ಲಡಾಖ್ನಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಮತ್ತು ಮಾತುಕತೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್ಎಸ್ಎ) ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಬಂಧನವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ ಎಂದು ವರದಿಯಾಗಿದೆ.
ಸರ್ಕಾರ ನೀಡಿದ ಹೇಳಿಕೆಯ ಪ್ರಕಾರ, ಸೆಪ್ಟೆಂಬರ್ 24, 2025ರಂದು ಲೇಹ್ನಲ್ಲಿ ಉಂಟಾದ ಗಂಭೀರ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಆಧರಿಸಿ, ಸೆಪ್ಟೆಂಬರ್ 26, 2025ರಂದು ವಾಂಗ್ಚುಕ್ ಅವರನ್ನು ಎನ್ಎಸ್ಎ ಅಡಿಯಲ್ಲಿ ಬಂಧಿಸಲಾಗಿತ್ತು. ಆ ಪ್ರದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಲೇಹ್ ಜಿಲ್ಲಾಧಿಕಾರಿಗಳು ಈ ಬಂಧನ ಆದೇಶವನ್ನು ಹೊರಡಿಸಿದ್ದರು.
ವಾಂಗ್ಚುಕ್ ಅವರು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್ಎಸ್ಎ) ನಿಗದಿಪಡಿಸಲಾದ ಗರಿಷ್ಠ ಅವಧಿಯ ಸುಮಾರು ಅರ್ಧದಷ್ಟು ಮುನ್ನೆಚ್ಚರಿಕೆ ಬಂಧನ ಅವಧಿಯನ್ನು ಈಗಾಗಲೇ ಪೂರೈಸಿದ್ದಾರೆ ಎಂದು ಕೇಂದ್ರ ಸರ್ಕಾರವು ಹೇಳಿದೆ.
ವಾಂಗ್ಚುಕ್ ಅವರ ಪತ್ನಿ ಡಾ. ಗೀತಾಂಜಲಿ ಆಂಗ್ಮೋ ಅವರು ಕಳೆದ ಅಕ್ಟೋಬರ್ನಿಂದ ವಾಂಗ್ಚುಕ್ ಅವರ ಬಂಧನವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆಯುತ್ತಿದೆ. ಬಂಧನದ ನಂತರ ವಾಂಗ್ಚುಕ್ ಅವರನ್ನು ಜೋಧ್ಪುರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.
ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ಪೀಠವು ಮಾರ್ಚ್ 17ರಂದು ಈ ಪ್ರಕರಣದ ವಿಚಾರಣೆ ನಡೆಸಲು ನಿರ್ಧರಿಸಿದೆ.
ಆಂಗ್ಮೋ ಪರ ವಕೀಲ ಕಪಿಲ್ ಸಿಬಲ್ ಅವರು, ವಾಂಗ್ಚುಕ್ ಬಂಧನವನ್ನು ಪ್ರಶ್ನಿಸಿ ಬಂಧನಕ್ಕೆ ಆಧಾರವಾದ ಎಲ್ಲಾ ಪ್ರಮುಖ ದಾಖಲೆಗಳನ್ನು ವಾಂಗ್ಚುಕ್ ಅವರಿಗೆ ಒದಗಿಸಿಲ್ಲ ಎಂಬ ವಾದ ಮಂಡಿಸಿದ್ದಾರೆ.
ಆಡಳಿತ ಅಥವಾ ಸರ್ಕಾರ, ಪ್ರಚೋದನಾಕಾರಿ ಎಂದು ಹೇಳಲಾದ ಭಾಷಣಗಳ ವಿಡಿಯೋಗಳನ್ನು ವಾಂಗ್ಚುಕ್ ಅವರಿಗೆ ನೀಡಿದೆಯೇ ಎಂಬ ಬಗ್ಗೆ ವಿವಾದ ಉಂಟಾಗಿದೆ. ವಿಡಿಯೋಗಳಿರುವ ಪೆನ್ಡ್ರೈವ್ ಅನ್ನು ವಾಂಗ್ಚುಕ್ ಅವರಿಗೆ ನೀಡಲಾಗಿದೆ ಎಂದು ಆಡಳಿತ ಪ್ರತಿಪಾದಿಸಿದರೆ, ಅವರಿಗೆ ಆ ವಿಡಿಯೋಗಳನ್ನು ನೋಡಲು ನಿಜಕ್ಕೂ ಅವಕಾಶ ಸಿಕ್ಕಿತ್ತೇ? ಎಂದು ನ್ಯಾಯಾಲಯ ಪ್ರಶ್ನಿಸಿದೆ.
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು, ಆಡಳಿತ ವಾಂಗ್ಚುಕ್ ಅವರ ಭಾಷಣಗಳಿಗೆ ಅತಿಯಾದ ಅರ್ಥ ಕಲ್ಪಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಆ ಭಾಷಣಗಳ ಅನುವಾದದಲ್ಲಿ ಕಂಡುಬಂದ ಕೆಲವು ವ್ಯತ್ಯಾಸಗಳ ಬಗ್ಗೆಯೂ ಪೀಠವು ಆಕ್ಷೇಪ ವ್ಯಕ್ತಪಡಿಸಿದೆ ಎಂದು livelaw.in ವರದಿ ಹೇಳಿದೆ.


