’ವಾರಕ್ಕೆ 3 ರಿಂದ 4 ದಿನ ಕೆಲಸ ಮಾಡುತ್ತಿದ್ದ ನಾವು, ಕೊರೊನಾ ಸಂಕಷ್ಟದಲ್ಲಿ ದಿನದ 24 ಗಂಟೆಗಳು ಕಾರ್ಯನಿರ್ವಹಿಸುತ್ತಿದ್ದೇವೆ. ಕೆಲಸ ಮುಗಿಸಿ ನಮಗೆಲ್ಲಿ ಸೋಂಕು ಹರಡಿದೆಯೋ, ಮನೆಯಲ್ಲಿ ಯಾರಿಗಾದರೂ ಹಬ್ಬುತ್ತದೆಯೋ ಎಂಬ ಭಯದಲ್ಲೇ ಮನೆಗೆ ಕಾಲಿಡುತ್ತೇವೆ. ಇದು ನಮ್ಮ ಕರ್ತವ್ಯ ಎಂದು ನಮ್ಮ ಪ್ರಾಣವನ್ನು ಒತ್ತೆ ಇಟ್ಟು ಕೆಲಸ ಮಾಡುತ್ತಿದ್ದೇವೆ ಆದರೆ, ನಾವಿರುವ ಹಳ್ಳಿಗಳಲ್ಲೇ ನಮಗೆ ಗೌರವ ದೊರೆಯುವುದಿಲ್ಲ. ಈ ಸಮಯದಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡಬೇಕಾದ ಯುವ ಜನತೆಯೇ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ” ಎಂದು ನೋವು ತೋಡಿಕೊಳ್ಳುತ್ತಾರೆ ಆಶಾ ಕಾರ್ಯಕರ್ತೆ ಪ್ರಿಯಾಂಕಾ.
ಹೌದು, ಕೊರೊನಾ ಸಾಂಕ್ರಾಮಿಕ ರೋಗ ಹಳ್ಳಿಗಳಿಗೆ ಲಗ್ಗೆಯಿಟ್ಟಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ವಹಿಸಬೇಕಿರುವುದು ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಎರಡು ಬಾರಿ ಲಾಕ್ಡೌನ್ ಮುಂದುವರೆಸಲಾಗಿದೆ. ಹಳ್ಳಿಗಳಲ್ಲಿ ಕೊರೊನಾ ನಿಯಂತ್ರಣಕ್ಕೆ, ಕೊರೊನಾ ಜಾಗೃತಿಗೆ ಮೂಡಿಸುವಲ್ಲಿ ಮುಂಚೂಣಿಯಲ್ಲಿ ಇರುವವರು ಈ ಆಶಾ ಕಾರ್ಯಕರ್ತೆಯರು. ಇವರ ಸೇವೆ ನಿಜಕ್ಕೂ ಶ್ಲಾಘನಿಯವಾದದ್ದು. ಆದರೆ ಅವರಿಗೆ ಅಗೌರವ ಸೂಚಿಸುವ ಘಟನೆಗಳು ವರದಿಯಾಗುತ್ತಿರುವುದು ದುರಂತ.
ಸರ್ಕಾರ ನೀಡುವ ಅಲ್ಪ ಗೌರವಧನದಲ್ಲಿ ಜೀವನ ನಡೆಸುವ ಇವರು ಪ್ರತಿ ಬಾರಿಯು ತಮ್ಮ ಬೇಡಿಕೆ ಈಡೇರಿಕೆಗಾಗಿ ರಾಜಧಾನಿ ಬೆಂಗಳೂರಿನ ಕದ ತಟ್ಟಿದ್ದಾರೆ. ಅಲ್ಪ ಸ್ವಲ್ಪ ಪರಿಹಾರ ಪಡೆದಿದ್ದಾರೆ. ಆದರೆ, ಕೊರೊನಾದಂತಹ ಕಾಲದಲ್ಲಿ ಇವರ ಸೇವೆ ಅಮೂಲ್ಯವಾಗಿದೆ. ಪ್ರಾಣವನ್ನು ಲೆಕ್ಕಿಸದೇ ಕೊರೊನಾ ಸೋಂಕಿತರ ಸಹಾಯಕ್ಕೆ ನಿಲ್ಲುತ್ತಿದ್ದಾರೆ. ಆದರೆ, ಸಮಾಜ ಇವರನ್ನು ನಡೆಸಿಕೊಳ್ಳುತ್ತಿರುವ ರೀತಿ ಮಾತ್ರ ಅಸಹನೀಯವಾಗಿದೆ. ಹಳ್ಳಿಗಳಲ್ಲಿ ತಮ್ಮನ್ನು ನಡೆಸಿಕೊಳ್ಳುವ ರೀತಿಗೆ ಆಶಾ ಕಾರ್ಯಕರ್ತರು ತೀವ್ರ ಬೇಸರ ವ್ಯಕ್ತಪಡಿಸುತ್ತಾರೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಸಾಲಕಟ್ಟೆ ತಾಂಡ್ಯ ಉಪ ವಿಭಾಗದಲ್ಲಿ ಆಶಾ ಕಾರ್ಯಕರ್ತೆಯಾಗಿ ಸುಮಾರು ನಾಲ್ಕು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪ್ರಿಯಾಂಕಾ ನಾನುಗೌರಿ.ಕಾಂ ಜೊತೆ ತಮ್ಮ ಕೆಲಸದ ಅನುಭವ, ಕೆಲಸದ ಸಮಯದಲ್ಲಿ ತಾವು ಅನುಭವಿಸುವ ಸವಾಲುಗಳನ್ನು ಹಂಚಿಕೊಂಡಿದ್ದು ಹೀಗೆ.
ಇದನ್ನೂ ಓದಿ: ಕನ್ನಡವನ್ನು ಕೊಳಕು ಭಾಷೆ ಎಂದು ತೋರಿಸಿದ್ದ ವೆಬ್ಸೈಟ್, ಕನ್ನಡಿಗರ ಆಕ್ರೋಶಕ್ಕೆ ಮಣಿದ ಗೂಗಲ್
’ನನಗೆ 7 ವರ್ಷದ ಮಗ ಮತ್ತು 5 ವರ್ಷದ ಹೆಣ್ಣು ಮಗುವಿದೆ. ನಾಲ್ಕು ಜನರ ಕುಟುಂಬ ನಮ್ಮದು. ಪ್ರತಿದಿನ ಕೆಲಸ ಮುಗಿಸಿ ಮನೆಗೆ ಭಯದಲ್ಲೇ ಹೋಗುತ್ತೇವೆ. ಎಷ್ಟೇ ಸುರಕ್ಷತಾ ನಿಯಮಗಳನ್ನು ಪಾಲಿಸಿದ್ದರೂ ಮಕ್ಕಳಿರುವ ಮನೆಯಲ್ಲಿ ಕೊರೊನಾ ಭಯ ಇರುತ್ತದೆ. ಆದರೆ, ನಮ್ಮ ಕೆಲಸ ನಾನು ಮಾಡಬೇಕು. ಕೊರೊನಾ ಸೋಂಕು ಹೆಚ್ಚಾದಾಗಿನಿಂದ ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದೇವೆ. ನನ್ನ ವ್ಯಾಪ್ತಿಯಲ್ಲಿ ಮೂರು ಹಳ್ಳಿಗಳಿವೆ. ಬೇರೆ ಹಳ್ಳಿಗಳಿಗೆ ಹೋದಾಗ ಜನ ನೀಡುವ ಸ್ಪಂದನೆ, ನಾವು ವಾಸವಿರುವ ಹಳ್ಳಿಯಲ್ಲಿ ದೊರೆಯುವುದಿಲ್ಲ’ ಎನ್ನುತ್ತಾರೆ.
’ಲಾಕ್ಡೌನ್ ಮಾಡಿ ಬಸ್, ಆಟೋ ಎಲ್ಲಾ ನಿಲ್ಲಿಸಿರುವ ಸರ್ಕಾರಕ್ಕೆ ನಾವು ಹೇಗೆ ಓಡಾಡುತ್ತೇವೆ. ಹಳ್ಳಿ ಹಳ್ಳಿಗೆ ಹೇಗೆ ಹೋಗುತ್ತೇವೆ ಎಂಬ ಬಗ್ಗೆ ಚಿಂತೆ ಇಲ್ಲ. ರಸ್ತೆಯಲ್ಲಿ ಓಡಾಡುವ ಒಂದೋ, ಎರಡೋ ಬೈಕ್ಗಳಿಗೆ ಕೈ ಅಡ್ಡ ಹಾಕಿ ಅವರ ಜೊತೆಗೆ ಹೋಗಬೇಕು. ಅದು ಬೈಕ್ ಓಡಿಸುವವರು ಸ್ಪಲ್ಪ ಮಾನವೀಯತೆ ಇರುವವರಿದ್ದರೆ ನಿಲ್ಲಿಸುತ್ತಾರೆ. ಬೇರೆಯವರು ನಮ್ಮ ಯೂನಿಫಾರಂ ನೋಡಿ ಗಾಡಿಯನ್ನು ಕೂಡ ನಿಲ್ಲಿಸುವುದಿಲ್ಲ. ಮತ್ತೆ ಕೆಲವರು ಗಾಡಿ ನಿಲ್ಲಿಸಿ, ಕ್ಷಮಿಸಿ ನಿಮಗೆ ಡ್ರಾಪ್ ಕೊಡಲು ಆಗುವುದಿಲ್ಲ. ನೀವು ಕೊರೊನಾ ಸೋಂಕಿತರ ಜೊತೆ ಇರುತ್ತಿರಾ ಎನ್ನುತ್ತಾರೆ’ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಪ್ರಿಯಾಂಕಾ.
’ಕಷ್ಟವೋ ಸುಖವೋ ಹೇಗೋ ಮಾಡಿ ಯಾರಾದ್ರೂ ಪುಣ್ಯಾತ್ಮರ ಗಾಡಿಯಲ್ಲಿ ಡ್ರಾಪ್ ತೆಗೆದುಕೊಂಡರೆ, ಊರಿನಲ್ಲಿ ಹಲವರ ಬಾಯಿಗೆ ಆಹಾರವಾಗಬೇಕು. ನಮ್ಮ ಕೆಲಸದ ಬಗ್ಗೆ ಕಿಂಚಿತ್ತು ತಿಳುವಳಿಕೆ ಇಲ್ಲದ ಇವರು ಊರಿನಲ್ಲಿ ನಮ್ಮ ಬಗ್ಗೆ, ಯಾರ್ಯಾರದ್ದೋ ಬೈಕ್ನಲ್ಲಿ ಸುತ್ತುತ್ತಾರೆ ಎಂದು ಕೆಟ್ಟದಾಗಿ ಪ್ರಚಾರ ಮಾಡುತ್ತಾರೆ. ನಾನು ಕೂಡ ಹಲವು ಬಾರಿ ಈ ಬಗ್ಗೆ ಸಿಡಿದೆದ್ದಿದ್ದೇನೆ. ಪೊಲೀಸ್, ತಹಶಿಲ್ದಾರ್ ವರೆಗೂ ದೂರು ತಲುಪುವಂತೆ ಮಾಡಿದ್ದೇನೆ. ಆದರೆ, ಸ್ವತಃ ಇವರಲ್ಲಿ ಜಾಗೃತಿ ಬರುವವರೆಗೂ ಏನೂ ಮಾಡಿದರು ಪ್ರಯೋಜನವಿಲ್ಲವಷ್ಟೇ’ ಎಂದು ನಿಟ್ಟುಸಿರು ಬಿಡುತ್ತಾರೆ.
’ಒಂದು ತರಹ ನಿರ್ಲಕ್ಷಿತ ಸಮುದಾಯ ನಮ್ಮದು ಎನಿಸುತ್ತದೆ. ಕೆಲವೊಮ್ಮೆ ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ನರ್ಸ್ಗಳು ನಮ್ಮನ್ನು ಲೆಕ್ಕಕ್ಕೆ ತೆಗೆದುಕೊಲ್ಳುವುದಿಲ್ಲ. ಇತ್ತ ಜನ ನಮ್ಮನ್ನು ನೋಡಿದರೇ ಅಂಟು ರೋಗವನ್ನು ನೋಡಿದಂತೆ ದೂರ ಸರಿಯುತ್ತಾರೆ. ನಮ್ಮನ್ನು ನೋಡಿದರೇ ಬಾಗಿಲು ಮುಚ್ಚುತ್ತಾರೆ. ಕೊರೊನಾ ಟೆಸ್ಟ್ ಮಾಡಿಸಲು ಬಂದರು ಎಂದು ಬೈಯುತ್ತಾರೆ. ಇಂತಹ ಅಪಮಾನಗಳನ್ನು ನುಂಗಿಕೊಂಡು ನಾವು ಯಾರಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ಇಂದಿನ ಯುವಕರು ಅರ್ಥ ಮಾಡಿಕೊಳ್ಳಬೇಕಿದೆ. ಅವರು ಕೊರೊನಾ ಕಾಲದಲ್ಲಿ ಜನರಿಗೆ ನೆರವಾಗದಿದದ್ದರೂ, ನಮ್ಮ ಕೆಲಸ ಮಾಡಲು ನಮಗೆ ತೊಂದರೆ ನೀಡದಿದ್ದರೆ ಸಾಕು’ ಎಂದು ಮನವಿ ಮಾಡುತ್ತಾರೆ.
ಆಶಾ ಕಾರ್ಯಕರ್ತೆಯರ ಸಂಕಷ್ಟ ಒಂದೆರಡಲ್ಲ. ಹಳ್ಳಿಗಳಲ್ಲಿ ಕೊರೊನಾ ಜಾಗೃತಿ ಮೂಡಿಸಲು ಹೋದರೂ ದೂರ ಓಡಿಹೋಗುವಂತಹ ಪರಿಸ್ಥಿತಿ ಇದೆ. ಸೋಂಕು ಇದೆ ಎಂಬುದನ್ನೇ ಮುಚ್ಚಿಟ್ಟುಕೊಳ್ಳೂವ ಜನ, ಇವರನ್ನು ಕಂಡರೇ ಕೆಂಡಕಾರುತ್ತಾರೆ. ಆದರೂ, ಛಲಬಿಡದೇ ಕೆಲಸ ಮಾಡುವ ಇವರ ಧೈರ್ಯಕ್ಕೆ ಮೆಚ್ಚಲೇಬೇಕು. ಕೊರೊನಾ ಸೋಂಕಿಗೆ ಒಳಗಾದ ವ್ಯಕ್ತಿಯನ್ನು ಮನೆಯಿಂದ ಆಸ್ಪತ್ರೆ/ಕೋವಿಡ್ ಸೆಂಟರ್ಗೆ ಸೇರಿಸುವುದಷ್ಟೇ ಇವರ ಕೆಲಸವಲ್ಲ. ಕೊರೊನಾ ಸೋಂಕಿತರನ್ನು ಕೊರೊನಾ ಕೇಂದ್ರಕ್ಕೆ ಕಳುಹಿಸಿದ ಬಳಿಕ ಅವರಿದ್ದ ಬೀದಿಯನ್ನು ಸ್ಯಾನಿಟೈಜ್ ಮಾಡಿಸುವುದು, ಸೋಂಕಿತನ ಸಂಪರ್ಕಕ್ಕೆ ಬಂದವರನ್ನು ಮನವೊಲಿಸಿ ಕೋವಿಡ್ ಟೆಸ್ಟ್ ಮಾಡಿಸುವುದು, ಹೋಂ ಐಸೋಲೇಷನ್ ಆದವರನ್ನು ಪ್ರತಿದಿನ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸುವುದು, ಒಂದು ಗ್ರಾಮದಲ್ಲಿ 10 ಕ್ಕಿಂತ ಹೆಚ್ಚು ಮಂದಿಗೆ ಸೋಂಕಿದ್ದರೇ ಅಲ್ಲಿ ಜಾಗೃತಿ ಜಾಥಾ ಮಾಡಿಸುವುದು… ಹೇಳುತ್ತಾ ಹೋದರೆ ಪಟ್ಟಿ ಮುಗಿಯುವುದಿಲ್ಲ.
ಕಳೆದ ವಾರವಷ್ಟೇ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಆನ್ಲೈನ್ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಸರ್ಕಾರಕ್ಕೆ ತಮ್ಮ ಮನವಿ ಸಲ್ಲಿಸಿದ್ದಾರೆ. ಗುರುವಾರ ಲಾಕ್ಡೌನ್ 2ನೇ ಹಂತದ ಪರಿಹಾರ ಪ್ಯಾಕೇಜ್ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆಶಾ ಕಾರ್ಯಕರ್ತೆಯರಿಗೆ 3000 ಸಾವಿರ ರೂಪಾಯಿ ಘೋಷಿಸಿದ್ದಾರೆ. ಆದರ, ಹಳ್ಳಿಗಳಲ್ಲಿ ಕೊರೊನಾ ಹರಡದಂತೆ ಕಷ್ಟಪಡುತ್ತಿರುವ ಇವರಿಗೆ ಇದು ಅರೆಕಾಸಿನ ಮಜ್ಜಿಗೆಯಂತೆ ಎಂದರೆ ತಪ್ಪಾಗಲಾರದು.
ಈ ಸಾಂಕ್ರಾಮಿಕ ರೋಗದ ಬಗ್ಗೆ ಮೂಡಿಸುವ ಜಾಗೃತಿಯ ಜೊತೆಗೆ ಜೀವದ ಹಂಗು ತೊರೆದು ಕೆಲಸ ಮಾಡುವ ಫ್ರಂಟ್ ಲೈನ್ ವಾರಿಯರ್ಗಳಾದ ಆಶಾ ಕಾರ್ಯಕರ್ತೆಯರ ಕೆಲಸದ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸುವುದು ಈಗಿನ ಅನಿವಾರ್ಯ. ಹಳ್ಳಿ ಹಳ್ಳಿ ಸುತ್ತುವ ಇವರಿಗೆ ವಾಹನದ ವ್ಯವಸ್ಥೆ ತಕ್ಷಣ ಆಗಬೇಕಿದೆ. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂಜರಿಯುವ ಇವರಿಗೆ ವೈದ್ಯರು, ಪಿಡಿಒಗಳು ಮುಖ್ಯವಾಗಿ ಹಳ್ಳಿಯ ಜನರು ಧೈರ್ಯ ತುಂಬಬೇಕಿದೆ. ಸರ್ಕಾರದಿಂದ ಬರಬೇಕಾದ ಸೌಲಭ್ಯಗಳಿಗಾಗಿ ಪ್ರತಿಭಟನೆ ನಡೆಸಿ ಪರಿಹಾರ ಪಡೆದುಕೊಳ್ಳಬಹುದು. ಆದರೆ, ತಮ್ಮದೇ ಊರಿನ ಜನ ನೀಡುವ ಹಿಂಸೆ, ಜನರಿಗಾಗಿ ಕೆಲಸ ಮಾಡುವವರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದನ್ನು ಜನರು ಅರ್ಥ ಮಾಡಿಕೊಡಿಕೊಂಡು ಅವರಿಗೆ ಗೌರವ ನೀಡಬೇಕು. ಅವರ ಕೆಲಸ ಮಾಡಲು ಅನುವು ಮಾಡಿಕೊಟ್ಟು ಸಹಕರಿಸಬೇಕು. ಆ ಮೂಲಕ ಕೊರೊನಾ ಸೋಂಕು ಉಲ್ಭಣವಾಗದಂತೆ ತಡೆಯಬೇಕಿದೆ.
ಇದನ್ನೂ ಓದಿ: ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರ ಆನ್ಲೈನ್ ಪ್ರತಿಭಟನೆ