Homeಮುಖಪುಟವಿಶೇಷ ವರದಿ: ಪ್ರತಿರೋಧಕ್ಕೆ ಹೊಸ ಅರ್ಥ ಮತ್ತು ಹುರುಪು ಕೊಟ್ಟ ದೆಹಲಿ ರೈತ ಹೋರಾಟ..!

ವಿಶೇಷ ವರದಿ: ಪ್ರತಿರೋಧಕ್ಕೆ ಹೊಸ ಅರ್ಥ ಮತ್ತು ಹುರುಪು ಕೊಟ್ಟ ದೆಹಲಿ ರೈತ ಹೋರಾಟ..!

- Advertisement -
- Advertisement -

[ದೆಹಲಿ ರೈತ ಹೋರಾಟವನ್ನು ವರದಿ ಮಾಡಲು ತೆರಳಿದ್ದ ನಾನುಗೌರಿ-ನ್ಯಾಯಪಥ ತಂಡದ ಮಮತ, ಈ ಹೋರಾಟ ತಮಗೆ ಮೂಡಿಸಿದ ಬೆರಗಿನ ಬಗ್ಗೆ ಇಲ್ಲಿ ಬಣ್ಣಿಸಿದ್ದಾರೆ]

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಒತ್ತಾಯಿಸಿ ನಡೆಯುತ್ತಿರುವ ರೈತ ಹೋರಾಟಕ್ಕೆ 60 ದಿನಗಳು ತುಂಬುತ್ತಿವೆ. ಇಷ್ಟು ದಿನಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಮೊದಲ ದಿನವಿದ್ದ ಉತ್ಸಾಹ ಇನ್ನೂ ಹಾಗೆ ಉಳಿಸಿಕೊಂಡಿರುವುದಷ್ಟೇ ಅಲ್ಲ ಅದು ದಿನೇದಿನೇ ವೃದ್ಧಿಸುತ್ತಿರುವುದು, ಪ್ರತಿಭಟನಾನಿರತ ರೈತರ ಕುರಿತ ಆಸಕ್ತಿ ಇಮ್ಮಡಿಸುವಂತೆ ಮಾಡುತ್ತದೆ.

ಯಾವುದೇ ಸರ್ಕಾರದ ಅಥವಾ ಖಾಸಗಿ ಕಂಪನಿಗಳ ವಿರುದ್ಧ ಪ್ರತಿಭಟನೆ ನಡೆಸುವಾಗ, ಆ ಹೋರಾಟಕ್ಕೆ ಇಳಿಯಲು ಕಾರಣವೇನು ಎಂಬುದು ಪ್ರತಿಭಟನಾನಿರತ ಎಲ್ಲರಿಗೂ ತಿಳಿದಿದ್ದರೆ, ಆ ಹೋರಾಟಕ್ಕೆ ಗಟ್ಟಿ ಅಡಿಪಾಯವೊಂದು ದೊರೆತಂತೆ. ಹೋರಾಟಕ್ಕೆ ಅಣಿಯಾಗಲು ಅಂತಹ ಉದ್ದೇಶ, ತಿಳಿವಳಿಕೆ ಮತ್ತು ಆಲೋಚನೆ ಅಗತ್ಯವಾಗಿ ಬೇಕು. ಆಗ ಆ ಹೋರಾಟ ಎಷ್ಟು ಧೀರ್ಘವಾದರೂ ಜನರು ಅಂಜುವುದಿಲ್ಲ. ಅಂತಹ ಒಂದು ಭದ್ರ ಬುನಾದಿ ಈ ಐತಿಹಾಸಿಕ ರೈತ ಹೋರಾಟಕ್ಕಿದೆ ಎಂಬುದು ದೆಹಲಿ ಗಡಿಗೆ ಭೇಟಿ ನೀಡಿದ ಯಾರಿಗಾದರೂ ಸುಲಭವಾಗಿ ತಿಳಿಯುತ್ತದೆ.

PC : Free Press journal

ಈ ಹೋರಾಟದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ತಾವು ಯಾವುದಕ್ಕಾಗಿ, ಯಾರಿಗಾಗಿ, ಏಕೆ ಈ ದೆಹಲಿಯ ಗಡಿಗಳಲ್ಲಿ ಇದ್ದೇವೆ ಎಂಬ ತಿಳಿವಿದೆ. ಇಂತಹ ತಿಳಿವಿಲ್ಲದೆ ಪ್ರತಿಭಟನೆಗಿಳಿದು, ಪ್ರತಿಭಟಿಸುತ್ತಿರುವ ಸ್ಥಳಕ್ಕೆ ಬಂದ 2-3 ದಿನಗಳಲ್ಲೇ, ಕಾರಣಗಳನ್ನು ತಿಳಿಸುವ ಕೆಲಸವನ್ನು ಹೋರಾಟನಿರತ ರೈತರು, ರೈತ ಮುಖಂಡರು ಮಾಡುತ್ತಾರೆ. ಈ ಕೆಲಸಕ್ಕಾಗಿಯೇ ದೆಹಲಿಯ ಸಿಂಘು, ಟಿಕ್ರಿ, ಗಾಝಿಪುರ್, ಚಿಲ್ಲಾ, ಶಹಜಾನ್‌ಪುರ್, ದಾರೂಹೇರಾ ಗಡಿಗಳಲ್ಲಿ ಅನೇಕ ವೇದಿಕೆಗಳಿವೆ. ಕೃಷಿ ಕಾನೂನಿನ ಸಾಧಕ-ಬಾಧಕಗಳ ಕುರಿತು ಅನೇಕ ತಜ್ಞರು, ರೈತರು, ರೈತ ಮುಖಂಡರು ಇಲ್ಲಿ ಇಡೀ ದಿನ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇನ್ನೂ ಅನೇಕ ಸಂಘ ಸಂಸ್ಥೆಗಳು ಕೃಷಿ ಕಾನೂನಿನ ಪ್ರತಿಗಳನ್ನು ವಿವಿಧ ಭಾಷೆಗಳಲ್ಲಿ ಅಚ್ಚು ಹಾಕಿಸಿ ಎಲ್ಲರಿಗೂ ಹಂಚುವ ಕೆಲಸ ಮಾಡುತ್ತಿವೆ.

ಒಂದು ಹೋರಾಟ ಇಷ್ಟು ದಿನಗಳ ಕಾಲ ಉಳಿಯಲು ಮತ್ತು ಯಾವುದೇ ಅಡ್ಡಿಆತಂಕಗಳು ಕಾಣಿಸಿಕೊಳ್ಳದಿರಲು, ಜನ ತಾವಾಗಿಯೇ ಇಲ್ಲಿ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಲು, ಅಲ್ಲಿ ಆಹಾರ ಪೂರೈಕೆಯ ಅಚ್ಚುಕಟ್ಟುತನವೂ ಕಾರಣ. ಹೆಚ್ಚಾಗಿ ಪ್ರತಿಭಟನೆಯೆಂದರೆ ಹಸಿದುಕೊಂಡು, ಬಿಸಿಲಿನಲ್ಲಿ ಕುಳಿತು ಕಷ್ಟಪಟ್ಟು ಪ್ರತಿಭಟನೆ ನಡೆಸುವುದನ್ನು ನೋಡಿರುವ ನಮಗೆ ಈ ಹೋರಾಟ ತುಂಬಾ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ಇಡೀ ದಿನ ಸಿಖ್ಖರು ತಮ್ಮ ಲಂಗರ್‌ಗಳಲ್ಲಿ ಪ್ರತಿಭಟನಾ ನಿರತರಿಗೆ ಅನ್ನ-ಆಹಾರಗಳ ವ್ಯವಸ್ಥೆಯ ಸೇವೆ ಮಾಡುತ್ತಾರೆ. ಹಸಿವಿಗೆ ಇಲ್ಲಿ ಜಾಗವಿಲ್ಲ. ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬ ರೈತರ ಈ ಪ್ರೀತಿಯ ಮತ್ತು ಕಾಳಜಿಯ ನಡೆ, ದೇಶದ ಹಲವು ಧರಣಿಗಳಲ್ಲಿ ಹಸಿವಿನಿಂದ, ಸುಸ್ತಿನಿಂದ ಬೀಳುವ ಪ್ರತಿಭಟನಾನಿರತರನ್ನು ಒಮ್ಮೆ ಕಣ್ಣ ಮುಂದೆ ಹಾಯುವಂತೆ ಮಾಡುತ್ತದೆ. ಸಿಖ್ ಸಮುದಾಯದ ಮತ್ತು ಪ್ರತಿಭಟನಾ ರೈತರ ಭ್ರಾತೃತ್ವ ನಿಜಕ್ಕೂ ಅನುಕರಣೀಯ ಅನ್ನಿಸದೆ ಇರದು.

ರೈತ ಹೋರಾಟ ಮೊದಮೊದಲು ಸುದ್ದಿಯಾಗಿದ್ದು ಅಲ್ಲಿನ ಊಟ ಉಪಚಾರದ ಕಾರಣಕ್ಕಾಗಿಯೇ ನಿಜ. ಏಕೆಂದರೆ ಪಂಜಾಬ್ ಮತ್ತು ಹರಿಯಾಣದ ರೈತರು ತಮ್ಮ ಲಂಗರ್‌ಗಳಲ್ಲಿ ಪ್ರತಿಭಟನಾನಿರತರಿಗೆ ನೀಡುವ ಆಹಾರ ಕೂಡ ಅಷ್ಟು ಉತ್ತಮವಾಗಿರುತ್ತದೆ. ಶುದ್ಧ ದೇಸಿ ತುಪ್ಪ, ಶಕ್ತಿವರ್ಧಕವಾಗಿರುವ ದ್ವಿದಳ ಧಾನ್ಯಗಳನ್ನು ಬಳಸಿ ಮಾಡುವ ಅವರ ಅಡುಗೆ ಅಂತಹ ಚಳಿಯಲ್ಲೂ ಶಕ್ತಿ ನೀಡಬಲ್ಲದು. ಜಿಲೇಬಿ, ರಸಗುಲ್ಲ, ಹಲ್ವಾ, ಖೀರು, ಪಿಜ್ಜಾ, ಬರ್ಗರ್‌ಗಳನ್ನು ನೀಡುವ ಲಂಗರ್‌ಗಳು, ಜ್ಯೂಸ್, ಹಾಲು, ಟೀ ನೀಡುವ ಲಂಗರ್‌ಗಳು, ಕಡಲೇಕಾಯಿ, ಮೊಸಂಬಿ, ಪೇರಲೆ ಹಣ್ಣುಗಳನ್ನು ಹಂಚಲು ಬರುವ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗಿವೆ. ಮೊದಲು ಹೊಟ್ಟೆ ತುಂಬಾ ಊಟ ಮಾಡಿ ಆಮೇಲೆ ಪ್ರತಿಭಟನೆಗೆ ಕುಳಿತುಕೊಳ್ಳಿ ಎನ್ನುವ ಈ ಹೋರಾಟ ನಾವು ಓದಿರುವ, ನೋಡಿರುವ ಆಂದೋಲನಗಳಿಗಿಂತ ತುಂಬಾ ವಿಭಿನ್ನವಾದದ್ದು. ಇವರ ಆಹಾರದ ಬಗ್ಗೆ ಅಪಹಾಸ್ಯ ಮಾಡಿ ವಿಕೃತ ಮೆರೆದ ಜನರು ಇಲ್ಲಿಗೆ ತೆರಳಿ ಒಮ್ಮೆ ರೈತರ ಪ್ರೀತಿಯ ಆತಿಥ್ಯವನ್ನು ಸವಿದರೆ ಅವರ ಮನಸ್ಸು ಬದಲಾಗಬಹುದೇನೋ!

ರೈತ ಹೋರಾಟ
PC: Business Standard

ರೈತ ಹೋರಾಟದಲ್ಲಿ ಎಲ್ಲಾ ಗಡಿಗಳನ್ನು ಸುತ್ತಿದ ಮೇಲೂ ನಿಮಗೆ ಮತ್ತೆ ಮತ್ತೆ ಕಾಣಿಸುವುದು, ಮತ್ತೆ ಮತ್ತೆ ಕಾಡುವುದು ರೈತರ ಒಗ್ಗಟ್ಟು. ಇಲ್ಲಿ ಪಂಜಾಬ್, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಕರ್ನಾಟಕ, ಜಮ್ಮು-ಕಾಶ್ಮೀರ, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ, ವಿಭಿನ್ನ ಮನಸ್ಥಿತಿಯ ಜನರು ಇದ್ದಾರೆ. ಈ ವೈವಿಧ್ಯತೆಯ ಜನರ ಧ್ಯೇಯ ಮಾತ್ರ ಒಂದೇ ಅಗಿದೆ. ಆಂದೋಲನದಲ್ಲಿರುವ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಒಂದೇ ಮಾತು. ಕೇಂದ್ರ ಸರ್ಕಾರ ಕರಾಳ ಕೃಷಿ ಕಾನೂನುಗಳನ್ನು ವಾಪಾಸ್ ಪಡೆಯಬೇಕು ಎಂಬುದು. ಈ ವಿಚಾರದಲ್ಲಿ ಪ್ರತಿಭಟನೆ ನಡೆಯುತ್ತಿರುವ ಯಾವ ಗಡಿಯಲ್ಲಿ ಹೋಗಿ ಯಾರನ್ನು ಪ್ರಶ್ನಿಸಿದರೂ ಇದೇ ಉತ್ತರವಾಗಿರುತ್ತದೆ.

ಈ ಮೊದಲು ನಾವು ನೋಡಿರುವ ಹೋರಾಟಗಳ ಹಿಂದೆ ಒಂದು ಪಕ್ಷ ಅಥವಾ ಒಂದು ಸಂಘಟನೆ ಇರುವುದು ಸಾಮಾನ್ಯವಾಗಿತ್ತು. ಅವುಗಳು ಎಷ್ಟೇ ನೈಜವಾಗಿದ್ದರೂ, ನೈಜ ಕಾಳಜಿಗಳನ್ನು ಹೊಂದಿದ್ದರೂ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸುವುದು ಆಳುವ ಸರ್ಕಾರಗಳಿಗೆ ಸುಲಭವಾಗಿರುತ್ತಿತ್ತು. ಆದರೆ ಈ ಬಾರಿ ಅದಕ್ಕೆ ಅವಕಾಶವೇ ಇಲ್ಲದಂತಾಗಿದೆ. ಇದು ಪೂರ್ತಿಯಾಗಿ ರೈತರೇ ಮುನ್ನಡೆಸುತ್ತಿರುವ ಆಂದೋಲನ ಎಂಬುದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವವರ ಗಮನಕ್ಕೆ ಬಂದೆ ಬರುತ್ತದೆ.

ಸಿಖ್ ಸಮುದಾಯದ ಯುವಕರ ಸೇವಾ ಮನೋಭಾವ ಕೂಡ ರೈತ ಹೋರಾಟ ಇಲ್ಲಿಯವರೆಗೆ ಯಶಸ್ವಿಯಾಗಿರುವುದಕ್ಕೆ ಮತ್ತೊಂದು ಕಾರಣವಾಗಿದೆ. ಯಾವುದೇ ಇರಿಸು-ಮುರುಸು ಇಲ್ಲದೆ, ಎಂತಹ ಸಿರಿವಂತನಾದರೂ ಇನ್ನೊಬ್ಬರ ಬೂಟ್ ಪಾಲಿಶ್ ಮಾಡಲು ಮುಂದಾಗುವ ಇವರ ಹೃದಯ ಶ್ರೀಮಂತಿಕೆ ನಿಜಕ್ಕೂ ಅನುಕರಣೀಯ. ಅವಿಸ್ಮರಣೀಯ ಕೂಡ. ವಿದೇಶಿ ಕೆಲಸಗಳನ್ನು ಬಿಟ್ಟು ಬಂದು ಇಲ್ಲಿ ಹೊಲಿಗೆ ಸೇವೆ ನೀಡುವವರು, ಪಂಜಾಬ್‌ನಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಯುವಕ ಇಲ್ಲಿ ರೈತರ ಬಟ್ಟೆ ತೊಳೆಯಲು, ಚಪ್ಪಲಿ ಜೋಡಿಸಲು, ಶೂ ಪಾಲಿಶ್ ಮಾಡಲು, ತಲೆಗೆ ಎಣ್ಣೆ ಹಚ್ಚಲು ಕೂರುವುದು ನಿಜಕ್ಕೂ ಎಂಥವರನ್ನೂ ಮೂಕ ವಿಸ್ಮಿತರನ್ನಾಗಿಸುತ್ತದೆ. ಇಂತಹ ವಿಚಾರಗಳನ್ನು ನೋಡಲು ಮತ್ತು ಚಿಂತಿಸಲು ನಮ್ಮಲ್ಲಿನ ಪೂರ್ವಾಗ್ರಹಪೀಡಿತ ಭಾವನೆಗಳನ್ನು ಬಿಟ್ಟು ಪ್ರತಿಭಟನಾ ಸ್ಥಳಕ್ಕೆ ಹೋಗಬೇಕಾಗುತ್ತದೆ ಎಂಬುದು ಅಷ್ಟೇ ಸತ್ಯ.

PC : Malyala Manorama

ದೆಹಲಿ ಒಂದು ನಗರ ಎಂದು ಎಲ್ಲರಿಗೂ ತಿಳಿದಿರುವುದೇ, ಆದರೆ ಈ ಗಡಿಗಳಲ್ಲಿ ಸೃಷ್ಟಿಯಾಗಿರುವ ನಗರಗಳದ್ದು ಬೇರೆಯೇ ಮಾದರಿ. ದೆಹಲಿ ಮತ್ತು ಸುತ್ತಮುತ್ತಲಿನ ಜನ ಇಲ್ಲಿಗೆ ಪ್ರವಾಸಿಗರಾಗಿ ಬರುತ್ತಿದ್ದಾರೆ. ಮಕ್ಕಳನ್ನು ಕರೆದುಕೊಂಡು ಕುಟುಂಬ ಸಮೇತ ಭೇಟಿ ನೀಡುವ ಜನ, ರೈತರ ಜೊತೆಗೆ ಹೋರಾಟದ ಬಗ್ಗೆ ಮಾತುಕತೆ ನಡೆಸುತ್ತಾರೆ. ಇಲ್ಲಿ ತಲೆಯೆತ್ತಿರುವ ಪುಸ್ತಕಭಂಡಾರಗಳಿಂದ ಪುಸ್ತಕಗಳನ್ನು ಖರೀದಿಸುತ್ತಾರೆ. ಅಲ್ಲಯೇ ನಡೆಯುವ ಚರ್ಚೆಗಳಲ್ಲಿ ಭಾಗವಹಿಸುತ್ತಾರೆ. ತಮ್ಮ ಮಕ್ಕಳ ಜನ್ಮ ದಿನವನ್ನೂ ಆಚರಿಸಲು ಇಲ್ಲಿಗೆ ಬರುವವರ ಸಂಖ್ಯೆ ಅಧಿಕವಾಗಿದೆ. ಚಳವಳಿಯಲ್ಲಿ ಮತ್ತಷ್ಟು ಹುಮ್ಮಸ್ಸು ತುಂಬುವ ಗೀತೆಗಳನ್ನು, ಕವಿತೆಗಳನ್ನು ವಾಚಿಸುತ್ತಾರೆ. ಇಂತಹ ಒಂದು ಐತಿಹಾಸಿಕ, ವಿಭಿನ್ನ ಪ್ರತಿಭಟನೆ ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿ ಉಳಿದುಕೊಳ್ಳುತ್ತದೆ ಎಂಬ ಮಾತುಗಳು ಇಲ್ಲಿಗೆ ಭೇಟಿ ನೀಡುವವರು ಹೇಳುತ್ತಾರೆ.

ರೈತ ಹೋರಾಟದಲ್ಲಿ ಇನ್ನೂ ಹೆಚ್ಚು ಗಮನ ಸೆಳೆಯುವುದು ರಾಜಕೀಯ ನಾಯಕರಿಗೆ ನೀಡಿರುವ ಸ್ಥಾನಮಾನ. ಇಲ್ಲಿರುವ ವೇದಿಕೆಗಳನ್ನು ರಾಜಕೀಯ ಪಕ್ಷದ ಮುಖಂಡರು ಹತ್ತುವಂತಿಲ್ಲ. ಅಲ್ಲಿಯೇ ನಿಂತು ಮಾಧ್ಯಮಗಳಿಗೆ ಉತ್ತರ ಹೇಳುವಂತಿಲ್ಲ. ಮುಖ್ಯವಾಗಿ ತಮ್ಮ ಪಕ್ಷದ ಧ್ವಜ ತರುವಂತಿಲ್ಲ. ಹೋರಾಟಕ್ಕೆ ಬೆಂಬಲ ನೀಡುವವರು ಇಲ್ಲಿ ಬಂದು ಅವರ ಜೊತೆ ಕೂರಬಹುದು. ರಾಜಕೀಯ ಪಕ್ಷಗಳನ್ನು ತಮ್ಮ ಆಂದೋಲನದಿಂದ ದೂರವಿರಿಸಿರುವುದು ಈ ಹೋರಟದ ಮತ್ತೊಂದು ವಿಶೇಷ. ಯಾವುದೇ ಪ್ರತಿರೋಧಕ್ಕೆ ಯಾವ ರಾಜಕೀಯ ಮುಖಂಡನ ಅಗತ್ಯ ಇಲ್ಲ ಎಂಬುದನ್ನು ರೈತರು ಸಾಬೀತುಮಾಡಿದ್ದಾರಲ್ಲದೇ, ಜನರಿಂದಲೇ ನಿಜವಾದ ಪ್ರಜಾತಂತ್ರ ಎಂಬ ತತ್ವವನ್ನು ಎತ್ತಿಹಿಡಿದಿದ್ದಾರೆ.

ದೆಹಲಿ ಚಲೋ ಶುರುವಾಗಿ 60 ದಿನಗಳು ಆಗಿರಬಹುದು. ಆದರೆ ದೆಹಲಿ ಚಲೋ ಶುರುವಾಗಿ, ಇಂದು ಬೃಹತ್ ಮಟ್ಟದ ರೈತ ಹೋರಾಟಕ್ಕೆ ಕಾರಣವಾಗಿರುವ ಪಂಜಾಬ್‌ನಲ್ಲಿ ಈ ಆಂದೋಲನ ಪ್ರಾರಂಭವಾಗಿ ಐದು ತಿಂಗಳು ಸರಿದಿವೆ. ಇಂದಿಗೂ ಅಲ್ಲಿ ರೈಲ್ ರೋಖೋ ಚಳವಳಿ ನಡೆಯುತ್ತಲೆ ಇದೆ. ರೈತರೇ ಹೇಳುವಂತೆ ನಮ್ಮ ಹೋರಾಟ ಯಾವ ಪಕ್ಷದ ವಿರುದ್ಧವೂ ಅಲ್ಲ. ಕಾಯ್ದೆಗಳನ್ನು ಜಾರಿ ಮಾಡಿರುವ ಸರ್ಕಾರದ ವಿರುದ್ಧ. ಅಲ್ಲಿ ಯಾವ ಪಕ್ಷವಿದ್ದರೂ ನಾವು ಇದೇ ರೀತಿಯ ಪ್ರತಿಭಟನೆ ನಡೆಸುತ್ತಿದ್ದೆವು ಎನ್ನುತ್ತಾರೆ.

ಪ್ರತಿಭಟನೆಯೊಂದು ಇಷ್ಟೊಂದು ವಿಭಿನ್ನವಾಗಿ, ವಿಚಾರ ಕ್ರಾಂತಿಗೆ ಆಹ್ವಾನವಾಗಿಯೂ ನಡೆಸಬಹುದು ಎಂಬುದನ್ನು ದೇಶದ ರೈತರು ತೋರಿಸಿಕೊಟ್ಟಿದ್ದಾರೆ. ಈಗಾಗಲೇ ಲೋಹ್ರಿ ಹಬ್ಬವನ್ನು ಕಿಸಾನ್ ಲೋಹ್ರಿ ಎಂದು ರೈತರು ಆಚರಿಸಿದ್ದಾರೆ. ಆ ಹಬ್ಬಕ್ಕೆ ಹಾಕುವ ಸಾಂಪ್ರದಾಯಿಕ ಬೆಂಕಿ ಕೊಂಡದಲ್ಲಿ ಈ ರೈತವಿರೋಧಿ ಕಾಯ್ದೆಗಳ ಪ್ರತಿಗಳನ್ನು ಸಾಂಕೇತಿಕವಾಗಿ ಸುಟ್ಟಿದ್ದಾರೆ. ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವವನ್ನು ಕಿಸಾನ್ ಗಣರಾಜ್ಯೋತ್ಸವವನ್ನಾಗಿಸಿ, ಶಾಂತಿಯುತ ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲು ಮುಂದಾಗಿದ್ದಾರೆ. ಅಂದು ದೆಹಲಿಯ ಗಡಿಗಳಲ್ಲಿರುವ ಟ್ರ್ಯಾಕ್ಟರ್‌ಗಳ ಜೊತೆಗೆ ಪಂಜಾಬ್, ರಾಜಸ್ಥಾನ, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಿಂದಲೂ ಟ್ರ್ಯಾಕ್ಟರ್‌ಗಳು ದೆಹಲಿಗೆ ಬಂದುಸೇರಲಿವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಈ ಬಾರಿಯ ಗಣರಾಜ್ಯೋತ್ಸವದಂದು ಕಿಸಾನ್ ಗಣರಾಜ್ಯೋತ್ಸವ ನಡೆಯುವುದು ನಿಶ್ಚಿತ ಎನ್ನುವ ವಿಶ್ವಾಸ ಈ ದೇಶದ ರೈತರದ್ದು.


ಇದನ್ನೂ ಓದಿ: ಕಲೆಯಲ್ಲಿ ಅನುರಣನಗೊಂಡ ರೈತ ಪ್ರತಿಭಟನೆ – ಅಪ್ರತಿಮ ಹೋರಾಟಕ್ಕೆ ಸೃಜನಶೀಲತೆಯ ಸ್ಪರ್ಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...