿಂದ ಹುಟ್ಟಿದ್ದು. ಈ ಜಾತ್ಯತೀತ ಕಲಾಸಂಬಂಧವು ರಕ್ತಸಂಬಂಧವಾಗಿ ಮುಂದುವರಿದಿದ್ದೂ ಇದೆ. ರಾಜೀವರ ಗುರು ಅಲಿ ಅಕಬರಖಾನರ ಸೋದರಿ ಅನ್ನಪೂರ್ಣಾದೇವಿ, ಪಂಡಿತ ರವಿಶಂಕರ್ ಅವರ ಜೀವನಸಂಗಾತಿಯಾದರು. ಸ್ವತಃ ರಾಜೀವರ ತಂದೆ ಪಂಡಿತ ತಾರಾನಾಥರು ಬೆಳೆಸಿದ ಸಂಗೀತ ಮತ್ತು ವೈದ್ಯ ಶಿಷ್ಯರಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರು ಇದ್ದರು. ಮುಸ್ಲಿಂ ಧಾರ್ಮಿಕ ಹಿನ್ನೆಲೆಯಿಂದ ಬಂದ, ಕರೀಂಖಾನರು ಭೈರವಿ ರಾಗವನ್ನು ಹಾಡುತ್ತ ಪ್ರಾಣವಿಸರ್ಜನೆ ಮಾಡುವ ಪ್ರಕರಣವು, ಹಿಂದೂಸ್ತಾನಿ ಸಂಗೀತ ಲೋಕದಲ್ಲಿರುವ ಜಾತ್ಯತೀತತೆಗೂ ಆತ್ಯಂತಿಕ ಪ್ರತೀಕವಾಗಿದೆ.

3. ವೃದ್ಧಾಪ್ಯದಲ್ಲಿಯೂ ಸಂಗೀತ ಅಥವಾ ತನ್ನ ಮಾಧ್ಯಮವನ್ನೇ ದೈವವನ್ನಾಗಿ ಭಾವಿಸಿ, ಅನುಸಂಧಾನ ಮಾಡುವ ಕಲಾವಿದರ ಹೊಸಧರ್ಮದ ಕಲ್ಪನೆ. ಕಲಾಧರ್ಮದ ಕಲ್ಪನೆ. ಬರವಣಿಗೆಯ ಲೋಕದಲ್ಲಿಯೂ ಅತ್ಯುತ್ತಮ ಸಾಹಿತ್ಯ ಸೃಷ್ಟಿಮಾಡುವುದನ್ನು ಜೀವನ್ಮರಣ ಪ್ರಶ್ನೆಯಾಗಿಸಿಕೊಂಡ ಲೇಖಕರು ಇದ್ದಾರೆ. ತನಗೆ ಬರವಣಿಗೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಲೇಖಕರೂ ಇದ್ದಾರೆ. ಆದರೆ ಸಂಗೀತದ ಲೋಕದಲ್ಲಿ ಕಲೆಯ ದೈವೀಕರಣವು, ಬೇರೆ ಬಗೆಯ ಆಧ್ಯಾತ್ಮಿಕ ಆಯಾಮವನ್ನು ಒಳಗೊಂಡಿದೆ. ಇದು ಸೂಫಿ ಕಬೀರಪಂಥ ಒಳಗೊಂಡಂತೆ ಸಂಗೀತವು ಟ್ರಾನ್ಸ್ ಅವಸ್ಥೆಗೆ ಕಲಾವಿದರು ಮತ್ತು ಕೇಳುಗರು ಹೋಗುವ ಸಾಧನೆಯ ಸಂಗತಿಯಾಗಿದೆ. ಹೀಗಾಗಿ, ಸಂಗೀತದಲ್ಲಿ ರಿಯಾಜ್ ಮಾಡಲು ಆಗದೆ ಇರುವುದು ಎಂದರೆ ಅವರಿಗೆ ಮರಣಕ್ಕೆ ಸಮಾನ. ತನ್ನ ಸಾವನ್ನು ಹಾಡುವಾಗಲೇ ಅನುಭವಿಸುವ ಕರೀಂಖಾನರ ಪ್ರಕರಣವು ಇದನ್ನು ಸೂಚಿಸುತ್ತಿದೆ.

ಆತಂಕವೆಂದರೆ, ರಾಜೀವರ ಈ ಆದರ್ಶ ಪ್ರತಿಪಾದನೆ ಮತ್ತು ವರ್ತಮಾನದ ವೈರುಧ್ಯಗಳ ಬಗೆಗಿನ ಸಂಕಟಗಳು, ಯಾವುದೊ ಕಾಲಕ್ಕೆ ಸೇರಿದ, ವರ್ತಮಾನಕ್ಕೆ ಸಲ್ಲದ ಗೊಣಗಾಟದಂತೆ ತೋರುವ ಹಾಗೆ ವಾತಾವರಣ ಬದಲಾಗಿರುವುದು. ಕಲಾಲೋಕದ ಆದರ್ಶದ ದಂತಕತೆಗಳನ್ನು ಕೇಳಿ ತಲೆದೂಗಿ ಚಪ್ಪಾಳೆ ಹೊಡೆದು ಎಂದಿನಂತೆ ಕೆಲವು ಕಲಾವಿದರು, ಕಲೆಯನ್ನು ಜಾತಿ ಮತ್ತು ಧರ್ಮಗಳ ಸಂಕುಚಿತ ಚೌಕಟ್ಟಿನೊಳಗೇ ಮುಂದುವರಿಸುವ ಸಾಧ್ಯತೆಯಿರುವುದು. ಕರ್ನಾಟಕ ಸಂಗೀತದ ಟಿ.ಎಂ. ಕೃಷ್ಣ ಅವರು ಅನುಭವಿಸುತ್ತಿರುವ ಒಂಟಿತನವನ್ನು ಗಮನಿಸಬಹುದು. ಸಂಗೀತ ಲೋಕದಲ್ಲಿರುವ ಬ್ರಾಹ್ಮಣರ ಯಜಮಾನಿಕೆ ಮತ್ತು ಜಾತೀಯತೆಗಳ ವಿರುದ್ಧ ದಿಟ್ಟವಾಗಿ ಮಾತಾಡುತ್ತಿರುವ, ಸಂಗೀತದೊಳಗೆ ಎಲ್ಲ ಧರ್ಮಗಳ ಸಂವೇದನೆಯನ್ನು ಪ್ರವೇಶಗೊಳಿಸುವಂತೆ ಹಾಡುತ್ತಿರುವ, ಮೃದಂಗವನ್ನು ಮಾಡುವ ಕ್ರೈಸ್ತ ಕುಟುಂಬಗಳ ಬಗ್ಗೆ ಗ್ರಂಥವನ್ನು ಬರೆದಿರುವ, ಜನಪದರ ದೇಶಿ ಸಂಗೀತದ ಜತೆ ಮಾರ್ಗ ಸಂಗೀತವನ್ನು ಬೆರೆಸಿನೋಡುವ ಅನುಸಂಧಾನ ಮಾಡುತ್ತಿರುವ ಕೃಷ್ಣ ಅವರಿಗೆ ಕಛೇರಿಗಳು ಸಿಗದಂತೆ, ಸಿಕ್ಕರೆ ಅವನ್ನು ರದ್ದುಗೊಳಿಸುವಂತೆ ಮಾಡಲಾಗುತ್ತಿದೆ. ಆಳುವ ರಾಜಕೀಯ ಪ್ರಭುತ್ವಕ್ಕೆ ವಿಮರ್ಶೆ ಮಾಡಿದ್ದಕ್ಕೆ ಪತ್ರಕರ್ತರನ್ನು ಜೈಲಿಗೆ ಅಟ್ಟಿರುವ, ಸ್ಟ್ಯಾಂಡ್‌ಅಪ್ ಕಮೆಡಿಯನ್ನರನ್ನು ಕಾರ್ಯಕ್ರಮ ಎಲ್ಲೂ ಮಾಡದಂತೆ ನಿಷೇಧ ಹೇರಿರುವ ಸಂಗತಿಗಳು ಇದಕ್ಕೆ ಪೂರಕವಾಗಿವೆ. ಜಾತ್ಯತೀತ ಮುಕ್ತತೆಯನ್ನು ಪ್ರತಿಪಾದಿಸುವ, ಪ್ರಭುತ್ವ ವಿಮರ್ಶಕವಾಗಿರುವ ಕಲಾಲೋಕವು ಎದುರಿಸುತ್ತಿರುವ ಬಿಕ್ಕಟ್ಟು ಕೇವಲ ಮತೀಯವಾದದಿಂದ ಮಾತ್ರ ಅಲ್ಲ. ಆಳುವ ಪ್ರಭುತ್ವದಿಂದ ಕೂಡ. ಯಾಕೆಂದರೆ ಪ್ರಭುತ್ವ ಮತ್ತು ಮತೀಯವಾದ ಎರಡೂ ಏಕೀಭವಿಸಿರುವ ವಿಚಿತ್ರ ಸನ್ನಿವೇಶವಿದು. ಇಂತಹ ಚಾರಿತ್ರಿಕ ಬಿಕ್ಕಟ್ಟಿನಲ್ಲಿ ರಾಜೀವ ತಾರಾನಾಥರ ಭಾಷಣದೊಳಗಿನ ಅಳಲು ಮತ್ತು ಆಶೋತ್ತರಗಳನ್ನು ಗಮನಿಸಬೇಕಾಗಿದೆ. ಕೆರೆಯ ನೀರು ಕಲುಷಿತವಾದರೆ ಅದು ಜಲಚರಗಳನ್ನು ಮಾತ್ರ ಉಸಿರುಗಟ್ಟಿಸುವುದಿಲ್ಲ; ವಿಹರಿಸಲು ಬರುವ ಹಕ್ಕಿಗಳನ್ನೂ, ದಂಡೆಯ ಗಿಡಮರ ಹುಲ್ಲನ್ನೂ ಬಾಧಿಸುತ್ತದೆ. ಸಾಹಿತ್ಯ ಸಂಗೀತ ಸಿನಿಮಾ ರಂಗಭೂಮಿಯನ್ನು ಒಳಗೊಂಡಂತೆ, ಜಾತ್ಯತೀತವಾಗಿರಬೇಕಾದ ಕಲಾಲೋಕದೊಳಗಿನ ನಂಜಿನ ವಾಸ್ತವವನ್ನು ರಾಜೀವರ ಭಾಷಣವು ವಿಷಾದದಿಂದ ಬೆರಳಿಟ್ಟು ತೋರಿಸುತ್ತಿದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...