Homeಮುಖಪುಟವಿಶೇಷ ವರದಿ: ಪ್ರತಿರೋಧಕ್ಕೆ ಹೊಸ ಅರ್ಥ ಮತ್ತು ಹುರುಪು ಕೊಟ್ಟ ದೆಹಲಿ ರೈತ ಹೋರಾಟ..!

ವಿಶೇಷ ವರದಿ: ಪ್ರತಿರೋಧಕ್ಕೆ ಹೊಸ ಅರ್ಥ ಮತ್ತು ಹುರುಪು ಕೊಟ್ಟ ದೆಹಲಿ ರೈತ ಹೋರಾಟ..!

- Advertisement -
- Advertisement -

[ದೆಹಲಿ ರೈತ ಹೋರಾಟವನ್ನು ವರದಿ ಮಾಡಲು ತೆರಳಿದ್ದ ನಾನುಗೌರಿ-ನ್ಯಾಯಪಥ ತಂಡದ ಮಮತ, ಈ ಹೋರಾಟ ತಮಗೆ ಮೂಡಿಸಿದ ಬೆರಗಿನ ಬಗ್ಗೆ ಇಲ್ಲಿ ಬಣ್ಣಿಸಿದ್ದಾರೆ]

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಒತ್ತಾಯಿಸಿ ನಡೆಯುತ್ತಿರುವ ರೈತ ಹೋರಾಟಕ್ಕೆ 60 ದಿನಗಳು ತುಂಬುತ್ತಿವೆ. ಇಷ್ಟು ದಿನಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಮೊದಲ ದಿನವಿದ್ದ ಉತ್ಸಾಹ ಇನ್ನೂ ಹಾಗೆ ಉಳಿಸಿಕೊಂಡಿರುವುದಷ್ಟೇ ಅಲ್ಲ ಅದು ದಿನೇದಿನೇ ವೃದ್ಧಿಸುತ್ತಿರುವುದು, ಪ್ರತಿಭಟನಾನಿರತ ರೈತರ ಕುರಿತ ಆಸಕ್ತಿ ಇಮ್ಮಡಿಸುವಂತೆ ಮಾಡುತ್ತದೆ.

ಯಾವುದೇ ಸರ್ಕಾರದ ಅಥವಾ ಖಾಸಗಿ ಕಂಪನಿಗಳ ವಿರುದ್ಧ ಪ್ರತಿಭಟನೆ ನಡೆಸುವಾಗ, ಆ ಹೋರಾಟಕ್ಕೆ ಇಳಿಯಲು ಕಾರಣವೇನು ಎಂಬುದು ಪ್ರತಿಭಟನಾನಿರತ ಎಲ್ಲರಿಗೂ ತಿಳಿದಿದ್ದರೆ, ಆ ಹೋರಾಟಕ್ಕೆ ಗಟ್ಟಿ ಅಡಿಪಾಯವೊಂದು ದೊರೆತಂತೆ. ಹೋರಾಟಕ್ಕೆ ಅಣಿಯಾಗಲು ಅಂತಹ ಉದ್ದೇಶ, ತಿಳಿವಳಿಕೆ ಮತ್ತು ಆಲೋಚನೆ ಅಗತ್ಯವಾಗಿ ಬೇಕು. ಆಗ ಆ ಹೋರಾಟ ಎಷ್ಟು ಧೀರ್ಘವಾದರೂ ಜನರು ಅಂಜುವುದಿಲ್ಲ. ಅಂತಹ ಒಂದು ಭದ್ರ ಬುನಾದಿ ಈ ಐತಿಹಾಸಿಕ ರೈತ ಹೋರಾಟಕ್ಕಿದೆ ಎಂಬುದು ದೆಹಲಿ ಗಡಿಗೆ ಭೇಟಿ ನೀಡಿದ ಯಾರಿಗಾದರೂ ಸುಲಭವಾಗಿ ತಿಳಿಯುತ್ತದೆ.

PC : Free Press journal

ಈ ಹೋರಾಟದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ತಾವು ಯಾವುದಕ್ಕಾಗಿ, ಯಾರಿಗಾಗಿ, ಏಕೆ ಈ ದೆಹಲಿಯ ಗಡಿಗಳಲ್ಲಿ ಇದ್ದೇವೆ ಎಂಬ ತಿಳಿವಿದೆ. ಇಂತಹ ತಿಳಿವಿಲ್ಲದೆ ಪ್ರತಿಭಟನೆಗಿಳಿದು, ಪ್ರತಿಭಟಿಸುತ್ತಿರುವ ಸ್ಥಳಕ್ಕೆ ಬಂದ 2-3 ದಿನಗಳಲ್ಲೇ, ಕಾರಣಗಳನ್ನು ತಿಳಿಸುವ ಕೆಲಸವನ್ನು ಹೋರಾಟನಿರತ ರೈತರು, ರೈತ ಮುಖಂಡರು ಮಾಡುತ್ತಾರೆ. ಈ ಕೆಲಸಕ್ಕಾಗಿಯೇ ದೆಹಲಿಯ ಸಿಂಘು, ಟಿಕ್ರಿ, ಗಾಝಿಪುರ್, ಚಿಲ್ಲಾ, ಶಹಜಾನ್‌ಪುರ್, ದಾರೂಹೇರಾ ಗಡಿಗಳಲ್ಲಿ ಅನೇಕ ವೇದಿಕೆಗಳಿವೆ. ಕೃಷಿ ಕಾನೂನಿನ ಸಾಧಕ-ಬಾಧಕಗಳ ಕುರಿತು ಅನೇಕ ತಜ್ಞರು, ರೈತರು, ರೈತ ಮುಖಂಡರು ಇಲ್ಲಿ ಇಡೀ ದಿನ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇನ್ನೂ ಅನೇಕ ಸಂಘ ಸಂಸ್ಥೆಗಳು ಕೃಷಿ ಕಾನೂನಿನ ಪ್ರತಿಗಳನ್ನು ವಿವಿಧ ಭಾಷೆಗಳಲ್ಲಿ ಅಚ್ಚು ಹಾಕಿಸಿ ಎಲ್ಲರಿಗೂ ಹಂಚುವ ಕೆಲಸ ಮಾಡುತ್ತಿವೆ.

ಒಂದು ಹೋರಾಟ ಇಷ್ಟು ದಿನಗಳ ಕಾಲ ಉಳಿಯಲು ಮತ್ತು ಯಾವುದೇ ಅಡ್ಡಿಆತಂಕಗಳು ಕಾಣಿಸಿಕೊಳ್ಳದಿರಲು, ಜನ ತಾವಾಗಿಯೇ ಇಲ್ಲಿ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಲು, ಅಲ್ಲಿ ಆಹಾರ ಪೂರೈಕೆಯ ಅಚ್ಚುಕಟ್ಟುತನವೂ ಕಾರಣ. ಹೆಚ್ಚಾಗಿ ಪ್ರತಿಭಟನೆಯೆಂದರೆ ಹಸಿದುಕೊಂಡು, ಬಿಸಿಲಿನಲ್ಲಿ ಕುಳಿತು ಕಷ್ಟಪಟ್ಟು ಪ್ರತಿಭಟನೆ ನಡೆಸುವುದನ್ನು ನೋಡಿರುವ ನಮಗೆ ಈ ಹೋರಾಟ ತುಂಬಾ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ಇಡೀ ದಿನ ಸಿಖ್ಖರು ತಮ್ಮ ಲಂಗರ್‌ಗಳಲ್ಲಿ ಪ್ರತಿಭಟನಾ ನಿರತರಿಗೆ ಅನ್ನ-ಆಹಾರಗಳ ವ್ಯವಸ್ಥೆಯ ಸೇವೆ ಮಾಡುತ್ತಾರೆ. ಹಸಿವಿಗೆ ಇಲ್ಲಿ ಜಾಗವಿಲ್ಲ. ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬ ರೈತರ ಈ ಪ್ರೀತಿಯ ಮತ್ತು ಕಾಳಜಿಯ ನಡೆ, ದೇಶದ ಹಲವು ಧರಣಿಗಳಲ್ಲಿ ಹಸಿವಿನಿಂದ, ಸುಸ್ತಿನಿಂದ ಬೀಳುವ ಪ್ರತಿಭಟನಾನಿರತರನ್ನು ಒಮ್ಮೆ ಕಣ್ಣ ಮುಂದೆ ಹಾಯುವಂತೆ ಮಾಡುತ್ತದೆ. ಸಿಖ್ ಸಮುದಾಯದ ಮತ್ತು ಪ್ರತಿಭಟನಾ ರೈತರ ಭ್ರಾತೃತ್ವ ನಿಜಕ್ಕೂ ಅನುಕರಣೀಯ ಅನ್ನಿಸದೆ ಇರದು.

ರೈತ ಹೋರಾಟ ಮೊದಮೊದಲು ಸುದ್ದಿಯಾಗಿದ್ದು ಅಲ್ಲಿನ ಊಟ ಉಪಚಾರದ ಕಾರಣಕ್ಕಾಗಿಯೇ ನಿಜ. ಏಕೆಂದರೆ ಪಂಜಾಬ್ ಮತ್ತು ಹರಿಯಾಣದ ರೈತರು ತಮ್ಮ ಲಂಗರ್‌ಗಳಲ್ಲಿ ಪ್ರತಿಭಟನಾನಿರತರಿಗೆ ನೀಡುವ ಆಹಾರ ಕೂಡ ಅಷ್ಟು ಉತ್ತಮವಾಗಿರುತ್ತದೆ. ಶುದ್ಧ ದೇಸಿ ತುಪ್ಪ, ಶಕ್ತಿವರ್ಧಕವಾಗಿರುವ ದ್ವಿದಳ ಧಾನ್ಯಗಳನ್ನು ಬಳಸಿ ಮಾಡುವ ಅವರ ಅಡುಗೆ ಅಂತಹ ಚಳಿಯಲ್ಲೂ ಶಕ್ತಿ ನೀಡಬಲ್ಲದು. ಜಿಲೇಬಿ, ರಸಗುಲ್ಲ, ಹಲ್ವಾ, ಖೀರು, ಪಿಜ್ಜಾ, ಬರ್ಗರ್‌ಗಳನ್ನು ನೀಡುವ ಲಂಗರ್‌ಗಳು, ಜ್ಯೂಸ್, ಹಾಲು, ಟೀ ನೀಡುವ ಲಂಗರ್‌ಗಳು, ಕಡಲೇಕಾಯಿ, ಮೊಸಂಬಿ, ಪೇರಲೆ ಹಣ್ಣುಗಳನ್ನು ಹಂಚಲು ಬರುವ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗಿವೆ. ಮೊದಲು ಹೊಟ್ಟೆ ತುಂಬಾ ಊಟ ಮಾಡಿ ಆಮೇಲೆ ಪ್ರತಿಭಟನೆಗೆ ಕುಳಿತುಕೊಳ್ಳಿ ಎನ್ನುವ ಈ ಹೋರಾಟ ನಾವು ಓದಿರುವ, ನೋಡಿರುವ ಆಂದೋಲನಗಳಿಗಿಂತ ತುಂಬಾ ವಿಭಿನ್ನವಾದದ್ದು. ಇವರ ಆಹಾರದ ಬಗ್ಗೆ ಅಪಹಾಸ್ಯ ಮಾಡಿ ವಿಕೃತ ಮೆರೆದ ಜನರು ಇಲ್ಲಿಗೆ ತೆರಳಿ ಒಮ್ಮೆ ರೈತರ ಪ್ರೀತಿಯ ಆತಿಥ್ಯವನ್ನು ಸವಿದರೆ ಅವರ ಮನಸ್ಸು ಬದಲಾಗಬಹುದೇನೋ!

ರೈತ ಹೋರಾಟ
PC: Business Standard

ರೈತ ಹೋರಾಟದಲ್ಲಿ ಎಲ್ಲಾ ಗಡಿಗಳನ್ನು ಸುತ್ತಿದ ಮೇಲೂ ನಿಮಗೆ ಮತ್ತೆ ಮತ್ತೆ ಕಾಣಿಸುವುದು, ಮತ್ತೆ ಮತ್ತೆ ಕಾಡುವುದು ರೈತರ ಒಗ್ಗಟ್ಟು. ಇಲ್ಲಿ ಪಂಜಾಬ್, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಕರ್ನಾಟಕ, ಜಮ್ಮು-ಕಾಶ್ಮೀರ, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ, ವಿಭಿನ್ನ ಮನಸ್ಥಿತಿಯ ಜನರು ಇದ್ದಾರೆ. ಈ ವೈವಿಧ್ಯತೆಯ ಜನರ ಧ್ಯೇಯ ಮಾತ್ರ ಒಂದೇ ಅಗಿದೆ. ಆಂದೋಲನದಲ್ಲಿರುವ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಒಂದೇ ಮಾತು. ಕೇಂದ್ರ ಸರ್ಕಾರ ಕರಾಳ ಕೃಷಿ ಕಾನೂನುಗಳನ್ನು ವಾಪಾಸ್ ಪಡೆಯಬೇಕು ಎಂಬುದು. ಈ ವಿಚಾರದಲ್ಲಿ ಪ್ರತಿಭಟನೆ ನಡೆಯುತ್ತಿರುವ ಯಾವ ಗಡಿಯಲ್ಲಿ ಹೋಗಿ ಯಾರನ್ನು ಪ್ರಶ್ನಿಸಿದರೂ ಇದೇ ಉತ್ತರವಾಗಿರುತ್ತದೆ.

ಈ ಮೊದಲು ನಾವು ನೋಡಿರುವ ಹೋರಾಟಗಳ ಹಿಂದೆ ಒಂದು ಪಕ್ಷ ಅಥವಾ ಒಂದು ಸಂಘಟನೆ ಇರುವುದು ಸಾಮಾನ್ಯವಾಗಿತ್ತು. ಅವುಗಳು ಎಷ್ಟೇ ನೈಜವಾಗಿದ್ದರೂ, ನೈಜ ಕಾಳಜಿಗಳನ್ನು ಹೊಂದಿದ್ದರೂ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸುವುದು ಆಳುವ ಸರ್ಕಾರಗಳಿಗೆ ಸುಲಭವಾಗಿರುತ್ತಿತ್ತು. ಆದರೆ ಈ ಬಾರಿ ಅದಕ್ಕೆ ಅವಕಾಶವೇ ಇಲ್ಲದಂತಾಗಿದೆ. ಇದು ಪೂರ್ತಿಯಾಗಿ ರೈತರೇ ಮುನ್ನಡೆಸುತ್ತಿರುವ ಆಂದೋಲನ ಎಂಬುದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವವರ ಗಮನಕ್ಕೆ ಬಂದೆ ಬರುತ್ತದೆ.

ಸಿಖ್ ಸಮುದಾಯದ ಯುವಕರ ಸೇವಾ ಮನೋಭಾವ ಕೂಡ ರೈತ ಹೋರಾಟ ಇಲ್ಲಿಯವರೆಗೆ ಯಶಸ್ವಿಯಾಗಿರುವುದಕ್ಕೆ ಮತ್ತೊಂದು ಕಾರಣವಾಗಿದೆ. ಯಾವುದೇ ಇರಿಸು-ಮುರುಸು ಇಲ್ಲದೆ, ಎಂತಹ ಸಿರಿವಂತನಾದರೂ ಇನ್ನೊಬ್ಬರ ಬೂಟ್ ಪಾಲಿಶ್ ಮಾಡಲು ಮುಂದಾಗುವ ಇವರ ಹೃದಯ ಶ್ರೀಮಂತಿಕೆ ನಿಜಕ್ಕೂ ಅನುಕರಣೀಯ. ಅವಿಸ್ಮರಣೀಯ ಕೂಡ. ವಿದೇಶಿ ಕೆಲಸಗಳನ್ನು ಬಿಟ್ಟು ಬಂದು ಇಲ್ಲಿ ಹೊಲಿಗೆ ಸೇವೆ ನೀಡುವವರು, ಪಂಜಾಬ್‌ನಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಯುವಕ ಇಲ್ಲಿ ರೈತರ ಬಟ್ಟೆ ತೊಳೆಯಲು, ಚಪ್ಪಲಿ ಜೋಡಿಸಲು, ಶೂ ಪಾಲಿಶ್ ಮಾಡಲು, ತಲೆಗೆ ಎಣ್ಣೆ ಹಚ್ಚಲು ಕೂರುವುದು ನಿಜಕ್ಕೂ ಎಂಥವರನ್ನೂ ಮೂಕ ವಿಸ್ಮಿತರನ್ನಾಗಿಸುತ್ತದೆ. ಇಂತಹ ವಿಚಾರಗಳನ್ನು ನೋಡಲು ಮತ್ತು ಚಿಂತಿಸಲು ನಮ್ಮಲ್ಲಿನ ಪೂರ್ವಾಗ್ರಹಪೀಡಿತ ಭಾವನೆಗಳನ್ನು ಬಿಟ್ಟು ಪ್ರತಿಭಟನಾ ಸ್ಥಳಕ್ಕೆ ಹೋಗಬೇಕಾಗುತ್ತದೆ ಎಂಬುದು ಅಷ್ಟೇ ಸತ್ಯ.

PC : Malyala Manorama

ದೆಹಲಿ ಒಂದು ನಗರ ಎಂದು ಎಲ್ಲರಿಗೂ ತಿಳಿದಿರುವುದೇ, ಆದರೆ ಈ ಗಡಿಗಳಲ್ಲಿ ಸೃಷ್ಟಿಯಾಗಿರುವ ನಗರಗಳದ್ದು ಬೇರೆಯೇ ಮಾದರಿ. ದೆಹಲಿ ಮತ್ತು ಸುತ್ತಮುತ್ತಲಿನ ಜನ ಇಲ್ಲಿಗೆ ಪ್ರವಾಸಿಗರಾಗಿ ಬರುತ್ತಿದ್ದಾರೆ. ಮಕ್ಕಳನ್ನು ಕರೆದುಕೊಂಡು ಕುಟುಂಬ ಸಮೇತ ಭೇಟಿ ನೀಡುವ ಜನ, ರೈತರ ಜೊತೆಗೆ ಹೋರಾಟದ ಬಗ್ಗೆ ಮಾತುಕತೆ ನಡೆಸುತ್ತಾರೆ. ಇಲ್ಲಿ ತಲೆಯೆತ್ತಿರುವ ಪುಸ್ತಕಭಂಡಾರಗಳಿಂದ ಪುಸ್ತಕಗಳನ್ನು ಖರೀದಿಸುತ್ತಾರೆ. ಅಲ್ಲಯೇ ನಡೆಯುವ ಚರ್ಚೆಗಳಲ್ಲಿ ಭಾಗವಹಿಸುತ್ತಾರೆ. ತಮ್ಮ ಮಕ್ಕಳ ಜನ್ಮ ದಿನವನ್ನೂ ಆಚರಿಸಲು ಇಲ್ಲಿಗೆ ಬರುವವರ ಸಂಖ್ಯೆ ಅಧಿಕವಾಗಿದೆ. ಚಳವಳಿಯಲ್ಲಿ ಮತ್ತಷ್ಟು ಹುಮ್ಮಸ್ಸು ತುಂಬುವ ಗೀತೆಗಳನ್ನು, ಕವಿತೆಗಳನ್ನು ವಾಚಿಸುತ್ತಾರೆ. ಇಂತಹ ಒಂದು ಐತಿಹಾಸಿಕ, ವಿಭಿನ್ನ ಪ್ರತಿಭಟನೆ ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿ ಉಳಿದುಕೊಳ್ಳುತ್ತದೆ ಎಂಬ ಮಾತುಗಳು ಇಲ್ಲಿಗೆ ಭೇಟಿ ನೀಡುವವರು ಹೇಳುತ್ತಾರೆ.

ರೈತ ಹೋರಾಟದಲ್ಲಿ ಇನ್ನೂ ಹೆಚ್ಚು ಗಮನ ಸೆಳೆಯುವುದು ರಾಜಕೀಯ ನಾಯಕರಿಗೆ ನೀಡಿರುವ ಸ್ಥಾನಮಾನ. ಇಲ್ಲಿರುವ ವೇದಿಕೆಗಳನ್ನು ರಾಜಕೀಯ ಪಕ್ಷದ ಮುಖಂಡರು ಹತ್ತುವಂತಿಲ್ಲ. ಅಲ್ಲಿಯೇ ನಿಂತು ಮಾಧ್ಯಮಗಳಿಗೆ ಉತ್ತರ ಹೇಳುವಂತಿಲ್ಲ. ಮುಖ್ಯವಾಗಿ ತಮ್ಮ ಪಕ್ಷದ ಧ್ವಜ ತರುವಂತಿಲ್ಲ. ಹೋರಾಟಕ್ಕೆ ಬೆಂಬಲ ನೀಡುವವರು ಇಲ್ಲಿ ಬಂದು ಅವರ ಜೊತೆ ಕೂರಬಹುದು. ರಾಜಕೀಯ ಪಕ್ಷಗಳನ್ನು ತಮ್ಮ ಆಂದೋಲನದಿಂದ ದೂರವಿರಿಸಿರುವುದು ಈ ಹೋರಟದ ಮತ್ತೊಂದು ವಿಶೇಷ. ಯಾವುದೇ ಪ್ರತಿರೋಧಕ್ಕೆ ಯಾವ ರಾಜಕೀಯ ಮುಖಂಡನ ಅಗತ್ಯ ಇಲ್ಲ ಎಂಬುದನ್ನು ರೈತರು ಸಾಬೀತುಮಾಡಿದ್ದಾರಲ್ಲದೇ, ಜನರಿಂದಲೇ ನಿಜವಾದ ಪ್ರಜಾತಂತ್ರ ಎಂಬ ತತ್ವವನ್ನು ಎತ್ತಿಹಿಡಿದಿದ್ದಾರೆ.

ದೆಹಲಿ ಚಲೋ ಶುರುವಾಗಿ 60 ದಿನಗಳು ಆಗಿರಬಹುದು. ಆದರೆ ದೆಹಲಿ ಚಲೋ ಶುರುವಾಗಿ, ಇಂದು ಬೃಹತ್ ಮಟ್ಟದ ರೈತ ಹೋರಾಟಕ್ಕೆ ಕಾರಣವಾಗಿರುವ ಪಂಜಾಬ್‌ನಲ್ಲಿ ಈ ಆಂದೋಲನ ಪ್ರಾರಂಭವಾಗಿ ಐದು ತಿಂಗಳು ಸರಿದಿವೆ. ಇಂದಿಗೂ ಅಲ್ಲಿ ರೈಲ್ ರೋಖೋ ಚಳವಳಿ ನಡೆಯುತ್ತಲೆ ಇದೆ. ರೈತರೇ ಹೇಳುವಂತೆ ನಮ್ಮ ಹೋರಾಟ ಯಾವ ಪಕ್ಷದ ವಿರುದ್ಧವೂ ಅಲ್ಲ. ಕಾಯ್ದೆಗಳನ್ನು ಜಾರಿ ಮಾಡಿರುವ ಸರ್ಕಾರದ ವಿರುದ್ಧ. ಅಲ್ಲಿ ಯಾವ ಪಕ್ಷವಿದ್ದರೂ ನಾವು ಇದೇ ರೀತಿಯ ಪ್ರತಿಭಟನೆ ನಡೆಸುತ್ತಿದ್ದೆವು ಎನ್ನುತ್ತಾರೆ.

ಪ್ರತಿಭಟನೆಯೊಂದು ಇಷ್ಟೊಂದು ವಿಭಿನ್ನವಾಗಿ, ವಿಚಾರ ಕ್ರಾಂತಿಗೆ ಆಹ್ವಾನವಾಗಿಯೂ ನಡೆಸಬಹುದು ಎಂಬುದನ್ನು ದೇಶದ ರೈತರು ತೋರಿಸಿಕೊಟ್ಟಿದ್ದಾರೆ. ಈಗಾಗಲೇ ಲೋಹ್ರಿ ಹಬ್ಬವನ್ನು ಕಿಸಾನ್ ಲೋಹ್ರಿ ಎಂದು ರೈತರು ಆಚರಿಸಿದ್ದಾರೆ. ಆ ಹಬ್ಬಕ್ಕೆ ಹಾಕುವ ಸಾಂಪ್ರದಾಯಿಕ ಬೆಂಕಿ ಕೊಂಡದಲ್ಲಿ ಈ ರೈತವಿರೋಧಿ ಕಾಯ್ದೆಗಳ ಪ್ರತಿಗಳನ್ನು ಸಾಂಕೇತಿಕವಾಗಿ ಸುಟ್ಟಿದ್ದಾರೆ. ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವವನ್ನು ಕಿಸಾನ್ ಗಣರಾಜ್ಯೋತ್ಸವವನ್ನಾಗಿಸಿ, ಶಾಂತಿಯುತ ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲು ಮುಂದಾಗಿದ್ದಾರೆ. ಅಂದು ದೆಹಲಿಯ ಗಡಿಗಳಲ್ಲಿರುವ ಟ್ರ್ಯಾಕ್ಟರ್‌ಗಳ ಜೊತೆಗೆ ಪಂಜಾಬ್, ರಾಜಸ್ಥಾನ, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಿಂದಲೂ ಟ್ರ್ಯಾಕ್ಟರ್‌ಗಳು ದೆಹಲಿಗೆ ಬಂದುಸೇರಲಿವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಈ ಬಾರಿಯ ಗಣರಾಜ್ಯೋತ್ಸವದಂದು ಕಿಸಾನ್ ಗಣರಾಜ್ಯೋತ್ಸವ ನಡೆಯುವುದು ನಿಶ್ಚಿತ ಎನ್ನುವ ವಿಶ್ವಾಸ ಈ ದೇಶದ ರೈತರದ್ದು.


ಇದನ್ನೂ ಓದಿ: ಕಲೆಯಲ್ಲಿ ಅನುರಣನಗೊಂಡ ರೈತ ಪ್ರತಿಭಟನೆ – ಅಪ್ರತಿಮ ಹೋರಾಟಕ್ಕೆ ಸೃಜನಶೀಲತೆಯ ಸ್ಪರ್ಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...