Homeಮುಖಪುಟಭಾರತ-ಚೀನಾ ಸಂಘರ್ಷ: ’ಧೀರ ಸೇನೆ ಹಾಗೂ ಮೌನರಾಜ’ನ ಕಥೆ-ವ್ಯಥೆ

ಭಾರತ-ಚೀನಾ ಸಂಘರ್ಷ: ’ಧೀರ ಸೇನೆ ಹಾಗೂ ಮೌನರಾಜ’ನ ಕಥೆ-ವ್ಯಥೆ

- Advertisement -
- Advertisement -

ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಗೆ ಹೊಂದಿಕೊಂಡಿರುವ ಭಾರತ-ಚೀನಾ ಗಡಿಯಲ್ಲಿ ನಮ್ಮ ಸೈನಿಕರಿಗೂ ಚೀನೀ ಸೈನಿಕರಿಗೂ ನಡುವೆ ನಡೆದ ಘರ್ಷಣೆ ಕಳೆದ ಒಂದು ವಾರದಿಂದ ಭಾರೀ ಗದ್ದಲವೆಬ್ಬಿಸಿ, ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಗಡಿ ಭಾಗದಲ್ಲಿ ನಡೆದ ಸಂಘರ್ಷದ ಬಗ್ಗೆ ನಾಗರಿಕರಿಗೆ ಸರಿಯಾದ ಮಾಹಿತಿಯೂ ಸಿಗದೆ ಒಂದಷ್ಟು ಗೊಂದಲಕ್ಕೂ ಕಾರಣವಾಗಿದೆ.

ಹಲವು ಮೂಲಗಳ ಪ್ರಕಾರ ಅಂದು ನಡೆದದ್ದಿಷ್ಟು. ಡಿಸೆಂಬರ್ 9ರ ಬೆಳ್ಳಂಬೆಳಿಗ್ಗೆ ಭಾರತದ ನಿಯಂತ್ರಣದಲ್ಲಿರುವ ತವಾಂಗ್ ವಿಭಾಗದ ಯಾಂಗ್ಷೆ ಬೆಟ್ಟ ಪ್ರದೇಶದಲ್ಲಿ ಅತಿಕ್ರಮಣ ಮಾಡಲು ಯತ್ನಿಸಿದ ಚೀನೀ ಸೈನಿಕರಿಗೆ ಭಾರತದ ಸೈನಿಕರು ತೀವ್ರ ಪ್ರತಿರೋಧ ಒಡ್ಡಿದರು. ತೀವ್ರ ಬಡಿದಾಟದ ನಂತರ ಚೀನೀ ಸೈನಿಕರನ್ನು ಹಿಂದೆ ಸರಿಯುವಂತೆ ಮಾಡುವಲ್ಲಿ ನಮ್ಮ ಧೀರ ಯೋಧರು ಯಶಸ್ವಿಯಾದರು. ಈ ಬಡಿದಾಟದಲ್ಲಿ ಎರಡೂ ಕಡೆಯ ಸೈನಿಕರಿಗೆ ಗಾಯಗಳಾದವು. ಪರ್ವತ ಶ್ರೇಣಿಯಲ್ಲಿ ಸಂಭವಿಸಿದ ಈ ಘಟನೆಯ ಸುದ್ದಿ ಹರಿದಾಡಿ ಸ್ಥಳೀಯ ಪತ್ರಕರ್ತರೊಬ್ಬರ ಕಿವಿಗೆ ಬಿತ್ತು. ಅಲ್ಲಿಂದಾಚೆಗೆ ಪ್ರಮುಖ ಸುದ್ದಿ ಮಾಧ್ಯಮಗಳಿಗೂ ಈ ಸುದ್ದಿ ತಲುಪಿತು. ಆಂಗ್ಲ ದೈನಿಕಗಳಾದ ಚಂಡೀಗಢ ಮೂಲದ ’ದಿ ಟ್ರಿಬ್ಯೂನ್’ ಮತ್ತು ಚೆನ್ನೈ ಮೂಲದ ’ದಿ ಹಿಂದೂ’ ಪತ್ರಿಕೆಗಳು ಈ ಸುದ್ದಿಯನ್ನು ಡಿಸೆಂಬರ್ 12ರಂದು ಪ್ರಕಟಿಸಿದ್ದರಿಂದ ದೇಶದ ಪ್ರಜೆಗಳಿಗೆ ಚೀನಾ ಗಡಿಯಲ್ಲಿ ಏನು ನಡೆಯುತ್ತಿದೆ ಎಂಬ ಸ್ವಲ್ಪವಾದರೂ ಮಾಹಿತಿ ಸಿಕ್ಕಂತಾಯ್ತು.

ಇದಾದ ನಂತರ ಟಿಆರ್‌ಪಿ ರೇಸಿನಲ್ಲಿರುವ ಎಲ್ಲಾ ಸುದ್ದಿ ಮಾಧ್ಯಮಗಳು, ಈ ಸುದ್ದಿಗೆ ತಂತಮ್ಮ ಅಭಿರುಚಿಗೆ ತಕ್ಕಂತೆ ಮಸಾಲೆ ಬೆರೆಸಿ ಪ್ರಚುರಪಡಿಸಿದವು. ಇದೇ ಸಂದರ್ಭದಲ್ಲಿ ಡಿಸೆಂಬರ್ 9ರ ಘಟನೆಗೆ ಸಂಬಂಧಿಸಿದ ವಿಡಿಯೋ ಎಂದು ಹಳೆಯ ವಿಡಿಯೋ ಒಂದು ವೈರಲ್ ಆಯ್ತು. ಅದನ್ನೇ ಹಿಡಿದ ಟಿವಿ ಮಾಧ್ಯಮಗಳು ದಿನವಿಡೀ ಪ್ರಸಾರ ಮಾಡಿ ಬಾಯಿಗೆ ಬಂದದ್ದನ್ನೆಲ್ಲ ಒದರಿದ್ದೂ ನಡೆಯಿತು. ಇಷ್ಟೆಲ್ಲಾ ನಡೆದರೂ ಮೋದಿ ನಾಯಕತ್ವದ ಭಾರತದ ಘನ ಕೇಂದ್ರ ಸರ್ಕಾರ ಮಾತ್ರ ಏನೂ ನಡೆದೇ ಇಲ್ಲವೇನೋ ಎಂಬಂತೆ ಮೌನ ವಹಿಸಿತ್ತು. ಸರ್ಕಾರದ ಕಡೆಯಿಂದ ಕನಿಷ್ಟ ಒಂದು ಹೇಳಿಕೆಯೂ ಹೊರಬೀಳಲಿಲ್ಲ.

ಸರ್ಕಾರದ ಈ ನಿರ್ಲಜ್ಜ ನಡೆ ಪ್ರಜ್ಞಾವಂತ ನಾಗರಿಕರನ್ನು ಕೆರಳಿಸಿತು. ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರದ ವಿರುದ್ಧ ಟೀಕಾಪ್ರವಾಹವೇ ಹರಿಯಲು ಶುರುವಾಯ್ತು. ಇದೇ ವೇಳೆಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದುದರಿಂದ ವಿರೋಧ ಪಕ್ಷಗಳು ಸರ್ಕಾರದ ಈ ಮೌನವನ್ನು ತೀವ್ರವಾಗಿ ಒಕ್ಕೊರಲಿನಿಂದ ಖಂಡಿಸಿದವು. ಚೀನಾದ ಗಡಿ ಪ್ರದೇಶದ ಸ್ಥಿತಿಗತಿಯ ಬಗ್ಗೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಉತ್ತರಿಸಬೇಕೆಂದು ಪಟ್ಟುಹಿಡಿದವು. ರಾಹುಲ್ ಗಾಂಧಿ ಜೈಪುರದಲ್ಲಿ ಭಾರತ್ ಜೋಡೋ ಯಾತ್ರೆಯ ಕಾರ್ಯಕ್ರಮದ ವೇದಿಕೆಯಿಂದ ಮಾತನಾಡಿ, “ಭಾರತದ ವಿರುದ್ಧ ಚೀನಾ ಯುದ್ಧದ ತಯಾರಿ ನಡೆಸುತ್ತಿದೆ, ನಮ್ಮ ಗಡಿಯೊಳಗೆ ನುಗ್ಗಿ ನಮ್ಮ ಸೈನಿಕರ ಮೇಲೆ ಕೈಮಾಡುತ್ತಿದೆ. ಆದರೆ ಮೋದಿ ಸರ್ಕಾರ ಏನೂ ಆಗಿಲ್ಲವೆಂಬಂತೆ ನಿದ್ದೆ ಮಾಡುತ್ತಿದೆ.” ಎಂದು ಟೀಕಿಸಿದರು.

ಹೀಗೆ ಎಲ್ಲ ಕಡೆಯಿಂದ ಬಂದ ಟೀಕೆಗಳಿಂದ ಮುಜುಗರಕ್ಕೆ ಒಳಗಾದ ಒಕ್ಕೂಟ ಸರ್ಕಾರ ಕೊನೆಗೂ ಸಂಸತ್ತಿನಲ್ಲಿ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತು. ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್ “ಡಿಸೆಂಬರ್ 9ರಂದು ಪಿಎಲ್‌ಎ ಪಡೆಗಳು ಯಾಂಗ್ಷೆ ಪ್ರದೇಶವನ್ನು ಅತಿಕ್ರಮಣ ಮಾಡಲು ಯತ್ನಿಸಿದರು, ಏಕಪಕ್ಷೀಯವಾಗಿ ವಾಸ್ತವ ನಿಯಂತ್ರಣ ರೇಖೆಯ ಯಥಾಸ್ಥಿತಿಯನ್ನು ಬದಲಿಸಲು ಪ್ರಯತ್ನಿಸಿದರು. ನಮ್ಮ ಧೀರ ಯೋಧರು ಈ ಪ್ರಯತ್ನವನ್ನು ವಿಫಲಗೊಳಿಸಿದರು. ಈ ಘಟನೆಯಲ್ಲಿ ಭಾರತದ ಸೇನೆಯ ಕಡೆ ಯಾವುದೇ ಸಾವು ಸಂಭವಿಸಿಲ್ಲ ಅಥವಾ ಯಾವುದೇ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಭಾರತದ ಸೇನಾಧಿಕಾರಿಗಳು ಡಿಸೆಂಬರ್ 11ರಂದು ಚೀನಾದ ಅಧಿಕಾರಿಗಳೊಂದಿಗೆ ಫ್ಲಾಗ್ ಮೀಟಿಂಗ್ ನಡೆಸಿ ಈ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ನಮ್ಮ ಪಡೆಗಳು ಎಂಥದೇ ಪರಿಸ್ಥಿತಿಯನ್ನು ಎದುರಿಸಲು ಸರ್ವಸನ್ನದ್ಧವಾಗಿವೆ ಎಂದು ಈ ಸದನಕ್ಕೆ ಆಶ್ವಾಸನೆ ಕೊಡಲು ಬಯಸುತ್ತೇನೆ. ನಮ್ಮ ಸೈನ್ಯದ ಬದ್ಧತೆ, ಪರಾಕ್ರಮ, ಶೌರ್ಯಗಳನ್ನು ಈ ಸದನ ಶ್ಲಾಘಿಸಬೇಕಾಗಿದೆ” ಎಂಬ ಹೇಳಿಕೆ ಕೊಟ್ಟರು.

ಆದರೆ ಈ ವಿಷಯವನ್ನು ಪ್ರಜೆಗಳ ಮುಂದಿಡಲು ಇಷ್ಟು ತಡ ಮಾಡಿದ್ದೇಕೆ ಎಂಬ ಪ್ರಶ್ನೆಗಾಗಲಿ, ಪ್ರಧಾನಿ ಮೋದಿ ಖುದ್ದಾಗಿ ಬಂದು ಸದನದ ಚರ್ಚೆಯಲ್ಲಿ ಪಾಲ್ಗೊಳ್ಳಬೇಕೆಂಬ ವಿರೋಧ ಪಕ್ಷಗಳ ಬೇಡಿಕೆಗಾಗಲಿ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪರಿಣಾಮವಾಗಿ ಕೂಗಾಟ, ಗದ್ದಲ ನಡೆದು ಸದನ ಗೊಂದಲದ ಗೂಡಾಯ್ತು. ಈ ಗೊಂದಲ ಇನ್ನೂ ಹಾಗೇ ಮುಂದುವರಿದಿದೆ.

ಇದನ್ನೂ ಓದಿ: ಚೀನಾ- ಭಾರತ ಗಡಿ ಸಮಸ್ಯೆ ಚರ್ಚೆಗೆ ಸಂಸತ್‌ನಲ್ಲಿ ಅವಕಾಶ ನೀಡದ ಮೋದಿ ಸರ್ಕಾರ: ಸೋನಿಯಾ ಗಾಂಧಿ ವಾಗ್ದಾಳಿ

ಮತ್ತೊಂದು ಕಡೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿಕೆ ನೀಡಿ “ಚೀನಾ ಮತ್ತು ಭಾರತದ ಗಡಿಗಳ ಪರಿಸ್ಥಿತಿ ಒಟ್ಟಾರೆಯಾಗಿ ನೋಡಿದರೆ ಸ್ಥಿರವಾಗಿದೆ; ಗಡಿ ಸಮಸ್ಯೆ ಬಗ್ಗೆ ರಾಜತಾಂತ್ರಿಕ ಮಟ್ಟದಲ್ಲಿ ಮತ್ತು ಸೇನಾಧಿಕಾರಿಗಳ ನಡುವೆ ಅನಿರ್ಬಂಧಿತ ಮಾತುಕತೆ ಚಾಲ್ತಿಯಲ್ಲಿದೆ” ಎಂದಿದೆ. ಆದರೆ ಘಟನೆಯ ಬಗ್ಗೆ ಯಾವುದೇ ವಿವರಗಳನ್ನು ನೀಡುವ ಗೋಜಿಗೆ ಹೋಗಿಲ್ಲ.

ಚೀನಾದ ಗಡಿಯಲ್ಲಿ ನಡೆಯುತ್ತಿರುವುದೇನು?

ಚೀನಾ ಮತ್ತು ಭಾರತದ ನಡುವೆ ಸುಮಾರು 3440 ಕಿಲೋಮೀಟರ್ ಉದ್ದದ ಗಡಿಯಿದೆ. ಆದರೆ ಬಾರತ-ಚೀನಾ ನಡುವಿನ ಬಹುದೊಡ್ಡ ಚಾರಿತ್ರಿಕ ಸಮಸ್ಯೆಯೆಂದರೆ ಇಲ್ಲಿ ನಿಶ್ಚಿತವಾದ ಗಡಿರೇಖೆ ನಿಗದಿಯಾಗಿಲ್ಲ. ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಅಂದರೆ 1914ರಲ್ಲಿ ಅಂದಿನ ಟಿಬೆಟ್ ಆಡಳಿತದ ಜೊತೆಗೆ ಬ್ರಿಟಿಷ್ ವಸಾಹತುಶಾಹಿಗಳು ಒಪ್ಪಂದದ ಮೂಲಕ ರೂಪಿಸಿದ ಮೆಕ್‌ಮಹೊನ್ ರೇಖೆಯೆಂದು ಕರೆಯಲಾಗುವ ಒಂದು ಕಾಲ್ಪನಿಕ ರೇಖೆಯೇ ಇಂದಿಗೂ ಭಾರತ ಮತ್ತು ಚೀನಾಗಳನ್ನು ವಿಂಗಡಿಸುವ ಗಡಿಯೆನಿಸಿಕೊಂಡಿದೆ. ಭಾರತದಲ್ಲಿ 1947ಕ್ಕೆ ಅಸ್ತಿತ್ವಕ್ಕೆ ಬಂದ ಸ್ವತಂತ್ರ ಭಾರತ ಸರ್ಕಾರವಾಗಲಿ ಅಥವ ಚೀನಾದಲ್ಲಿ 1949ರಲ್ಲಿ ಅಸ್ತಿತ್ವಕ್ಕೆ ಬಂದ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ ಆಗಲಿ ಈ ಒಪ್ಪಂದಗಳಿಗೆ ಭಾಗೀದಾರರಾಗಿರಲಿಲ್ಲ. ಈಗ ಟಿಬೆಟ್ ಕೂಡ ಚೀನಾದ ಭಾಗವಾಗಿ ಹೋಗಿರುವುದರಿಂದ ಈ ಮೆಕ್‌ಮಹೊನ್ ರೇಖೆ ಚೀನಾಕ್ಕೂ ಅನ್ವಯಿಸುತ್ತದೆ. ಆದರೆ ಇಲ್ಲಿ ಉದ್ಭವಿಸಿರುವ ಮತ್ತೊಂದು ಸಮಸ್ಯೆಯೆಂದರೆ ಈ ರೇಖೆಯನ್ನು ಮಾತುಕತೆಯ ಟೇಬಲ್ ಮೇಲೆ ಮ್ಯಾಪ್‌ನಲ್ಲಿ ಗುರುತಿಸಲಾಗಿದ್ದು ವಾಸ್ತವದ ಭೂಮಿಯ ಮೇಲೆ ಗಡಿಯನ್ನು ನಿಖರವಾಗಿ ಗುರುತಿಸಲಾಗಿಲ್ಲ. ಹೀಗಾಗಿ ನಿರಂತರ ಸಂಘರ್ಷಕ್ಕೆ ಇದು ಕಾರಣವಾಗಿದೆ.

ಇದೂ ಅಲ್ಲದೆ ಆಕ್ರಮಣಕಾರಿ ಧೋರಣೆ ಹೊಂದಿರುವ ಚೀನಾದ್ದು ಇಡೀ ಅರುಣಾಚಲ ಪ್ರದೇಶವೇ ತನಗೆ ಸೇರಿದ್ದೆಂಬ ವಾದ. 1962ರ ಭಾರತ ಚೀನಾ ಯುದ್ಧದ ನಂತರ ಭಾರತವು ಲಡಾಕ್ ಪ್ರಾಂತ್ಯದ ಅಕ್ಸಿನ್‌ಚಿನ್ ಪ್ರದೇಶವನ್ನು ಚೀನಾದ ವಶಕ್ಕೆ ಬಿಟ್ಟುಕೊಟ್ಟು ಅರುಣಾಚಲ ಪ್ರದೇಶವನ್ನು ಉಳಿಸಿಕೊಳ್ಳುವ ಒಪ್ಪಂದ ಮಾಡಿಕೊಂಡಿತು. ಆ ಶಾಂತಿ ಒಪ್ಪಂದದ ಪ್ರಕಾರ Line of Actual Control-ವಾಸ್ತವ ನಿಯಂತ್ರಣ ರೇಖೆ ಎಂಬ ನೂತನ ಪರಿಕಲ್ಪನೆ ಜಾರಿಗೆ ಬಂದಿದೆ. ಎರಡೂ ದೇಶದ ಸೈನ್ಯಗಳ ನಡುವೆ ಸಂಘರ್ಷವನ್ನು ತಪ್ಪಿಸಲು ಮೆಕ್‌ಮಹೊನ್ ಗಡಿ ರೇಖೆಯ ಉದ್ದಕ್ಕೂ ನೋ ಮ್ಯಾನ್ ಜೋನ್ ಅನ್ನು ನಿರ್ವಹಿಸುವ ಕರಾರಿಗೆ ಬರಲಾಗಿದೆ. ಈ ಗಡಿ ಭಾಗದಲ್ಲಿ ಗಸ್ತು ತಿರುಗುವ ಉಭಯ ದೇಶದ ಸೈನಿಕರು ಯಾವುದೇ ಮದ್ದುಗುಂಡುಗಳನ್ನು ಬಳಸುವ ಆಯುಧಗಳನ್ನು ಹೊಂದಿರಬಾರದು ಎಂಬುದು ಮತ್ತೊಂದು ಪ್ರಮುಖ ಷರತ್ತು. ಅದೃಷ್ಟವಶಾತ್ ಎರಡೂ ಭಾಗದ ಸೇನೆ ಇದುವರೆಗೂ ಈ ಪ್ರದೇಶದಲ್ಲಿ ಫೈರ್ ಆರ್ಮ್ಸ್ ಬಳಕೆ ಮಾಡಿಲ್ಲ ಎಂಬುದು ಒಂದು ಸಕಾರಾತ್ಮಕ ಅಂಶ. ಒಂದುವೇಳೆ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿದ್ದೇ ಆಗಿದ್ದಲ್ಲಿ ಭಾರತ ಚೀನಾದ ಗಡಿಪ್ರದೇಶ ಸದಾ ಯುದ್ಧಭೂಮಿಯಾಗಿರುತ್ತಿತ್ತು.

ರಾಜನಾಥ ಸಿಂಗ್

ಆದರೆ ನದಿಗಳು, ಸರೋವರಗಳು, ಹಿಮದ ಬೆಟ್ಟಗಳು, ಕಣಿವೆಗಳಿಂದ ಕೂಡಿರುವ ಈ ಗಡಿ ಪ್ರದೇಶದಲ್ಲಿ ಗಸ್ತು ತಿರುಗುವ ಎರಡೂ ಸೈನಿಕರ ತಂಡಗಳು ಹಲವು ಬಾರಿ ಮುಖಾಮುಖಿಯಾಗಿ ಸಣ್ಣಪುಟ್ಟ ಸಂಘರ್ಷಗಳಾಗುವುದು ಮಾಮೂಲಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಆಕ್ರಮಣಕಾರಿ ಪ್ರವೃತ್ತಿಯ ಚೀನಾದ ಸೇನೆ ಪದೇಪದೇ ಯಥಾಸ್ಥಿತಿಯನ್ನು ಉಲ್ಲಂಘನೆ ಮಾಡಿ ಭಾರತದ ಕಡೆ ಪ್ರವೇಶಿಸುವುದು ಹೆಚ್ಚಾಗಿದೆ.

2020ರ ಜೂನ್‌ನಲ್ಲಿ ಲಡಾಕ್ ಪ್ರದೇಶದ ಗ್ಯಾಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಭೀಕರ ಕಾಳಗದಲ್ಲಿ 20 ಮಂದಿ ಭಾರತೀಯ ಸೈನಿಕರು ಮತ್ತು 4 ಮಂದಿ ಚೀನಾದ ಸೈನಿಕರು ಹತರಾಗಿದ್ದನ್ನು ಕೂಡ ಹಲವು ವರದಿಗಳು ಉಲ್ಲೇಖಿಸಿವೆ. ಈ ದುರ್ಘಟನೆ ಚೀನಾ-ಭಾರತ ಗಡಿಯಲ್ಲಿ 40 ವರ್ಷಗಳ ಸುದೀರ್ಘ ಅವಧಿಯ ನಂತರ ನಡೆದ ಮೊಟ್ಟಮೊದಲ ದುರಂತ. ಕಬ್ಬಿಣದ ಮೊಳೆಗಳನ್ನು ಅಳವಡಿಸಿದ ಬಡಿಗೆಗಳಿಂದ ನಮ್ಮ ಸೈನಿಕರ ಮೇಲೆ ಏಕಾಏಕಿ ದಾಳಿ ಮಾಡಿದ ಚೀನಿ ಪಡೆಗಳು ನಮ್ಮ 20 ಸೈನಿಕರನ್ನು ಕೊಂದುಹಾಕಿದ್ದರು. ಹತ್ತಾರು ಸೈನಿಕರು ಗಾಯಗೊಂಡಿದ್ದರು. ಈ ಘಟನೆಯ ಭೀಕರ ವಿಡಿಯೋಗಳು ದೇಶಾದ್ಯಂತ ಹರಿದಾಡಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಆದರೆ ಈ ಘಟನೆಯನ್ನು ಭಾರತ ಸರ್ಕಾರ ನಿರ್ವಹಿಸಿದ ರೀತಿ ಮಾತ್ರ ನಾವು ನಾಚಿಕೆಯಿಂದ ತಲೆತಗ್ಗಿಸುವಂತಿತ್ತು. ಮಂತ್ರಿ ಮಹೋದಯರು ಗೊತ್ತುಗುರಿಯಿಲ್ಲದ ತರಹೇವಾರಿ ಹೇಳಿಕೆ ಕೊಟ್ಟರು. ಅದರಲ್ಲೂ ಭಾರತದ ಪ್ರಧಾನಿ ಮೋದಿ ನೀಡಿದ ಹೇಳಿಕೆ ಮಾತ್ರ ಅಕ್ಷಮ್ಯ. “ಭಾರತದ ಗಡಿಯೊಳಗೆ ಯಾರೂ ನುಸುಳಿ ಬಂದಿರಲಿಲ್ಲ. ಈಗಲೂ ನುಸುಳಿ ಬಂದಿಲ್ಲ, ಬರುವುದೂ ಇಲ್ಲ” ಎಂಬ ನಿರ್ಲಜ್ಜ ಹೇಳಿಕೆ ಕೊಟ್ಟಿದ್ದರು. ಆದರೆ ಅದೇ ಸಂದರ್ಭದಲ್ಲಿ ಚೀನೀ ಸೈನಿಕರನ್ನು ನುಸುಳದಂತೆ ತಡೆಯಲು ವೀರಾವೇಶದ ಪ್ರತಿರೋಧ ಒಡ್ಡಿದ ನಮ್ಮ 20 ಯೋಧರು ಪ್ರಾಣ ಕಳೆದುಕೊಂಡಿದ್ದರು.

ಇದು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಸೈನಿಕರಿಗೆ ಮಾಡಿದ ಅಪಮಾನ ಮಾತ್ರವಲ್ಲ, ನಮ್ಮ ಸೈನಿಕರ ಮನೋಬಲವನ್ನು ಕುಂದಿಸುವ ಬೇಜವಾಬ್ದಾರಿಯ ಮಾತಾಗಿತ್ತು. ಇದು ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಉಳಿಯಲಿದೆ.

ಆ ನಂತರ 2020ರ ಸೆಪ್ಟೆಂಬರ್ 10ರಂದು ಮಾಸ್ಕೊದಲ್ಲಿ ಭಾರತದ ವಿದೇಶಾಂಗ ಮಂತ್ರಿ ಜೈಶಂಕರ್ ಮತ್ತು ಚೀನಾದ ಸಚಿವ ವಾಂಗ್ ಯಿ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಹಲವು ಪ್ರಮುಖ ನಿರ್ಣಯಗಳಿಗೆ ಬರಲಾಯಿತು.

1) ಭಿನ್ನಾಭಿಪ್ರಾಯಗಳನ್ನು ವಿವಾದಗಳನ್ನಾಗಿ ಬೆಳೆಸದಂತೆ ಎರಡೂ ಪಕ್ಷದವರು ಎಚ್ಚರಿಕೆ ವಹಿಸುವುದು.

2) ಗಡಿಯಲ್ಲಿನ ಪ್ರಸ್ತುತ ಪರಿಸ್ತಿತಿಯು ಉಭಯ ದೇಶಗಳ ಹಿತಾಸಕ್ತಿಗೆ ವಿರುದ್ಧವಾಗಿದೆ. ಆದ್ದರಿಂದ ಎರಡೂ ಪಡೆಗಳ ನಡುವೆ ನಿರಂತರ ಮಾತುಕತೆಗಳನ್ನು ಚಾಲ್ತಿಯಲ್ಲಿಡುವುದು. ಹಾಗೂ ಪಡೆಗಳ ನಡುವೆ ಸಂಘರ್ಷ ತಪ್ಪಿಸಲು ಸಾಕಷ್ಟು ಅಂತರ ಕಾಯ್ದುಕೊಳ್ಳುವುದು.

3) ಶಾಂತಿಯನ್ನು ಕಾಪಾಡಲು ರಾಜತಾಂತ್ರಿಕ ಮಟ್ಟದ ಮಾತುಕತೆಗಳನ್ನು ಮುಂದುವರಿಸುವುದು.. ಇತ್ಯಾದಿ.

ಈ ಅಂಶಗಳನ್ನೊಳಗೊಂಡ ಜಂಟಿ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದಷ್ಟೇ ಲಾಭ. ವಾಸ್ತವದಲ್ಲಿ ಈ ನಿರ್ಣಯಗಳನ್ನು ಜಾರಿ ಮಾಡುವ ಕೆಲಸ ಆಗಲೇ ಇಲ್ಲ.

2020ರ ಜನವರಿಯಲ್ಲಿ ಸಿಕ್ಕಿಂ ಬಳಿ ನಡೆದ ಮುಖಾಮುಖಿಯಲ್ಲಿ ಎರಡೂ ಕಡೆಯ ಹಲವು ಸೈನಿಕರು ಗಾಯಗೊಂಡಿದ್ದರು. 2021ರ ಸೆಪ್ಟೆಂಬರ್‌ನಲ್ಲಿ ಎರಡೂ ಕಡೆಗಳಿಂದ ಗುಂಡು ಹಾರಿಸಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಪ್ರತ್ಯಾರೋಪ ಕೇಳಿ ಬಂದಿತ್ತು. ಇದಾದ ಕೆಲವು ದಿನಗಳಲ್ಲಿ ಅರುಣಾಚಲ ಪ್ರದೇಶದ ಭೂಭಾಗದಲ್ಲಿ ಚೀನಾ ಸೇನೆ ಸುಸಜ್ಜಿತ ಹಳ್ಳಿಗಳನ್ನು ನಿರ್ಮಾಣ ಮಾಡುತ್ತಿರುವ ಉಪಗ್ರಹ ಚಿತ್ರಗಳು ಎಲ್ಲೆಡೆ ಸುದ್ದಿ ಮಾಡಿತು. ಹೀಗೆ ಸರಣಿಯಂತೆ ಚೀನಾ ಅತಿಕ್ರಮಣದ ಸುದ್ದಿಗಳು ಮೂಡುತ್ತಲೇ ಇವೆ. ಇದೀಗ ಚೀನಾದ ಕಡೆಯಿಂದ ಡ್ರೋನ್‌ಗಳ ಹಾರಾಟದ ವರದಿ ಬಂದಿದೆ. ಪ್ರತಿಯಾಗಿ ಭಾರತದ ಜೆಟ್ ವಿಮಾನಗಳು ಕೂಡ ತವಾಂಗ್ ಪ್ರದೇಶದ ಸುತ್ತಲೂ ಹಾರಾಟ ನಡೆಸಿವೆ.

ಈ ಮಾತುಕತೆಗಳ ಪರ್ವ ಒಂದುಕಡೆಯಾದರೆ, ಮತ್ತೊಂದು ಕಡೆ ಸೈನಿಕ ತಯಾರಿಗಳು ನಡೆಯುತ್ತಲೇ ಇವೆ. ಚೀನಾ ತನ್ನ ಗಡಿಯುದ್ದಕ್ಕೂ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಿಕೊಳ್ಳುತ್ತಿದೆ. ಪ್ರತಿಯಾಗಿ ಭಾರತವೂ ಕಳೆದ 15 ವರ್ಷಗಳಿಂದಲೂ ಅರುಣಾಚಲ ಪ್ರದೇಶದ ಭಾಗದಲ್ಲಿ ಸುಮಾರು 1200 ಕಿಲೋಮೀಟರ್ ಉದ್ದದ ರಸ್ತೆಯನ್ನು ನಿರ್ಮಿಸುತ್ತಿದೆ. ಈ ಪ್ರದೇಶದ ಅಭಿವೃದ್ಧಿಗೆ ಪೂರಕವಾಗುವುದರ ಜೊತೆಗೆ ಸೇನೆಯ ತ್ವರಿತ ರವಾನೆಗೂ ಅನುಕೂಲವಾಗಲಿ ಎಂಬ ಉದ್ದೇಶವೂ ಇದೆ. ಆಧುನಿಕ ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸಿಕೊಳ್ಳುವ, ಇನ್ನಷ್ಟು ಆಧುನಿಕ ಯುದ್ಧ ವಿಮಾನಗಳನ್ನು ಖರೀದಿಸಬೇಕೆಂಬ ಮಾತುಗಳೂ ಕೇಳಿ ಬರುತ್ತಿವೆ. ಆಳುವ ಪಕ್ಷದ ವಕ್ತಾರರು ಯುದ್ಧೋನ್ಮಾದಿಗಳಂತೆ ಹೇಳಿಕೆ ಕೊಡುವ ಪೈಪೋಟಿಯಲ್ಲಿದ್ದಾರೆ.

ಇಂದಿನ ಗಂಭೀರ ಸಂಘರ್ಷಕ್ಕೆ ಹಲವು ಕಾರಣಗಳಿವೆ

ಈಗಿನ ಚೀನಾದ ಸೇನೆಯ ಸಂಘರ್ಷ ಹಿಂದಿನಂತೆ ಮಾಮೂಲಿ ಸಂಘರ್ಷವಲ್ಲ, ಇದರ ಹಿಂದೆ ಚೀನಾದ ದೂರಗಾಮಿ ಸ್ಟ್ರಾಟೆಜಿಗಳಿವೆ ಎಂದು ರಕ್ಷಣಾ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ. ಹೀಗಾಗಿಯೇ ತವಾಂಗ್‌ನ ಯಾಗ್ಷಿ ಪ್ರದೇಶವನ್ನು ವಶಪಡಿಸಿಕೊಳ್ಳಲು ದೊಡ್ಡ ತುಕಡಿಯೊಂದಿಗೆ ಪಿಎಲ್‌ಎ ಅತಿಕ್ರಮಣ ಮಾಡಿತ್ತು. ಮಾಮೂಲು ಗಸ್ತು ತಿರುಗಲು 20-30 ಸೈನಿಕರ ತಂಡ ಬರುತ್ತಿದ್ದ ಬದಲಿಗೆ ಪಿಎಲ್‌ಎ ಸುಮಾರು 300 ಮಂದಿ ಸೈನಿಕರನ್ನು ಜಮಾವಣೆ ಮಾಡಿತ್ತು. ಸುಮಾರು 17000 ಅಡಿ ಎತ್ತದಲ್ಲಿರುವ ಯಾಂಗ್ಷಿ ಪರ್ವತ ಪ್ರದೇಶವನ್ನು ವಶಪಡಿಸಿಕೊಳ್ಳುವುದು ಚೀನಾದ ಸೇನೆಗೆ ಬಹಳ ನಿರ್ಣಾಯಕವಾದುದು, ಯಾಕೆಂದರೆ ತವಾಂಗ್ ಪ್ರದೇಶದ ಮೇಲೆ ಸಂಪೂರ್ಣ ನಿಗಾವಣೆ ಮಾಡಲು ಇಲ್ಲಿ ಪೋಸ್ಟ್ ಸ್ಥಾಪಿಸುವ ಉದ್ದೇಶ ಹೊಂದಿದೆ. ಇದಲ್ಲದೆ ಇತ್ತೀಚಿನ ಕೆಲವು ಬೆಳವಣಿಗೆಗಳು ಕೂಡ ಇಂದಿನ ಸಂಘರ್ಷಕ್ಕೆ ಕಾರಣವಾಗಿವೆ ಎನ್ನಲಾಗುತ್ತಿದೆ.

1) ಭಾರತವು ಅಮೆರಿಕ ದೇಶದೊಂದಿಗೆ ಮಿಲಿಟರಿ ಒಪ್ಪಂದಗಳನ್ನು ಮಾಡಿಕೊಂಡಿದ್ದು ಅದರ ಭಾಗವಾಗಿ ಕಳೆದ ತಿಂಗಳು ಚೀನಾದ ಗಡಿ ಪ್ರದೇಶದಲ್ಲೇ ಎರಡೂ ಸೇನೆಗಳು ಜಂಟಿ ಕವಾಯತು, ತರಬೇತಿ ನಡೆಸಿದ್ದವು. ಈ ಬಗ್ಗೆ ಚೀನಾ ಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಚೀನಾ ಮತ್ತಷ್ಟು ಆಕ್ರಮಣಕಾರಿಯಾಗಲು ಇದು ಪ್ರಮುಖ ಕಾರಣ ಎಂದು ಕೆಲವು ವಿಶ್ಲೇಷಕರ ಅಭಿಪ್ರಾಯ.

ಇದನ್ನೂ ಓದಿ: ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ, ಆದರೆ ನಮ್ಮ ಸರ್ಕಾರ ಒಪ್ಪಿಕೊಳ್ಳುತ್ತಿಲ್ಲ: ರಾಹುಲ್ ಗಾಂಧಿ

2) ಆಂತರಿಕವಾಗಿ ಚೀನಾದಲ್ಲಿ ಪ್ರಕ್ಷೋಭೆಯ ಸ್ಥಿತಿ ಉಂಟಾಗಿದೆ. ಕೋವಿಡ್ ನಿರ್ವಹಣೆ ಮತ್ತಿತರೆ ವೈಫಲ್ಯಗಳನ್ನು ವಿರೋಧಿಸಿ ಚೀನೀ ಪ್ರಜೆಗಳು ಕ್ಸಿ ಜಿಂಗ್‌ಪಿಂಗ್ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಜಾಂತಾಂತ್ರಿಕ ಹಕ್ಕುಗಳನ್ನು ದಮನಿಸುತ್ತಾ ಬಂದಿದ್ದ ಚೀನಾ ಕಟ್ಟೆಯೊಡೆದಿರುವ ಜನರ ಆಕ್ರೋಶವನ್ನು ನಿಭಾಯಿಸಲು ಹೆಣಗಾಡುತ್ತಿದೆ. ಹೀಗಾಗಿ ತನ್ನ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂಥಾ ಒಂದು ಇಶ್ಯೂ ಅಲ್ಲಿನ ಪ್ರಭುತ್ವಕ್ಕೆ ಅಗತ್ಯವಿದೆ. ಹೀಗಾಗಿ ಅಕಾರಣವಾಗಿ ಭಾರತದ ಗಡಿಯಲ್ಲಿ ಯುದ್ಧದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ.

ಈ ಕಾರಣಗಳು ಏನೇ ಇರಲಿ. ಆದರೆ ಯುದ್ಧದ ವಾತಾವರಣವನ್ನು ಆಹ್ವಾನಿಸುವುದು ಭಾರತದ ಪ್ರಜೆಗಳಿಗಾಗಲಿ, ಚೀನಾದ ಪ್ರಜೆಗಳಿಗಾಗಲಿ ಒಳಿತನ್ನು ಮಾಡುವುದಿಲ್ಲ ಎಂಬುದು ನಿಚ್ಚಳ.

ಮೋದಿ ಸರ್ಕಾರ ಚೀನಾದ ಜೊತೆ ಹೇಗೆ ವ್ಯವಹರಿಸುತ್ತಿದೆ?

ಈ ಪರಿಸ್ಥಿತಿಯನ್ನು ನಿಭಾಯಿಸಲು, ಚೀನಾದ ಅತಿಕ್ರಮಣವನ್ನು ನಿರ್ಬಂಧಿಸಲು ಮೋದಿ ಸರ್ಕಾರದ ಸ್ಟ್ರಾಟೆಜಿ ಏನಿರಬಹುದು?

ಇದುವರೆಗಿನ ಮೋದಿ ಸರ್ಕಾರದ ನಡವಳಿಕೆಯನ್ನು ಆಧರಿಸಿ ಹೇಳುವುದಾದರೆ ಅಂಥಾ ಯಾವ ಮಹತ್ವದ ಸ್ಟ್ರಾಟೆಜಿಯೂ ಕಂಡುಬರುತ್ತಿಲ್ಲ. ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡೋಲ್ಲ ಅಂತ ಗೋದಿ ಮೀಡಿಯಾಗಳ ಮೂಲಕ ಬಡಾಯಿ ಕೊಚ್ಚುವುದು; ಪ್ರತಿಕೂಲ ಪರಿಸ್ಥಿತಿಗಳಲ್ಲೂ ಗಡಿ ಕಾಯ್ದು, ದೇಶದ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ವೀರ ಯೋಧರ ಬಲಿದಾನಗಳ ಹಿಂದೆ ಅವಿತುಕೊಳ್ಳುವುದು; ಸರ್ಕಾರದ ನಡವಳಿಕೆಯನ್ನು ಪ್ರಶ್ನಿಸಿದವರನ್ನು ಚೀನೀ ಏಜೆಂಟ್‌ಗಳೆಂದು ಬ್ರಾಂಡ್ ಮಾಡುವುದು ಅಥವಾ ದೇಶದ್ರೋಹಿಗಳು ಎಂದು ಜರಿಯುವುದು ಮುಂತಾದ ಮಾಮೂಲು ತಂತ್ರಗಳನ್ನು ಅಳವಡಿಸಿಕೊಂಡಂತೆ ಕಾಣುತ್ತಿದೆ.

ಇಂಥ ನಕಾರಾತ್ಮಕ ತಂತ್ರಗಳ ಪೊಳ್ಳು ಘೋಷಣೆಗಳ ಮೂಲಕ ಜನರನ್ನು ಯಾಮಾರಿಸಿ ಓಟು ಪಡೆಯಬಹುದು, ಆದರೆ ಚೀನಾದಂಥ ದೈತ್ಯ ಶಕ್ತಿಯನ್ನು ಗಡಿಯಿಂದಾಚೆ ದೂಡಲು ಸಾಧ್ಯವಾದೀತೆ?

ದೆಹಲಿ ಮೂಲದ ಡಿಫೆನ್ಸ್ ಅನಲಿಸ್ಟ್ ರಾಹುಲ್ ಬೇಡಿ ಹೇಳುವ ಪ್ರಕಾರ “ಭಾರತದ ಬಳಿ ರಾಜತಾಂತ್ರಿಕವಾಗಿ ಆಗಲಿ, ರಾಜಕೀಯವಾಗಿ ಆಗಲಿ, ಆರ್ಥಿಕವಾಗಿ ಆಗಲಿ ಅಥವ ಸೇನಾಬಲದ ದೃಷ್ಟಿಯಿಂದಾಗಲಿ ಲೆವರೇಜ್ ಇಲ್ಲದಾಗಿದೆ”.

“ಕಳೆದ ಮುವತ್ತು ತಿಂಗಳಲ್ಲಿ ಸೇನಾ ಕಮಾಂಡರ್‌ಗಳ ನಡುವೆ 16 ಸುತ್ತಿನ ಮಾತುಕತೆಗಳು ನಡೆದಿವೆ. ಚೀನಾ ಸೇನೆ ತಮ್ಮ ವಾದಗಳಿಗೆ ಕಟ್ಟುಬಿದ್ದಿದ್ದಾರೆ. ತಮಗೆ ಬೇಕಾದ ಸ್ಥಳದಲ್ಲಿ, ಬೇಕಾದ ಸಮಯದಲ್ಲಿ ತಮ್ಮ ಇಚ್ಛಾನುಸಾರ ವರ್ತಿಸುತ್ತಿದ್ದಾರೆ. ನಿರ್ಣಯಗಳಿಗೆ ಬದ್ಧವಾಗಿರುವಂತೆ ಚೀನಾದ ಮೇಲೆ ಒತ್ತಡ ಹೇರುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಮಾತುಕತೆಯಲ್ಲಿ ಭಾರತ ಹೆಚ್ಚಿನದನ್ನು ಸಾಧಿಸಲಾಗಿಲ್ಲ.

ಚೀನಾದ ಪ್ರಾಬಲ್ಯ ಕೇವಲ ಮಿಲಿಟರಿ ವಿಷಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಆರ್ಥಿಕ ಕ್ಷೇತ್ರದಲ್ಲಿ ಚೀನಾದಿಂದ ಆಮದು ಸುಮಾರು ನೂರು ಕೋಟಿ ಬಿಲಿಯನ್ ದಾಟಿದೆ. ಆಮದಿಗೆ ಹೋಲಿಸಿದರೆ ನಮ್ಮ ರಫ್ತು ತೀರಾ ಅತ್ಯಲ್ಪ. ಮೋದಿ ಆಡಳಿತದ ಈ ಎಂಟು ವರ್ಷಗಳಲ್ಲಿ ಚೀನಾದ ಮೇಲಿನ ಈ ಆರ್ಥಿಕ ಅವಲಂಬನೆಯನ್ನು ಕಡಿಮೆ ಮಾಡುವ ಬದಲು ದುಪ್ಪಟ್ಟಾಗಿಸಿದೆ. ನೆರೆಯ ದೈತ್ಯ ಶಕ್ತಿ ಚೀನಾದೊಂದಿಗೆ ಗಡಿ ಸಮಸ್ಯೆ ತೀವ್ರವಾಗಿರುವುದನ್ನೂ ಕಂಡೂಕಂಡೂ ಆರ್ಥಿಕವಾಗಿ ಅದೇ ಶಕ್ತಿಯ ಅಧೀನಕ್ಕೆ ಒಳಪಡುವ ನೀತಿಯನ್ನು ಏನೆಂದು ಕರೆಯಬಹುದು?

ಪ್ರಧಾನಿ ಮೋದಿಯವರು ಗುಜರಾತಿನ ಸಿಎಂ ಆಗಿದ್ದಾಗಿನಿಂದಲೂ ಚೀನಾದ ಜೊತೆಗೆ, ಅದರಲ್ಲೂ ಕ್ಸಿ ಜಿನ್‌ಪಿಂಗ್ ಜೊತೆಗೆ ವಿಶೇಷವಾದ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಅವರೇ ಖುದ್ದಾಗಿ ಹೇಳಿಕೊಂಡಿರುವ ವಿಡಿಯೋಗಳ ಸಾಕ್ಷಿ ಯೂಟ್ಯೂಬ್ ತುಂಬಾ ಇದೆ. ಚೀನಾದ ಜೊತೆಗೆ ಅತಿ ಹೆಚ್ಚಾಗಿ ವ್ಯವಹಾರಿಕ ಸಂಬಂಧ ಹೊಂದಿರುವವರು ಗುಜರಾತಿ ಬ್ಯುಸಿನೆಸ್‌ಮನ್‌ಗಳು. ಅದರಲ್ಲಿ ಅದಾನಿ ಪೋರ್ಟ್‌ಗಳಲ್ಲಿ ಚೀನಾದ ಬಂಡವಾಳ ಹೂಡಿಕೆಯೂ ಇದೆ. ಹೀಗೆ ಹತ್ತು ಹಲವು ರೀತಿಯಲ್ಲಿ ಬಾಂಧವ್ಯವನ್ನು ಹೊಂದಿರುವ ಮೋದಿಯವರು ಗಡಿ ಘರ್ಷಣೆಯ ವಿಚಾರದಲ್ಲಿ ಒಮ್ಮೆಯಾದರೂ ಚೀನಾದ ಹೆಸರನ್ನು ಎತ್ತಿಲ್ಲ. ಇದರ ಹಿಂದಿನ ಕಾರಣಗಳೇನಿರಬಹುದು?

ಇದು ಯಾವ ರೀತಿಯ ರಾಜತಾಂತ್ರಿಕ ನಡವಳಿಕೆ ಇರಬಹುದು?

ಇಷ್ಟೆಲ್ಲಾ ಸಂಘರ್ಷದ ವಾತಾವರಣ ಇರುವಾಗ ಅಮೆರಿಕದ ಜೊತೆಗೂಡಿ ಇದೇ ಗಡಿಭಾಗದಲ್ಲಿ ಜಂಟಿ ಕವಾಯತು ಮಾಡುವ ತುರ್ತಾದರೂ ಏನಿತ್ತು? ಈ ಅಮೆರಿಕ ಭಾರತದ ದೃಷ್ಟಿಯಿಂದ ನಂಬಲರ್ಹ ಮಿತ್ರನೇ? ಹೋಗಲಿ, ಅಮೆರಿಕದ ಅಂತಾರಾಷ್ಟ್ರೀಯ ಸಂಬಂಧಗಳು, ಮತ್ತದರ ಇತಿಹಾಸ ಹೇಳುತ್ತಿರುವುದರೂ ಏನು? ಪ್ರಪಂಚಾದ್ಯಂತ ನೆರೆಹೊರೆಯ ರಾಷ್ಟ್ರಗಳ ನಡುವೆ ಸ್ಥಳೀಯ ಯುದ್ಧಗಳನ್ನು ಸೃಷ್ಟಿಸಿ ಲಾಭ ಮಾಡಿಕೊಳ್ಳುವ ದುಷ್ಟ ಇತಿಹಾಸ ಹೊಂದಿರುವ ಅಮೆರಿಕವನ್ನು ಮಿತ್ರನಂತೆ ಭಾವಿಸುವುದು ಮೂರ್ಖತನವಲ್ಲವೆ?

ಇಲ್ಲಿ ಮಾಜಿ ಪ್ರಧಾನಿ ವಾಜಪೇಯಿಯವರ ಮಾತನ್ನು ಉಲ್ಲೇಖಿಸುವುದು ಸೂಕ್ತ. ಚೀನಾದ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸುತ್ತಾ ವಾಜಪೇಯಿ ಹೀಗೆ ಉತ್ತರಿಸಿದ್ದರು: “ಸ್ನೇಹಿತರನ್ನು ಬೇಕೆಂದಾಗ ಬದಲಿಸಬಹುದು, ಆದರೆ ನಿಮ್ಮ ನೆರೆಹೊರೆಯವರನ್ನು ಬದಲಿಸಲಿಕ್ಕಾಗೋದಿಲ್ಲ.”

ಈ ಸರಳ ಸತ್ಯವನ್ನು ಇಂದಿನ ಆಡಳಿತಗಾರರು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತಾರೋ ಅಷ್ಟು ದೇಶಕ್ಕೆ ಒಳ್ಳೆಯದು.

ಇದನ್ನೂ ಓದಿ: ಅರುಣಾಚಲ ಪ್ರದೇಶ ಗಡಿಯಲ್ಲಿ ಭಾರತ-ಚೀನಾ ಸೈನಿಕರ ಘರ್ಷಣೆ: ಇದುವರೆಗೂ ನಡೆದಿದ್ದೇನು?

ಇನ್ನು ಭಾರತದ ಪ್ರಜೆಗಳಾದ ನಾವು ಅರ್ಥ ಮಾಡಿಕೊಳ್ಳಲೇಬೇಕಾದ ಗುರುತರವಾದ ಪಾಠವೊಂದಿದೆ. ಕಳೆದವಾರ ಸಂಸತ್ತಿನಲ್ಲಿ ಮಿಂಚಿನ ಭಾಷಣ ಮಾಡಿ ಮೋದಿ ಸರ್ಕಾರದ ದಿಕ್ಕೆಟ್ಟ ನೀತಿಗಳನ್ನು ತರಾಟೆಗೆ ತೆಗೆದುಕೊಂಡ ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಹುವಾ ಮೊಯಿತ್ರ ಅವರ ಮಾತುಗಳು ಇಲ್ಲಿ ಉಲ್ಲೇಖಾರ್ಹ: “ಮನೆಗೆ ಬೆಂಕಿ ಹಚ್ಚಿದ ಹುಚ್ಚ ಯಾರು ಅನ್ನೋದು ಇಂದಿನ ಪ್ರಶ್ನೆಯಲ್ಲ, ಈ ಹುಚ್ಚನ ಕೈಗೆ ಬೆಂಕಿ ಪೊಟ್ಟಣ ಕೊಟ್ಟೋರು ಯಾರು? ಅನ್ನೋ ಪ್ರಶ್ನೆ ಇವತ್ತು ಬಹಳ ಮುಖ್ಯವಾದುದು”.

ಈ ದೇಶದ ಪ್ರಜೆಗಳು ಈ ತಥ್ಯವನ್ನು ಅರ್ಥ ಮಾಡಿಕೊಳ್ಳುವುದು ಯಾವಾಗ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...