“ಚೀನಾ-ಭಾರತ ಗಡಿ ಸಂಘರ್ಷ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡದ ನರೇಂದ್ರ ಮೋದಿ ಸರ್ಕಾರವು ಪ್ರಜಾಪ್ರಭುತ್ವದ ಬಗೆಗೆ ಅಗೌರವವನ್ನು ತೋರಿಸುತ್ತಿದೆ ಮತ್ತು ರಾಷ್ಟ್ರವನ್ನು ಒಗ್ಗೂಡಿಸಲು ತನಗಿರುವ ಅಸಮರ್ಥತೆಯನ್ನು ಪ್ರದರ್ಶಿಸಿದೆ” ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬುಧವಾರ ಹೇಳಿದ್ದಾರೆ.
ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, “ಗಂಭೀರ ಕಾಳಜಿಯ ವಿಷಯಗಳ ಬಗ್ಗೆ ಬಿಜೆಪಿ ಮೌನವಹಿಸಿದೆ. ಇದು ಬಿಜೆಪಿ ಅಧಿಕಾರಾವಧಿಯ ನಿರ್ಣಾಯಕ ಲಕ್ಷಣವಾಗಿದೆ” ಎಂದು ಟೀಕಿಸಿದ್ದಾರೆ.
ಡಿಸೆಂಬರ್ 9ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆದಾಗಿನಿಂದ ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.
ಜೂನ್ 2020ರಲ್ಲಿ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಏರ್ಪಟ್ಟಿತ್ತು. ನಂತರದಲ್ಲಿ ಉಭಯ ದೇಶಗಳ ನಡುವೆ ನಡೆದ ಘಟನೆ ಇದಾಗಿದೆ. ಗಾಲ್ವಾನ್ ಘಟನೆಯು 20 ಭಾರತೀಯ ಸೈನಿಕರ ಸಾವಿಗೆ ಕಾರಣವಾಯಿತು ಎಂದು ಚೀನಾ ಹೇಳಿಕೊಂಡಿದೆ.
“ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಿದರೆ ಹಲವಾರು ನಿರ್ಣಾಯಕ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ” ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರಾದ ಸೋನಿಯಾ ಪ್ರತಿಕ್ರಿಯೆ ನೀಡಿದ್ದಾರೆ.
“ಚೀನಾ ನಮ್ಮ ಮೇಲೆ ನಿರಂತರವಾಗಿ ದಾಳಿ ಮಾಡಲು ಏಕೆ ಧೈರ್ಯ ಮಾಡುತ್ತದೆ?” ಎಂದು ಸಭೆಯಲ್ಲಿ ಅವರು ಪ್ರಶ್ನಿಸಿದ್ದಾರೆ. “ಈ ದಾಳಿಗಳನ್ನು ಹಿಮ್ಮೆಟ್ಟಿಸಲು ಯಾವ ಸಿದ್ಧತೆಗಳನ್ನು ಮಾಡಲಾಗಿದೆ? ಇನ್ನೂ ಏನು ಮಾಡಬೇಕಾಗಿದೆ? ಭವಿಷ್ಯದಲ್ಲಿ ಆಕ್ರಮಣಗಳು ಆಗದಂತೆ ಚೀನಾವನ್ನು ತಡೆಯಲು ಸರ್ಕಾರ ಯಾವ ನೀತಿ ರೂಪಿಸಿದೆ? ನಾವು ಚೀನಾದೊಂದಿಗೆ ತೀವ್ರ ವ್ಯಾಪಾರ ಕೊರತೆಯನ್ನು ಹೊಂದಿದ್ದೇವೆ. ನಾವು ರಫ್ತು ಮಾಡುವುದಕ್ಕಿಂತ ಹೆಚ್ಚಿನದನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಚೀನಾ ಸಾಧಿಸುತ್ತಿರುವ ಮಿಲಿಟರಿ ಹಗೆತನಕ್ಕೆ ನಮ್ಮ ಆರ್ಥಿಕ ಪ್ರತಿಕ್ರಿಯೆ ಏಕೆ ಇಲ್ಲ?” ಎಂದು ಸೋನಿಯಾ ಅವರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
“ತನ್ನ ನೀತಿಗಳು ಮತ್ತು ಕಾರ್ಯಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವುದು ಕೇಂದ್ರ ಸರ್ಕಾರದ ಕರ್ತವ್ಯ” ಎಂದಿರುವ ಸೋನಿಯಾ ಗಾಂಧಿ, “ಸ್ಪಷ್ಟವಾದ ಚರ್ಚೆಯು ದೇಶದ ಪ್ರತಿಕ್ರಿಯೆಯನ್ನು ಬಲಪಡಿಸುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಇದಕ್ಕೆ ವಿರುದ್ಧವಾಗಿ ಸರ್ಕಾರ ಕೆಲಸ ಮಾಡುತ್ತಿದೆ. ವಿಭಜಕ ನೀತಿಗಳನ್ನು ಅನುಸರಿಸುತ್ತಿದೆ, ದ್ವೇಷವನ್ನು ಹರಡುತ್ತಿದೆ, ನಮ್ಮ ಸಮಾಜದ ಕೆಲವು ವರ್ಗಗಳನ್ನು ಟಾರ್ಗೆಟ್ ಮಾಡುತ್ತಿದೆ. ಆದರೆ ವಿದೇಶಿ ಬೆದರಿಕೆಗಳ ವಿರುದ್ಧ ದೇಶವು ಒಂದಾಗಿ ನಿಲ್ಲುವುದಕ್ಕೆ ಸರ್ಕಾರ ತಡೆಯಾಗಿದೆ” ಎಂದು ಅವರು ದೂರಿದ್ದಾರೆ.
“ಇಂತಹ ಸಮಯದಲ್ಲಿ ನಮ್ಮ ಜನರನ್ನು ಒಗ್ಗೂಡಿಸುವುದು ಸರ್ಕಾರದ ಪ್ರಯತ್ನ ಮತ್ತು ಜವಾಬ್ದಾರಿಯಾಗಿರಬೇಕು. ಕಳೆದ ಹಲವಾರು ವರ್ಷಗಳಿಂದ ಮಾಡುತ್ತಿರುವಂತೆ ಜನರನ್ನು ವಿಭಜಿಸಬಾರದು” ಎಂದು ಮನವಿ ಮಾಡಿದ್ದಾರೆ.
ಪ್ರತಿಪಕ್ಷಗಳನ್ನು ಟಾರ್ಗೆಟ್ ಮಾಡುವಲ್ಲಿ, ಭಿನ್ನಧ್ವನಿಗಳನ್ನು ಪ್ರಶ್ನಿಸುವಲ್ಲಿ, ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುವಲ್ಲಿ, ಸಂಸ್ಥೆಗಳನ್ನು ದುರ್ಬಲಗೊಳಿಸುವಲ್ಲಿ ಬಿಜೆಪಿ ಸರ್ಕಾರ ತೊಡಗಿದೆ ಎಂದು ಆರೋಪಿಸಿದ್ದಾರೆ. “ಇದು ಕೇಂದ್ರದಲ್ಲಿ ಮಾತ್ರವಲ್ಲ, ಬಿಜೆಪಿ ಆಡಳಿತ ನಡೆಸುವ ಪ್ರತಿಯೊಂದು ರಾಜ್ಯದಲ್ಲೂ ನಡೆಯುತ್ತಿದೆ” ಎಂದು ವಿಷಾದಿಸಿದ್ದಾರೆ.
ಪ್ರತಿಪಕ್ಷಗಳಿಂದ ಪ್ರತಿಭಟನೆ
ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯ ನಂತರ, ಸೋನಿಯಾ ಗಾಂಧಿ ಮತ್ತು ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ನಡೆದ ವಿರೋಧ ಪಕ್ಷಗಳ ಪ್ರತಿಭಟನೆಗೆ ನೇತೃತ್ವ ವಹಿಸಿದ್ದರು. ಚಳಿಗಾಲದ ಅಧಿವೇಶನದಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ಬಗ್ಗೆ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು.
संसद का सत्र 15 दिनों से चल रहा है।
देश और जनता के मुद्दे- राष्ट्रीय सुरक्षा, चीनी अतिक्रमण, महंगाई, बेरोजगारी पर सरकार बहस करने से भाग रही है।
क्या मोदी सरकार, देश के 135 करोड़ लोगों के प्रति जवाबदेह नहीं?
संसद में चर्चा करिए, ताकि पूरा देश एकसाथ चुनौती का मिलकर मुकाबला करे। pic.twitter.com/mzV6nvS0Jw
— Congress (@INCIndia) December 21, 2022
ಶಿವಸೇನೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ, ದ್ರಾವಿಡ ಮುನ್ನೇತ್ರ ಕಳಗಂ, ರಾಷ್ಟ್ರೀಯ ಜನತಾದಳ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಸೇರಿದಂತೆ ಸುಮಾರು 12 ಪ್ರತಿಪಕ್ಷಗಳ ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
“ನಾವು ಚೀನಾದ ಬಗ್ಗೆ ಚರ್ಚೆಯನ್ನು ಬಯಸುತ್ತೇವೆ, ನಾವು ಮಿಲಿಟರಿ ರಹಸ್ಯಗಳನ್ನು ಕೇಳುತ್ತಿಲ್ಲ” ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
“ಭಾರತ ಮತ್ತು ಚೀನಾ ಸೇನೆಗಳ ಕಮಾಂಡರ್ಗಳ ನಡುವಿನ 16 ಸುತ್ತಿನ ಮಾತುಕತೆ ಏನು ಸಾಧಿಸಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಖರ್ಗೆಯವರು ಮಾತನಾಡಿ, “ಚರ್ಚೆಯನ್ನು ನಡೆಸದಿದ್ದರೆ ಮತ್ತು ಕೇವಲ ಏಕಪಕ್ಷೀಯ ಪ್ರತಿಕ್ರಿಯೆ ಇದ್ದರೆ, ಅದು ಯಾವ ಅರ್ಥವನ್ನು ಸೂಚಿಸುತ್ತದೆ?” ಖರ್ಗೆ ಕೇಳಿದ್ದಾರೆ.