Homeಗೌರಿ ಕಣ್ಣೋಟದೈಹಿಕ ಸೌಂದರ್ಯ & ಧಾರ್ಮಿಕ ನಂಬಿಕೆ: ಆದರ್ಶ ಹುಡುಗಿಯ ಕುರಿತು ಗೌರಿ ಲಂಕೇಶ್‌ ಬರಹ

ದೈಹಿಕ ಸೌಂದರ್ಯ & ಧಾರ್ಮಿಕ ನಂಬಿಕೆ: ಆದರ್ಶ ಹುಡುಗಿಯ ಕುರಿತು ಗೌರಿ ಲಂಕೇಶ್‌ ಬರಹ

ದೈಹಿಕ ಸೌಂದರ್ಯದ ಬಗ್ಗೆ ಗಮನ ಕೊಡದೆ ನಾನು ನನ್ನ ಸಮಯವನ್ನು ಆಂತರ್ಯದ ಸದ್ಗುಣಗಳನ್ನು ಹೆಚ್ಚಿಸಿಕೊಳ್ಳುವತ್ತ ವ್ಯಯಿಸಿದರೆ ನಾನು ಈ ಜಗತ್ತಿನಲ್ಲಿ ನನ್ನ ಕೈಲಾದಷ್ಟು ಬದಲಾವಣೆ ಮತ್ತು ಅಭಿವೃದ್ಧಿಯನ್ನು ತರಬಹುದೆನಿಸುತ್ತದೆ.

- Advertisement -
- Advertisement -

ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ಯಾರೋ ಒಬ್ಬ ಓರ್ವ ಯುವತಿಯ ಫೋಟೊ ಒಂದನ್ನು ಹಾಕಿ “ಇದನ್ನು ಹೇಗೆ ಅರ್ಥಮಾಡಿಕೊಳ್ಳುವುದೆಂದು ನನಗೆ ಗೊತ್ತಾಗಲಿಲ್ಲ’’ ಎಂದು ಅದರಡಿ ಬರೆದಿದ್ದ. ಆತನ ಗೊಂದಲಕ್ಕೆ ಕಾರಣ ಆ ಹುಡುಗಿಯ ಮುಖದ ಮೇಲಿದ್ದ ದಟ್ಟವಾದ ಕೂದಲು. ಸೌಂದರ್ಯ ಕುರಿತು ಸಾಮಾನ್ಯ ಜನರ ಅಭಿಪ್ರಾಯ ಮತ್ತು ಪುರುಷರ ನಿರೀಕ್ಷೆಗೆ ಬೆಲೆ ಕೊಡದ ಆ ಯುವತಿ ತನ್ನ ಸಿಖ್ ಧರ್ಮದ ನಂಬಿಕೆಯಂತೆ ತನ್ನ ಮುಖದ ಮೇಲಿರುವ ಕೂದಲನ್ನು ಬೋಳಿಸಿಕೊಂಡಿರಲಿಲ್ಲ. ಸಹಜವಾಗಿಯೇ ಇದು ಆ ವ್ಯಕ್ತಿಗೆ ವಿಚಿತ್ರವಾಗಿ ಕಂಡಿತ್ತು.

ಆತ ಈ ಫೋಟೋವನ್ನು ಹಾಕಿದ ನಂತರ ಅದರಲ್ಲಿರುವ ಯುವತಿಯ ಧಾರ್ಮಿಕ ನಂಬಿಕೆಯನ್ನು ಬೆಂಬಲಿಸುತ್ತ ಮತ್ತು ಅದನ್ನು ಲೇವಡಿ ಮಾಡಿದ ವ್ಯಕ್ತಿಯ ಅಸೂಕ್ಷ್ಮತೆಯನ್ನು ಖಂಡಿಸುತ್ತಾ ಹಲವಾರು ಪ್ರತಿಕ್ರಿಯೆಗಳು ಬಂದವು. ಹಾಗೆಯೇ ಆಕೆಯನ್ನು ತಮಾಷೆ ಮಾಡಿದವರಿಗೂ ಕೊರತೆ ಇರಲಿಲ್ಲ. ಆಕೆಯ ಸುತ್ತ ಎಲ್ಲ ತರಹದ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವಾಗಲೇ ಆ ಯುವತಿಯೇ ತನ್ನ ಅಭಿಪ್ರಾಯವನ್ನು ದಾಖಲಿಸಿದಳು. ಆಕೆ ಅದೆಷ್ಟು ಸೂಕ್ಷ್ಮಮನಸ್ಸಿನ, ದೃಢ ನಂಬಿಕೆಯ, ಸಂವೇದನಾಶೀಲ ಯುವತಿ ಎಂದರೆ ಆಕೆಯನ್ನು ಎಲ್ಲರೂ ಹಾಡಿಹೊಗಳಿದರು.

ಆ ಯುವತಿಯ ಪ್ರತಿಕ್ರಿಯೆ ಹೀಗಿತ್ತು:

“ಹಾಯ್ ಗೆಳೆಯರೆ. ನಾನು ಬಲ್‌ಪ್ರೀತ್ ಕೌರ್. ಆ ಫೋಟೋದಲ್ಲಿರುವ ಹುಡುಗಿ. ನನ್ನ ಸ್ನೇಹಿತರು ಫೇಸ್ಸ್ಬುಕ್‌ನಲ್ಲಿ ಈ ಫೋಟೋದ ಬಗ್ಗೆ ನನ್ನ ಗಮನ ಸೆಳೆಯುವ ತನಕ ಈ ಕುರಿತು ನನಗೆ ಗೊತ್ತಿರಲಿಲ್ಲ. ಈ ನನ್ನ ಫೋಟೊವನ್ನು ತೆಗೆದವರು ನನ್ನನ್ನು ಕೇಳಿದ್ದರೆ ನಾನು ಸ್ಮೈಲ್‌ ಮಾಡಿ ಸಹಕರಿಸುತ್ತಿದ್ದೆ. ಈ ಫೋಟೋಗೆ ಬಂದಿರುವ ನಕಾರಾತ್ಮಕ ಮತ್ತು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಓದಿ ನನಗೆ ಮುಜುಗರವಾಗಲಿ, ಅವಮಾನವಾಗಲಿ ಆಗಿಲ್ಲ. ಯಾಕೆಂದರೆ ನಾನು ಇರುವುದೇ ಹೀಗೆ. ಹೌದು, ನಾನು ಧರ್ಮದ ದೀಕ್ಷೆ ಪಡೆದಿರುವ, ಮುಖದ ಮೇಲೆ ಕೂದಲನ್ನು ಹೊಂದಿರುವ ಸಿಖ್ ಮಹಿಳೆ. ನಾನು ಇತರೆ ಮಹಿಳೆಯರಿಗಿಂತ ಭಿನ್ನವಾಗಿ ಕಾಣುವುದರಿಂದ ನನ್ನ ಲಿಂಗದ ಬಗ್ಗೆ ಹಲವರಿಗೆ ಅನುಮಾನ ಮೂಡುತ್ತದೆ ಎಂಬುದನ್ನು ನಾನು ಬಲ್ಲೆ. ಅದರೆ ಧರ್ಮಧೀಕ್ಷೆ ಪಡೆದಿರುವ ಸಿಖ್ಖರು ಈ ದೇಹವನ್ನು ದೇವರೇ ನಮಗೆ ಕೊಟ್ಟಿದ್ದೆಂದೂ, ಈ ದೇಹ ಪವಿತ್ರವೆಂದೂ (ಒಂದು ರೀತಿಯಲ್ಲಿ ಇದು ಲಿಂಗರಹಿತ ದೇಹ), ಇದನ್ನು ದೇವರು ಕೊಟ್ಟಂತೆಯೇ ಕಾಪಾಡಿಕೊಳ್ಳಬೇಕೆಂದೂ ನಂಬಿದ್ದೇವೆ. ಹೇಗೆ ಮಕ್ಕಳು ತಮಗೆ ಜನ್ಮ ನೀಡಿದ ತಂದೆ/ತಾಯಿಯನ್ನು ತಿರಸ್ಕರಿಸುವುದಿಲ್ಲವೋ, ಹಾಗೆಯೇ ಸಿಖ್ಖರು ದೇವರು ಕೊಟ್ಟಿರುವ ದೇಹವನ್ನು ತಿರಸ್ಕರಿಸುವುದಿಲ್ಲ. “ನಾನು, ನನ್ನದು’’ ಎಂಬ ಭಾವನೆಯಲ್ಲಿ ನಮ್ಮ ದೇಹವನ್ನು ಒಂದು ಪರಿಕರದಂತೆ ಬದಲಾಯಿಸುತ್ತಾ ಹೋದರೆ ನಾವು ನಮ್ಮ ಒಳಗೇ ನಮ್ಮ ಅಹಂ ಮತ್ತು ದೈವತ್ವದ ನಡುವೆ ಬಿರುಕನ್ನು ಮೂಡಿಸಿಕೊಳ್ಳುತ್ತೇವೆ. ಸೌಂದರ್ಯದ ಬಗ್ಗೆ ಸಮಾಜದ ಪರಿಕಲ್ಪನೆಯನ್ನು ಮೀರಿ ನಿಲ್ಲುವ ಮೂಲಕ ನಾನು ನನ್ನ ಕೃತ್ಯಗಳ ಬಗ್ಗೆ ಹೆಚ್ಚು ಗಮನಹರಿಸಲು ನನಗೆ ಸಾಧ್ಯ ಎಂದು ನಾನು ನಂಬಿದ್ದೇನೆ. ನನ್ನ ಚಿಂತನೆ, ವರ್ತನೆ ಮತ್ತು ಕೃತ್ಯಗಳು ನನ್ನ ಈ ದೇಹದ ವಿನ್ಯಾಸಕ್ಕಿಂತ ಮೌಲ್ಯಯುತವಾದದ್ದೆಂದು ಭಾವಿಸಿದ್ದೇನೆ”.

ಎಷ್ಟೇ ಆದರೂ ಕೊನೆಗೂ ಈ ದೇಹ ಬೂದಿ ಆಗುವುದರಿಂದ ಇದರ ಬಗ್ಗೆ ಯಾಕಷ್ಟು ಚಡಪಡಿಸಬೇಕು? ನಾನು ಸತ್ತ ನಂತರ ಯಾರೂ ನಾನು ಹೇಗಿದ್ದೆ ಎಂದು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಅಷ್ಟೇ ಯಾಕೆ, ನನ್ನ ಮಕ್ಕಳೂ, ನನ್ನ ದನಿಯನ್ನೂ ಮರೆತುಬಿಡುತ್ತಾರೆ. ಕಾಲಕ್ರಮೇಣ ನಮ್ಮ ಶಾರೀರಿಕ ನೆನಪುಗಳೂ ಅಳಿಸಿಹೋಗುತ್ತವೆ. ಬದಲಾಗಿ ನನ್ನ ಪ್ರಭಾವ ಮತ್ತು ನನ್ನ ಲೆಗಸಿ ಉಳಿದಿರುತ್ತದೆ. ದೈಹಿಕ ಸೌಂದರ್ಯದ ಬಗ್ಗೆ ಗಮನ ಕೊಡದೆ ನಾನು ನನ್ನ ಸಮಯವನ್ನು ಆಂತರ್ಯದ ಸದ್ಗುಣಗಳನ್ನು ಹೆಚ್ಚಿಸಿಕೊಳ್ಳುವತ್ತ ವ್ಯಯಿಸಿದರೆ ನಾನು ಈ ಜಗತ್ತಿನಲ್ಲಿ ನನ್ನ ಕೈಲಾದಷ್ಟು ಬದಲಾವಣೆ ಮತ್ತು ಅಭಿವೃದ್ಧಿಯನ್ನು ತರಬಹುದೆನಿಸುತ್ತದೆ.

ಆದ್ದರಿಂದ ನನಗೆ ನನ್ನ ಮುಖ ಹೇಗಿದೆ ಎಂಬುದಕ್ಕಿಂತ ಆ ಮುಖದ ಹಿಂದೆ ಇರುವ ನಗೆ ಮುಖ್ಯವಾಗಿದೆ. ಮುಂದೆ ಯಾರದರೂ ನನ್ನನ್ನು ನೋಡಿದರೆ ದಯವಿಟ್ಟು ನನಗೆ ಹಲೋ ಹೇಳಿ ನನ್ನನ್ನು ಮಾತನಾಡಿಸಿ. ನನ್ನ ಈ ಫೋಟೋಗೆ ಬಂದಿರುವ ಪಾಸಿಟಿವ್ ಮತ್ತು ನೆಗಟಿವ್, ಎರಡೂ ರೀತಿಯ ಪ್ರತಿಕ್ರಿಯೆಗಳಿಂದ ನಾನು ನನ್ನನ್ನಲ್ಲದೆ ಇತರರನ್ನೂ ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿದ್ದರಿಂದ ನಾನು ಎಲ್ಲರಿಗೂ ಆಭಾರಿ ಆಗಿದ್ದೇನೆ.

ಅಂದಹಾಗೆ ನಾನು ಫೋಟೊದಲ್ಲಿ ತೊಟ್ಟಿರುವ ಯೋಗಾ ಪ್ಯಾಂಟ್‌ಗಳು ತುಂಬಾ ಆರಾಮಾಗಿರುತ್ತವೆ. ಹಾಗೆಯೇ ನಾನು ತೊಟ್ಟಿರುವ `ಬೆಟ್ಟರ್ ಟುಗೆದರ್’ ಎಂಬ ಬರಹ ಇರುವ ಟೀಶರ್ಟ್ ಒಂದು ಅಂತರ್‌ಧರ್ಮೀಯ ಯುವಕರ ಸಂಘಟನೆಯದ್ದು. ಕತೆಗಳನ್ನು ಹೇಳುವ ಮತ್ತು ಸಂವಾದಗಳನ್ನು ನಡೆಸುವ ಮೂಲಕ ವಿವಿಧ ಧರ್ಮಗಳ ನಡುವೆ ಸಾಮರಸ್ಯ ತರುವ ಉದ್ದೇಶ ಆ ಯುವ ಸಂಘಟನೆಯದ್ದು. ನನ್ನ ಬಗ್ಗೆ ಇದು ಇನ್ನಷ್ಟು ವಿವರಣೆ ನೀಡುತ್ತದೆಂದು ಇಲ್ಲಿ ಇದನ್ನು ಉಲ್ಲೇಖಿಸಿದ್ದೇನೆ.

“ನನ್ನ ಮಾತುಗಳಿಂದ ಯಾರಿಗಾದರೂ ನೋವುಂಟಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ.’’

ಬಲ್‌ಪ್ರೀತ್ ಕೌರ್‌ಳ ಪ್ರತಿಕ್ರಿಯೆ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾಗಲೇ ಆಕೆಯ ಫೋಟೋವನ್ನು ಇಂಟರ್‌ನೆಟ್‌ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿ ತಪ್ಪೊಪ್ಪಿಕೊಂಡ. ಆತ ಹೀಗೆ ಬರೆದ:

“ನಾನು ಬಲ್‌ಪ್ರೀತಳ ಫೋಟೊ ಹಾಕಿದ್ದು ತಮಾಷೆಯಾಗಿರಲಿಲ್ಲ ಎಂದು ನನಗೆ ಅರಿವಾಗಿದೆ. ನಾನು ಸಿಖ್ಖರ, ಬಲ್‌ಪ್ರೀತಳ ಮತ್ತು ಇತರರ ಕ್ಷಮೆ ಕೇಳುತ್ತೇನೆ. ಇತರರನ್ನು ಲೇವಡಿ ಮಾಡುವುದು ಹಲವರಿಗೆ ಸಂತೋಷ ಕೊಡಬಹುದು, ಆದರೆ ಆ ಲೇವಡಿಗೆ ಗುರಿಯಾಗುವವರನ್ನು ಅಗೌರವಿಸುತ್ತದೆ. ನಾನು ಮಾಡಿದ್ದು ಸಂಪೂರ್ಣವಾಗಿ ತಪ್ಪು ಎಂದು ನನಗೆ ಗೊತ್ತು.”

ಇದಾದ ನಂತರ ನಾನು ಸಿಖ್ಖ್ ಧರ್ಮದ ಬಗ್ಗೆ ಹೆಚ್ಚು ಓದಿಕೊಂಡಿದ್ದು ಅದು ನಿಜವಾಗಲೂ ಆಸಕ್ತಿದಾಯಕವಾಗಿದೆ. ಬಲ್‌ಪ್ರೀತ್ ಹೇಳುವಂತೆ ನಮ್ಮ ದೈಹಿಕ ಸೌಂದರ್ಯಕ್ಕೆ ಹೆಚ್ಚು ಗಮನ ಕೊಡುವುದಕ್ಕಿಂತ ನಾವೊಂದು ಉತ್ತಮವಾದ ಲೆಗಸಿಯನ್ನು ಬಿಟ್ಟುಹೋಗುವುದು ಮುಖ್ಯ.

ಬಲ್‌ಪ್ರೀತ್, ನಾನು ಈ ಕುರಿತು ಮುಕ್ತವಾಗಿ ಚಿಂತಿಸದ ವ್ಯಕ್ತಿಯಾಗಿದ್ದಕ್ಕೆ ನನ್ನನ್ನು ಕ್ಷಮಿಸು. ನೀನು ನನಗಿಂತ ಉತ್ತಮ ವ್ಯಕ್ತಿ ಅಗಿರುವೆ.

ಸಿಖ್ಖರೇ, ನಾನು ನಿಮ್ಮ ಜೀವನಕ್ರಮದ ಬಗ್ಗೆ ಮತ್ತು ನಿಮ್ಮ ಸಂಸ್ಕೃತಿಯ ಬಗ್ಗೆ ಅವಹೇಳನ ಮಾಡಿದ್ದಕ್ಕೆ ನಿಮ್ಮ ಕ್ಷಮೆ ಕೇಳುತ್ತೇನೆ. ಬಲ್‌ಪ್ರೀತ್ ತಾನು ನಂಬಿರುವ ಸಿದ್ಧಾಂತದಲ್ಲಿ ಇಟ್ಟುರುವ ನಂಬಿಕೆ ನನ್ನನ್ನು ಸ್ತಬ್ಧನನ್ನಾಗಿಸಿದೆ.

ಆತ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಅಮೆರಿಕದ ಒಹೈಯೋ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ, ಮುಂದೆ ನ್ಯೂರೋ ಸರ್ಜನ್ ಆಗಬೇಕೆಂಬ ಗುರಿ ಹೊಂದಿರುವ ಬಲ್‌ಪ್ರೀತಳಿಗೆ ವೈಯಕ್ತಿಕವಾಗಿ ಈ ಮೇಲ್ ಮೂಲಕ ಕ್ಷಮೆ ಕೋರಿದ. ಅದನ್ನು ಓದಿ ಬಲ್‌ಪ್ರೀತ್ ಎಷ್ಟು ದಂಗಾದಳೆಂದರೆ “ಆತ ಪ್ರಾಮಾಣಿಕವಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ನಿಜವಾಗಲೂ ಹೇಳಬೇಕೆಂದರೆ ನನಗೂ ಆ ರೀತಿ ಕ್ಷಮೆ ಕೇಳುವುದು ಕಷ್ಟವಾಗುತ್ತಿತ್ತೇನೋ’’ ಎಂದಿದ್ದಾಳೆ. ಹಾಗೆ ಹೇಳುವ ಮೂಲಕ ಬಲ್‌ಪ್ರೀತ್ ನಿಜವಾಗಲೂ ಎಷ್ಟು ಧಾರಾಳ ಮನಸ್ಸಿನವಳು ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾಳೆ.

ಸದ್ಯದಲ್ಲೇ ಆತ ಓಹೈಯೋಗೆ ಬಂದು ಆಕೆಯನ್ನು ಮುಖತಃ ಭೇಟಿ ಆಗಿ ಕ್ಷಮೆ ಕೋರಲೂ ಸಿದ್ಧ ಎಂದಿದ್ದಾನೆ. ಅದಕ್ಕೆ ಬಲ್‌ಪ್ರೀತ್ “ಅದರ ಅಗತ್ಯವಿಲ್ಲ. ಆದರೆ ನಾವು ಭೇಟಿ ಆದರೆ ಈ ಬಾರಿ ಜೊತೆಯಾಗಿ ಫೋಟೋ ತೆಗೆಸಿಕೊಳ್ಳೋಣ’’ ಎಂದು ತಮಾಷೆ ಮಾಡಿದ್ದಾಳೆ!

ಇತರರ ಧಾರ್ಮಿಕ ನಂಬಿಕೆಯ ಬಗ್ಗೆ, ಉಡುಗೆತೊಡುಗೆಗಳ ಬಗ್ಗೆ, ದೈಹಿಕ ಸೌಂದರ್ಯದ ಬಗ್ಗೆ ಪೂರ್ವಾಗ್ರಹಗಳನ್ನು ಹೊಂದಿರುವವರು ಅವುಗಳನ್ನು ಲೇವಡಿ ಮಾಡುವುದು ಸಾಮಾನ್ಯ. ಆದರೆ ಬಲ್‌ಪ್ರೀತ್ ಎಂಬ ಯುವತಿ ತನ್ನ ತಾಳ್ಮೆ, ದಿಟ್ಟತನ ಮತ್ತು ಸೂಕ್ಷ್ಮತೆಯಿಂದ ಅಂತಹ ಪೂರ್ವಾಗ್ರಹಗಳನ್ನು ಮನಮುಟ್ಟುವಂತೆ ತೊಡೆದುಹಾಕಿದ್ದಾಳೆ. ಇದು ಇತರರಿಗೆ ಮೇಲುಪಂಕ್ತಿ ಆಗಲಿ ಎಂಬ ಆಶಯ ನನ್ನದು…

ಗೌರಿ ಲಂಕೇಶ್‌

ಅಕ್ಟೋಬರ್ 17, 2012


ಇದನ್ನೂ ಓದಿ: ದೊರೆಸ್ವಾಮಿ ಎಂಬ ರಾಕ್‍ಸ್ಟಾರ್ !! ಆರು ವರ್ಷದ ಹಿಂದೆ ಗೌರಿ ಲಂಕೇಶ್‌ ಬರೆದ ಲೇಖನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭೆಯ 37 ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ

ಹತ್ತು ರಾಜ್ಯಗಳ 37 ಸ್ಥಾನಗಳನ್ನು ಒಳಗೊಂಡ ದ್ವೈವಾರ್ಷಿಕ ರಾಜ್ಯಸಭಾ ಚುನಾವಣೆಗೆ ಸೋಮವಾರ (ಮಾ.16) ಮತದಾನ ನಡೆಯುತ್ತಿದೆ. ಬಿಹಾರ, ಒಡಿಶಾ ಮತ್ತು ಹರಿಯಾಣದಲ್ಲಿ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದ್ದು, 26 ಅಭ್ಯರ್ಥಿಗಳು ಈಗಾಗಲೇ...

ಒಡಿಶಾ | ಆಸ್ಪತ್ರೆಯಲ್ಲಿ ಬೆಂಕಿ ಅವಘಡ : 10 ಮಂದಿ ಸಾವು

ಒಡಿಶಾದ ಕಟಕ್‌ನಲ್ಲಿರುವ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಟ್ರಾಮಾ ಕೇರ್ ಐಸಿಯುನಲ್ಲಿ ಸೋಮವಾರ (ಮಾರ್ಚ್ 16) ಬೆಂಕಿ ಅವಘಡ ಸಂಭವಿಸಿದ್ದು, ಕನಿಷ್ಠ 10 ರೋಗಿಗಳು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು...

ಆಸ್ಕರ್‌ 2026 : ಮೈಕೆಲ್ ಬಿ. ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ, ಒನ್ ಬ್ಯಾಟಲ್ ಆಫ್ಟರ್ ಅನದರ್‌ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

ಪ್ರತಿಷ್ಠಿತ 98ನೇ ಅಕಾಡೆಮಿ ಪ್ರಶಸ್ತಿ (ಆಸ್ಕರ್ 2026) ಸಮಾರಂಭ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಮಾರ್ಚ್ 15ರಂದು (ಭಾರತೀಯ ಕಾಲಮಾನ ಮಾರ್ಚ್ 16) ನಡೆಯಿತು. ಖ್ಯಾತ ಹಾಸ್ಯನಟ ಕೋನನ್ ಒಬ್ರೇನ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು....

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ; ಬಂಗಾಳದಲ್ಲಿ ಮಾತ್ರ ಎರಡು ಹಂತದ ಮತದಾನ

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮುಖ್ಯಸ್ಥರಾದ ಜ್ಞಾನೇಶ್ ಕುಮಾರ್ ಪ್ರಕಟಿಸಿದರು. ದೆಹಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ...

ಫ್ಲಿಪ್‌ಕಾರ್ಟ್‌ನಿಂದ 1 ರೂ.ಗೆ ಹಾಲು ಮಾರಾಟ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಬಮುಲ್‌ ಆಗ್ರಹ

ಫ್ಲಿಪ್‌ಕಾರ್ಟ್‌ ಸಂಸ್ಥೆಯು ಆನ್‌ಲೈನ್‌ ಮೂಲಕ 1 ರೂ.ಗೆ ಲೀಟರ್‌ ಹಾಲನ್ನು ಮಾರಾಟ ಮಾಡಿರುವುದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ, ಬೆಂಗಳೂರು ನಗರ, ಗ್ರಾಮೀಣ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ...

“ಮಕ್ಕಳ ಹಂತಕನನ್ನು ಹುಡುಕಿ ಹತ್ಯೆ ಮಾಡುತ್ತೇವೆ” : ನೆತನ್ಯಾಹು ಸುರಕ್ಷಿತವಾಗಿದ್ದಾರೆ ಎಂಬ ಇಸ್ರೇಲ್ ಸ್ಪಷ್ಟನೆ ಬೆನ್ನಲ್ಲೆ ಐಆರ್‌ಜಿಸಿ ಹೇಳಿಕೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹುಡುಕಿ ಹತ್ಯೆ ಮಾಡುತ್ತೇವೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿರುವುದಾಗಿ ವರದಿಯಾಗಿದೆ. ನೆತನ್ಯಾಹು ಅವರ ಹತ್ಯೆಯ ವದಂತಿಗಳನ್ನು ಇಸ್ರೇಲ್ ನಿರಾಕರಿಸಿದ ಬೆನ್ನಲ್ಲೇ, ಐಆರ್‌ಜಿಸಿ ಈ...

ಮಹಾರಾಷ್ಟ್ರ| ಇಫ್ತಾರ್ ಕೂಟಕ್ಕೆ ಸೇರಿದ್ದ ಮುಸ್ಲಿಮರ ಮೇಲೆ ಹಿಂದುತ್ವವಾದಿ ಗುಂಪಿನಿಂದ ದಾಳಿ

ರಂಜಾನ್‌ ಮಾಸದ ಉಪವಾಸ ಮುರಿಯಲು ನೆರೆದಿದ್ದ ಜನರ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಫ್ತಾರ್ ಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಸುಮಾರು 100 ಕ್ಕೂ ಹೆಚ್ಚು...

ಆಸ್ಕರ್‌ ಅಂತಿಮ ಪಟ್ಟಿಗೆ ಆಯ್ಕೆಯಾದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ ಮತ್ತು ಆಕೆಯ ಸಂಬಂಧಿಕರನ್ನು ಇಸ್ರೇಲಿ ಸೈನಿಕರು ಭೀಕರವಾಗಿ ಹತ್ಯೆ ಮಾಡಿದ ಕಥೆಯನ್ನು ಹೇಳುವ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರವು 2026ರ ಆಸ್ಕರ್...

ಉತ್ತರ ಪ್ರದೇಶ| ದಲಿತ ಕುಟುಂಬದ ಮದುವೆ ಮನೆಯಲ್ಲಿ ಸವರ್ಣಿಯರಿಂದ ಹಲ್ಲೆ; ಬಂದೂಕಿನಿಂದ ಬೆದರಿಕೆ

ಮಾರ್ಚ್ 10 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಜಾತಿ ಆಧಾರಿತ ಹಿಂಸಾಚಾರದ ತೀವ್ರ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. 24 ಗಂಟೆಗಳ ಒಳಗೆ ಎಫ್‌ಐಆರ್...

’70 ಲಕ್ಷ ಬಂಗಾಳಿ ಮುಸ್ಲಿಮರನ್ನು ಹೊರದಬ್ಬಲು ಸಾಧ್ಯವಿಲ್ಲ..ಅವರೇ ದೇಶ ಬಿಡುವಂತಹ ಪರಿಸ್ಥಿತಿ ಸೃಷ್ಟಿಸುತ್ತೇವೆ’: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಸುಮಾರು 70 ಲಕ್ಷ 'ಬಂಗಾಳಿ ಮುಸ್ಲಿಮರ'ನ್ನು ಭಾರತದಿಂದ ಹೊರಹಾಕುವುದು 'ಮಾನವೀಯವಾಗಿ ಸಾಧ್ಯವಿಲ್ಲ'. ಹಾಗಾಗಿ, ಅವರಾಗಿಯೇ ದೇಶ ತೊರೆಯುವಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ...