ಸಮಾಜದಲ್ಲಿ ನಡೆಯುತ್ತಿರುವ ಗುಂಪು ಹತ್ಯೆ, ಅನ್ಯಾಯದಂತ ವಿಷಯಗಳ ಬಗ್ಗೆ ಗಟ್ಟಿ ಧ್ವನಿ ಎತ್ತಿದ್ದ ನಟಿ ಸ್ವರಾ ಭಾಸ್ಕರ್, ಯುವ ನಾಯಕ ಕನ್ಹಯ್ಯಕುಮಾರ್ ಗೆ ಬೆಂಬಲ ಸೂಚಿಸಿದ್ದರು. ಕನ್ಹಯ್ಯಕುಮಾರ್ ಅವರ ಹೋರಾಟ ಹಾಗೂ ಚುನಾವಣೆಯಲ್ಲಿ ಬೆಂಬಲ ಸೂಚಿಸಿದ್ದರಿಂದ ಕೆಲ ಅವಕಾಶಗಳಿಂದ ವಂಚಿತರಾಗಿದ್ದಾಗಿ ಸ್ವರಾ ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬೇಗುಸರಾಯ್ ನಿಂದ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಯುವ ನಾಯಕ ಕನ್ಹಯ್ಯಕುಮಾರ್ ಸ್ಪರ್ಧಿಸಿದ್ದರು. ಈ ವೇಳೆ ನಟಿ ಸ್ವರಾ ಭಾಸ್ಕರ್, ಕನ್ಹಯ್ಯಕುಮಾರ್ ಅವರಿಗೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದ್ದರು. ಹೀಗಾಗಿ ತಮಗೆ ಬಂದಿದ್ದ ಸುಮಾರು ನಾಲ್ಕು ಅವಕಾಶಗಳು ಕೈ ತಪ್ಪಿ ಹೋದವು. ಕೇವಲ ಬೆಂಬಲ ಸೂಚಿಸಿದ್ದೇ ತಪ್ಪಾಯ್ತು ಎಂಬಂತೆ ಬ್ರ್ಯಾಂಡ್ ಗಳು ನಡೆದುಕೊಂಡಿದ್ದನ್ನು ಬಿಚ್ಚಿಟ್ಟರು.
ಸ್ವರಾ ಮತ್ತು ದಿವ್ಯ ದತ್ತಾ ಅವರು ನಟಿಸಿರುವ ಶೀರ್-ಕೋರ್ಮಾ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಈ ವಿಯಷವನ್ನು ಬಹಿರಂಗಪಡಿಸಿದ್ದಾರೆ. ಪೋಸ್ಟರ್ ನ್ನು 9ನೇ ಎಡಿಷನ್ ಆಫ್ ಇಂಡಿಯನ್ ಫಿಲ್ಮ್ ಪ್ರೊಜೆಕ್ಟರ್ ನಲ್ಲಿ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಸ್ವರಾ ಭಾಸ್ಕರ್, ಚಿತ್ರದ ಜತೆ ಜತೆಗೆ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಬಗ್ಗೆಯೂ ಮಾತನಾಡಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಲೋಕಸಭೆ ಚುನಾವಣೆಯಲ್ಲಿ ಕನ್ಹಯ್ಯಕುಮಾರ್ ಅವರನ್ನು ಸಮರ್ಥಿಸಿಕೊಂಡಿದ್ದರಿಂದ ನಾಲ್ಕು ಬ್ರ್ಯಾಂಡ್ ಗಳ ಕಾರ್ಯಕ್ರಮಗಳನ್ನು ಕಸಿದುಕೊಳ್ಳಲಾಯಿತು ಎಂದು ಹೇಳಿದರು.